Thursday 21 November 2013

ಪದಚರಿತೆ : ಒಂದಷ್ಟು ಪದಗಳ ಮೂಲಚೂಲದ ಹುಡುಕಾಟ - 2


    ಪದಚರಿತೆ : ಒಂದಷ್ಟು ಪದಗಳ ಮೂಲಚೂಲದ ಹುಡುಕಾಟ - 2

ಉರಿ: ಇದೊಂದು ದ್ರಾವಿಡ ಪದ; ತಮಿಳಿನಲ್ಲಿ ಉರು, ಮಲಯಾಳಂನಲ್ಲಿ ಉರುಪ್ಪಂ, ತೆಲುಗಿನಲ್ಲಿ ಉರಿಯು ಅಥವಾ ಉರಲು ಮತ್ತು ತುಳುವಿನಲ್ಲಿ ಉರಿ ಎಂದಾಗುತ್ತದೆ. ಸುಟ್ಟುಹೋಗು ಎಂಬ ಕ್ರಿಯಾಪದವಾಗಿಯೂ, ಬೆಂಕಿಯ ನಾಲಗೆ ಎಂಬ ನಾಮಪದವಾಗಿಯೂ ಬಳಕೆಯಾಗುತ್ತದೆ.  'ಶಬ್ದಮಣಿದರ್ಪಣ'ವು "ಉರಿ-ದಹನೇ" ಎಂದು ಅರ್ಥ ನೀಡುತ್ತದೆ (ಇದು ಒಂದು ಮರದ ಹೆಸರೆಂದೂ ಅಲ್ಲಿದೆ). "ಉರಿ ಮುಟ್ಟಿದರಳೆಯಂತೆ ಅಂತಂಬರಂ ಉರಿದಿತ್ತು" ಎಂಬ 'ಪಂಪಭಾರತ'ದ ಪ್ರಯೋಗದಲ್ಲಿ ಎರಡೂ ಕ್ರಿಯಾರ್ಥಗಳ ಬಳಕೆಯಾಗಿವೆ. 'ಉರಿಗಣ್' ಎಂದರೆ ಕೋಪದಿಂದ ಕೂಡಿದ ಕಣ್ಣೂ ಎಂದೂ ಶಿವನ ಬೆಂಕಿಯ ಕಣ್ಣು ಎಂದೂ ಅರ್ಥವಾಗುತ್ತದೆ. "ಉರಿಗಣ್ ಕೆತ್ತುವ ಮೀಸೆ ಪೆರ್ಚಿದ ಕೊರಲ್" ಎಂಬ ಚೌಂಡರಸನ 'ನಳಚಂಪು'ವಿನ ಮಾತಲ್ಲಿ ಮೊದಲನೆಯ ಅರ್ಥವೂ, "ಕೊರಲ ಕಱೆ ಶಿರದ ಪೆಱೆ ನೊಸಲ ಉರಿಗಣ್" ಎಂಬ ರನ್ನನ 'ಗದಾಯುದ್ಧ'ದ ಪ್ರಯೋಗದಲ್ಲಿ ಎರಡನೆಯ ಅರ್ಥವೂ ಸ್ಪಷ್ಟವಾಗಿದೆ. 'ಉರಿದೇಳ್' ಎಂದರೆ ಕೋಪದಿಂದ ಕೆರಳು ಎಂದರ್ಥ: "ಚರನ ನುಡಿಗೇಳ್ದು ಕೋಪದಿಂದುರಿದೇಳ್ದಂ" - ಆಚಣ್ಣನ 'ವರ್ಧಮಾನಪುರಾಣ'. 'ಉರಿಗಣೆ' ಎಂಬುದು ಉರಿಯುವ ಕಣೆ (ಬಾಣ) - ಎಂದರೆ ಆಗ್ನೇಯಾಸ್ತ್ರ: "ಕೃತಾಂತನೆಚ್ಚ ಉರುಗಣೆಯಂತೆ ಬಂದುದು ಲಯಾನಿಳಕಲ್ಪನಿದಾಜಾಳಂ" ಎಂಬುದು ನೇಮಿನಾಥ ಕವಿಯ 'ಅರ್ಧನೇಮಿ ಪುರಾಣ'ದ ಪ್ರಯೋಗ. ಇದನ್ನು 'ಕಾದಂಬರಿ'ಯು 'ಉರಿಯಂಬು' ಎನ್ನುತ್ತದೆ, ("ಉರಿಯಂಬಿನ ಪೊಗೆ ಮೊಗಸಿದಂತೆ"). ಉರಿಯಂತೆ ಕೆಂಪಾದ ಎಂಬರ್ಥದಲ್ಲಿಯೂ ಸಮಾಸದ ಪೂರ್ವಪದದಲ್ಲಿ ಉರಿ ಬಳಕೆಯಾಗುತ್ತದೆ: "ತೊಳಪ ದಾಡೆ ಮಿಳಿರ್ವ ಉರಿಗೇಸಂ ಪೇರೊಡಲ್" ('ಪಂಪಭಾರತ'). ಉರಿಮಂಜು (ಉರಿಮಣ್ಣು) ಕೆಂಪಾದ ಮಣ್ಣನ್ನು ಸೂಚಿಸುತ್ತದೆ.  ಅಧಿಕ ತಾಪವುಳ್ಳುದೆಲ್ಲವನ್ನೂ ಉರಿ ಎಂಬ ಪೂರ್ವಪದದಲ್ಲಿ ಸೂಚಿಸುವ ಅನೇಕ ಸಮಾಸಪದಗಳುಂಟು: ಉರಿಬಿಸಲು, ಉರಿನಾಲಗೆ, ಉರಿಜ್ವರ, ಉರಿಯೂತ ಇತ್ಯಾದಿ.
ಉರಿ ಎಂಬುದು ಉತ್ತರಪದವಾಗುಳ್ಳ ಅನೇಕ ಸಮಾಸಗಳೂ ಇವೆ: ಹೊಟ್ಟೆಉರಿ (ಅಸೂಯೆ), ಕಣ್ಣುರಿ (ಕೋಪ), ಮೈಯುರಿ ಇತ್ಯಾದಿ.
=====
ಎಕ್ಕ: ಇದೊಂದು ಸಂಖ್ಯಾವಾಚಕ, ಒಂದನ್ನು ಸೂಚಿಸುವುದು. 'ಕರ್ನಾಟಕ ಶಬ್ದಸಾರ'ವೆಂಬ ಸು. ಕ್ರಿಶ. 1400 ನಿಘಂಟುವಿನಲ್ಲಿ "ಎಕ್ಕಮೆಂದುಂ ಓರೆಂದುಂ ಒಂದು" ಎಂದು ಹೇಳಿದೆ. ಇದು ಸಂಸ್ಕೃತದ ಏಕ ಎಂಬ ಶಬ್ದದ ತದ್ಭವ ಎಂಬುದು ಸ್ಪಷ್ಟವಾಗಿಯೇ ಇದೆ. ಬರಿಯ ಸಂಖ್ಯೆಯನ್ನಲ್ಲದೆ ಒಂದನ್ನು ಹೊಂದಿರುವುದನ್ನು 'ಎಕ್ಕ' ಎಂದು ಕರೆಯುವುದೂ ರೂಢಿಯಾಯಿತು. ಒಂಟಿ ಪ್ರಾಣಿಯನ್ನು ಕಟ್ಟಿದ ಗಾಡಿಯನ್ನೂ 'ಎಕ್ಕ' ಎಂದು ಕರೆಯುತ್ತಿದ್ದರು. ಈಚೆಗೆ ಇಸ್ಪೀಟು ಆಟದಲ್ಲಿ, ಯಾವುದೇ ಚಿತ್ರವಿರುವ ಎಲೆಯಾಗಲೀ ಒಂದು ಇದ್ದರೆ ಅದನ್ನು 'ಎಕ್ಕ' ಎಂದು ಕರೆಯುವುದನ್ನು ನಾವೆಲ್ಲ ಬಲ್ಲೆವು.
ಈ ಶಬ್ದದಿಂದ ಒಂದನ್ನು ಸೂಚಿಸುವ ಸಮಾಸಶಬ್ದಗಳನ್ನೂ ನಿರ್ಮಿಸಿಕೊಳ್ಳುವ ಪರಿಪಾಟ ಹಿಂದಿನಿಂದಲೂ ಬಂದಿದೆ. ಹಳಗನ್ನಡ ಕಾವ್ಯಗಳಲ್ಲಿ ಒಂದೆಳೆ ಸರ ಎಂಬರ್ಥದಲ್ಲಿ 'ಎಕ್ಕಸರ' ಎಂದೂ, 'ಏಕಾವಳಿ' ಎಂಬುದರ ತದ್ಭವವಾಗಿ 'ಎಕ್ಕಾವಳೀ' ಎಂದೂ ಬಳಸಲಾಗಿದೆ. 'ಎಕ್ಕಸರ'ವನ್ನು ಒಂದೇ ಸಮನೆ ಅಥವಾ ನಿರಂತರವಾಗಿ ಎಂಬರ್ಥದಲ್ಲಿ 'ಏಕಸ್ವರ' ಎಂಬುದರ ತದ್ಭವವಾಗಿಯೂ, ಒಂದೇ ಬಾಣ ಎಂಬ ಅರ್ಥ ನೀಡುವ 'ಏಕಶರ' ಎಂಬುದರ ತದ್ಭವರೂಪದಲ್ಲಿಯೂ ಬಳಸಿರುವುದು ಕಂಡುಬರುತ್ತದೆ.
'ಎಕ್ಕ' ಶಬ್ದದಿಂದ 'ಎಕ್ಕಟಿ' ಎಂಬುದು ಬಂದಿದೆ. ಇದರ ಅರ್ಥ ಒಬ್ಬನೇ ಅಥವಾ ಒಂಟಿ ಎಂದು. 'ಎಕ್ಕಟಿಗಾಳೆಗ' ಎಂದರೆ ಒಬ್ಬ ಒಬ್ಬನೊಡನೆ ಮಾಡುವ ಯುದ್ಧ ಅಥವಾ ದ್ವಂದ್ವಯುದ್ಧ ಎಂಬರ್ಥವಿದೆ. ಇನ್ನೂ ಮುಂದುವರಿದು 'ಎಕ್ಕಟಿ' ಶಬ್ದವನ್ನು ಏಕಾಂತ ಎಂಬ ಅರ್ಥದಲ್ಲೂ ಬಳಸುವ ರೂಢಿಯಿತ್ತು. ಏಕಾಂತದ ಜಾಗಕ್ಕೆ ಕರೆ ಎಂಬರ್ಥದಲ್ಲಿ 'ಎಕ್ಕಟಿಕರೆ' ಅಥವಾ 'ಎಕ್ಕಟಿಗರೆ' ಎಂಬ ರೂಪದ ಬಳಕೆಯೂ ಇದೆ. ಒಬ್ಬನೊಂದಿಗಿನ ಸಮಾನ ಯೋಗ್ಯತೆ ಎಂಬರ್ಥದಲ್ಲಿ 'ಎಕ್ಕತಕ್ಕು' ಎಂಬ ಶಬ್ದ ಸಿಕ್ಕುತ್ತದೆ. ಚಪ್ಪಲಿ ಎಂಬರ್ಥದಲ್ಲಿ ಎಕ್ಕಡ ಎಂಬ ಶಬ್ದವನ್ನು ನಾವೀಗ ಬಳಸುತ್ತೇವಲ್ಲ, ಅದು ಹಳಗನ್ನಡದಲ್ಲಿ 'ಎಕ್ಕವಡ' ಎಂಬ ರೂಪದಲ್ಲಿತ್ತು. ಇದು ಒಂದೇ ಹಾಳೆ ಎಂಬರ್ಥದ  'ಏಕಪಟ' ಎಂಬುದರ ತದ್ಭವವಾಗಿರಬಹುದೇ? ಒಂದೇ ಬಟ್ಟೆ ಎಂಬರ್ಥದಲ್ಲಿಯೂ ಈ ಶಬ್ದ ಬಳಕೆಯಾಗಿದೆ. 'ಎಕ್ಕ'ದಿಂದಲೇ 'ಎಕ್ಕಲ' ಎಂಬ ಶಬ್ದವೂ ರೂಪಿತವಾಗಿದೆ. ಎಕ್ಕಲ ಎಂಬುದನ್ನು ಹಳಗನ್ನಡದಲ್ಲಿ ಮುಳ್ಳುಹಂದಿ ಎಂಬರ್ಥದಲ್ಲಿ ಬಳಸಲಾಗಿದೆ. 'ಒಂಟಿ'ಯಾಗಿ ಸುಳಿಯುವ ಪ್ರಾಣಿ (ಸಲಗ ಅಥವಾ ಹಂದಿ) ಎಂಬರ್ಥದಲ್ಲಿ ಈ ಪದವನ್ನು ಬಳಸಿರಬಹುದು. 'ಎಕ್ಕಲಗಾಣ' ಎಂಬುದು ಒಂಟಿ ಹಾಡುಗಾರನನ್ನು ಸೂಚಿಸಲು, 'ಎಕ್ಕಲವೀರ' ಎಂಬುದು ಏಕಾಂಗವೀರ ಎಂಬರ್ಥದಲ್ಲಿ ಬಳಕೆಗೊಂಡಿದೆ.
=====
ಎಕ್ಕುಟ್ಟೋಗು: "ನಿನ್ನ ಮನೆ ಎಕ್ಕುಟ್ಟೋಯ್ತದೆ" ಎಂದೋ "ನಿನ್ನ ಮನೆ ಎಕ್ಕುಟ್ಟೋಗ" ಎಂದೋ ಹಿಡಿಶಾಪ ಹಾಕುವುದನ್ನು ನಾವೆಲ್ಲ ಕೇಳಿದ್ದೇವೆ. ಈ ಶಬ್ದದಲ್ಲಿ ಮೂರು ಪದಗಳು ಅಡಗಿವೆ: ಎಕ್ಕೆ+ಹುಟ್ಟಿ+ಹೋಗು. ಎಕ್ಕೆ ಎಂಬುದು ಒಂದು ಗಿಡ, ಎಕ್ಕದ ಗಿಡ. ಇದು ಹಳಗನ್ನಡದಲ್ಲಿ 'ಎರ್ಕೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ 'ಎರುಕ್ಕು' ಎಂದೂ, ತುಳುವಿನಲ್ಲಿ 'ಎಕ್ಕಮಲೆ' 'ಎಕ್ಕಮಾಲೆ' 'ಎಕ್ಕಮೆ' ಎಂಬ ರೂಪಗಳಲ್ಲಿಯೂ, ಮಲಯಾಳಂನಲ್ಲಿ 'ಎರಿಕ್ಕು' ಎಂಬ ರೂಪದಲ್ಲಿಯೂ ಈ ಶಬ್ದ ದೊರೆಯುತ್ತದೆ. ಉತ್ತರಣಿ ಬನ್ನಿಮರ ಮುತ್ತುಗ ಮುಂತಾದವುಗಳಂತೆ ಎಕ್ಕೆಯ ಗಿಡವನ್ನೂ ಪೂಜಿಸುತ್ತಿದ್ದ ಪದ್ಧತಿಯಿತ್ತು. ಇದನ್ನು ಕ್ರಿಶ 1150 ರ ಹೊತ್ತಿನ ಬ್ರಹ್ಮಶಿವ ಎಂಬ ಕವಿ ತನ್ನ 'ಸಮಯ ಪರೀಕ್ಷೆ'ಯಲ್ಲಿ ಗೇಲಿಮಾಡುತ್ತಾನೆ.
ಸಂಸ್ಕೃತದಲ್ಲಿ  ಈ ಗಿಡವನ್ನು 'ಅರ್ಕ' ಎಂದು ಕರೆಯುತ್ತಾರೆ. ಅರ್ಕ ಎಂದರೆ 'ಸೂರ್ಯ' ಎಂದೂ 'ಪೂಜಿಸಲು ಅರ್ಹವಾದ' ಎಂದೂ, ಇತರ ಅನೇಕ ಅರ್ಥಗಳೂ ಸಂಸ್ಕೃತದಲ್ಲಿದೆ. ಮೂರನೆಯ ಮದುವೆ ಮಾಡಿಕೊಳ್ಳುವಾಗ (ಗಂಡಸು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ!) ಮುಂಚೆ ಎಕ್ಕದ ಗಿಡವನ್ನು ಹೆಣ್ಣೆಂದು ಭಾವಿಸಿ ಅದರೊಡನೆ ಮದುವೆ ಮಾಡಿಕೊಳ್ಳುವ ಪರಿಪಾಟವಿತ್ತು; ಇದನ್ನು 'ಅರ್ಕವಿವಾಹ' ಎಂದೇ ಕರೆಯುತ್ತಿದ್ದರು. ಈ ಗಿಡದ ಎಲೆಗಳ ಅಂಗೈಯಗಲವಾಗಿರುತ್ತದೆ; ರಥಸಪ್ತಮಿಯಂದು (ಮಾಘ ಶುದ್ಧಸಪ್ತಮಿ) ಕೆಲವರು ಎಕ್ಕದೆಲೆಗಳನ್ನು ಭುಜದ ಮೇಲಿರಿಸಿಕೊಂಡು ಸ್ನಾನ ಮಾಡುವ ಪದ್ಧತಿಯಿದೆ. ಇದನ್ನು ಅರ್ಕವ್ರತ (ಸೂರ್ಯನ ವ್ರತ) ಎಂದೇ ಕರೆಯುತ್ತಾರೆ. ಅಂದರೆ ಎಕ್ಕದ ಗಿಡಕ್ಕೂ ಸೂರ್ಯನಿಗೂ ಸಂಬಂಧವನ್ನು ಕಲ್ಪಿಸಿಕೊಳ್ಳಲಾಗಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇಂಥ ಎಕ್ಕದ ಗಿಡವನ್ನು ಯಾರೂ ಬೆಳೆಸುವುದಿಲ್ಲ. ಇದೊಂದು ಕಾಡುಗಿಡವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ, ವಿಶೇಷವಾಗಿ ಪಾಳುಗಳಲ್ಲಿ. ಹೀಗಾಗಿ ಮನೆ ಎಕ್ಕೆ ಹುಟ್ಟಿ ಹೋಗು ಎಂಬ ಬೈಗುಳದ ಹಿಂದೆ ಹೀಗೆ ಬೆಳೆಯುವುದು ಸೂಚಿತವಾಗಿದೆ. ಪಾಳಿನಲ್ಲಿ ಈ ಗಿಡ ಬೆಳೆಯುವುದರಿಂದ ಮನೆ ಸಂಪೂರ್ಣ ಹಾಳಾಗಿ ಆ ಜಾಗದಲ್ಲಿ ಎಕ್ಕೆ ಬೆಳೆಯುವ ಹಾಗಾಗಲಿ ಎಂಬ ಶಾಪ 'ಎಕ್ಕುಟ್ಟೋಗು' ಎಂಬ ಮಾತಿನಲ್ಲಿದೆ. ಇದೊಂದು ಭಯಾನಕ ಪ್ರತಿಮೆ. ಮನೆಯಿದ್ದ ಕುರುಹೇ ನಾಶವಾಗಿಬಿಡಲಿ ಎಂಬ ತೀವ್ರ ಆಕ್ರೋಶ ಇದರಿಂದ ವ್ಯಕ್ತವಾಗುತ್ತದೆ.
====
ಎಣ್ಣೆ: ಬಹಳ ಪರಿಚಿತವಾದ ಈ ಪದಕ್ಕೆ ಕಾಳುಗಳಿಂದ ತೆಗೆದ ಜಿಡ್ಡಿನ ವಸ್ತು ಎಂಬುದು ಅರ್ಥ. ಇದು ದ್ರಾವಿಡ ಪದ; ಹಾಗಾಗಿ ಕೆಲವು ಇತರ ದ್ರಾವಿಡ ಭಾಷೆಗೆಳಲ್ಲಿಯೂ ಇದರ ಜ್ಞಾತಿ ಪದಗಳಿವೆ: ತಮಿಳಿನಲ್ಲಿ ಏಣ್ಣೈ ಎಂದೂ, ಮಲಯಾಳಂನಲ್ಲಿ ಎಣ್ಣ ಎಂದೂ ತುಳುವಿನಲ್ಲಿ ಎಣ್ಣೆ ಎಂದೂ ಆಗುತ್ತದೆ. ಈ ಶಬ್ದದಲ್ಲಿ ಎರಡು ಭಾಗಗಳಿವೆ: ಎಳ್+ನೆಯ್, ಎಂದರೆ ಎಳ್ಳಿನ ಜಿಡ್ಡು ಎಂದು. ಎಳ್ಳು ಎಲ್ಲರಿಗೂ ಗೊತ್ತಿರುವ ಎಣ್ಣೆ ತೆಗೆಯುವ ಕಾಳು. ಸಂಸ್ಕೃತದಲ್ಲಿ ಎಣ್ಣೆ ಎಂಬುದಕ್ಕೆ ತೈಲ ಎಂಬುದು ಸಂವಾದಿಯಾದುದು; ಅಲ್ಲಿಯೂ ತಿಲಕ್ಕೆ (ಎಳ್ಳು) ಸಂಬಂಧಿಸಿದ ಎಂಬರ್ಥವೇ ಇದೆ. ಇದು ಮುಂದೆ ಎಲ್ಲ ಕಾಳುಗಳ ಜಿಡ್ಡಿಗೂ ಅನ್ವಯಿಸಿತು; ಕಡಲೆಕಾಯಿ ಎಣ್ಣೆ (ಒಳ್ಳೆಣ್ಣೆ), ಹರಳೆಣ್ಣೆ (ಔಡಲೆಣ್ಣೆ), ಸಾಸಿವೆಯೆಣ್ಣೆ ಮುಂತಾದುವು. ಎಂದರೆ ಅದರ ಅರ್ಥ ವಿಸ್ತಾರಗೊಂಡಿದೆ (ಭಾಷಾವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು ಎಕ್ಸ್‍ಪಾನ್ಶನ್ ಎಂದೇ ಕರೆಯುತ್ತಾರೆ). ತುಂಬ ಹಳೆಯ ಕನ್ನಡ ಕಾವ್ಯ ಹಾಗೂ ಶಾಸನಗಳಲ್ಲಿ ಎಣ್ಣೆ ಎಂಬ ಪ್ರಯೋಗವನ್ನು ಕಾಣಬಹುದು. "ಸೊಡರೊಳ್ ಬತ್ತಿಯುಂ ಎಣ್ಣೆಯುಂ ಒಡನೞಿದವೊಲ್" ಎಂಬ ಸುಂದರವಾದ ಮಾತು ಒಂದು ಕಾವ್ಯದಲ್ಲಿದೆ. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ಪ್ರತಿಮೆ ಗೋಪಾಲಕೃಷ್ಣ ಅಡಿಗರ ಕವನದ್ದು.
ಮೈಗೆಲ್ಲ ಹಚ್ಚಿಕೊಂಡು (ಸಾಮಾನ್ಯವಾಗಿ ಹರಳೆಣ್ಣೆಯನ್ನು) ಮಾಡುವ ಸ್ನಾನವನ್ನು 'ಎಣ್ಣೆ ಸ್ನಾನ' ಎಂದೇ ಕರೆಯುತ್ತಾರೆ. ಹಬ್ಬದ ದಿನ ಎಣ್ಣೆಸ್ನಾನ ಒಂದು ವಿಶೇಷ ಎಂಬುದು ಕನ್ನಡಿಗರಿಗೆಲ್ಲ ಗೊತ್ತು. ಯಾವುದಾದರೂ ಅವಕಾಶ ಉಂಟಾದಾಗ ನಿರ್ಲಕ್ಷ್ಯ ತೋರುವುದನ್ನು 'ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊ' ಎಂಬ ನುಡಿಗಟ್ಟಿನಿಂದ ಸೂಚಿಸುತ್ತಾರೆ. ಎಣ್ಣೆಯು ಉರಿಯುವುದನ್ನು ಹೆಚ್ಚಿಸುತ್ತದೆ (ಎಂದರೆ ಇಂಧನ). ಅದಕ್ಕೇ ಪೆಟ್ರೋಲ್, ಡೀಸಲ್ನಂತಹ ಕಾಳಿನಿಂದ ತೆಗೆಯದ ಇಂಧನಗಳನ್ನೂ ಎಣ್ಣೆ ಎಂದೇ ಕರೆಯುವ ರೂಢಿಯಿದೆ.  'ಎಣ್ಣೆ ಸುರಿದ ಹಾಗೆ' ಎಂಬ ಮಾತು ಉದ್ರೇಕಗೊಳಿಸು ಎಂಬರ್ಥದಲ್ಲಿ ಬಳಕೆಯಾಗುವ ನುಡಿಗಟ್ಟು. ಎಣ್ಣೆಯು ಜಿಡ್ಡುಪದಾರ್ಥವಾದುದರಿಂದ ಜಾರುತ್ತದೆ; ಅದಕ್ಕೇ ನುಣುಚಿಕೊಳ್ಳುವುದನ್ನು 'ಮೈಗೆ ಎಣ್ಣೆ ಸವರಿಕೊಂಡು' ಮಾಡುವ ಕುಸ್ತಿಗೆ ಹೋಲಿಸುವ ವಾಡಿಕೆಯಿದೆ. ಬಂಡಿಗಳ ಚಕ್ಕರವು ಸರಾಗವಾಗಿ ಉರುಳುವಂತೆ ಮಾಡುವ ಜಿಡ್ಡಿಗೆ 'ಕೀಲೆಣ್ಣೆ' ಅಥವಾ ಕಂಜಣಿ ಎಣ್ಣೆ ಎನ್ನುತ್ತಾರೆ. ಅಲ್ಲದೆ, ಕೀಲುನೋವಿಗೆ ಉಡದ ಕೊಬ್ಬಿನಿಂದ ಮಾಡಿದ ಉಡದೆಣ್ಣೆಯನ್ನು ಬಳಸುವ ರೂಢಿಯೂ ಇದೆ.
ಕೆಲವರು ಹೆಂಡವನ್ನು ಎಣ್ಣೆ ಎನ್ನುತ್ತಾರೆ; 'ಎಣ್ಣೆ ಹೊಡಿ' ಎಂಬುದು ಹೆಂಡ ಕುಡಿಯುವುದನ್ನು ಸೂಚಿಸುತ್ತದೆ. ಒಂದೇ ಅರ್ಥದ 'ಹೆಂಡ ಕುಡಿ', 'ಗುಂಡು ಹಾಕು', 'ಎಣ್ಣೆ ಹೊಡಿ - ಈ ನುಡಿಗಟ್ಟುಗಳು ಬೇರೆ ಬೇರೆ ಸಾಮಾಜಿಕ ಸ್ತರಗಳ ಜನಗಳು ಬಳಸುವ ಭಾಷೆಯಲ್ಲಿ ಕಾಣಿಸುತ್ತವೆ.
=====
ಎದೆ: ಇದು ಹಳಗನ್ನಡದಲ್ಲಿ ಮೊದಲು 'ಎೞ್ದೆ' ಎಂದಿದ್ದು ("ಎಲೆ ಚೋಳಕ್ಷಿತಿಪಾಳ ಸನ್ತವೆರ್ೞ್ದೆಯಂ ನೀಂ ನೀವಿಕೊಳ್" - ಕ್ರಿಶ. 560 ರ ಒಂದು ಶಾಸನ) ಆನಂತರ 'ಎರ್ದೆ' ಎಂದಾಯಿತು. ಇದು ಸಂಸ್ಕೃತದ ಹೃದಯ ಶಬ್ದದ ತದ್ಭವವೆಂದು ಭಾವಿಸಲಾಗಿದೆ. ಇದಕ್ಕೆ ಹೃದಯ ("ಮಲಯಾನಿಲನುಂ .. .. ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವು" - 'ಕವಿರಾಜಮಾರ್ಗ') ಹಾಗೂ ಮೊಲೆ ("ನಿನ್ನಾಗಮನಕ್ಕಾಗಿ ನೋಂತಿಹರ್ ಶಿಶುವಜ್ರಾರಿಗೆರ್ದೆಗೊಡದೆ" 'ಶ್ರೀ ರಾಮಾಯಣ ದರ್ಶನಂ') ಎಂಬ ಅರ್ಥಗಳಿವೆ. 'ಎರ್ದೆಗೊಳ್' ಎಂಬ ರೂಪವು ಆಕರ್ಷಕವಾಗು ಎಂಬರ್ಥದಲ್ಲಿ 'ಪಂಪಭಾರತ'ದಲ್ಲಿ ಉಕ್ತಗೊಂಡಿದೆ ("ಏನೆರ್ದೆಗೊಂಡು ಬೇಟದತ್ತಳಗಮಂ ಉಂಟುಮಾಡಿದುದೋ"). ಕಎರ್ದೆಗಿಡುಕಿ ಎಂಬುದು ಧೈರ್ಯಗುಂದು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ "ಪಡೆಗುಳ್ಕಂ ಪಡೆವಹೀಂದ್ರರ್ ಎರ್ದೆಗಿಡುವಿನೆಗಂ" ಎಂಬಲ್ಲಿ ಪ್ರಯೋಗಗೊಂಡಿದೆ. 'ಎರ್ದೆಯೊಡೆ' ಎಂದರೂ  ಇದೇ ಅರ್ಥ ("ಮರಣದಿನಾದ ಖೇದದಿಂದ ಎರ್ದೆಯೊಡೆದಂತಿರೆ" 'ಪಂಪರಾಮಾಯಣ'). 'ಎರ್ದೆದೋರು' ಎಂದರೆ ಧೈರ್ಯತೋರಿಸು ಎಂದು ("ಬಲ್ಪುದೋರುವ ಎರ್ದೆದೋರುವ ಕಯ್ಪೆಸರಂಗಳ" - 'ಪಂಪಭಾರತ'); 'ಎರ್ದೆಮುಟ್ಟು'ವಿನ ಅರ್ಥ ಎದೆಯಾಳದಿಂದ ಎಂದರ್ಥ ("ಎರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ" - ಅದೇ). ಇದೇ ಅರ್ಥ 'ಎರ್ದೆವುಗು' ಎಂಬ ಮಾತಿಗೂ ಇದೆ ("ತಳ್ತೆಸೆವ ರನ್ನದಂತೆ ಎರ್ದೆವುಗದೇ" 'ಕಬ್ಬಗರ ಕಾವ'). ಕಎರ್ದೆಯಾರು' ಎಂದರೆ ಹೃದಯಕ್ಕೆ ತೃಪ್ತಿಯಾಗುವಂತೆ ("ಭೂಪ ಕುಸುಮಾಯುಧಂ ಇಂತೆರ್ದೆಯಾರೆ ನೋಡಿದಂ" 'ಕುಸುಮಾವಳಿ ಕಾವ್ಯ'). 'ಎರ್ದೆಯಾಣ್ಮ' ಎಂದರೆ ಪ್ರಿಯಕರ ("ಇಚ್ಚೆಯಾಣ್ಮನೆಲ್ಲಿದಂ ಎರ್ದೆಯಾಣ್ಮನೆನ್ನರಸಂ" - 'ಆದಿಪುರಾಣ'). 'ಎಂಟೆರ್ದೆ' ಎಂದರೆ ಧೈರ್ಯ ("ಉರ್ಬಿನೊಳಾಂತು ಸೆಣಸಿ ಕಾದುವ ಜನಪಂಗೆ ಎಂಟೆರ್ದೆಯೇ" - 'ಧರ್ಮಾಮೃತ'). 'ಎರ್ದೆಯೆರಕ' ಎಂದರೆ ಪ್ರೀತಿ ("ಎರ್ದೆಯೆರಕದೆ ಪೊಗಳ್ದಖಿಳ ಭುವನಜನನಿಯನಾಗಳ್"-ಗ 'ಆದಿಪುರಾಣ'); 'ಎರ್ದೆವಳಲ್" ಎಂದರೆ ದುಃಖ ("ಉಪದೇಶಂಗೆಯ್ದು ಕಳೆದಂ ಅವರೆರ್ದೆವಳಲಂ" 'ಪಂಪರಾಮಾಯಣ'). 'ಎದೆಗುದಿಪ' ಎಂದರೆ ಹೃದಯವೇದನೆ ("ಎದೆಗುದಿಪಮಂ ಒದವಿಸುವೊಡೆ ಆರೊ ಬಾರಿಪರ್" 'ಲೀಲಾವತಿಕ'). ಹೀಗೆ ಅಸಂಖ್ಯಾತ ನುಡುಟ್ಟುಗಳು 'ಎದೆ'ಯಿಂದ ಸೃಷ್ಟಿತವಾಗಿವೆ. 'ಎದೆ' ರೂಪದೊಡನೆ ಇವೆಲ್ಲ ಇವತ್ತಿಗೂ ಬಳಕೆಯಲ್ಲಿವೆ.
=====
ಒಲವು: 'ಒಲ್' ಧಾತುವಿನಿಂದಲೇ ರೂಪತವಾಗಿರುವ ಮತ್ತೊಂದು ರೂಪ 'ಒಲವು' (ಒಲ್+ವು). "ಪಲವುಂ ದಿವಸಕ್ಕೆ ಕಂಡು ಒಗದ ಒಲವಿಂ ಬಿಗಿಯಪ್ಪಿದಳ್ ಮಹಾಶ್ವೇತೆಯಂ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯದು. ಇಲ್ಲಿ ಸ್ನೇಹ ಎಂಬರ್ಥವಿದ್ದರೆ 'ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾದೆನಯ್ಯಾ" ಎಂಬ ಮಾತಿನಲ್ಲಿ ಗಂಡು-ಹೆಣ್ಣುಗಳ ನಡುವಣ ಅನುರಾಗ ಎಂದಾಗುತ್ತದೆ. ಅದೇ 'ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ" ಎಂಬ ಬಸವಣ್ಣನದೇ ಮತ್ತೊಂದು ವಚನದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ ಎಂಬರ್ಥ ಹೊಮ್ಮುತ್ತದೆ. ಒಲವು ಎಂದರೆ ಸಂತಸ ಎಂದೂ ಆಗಬಹುದು: "ಆತ್ಮಜೆಯನೊಲವಿಂದಿತ್ತು ಸಾಕ್ಷ್ಯಕ್ಕೆ ಕೈನೀರೆಱೆದಂ ಗಂಧರ್ವರಾಜಂ" - 'ಕರ್ಣಾಟಕ ಕಾದಂಬರಿ'. ಆಧುನಿಕ ಕವಿಗಳು ಸಾಮಾನ್ಯವಾಗಿ ಈ ಶಬ್ದವನ್ನು ಪ್ರಣಯಕ್ಕೆ ಅನ್ವಯಿಸಿ ಬಳಸುವುದುಂಟು. "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು" ಎಂಬುದು ಬೇಂದ್ರೆಯವರ ಪ್ರಖ್ಯಾತ ಸಾಲು ('ಒಲವೆ ನಮ್ಮ ಬದುಕು' ಅವರ ಪ್ರೇಮಕವನಗಳ ಸಂಕಲನದ ಹೆಸರೂ ಹೌದು). "ನಾನು ಒಲವಿನ ಭಕ್ತ" ಎಂದು ಹೇಳಿಕೊಂಡವರು ಕೆಎಸ್ನ.
'ಒಲವರ' ಎಂಬ ಇನ್ನೊಂದು ರೂಪವೂ ಇದೆ. ಅದಕ್ಕೂ ಇವೇ ಅರ್ಥಗಳು. "ಮನದೊಲವರಮುಳ್ಳೊಡೆ ಕುಡು ಮನೆಯೊಳ್ ಹರಿಗಗ್ರಪೂಜೆಯಂ" ಎಂಬ 'ಪಂಪಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ, ಗೌರವ ಎಂಬರ್ಥವಿದ್ದರೆ, "ಏಕಿಕ್ಕಿದೆ ಬಲೆಯಂ ಪೇಳಣ್ಣ ನಿನಗೆ ಮಾಂಸದೊಳಾದೊಂದು ಒಲವರಮೆ" ಎಂಬ 'ಕರ್ಣಾಟಕ ಕಾದಂಬರಿ'ಯ ಮಾತಿನಲ್ಲಿ ಮೋಹ, ಆಸೆ ಎಂಬರ್ಥವಿದೆ. "ಒಲವರವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ" ಎಂಬ ಜೇಡರ ದಾಸಿಮಯ್ಯನ ವಚನವು ಈ ಶಬ್ದವನ್ನು ಪ್ರೀತಿ ಎಂಬರ್ಥದಲ್ಲಿ ಬಳಸುತ್ತದೆ. ಮನೋಧರ್ಮ ಎಂಬರ್ಥವೂ ಈ ಶಬ್ದಕ್ಕೆ ಬರುತ್ತದೆ: "ಮೃಗದೊಲವರಮುಮಂ ಅರಸನ ಬಗೆಯುಮಂ ಅದೋಲಗಿಸಲ್" 'ಪಂಪಭಾರತ.' "ಒಲವರವಲಾ ಮುರಹರಂಗೀ ಬಲದೊಳಗೆ" ಎಂಬ 'ಕುಮಾರವ್ಯಾಸಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಪಕ್ಷಪಾತ ಎಂಬರ್ಥ ಹೊಮ್ಮುತ್ತದೆ. 'ಒಲವರಂಗೊಳ್' ಎಂದರೆ ಪಕ್ಷಪಾತ ("ಒಲವರಂಗೊಳ್-ಪಕ್ಷಸ್ವೀಕಾರೇ" - 'ಶಬ್ದಮಣಿದರ್ಪಣ'). 'ಒಲವರಂಬಡು' ಎಂದರೆ ಮೆಚ್ಚುಗೆಹೊಂದು ಎಂದರ್ಥ: "ತನ್ನ ನರುಜವ್ವನದ ಪರಿಯ ಮುಂಗಾಣ್ಕೆಗುಡಲ್ ಬಿನ್ನಣದೊಳೊಲವರಂಬಡದೆ" ಎಂಬುದು ಸೋಮದೇವನ 'ಉದ್ಭಟಕಾವ್ಯ'ದ ಸಾಲು. 'ಒಲವರವಾನ್' ಎಂದರೂ ಇದೇ ಅರ್ಥ: "ಮಿಂದೊಲವಾಂತು ದಣಿಬವನುಟ್ಟು ಭಸಿತವನಿಟ್ಟು ಭಾಳದಲಿ" ಎಂಬುದು 'ಬಸವಪುರಾಣ'ದ ಮಾತು.
=====
ಒಲುಮೆ: ಇದು ಒಲ್ ಎಂಬ ಧಾತುವಿನಿಂದ ಬಂದಿದೆ. ಒಲ್ ಎಂದರೆ ಪ್ರೀತಿಸು, ಮೋಹಗೊಳ್ಳು ಎಂದರ್ಥ: "ಸುಯೋಧನನ ರಾಜ್ಯಮಂ ಒಲ್ವೊಡಂ ಶಲ್ಯನನೆ ಸಾರಥಿಮಾಡಿ ಕಾದುವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಇದಕ್ಕೆ 'ಮೆ' ಎಂಬ ಪ್ರತ್ಯಯ ಸೇರಿ 'ಪ್ರೀತಿ' ಎಂಬರ್ಥದ ನಾಮಪದವಾಗಿದೆ. "ಸೊಬಗಂ ಒಲ್ಮೆಯಂ ಧೈರ್ಯಮಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಪ್ರೀತಿಸುವವನು ಎಂಬರ್ಥದಲ್ಲಿ ಇದು 'ಒಲ್ಮೆಗ' ಎಂದೂ ಆಗುತ್ತದೆ: "ನನ್ನಿಗರ್ ಇಂಪುಗಾರರ್ ಇನಿವಾತುಗರ್ ಇಚ್ಚೆಗಾರರಾರ್ಪರ್ ಒಲ್ಮೆಗರ್ ಚೆನ್ನಿಗರ್" ಎಂಬ ಮಾತು ತಿರುಮಲಾರ್ಯನ 'ಚಿಕದೇವರಾಜವಿಜಯ'ದ್ದು. ಒಲ್ ಎಂಬ ಧಾತುವು 'ಒಲಿ' ಎಂಬ ರೂಪದಲ್ಲಿಯೂ ಇದೆ: "ಕುಲನಿಂತು ಪಿಕ್ಕದಿರಿಂ ನೀಂ ಒಲಿದಲ್ಲಿ ಪುಟ್ಟಿ ಬಳೆದಿರೋ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ" ಎಂಬ ಹರಿತವಾದ ಕರ್ಣನ ಮಾತು 'ಪಂಪಭಾರತ'ದ್ದು. 'ಒಲ್ಮೆ' ಎಂದರೆ ಅನುಗ್ರಹ ಅಥವಾ ಕೃಪೆ ಎಂಬರ್ಥವೂ ಆಗುತ್ತದೆ: "ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ಬಡವಂ ಬಲ್ಲಿದನಾಗನೇ" ಎಂಬುದು 'ಸೋಮೇಶ್ವರಶತಕ'ದಲ್ಲಿ ಬರುವ ನುಡಿ. "ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ" ಎಂಬುದು ಅಲ್ಲಮ ವಚನದ ಸಾಲು. ಒಲುಮೆ ಎಂದೂ ಪ್ರೀತಿ. "ಒಲುಮೆ ಒಲಿದೇ ಒಲಿವುದು" ಎಂಬುದು ಕೆಎಸ್ನ ಅವರ ಒಂದು ಕವನದ ಶೀರ್ಷಿಕೆ. ಈ ವಾಕ್ಯದಲ್ಲಿಯೇ 'ಒಲುಮೆ' ಇದೆ. ಇದು ವ್ಯಾಪಕವಾಗಿ ಬಳಕೆಯಾಗುವ ಪದ. "ಅಂಗಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ" ಎಂಬುದು ಕೋಲಶಾಂತಯ್ಯನೆಂಬ ವಚನಕಾರನ ಸೂತ್ರವಾಕ್ಯ. ಹರಿಹರನ 'ಬಸವರಾಜದೇವರರಗಳೆ'ಯಲ್ಲಿ "ಶರಣರೊಡನೊಲುಮೆಯಿಂ ಲಿಂಗಾರ್ಚನಂಗೆಯ್ದು" ಎಂಬ ಮಾತಿದೆ. ತೀನಂಶ್ರೀ ಅವರ 'ಒಲುಮೆ' ಎಂಬ ಹೆಸರಿನ ಪ್ರೇಮಕವನ ಸಂಕಲನವೇ ಇದೆ (ಇದು ಮೊಟ್ಟ ಮೊದಲ ಆಧುನಿಕ ಪ್ರೇಮಕವನ ಸಂಕಲನ).
ಒಲ್ಮೆ ಹಾಗೂ ಒಲುಮೆಗಳಿಂದ ಅನೇಕ ಸಮಾಸಗಳು ಸೃಷ್ಟಿಯಾಗುತ್ತವೆ. 'ಒಲ್ಮೆವೆರು' ಎಂದರೆ ಪ್ರೀತಿ ಹೊಂದು ಎಂದರ್ಥ: "ಶಿವಾಕ್ಷಿಮಣಿಪ್ರತಾನಮಂ ಧರಿಸುತ್ತಂಗದೊಳೊಲ್ಮೆವೆತ್ತು ಶಿವಮಂತ್ರಧ್ಯಾನಯಕ್ತನಾದಂ" ಎಂಬ ವಾಕ್ಯ 'ವೃಷಭೇದ್ರವಿಜಯ'ದ್ದು. 'ಒಲುಮೆದೋರು' ಎಂದರೆ ಪ್ರೀತಿ ತೋರಿಸು: "ಹುಸಿಯೊಲುಮೆದೋರುವರಾ ಪರಿಯಲಿ ಹೃದಯಗೊಡರನೃತವನಾಡುವರು" - ಚೌಂಡರಸನ 'ನಳಚಂಪು'. ಮೂರನೆಯ ಮಂಗರಸನ 'ನೇಮಿಜಿನೇಶ ಸಂಗತಿ'ಯಲ್ಲಿ 'ಒಲುಮೆಮದ್ದು' ಎಂದರೆ 'ವಶೀಕರಣದ ಮದ್ದು': "ಓಪನವಳ ಕೈವಶವಾಗಲದಕೆ ಅವಳಾತಗೊಲುಮೆಮದ್ದನು ತಿನಿಸಿದಳೆಂದು ತಮತಮಗೆಲ್ಲರಾಡವರು." ಕೆಎಸ್ನ "ನಿನ್ನೊಲುಮೆ ತಾರೆಗಳ ಹರಡಿರುವ ಬಾನು" ಎಂಬ ಸಾಲಿನಲ್ಲಿ 'ಒಲುಮೆತಾರೆ' ಪದವನ್ನು ಸೃಷ್ಟಿಸಿಕೊಳ್ಳುತ್ತಾರೆ.
=====
ಕಡಲೆ: ಇದು ತಮಿಳಿನಲ್ಲಿ ಕಡಲೈ ಎಂದೂ, ತುಳುವಿನಲ್ಲಿ ಕಡಲೆ ಎಂದೂ, ಮಲಯಾಳಂನಲ್ಲಿ ಕಡಲ ಎಂದು ಬಳಕೆಯಲ್ಲಿರುವ ಪದ. ಕನ್ನಡ ನಾಡಿನಲ್ಲಿ ಮೊದಲಿದ್ದದ್ದು ಕಡಲೆ ಎಂಬ ದ್ವಿದಳ ಧಾನ್ಯ. ಇದರ ಉಲ್ಲೇಖ 'ಪಂಪಭಾರತ'ದಲ್ಲಿಯೇ ಇದೆ: ("ಮೆಳಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು"). ಇಲ್ಲಿ ಹೇಳಿರುವುದು ಹೆಂಡಕುಡುಕರು ನಂಜಿಕೊಳ್ಳುತ್ತಿದ್ದ ಕಾರ ಹಚ್ಚಿದ ಕಡಲೆಯನ್ನು ಕುರಿತು. ಪೊನ್ನನ 'ಶಾಂತಿಪುರಾಣ'ದಲ್ಲಿ ಹುರಿಗಡಲೆಯ ಪ್ರಸ್ತಾಪವಿದೆ. ಹಾಗೆಯೇ ನಯಸೇನನ 'ಧರ್ಮಾಮೃತ'ದಲ್ಲಿ "ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ" ಎಂಬ ಗಾದೆ ಮಾತು ಕಾಣಸಿಗುತ್ತದೆ. ಅಂದರೆ ಬಾಯಿರುಚಿಗಾಗಿ ಕಡಲೆಯನ್ನು ವ್ಯಾಪಕವಾಗಿ ಬಳಸುತ್ತಿದ್ದರೆಂಬುದು ಈ ಉಲ್ಲೇಖಗಳಿಂದ ತಿಳಿಯಬಹುದು. ಇದನ್ನು ಈಗ ಸೊಪ್ಪಿನ ಕಡಲೆ ಎಂದೂ  ಕರೆಯುವ ರೂಢಿ ಇದೆ.
ಸೊಪ್ಪಿನ ಕಡಲೆಯು ಗಿಡದಲ್ಲಿ ಎಲೆಗಳ ನಡುವೆ ಬಿಡುವಂಥದು, ಎಣ್ಣೆಯ ಅಂಶ ಇಲ್ಲದಂಥದ್ದು, ಹಾಗೂ ಮೃದುವಾದ ಸಿಪ್ಪೆಯಲ್ಲಿ ಅಡಗಿರುವಂಥದು. ಈಚೆಗೆ, ಅಂದರೆ ಹದಿನಾರನೆಯ ಶತಮಾನದ ಎರಡನೆಯ ಅರ್ಧದ ಬಳಿಕ ನಮ್ಮಲ್ಲಿ ಮತ್ತೊಂದು ಬಗೆಯ ಕಡಲೆ ಬಳಕೆಯಲ್ಲಿ ಬಂದಿದೆ. ಅದು ನೆಲದೊಳಗೆ ಬೇರಿನಲ್ಲಿ ಬಿಡುವಂಥದು, ಎಣ್ಣೆಯ ಅಂಶ ಹೆಚ್ಚು ಇರುವಂಥದು ಹಾಗೂ ಸ್ವಲ್ಪ ಗಟ್ಟಿ ಸಿಪ್ಪೆಯನ್ನು ಹೊಂದಿರುವಂಥದು.  ಈ ಸಸ್ಯವನ್ನು ಕಡಲೆಯ ಮತ್ತೊಂದು ರೀತಿ ಎಂದು ಭಾವಿಸಿ ಇದನ್ನು ನೆಲಗಡಲೆ ಎನ್ನುವ ವಾಡಿಕೆ ಬಂತು; ತಮಿಳಿನಲ್ಲಿ ಇದನ್ನು ನೆಲಕಡಲೈ ಎಂದೂ, ತೆಲುಗಿನಲ್ಲಿ ನೆಲಶನಿಗ ಅಥವಾ ವೇರುಶನಿಗ (ವೇರು=ಬೇರು) ಎಂದೂ ಕರೆಯುವ ರೂಢಿಯಿದೆ. ಇದು 7600 ವರ್ಷಗಳಷ್ಟು ಹಿಂದೆಯೇ ಬೆಳೆಯುತ್ತಿತ್ತು ಎಂದು ಪ್ರಾಚ್ಯಶಾಸ್ತ್ರಜ್ಞರು ಹೇಳುತ್ತಾರೆ. ಈ ಸಸ್ಯದ ಮೂಲಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ: ಪೆರು, ಅಥವಾ ಘಾನಾ, ಕ್ಯೂಬ ಎಂಬುದು ವಿವಿಧ ವಿದ್ವಾಂಸರ ಅಭಿಪ್ರಾಯ. ತೆಲುಗಿನಲ್ಲಿ ಇದನ್ನು ಶನಿಗಕಾಯ ಅಥವಾ ಶನಿಕ್ಕಾಯ ಎನ್ನುತ್ತಾರೆ. ಇದಕ್ಕೆ ಸಮೀಪವಾಗಿರುವ ಸೇಂಗ(ಗಾ) ಅಥವಾ ಶೇಂಗ(ಗಾ) ಎಂಬ ಶಬ್ದವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿಗೆ ಬಳಕೆಯಲ್ಲಿದೆ. ದಕ್ಷಿಣ ಕರ್ಣಾಟಕದಲ್ಲಿ ಇದನ್ನು ಕಡಲೆಕಾಯಿ, ಕಳ್ಳೇಕಾಯಿ ಎನ್ನುತ್ತಾರೆ.
=====
ಕಣ್ಣಾಮುಚ್ಚಾಲೆ:  ಇದು ಅನೇಕ ಶಬ್ದಗಳ ಕೂಡುಪದ. ಕಣ್ಣು ಮತ್ತು ಮುಚ್ಚು ಎಂಬಿವು ಸ್ಪಷ್ಟವಾಗಿವೆ. ಇದು ಮಕ್ಕಳ ಒಂದು ಆಟದ ಹೆಸರು. ಒಬ್ಬರ ಕಣ್ಣು ಮುಚ್ಚಿ ಮಿಕ್ಕವರೆಲ್ಲ ಬಚ್ಚಿಟ್ಟುಕೊಂಡ ಮೇಲೆ ಕಣ್ಣು ಬಿಡಿಸಿಕೊಂಡ ಮಗು ಬಚ್ಚಿಟ್ಟುಕೊಂಡವರನ್ನು ಹುಡುಕುವ ಆಟ. "ಕಿವಿಗೆ ಹಿತವಾಗಿ ಸಂತಸ ಹುಟ್ಟಿಸುವ ಲಯಬದ್ಧ ನಾದಪ್ರವಾಹ ಮುಖ್ಯ .. .. ಆದಿಪ್ರಾಸವೋ, ಅಂತ್ಯಪ್ರಾಸವೋ, ಅಡಿಗಡಿಗೆ ಮರುಕಳಿಸುವ ಪ್ರಾಸವೋ ಅಲ್ಲಿ ಮುಖ್ಯವಿನಿಸೀತು. ಉದ್ದೇಶ ಅರ್ಥವನ್ನು ಕೊಡಲೇಬೇಕಾಗಿಲ್ಲ ಹಾಡು" ಎಂದು ಶಿವರಾಮ ಕಾರಂತರು ಮಕ್ಕಳಹಾಡಿನ ಸ್ವರೂಪವನ್ನು ವಿವರಿಸುತ್ತಾರೆ. ಆದರೆ ಕಣ್ಣಾಮುಚ್ಚಾಲೆ ಒಂದು ಆಟವಾದರೂ ಕಣ್ಮುಚ್ಚಿದಾಗ ಹೇಳುವ "ಕಣ್ಣಾ ಮುಚ್ಚೆ ಕಾಡೇಗೂಡೇ ಉದ್ದಿನ ಮೂಟೆ ಉರುಳೇ ಹೊಯ್ತು, ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ, ಬಚ್ಚಿಟ್ಟುಕೊಳ್ಳಿ" ಎಂಬ ಹಾಡಿನಂತಹ ರಚನೆ ಏನೋ ನಿಗೂಢವನ್ನೇ ಸೂಚಿಸುತ್ತಿರುವಂತಿದೆ. ಕಣ್ಮುಚ್ಚು ಎಂಬುದಕ್ಕೆ 'ಸಾವು' ಎಂಬರ್ಥವೂ ಇದ್ದು, ಕಾಡಿನ ಗೂಡು, ಉರುಳಿ ಹೋಗು, ಬಚ್ಚಿಟ್ಟುಕೊ ಮುಂತಾದವು ಸಾವಿನ ಪರಿಯನ್ನು ಹೇಳುತ್ತಿವೆಯೇನೋ ಎಂಬಂತಿದೆ. ಮೂಲದಲ್ಲಿ ಮಕ್ಕಳು ಈ ಮಾತುಗಳನ್ನು ಸೃಷ್ಟಿಸದೆ ಹಿರಿಯರು ಇವುಗಳನ್ನು ಹೇಳಿಕೊಟ್ಟಿರಬಹುದು. ಈಶ್ವರ ಕಮ್ಮಾರರ ಒಂದು ಮಕ್ಕಳ ಪದ್ಯದ ಮೊದಲ ಸಾಲುಗಳಿವು: "ಕೊಕ್ಕ ಬತ್ತಿ ಕ್ವಾಡಾ ಬತ್ತಿ ಊರಿಗೆಲ್ಲ ಒಂದೇ ಬತ್ತಿ ಓಡಲೆ ಬತ್ತಿ.. .. " ಇದೂ ಕಣ್ಣಾಣಾಮುಚ್ಚಾಲೆಯ ಪದ್ಯವನ್ನೇ ಹೋಲುವಂತಿದೆ.
ಈ ಶಬ್ದವು ಕಣ್ಮುಚ್ಚಲೆ, ಕಣ್ಣಾಮುಚ್ಚಿ, ಕಣ್ಣಾಮುಚ್ಚೆ, ಕಣ್ಣುಮುಚ್ಚಲೆ, ಕಣ್ಣುಮುಚ್ಚಳಿಕೆ, ಕಣ್ಣುಮುಚ್ಚಣಿಕೆ ಮುಂತಾಗಿ ಅನೇಕ ವಿಧಗಳಲ್ಲಿ ಬಳಕೆಯಲ್ಲಿದೆ. ಇದೊಂದು ನುಡಿಗಟ್ಟಾಗಿಯೂ ಬಳಕೆಯಲ್ಲಿದೆ. ಕಾಣಿಸಿಕೊಂಡು ಇಲ್ಲವಾಗುವ ಪರಿಯನ್ನು ಈ ನುಡಿಗಟ್ಟು ಸೂಚಿಸುತ್ತದೆ: 'ವಿದ್ಯುತ್ ಕಣ್ಣಾಮುಚ್ಚಾಲೆ' ಎಂಬುದು ದಿನಪತ್ರಿಕೆಯ ಸಾಮಾನ್ಯ ಶೀರ್ಷಿಕೆ. 'ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ' ಎಂಬುದು ಸಿದ್ಧಯ್ಯ ಪುರಾಣಿಕರ ಆತ್ಮಚರಿತ್ರೆಯ ಶೀರ್ಷಿಕೆ. ಮರೆಯಲ್ಲಿ ಅಥವಾ ತಿಳಿಯದಂತೆ ನಡೆಯುವುದು ಎಂಬರ್ಥವೂ ಈ ನುಡಿಗಟ್ಟಿಗಿದೆ: 'ಈ ದೊಡ್ಡಸ್ತನವನ್ನು ತೋರಿಸುವುದರಲ್ಲೇ ಏನೋ ಕಣ್ಣಾಮುಚ್ಚಾಲೆಯಾಟವಿದೆ'. ಎಂದರೆ ಹುನ್ನಾರ ಎಂರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ.
=====
ಕತ್ತಲೆ: ಇದರ ಮೂಲ ಹಳಗನ್ನಡದಲ್ಲಿ ಬಳಕೆಯಲ್ಲಿದ್ದ 'ಕೞ್ತಲೆ' ಎಂಬ ಶಬ್ದ. ಕತ್ತಲು ಎಂಬುದು ಮತ್ತೊಂದು ರೂಪ. ತುಳುವಿನಲ್ಲೂ 'ಕತ್ತಲೆ' ಬಳಕೆಯಲ್ಲಿದೆ. "ಕೞ್ತಲೆ-ಮರ್ವು" ಎಂದು 'ಶಬ್ದಮಣಿದರ್ಪಣ'ವು ಅರ್ಥ (ಮರ್ವು=ಮಬ್ಬು) ನೀಡುತ್ತದೆ. "ನಿನಗೆ ಪಗಲೊಳೇಂ ಕೞ್ತಲೆಯೆ" ಎಂಬುದು 'ಪಂಪಭಾರತ'ದ ಮಾತು. 'ಕಳ್ತಲಿಸು' ಎಂಬುದು ಕತ್ತಲೆಯಾಗು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ ಬಳಕೆಗೊಂಡಿದೆ ("ಇಮ್ಮಾವು ಕಳ್ತಲಿಸಿರ್ದತ್ತು ಎಲೆವಳ್ಳಿ ಕಾಯ್ತು ಕರೆವಂತಿರ್ದತ್ತು"). ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯು 'ಕೞ್ತಲೆವಿಡು' ಎಂಬ ಶಬ್ದವನ್ನು ಬಳಸುತ್ತದೆ ("ಕೞ್ತಲೆವಿಡುವ ತಮಾಲಂಗಳೊಳ್"). ಗೂಬೆಯನ್ನು 'ಲೀಲಾವತಿ'ಯಲ್ಲಿ 'ಕೞ್ತಲೆವಕ್ಕಿ' ಎಂದು ಕರೆದಿದೆ ("ಇಕ್ಕಿದ ತತ್ತಿಗೆ ಕೞ್ತಲೆವಕ್ಕಿ ಭಯಂಬಿಟ್ಟು"). ಸೋಮದೇವನ 'ಉದ್ಭಟಕಾವ್ಯ'ವು ಕತ್ತಲೆಯ ಸಂತಾನವೆಂಬರ್ಥದಲ್ಲಿ 'ಕೞ್ತಲೆವ' ಶಬ್ದಪ್ರಯೋಗಿಸುತ್ತಾನೆ ("ಮಿಸುಗುವ ಕಳ್ತಲೆವಱೆಗಳೊಳ್ ಅಸವಸದಿಂ ಶಶಿಮರೀಚಿಗಳ್ ಪೊಣರ್ವವೊಲ್").
'ಕರ್ತಲೆ' ಎಂಬ ಅಪರೂಪದ ರೂಪವು ಒಂದು ಶಾಸನದಲ್ಲಿ ದೊರೆಯುತ್ತದೆ ("ಭಾನೂದಯದೊಳ್ ಕರ್ತಲೆಯನ್ತಿರೆ"). ಹಳಗನ್ನಡ ಬರವಣಿಗೆಯಲ್ಲಿಯೇ ಕೆಲವೆಡೆ ಕತ್ತಲೆ ಎಂಬ ರೂಪವು ಸಿಕ್ಕುತ್ತದೆ: "ಹೃದಯದೊಳೊದವಿದ ಕತ್ತಲೆ ಚೆದರುವಿನಂ" - 'ಕರ್ಣಾಟಕ ಕಾದಂಬರಿ'). ನಡುಗನ್ನಡದಲ್ಲಿ ಈ ಶಬ್ದವು 'ಕತ್ತಲೆ' ಎಂದು ವ್ಯಾಪಕವಾಗಿ ಬಳಕೆಗೆ ಬಂತು. "ಕತ್ತಲೆಯೆಂಬುದು ಇತ್ತಲೆಯಯ್ಯಾ, ಗುಹೇಶ್ವರನೆಂಬುದು ಅತ್ತಲೆಯ್ಯಾ" ಎಂಬುದು ಅಲ್ಲಮಪ್ರಭುವಿನ ಪ್ರಸಿದ್ಧವಾದ ಮಾತು. "ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ" ಎಂಬುದು ಅಕ್ಕನ ವಚನದ ಸಾಲು. "ಮಿಂಚುಬುಳುವಿಗೆ ಸೋಲುವುದೆ ಕತ್ತಲೆಯ ಕಟಕವು" ಎಂಬುದು ಕುಮಾರವ್ಯಾಸನ ರೂಪಕ. "ಎತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ" ಎಂಬಲ್ಲಿ ಲಕ್ಷ್ಮೀಶನು ಈ ಶಬ್ದದ ಬಹುವಚನ ಬಳಸಿದ್ದಾನೆ. ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕತ್ತಲೆಗೆಯ್' ಶಬ್ದ ಬಳಕೆಯಾಗಿದೆ ("ಕಳಿವಣ್ಣುಗಳ್ ತರುಲತೆ ಕತ್ತಲೆಗೆಯ್ದುವಾ ಬನದಿ"). "ಕತ್ತಲೆಯಲಿ ಬತ್ತಲೆಯಲಿ ತಲೆಗೆದರಿದೆ ಬದುಕು" ಎಂಬುದು ಕೆ.ಎಸ್.ನ. ಅವರ 'ಅನ್ನಪೂರ್ಣೆಗೆ' ಕವನದ ಒಂದು ಸಾಲು. ಇಲ್ಲಿ ಕತ್ತಲೆ ಎಂಬ ಪದಕ್ಕೆ ಅಜ್ಞಾನ ಎಂಬರ್ಥವೂ ಹೊಂದುತ್ತದೆ. ದಟ್ಟ ಕತ್ತಲೆ ಎಂಬರ್ಥ 'ಕಗ್ಗತ್ತಲೆ' ಶಬ್ದ ಕುಮಾರವ್ಯಾಸ ಭಾರತಕಿದಲ್ಲಿಯೇ ಬಂದಿದೆ ("ಕಗ್ಗತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ").
ಕತ್ತಲು ಎಂಬ ರೂಪವೂ ಈಗ ವ್ಯಾಪಕವಾಗಿ ಬಳಕೆಯಲ್ಲಿದೆ. "ಹಬ್ಬಿತು ಕತ್ತಲು ಎದೆಎದೆಯೊಳಗೆ" ಎಂಬ ಸಾಲು ಪು.ತಿ.ನ. ಅವರ 'ವಿಕಟಕವಿ ವಿಜಯ' ನಾಟಕದ್ದು. 'ಕಗ್ಗತ್ತಲು' ರೂಪವೂ ಇದೆ. "ಕದ್ದಿಂಗಳು ಕಗ್ಗತ್ತಲು" ಕುವೆಂಪು ಪ್ರಯೋಗ.
=====
ಕನ್ನಡ: ಕನ್ನಡ ಎಂಬ ಪದವು ಅತ್ಯಂತ ಪ್ರಾಚೀನ ಉಪಲಬ್ಧ ಕನ್ನಡ ಕೃತಿಯಾದ ಕ್ರಿಶ ಒಂಬತ್ತನೇ ಶತಮಾನದ 'ಕವಿರಾಜಮಾರ್ಗ'ದಲ್ಲಿ ಸ್ಪಷ್ಟವಾಗಿ ಎರಡು ಅರ್ಥಗಳಲ್ಲಿ ಬಳಕೆಯಾಗಿದೆ: ಒಂದು ಕನ್ನಡ ನಾಡು, ಇನ್ನೊಂದು ಕನ್ನಡ ನುಡಿ. ಬಹಳ ಪ್ರಸಿದ್ಧವಾದ ಅದರ ಪದ್ಯವೊಂದು "ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್: ಎನ್ನುತ್ತದೆ. ಅಂದರೆ ಕನ್ನಡ ಎಂಬುದು ಈ ನಾಡಿನ ಹೆಸರು; ಕನ್ನಡವನ್ನು ಮಾತನಾಡುವವರು ವಾಸಿಸುತ್ತಿದ್ದ ಪ್ರದೇಶ. ಆ ಗ್ರಂಥದಲ್ಲಿಯೇ ಇರುವ "ಪರಮಾಚಾರ್ಯರವೋಲ್ ಸೈತಿರಲಯರ್ ಕನ್ನಡಕ್ಕೆ ನಾಡವರೋಜರ್" ಎಂಬ ಪದ್ಯದಲ್ಲಿ ಕನ್ನಡ ಎಂಬುದನ್ನು ನುಡಿಯ ಹೆಸರಾಗಿ ಬಳಸಲಾಗಿದೆ. ಅಷ್ಟೇ ಅಲ್ಲ, ಕನ್ನಡದ ಪ್ರಾದೇಶಿಕ ಪ್ರಭೇದಗಳನ್ನೂ (ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ, 'ಉಪಭಾಷೆ') ಕನ್ನಡಂಗಳ್ ಎಂಬ ಪದದಿಂದ ಸೂಚಿಸಲಾಗಿದೆ. ಆದರೆ ಕನ್ನಡ ಎಂಬ ಶಬ್ದದ ಹುಟ್ಟು ಹೇಗಾಯಿತೋ ತಿಳಿಯದು.
ಕ್ರಿಶ ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ 'ಕನ್ನಡ ಸಂಧಿವಿಗ್ರಹಿ' (ಸಂಧಿವಿಗ್ರಹಿ ಎಂದರೆ ಸಂಧಾನ ಮತ್ತು ಯುದ್ಧಗಳ ಹೊಣೆ ಹೊತ್ತ ಮಂತ್ರಿ) ಎಂಬ ಮಾತು ದೊರೆಯುತ್ತದೆ. ಅದರರ್ಥ ಕನ್ನಡ ದೇಶದ ಸಂಧಿವಿಗ್ರಹಿ ಎಂದು ನನಿಘಂಟುಗಳೇನೋ ಅರ್ಥವನ್ನು ಕೊಡುತ್ತವೆ. ಆದರೆ ಆ ಕಾಲದಲ್ಲಿ ಕನ್ನಡ ಮಾತಾಡುವ ಪ್ರದೇಶವೆಲ್ಲ ಒಂದಾಗಿದ್ದ ನಾಡೆಲ್ಲಿತ್ತು? ವಿವಿಧ ರಾಜರ ಆಳ್ವಿಕೆಯಲ್ಲಿ ಕನ್ನಡ ಜನ ವಾಸಿಸುತ್ತಿದ್ದರು. ಹೀಗಾಗಿ ನಿಘಂಟಿನ ಈ ಅರ್ಥ ಸರಿಹೊಂದುವಂತೆ ಕಾಣದು. ಕನ್ನಡಗಬ್ಬ, ಕನ್ನಡಕವಿತೆ ಎಂಬ ಶಬ್ದಗಳೂ ತುಂಬ ಹಿಂದಿನಿಂದಲೇ ದೊರೆಯುತ್ತವೆ.
ಆನಂತರದ ಕನ್ನಡ ಕಾವ್ಯಗಳಲ್ಲಿ 'ಕನ್ನಡವಕ್ಕಿ' ಎಂಬುದನ್ನು ಗಿಳಿ ಎಂಬಂರ್ಥದಲ್ಲಿ ಬಳಸಲಾಗಿದೆ. ಕನ್ನಡಗೌಳ, ಕನ್ನಡವೀಣೆ, ಕನ್ನಡವರಾಳಿ ಎಂಬ ಮಾತುಗಳು ಸಂಗೀತಕ್ಕೆ ಸಂಬಂಧಿಸಿದಂತೆ ಬಳಕೆಯಾಗಿವೆ. ಇವಕ್ಕೂ ಕನ್ನಡ ನುಡಿ ಅಥವಾ ನಾಡಿಗೆ ಯಾವ ರೀತಿ ಸಂಬಂಧವಿದೆಯೋ ಸ್ಪಷ್ಟವಾಗುವುದಿಲ್ಲ. ಕನ್ನಡಗಿತಿ (ಕನ್ನಡ ನಾಡಿನ ಹೆಣ್ಣು) ಎಂಬ ಮಾತು ಹದಿಮೂರನೆಯ ಶತಮಾನದ 'ಶಬ್ದಮಣಿದರ್ಪಣ'ವೆಂಬ ವ್ಯಾಕರಣ ಗ್ರಂಥದಲ್ಲಿ ದೊರಕುತ್ತದೆ. ಆದರೆ ಕನ್ನಡಿಗ ಎಂಬ ಶಬ್ದವು ಮೊದಲು ಸಿಕ್ಕುವುದು ಹದಿನಾಲ್ಕನೆಯ ಶತಮಾನದ ನಾಗರಾಜ ಕವಿಯ 'ಪುಣ್ಯಾಸ್ರವ' ಎಂಬ ಕಾವ್ಯದಲ್ಲಿ. ಹದಿನೇಳನೇ ಶತಮಾನದ ಸಂಸ್ಕೃತ ಭಾಷೆಯಲ್ಲಿರುವ 'ಶಬ್ದಾನುಶಾಸನ' ಎಂಬ ಕನ್ನಡ ವ್ಯಾಕರಣದಲ್ಲಿ ಕನ್ನಡ ನಾಡಿನವನು ಎಂಬರ್ಥದಲ್ಲಿ ಕನ್ನಡಿಚ ಎಂಬ ಶಬ್ದವನ್ನು ಬಳಸಲಾಗಿದೆ.
ಕನ್ನಡಿಸು ಎಂಬ ಮಾತೊಂದಿದೆ: ಇದನ್ನು ಕನ್ನಡ ಭಾಷೆಯಲ್ಲಿ ಹೇಳು ಎಂಬರ್ಥದಲ್ಲಿ ಬಳಸಲಾಗುತ್ತಿದೆ, ಪ್ರಾಯಶಃ ಇದು ಈಚಿನ ಪ್ರಯೋಗ. ಈ ಶಬ್ದವನ್ನು ಕನ್ನಡಿ+ಇಸು ಎಂದು ಒಡೆಯಬೇಕು: ಕನ್ನಡಿಯ ಪ್ರತಿಬಿಂಬದಂತೆ ಮಾಡು, ಅನುವಾದಿಸು ಎಂಬರ್ಥದಲ್ಲಿ ಈ ಶಬ್ದವನ್ನು ಬಳಸಿದಂತೆ ತೋರುತ್ತದೆ.
=====
ಕಬ್ಬ: ಈ ಶಬ್ದವು ಸಂಸ್ಕೃತದ ಕಾವ್ಯ ಎಂಬುದರ ತದ್ಭವ (ಕಾವ್ಯ ಎಂಬುದೇ ಕವಿ ಎಂಬುದರಿಂದ ಬಂದು, ಕವಿಯ ಕೃತಿ ಎಂಬ ಅರ್ಥವನ್ನು ಹೊಂದಿದೆ; ಪ್ರಾಕೃತದಲ್ಲಿದು ಕವ್ವ ಎಂಬ ರೂಪವನ್ನು ಪಡೆಯುತ್ತದೆ). ಈಗ ಕವಿ ಎಂಬ ಶಬ್ದವೇ ಹೆಚ್ಚು ಬಳಕೆಯಲ್ಲಿದ್ದರೂ ಹಿಂದೆ ಕಬ್ಬ ಎಂಬ ಶಬ್ದವೂ ವ್ಯಾಪಕವಾಗಿ ಬಳಕೆಯಲ್ಲಿತ್ತು. ಈ ಶಬ್ದವು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿಯಾದ 'ಕವಿರಾಜಮಾರ್ಗ'ದಲ್ಲಿಯೇ ಬಂದಿದೆ: "ಮಿಗೆ ಕನ್ನಡಗಬ್ಬಂಗಳೊಳ್ ಅಗಣಿತಗುಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗದಿಸುವರ್ ಗದ್ಯಕಥಾಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್" ಎಂಬುದು ಅಲ್ಲಿಯ ಪ್ರಯೋಗ. ಅಲ್ಲದೆ 'ಬೆದಂಡೆಗಬ್ಬ' ಎಂಬ ವಿಶಿಷ್ಟ ಪ್ರಭೇದವನ್ನೂ ಅಲ್ಲಿ ಹೇಳಿದೆ; ಇದು ಕನ್ನಡದ ಸ್ವಂತ ಕಾವ್ಯ ಪ್ರಕಾರ, ಇನ್ನೊಂದು ಚತ್ತಾಣ.  ಕಬ್ಬವನ್ನು ರಚಿಸುವವನು ಅಥವಾ ಕವಿಯೇ ಕಬ್ಬಿಗ. "ಸೊಗಯಿಸುವ ಕಬ್ಬಮಂ ಕಬ್ಬಿಗರಲ್ಲದೆ ಮೆಚ್ಚರ್" ಎಂಬುದು ಆಂಡಯ್ಯನ 'ಕಬ್ಬಿಗರ ಕಾವ'ದ ಮಾತು. ಕವಿಸಮುದಾಯವನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಕಬ್ಬಿಗವಂದಿ'  {ಕಬ್ಬಿಗ+ಮಂದಿ) ಎಂದು ಕರೆದಿದೆ. ಅಲ್ಲಿಯೇ ಬೇರೆಯವರ ಕೃತಿಯಿಂದ ಹಾರಿಸಿಕೊಂಡು ಬರೆಯುವವನನ್ನು 'ಕಬ್ಬಿಗಗಳ್ಳ' ಎಂದು ಕರೆದಿದೆ.
ಹಳಗನ್ನಡದಲ್ಲಿ ಸಂಸ್ಕೃತ ಮಾದರಿಯ ಕಾವ್ಯಪರಂಪರೆಯನ್ನು 'ಮಾರ್ಗ' ಎಂದೂ ಕನ್ನಡ ನಾಡಿನ ಸತ್ವವನ್ನೊಳಗೊಂಡುದನ್ನು 'ದೇಸಿ' ಎಂದೂ ಕರೆಯುತ್ತಿದ್ದರು. ಮಾರ್ಗವು ಕಾವ್ಯವಸ್ತುವಿಗೆ ಹೆಚ್ಚು ಪ್ರಾಧಾನ್ಯವಿತ್ತರೆ, ದೇಸಿಯು ಭಾವನೆಗೆ ಒತ್ತು ನೀಡುವಂತೆ ತೋರುತ್ತದೆ. ಇದು ಕ್ರಮವಾಗಿ ವಸ್ತುಕ ವರ್ಣಕ ಎಂಬ ಶಬ್ದಗಳಿಂದಲೂ ಸೂಚಿತವಾಗುತ್ತಿತ್ತು. ಹಾಗೆಯೇ ಇವುಗಳನ್ನು ಓದುಗಬ್ಬ ಪಾಡುಗಬ್ಬ (ಹಾಡುಗಬ್ಬ) ಎಂಬ ಶಬ್ದಗಳಿಂದಲೂ ಕರೆಯುತ್ತಿದ್ದರು. "ಕಬ್ಬಿಗರೋದುಗಬ್ಬವ ಹಾಡುಗಬ್ಬವ ಕಬ್ಬದೊಳೊರೆವರವೆರಡು ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇಕಬ್ಬೆ ಸರಸತಿಯೇ" ಎಂಬುದು ರತ್ನಾಕರವರ್ಣಿಯ 'ಭರತೇಶ್ವರ ವೈಭವ'ದ ಪದ್ಯ. ಪಾಡುಗಬ್ಬವನ್ನು ಸಾಳ್ವನೆಂಬ ಕವಿಯು 'ಪಾಡುಗವಿತೆ' ಎಂಬ ಶಬ್ದದಿಂದಲೂ ಕರೆಯುತ್ತಾನೆ.
=====
ಕರ್ನಾಟಕ: ಕರ್ನಾಟಕ ಎಂಬುದು ಕನ್ನಡ ನಾಡಿನ ಹೆಸರಾಗಿ ಇಂದು ಬಳಕೆಯಲ್ಲಿದೆ. ಇದು ಮಹಾಭಾರತದಂತಹ ತುಂಬ ಪ್ರಾಚೀನವಾದ ಸಂಸ್ಕೃತ ಕಾವ್ಯಗಳಲ್ಲಿಯೇ ಉಲ್ಲೇಖಗೊಂಡಿದೆಯೆಂದು ವಿದ್ವಾಂಸರು ಹೇಳುತ್ತಾರೆ. ಕರ್ನಾಟಕ ಎಂಬುದು ಕನ್ನಡ ಎಂಬುದರ ಸಂಸ್ಕೃತೀಕರಣಗೊಂಡ ರೂಪ ಎಂದೂ ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಮಹಾಭಾರತದ ರಚನಾಕಾಲದಲ್ಲಿ ಕನ್ನಡ ಭಾಷೆಯಿತ್ತೆ? ಅಲ್ಲದೆ, ಮಹಾಭಾರತದ ಕಾಲವೇ ಗೊತ್ತಿಲ್ಲ. ಜೊತೆಗೆ, ಈ ಶಬ್ದವನ್ನು ಇತರ ಕನ್ನಡ ಪ್ರದೇಶಗಳ ಜೊತೆಗೆ ಹೇಳಲಾಗಿದೆಯೆಂದು ಭೀಷ್ಮಪರ್ವದ ಶ್ಲೋಕವೊಂದನ್ನು ಉದ್ಧರಿಸಲಾಗುತ್ತದೆ: "ಅಥಾಪರೇ ಜನಪದಾಃ ದಕ್ಷಿಣಾ ಭರತರ್ಷಭ| ದ್ರಾವಿಡಾಕೇರಲಾಪ್ರಾಚ್ಯಾ ಮೂಷಿಕಾ ವನವಾಸಿಕಾ|| ಕರ್ನಾಟಕಾ ಮಹಿಷಕಾ ವಿಕಲ್ಪಾ  ಮೂಷಕಾಸ್ತಥಾ| ಝಿಲ್ಲಿಕಾ ಕುಂತಲಾಶ್ಚೈವ ಸೌಹೃದಾ ನಭಕಾನನಾ||" ಹಾಗೆಯೇ ಛಪ್ಪನ್ನ ದೇಶಗಳಲ್ಲಿ ಕರ್ನಾಟಕವನ್ನೂ ಸೇರಿಸಿ ಹೇಳುವ ರೂಢಿಯಿದೆ. ಆದರೆ ಆ ಕರ್ನಾಟಕ ಯಾವುದು? 'ಕರ್ನಾಟಕ ಸಿಂಹಾಸನಾಧೀಶ್ವರ' ಎಂದು ಹಲವಾರು ದೊರೆಗಳು ತಮ್ಮನ್ನು ಕರೆದುಕೊಳ್ಳುತ್ತಾರೆ. ಅವರ ಕರ್ಣಾಟಕ ಯಾವುದು? ಕರ್ನಾಟಕ ಎಂಬುದು ಅಷ್ಟೊಂದು ಪ್ರಾಚೀನವಾದರೆ ಕನ್ನಡ ನಾಡು ನುಡಿ ನಾಡವರ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ 'ಕವಿರಾಜಮಾರ್ಗ'ದ ಕರ್ತೃ ಈ ಹೆಸರನ್ನು ಬಳಸದೆ ಈ ನಾಡನ್ನು ಕನ್ನಡ ಎಂದು ಕರೆಯುವುದೇಕೆ? ಪ್ರಾಯಶಃ ಕರ್ನಾಟಕ ಎಂಬ ಶಬ್ದವು ಈ ಕೃತಿಯ ಕಾಲದ ನಂತರ ಸೃಷ್ಟಿಯಾಗಿರಬೇಕು.
ಕರ್ನಾಟಕ ಎಂಬುದರ ಮೂಲರೂಪ 'ಕರ್ಣಾಟ'; ದೇಶವನ್ನು 'ಕರ್ಣಾಟ' ಎಂದೂ ಭಾಷೆಯನ್ನು 'ಕರ್ಣಾಟ ಭಾಷೆ'ಯೆಂದೂ ಸಂಸ್ಕೃತಪ್ರಿಯರು ಹೇಳುತ್ತಿದ್ದರು. ವಿಜಯನಗರದ ಅರಸನನ್ನು ಭೇಟಿಮಾಡಲು ಬಂದ ತೆಲುಗಿನ ದೊಡ್ಡ ಕವಿ ಶ್ರೀನಾಥನು ಹೇಳಿದನೆನ್ನಲಾದ ಚಾಟುಪದ್ಯವೊಂದರಲ್ಲಿ "ಎವ್ವರೇಮನುಚುನ್ರು ನಾಕೇಮಿ ಕೊರತ ನಾ ಕವಿತ್ವಂಬು ನಿಜಮು ಕರ್ಣಾಟ ಭಾಷಾ" ಎಂಬ ಸಾಲಿದೆ. ಕರ್ಣಾಟಕ ವಿಷಯ ಎಂಬುದು ಕನ್ನಡ ನಾಡನ್ನು ಸೂಚಿಸುತ್ತಿತ್ತು. ಕರ್ನಾಟಕ ಸಂಗೀತ ಎಂಬ ಮಾತಿದೆ; ಹಾಗೆಯೇ ಕರ್ಣಾಟಗೌಳ ಎಂಬ ರಾಗದ ಹೆಸರಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಹೆಸರು 'ಕರ್ಣಾಟಕ ಸಾಹಿತ್ಯ ಪರಿಷತ್ತು' ಎಂದು, ಅದನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಬದಲಿಸಲು ಪ್ರಯತ್ನಗಳಾದವು. ಕರ್ಣಾಟಕ ಎಂಬುದು ಸಂಸ್ಕೃತ ವ್ಯಾಕರಣಕ್ಕನುಗುಣವಾದುದು, ಹಾಗಾಗಿ ಅದನ್ನೇ ಉಳಿಸಿಕೊಳ್ಳಬೇಕೆಂದು ಒಂದು ಪಕ್ಷದವರು ಪಟ್ಟುಹಿಡಿದರು. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ನಡೆದ ನ ಅಥವಾ ಣ ಯಾವುದಿರಬೇಕು ಎಂಬ ಈ ವಿವಾದವನ್ನು 'ನೊಣ ಜಗಳ' ಎಂದೇ ಕರೆಯುತ್ತಿದ್ದರು! ಜಾಣರು ಎರಡನ್ನೂ ಬಿಟ್ಟು ಕನ್ನಡ ಎಂಬುದನ್ನು ಅಳವಡಿಸಿದರು. ಕರ್ಣಾಟ ಎಂಬುದು ಕನ್ನಡವನ್ನು (ಶ್ರೀನಾಥನ ಪದ್ಯ ಅಥವಾ ಕರ್ಣಾಟಕ ಸಂಗೀತದಲ್ಲಿ) ಸೂಚಿಸದೆ ಕರ್ಣ+ಅಟ ಅಂದರೆ ಕಿವಿಗೆ ಹಿತಕರವಾದ ಎಂಬ ಅರ್ಥವೇ ವಿಹಿತ ಎಂಬುದೂ ಕೆಲವರ ವಾದವಾಗಿದೆ.
=====
ಕವಡೆ: ಇದು ಸಂಸ್ಕೃತದ 'ಕಪರ್ದ' ಶಬ್ದದ ತದ್ಭವ. ಕವಡೆ ಎಂಬುದು ಒಂದು ಸಣ್ಣ ಸಮುದ್ರಪ್ರಾಣಿಯ ಚಿಪ್ಪು. ಇಂಡಿಯಾದಲ್ಲಿ ಹಿಂದೆ ಕವಡೆ ಒಂದು ನಾಣ್ಯವಾಗಿ ಚಲಾವಣೆಯಲ್ಲಿದ್ದುದನ್ನು ಸುಲೇಮಾನ್ ಎಂಬ ಪರ್ಷಿಯನ್ ಪ್ರವಾಸಿ ಬರೆಯುತ್ತಾನೆ. ಈಗಲೂ 'ಕವಡೆಯ ಕಿಮ್ಮತ್ತಿಲ್ಲ' ಎಂಬ ಮಾತನ್ನು ಬಳಸುವುದು ರೂಢಿಯಲ್ಲಿದೆ. ಮಾಯಿದೇವಿ ಅಥವಾ ಮಾಳಚಿ (ಮಹಾಲಕ್ಷ್ಮಿ) ಎಂಬ ದೇವತೆಯ ಭಕ್ತರು ಕೊರಳಲ್ಲಿ ಕವಡೆಯ ಮಾಲೆ ಧರಿಸುತ್ತಿದ್ದರು: ಉರಿಲಿಂಗಪೆದ್ದಿ ಎಂಬ ವಚನಕಾರನ ವಚನವೊಂದರಲ್ಲಿ "ಮಾಯಿರಾಣಿಯೇ ದೈವವೆಂದಾರಾಧಿಸಿದಾತನು ಕೊರಳಿಗೆ ಕವಡೆಯ ಕಟ್ಟಿ ತಲೆಯಲ್ಲಿ ಕೆರಹ ಹೊತ್ತು ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ" ಎಂಬ ಮಾತಿದೆ. ಈ ಸಂಪ್ರದಾಯ ಈಗಲೂ ಕೊಲ್ಲಾಪುರ ಲಕ್ಷ್ಮೀ ದೇವತೆಯ ಭಕ್ತರಲ್ಲಿದೆಯೆಂಬುದಕ್ಕೆ ಬೇಂದ್ರೆಯವರ 'ಕುರುಡು ಕಾಂಚಾಣ' ಕವನದಲ್ಲಿನ ಚಿತ್ರದ ಭಾಗವಾಗಿ ಬರುವ "ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ" ಎಂಬ ವರ್ಣನೆಯನ್ನು ನೋಡಬಹುದು. ಅಳಗುಳಿಮನೆ, ಚೌಕಾಬಾರದಂತಹ ಆಟಗಳಲ್ಲಿ ಕವಡೆಯನ್ನು ಗರ ಹಾಕಲು ಬಳಸುತ್ತಾರೆ. ಜ್ಯೋತಿಷಿಗಳು ಭವಿಷ್ಯದ ಆಗುಹೋಗುಗಳನ್ನು ಲೆಕ್ಕಹಾಕಲು ಈಗಲೂ 'ಕವಡೆ ಹಾಕು'ತ್ತಾರೆ.
'ಕವಡಿಕೆ' ಎಂದರೂ ಕವಡೆಯೇ. ಇದು ಸಂಸ್ಕೃತದ ಕಪರ್ದಿಕಾ (=ಸಣ್ಣ ಕವಡೆ) ಎಂಬ ಶಬ್ದದ ತದ್ಭವರೂಪ. ಈಗ ಕವಡೆ ಎಂಬ ರೂಪ ಹೆಚ್ಚು ಬಳಕೆಯಲ್ಲಿದ್ದರೂ ಹಿಂದಿನ ಕನ್ನಡ ಕಾವ್ಯಗಳಲ್ಲಿ ಕವಡಿಕೆ ಎಂಬ ರೂಪವೇ ಹೆಚ್ಚು ಪ್ರಚಲಿತವಾಗಿತ್ತು. "ಬಾಯೊಳ್ ಕವಡಿಕೆಗಳಂ ಪಲ್ಗಳಂತೆ ಮಾಡಿ" ಎಂದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದೇ ರೀತಿಯ ವರ್ಣನೆ ಕವಡೆ ರೂಪದೊಡನೆ 'ಭರತೇಶವೈಭವ'ದಲ್ಲಿ ಬರುತ್ತದೆ: "ಹಲ್ಲೆಲ್ಲ ಕವಡೆಯ ಚೀಲವಂ ಕೊಡಹಿದಂತುದಿರ್ದುವು ಧರೆಗೆ." ಶಾಂತಿನಾಥನ 'ಸುಕುಮಾರ ಚರಿತೆ' ಯಲ್ಲಿ "ಇಂತೊಂದು ಕೋಟಿ ಪೊನ್ನನೊಂದು ಕವಡಿಕೆಯಂ ಕುಡುವಂತೇನುಂ ಅಪೋಹಮಿಲ್ಲದೆ ಕೊಟ್ಟು" ಎಂಬ ವಾಕ್ಯದಲ್ಲಿ 'ಕವಡಿಕೆ' ಒಂದು ನಾಣ್ಯದ ರೂಪದಲ್ಲಿ ಬಳಕೆಯಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಬರುವ "ಕವಡಿಕೆಯುಂ ಕಾಚುಂ ಸಲ್ಗುಮೆ ಹೊನ್ನವೊಲೆಲ್ಲಿಯಾದೊಡಂ" ಎಂಬ ಮಾತಿನಲ್ಲಿ ಅದಕ್ಕಿದ್ದ ಅಲ್ಪಮೌಲ್ಯ ವ್ಯಕ್ತವಾಗುತ್ತದೆ. "ಕವಡಿಕೆ ನೆತ್ತ ಮೊದಲಾದ ನಾಟಕದ ಮೊಗರಂಗವೆನಿಪ ಕವಾಟ ತೆಯದು" ಎಂಬ ಕುಮಾರವ್ಯಾಸನ ಮಾತಿನಿಂದ ಅದೊಂದು ಬಗೆಯ ಆಟವೆಂಬುದೂ ತಿಳಿಯುತ್ತದೆ. ಕವಡೆಯ ಬೆನ್ನ ಬಣ್ಣದಿಂದ ಅವುಗಳನ್ನು ಐದು ರೀತಿಯಲ್ಲಿ ವಿಂಗಡಿಸುತ್ತಿದ್ದರಂತೆ: ಸುವರ್ಣಛಾಯೆ-ಸಿಂಹಿ, ಧೂಮ್ರವರ್ಣ-ವ್ಯಾಘ್ರಿ, ಹಳದಿ-ಮೃಗಿ, ಬಿಳಿಪು-ಹಂಸಿ ಹಾಗೂ ಉದ್ದವಾದುದು ವಿದಂತ.

=====

No comments: