Saturday 9 November 2013

ಪದಚರಿತೆ : ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ -1

ಪದಚರಿತೆ : ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ -1

ಭಾಷೆ ಎಂಬುದು ಒಂದು ವಿಸ್ಮಯ, ನಾಗರಿಕ ಮಾನವನ ಮಹಾ ಅನ್ವೇಷಣೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆಯಂತೆ. ಅವುಗಳಲ್ಲಿ ಕನ್ನಡದ್ದು ವಿಶಿಷ್ಟ ಸ್ಥಾನ. ಎರಡು ಸಾವಿರ ವರ್ಷಗಳಿಂದ ಜನಭಾಷೆಯಾಗಿದ್ದು ಇಂದಿಗೂ ಜೀವಂತವಾಗಿರುವ ನುಡಿ ಇದು. ಇಂಥ ಅನನ್ಯತೆ ಇರುವುದು ಪ್ರಪಂಚದ ನಾಲ್ಕೈದು ಭಾಷೆಗಳಿಗೆ ಮಾತ್ರ. ಅಸಂಖ್ಯಾತ ಜನ ಕನ್ನಡವನ್ನು ಬಳಸುತ್ತ ಬಳಸುತ್ತ ಆ ನುಡಿಯಲ್ಲಿನ ಶಬ್ದಗಳಿಗೂ ಅವುಗಳ ಆಳದ ಅರ್ಥಗಳಿಗೂ ಅನನ್ಯ ಸಂಬಂಧ  ಉಂಟಾಗಿದೆ.  ಮಾತಿಗೂ ಅರ್ಥಕ್ಕೂ ಇರುವ ನಂಟನ್ನು ಕಾಳಿದಾಸ ಶಿವಪಾರ್ವತಿಯರಿಗೆ ಹೋಲಿಸಿದ್ದಾನೆ. ಆದರೆ ಶಬ್ದ-ಅರ್ಥಗಳಲ್ಲಿ ಮೂಲಭೂತವಾದ ನಂಟೇನೂ ಇಲ್ಲ, ರೂಢಿಯಿಂದ ಬಂದದ್ದು. ಅಷ್ಟೆ.
"ಪದನರಿದು ನುಡಿಯಲುಂ ನುಡಿದುದಂ ಅರಿದು ಆರಯಲುಂ ಆರ್ಪರ್ ಆ ನಾಡವರ್ಗಳ್" ಎಂದು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿ 'ಕವಿರಾಜಮಾರ್ಗಕ' ಹೇಳುತ್ತದೆ. ಭಾಷೆಯ ಹದವನ್ನು ತಿಳಿದು ಮಾತನಾಡುವುದನ್ನೂ, ಇತರರು ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು ಯೋಚಿಸುವುದನ್ನೂ ಕನ್ನಡಿಗರು ಬಲ್ಲರು ಎಂಬುದು ಈ ಮಾತಿನ ಅರ್ಥ. ಇದು ಅವರಿಗೆ ಸಹಜವೆಂಬಂತೆ ಅದು ವರ್ಣಿಸುತ್ತದೆ. ಆದರೆ ಇದು ಅಭಿಮಾನದ ಮಾತು. ಮಾತು ಮತ್ತು ಅರ್ಥ - ಇವೆರಡರ ಸಂಬಂಧವನ್ನು ಅರಿತಾಗ ಮಾತ್ರ ಮಾತಿನ 'ಹದಕ' ಉಂಟಾಗುತ್ತದೆ. ಮಾತಿನ ಹೊರಮೈ, ಅದರಲ್ಲಿ ಅರ್ಥ ಬಂದು ಸೇರುವ ಬಗೆ - ಇವುಗಳ ಮರ್ಮ ತಿಳಿದರೆ ಭಾಷೆಯ ಬಗೆಗಿನ ಹಿಡಿತ ಕೈಗೂಡೀತು. ಇದು ಸಾಧ್ಯವಾಗುವುದು ಅಭ್ಯಾಸದಿಂದ, ಎರಡೂ ರೀತಿಯಲ್ಲಿ: ಓದುವುದರಿಂದ ಹಾಗೂ ಬಳಸುವುದರಿಂದ. ಈ ಎರಡು ಸಾವಿರ ವರ್ಷಗಳಲ್ಲಿ ಅಸಂಖ್ಯಾತ ಕನ್ನಡಿಗರ ಬಳಕೆ ಎಂಬ ಪಾತ್ರದಲ್ಲಿ ಕನ್ನಡ ಶಬ್ದವಾಹಿನಿಯು ನಿರಂತರವಾಗಿ ಹರಿದು ಬಂದಿದೆ; ಆ ಹರಿವಿನಲ್ಲಿ ಕೆಲವು ಶಬ್ದಗಳು ಹಿಂದಿನಂತೆಯೇ ಉಳಿದು ಬಂದಿವೆ, ಕೆಲವು ಮಾರ್ಪಾಟು ಹೊಂದಿವೆ, ಮತ್ತೆ ಕೆಲವು ಮರಳಲ್ಲಿ ಇಂಗಿಹೋಗಿವೆ, ಎಷ್ಟೋ ಪದಗಳು ಹೊಸತಾಗಿ ಬಂದು ಸೇರಿಕೊಂಡಿವೆ - ಹೀಗೇ ಈ ನದಿ ಹರಿಯುತ್ತಿದೆ. "ಶಬ್ದಪಾರಂ ಆರ್ಗಂ ಅಶಕ್ಯಂ" ಎಂಬ ಮಾತಿದ್ದರೂ, ನಾವು ಬಳಸುವ ಶಬ್ದಗಳ ಸ್ವರೂಪ - ಅಂದರೆ ಅವುಗಳ ಹುಟ್ಟು, ಬೆಳವಣಿಗೆಗಳನ್ನು ಕೆದಕುವ ಹಾಗೂ ಶಬ್ದ-ಅರ್ಥಗಳ ದಾಂಪತ್ಯದ ಮರ್ಮವನ್ನು ಬೆದಕುವ, ಅದರ ಫಲವಾದ ಕುಡಿಗಳನ್ನು ಹುಡುಕುವ - ಆ ಮೂಲಕ ಪದಗಳ ಹದವನ್ನು ಅರಿಯುವ ಪ್ರಯತ್ನ - ಈ ಬರಹ.
******
ಅಕ್ಕಿ: ಬತ್ತದ ಹೊಟ್ಟು ತೆಗೆದಾಗ ಒಳಗಿರುವ ಧಾನ್ಯವೇ ಅಕ್ಕಿ. ಇದು ದ್ರಾವಿಡ ಶಬ್ದ: ಇದು ತಮಿಳಿನಲ್ಲಿ ಅರಿ, ಅರಿಚು, ಅರಿಶಿ ಎಂದೂ, ಮಲಯಾಳಂನಲ್ಲಿ ಅರಿ ಎಂದೂ, ತುಳುವಿನಲ್ಲಿ ಅರಿ, ಅಕ್ಕಿ ಎಂದೂ ರೂಪ ತಾಳುತ್ತದೆ. ತೆಲುಗಿನಲ್ಲಿ ಅಕ್ಕಳ್ಲು ಎಂಬ ಶಬ್ದವಿದ್ದರೂ ಸಾಮಾನ್ಯವಾಗಿ ಬಿಯ್ಯಮು ಎನ್ನುತ್ತಾರೆ. ಅಕ್ಕಿಯ ಪ್ರಸ್ತಾಪ 'ವಡ್ಡಾರಾಧನೆ' ("ಕಳಶಮುಂ ಕನ್ನಡಿಯುಂ ಪೂವುಮಕ್ಕಿಯುಂ") ಮತ್ತು ಪಂಪನ 'ಆದಿಪುರಾಣ' ("ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ" ಅಂತಹ ಪ್ರಾಚೀನ ಕಾವ್ಯಗಳಲ್ಲಿದೆ. ಬತ್ತದಿಂದ ಹೊಟ್ಟು ತೆಗೆದು ಅಕ್ಕಿ ಪಡೆಯುವುದೇ 'ಅಕ್ಕಿಗುಟ್ಟು' ("ಸಾರಿಸುವೆಡೆಯೊಳ್ ಅಕ್ಕಿಗುಟ್ಟುವೆಡೆಯೊಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಅಕ್ಕಿ ಶಬ್ದವನ್ನು ಮಂತ್ರಾಕ್ಷತೆ ಎಂಬರ್ಥದಲ್ಲಿ ನೇಮಿಚಂದ್ರನ 'ಲೀಲಾವತಿ' ಬಳಸುತ್ತದೆ ("ಜಿನನಂ ಪೂಜಿಸಿದಕ್ಕಿ ಮಾಮೆ ಸೊಡರ್ಗಳ್"). ಅಕ್ಕಿಯನ್ನು ಮೂರು ಬಾರಿ ತೊಳೆದರೆ ಅನ್ನ ಹದವಾಗುವುದೆಂದು 'ಲೋಕೋಪಕಾರ' ಹೇಳುತ್ತದೆ ("ಕ್ರಮಮದು ಅಕ್ಕಿಯಂ ಇಂಬಾಗಿ ಮೂರುಸೂಳ್ ಕರ್ಚಿ ಪೊಯ್ದೊಡೆ ಕುದಿವೆಸಳು ಉತ್ತಮಮಕ್ಕುಂ ಪದದಿ"). ಅಕ್ಕಿಯನ್ನು ತೊಳೆದ ನೀರೇ 'ಅಕ್ಕಚ್ಚು' ಆಥವಾ ಈಗಿನ ಕಲಗಚ್ಚು (ಕರ್ಚು>ಕಚ್ಚು=ತೋಳೆಯುವುದು).
ಅಕ್ಕಿಯ ಕಾಳು ಇಡಿಯಾಗಿರದೆ ಒಡೆದಿದ್ದರೆ ಅದನ್ನು ಅಕ್ಕಿನುಚ್ಚು ಎಂದೂ, ಒರಟಾದ ಪುಡಿಯನ್ನು ಅಕ್ಕಿತರಿ ಎಂದೂ, ತುಂಬ ನವಿರಾದ ಪುಡಿಯನ್ನು ಅಕ್ಕಿಹಿಟ್ಟು ಎಂದೂ ಕರೆಯುವುದು ವಾಡಿಕೆ. ಇವೆಲ್ಲದರಿಂದಲೂ ವಿವಿಧ ತಿಂಡಿಗಳನ್ನು ಮಾಡುತ್ತಾರೆ: ಅಕ್ಕಿತರಿ ಉಪ್ಪಿಟ್ಟು, ಅಕ್ಕಿ ಸಜ್ಜಿಗೆ, ಅಕ್ಕಿರೊಟ್ಟಿ ಇತ್ಯಾದಿ. ಅಕ್ಕಿಯ ಹಿಟ್ಟಿನಿಂದ ಮಾಡುವ ಅಂಟು 'ಅಕ್ಕಿಸರಿ'. ಕನಕದಾಸರು ತಮ್ಮ 'ರಾಮಧಾನ್ಯಚರಿತೆ'ಯಲ್ಲಿ ಅಕ್ಕಿ-ರಾಗಿಗಳ ರೂಪಕದ ಮೂಲಕ ವರ್ಗಸಂರ್ಷವನ್ನು ಚಿತ್ರಿಸುತ್ತಾರೆ.
'ತಲೆಗೆ ಅಕ್ಕಿಕಾಳು ಹಾಕು' ಎಂದರೆ ಮದುವೆ ಮಾಡುವುದು ಎಂದರ್ಥ; 'ಬಾಯಿಗೆ ಅಕ್ಕಿಕಾಳು ಹಾಕಿಕೊಂಡಿರು' ಎಂದರೆ ಕಾಯುವುದು ಎಂದರ್ಥ. ಹೆಣದ ಬಾಯಿಗೆ ಅಕ್ಕಿಕಾಳು ಹಾಕುವ ಪರಿಪಾಟವಿದೆ.
ಸಣ್ಣ ಧಾನ್ಯಗಳ ಹೆಸರಿಗೆ ಅಕ್ಕಿ ಎಂಬ ಉತ್ತರಪದವನ್ನು ಸೇರಿಸುವ ಪರಿಪಾಟವೂ ಇದೆ: ನವಣಕ್ಕಿ, ಬಿದಿರಕ್ಕಿ ಇತ್ಯಾದಿ. ಅಕ್ಕಿಯಿಂದ ಮಾಡಿದ ಒಂದು ಬಗೆಯ ಮದ್ಯವನ್ನು 'ಅಕ್ಕಿಬೋಜ' ಎನ್ನುತ್ತಾರೆ; ಇದರ ಉಲ್ಲೇಖವನ್ನು ಕುವೆಂಪು ಅವರ 'ಕಾನೂರು ಹೆಗ್ಗಡಿತಿ' ಕಾದಂಬರಿಯಲ್ಲಿ ಕಾಣಬಹುದು.
=====
ಅಗ್ಗ: ಈ ಶಬ್ದವು ಮೂರು ನೆಲೆಗಳಲ್ಲಿ ಬಳಕೆಯಾಗುತ್ತದೆ. "ಅಗ್ಗದ ಶೆಟ್ಟಿ ಮುಗ್ಗಿದ ಜೋಳ" ಎಂಬ ಗಾದೆಮಾತನ್ನು ಕೇಳಿರಬಹುದು. ಎಂದರೆ ಕಡಿಮೆ ಬೆಲೆಗೆ ಮಾರುವ ಎಂಬರ್ಥ ಇಲ್ಲಿದೆ. ಇದು ಮಾತು ವ್ಯಕ್ತಿತ್ವ ಮುಂತಾದವುಗಳ ಅಲ್ಪತೆಯನ್ನು ಸೂಚಿಸುವಾಗಲೂ ಬಳಸುತ್ತಾರೆ. ಇದೇ ಅರ್ಥದಲ್ಲಿ ಈ ಶಬ್ದವನ್ನು ತುಳುವಿನಲ್ಲಿಯೂ ಬಳಸುತ್ತಾರೆ. ತೆಲುಗಿನಲ್ಲಿ ಇದು ಅಗ್ಗಮು ಎಂದಾಗುತ್ತದೆ. ಈ ಅರ್ಥದಲ್ಲಿನ ಶಬ್ದ ದ್ರಾವಿಡ ಮೂಲದ್ದಿರಬಹುದೆ ಎಂಬ ಅನುಮಾನ ಮೂಡುತ್ತದೆ. ಆದರೆ ಸಂಸ್ಕೃತದ ಎರಡು ಪದಗಳು ಕನ್ನಡದಲ್ಲಿ 'ಅಗ್ಗ' ಎಂಬ ಒಂದೇ ರೂಪದಿಂದ ತದ್ಭವವಾಗಿದೆ. ಮೊದಲನೆಯದು 'ಅರ್ಘ' ಎಂಬುದು; ಇದಕ್ಕೆ ಸಂಸ್ಕೃತದಲ್ಲಿ ಬೆಲೆ ಎಂಬರ್ಥವಿದೆ. ಈ ಅರ್ಥವು ಹೀನಾರ್ಥಗೊಂಡು ಬೆಲೆಯಿಲ್ಲದ ಎಂಬ ಅರ್ಥವನ್ನು ಪಡೆದಿರಬಹುದು ಎಂಬ ಅನುಮಾನವೂ ಉಂಟಾಗುತ್ತದೆ. ಹೀನಾರ್ಥ ಎಂಬುದು ಶಬ್ದವೊಂದರ ಮೂಲಾರ್ಥ ಬದಲಾಗುವ ಒಂದು ಬಗೆಯ ಪ್ರಕ್ರಿಯೆ 'ಮಹಾ ದೊಡ್ಡ ಮನುಷ್ಯ' ಎನ್ನುವಾಗ ದೊಡ್ಡ ಎಂಬುದಕ್ಕೆ ಚಿಕ್ಕ ಎಂಬ ಅರ್ಥ ಪ್ರಾಪ್ತವಾಗುವಂತೆ ಇಲ್ಲಿಯೂ ಆಗುತ್ತದೆ. ಇದನ್ನು ಭಾಷಾವಿಜ್ಞಾನದಲ್ಲಿ (ಪೆಜೋರೆಟಿವ್ ಚೇಂಜ್) ಎನ್ನುತ್ತಾರೆ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ 'ಅಮೆಲಿಯೋರೇಟಿವ್ ಚೇಂಜ್.' ಅಗ್ಗ ಎಂಬುದಕ್ಕೆ ಶ್ರೇಷ್ಠವಾದ ಎಂಬ ಅರ್ಥವೂ ಇದೆ.
ಅಗ್ಗ ಎಂಬುದು ಸಂಸ್ಕೃತದ ಮತ್ತೊಂದು ಪದ 'ಅಗ್ರ'ದ ತದ್ಭವವೂ ಹೌದು. ಅಗ್ರ ಎಂದರೆ ತುದಿ ಎಂದರ್ಥ. ಬಾಳೆಯೆಲೆಯ ತುದಿಯ ಬಾಗಿದ ಆಕಾರದ ಭಾಗವನ್ನು 'ಅಗ್ರ' ಎನ್ನುವುದು ಇದಕ್ಕೇ. ಹೀಗಾಗಿ ಎಲ್ಲಕ್ಕಿಂತ ತುದಿಯಲ್ಲಿರುವ ಅಥವಾ ಮೇಲಿರುವ ಎಂಬಂತೆ ಅರ್ಥವಿಸ್ತಾರಗೊಳುತ್ತದೆ. 'ಅಗ್ರಜ' (ಮುಂದು, ಮೊದಲು ಹುಟ್ಟಿದವನು, ಎಂದರೆ ಅಣ್ಣ) ಎಂಬ ಪದ ರೂಪುಗೊಂಡಿದೆ. ಅಗ್ಗದಿಂದ ಅಗ್ಗಳ ಎಂಬ ಪದವೂ ಉಂಟಾಗುತ್ತದೆ; ಈ ಪದಕ್ಕೆ ಅತಿಶಯವಾದ ಎಂಬರ್ಥವಿದೆ. "ಅಗ್ಗಳಮೆಂಬುದೆ ಅಧಿಕಂ" ಎಂದು ಒಂದು ನಿಘಂಟು ಅರ್ಥ ಕೊಡುತ್ತದೆ. ಪ್ರಾಯಶಃ ಈ ಅರ್ಥದ ಕಾರಣದಿಂದ ಅಗ್ಗಳ, (ಈ ಹೆಸರಿನ ಹನ್ನೆರಡನೆಯ ಶತಮಾನದ ಹಳಗನ್ನಡ ಕವಿಯೊಬ್ಬನಿದ್ದಾನೇ; ಅವನ ಕೃತಿ 'ಚಂದ್ರಪ್ರಭಪುರಾಣ'). ಅಗ್ಗಪ್ಪ, ಅಗ್ಗಪ್ಪಸೆಟ್ಟಿ ಎಂಬ ಅಂಕಿತನಾಮಗಳೂ ಸಿಗುತ್ತವೆ. (ಅಂಕಿತನಾಮವೆಂದರೆ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನ ಹೆಸರು). ಅಗ್ಗಪ್ಪ ಎಂಬ ರೂಪದ ಕೊನೆಯ ದ್ವಿತ್ವವು (ವ್ಯಂಜನದ ಪುನರುಕ್ತಿ) ಸರಳವಾಗಿ ಅಗ್ಗಪ ಎಂಬ ರೂಪವನ್ನು ಪಡೆಯುತ್ತದೆ. ಅಗ್ಗಪವೆಗ್ಗಡೆ ಎಂಬ ಹೆಸರು ಹದಿಮೂರನೆಯ ಶತಮಾನದ ಶಾಸನವೊಂದರಲ್ಲಿ ಉಕ್ತವಾಗಿದೆ. ಅಗ್ಗಳ ಎಂಬ ವಿಶೇಷಣಕ್ಕೆ 'ಇಕೆ' ಎಂಬ ಪ್ರತ್ಯಯ ಸೇರಿ ಅಗ್ಗಳಿಕೆ (ಹಿರಿಮೆ, ಹೆಗ್ಗಳಿಕೆ) ಎಂಬ ಭಾವನಾಮ ಸಿದ್ಧಗೊಳ್ಳುತ್ತದೆ. ಆದರೆ 'ಅಗ್ಗ' ಎಂಬ ಈ ಶಬ್ದ ಶ್ರೇಷ್ಠವಾದದ್ದು ಎಂಬರ್ಥದಲ್ಲಿ ಬಳಕೆಗೊಂಡಿರುವುದು ಕಾಣಲಿಲ್ಲ; ಸಾಧಿತಪದಗಳಲ್ಲಿ ಮಾತ್ರ ಈ ಅರ್ಥದಲ್ಲಿ ಈ ರೂಪ ಸಿಗುತ್ತದೆ.
====
ಅಚ್ಚು: ಇದು ಸಂಸ್ಕೃತದ 'ಅಕ್ಷ' ಎಂಬ ಶಬ್ದದ ತದ್ಭವ. ಇಂಗ್ಲಿಷ್ನಲ್ಲಿ ಆಕ್ಸೆಲ್ ಎಂಬ ಶಬ್ದವಿದೆ. ಇಂಗ್ಲಿಷ್ ಮತ್ತು ಸಂಸ್ಕೃತ ಶಬ್ದಗಳಲ್ಲಿ ಹೋಲಿಕೆಯಿರುವುದನ್ನು ಗಮನಿಸಿ (ಎರಡರಲ್ಲೂ ಅ ಎಂಬ ಸ್ವರದ ನಂತರ ಕಕಾರ ಸಕಾರಗಳಿವೆ). ಈ ಎರಡು ಭಾಷೆಗಳು ಭಾಷಾವಿಜ್ಞಾನಿಗಳ ಪ್ರಕಾರ ಒಂದೇ ಭಾಷಾಕುಟುಂಬದವು, ಅಂದರೆ ಇಂಡೋಯರೋಪಿಯನ್ ವರ್ಗಕ್ಕೆ ಸೇರಿದವು; ಈ ಎರಡೂ ಪದಗಳ ಮೂಲ ಒಂದೇ ಆಗಿರುತ್ತದೆ.
ಅಚ್ಚು ಎಂದರೆ ಬಂಡಿಯ ಚಕ್ರದ ಮಧ್ಯಭಾಗ ಎಂದೂ, ಪಗಡೆಯ ದಾಳ ಎಂದೂ, ತಾರೆಯ ಮರ ಎಂದೂ ಅರ್ಥಗಳಿವೆಯೆಂದು ಹದಿನಾಲ್ಕನೆಯ ಶತಮಾನದ 'ಅಭಿನವಾಭಿಧಾನಂ' ಎಂಬ ಕನ್ನಡ ನಿಂಟುವಿನಲ್ಲಿ ಹೇಳಿದೆ. ಈ ಪದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಅಚ್ಚು ಎಂದರೆ ಎರಕ ಎನ್ನುವ ಅರ್ಥವಲ್ಲದೆ, ಮಗ್ಗದಲ್ಲಿ 'ಹಾಸುಗಳನ್ನು ಪ್ರತ್ಯೇಕಿಸಿ ಹೊಕ್ಕುಗಳನ್ನು ಅದುಮಲು ಬಳಸುವ ಸಲಕರಣೆ' ಎಂದೂ, ಹೊಲದಲ್ಲಿ ಕಟ್ಟುವ ಬದು ಎಂದೂ ಅರ್ಥಗಳಿವೆ.     'ಅಚ್ಚುಕಟ್ಟು' ಎಂಬ ಶಬ್ದವನ್ನು ನೆನಪಿಸಿಕೊಳ್ಳಿ. ಕನ್ನಡದ ಈ ಪದ ಇತರ ದ್ರಾವಿಡ ಭಾಷೆಗಳಲ್ಲೂ ದೊರೆಯುತ್ತದೆ: ತೆಲುಗು, ತಮಿಳು, ಮಲಯಾಳಂಗಳಲ್ಲಿ ಇದು ಅಚ್ಚು ರೂಪದಲ್ಲಿಯೇ ಇದ್ದರೆ, ತುಳುವಿನಲ್ಲಿ ಅಚ್ಚಿ ಎಂದಾಗುತ್ತೆ. ಆದ್ದರಿಂದ ಇದು ದ್ರಾವಿಡ ಪದವೂ ಆಗಿರಬಹುದು; ಅಂದರೆ ಅಚ್ಚು ಎಂಬ ಶಬ್ದ ಸ್ವತಂತ್ರ ದ್ರಾವಿಡ ಪದವೂ ಆಗಿ, ಅಕ್ಷ ಎಂಬ ಸಂಸ್ಕೃತದ ಪದ ತದ್ಭವವಾದಾಗಲೂ ಅದೇ ರೂಪವನ್ನು ಪಡೆದಿರಬಹುದು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು ಎಂಬ ಪದಗಳು ಸಾಮಾನ್ಯ. ಸಂಪೂರ್ಣ ಹೋಲಿಕೆಯನ್ನು ಸೂಚಿಸುವಾಗಲೂ ಈ ಶಬ್ದವನ್ನು ಬಳಸುತ್ತೇವೆ: 'ತಂದೆಯ ಅಚ್ಚು' ಎಂದೋ 'ತಾಯಿಯ ಪಡಿಯಚ್ಚು' ಎಂದೋ ಬಳಸುವಾಗ ಇದು ಸೂಚಿತವಾಗಿದೆ. 'ಪಡಿಯಚ್ಚು'ವಿನಲ್ಲಿರುವ ಪಡಿ ಎಂಬುದು 'ಪ್ರತಿ' ಎಂಬುದರ ತದ್ಭವ; ಅಂದರೆ ಹಾಗೇ ಇರುವ ಎಂದು ಆಶಯ. ಈ ಕಾರಣದಿಂದ ಅಚ್ಚು ಎಂಬುದಕ್ಕೆ ವಿಗ್ರಹ, ಬೊಂಬೆ ಎಂಬರ್ಥಗಳು ಪ್ರಾಪ್ತವಾಗುತ್ತವೆ. ಹಳಗನ್ನಡದಲ್ಲಿ 'ಅಚ್ಚಿಱಿ' (ಮುದ್ರೆಯೊತ್ತು) 'ಅಚ್ಚುಡಿ' (ಎರಕ ಹೊಯ್ದಂತೆ ಒಂದಾಗು) ಎಂಬ ಸಮಾಸರೂಪಗಳೂ ದೊರೆಯುತ್ತವೆ. ಮುದ್ರಣವನ್ನು ಅಚ್ಚುಮಾಡು ಎಂದೂ, ಮುದ್ರಣಾಲಯವನ್ನು ಅಚ್ಚುಕೂಟ ಎಂದೂ, ಮುದ್ರಣಾಕ್ಷರವನ್ನು ಕೆತ್ತಿರುವ ಮೊಳೆಯನ್ನು ಅಚ್ಚುಮೊಳೆ ಎಂದೂ, ಎರಕಹೊಯ್ಯಿ ಎಂಬರ್ಥದಲ್ಲಿ ಅಚ್ಚೊತ್ತು ಎಂದೂ ಅನೇಕ ರೂಪಗಳನ್ನು ಸಾಧಿಸಿಕೊಂಡಿದ್ದೇವೆ. ಅಚ್ಚಳಿ ಎಂಬುದು ಒತ್ತಿರುವ ಮುದ್ರೆ ನಾಶವಾಗದ ಎಂದರ್ಥದಲ್ಲಿ ಉಪಯೋಗದಲ್ಲಿದೆ. ಅಚ್ಚುಮೆಚ್ಚು ಎಂಬುದು ತನ್ನ ಇನ್ನೊಂದು ರೂಪವೋ ಎಂಬಂತೆ ತೋರುವ ಪ್ರೀತಿಯನ್ನು ಸೂಚಿಸುವ ಪದವಾಗಿ ಬಳಕೆಯಲ್ಲಿದೆ.
=====
ಅಡಕೆ: ತೆಂಗಿನ ಜಾತಿಗೆ ಸೇರಿದ ಮರ ಮತ್ತದರ ಕಾಯಿಯ ಹೆಸರಿದು. ಅಡಿಕೆ ಎಂಬ ರೂಪವೂ ಬಳಕೆಯಲ್ಲಿದೆ. ಕ್ರಿಸ್ತಶಕದ ಆರಂಭದ ಹೊತ್ತಿಗೇ ಮಲೇಷಿಯ ಕಡೆಯಿಂದ ಈ ಸಸ್ಯ ನಮ್ಮ ದೇಶಕ್ಕೆ ಬಂತು; ಅಲ್ಲಿನ ಭಾಷೆಯಲ್ಲಿ ಇದನ್ನು 'ಅಹ್ಡಕ' ಎನ್ನುತ್ತಿದ್ದರು - ಇದು ಬಿಜಿಎಲ್ ಸ್ವಾಮಿಯವರ ಹೇಳಿಕೆ. ಇದೇ ಕನ್ನಡದಲ್ಲಿ ಅಡಕೆಯಾಯಿತು. ಕ್ರಿಶ. 800 ರ ಕನ್ನಡ ಶಾಸನವೊಂದರಲ್ಲಿ "ಅಡಕೆಯ ಪೇಱಿಂಗೆ ಮೂನೂರು" ಎಂಬ ಪ್ರಯೋಗವಿದೆ. ಇಕ್ಕಟ್ಟಿನ ಸ್ಥಿತಿಯನ್ನು 'ಧರ್ಮಾಮೃತ'ದಲ್ಲಿ "ಪಲ್ ಸಂದಿಯಡಕೆಯಂತೆ" ಎಂದು ವರ್ಣಿಸಲಾಗಿದೆ. ಅಡಕೆಯನ್ನು ವ್ಯಾಪಕವಾಗಿ ಬೆಳೆಸುತ್ತಿದ್ದರು, ಬಳಸುತ್ತಿದ್ದರು. 'ಅಡಕೆದೋಂಟ'ದ ಪ್ರಸ್ತಾಪ ಹನ್ನೊಂದನೆಯ ಶತಮಾನದ ಶಾಸನದಲ್ಲಿ ಬಂದಿದೆ ("ಆ ಕೆಯ ಕೆಳಗಣದಡಕೆದೋಂಟ ಮತ್ತರೆರಡು"). ತಾನಾಗಿ ಉದುರಿದ ಅಡಕೆ ಕಾಯಿಗಳನ್ನು 'ಕದರಡಕೆ' ಎಂಬ ಮಾತಿನಲ್ಲಿ ಸೂಚಿಸಲಾಗುತ್ತದೆ. ಕುವೆಂಪು ಅವರ ಈ ಹೆಸರಿನ ಕವನ ಸಂಕಲನವೊಂದಿದೆ.
ಎಲೆಯಡಿಕೆ ಸಾಮಾನ್ಯವಾದ ಜೋಡಿ ಪದ. "ಅವರ ಮೇಲಿರ್ದೆಲೆಯಡಕೆಯುಮಂ ... ಕೊಳಲಿಂಬಪ್ಪಂತಿರೆ ಮಾಡಿ" ಎಂಬುದು 'ಪಂಪಭಾರತ'ದ ಮಾತು. ಅಡಕೆಗೆಣಿಸು (ಅಡಕೆಗೆ+ಎಣಿಸು) ಎಂಬ ಅಭಿವ್ಯಕ್ತಿಯು ಕ್ಷುಲ್ಲಕವಾಗಿ ಕಾಣು ಎಂಬರ್ಥವನ್ನು ಪಡೆಯುತ್ತದೆ ("ಆ ಭಾರತಿಯ ವಿದ್ಯಾಗುಣಕ್ಕಂ ಒಂದಡೆಕೆಗೆಣಿಸಳ್" - ಕರ್ಣಪಾರ್ಯನ 'ನೇಮಿನಾಥಪುರಾಣ'). ಬೆಲೆಯಿಲ್ಲದ್ದು ಅಥವಾ ಅತ್ಯಲ್ಪ ಬೆಲೆಬಾಳುವಂಥದು ಎಂಬರ್ಥದಲ್ಲಿಯೂ ಅಡಕೆ ಶಬ್ದವನ್ನು ಬಳಸುತ್ತಿದ್ದರು: "ನೆಲನಾಳ್ದನ ಹೆಣನೆಂದರೆ ಒಂದಡಿಕೆಗೆ ಕೊಂಬುವರಿಲ್ಲ" ಎಂಬುದು ಬಸವಣ್ಣನ ವಚನದಲ್ಲಿ ಬರುತ್ತದೆ. ಜೇಡರ ದಾಸಿಮಯ್ಯ "ಒಂದು ಗೋಟಡಿಕೆಯ ಸೋಲೆ" ಎಂಬ ಮಾತನ್ನು ಬಳಸುತ್ತಾನೆ. "ಗೋಟಡಿಕೆ ಚೀಟೆಲೆ" ಅಲ್ಪವನ್ನು ಸೂಚಿಸುತ್ತದೆ. "ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು" ಎಂಬ ಗಾದೆ ಇಂದಿಗೂ ಬಳಕೆಯಲ್ಲಿದೆ.
ಅಡಕೆಯ ಕಾಯನ್ನು ಕತ್ತರಿಸುವ ಸಾಧನವೇ 'ಅಡಕತ್ತಿ' ಅಥವಾ 'ಅಡಕೊತ್ತು". "ಅಡಕೆಗತ್ತಿಯ ಹಡಪ ಸಂಬಳಿಗೆ" ಎಂಬ ಮಾತು 'ಬಸವ ಪುರಾಣ'ದ್ದಾದರೆ, "ಅಡಕೊತ್ತು ಮರಸಿ ತರಹೋಗಿ ಪಾಪವನು ನಡೆಸಿದುದ ಕಂಡ" ಎಂಬುದು ಸರ್ವಜ್ಞನ ಮಾತು. ಇಕ್ಕಟ್ಟಿನ ಪರಿಸ್ಥಿತಿಯನ್ನೂ 'ಅಡಕೊತ್ತು' ಎಂಬ ಮಾತು ಸೂಚಿಸುತ್ತದೆ.
=====
ಅತ್ತಿಗೆ: ಇದೊಂದು ಸಂಬಂಧಸೂಚಕ ಪದ; ಇದರ ಅರ್ಥ ಅಣ್ಣನ ಹೆಂಡತಿ ಅಥವಾ ಗಂಡನ ಸೋದರಿ ಎಂದು. ಈ ಶಬ್ದವು ಸಂಸ್ಕೃತದ 'ಅತ್ತಿಕಾ' ಎಂಬ ಶಬ್ದದಿಂದ ಬಂದುದೆಂದು ನಿಘಂಟುಗಳು ಹೇಳುತ್ತವೆ. ಸಂಸ್ಕೃತದಲ್ಲಿ ಆ ಶಬ್ದದ ಅರ್ಥ ತಾಯಿ ಅಥವಾ ಅಕ್ಕ ಎಂದು. ತಮಿಳಿನಲ್ಲಿ ಅತ್ತಾಚ್ಚಿ ಎಂಬುದು ಅತ್ತಿಗೆಯ ಸಮಾನಾರ್ಥಕ ಪದ; ತುಳುವಿನಲ್ಲಿ ಅತ್ತಿಗೆ ಎಂದೇ ಇದೆ. ಆದರೆ ಉತ್ತರ ಕರ್ಣಾಟಕದಲ್ಲಿ ವೈನಿ ಎಂಬ, ತೆಲುಗಿನಲ್ಲಿ ವದಿನೆ ಎಂಬ ತೀರ ಬೇರೆಯ ರೂಪದ ಪದಗಳು ದೊರಕುತ್ತದೆ. (ಈ ರೂಪ ಪ್ರಾಯಶಃ 'ವಹಿನಿ' ಎಂಬುದರ ವ್ಯತ್ಯಸ್ತ ರೂಪವಿರಬಹುದು; ವಹಿನಿ ಎಂದರೆ ಸಾಗಿಸುವುದು ಎಂದು; ಹಿರಿಯಣ್ಣನ ಹೆಂಡತಿ ಮಗನನ್ನು ಹೆತ್ತು ವಂಶವನ್ನು ಮುಂದೆ ಸಾಗಿಸುವವಳು ಎಂಬ ಅರ್ಥ ಇರಬಹುದು) ಅತ್ತಿಗೆ ಎಂಬುದು ಕನ್ನಡದಲ್ಲಿ ತೀರ ಹಿಂದಿನಿಂದ ಅಣ್ಣನ ಹೆಂಡತಿ ಎಂಬರ್ಥವನ್ನು ಸೂಚಿಸುವ ಪದವಾಗಿ ಬಳಕೆಯಲ್ಲಿದೆ: "ಮುನ್ನಿನ ಜನ್ಮಾಂತರದತ್ತಿಗೆಯಪ್ಪ ಪೆಣ್ಣರಿ" ಎಂಬ ವಾಕ್ಯ ವಡ್ಡಾರಾಧನೆಯಲ್ಲಿದೆ.
ಅಚ್ಚಗನ್ನಡ ಪದವಾದ 'ಅೞ್ತಿ' ಎಂಬುದಕ್ಕೆ ಪ್ರೀತಿ ಎಂಬರ್ಥವಿದೆ. ಇದರ ಜ್ಞಾತಿ ಪದವಾಗಿ ಮಲಯಾಳಂನಲ್ಲಿ 'ಅೞಿವು', ತುಳುವಿನಲ್ಲಿ ಅರ್ಕಮೆ, ತೆಲುಗಿನಲ್ಲಿ ಕಅಕ್ಕರಕಿ ಎಂಬ ರೂಪಗಳು ದೊರೆಯುತ್ತವೆ (ಕನ್ನಡದಲ್ಲ್ಲಿಯೂ ಅಕ್ಕರೆ (<ಅೞ್ಕರೆ) ಎಂಬ ಶಬ್ದವೂ ಇದೆ). ಹೀಗಾಗಿ ಅ್ತಗೆ ಎಂಬುದು ಪ್ರೀತಿಯುಳ್ಳವಳು ಎಂಬ ಅರ್ಥವನ್ನು ಪಡೆಯುತ್ತದೆ. "ಮುನೀಶ್ವರನ ಪರಿಚರ್ಯೆಯೊಳ್ ಪಿರಿದುಂ ಅೞ್ತಿಗೆಯಾಗು" ಎಂಬ ಮಾತು ನಾಗವರ್ಮನ 'ಕರ್ಣಾಟಕ ಕಾದಂಬರಿ' (ಕಿಶ 990) ಕಾವ್ಯದಲ್ಲಿ ದೊರೆಯುತ್ತದೆ. ಆದರೆ ಇದಕ್ಕೂ ಮುಂಚಿನ 'ಪಂಪಭಾರತ'ದಲ್ಲಿಯೇ ಈ ಶಬ್ದವು ನಲ್ಲೆ ಎಂಬರ್ಥದಲ್ಲಿ ದೊರೆಯುತ್ತದೆ: "ಪುರುಷವ್ರತಮೀಗಳಬ್ಬೆಯೆಂದು ಅತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ" (ನನ್ನ ಬ್ರಹ್ಮಚರ್ಯದಿಂದಾಗಿ ಈಗ ನಿನ್ನನ್ನು ತಾಯಿ ಎಂದು ಕರೆದು ಆನಂತರ ನಲ್ಲೆ ಎನ್ನಲು ಆಗಲಾರದು) ಎಂದು ಭೀಷ್ಮನು ಅಂಬೆಗೆ ಹೇಳುತ್ತಾನಂತೆ. 'ಅೞ್ತಿಗೆ'ಯೇ ಅತ್ತಿಗೆಯಾಗಿರಬಹುದೇ ಎಂಬ ಅನುಮಾನ ಉಂಟಾಗುವುದು ಸಹಜವೇ. ಆದರೆ ಅದಕ್ಕೆ ನಲ್ಲೆ ಎಂಬ ಅರ್ಥ ಅಲ್ಲಿ ದೂರಾನ್ವಯವಾಗಿ ಬರುತ್ತದೆ; ಹಾಗೆಯೇ ಆದರೆ 'ಅೞ್ತಿಗ' 'ಅೞ್ತಿಕಾರ' ಎಂಬ ಶಬ್ದಗಳು ಪ್ರೀತಿಯುಳ್ಳವನು ಎಂಬರ್ಥದಲ್ಲಿ 'ಸಮಯಪರೀಕ್ಷೆ'ಯಲ್ಲಿ ದೊರಕುತ್ತದೆ. ಆದುದರಿಂದ ಅತ್ತಿಗೆಯ ಮೂಲ ಶಬ್ದ ಸಂಸ್ಕೃತದ 'ಅತ್ತಿಕಾ' ಎಂದು ತೀರ್ಮಾನಿಸಬಹುದು.
=====
ಅಧಿಕಾರ: ಇದೊಂದು ಸಂಸ್ಕೃತ ಶಬ್ದ. ಇದಕ್ಕೆ ಮೇಲ್ವಿಚಾರಣೆ, ಕಾರ್ಯ, ಆಧಿಪತ್ಯ, ಒಡೆತನ ಮುಂತಾದ ಅನೇಕ ಅರ್ಥಗಳಿವೆ. 'ವೇದಾಧ್ಯಯನದ ಅಧಿಕಾರ' ಎಂಬಂತಹ ಕಡೆಗಳಲ್ಲಿ ಈ ಶಬ್ದಕ್ಕೆ ಅರ್ಹತೆ, ಯೋಗ್ಯತೆ ಎಂಬ ಅರ್ಥಗಳು ಬರುತ್ತವೆ. ಗ್ರಂಥದ ಅಧ್ಯಾಯವನ್ನೂ ಇದೇ ಶಬ್ದದಿಂದ ಸೂಚಿಸುತ್ತಿದ್ದರು ("ಆಪ್ತಸ್ವರೂಪನಿರೂಪಣಂ ಪ್ರಥಮಾಧಿಕರಂ" - ಬ್ರಹ್ಮಶಿವನ 'ಸಮಯಪರೀಕ್ಷೆ'). ವ್ಯಾಕರಣ ಸೂತ್ರಕ್ಕೂ ಅಧಿಕಾರ ಎಂಬ ಹೆಸರಿದೆ. ಒಂದು ವಿಷಯದ ಬಗೆಗಿನ ನೈಪುಣ್ಯವನ್ನೂ 'ಅಧಿಕಾರ' ಎನ್ನುತ್ತಿದ್ದರು.
ಇಂಗ್ಲಿಷ್‍ನ 'ಪವರ್' ಎಂಬುದಕ್ಕೆ ಸಂವಾದಿಯಾಗಿ ಅಧಿಕಾರ ಬಳಕೆಯಲ್ಲಿದೆ. ಹಿಂದೆ ರಾಜನಿಗಿರಬೇಕಾಗಿದ್ದುದು ಇತರ ವಸ್ತುಗಳ ಜೊತೆಗೆ ಅಧಿಕಾರವೂ ಒಂದಾಗಿತ್ತು. ಅಧಿಕಾರವು ನೃಪಲಕ್ಷಣವೆಂದು 'ಅಮರಕೋಶ'ದಲ್ಲಿ ಹೇಳಿದೆ. ಇದೇ ರಾಜ್ಯಾಧಿಕಾರ. ರಾಜನು ತನ್ನ ಅಧಿಕಾರವನ್ನು ಈಗಿನ ಸರ್ಕಾರದಂತೆಯೇ ಅಧಿಕಾರಿಗಳ ಮೂಲಕ ಚಲಾಯಿಸುತ್ತಿದ್ದ. "ಅಧಿಕಾರಿಗಳೆನೆ ಸೈರಿಸೆವು ಅಧಿಕಾರಿಗಳಾಗಿ ಬಾೞ್ಗೆ" ಎಂದು 'ಗದಾಯುದ್ಧ'ದಲ್ಲಿ ಸಹಜಾರ್ಥದ ಜೊತೆ 'ಅಧಿಕ+ಅರಿ' ಎಂಬ ಸಮಾಸಪದವಾಗಿಸಿ ಶ್ಲೇಷೆ ಮಾಡಲಾಗಿದೆ. ಹಿಂದೆ ರಾಜನ ಅಧಿಕಾರವರ್ಗವನ್ನು ನಿಯೋಗವೆಂದು ಕರೆಯುತ್ತಿದ್ದರು. ರಾಜನ ಅಧಿಕಾರವರ್ಗವು ಎಪ್ಪತ್ತೆರಡು ಎಂದು ಒಂದು ಹಂತದಲ್ಲಿ ಭಾವಿಸಿ ಒಟ್ಟಾರೆ ಅದನ್ನು 'ಬಾಹತ್ತರ ನಿಯೋಗ' ಎಂಬ ಹೆಸರಿನಿಂದ ಕಾವ್ಯಗಳು ಕರೆಯುತ್ತವೆ. ಅಧಿಕಾರದ ಹೊಣೆಯನ್ನು 'ಅಧಿಕಾರಸೂತ್ರ' ಎಂದು ಕರೆಯುವ ವಾಡಿಕೆಯಿದೆ.
ಇಂಗ್ಲಿಷಿನ ಪ್ರಭಾವದಿಂದ ಅಧಿಕಾರ ಎಂಬ ಶಬ್ವನ್ನೊಳಗೊಂಡ ಅನೇಕ ಹೊಸ ಪದಗಳು ಹುಟ್ಟಿಕೊಂಡಿವೆ. ಉದಾಹರಣೆಗೆ 'ಪ್ರಾಧಿಕಾರ'. ಒಂದು ವಿಷಯದ ಬಗ್ಗೆ ಪರಮಾಧಿಕಾರ ಹೊಂದಿರುವ ಸಂಸ್ಥೆಯೇ 'ಪ್ರಾಧಿಕಾರ'; 'ಕನ್ನಡ ಅಭಿವೃದ್ಧಿ ಪ್ರಾಧಿಕಾರ', 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ' 'ಕನ್ನಡ ಪುಸ್ತಕ ಪ್ರಾಧಿಕಾರ' - ಇಂತಹವು. ಹಾಗೆಯೇ ಇಂಗ್ಲಿಷಿನ ಎಕ್ಸ್-ಅಫಿಷಿಯೊ ಎಂಬ ಮಾತಿಗೆ ಸಂವಾದಿಯಾಗಿ ಕನ್ನಡದಲ್ಲಿ 'ಅಧಿಕಾರನಿಮಿತ್ತ' ಎಂದೋ, 'ಪದನಿಮಿತ್ತ' ಎಂದೋ ಬಳಸುವ ರೂಢಿ ಬಂದಿದೆ. ಬ್ಯೂರೋಕ್ರಸಿ ಎಂಬುದಕ್ಕೆ 'ಅಧಿಕಾರಶಾಹಿ' ಎಂಬ ಪದ ಬಂದಿದೆ. ಅಧಿಕಾರ ಇರುವವನೇ 'ಅಧಿಕಾರಿ'.
=====
ಅನ್ನ: ಈ ಶಬ್ದವು ಸಂಸ್ಕೃತಮೂಲದ್ದು, ಆಹಾರ ಎಂಬ ಅರ್ಥವುಳ್ಳದ್ದು. "ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾತ್ ಅನ್ನಸಂಭವಃ" ಎಂಬ ಭಗವದ್ಗೀತೆಯ ಮಾತು ಸುಪ್ರಸಿದ್ಧವಾದುದು. ರನ್ನನ 'ಅಜಿತಪುರಾಣ'ದಲ್ಲಿ ಈ ಅರ್ಥದ ಪ್ರಯೋಗವಿದೆ ("ಉನ್ನತಕುಕ್ಕುಟೇಶ್ವರ ಜಿನೇಶ್ವರನಂ ಜಿನಭಕ್ತೆ ಪೋಗಿ ಕಾಣ್ಬನ್ನೆಗಂ ಅನ್ನಮಂ ಬಿಸುಟು"). ಊಟದ ಮನೆಯನ್ನು ಕಾವ್ಯಗಳು 'ಅನ್ನವಾಸ' ಎನ್ನುತ್ತವೆ ("ಅನ್ನವಾಸದ ಓಲಗದೊಳಿರ್ದನಾ ಹರಿಗಂ" - 'ಪಂಪಭಾರತ'). ಇದಕ್ಕೆ 'ಅನ್ನವಾಸಕ' ಎಂಬ ಹೆಸರೂ ಇದೆ. "ಅನ್ನದಾನಕ್ಕಿಂತ ಇನ್ನು ದಾನವು" ಇಲ್ಲ ಎಂಬ ಸರ್ವಜ್ಞನ ಮಾತಿನಂತೆ ಆಹಾರದಾನವು ಅತ್ಯಂತ ಶ್ರೇಷ್ಠ ಕಾರ್ಯ ಎನ್ನಿಸಿಕೊಂಡಿದೆ. ಇದನ್ನೇ 'ಅನ್ನದಾಸೋಹ' ಎಂದು ವಚನಕಾರರು ಕರೆಯುವುದು. ಅನ್ನದಾನ ಮಾಡುವವನೇ 'ಅನ್ನದಾನಿ'. ಉಚಿತ ಆಹಾರ ನೀಡುವ ತಾಣಗಳನ್ನು 'ಅನ್ನಸತ್ರ' 'ಅನ್ನಛತ್ರ' ಮುಂತಾದ ಮಾತುಗಳಿಂದ ಕರೆಯುತ್ತಿದ್ದರು. ಮಗುವಿಗೆ ಗಟ್ಟಿ ಆಹಾರ ನೀಡುವ 'ಅನ್ನಪ್ರಾಶನ' ಅಥವಾ 'ಅನ್ನಮುಹೂರ್ತ' ಹದಿನಾರು ಸಂಸ್ಕಾರಗಳಲ್ಲಿ ಒಂದು. "ನಾವಾ ಸುತಂಗೆ ಜಾತಕರ್ಮ ನಾಮಕರಣ ಅನ್ನಪ್ರಾಶನ ಚೌಲ ಉಪನಯನಾದಿ ಕ್ರಿಯೆಗಳಂ ಮಾಡಿ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ಸಾಲು.
ಅನ್ನ ಎಂಬುದರ ಅರ್ಥ ಸಂಕುಚಿತಗೊಂಡು ಬೇಯಿಸಿದ ಅಕ್ಕಿ ಎಂಬರ್ಥವನ್ನೂ ಪಡೆಯುತ್ತದೆ. ತುಳಸಿ ಮತ್ತು ಮಾದಲದ ಎಲೆಗಳ ಕಷಾಯ ಅಥವಾ ಗೋವಿನ ತಿಗುಡಿನ ಬೂದಿಕದಡಿದ ನೀರಿನ ತಿಳಿಯ ಎಸರಿನಲ್ಲಿ ಮಾಡಿದ ಅನ್ನವು ಹಲವು ದಿನ ಕೆಡದೆ ಇರುತ್ತ ಎಂದು ಕ್ರಿಶ. 1025 ರ ಚಾವುಂಡರಾಯನ 'ಲೋಕೋಪಕಾರಂ' ಹೇಳುತ್ತದೆ.
ತನಗೆ ತಿನ್ನಲು ಬೇಕಾದಷ್ಟಿದೆ ಎಂಬ ಅಹಂಕಾರವೇ 'ಅನ್ನಮದ';  "ಅನ್ನಮದ ಅರ್ಥಮದ ಅಖಿಲ ವೈಭವದ ಮದ" ಮುಂತಾದವುಗಳ ಪ್ರಸ್ತಾಪ ಪುರಂದರದಾಸರ ಒಂದು ಹಾಡಿನಲ್ಲಿದೆ. ಹೊಟ್ಟೆಬಿರಿಯ ಉಂಡಮೇಲೆ ಉಂಟಾಗುವ ಆಲಸ್ಯವನ್ನೂ ಈ ಪದದಿಂದಲೇ ಸೂಚಿಸುತ್ತಾರೆ. ತನ್ನನ್ನು ಸಲಹಿದವನ ಬಗ್ಗೆ ಇರಿಸಿಕೊಳ್ಳುವ ಉಪಕಾರದ ಭಾವವೇ 'ಅನ್ನದ ಋಣ'. 'ಅನ್ನಮಯ' ಎಂಬುದು ಪಂಚಕೋಶಗಳಲ್ಲಿ ಒಂದು, ಸ್ಥೂಲ ದೇಹವನ್ನು ಸಂಕೇತಿಸುವಂಥದು.
=====
ಅಮ್ಮ: ಕನ್ನಡದ ಮಕ್ಕಳೆಲ್ಲ ತಮ್ಮ ಮಾತನ್ನು ಪ್ರಾಯಶಃ ಶುರು ಮಾಡುವುದೇ ಅಮ್ಮ ಎನ್ನುವುದರ ಮೂಲಕ. ಅಮ್ಮ ಎಂದರೆ ತಾಯಿ ಎಂದು ಅರ್ಥ ಎಂಬುದು ಎಲ್ಲರಿಗೂ ತಿಳಿದಿದೆ. ಅಮ್ಮನಷ್ಟು ಹತ್ತಿರವಾದವರು ಜಗತ್ತಿನಲ್ಲಿ ಯಾರಿಗಾದರೂ ಯಾರಿದ್ದಾರು? ಎಷ್ಟು ಕವಿತೆಗಳು, ಹಾಡುಗಳು ಅಮ್ಮನನ್ನು ಕುರಿತು ಹಾಡಿಲ್ಲ, ಹೊಗಳಿಲ್ಲ! ಆದರೆ ಅಮ್ಮ ಎಂಬ ಶಬ್ದಕ್ಕೂ ತಾಯಿ ಎಂಬ ಅರ್ಥಕ್ಕೂ ಇರುವ ಸಂಬಂಧವೇನೂ ಅನನ್ಯವಾದುದೂ ಅಲ್ಲ, ಮೊದಲಿಂದ ಇರುವಂಥದೂ ಅಲ್ಲ. ಕನ್ನಡದ ಆದಿಕವಿ ಪಂಪನ 'ವಿಕ್ರಮಾರ್ಜುನ ವಿಜಯ'ದಲ್ಲಿ ಅಮ್ಮ ಎಂಬ ಶಬ್ದ ಬಳಕೆಯಾಗಿರುವುದು ತಂದೆ ಎಂಬರ್ಥದಲ್ಲಿ! ದೌತ್ಯಕ್ಕೆ ಬಂದ ಕೃಷ್ಣ ಕರ್ಣನನ್ನು ಏಕಾಂತದಲ್ಲಿ ಭೇಟಿಯಾಗಿ ಅವನ ಹುಟ್ಟಿನ ರಹಸ್ಯವನ್ನು ತಿಳಿಸಲು ತೊಡಗುವಾಗ ಹೇಳುವ ಮಾತಿದು: "ಒಯ್ಯನೆ ಕೇಳ ಕರ್ಣ, ನಿನ್ನಾದಿಯೊಳ್ ಅಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ" ಎಂದರೆ ನಿನ್ನ ತಾಯಿ ಕುಂತಿ, ತಂದೆ ಸೂರ್ಯ ಎಂದು. ಇದೇ ವಾಕ್ಯದಲ್ಲಿದೆಯಲ್ಲ - ತಾಯಿ ಎಂಬುದಕ್ಕೆ ಇದ್ದ ಪದ ಅಬ್ಬೆ; ಇದು ಅವ್ವೆ, ಅವ್ವ ಎಂದೂ ಆಗುತ್ತದೆ. ಚಂದಿಯಮ್ಮ, ಕೊತ್ತಮ್ಮ ಮುಂತಾದ 'ಅಮ್ಮ'ದಿಂದ ಕೊನೆಯಾಗುವ ಗಂಡುಸರ ಹೆಸರುಗಳು ಹಳೆಯ ಶಾಸನಗಳಲ್ಲಿಯೇ ಸಿಕ್ಕುತ್ತವೆ. ಕನ್ನಡದ ಕೆಲವು ಪ್ರಸಿದ್ಧ ಹೆಸರುಗಳನ್ನು ನೋಡಿ: ಅಲ್ಲಮ, ಎಚ್ಚಮ ಇತ್ಯಾದಿ. ಅವುಗಳ ಕೊನೆಯಲ್ಲಿರುವ 'ಅಮ' ಎಂಬುದು 'ಅಮ್ಮ' ಎಂಬುದರ ಸವಕಳಿ ರೂಪ ಎಂದು ಪಂಡಿತರು ಹೇಳುತ್ತಾರೆ. 'ಅಮ್ಮ' ಎಂಬ ಶಬ್ದವನ್ನು ತಾಯಿ ಎಂಬರ್ಥದಲ್ಲಿ ಪ್ರಾಯಶಃ ಮೊದಲು ಬಳಕೆಯಾಗಿರುವುದು ಭೀಮಕವಿಯ 'ಬಸವಪುರಾಣ'ದಲ್ಲಿ. ಇವನು ಹದಿನಾಲ್ಕನೆಯ ಶತಮಾನದ ಕವಿ. ಇದಕ್ಕಿಂತ ಮುಂಚೆಯೇ ಯಾವಾಗಲೋ ಆಡುಮಾತಿನಲ್ಲಿ ಅರ್ಥ ಬದಲಾಗಿರಬೇಕು. ಹೀಗೆ ತೀರ ಬದಲಾದ ಅರ್ಥ ಏಕೆ ಆಯಿತು ಎಂಬುದು ನಿಗೂಢವೇ ಸರಿ.
ತಾಯಿ ಎಂಬ ಅರ್ಥವಿದ್ದರೂ, ಸ್ತ್ರೀಲಿಂಗ ರೂಪವಾದರೂ, ತಾಯಂದಿರು ಗಂಡು ಮಕ್ಕಳನ್ನು ಲಲ್ಲೈಸುವಾಗಲೋ, ಗೆಳೆಯನನ್ನು ಕುರಿತ ಸಲುಗೆಯ ಸಂಬೋಧನೆಯಲ್ಲೋ ಈಗಲೂ 'ಅಮ್ಮ' ಎಂದು ಕರೆಯುವುದುಂಟಲ್ಲ, ಹಾಗೆಯೇ ಹೆಣ್ಣುಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ 'ಅಪ್ಪ' ಎಂದು ಸಂಬೋಧಿಸುವುದೂ ಉಂಟು. 'ಅಮ್ಮ' ಎಂಬ ಶಬ್ದವು ಆಶ್ಚರ್ಯ, ಆಯಾಸ, ದುಃಖಸೂಚಕ ಅವ್ಯಯವಾಗಿಯೂ ಬಳಕೆಯಲ್ಲಿದೆ. 'ಅಮ್ಮಮ್ಮ' ಎಂಬ ದ್ವಿರುಕ್ತಿಯನ್ನೂ ಬಳಸುವ ರೂಢಿಯಿದೆ.
*****
ಅರಸ: ಅರಸ ಅಥವಾ ಅರಸು ರಾಜನ್ ಎಂಬ ಸಂಸ್ಕೃತ ಮೂಲದ್ದೆಂದು ಹೇಳಲಾಗುವ ಶಬ್ದ. ತಮಿಳಿನಲ್ಲಿ ಇದು ಅರಶನ್, ಅರೈಶನ್, ಅರಯನ್ ಎಂದೂ, ಮಲಯಾಳಂನಲ್ಲಿ ಅರಶನ್ ಎಂದೂ, ತೆಲುಗಿನಲ್ಲಿ ಅರಸು ಎಂದೂ ತುಳುವಿನಲ್ಲಿ ಅರಸು, ಅರಸ ಎಂದೂ ಆಗುತ್ತದೆ. ಖಅವನಿಪತಿ ರಾಜಂ ಪಾವಂ ನೃಪಂ ಕ್ಷತ್ರಿಯಂ ಜನಾಧಿಪಂ ಅರಸಂಖ ಎಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ. ಆಳುವವನು ಎಂಬರ್ಥದಲ್ಲಿ ಈ ಶಬ್ದವು ಸುಮಾರು ಕ್ರಿಶ. 500 ರ ಶಾಸನವೊಂದರಲ್ಲಿ ಉಕ್ತವಾಗಿದೆ ("ಶ್ರೀ ಚನ್ದಿಯಮ್ಮರಸರ್"). "ಪರದರ್ಗೆ ಆ ಪಾರ್ವಗ್ರ್ಗೆ ಆಯ್ತು ಅರಸರ್ಗೆ" ಎಂಬುದು 'ಕವಿರಾಜಮಾರ್ಗ'ದ ಪ್ರಯೋಗ. "ಅರಸಂ ಭೀತನಾದುದನೇತೆರದಿಂದದೆ" ಎಂಬುದು 'ಧರ್ಮಾಮೃತ'ದ ಮಾತು.  ಅರಸರ್ ಎಂಬುದು ಇದರ ಬಹುವಚನ ರೂಪ ("ಅರಸರ್ ಬೆಸವೇಳ್ದರ್" - 'ಧರ್ಮಾಮೃತ'). ಅರಸು ಎಂಬ ರೂಪವೂ ವ್ಯಾಪಕ ಬಳಕೆಯಲ್ಲಿದೆ. "ಅರಸುಗಳೆಲ್ಲಂ ಬಾಯ್ಕೇಳ್ದರೆಂದುಂ ಆಶಾಂತರಂಗಳಳ್ಕಿದುವೆಂದುಂ ಕೀರ್ತಿಸೆ" (ಪಂಪನ 'ಆದಿಪುರಾಣ'). "ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ" ಎಂಬ ಸುಪ್ರಸಿದ್ಧ ಮಾತು ಕುಮಾರವ್ಯಾನಸದು. ವಚನಗಳಲ್ಲಿ ಮಂಡಲಾಧಿಪತಿಯನ್ನು 'ಮಂಡಲದ ಅರಸು' ಎಂದೂ ಕರೆಯಲಾಗಿದೆ. ಅರಸ ಶಬ್ದದ ಸ್ತ್ರೀಲಿಂಗ ರೂಪ ಅರಸಿ ("ಅರಸರೊಳೆ ನೀಂ ಸರಸಮಂ ಅರಸಿಯವೊಲಾಡುತಿರ್ಪೆ" - 'ಕವಿರಾಜಮಾರ್ಗ'). ರಾಣಿಯ ಪದವಿ ಎಂಬರ್ಥದಲ್ಲಿ 'ಅರಸಿವಟ್ಟ' ಪ್ರಯೋಗವಿದೆ ("ಲಂಕೆಯನಾಳ್ದು ತಾಳ್ದರಸಿವಟ್ಟಮಂ" 'ಪಂಪರಾಮಾಯಣ').
ಸಮಾಸಗಳಲ್ಲಿ ಅರಸು ಎಂಬ ಪ್ರಯೋಗವೇ ಕಂಡುಬರುತ್ತದೆ. 'ಅರಸುಕುಮಾರ' ("ಅರಸುಕುಮಾರಂ ಅನಯತರ ಕಡೆಗಣ್ಣಂದೆ ನೋಡಿ" - 'ಕವಿರಾಜಮಾರ್ಗ'); 'ಅರಸುಮಗ' ("ಒಡನೆ ನೆರೆದರಸುಮಕ್ಕಳ" - 'ಪಂಪಭಾರತ'); 'ಅರಸುಗುಣ' ("ಅರಸುಗುಣಂ ಪಯನಣಂ ಬರಲಿತ್ತುದೆ" - 'ಕಾವ್ಯಾವಲೋಕನ'); 'ಅರಸುಗಾದೆ' ("ಅರಸುಗಾದೆಗಳನುವಂ ನೀನದು" - 'ಕಬ್ಬಿಗರ ಕಾವ') ಇತ್ಯಾದಿ (ಇಲ್ಲಿನ ಅರಸು ಪ್ರಮುಖ, ಮುಖ್ಯ ಎಂಬರ್ಥ ಸೂಚಿಸುತ್ತಿದೆ).
ಅರಸು ಎಂಬುದು ಅನೇಕ ಕ್ರಿಯಾಸಮಾಸಗಳ ಪೂರ್ವಪದವೂ ಹೌದು: 'ಅರಸುಗೆಯ್' ಅಥವಾ 'ಅರಸುತನಂಗೆಯ್' ಎಂದರೆ ಆಳ್ವಿಕೆ ಮಾಡು ("ದ್ರುಪದಂ ಛತ್ರಾವತಿಯೊಳ್ ಅರಸುಗೆಯ್ದಪನೆಂದು" - 'ಪಂಪಭಾರತ') ("ಅರಸುತನಂಗೆಯ್ವಪಿಂ" 'ಪಂಪರಾಮಾಯಣ'); 'ಅರಸುಗಾಣ್' ಎಂದರೆ ರಾಜಪದವಿಯನ್ನು ಪಡೆ ("ಕುರುಂಬಂ ಅರಸುಗಂಡಂತೆ"- 'ಧರ್ಮಾಮೃತ') ಇತ್ಯಾದಿ.
ಶ್ರೇಷ್ಠ ಎಂಬರ್ಥದಲ್ಲಿ ಅರಸು ಪೂರ್ವಪದದಲ್ಲಿ ಅರ ಎಂದಾಗುತ್ತದೆ: ಅರಗಿಳಿ, ಅರಮನೆ, ಅರಗಲ್ಲು, ಅರಗೆರೆ ಇತ್ಯಾದಿ.
=====
ಆತ್ಮ1: 'ಅಮರಕೋಶ'ದಲ್ಲಿ "ಕ್ಷೇತ್ರಜ್ಞ ಆತ್ಮಾ ಪುರುಷಃ" ಎಂದಿದೆ; ಎಂದರೆ ಜೀವ ಎಂದು. "ಚೇತನಂ ಆತ್ಮಂ" ಎಂದು 'ಅಭಿಧಾನ ವಸ್ತುಕೋಶ'ದಲ್ಲಿ ಒಂದೆಡೆ, ಮತ್ತೊಂದೆಡೆ "ಮನದಿಡುವಯೊಳೆ ವರ್ತಿಕುಮನಿತಿಂದ್ರಿಯ ಗಣಮದಳಧಿಕೃತನಾತ್ಮಂ" (ಮನಸ್ಸಿಗನುಗುಣವಾಗಿ ವರ್ತಿಸುವ ಇಂದ್ರಿಯಗಳ ನಡುವೆ ಆತ್ಮವು ನೆಲಸಿದೆ). "ಏದೊರೆಯನಾತ್ಮನೆಂದೊಡೆ ಅನಾದಿ ಅನಂತಂ ನಿರತ್ಯಯಂ ಚಿನ್ಮಯ ನಿಃಪ್ರಾದೇಶಿಕಂ" ಎಂದು ಜನ್ನನ 'ಯಶೋಧರಚರಿತೆ'ಯು ಆತ್ಮದ ಸ್ವರೂಪವನ್ನು ವಿವರಿಸುತ್ತದೆ. ಜೇಡರ ದಾಸಿಮಯ್ಯನ ವಚನದಲ್ಲಿನ "ಶರೀರದೊಳಗಾತ್ಮನ ನರರು ಕಾಣದಂತಿರಿಸಿದೆ" ಎಂಬಲ್ಲಿ ಸೃಷ್ಟಿಯ ಬಗೆಗಿನ ವಿಸ್ಮಯಭಾವವಿದೆ. "ಆತ್ಮವೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ" ಎಂಬ ಬಸವಣ್ಣನ ಮಾತಿನಲ್ಲಿ ಪ್ರತಿ ವ್ಯಕ್ತಿಯಲ್ಲಿಯೂ ಇರುವ ಚೈತನ್ಯವನ್ನು 'ಆತ್ಮ' ಎಂದು ಕರೆಯುವಂತಿದೆ. ಜನ್ನನ 'ಯಶೋಧರ ಚರಿತೆ'ಯ "ಭೂತಚತುಷ್ಟಾವಯವದಿಂ ಅನನ್ಯಂ ಆತ್ಮನತಿಚೈತನ್ಯಂ" ಎಂಬಲ್ಲಿ ದೇಹವನ್ನೆಲ್ಲ ಆತ್ಮವು ವ್ಯಾಪಿಸಿರುತ್ತದೆ ಎಂಬರ್ಥವಿದೆ. ಆತ್ಮ-ದೇಹಗಳ ಸಂಬಂಧವನ್ನು ಬಿಬ್ಬಿ ಬಾಚಯ್ಯನೆಂಬ ವಚನಕಾರನು "ಆತ್ಮ ಘಟದಲ್ಲಿ ನಿಂದಿಹ ಭೇದ: ನೀರು ಮಣ್ಣಿನಂತೆ, ಬೇರು ಸಾರದಂತೆ, ಗಂಧ ತರುವಿನಂತೆ" ಎಂದು ವರ್ಣಿಸುತ್ತಾನೆ.
ಆತ್ಮ ಎಂಬ ಪದಕ್ಕೆ ಪರಮಾತ್ಮ ಎಂಬ ಅರ್ಥವೂ ಇದೆ: "ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು" - ಅಲ್ಲಮಪ್ರಭು. ಆತನದೇ ಮತ್ತೊಂದು ವಚನದಲ್ಲಿ "ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ" ಎನ್ನುತ್ತಾನೆ. ಆತ್ಮಸ್ವರೂಪದ ತಿಳಿವಳಿಕೆಯೇ 'ಆತ್ಮತತ್ವ': "ಆತ್ಮತತ್ತ್ವದೊಳ್ ಬಗೆ ಗಡಂ" - 'ಆದಿಪುರಾಣ'. ಆತ್ಮ-ಪರಮಾತ್ಮಗಳ ಸಂಬಂಧದ ಅರಿವೇ ಪ್ರಾಯಶಃ 'ಆತ್ಮವಿದ್ಯೆ'. "ಅನುಭಾವವೆಂಬುದು ಆತ್ಮವಿದ್ಯೆ" ಎಂದು ಸ್ವತಂತ್ರ ಸಿದ್ಧಲಿಂಗೇಶ್ವರನೆಂಬ ವಚನಕಾರನ ಹೇಳಿಕೆ ("ಕರಣಮಥನದಿಚ್ಛೆದೋರದಿಹುದೇ ಅನುಭಾವ" - ಚೆನ್ನಬಸವಣ್ಣ). ಆತ್ಮವನ್ನು ಆದಯ್ಯನೆಂಬೊಬ್ಬ ವಚನಕಾರನು ಸಮುದ್ರಕ್ಕೆ ಹೋಲಿಸುತ್ತಾನೆ: "ಆತ್ಮನೆಂಬ ಅಂಬುಧಿಯಲ್ಲಿ ನೊರೆ ತೆರೆ ತುಂತುರು ಸಾರ ಬುದ್ಬುದಂಗಳೆಂಬ, ತನು ಮನ ಶಬ್ದ ಸ್ಪರ್ಶ ರೂಪು ರಸ ಗಂಧ ಅಹಂಕಾರ ಮಮಕಾರಂಗಳಾದವಯ್ಯಾ." ತನಗೆ ಆತ್ಮದ ಸ್ವರೂಪ ತಿಳಿದಿದೆ ಎಂಬುವವರನ್ನು ಕುರಿತು ಉರಿಲಿಂಗಪೆದ್ದಿಯೆಂಬ ವಚನಕಾರನು "'ಆತ್ಮಾಹಂ' ಎಂಬರು ತಾವು ಆತ್ಮವಿತ್ತುಗಳಲ್ಲ; ಆತ್ಮನಂಥವನಿಂಥವನೆಂದು ಕಂಡವರುಂಟೆ ಅಯ್ಯ?" ಎಂದು ಪ್ರಶ್ನಿಸುತ್ತಾನೆ. ಆತ್ಮಜ್ಞಾನಿಯನ್ನು ಡಿವಿಜಿ 'ಆತ್ಮದರ್ಶನಿ' ಎನ್ನುತ್ತಾರೆ: "ದ್ವೈತವೇನದ್ವೈತವೇನಾತ್ಮದರ್ಶನಿಗೆ?" ಹೀಗೆ ಆತ್ಮನ ಬಗೆಗಿನ ಚರ್ಚೆಗೆ ಕೊನೆಯೇ ಇಲ್ಲ.
=====
ಆತ್ಮ2: ಆತ್ಮ ಎಂಬ ಪದಕ್ಕೆ ತಾನು ಎಂಬರ್ಥವು ವ್ಯಾಪಕವಾಗಿದ್ದು, ಅನೇಕ ಶಬ್ದಗಳಿಗೂ ಪರಿಕಲ್ಪನೆಗಳಿಗೂ ಎಡೆ ಮಾಡಿಕೊಟ್ಟಿದೆ. ಈ ಶಬ್ದಕ್ಕೆ ಈ ಅರ್ಥವು ಪ್ರಾಪ್ತವಾಗುವುದು ಇದು ಪೂರ್ವಪದವಾಗಿ ಸೇರುವ ಸಮಾಸಗಳಲ್ಲಿ. ಆತ್ಮಕೃತ್ಯ ಎಂದರೆ ತನ್ನ ಕೆಲಸ ಎಂದರ್ಥ: "ಆತ್ಮಕೃತ್ಯಪರಿಪಾಲನರಾ ದಮಿತಾರಿಯನ್ನರಾರ್" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು. ತನ್ನನ್ನು ತಾನು ಕಾಪಾಡಿಕೊಳ್ಳುವುದು 'ಆತ್ಮರಕ್ಷಣ': "ಆತ್ಮರಕ್ಷಣಮೇ ಪರಮರುಷಾರ್ಥಮೆಂಬ ಸರ್ವಜನಸಮ್ಮತಮಂ" ಎಂಬುದು 'ಪಂಚತಂತ್ರ'ದ ಮಾತು. 'ಆತ್ಮಗತ' ಎಂದರೆ ತನಗೆ ತಾನೇ ಹೇಳಿಕೊಳ್ಳುವುದು (ಸ್ವಗತ): "ತಜ್ಜರದ್ವಾನರಂ ಹರ್ಷೋತ್ಕರ್ಷಚಿತ್ತನಾಗಿ ಆತ್ಮಗತದೊಳಿಂತೆಂದಂ" - 'ಪಂಚತಂತ್ರ'. 'ಆತ್ಮಾತ' ಎಂದರೆ ತನ್ನನ್ನು ತಾನು ಕೊಂದುಕೊಳ್ಳುವುದು (ಆತ್ಮಹತ್ಯೆ): "ಮೇಲೆ ಕೂಡುವರ್ ಒಡಸತ್ತವರ್ ಎಂಬೊಡೆ ಅದು ಕೂಡದು ಕೇವಲಂ ಆತ್ಮಾತದೋಷವೆ ಪೆರತಲ್ಲ" - 'ಕರ್ಣಾಟಕ ಕಾದಂಬರಿ'. ಆತ್ಮದ ತೇಜಸ್ಸನ್ನು ಕುವೆಂಪು 'ಆತ್ಮಜ್ವಾಲೆ' ಎನ್ನುತ್ತಾರೆ: "ಆತ್ಮಜ್ವಾಲೆಯ ದಳ್ಳುರಿ ಹೊತ್ತಿ .. .. ಮಿಥ್ಯೆಯ ದಹಿಸುತ ಮುಕ್ಕುತಿದೆ". ಹೀಗೆಯೇ ಆತ್ಮಗೌರವ, ಆತ್ಮಾಭಿಮಾನ, ಆತ್ಮದಂಡನೆ, ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ, ಆತ್ಮಚರಿತ್ರೆ ಮುಂತಾದ ಅಸಂಖ್ಯ ಸಮಾಸಗಳು ಸೃಷ್ಟಿಯಾಗಿವೆ.
ಈ ಶಬ್ದದಿಂದ ಇತರ ಕೆಲವು ಶಬ್ದಗಳೂ ಸಾಧಿತವಾಗಿವೆ. ಆತ್ಮಜ ಎಂದರೆ ಮಗ (ತನ್ನಿಂದ ಹುಟ್ಟಿದವನು): "ಮನದೊಳ್ ಪಿರಿದುಮುತ್ಸಾಹಮಂ ಪಡೆದಳಾತ್ಮಜರ ಬರವಿಂದೆ" 'ಸುಕುಮಾರ ಚರಿತೆ'. ಆತ್ಮಜನ್ಮ ("ಗಂಗಾತ್ಮಜನ್ಮಂ ಜಯಶ್ರೀಲೋಲಂ" - 'ಪಂಪಭಾರತ') ಮತ್ತು 'ಆತ್ಮಜಾತಕ' ("ಜಯಶ್ಯಾಮೆಗೆ ಇನ್ನು ಆತ್ಮೋದ್ಭವಮೆಂದಕ್ಕುಂ" 'ಅನಂತನಾಥ ಪರಾಣ') ಎಂದರೂ ಮಗನೇ. ಹಾಗೆಯೇ ಆತ್ಮಜೆ, ಆತ್ಮಜಾತೆ ಎಂದರೆ ಮಗಳು. ಮಗ ಹುಟ್ಟುವ ಸಂತೋಷವನ್ನು 'ಆದಿಪುರಾಣ'ವು 'ಆತ್ಮಜನೊಸಗೆ' ಎನ್ನುತ್ತದೆ: "ಮಾದೇವಿಗಾದ ಆತ್ಮಜನೊಸಗೆಯನಾ .. .. ಬಿನ್ನಪಂಗೆಯ್ದಿರೆ". 'ಆತ್ಮೀಯ' ಎಂದರೆ ತನ್ನ ಅಥವಾ ತನಗೆ ಪ್ರಿಯವಾದವನು ಎಂದರ್ಥ: "ಅವರ ವಚನದಿಂ ಆತ್ಮೀಯ ಪಿತೃಮರಣಮುಮಂ ಆತನ ನರಕಗತಿಗಮನಮುಂ ಅದು" - 'ಆದಿಪುರಾಣ'. ಈ ಶಬ್ದಕ್ಕೆ 'ಅಭಿಧಾನ ವಸ್ತುಕೋಶ'ವು ಹತ್ತಿರದ ಬಂಧು ಎಂಬರ್ಥವನ್ನೂ ಕೊಡುತ್ತದೆ: "ಸನಾಭಿ ಸಗೋತ್ರಂ ಬಂಧು ಆತ್ಮೀಯನೆನಿಕುಂ". 'ಸುಕುಮಾರ ಚರಿತೆ'ಯು ಸ್ವಂತದ ವಿಷಯವನ್ನೆಲ್ಲ 'ಆತ್ಮೀಯಪ್ರಪಂಚ' ಎನ್ನುತ್ತದೆ: "ಭವದಂಘ್ರಿಸ್ಮರಣ ಪರಿಣತಾಂತಃಕರಣರಾಗಿ ಬಂದೆವೆಂದು ಆತ್ಮೀಯಪ್ರಪಂಚಮನಱಿಪಿ". 'ಪಂಚತಂತ್ರ'ದಲ್ಲಿ ಉಕ್ತವಾದ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು 'ಆತ್ಮಾಮಿಷಸಂಧಿ': "ಶತ್ರು ಸಮಸ್ತಬಲಂ ಬೆರಸು ವಿಜಿಗೀಷುವಂ ಕಾಣ್ಬುದುಂ ಆತ್ಮಾಮಿಷಸಂಧಿಯೆಂಬುದಕ್ಕುಂ".
=====
ಈರುಳ್ಳಿ: ಇದನ್ನು ನೀರುಳ್ಳಿ ಎಂದೂ ಕರೆಯುತ್ತಾರೆ. ಇದರ ಮೂಲ ಉಳ್ಳಿ; ಇದು ದ್ರಾವಿಡಪದವಿದ್ದಂತೆ ತೋರುತ್ತದೆ. ತೆಲುಗಿನಲ್ಲಿ ಉಲ್ಲಿ ಎಂದೂ, ತಮಿಳು ಮಲಯಾಳಂ, ತುಳುಗಳಲ್ಲಿ ಉಳ್ಳಿ ಎಂದೂ ದೊರೆಯುತ್ತದೆ. ಇದೇ ಜಾತಿಯ ಮತ್ತೊಂದು ಗಡ್ಡೆಯನ್ನು ನಾವೀಗ ಬೆಳ್ಳುಳ್ಳಿ ಎನ್ನುತ್ತೇವೆ. ಅದು ಮೂಲತಃ ಉಳ್ಳಿಯನ್ನೇ ಸೂಚಿಸುವಂಥದು. ಈರುಳ್ಳಿಯು ಬಂದುದು ಅನ್ಯದೇಶದಿಂದ ಹಾಗೂ ಈಚೆಗೆ ಎಂದು ವಾದಿಸಿದ್ದ ಪ್ರಖ್ಯಾತ ಚಾರಿತ್ರಿಕ ಸಸ್ಯವಿಜ್ಞಾನಿ ಬಿ.ಜಿ.ಎಲ್. ಸ್ವಾಮಿ ಅವರು, ಉಳ್ಳಿ ಎಂದರೆ ಈರುಳ್ಳಿ ಎಂದು ಭಾವಿಸಿ ಆ ಶಬ್ದ ಬರುವ ಹರಿಹರನ 'ಬಸವರಾಜದೇವರ ರಗಳೆ'ಯಂತಹ ಕೃತಿಯ ಕಾಲದ ಬಗ್ಗೆ ಸಂಶಯ ತಾಳಿದರು. ಈರುಳ್ಳಿ ಬೇರೆ ದೇಶದಿಂದ ಬಂದರೂ ಉಳ್ಳಿ ಅಥವಾ ಬೆಳ್ಳುಳ್ಳಿ ಸ್ಥಳೀಯವಾದುದು ಎಂದು ಅನೇಕರು ವಾದಿಸುತ್ತಾರೆ. ಅದಕ್ಕನುಗುಣವಾಗಿ ಹನ್ನೊಂದನೇ ಶತಮಾನದ ಚಾವುಂಡರಾಯನ 'ಲೋಕೋಪಕಾರ'ವೆಂಬ ವಿಷಯಕೋಶದಲ್ಲಿ ಅಡುಗೆಯ ಇಂಗನ್ನು ತಯಾರಿಸುವಾಗ ಉಳ್ಳಿಯನ್ನು ಬಳಸಿಕೊಳ್ಳುವುದನ್ನು ಉಲ್ಲೇಖಿಸುತ್ತಾನೆ. ಇದೇ ಕಾಲದ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ "ಉಳ್ಳಿಯನಾಸ್ವಾದಿಸಿದೊಡೆ ಪಾತಕನಕ್ಕುಂ ಆತಂ ಎಂಬರ್" ಎಂಬ ಮಾತಿರುವುದರಿಂದ ಅದು (ಕೆಲವರಿಗಾದರೂ) ನಿಷಿದ್ಧವಾಗಿದ್ದಂತೆ ತೋರುತ್ತದೆ. ಅಕ್ಕಮ್ಮನೆಂಬ ವಚನಕಾರ್ತಿಯು "ಬಳ್ಳೆ ಭಂಗಿ ನುಗ್ಗಿ ಉಳ್ಳೆ ಮೊದಲಾದವನೆಲ್ಲವ ಬಿಡಬೇಕು" ಎನ್ನುತ್ತಾಳೆ. ಹದಿಮೂರನೆಯ ಶತಮಾನದ ಹರಿಹರನ 'ಬಸವರಾಜದೇವರ ರಗಳೆ'ಯಲ್ಲಿ ಬಸವಣ್ಣ ಇದನ್ನು 'ಅಭೋಜ್ಯ' ಎಂದುದರಿಂದಾಗಿ ಅವನು ಕಿನ್ನರ ಬೊಮ್ಮಯ್ಯನೆಂಬ ಶರಣನ ಕೋಪಕ್ಕೆ ಈಡಾಗಬೇಕಾಯಿತು ಎಂಬ ಸನ್ನಿವೇಶವಿದೆ.
ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ರಚಿತವಾದ ಮಂಗರಾಜನ 'ಖಗೇಂದ್ರಮಣಿದರ್ಪಣ'ವೆಂಬ ವಿಷವೈದ್ಯಗ್ರಂಥದಲ್ಲಿ ಒಂದೆಡೆ ಮುಳ್ಳುಹಂದಿಯ ವಿಷವನ್ನು ಇಳಿಸಲು ಉಳ್ಳಿಯನ್ನು ಬಳಸುವ ಬಗ್ಗೆ ಹೇಳಿದ್ದರೂ, ಮತ್ತೊಂದೆಡೆ 'ಲಶುನಯುಗ' ಎಂಬ ಮಾತನ್ನು ಬಳಸುತ್ತಾನೆ, ಅಂದರೆ ಎರಡು ಉಳ್ಳಿಗಳು (ಸಂಸ್ಕೃತದಲ್ಲಿ ಬೆಳ್ಳುಳ್ಳಿಗೆ ಲಶುನ ಎಂಬ ಹೆಸರಿದೆ). ಇದೇನಾದರೂ ಉಳ್ಳಿಯ ಎರಡು ಪ್ರಭೇದಗಳನ್ನು ಸೂಚಿಸುತ್ತಿರಬಹುದೇ?
=====
ಉರಿ: ಇದೊಂದು ದ್ರಾವಿಡ ಪದ; ತಮಿಳಿನಲ್ಲಿ ಉರು, ಮಲಯಾಳಂನಲ್ಲಿ ಉರುಪ್ಪಂ, ತೆಲುಗಿನಲ್ಲಿ ಉರಿಯು ಅಥವಾ ಉರಲು ಮತ್ತು ತುಳುವಿನಲ್ಲಿ ಉರಿ ಎಂದಾಗುತ್ತದೆ. ಸುಟ್ಟುಹೋಗು ಎಂಬ ಕ್ರಿಯಾಪದವಾಗಿಯೂ, ಬೆಂಕಿಯ ನಾಲಗೆ ಎಂಬ ನಾಮಪದವಾಗಿಯೂ ಬಳಕೆಯಾಗುತ್ತದೆ.  'ಶಬ್ದಮಣಿದರ್ಪಣ'ವು "ಉರಿ-ದಹನೇ" ಎಂದು ಅರ್ಥ ನೀಡುತ್ತದೆ (ಇದು ಒಂದು ಮರದ ಹೆಸರೆಂದೂ ಅಲ್ಲಿದೆ). "ಉರಿ ಮುಟ್ಟಿದರಳೆಯಂತೆ ಅಂತಂಬರಂ ಉರಿದಿತ್ತು" ಎಂಬ 'ಪಂಪಭಾರತ'ದ ಪ್ರಯೋಗದಲ್ಲಿ ಎರಡೂ ಕ್ರಿಯಾರ್ಥಗಳ ಬಳಕೆಯಾಗಿವೆ. 'ಉರಿಗಣ್' ಎಂದರೆ ಕೋಪದಿಂದ ಕೂಡಿದ ಕಣ್ಣೂ ಎಂದೂ ಶಿವನ ಬೆಂಕಿಯ ಕಣ್ಣು ಎಂದೂ ಅರ್ಥವಾಗುತ್ತದೆ. "ಉರಿಗಣ್ ಕೆತ್ತುವ ಮೀಸೆ ಪೆರ್ಚಿದ ಕೊರಲ್" ಎಂಬ ಚೌಂಡರಸನ 'ನಳಚಂಪು'ವಿನ ಮಾತಲ್ಲಿ ಮೊದಲನೆಯ ಅರ್ಥವೂ, "ಕೊರಲ ಕಱೆ ಶಿರದ ಪೆಱೆ ನೊಸಲ ಉರಿಗಣ್" ಎಂಬ ರನ್ನನ 'ಗದಾಯುದ್ಧ'ದ ಪ್ರಯೋಗದಲ್ಲಿ ಎರಡನೆಯ ಅರ್ಥವೂ ಸ್ಪಷ್ಟವಾಗಿದೆ. 'ಉರಿದೇಳ್' ಎಂದರೆ ಕೋಪದಿಂದ ಕೆರಳು ಎಂದರ್ಥ: "ಚರನ ನುಡಿಗೇಳ್ದು ಕೋಪದಿಂದುರಿದೇಳ್ದಂ" - ಆಚಣ್ಣನ 'ವರ್ಧಮಾನಪುರಾಣ'. 'ಉರಿಗಣೆ' ಎಂಬುದು ಉರಿಯುವ ಕಣೆ (ಬಾಣ) - ಎಂದರೆ ಆಗ್ನೇಯಾಸ್ತ್ರ: "ಕೃತಾಂತನೆಚ್ಚ ಉರುಗಣೆಯಂತೆ ಬಂದುದು ಲಯಾನಿಳಕಲ್ಪನಿದಾಜಾಳಂ" ಎಂಬುದು ನೇಮಿನಾಥ ಕವಿಯ 'ಅರ್ಧನೇಮಿ ಪುರಾಣ'ದ ಪ್ರಯೋಗ. ಇದನ್ನು 'ಕಾದಂಬರಿ'ಯು 'ಉರಿಯಂಬು' ಎನ್ನುತ್ತದೆ, ("ಉರಿಯಂಬಿನ ಪೊಗೆ ಮೊಗಸಿದಂತೆ"). ಉರಿಯಂತೆ ಕೆಂಪಾದ ಎಂಬರ್ಥದಲ್ಲಿಯೂ ಸಮಾಸದ ಪೂರ್ವಪದದಲ್ಲಿ ಉರಿ ಬಳಕೆಯಾಗುತ್ತದೆ: "ತೊಳಪ ದಾಡೆ ಮಿಳಿರ್ವ ಉರಿಗೇಸಂ ಪೇರೊಡಲ್" ('ಪಂಪಭಾರತ'). ಉರಿಮಂಜು (ಉರಿಮಣ್ಣು) ಕೆಂಪಾದ ಮಣ್ಣನ್ನು ಸೂಚಿಸುತ್ತದೆ.  ಅಧಿಕ ತಾಪವುಳ್ಳುದೆಲ್ಲವನ್ನೂ ಉರಿ ಎಂಬ ಪೂರ್ವಪದದಲ್ಲಿ ಸೂಚಿಸುವ ಅನೇಕ ಸಮಾಸಪದಗಳುಂಟು: ಉರಿಬಿಸಲು, ಉರಿನಾಲಗೆ, ಉರಿಜ್ವರ, ಉರಿಯೂತ ಇತ್ಯಾದಿ.
ಉರಿ ಎಂಬುದು ಉತ್ತರಪದವಾಗುಳ್ಳ ಅನೇಕ ಸಮಾಸಗಳೂ ಇವೆ: ಹೊಟ್ಟೆಉರಿ (ಅಸೂಯೆ), ಕಣ್ಣುರಿ (ಕೋಪ), ಮೈಯುರಿ ಇತ್ಯಾದಿ.
=====
ಎಕ್ಕ: ಇದೊಂದು ಸಂಖ್ಯಾವಾಚಕ, ಒಂದನ್ನು ಸೂಚಿಸುವುದು. 'ಕರ್ನಾಟಕ ಶಬ್ದಸಾರ'ವೆಂಬ ಸು. ಕ್ರಿಶ. 1400 ನಿಘಂಟುವಿನಲ್ಲಿ "ಎಕ್ಕಮೆಂದುಂ ಓರೆಂದುಂ ಒಂದು" ಎಂದು ಹೇಳಿದೆ. ಇದು ಸಂಸ್ಕೃತದ ಏಕ ಎಂಬ ಶಬ್ದದ ತದ್ಭವ ಎಂಬುದು ಸ್ಪಷ್ಟವಾಗಿಯೇ ಇದೆ. ಬರಿಯ ಸಂಖ್ಯೆಯನ್ನಲ್ಲದೆ ಒಂದನ್ನು ಹೊಂದಿರುವುದನ್ನು 'ಎಕ್ಕ' ಎಂದು ಕರೆಯುವುದೂ ರೂಢಿಯಾಯಿತು. ಒಂಟಿ ಪ್ರಾಣಿಯನ್ನು ಕಟ್ಟಿದ ಗಾಡಿಯನ್ನೂ 'ಎಕ್ಕ' ಎಂದು ಕರೆಯುತ್ತಿದ್ದರು. ಈಚೆಗೆ ಇಸ್ಪೀಟು ಆಟದಲ್ಲಿ, ಯಾವುದೇ ಚಿತ್ರವಿರುವ ಎಲೆಯಾಗಲೀ ಒಂದು ಇದ್ದರೆ ಅದನ್ನು 'ಎಕ್ಕ' ಎಂದು ಕರೆಯುವುದನ್ನು ನಾವೆಲ್ಲ ಬಲ್ಲೆವು.
ಈ ಶಬ್ದದಿಂದ ಒಂದನ್ನು ಸೂಚಿಸುವ ಸಮಾಸಶಬ್ದಗಳನ್ನೂ ನಿರ್ಮಿಸಿಕೊಳ್ಳುವ ಪರಿಪಾಟ ಹಿಂದಿನಿಂದಲೂ ಬಂದಿದೆ. ಹಳಗನ್ನಡ ಕಾವ್ಯಗಳಲ್ಲಿ ಒಂದೆಳೆ ಸರ ಎಂಬರ್ಥದಲ್ಲಿ 'ಎಕ್ಕಸರ' ಎಂದೂ, 'ಏಕಾವಳಿ' ಎಂಬುದರ ತದ್ಭವವಾಗಿ 'ಎಕ್ಕಾವಳೀ' ಎಂದೂ ಬಳಸಲಾಗಿದೆ. 'ಎಕ್ಕಸರ'ವನ್ನು ಒಂದೇ ಸಮನೆ ಅಥವಾ ನಿರಂತರವಾಗಿ ಎಂಬರ್ಥದಲ್ಲಿ 'ಏಕಸ್ವರ' ಎಂಬುದರ ತದ್ಭವವಾಗಿಯೂ, ಒಂದೇ ಬಾಣ ಎಂಬ ಅರ್ಥ ನೀಡುವ 'ಏಕಶರ' ಎಂಬುದರ ತದ್ಭವರೂಪದಲ್ಲಿಯೂ ಬಳಸಿರುವುದು ಕಂಡುಬರುತ್ತದೆ.
'ಎಕ್ಕ' ಶಬ್ದದಿಂದ 'ಎಕ್ಕಟಿ' ಎಂಬುದು ಬಂದಿದೆ. ಇದರ ಅರ್ಥ ಒಬ್ಬನೇ ಅಥವಾ ಒಂಟಿ ಎಂದು. 'ಎಕ್ಕಟಿಗಾಳೆಗ' ಎಂದರೆ ಒಬ್ಬ ಒಬ್ಬನೊಡನೆ ಮಾಡುವ ಯುದ್ಧ ಅಥವಾ ದ್ವಂದ್ವಯುದ್ಧ ಎಂಬರ್ಥವಿದೆ. ಇನ್ನೂ ಮುಂದುವರಿದು 'ಎಕ್ಕಟಿ' ಶಬ್ದವನ್ನು ಏಕಾಂತ ಎಂಬ ಅರ್ಥದಲ್ಲೂ ಬಳಸುವ ರೂಢಿಯಿತ್ತು. ಏಕಾಂತದ ಜಾಗಕ್ಕೆ ಕರೆ ಎಂಬರ್ಥದಲ್ಲಿ 'ಎಕ್ಕಟಿಕರೆ' ಅಥವಾ 'ಎಕ್ಕಟಿಗರೆ' ಎಂಬ ರೂಪದ ಬಳಕೆಯೂ ಇದೆ. ಒಬ್ಬನೊಂದಿಗಿನ ಸಮಾನ ಯೋಗ್ಯತೆ ಎಂಬರ್ಥದಲ್ಲಿ 'ಎಕ್ಕತಕ್ಕು' ಎಂಬ ಶಬ್ದ ಸಿಕ್ಕುತ್ತದೆ. ಚಪ್ಪಲಿ ಎಂಬರ್ಥದಲ್ಲಿ ಎಕ್ಕಡ ಎಂಬ ಶಬ್ದವನ್ನು ನಾವೀಗ ಬಳಸುತ್ತೇವಲ್ಲ, ಅದು ಹಳಗನ್ನಡದಲ್ಲಿ 'ಎಕ್ಕವಡ' ಎಂಬ ರೂಪದಲ್ಲಿತ್ತು. ಇದು ಒಂದೇ ಹಾಳೆ ಎಂಬರ್ಥದ  'ಏಕಪಟ' ಎಂಬುದರ ತದ್ಭವವಾಗಿರಬಹುದೇ? ಒಂದೇ ಬಟ್ಟೆ ಎಂಬರ್ಥದಲ್ಲಿಯೂ ಈ ಶಬ್ದ ಬಳಕೆಯಾಗಿದೆ. 'ಎಕ್ಕ'ದಿಂದಲೇ 'ಎಕ್ಕಲ' ಎಂಬ ಶಬ್ದವೂ ರೂಪಿತವಾಗಿದೆ. ಎಕ್ಕಲ ಎಂಬುದನ್ನು ಹಳಗನ್ನಡದಲ್ಲಿ ಮುಳ್ಳುಹಂದಿ ಎಂಬರ್ಥದಲ್ಲಿ ಬಳಸಲಾಗಿದೆ. 'ಒಂಟಿ'ಯಾಗಿ ಸುಳಿಯುವ ಪ್ರಾಣಿ (ಸಲಗ ಅಥವಾ ಹಂದಿ) ಎಂಬರ್ಥದಲ್ಲಿ ಈ ಪದವನ್ನು ಬಳಸಿರಬಹುದು. 'ಎಕ್ಕಲಗಾಣ' ಎಂಬುದು ಒಂಟಿ ಹಾಡುಗಾರನನ್ನು ಸೂಚಿಸಲು, 'ಎಕ್ಕಲವೀರ' ಎಂಬುದು ಏಕಾಂಗವೀರ ಎಂಬರ್ಥದಲ್ಲಿ ಬಳಕೆಗೊಂಡಿದೆ.
=====
ಎಕ್ಕುಟ್ಟೋಗು: "ನಿನ್ನ ಮನೆ ಎಕ್ಕುಟ್ಟೋಯ್ತದೆ" ಎಂದೋ "ನಿನ್ನ ಮನೆ ಎಕ್ಕುಟ್ಟೋಗ" ಎಂದೋ ಹಿಡಿಶಾಪ ಹಾಕುವುದನ್ನು ನಾವೆಲ್ಲ ಕೇಳಿದ್ದೇವೆ. ಈ ಶಬ್ದದಲ್ಲಿ ಮೂರು ಪದಗಳು ಅಡಗಿವೆ: ಎಕ್ಕೆ+ಹುಟ್ಟಿ+ಹೋಗು. ಎಕ್ಕೆ ಎಂಬುದು ಒಂದು ಗಿಡ, ಎಕ್ಕದ ಗಿಡ. ಇದು ಹಳಗನ್ನಡದಲ್ಲಿ 'ಎರ್ಕೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ 'ಎರುಕ್ಕು' ಎಂದೂ, ತುಳುವಿನಲ್ಲಿ 'ಎಕ್ಕಮಲೆ' 'ಎಕ್ಕಮಾಲೆ' 'ಎಕ್ಕಮೆ' ಎಂಬ ರೂಪಗಳಲ್ಲಿಯೂ, ಮಲಯಾಳಂನಲ್ಲಿ 'ಎರಿಕ್ಕು' ಎಂಬ ರೂಪದಲ್ಲಿಯೂ ಈ ಶಬ್ದ ದೊರೆಯುತ್ತದೆ. ಉತ್ತರಣಿ ಬನ್ನಿಮರ ಮುತ್ತುಗ ಮುಂತಾದವುಗಳಂತೆ ಎಕ್ಕೆಯ ಗಿಡವನ್ನೂ ಪೂಜಿಸುತ್ತಿದ್ದ ಪದ್ಧತಿಯಿತ್ತು. ಇದನ್ನು ಕ್ರಿಶ 1150 ರ ಹೊತ್ತಿನ ಬ್ರಹ್ಮಶಿವ ಎಂಬ ಕವಿ ತನ್ನ 'ಸಮಯ ಪರೀಕ್ಷೆ'ಯಲ್ಲಿ ಗೇಲಿಮಾಡುತ್ತಾನೆ.
ಸಂಸ್ಕೃತದಲ್ಲಿ  ಈ ಗಿಡವನ್ನು 'ಅರ್ಕ' ಎಂದು ಕರೆಯುತ್ತಾರೆ. ಅರ್ಕ ಎಂದರೆ 'ಸೂರ್ಯ' ಎಂದೂ 'ಪೂಜಿಸಲು ಅರ್ಹವಾದ' ಎಂದೂ, ಇತರ ಅನೇಕ ಅರ್ಥಗಳೂ ಸಂಸ್ಕೃತದಲ್ಲಿದೆ. ಮೂರನೆಯ ಮದುವೆ ಮಾಡಿಕೊಳ್ಳುವಾಗ (ಗಂಡಸು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ!) ಮುಂಚೆ ಎಕ್ಕದ ಗಿಡವನ್ನು ಹೆಣ್ಣೆಂದು ಭಾವಿಸಿ ಅದರೊಡನೆ ಮದುವೆ ಮಾಡಿಕೊಳ್ಳುವ ಪರಿಪಾಟವಿತ್ತು; ಇದನ್ನು 'ಅರ್ಕವಿವಾಹ' ಎಂದೇ ಕರೆಯುತ್ತಿದ್ದರು. ಈ ಗಿಡದ ಎಲೆಗಳ ಅಂಗೈಯಗಲವಾಗಿರುತ್ತದೆ; ರಥಸಪ್ತಮಿಯಂದು (ಮಾಘ ಶುದ್ಧಸಪ್ತಮಿ) ಕೆಲವರು ಎಕ್ಕದೆಲೆಗಳನ್ನು ಭುಜದ ಮೇಲಿರಿಸಿಕೊಂಡು ಸ್ನಾನ ಮಾಡುವ ಪದ್ಧತಿಯಿದೆ. ಇದನ್ನು ಅರ್ಕವ್ರತ (ಸೂರ್ಯನ ವ್ರತ) ಎಂದೇ ಕರೆಯುತ್ತಾರೆ. ಅಂದರೆ ಎಕ್ಕದ ಗಿಡಕ್ಕೂ ಸೂರ್ಯನಿಗೂ ಸಂಬಂಧವನ್ನು ಕಲ್ಪಿಸಿಕೊಳ್ಳಲಾಗಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇಂಥ ಎಕ್ಕದ ಗಿಡವನ್ನು ಯಾರೂ ಬೆಳೆಸುವುದಿಲ್ಲ. ಇದೊಂದು ಕಾಡುಗಿಡವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ, ವಿಶೇಷವಾಗಿ ಪಾಳುಗಳಲ್ಲಿ. ಹೀಗಾಗಿ ಮನೆ ಎಕ್ಕೆ ಹುಟ್ಟಿ ಹೋಗು ಎಂಬ ಬೈಗುಳದ ಹಿಂದೆ ಹೀಗೆ ಬೆಳೆಯುವುದು ಸೂಚಿತವಾಗಿದೆ. ಪಾಳಿನಲ್ಲಿ ಈ ಗಿಡ ಬೆಳೆಯುವುದರಿಂದ ಮನೆ ಸಂಪೂರ್ಣ ಹಾಳಾಗಿ ಆ ಜಾಗದಲ್ಲಿ ಎಕ್ಕೆ ಬೆಳೆಯುವ ಹಾಗಾಗಲಿ ಎಂಬ ಶಾಪ 'ಎಕ್ಕುಟ್ಟೋಗು' ಎಂಬ ಮಾತಿನಲ್ಲಿದೆ. ಇದೊಂದು ಭಯಾನಕ ಪ್ರತಿಮೆ. ಮನೆಯಿದ್ದ ಕುರುಹೇ ನಾಶವಾಗಿಬಿಡಲಿ ಎಂಬ ತೀವ್ರ ಆಕ್ರೋಶ ಇದರಿಂದ ವ್ಯಕ್ತವಾಗುತ್ತದೆ.
====
ಎಣ್ಣೆ: ಬಹಳ ಪರಿಚಿತವಾದ ಈ ಪದಕ್ಕೆ ಕಾಳುಗಳಿಂದ ತೆಗೆದ ಜಿಡ್ಡಿನ ವಸ್ತು ಎಂಬುದು ಅರ್ಥ. ಇದು ದ್ರಾವಿಡ ಪದ; ಹಾಗಾಗಿ ಕೆಲವು ಇತರ ದ್ರಾವಿಡ ಭಾಷೆಗೆಳಲ್ಲಿಯೂ ಇದರ ಜ್ಞಾತಿ ಪದಗಳಿವೆ: ತಮಿಳಿನಲ್ಲಿ ಏಣ್ಣೈ ಎಂದೂ, ಮಲಯಾಳಂನಲ್ಲಿ ಎಣ್ಣ ಎಂದೂ ತುಳುವಿನಲ್ಲಿ ಎಣ್ಣೆ ಎಂದೂ ಆಗುತ್ತದೆ. ಈ ಶಬ್ದದಲ್ಲಿ ಎರಡು ಭಾಗಗಳಿವೆ: ಎಳ್+ನೆಯ್, ಎಂದರೆ ಎಳ್ಳಿನ ಜಿಡ್ಡು ಎಂದು. ಎಳ್ಳು ಎಲ್ಲರಿಗೂ ಗೊತ್ತಿರುವ ಎಣ್ಣೆ ತೆಗೆಯುವ ಕಾಳು. ಸಂಸ್ಕೃತದಲ್ಲಿ ಎಣ್ಣೆ ಎಂಬುದಕ್ಕೆ ತೈಲ ಎಂಬುದು ಸಂವಾದಿಯಾದುದು; ಅಲ್ಲಿಯೂ ತಿಲಕ್ಕೆ (ಎಳ್ಳು) ಸಂಬಂಧಿಸಿದ ಎಂಬರ್ಥವೇ ಇದೆ. ಇದು ಮುಂದೆ ಎಲ್ಲ ಕಾಳುಗಳ ಜಿಡ್ಡಿಗೂ ಅನ್ವಯಿಸಿತು; ಕಡಲೆಕಾಯಿ ಎಣ್ಣೆ (ಒಳ್ಳೆಣ್ಣೆ), ಹರಳೆಣ್ಣೆ (ಔಡಲೆಣ್ಣೆ), ಸಾಸಿವೆಯೆಣ್ಣೆ ಮುಂತಾದುವು. ಎಂದರೆ ಅದರ ಅರ್ಥ ವಿಸ್ತಾರಗೊಂಡಿದೆ (ಭಾಷಾವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು ಎಕ್ಸ್‍ಪಾನ್ಶನ್ ಎಂದೇ ಕರೆಯುತ್ತಾರೆ). ತುಂಬ ಹಳೆಯ ಕನ್ನಡ ಕಾವ್ಯ ಹಾಗೂ ಶಾಸನಗಳಲ್ಲಿ ಎಣ್ಣೆ ಎಂಬ ಪ್ರಯೋಗವನ್ನು ಕಾಣಬಹುದು. "ಸೊಡರೊಳ್ ಬತ್ತಿಯುಂ ಎಣ್ಣೆಯುಂ ಒಡನೞಿದವೊಲ್" ಎಂಬ ಸುಂದರವಾದ ಮಾತು ಒಂದು ಕಾವ್ಯದಲ್ಲಿದೆ. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ಪ್ರತಿಮೆ ಗೋಪಾಲಕೃಷ್ಣ ಅಡಿಗರ ಕವನದ್ದು.
ಮೈಗೆಲ್ಲ ಹಚ್ಚಿಕೊಂಡು (ಸಾಮಾನ್ಯವಾಗಿ ಹರಳೆಣ್ಣೆಯನ್ನು) ಮಾಡುವ ಸ್ನಾನವನ್ನು 'ಎಣ್ಣೆ ಸ್ನಾನ' ಎಂದೇ ಕರೆಯುತ್ತಾರೆ. ಹಬ್ಬದ ದಿನ ಎಣ್ಣೆಸ್ನಾನ ಒಂದು ವಿಶೇಷ ಎಂಬುದು ಕನ್ನಡಿಗರಿಗೆಲ್ಲ ಗೊತ್ತು. ಯಾವುದಾದರೂ ಅವಕಾಶ ಉಂಟಾದಾಗ ನಿರ್ಲಕ್ಷ್ಯ ತೋರುವುದನ್ನು 'ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊ' ಎಂಬ ನುಡಿಗಟ್ಟಿನಿಂದ ಸೂಚಿಸುತ್ತಾರೆ. ಎಣ್ಣೆಯು ಉರಿಯುವುದನ್ನು ಹೆಚ್ಚಿಸುತ್ತದೆ (ಎಂದರೆ ಇಂಧನ). ಅದಕ್ಕೇ ಪೆಟ್ರೋಲ್, ಡೀಸಲ್ನಂತಹ ಕಾಳಿನಿಂದ ತೆಗೆಯದ ಇಂಧನಗಳನ್ನೂ ಎಣ್ಣೆ ಎಂದೇ ಕರೆಯುವ ರೂಢಿಯಿದೆ.  'ಎಣ್ಣೆ ಸುರಿದ ಹಾಗೆ' ಎಂಬ ಮಾತು ಉದ್ರೇಕಗೊಳಿಸು ಎಂಬರ್ಥದಲ್ಲಿ ಬಳಕೆಯಾಗುವ ನುಡಿಗಟ್ಟು. ಎಣ್ಣೆಯು ಜಿಡ್ಡುಪದಾರ್ಥವಾದುದರಿಂದ ಜಾರುತ್ತದೆ; ಅದಕ್ಕೇ ನುಣುಚಿಕೊಳ್ಳುವುದನ್ನು 'ಮೈಗೆ ಎಣ್ಣೆ ಸವರಿಕೊಂಡು' ಮಾಡುವ ಕುಸ್ತಿಗೆ ಹೋಲಿಸುವ ವಾಡಿಕೆಯಿದೆ. ಬಂಡಿಗಳ ಚಕ್ಕರವು ಸರಾಗವಾಗಿ ಉರುಳುವಂತೆ ಮಾಡುವ ಜಿಡ್ಡಿಗೆ 'ಕೀಲೆಣ್ಣೆ' ಅಥವಾ ಕಂಜಣಿ ಎಣ್ಣೆ ಎನ್ನುತ್ತಾರೆ. ಅಲ್ಲದೆ, ಕೀಲುನೋವಿಗೆ ಉಡದ ಕೊಬ್ಬಿನಿಂದ ಮಾಡಿದ ಉಡದೆಣ್ಣೆಯನ್ನು ಬಳಸುವ ರೂಢಿಯೂ ಇದೆ.
ಕೆಲವರು ಹೆಂಡವನ್ನು ಎಣ್ಣೆ ಎನ್ನುತ್ತಾರೆ; 'ಎಣ್ಣೆ ಹೊಡಿ' ಎಂಬುದು ಹೆಂಡ ಕುಡಿಯುವುದನ್ನು ಸೂಚಿಸುತ್ತದೆ. ಒಂದೇ ಅರ್ಥದ 'ಹೆಂಡ ಕುಡಿ', 'ಗುಂಡು ಹಾಕು', 'ಎಣ್ಣೆ ಹೊಡಿ - ಈ ನುಡಿಗಟ್ಟುಗಳು ಬೇರೆ ಬೇರೆ ಸಾಮಾಜಿಕ ಸ್ತರಗಳ ಜನಗಳು ಬಳಸುವ ಭಾಷೆಯಲ್ಲಿ ಕಾಣಿಸುತ್ತವೆ.
=====
ಎದೆ: ಇದು ಹಳಗನ್ನಡದಲ್ಲಿ ಮೊದಲು 'ಎೞ್ದೆ' ಎಂದಿದ್ದು ("ಎಲೆ ಚೋಳಕ್ಷಿತಿಪಾಳ ಸನ್ತವೆರ್ೞ್ದೆಯಂ ನೀಂ ನೀವಿಕೊಳ್" - ಕ್ರಿಶ. 560 ರ ಒಂದು ಶಾಸನ) ಆನಂತರ 'ಎರ್ದೆ' ಎಂದಾಯಿತು. ಇದು ಸಂಸ್ಕೃತದ ಹೃದಯ ಶಬ್ದದ ತದ್ಭವವೆಂದು ಭಾವಿಸಲಾಗಿದೆ. ಇದಕ್ಕೆ ಹೃದಯ ("ಮಲಯಾನಿಲನುಂ .. .. ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವು" - 'ಕವಿರಾಜಮಾರ್ಗ') ಹಾಗೂ ಮೊಲೆ ("ನಿನ್ನಾಗಮನಕ್ಕಾಗಿ ನೋಂತಿಹರ್ ಶಿಶುವಜ್ರಾರಿಗೆರ್ದೆಗೊಡದೆ" 'ಶ್ರೀ ರಾಮಾಯಣ ದರ್ಶನಂ') ಎಂಬ ಅರ್ಥಗಳಿವೆ. 'ಎರ್ದೆಗೊಳ್' ಎಂಬ ರೂಪವು ಆಕರ್ಷಕವಾಗು ಎಂಬರ್ಥದಲ್ಲಿ 'ಪಂಪಭಾರತ'ದಲ್ಲಿ ಉಕ್ತಗೊಂಡಿದೆ ("ಏನೆರ್ದೆಗೊಂಡು ಬೇಟದತ್ತಳಗಮಂ ಉಂಟುಮಾಡಿದುದೋ"). ಕಎರ್ದೆಗಿಡುಕಿ ಎಂಬುದು ಧೈರ್ಯಗುಂದು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ "ಪಡೆಗುಳ್ಕಂ ಪಡೆವಹೀಂದ್ರರ್ ಎರ್ದೆಗಿಡುವಿನೆಗಂ" ಎಂಬಲ್ಲಿ ಪ್ರಯೋಗಗೊಂಡಿದೆ. 'ಎರ್ದೆಯೊಡೆ' ಎಂದರೂ  ಇದೇ ಅರ್ಥ ("ಮರಣದಿನಾದ ಖೇದದಿಂದ ಎರ್ದೆಯೊಡೆದಂತಿರೆ" 'ಪಂಪರಾಮಾಯಣ'). 'ಎರ್ದೆದೋರು' ಎಂದರೆ ಧೈರ್ಯತೋರಿಸು ಎಂದು ("ಬಲ್ಪುದೋರುವ ಎರ್ದೆದೋರುವ ಕಯ್ಪೆಸರಂಗಳ" - 'ಪಂಪಭಾರತ'); 'ಎರ್ದೆಮುಟ್ಟು'ವಿನ ಅರ್ಥ ಎದೆಯಾಳದಿಂದ ಎಂದರ್ಥ ("ಎರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ" - ಅದೇ). ಇದೇ ಅರ್ಥ 'ಎರ್ದೆವುಗು' ಎಂಬ ಮಾತಿಗೂ ಇದೆ ("ತಳ್ತೆಸೆವ ರನ್ನದಂತೆ ಎರ್ದೆವುಗದೇ" 'ಕಬ್ಬಗರ ಕಾವ'). ಕಎರ್ದೆಯಾರು' ಎಂದರೆ ಹೃದಯಕ್ಕೆ ತೃಪ್ತಿಯಾಗುವಂತೆ ("ಭೂಪ ಕುಸುಮಾಯುಧಂ ಇಂತೆರ್ದೆಯಾರೆ ನೋಡಿದಂ" 'ಕುಸುಮಾವಳಿ ಕಾವ್ಯ'). 'ಎರ್ದೆಯಾಣ್ಮ' ಎಂದರೆ ಪ್ರಿಯಕರ ("ಇಚ್ಚೆಯಾಣ್ಮನೆಲ್ಲಿದಂ ಎರ್ದೆಯಾಣ್ಮನೆನ್ನರಸಂ" - 'ಆದಿಪುರಾಣ'). 'ಎಂಟೆರ್ದೆ' ಎಂದರೆ ಧೈರ್ಯ ("ಉರ್ಬಿನೊಳಾಂತು ಸೆಣಸಿ ಕಾದುವ ಜನಪಂಗೆ ಎಂಟೆರ್ದೆಯೇ" - 'ಧರ್ಮಾಮೃತ'). 'ಎರ್ದೆಯೆರಕ' ಎಂದರೆ ಪ್ರೀತಿ ("ಎರ್ದೆಯೆರಕದೆ ಪೊಗಳ್ದಖಿಳ ಭುವನಜನನಿಯನಾಗಳ್"-ಗ 'ಆದಿಪುರಾಣ'); 'ಎರ್ದೆವಳಲ್" ಎಂದರೆ ದುಃಖ ("ಉಪದೇಶಂಗೆಯ್ದು ಕಳೆದಂ ಅವರೆರ್ದೆವಳಲಂ" 'ಪಂಪರಾಮಾಯಣ'). 'ಎದೆಗುದಿಪ' ಎಂದರೆ ಹೃದಯವೇದನೆ ("ಎದೆಗುದಿಪಮಂ ಒದವಿಸುವೊಡೆ ಆರೊ ಬಾರಿಪರ್" 'ಲೀಲಾವತಿಕ'). ಹೀಗೆ ಅಸಂಖ್ಯಾತ ನುಡುಟ್ಟುಗಳು 'ಎದೆ'ಯಿಂದ ಸೃಷ್ಟಿತವಾಗಿವೆ. 'ಎದೆ' ರೂಪದೊಡನೆ ಇವೆಲ್ಲ ಇವತ್ತಿಗೂ ಬಳಕೆಯಲ್ಲಿವೆ.
=====
ಒಲವು: 'ಒಲ್' ಧಾತುವಿನಿಂದಲೇ ರೂಪತವಾಗಿರುವ ಮತ್ತೊಂದು ರೂಪ 'ಒಲವು' (ಒಲ್+ವು). "ಪಲವುಂ ದಿವಸಕ್ಕೆ ಕಂಡು ಒಗದ ಒಲವಿಂ ಬಿಗಿಯಪ್ಪಿದಳ್ ಮಹಾಶ್ವೇತೆಯಂ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯದು. ಇಲ್ಲಿ ಸ್ನೇಹ ಎಂಬರ್ಥವಿದ್ದರೆ 'ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾದೆನಯ್ಯಾ" ಎಂಬ ಮಾತಿನಲ್ಲಿ ಗಂಡು-ಹೆಣ್ಣುಗಳ ನಡುವಣ ಅನುರಾಗ ಎಂದಾಗುತ್ತದೆ. ಅದೇ 'ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ" ಎಂಬ ಬಸವಣ್ಣನದೇ ಮತ್ತೊಂದು ವಚನದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ ಎಂಬರ್ಥ ಹೊಮ್ಮುತ್ತದೆ. ಒಲವು ಎಂದರೆ ಸಂತಸ ಎಂದೂ ಆಗಬಹುದು: "ಆತ್ಮಜೆಯನೊಲವಿಂದಿತ್ತು ಸಾಕ್ಷ್ಯಕ್ಕೆ ಕೈನೀರೆಱೆದಂ ಗಂಧರ್ವರಾಜಂ" - 'ಕರ್ಣಾಟಕ ಕಾದಂಬರಿ'. ಆಧುನಿಕ ಕವಿಗಳು ಸಾಮಾನ್ಯವಾಗಿ ಈ ಶಬ್ದವನ್ನು ಪ್ರಣಯಕ್ಕೆ ಅನ್ವಯಿಸಿ ಬಳಸುವುದುಂಟು. "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು" ಎಂಬುದು ಬೇಂದ್ರೆಯವರ ಪ್ರಖ್ಯಾತ ಸಾಲು ('ಒಲವೆ ನಮ್ಮ ಬದುಕು' ಅವರ ಪ್ರೇಮಕವನಗಳ ಸಂಕಲನದ ಹೆಸರೂ ಹೌದು). "ನಾನು ಒಲವಿನ ಭಕ್ತ" ಎಂದು ಹೇಳಿಕೊಂಡವರು ಕೆಎಸ್ನ.
'ಒಲವರ' ಎಂಬ ಇನ್ನೊಂದು ರೂಪವೂ ಇದೆ. ಅದಕ್ಕೂ ಇವೇ ಅರ್ಥಗಳು. "ಮನದೊಲವರಮುಳ್ಳೊಡೆ ಕುಡು ಮನೆಯೊಳ್ ಹರಿಗಗ್ರಪೂಜೆಯಂ" ಎಂಬ 'ಪಂಪಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ, ಗೌರವ ಎಂಬರ್ಥವಿದ್ದರೆ, "ಏಕಿಕ್ಕಿದೆ ಬಲೆಯಂ ಪೇಳಣ್ಣ ನಿನಗೆ ಮಾಂಸದೊಳಾದೊಂದು ಒಲವರಮೆ" ಎಂಬ 'ಕರ್ಣಾಟಕ ಕಾದಂಬರಿ'ಯ ಮಾತಿನಲ್ಲಿ ಮೋಹ, ಆಸೆ ಎಂಬರ್ಥವಿದೆ. "ಒಲವರವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ" ಎಂಬ ಜೇಡರ ದಾಸಿಮಯ್ಯನ ವಚನವು ಈ ಶಬ್ದವನ್ನು ಪ್ರೀತಿ ಎಂಬರ್ಥದಲ್ಲಿ ಬಳಸುತ್ತದೆ. ಮನೋಧರ್ಮ ಎಂಬರ್ಥವೂ ಈ ಶಬ್ದಕ್ಕೆ ಬರುತ್ತದೆ: "ಮೃಗದೊಲವರಮುಮಂ ಅರಸನ ಬಗೆಯುಮಂ ಅದೋಲಗಿಸಲ್" 'ಪಂಪಭಾರತ.' "ಒಲವರವಲಾ ಮುರಹರಂಗೀ ಬಲದೊಳಗೆ" ಎಂಬ 'ಕುಮಾರವ್ಯಾಸಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಪಕ್ಷಪಾತ ಎಂಬರ್ಥ ಹೊಮ್ಮುತ್ತದೆ. 'ಒಲವರಂಗೊಳ್' ಎಂದರೆ ಪಕ್ಷಪಾತ ("ಒಲವರಂಗೊಳ್-ಪಕ್ಷಸ್ವೀಕಾರೇ" - 'ಶಬ್ದಮಣಿದರ್ಪಣ'). 'ಒಲವರಂಬಡು' ಎಂದರೆ ಮೆಚ್ಚುಗೆಹೊಂದು ಎಂದರ್ಥ: "ತನ್ನ ನರುಜವ್ವನದ ಪರಿಯ ಮುಂಗಾಣ್ಕೆಗುಡಲ್ ಬಿನ್ನಣದೊಳೊಲವರಂಬಡದೆ" ಎಂಬುದು ಸೋಮದೇವನ 'ಉದ್ಭಟಕಾವ್ಯ'ದ ಸಾಲು. 'ಒಲವರವಾನ್' ಎಂದರೂ ಇದೇ ಅರ್ಥ: "ಮಿಂದೊಲವಾಂತು ದಣಿಬವನುಟ್ಟು ಭಸಿತವನಿಟ್ಟು ಭಾಳದಲಿ" ಎಂಬುದು 'ಬಸವಪುರಾಣ'ದ ಮಾತು.
=====
ಒಲುಮೆ: ಇದು ಒಲ್ ಎಂಬ ಧಾತುವಿನಿಂದ ಬಂದಿದೆ. ಒಲ್ ಎಂದರೆ ಪ್ರೀತಿಸು, ಮೋಹಗೊಳ್ಳು ಎಂದರ್ಥ: "ಸುಯೋಧನನ ರಾಜ್ಯಮಂ ಒಲ್ವೊಡಂ ಶಲ್ಯನನೆ ಸಾರಥಿಮಾಡಿ ಕಾದುವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಇದಕ್ಕೆ 'ಮೆ' ಎಂಬ ಪ್ರತ್ಯಯ ಸೇರಿ 'ಪ್ರೀತಿ' ಎಂಬರ್ಥದ ನಾಮಪದವಾಗಿದೆ. "ಸೊಬಗಂ ಒಲ್ಮೆಯಂ ಧೈರ್ಯಮಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಪ್ರೀತಿಸುವವನು ಎಂಬರ್ಥದಲ್ಲಿ ಇದು 'ಒಲ್ಮೆಗ' ಎಂದೂ ಆಗುತ್ತದೆ: "ನನ್ನಿಗರ್ ಇಂಪುಗಾರರ್ ಇನಿವಾತುಗರ್ ಇಚ್ಚೆಗಾರರಾರ್ಪರ್ ಒಲ್ಮೆಗರ್ ಚೆನ್ನಿಗರ್" ಎಂಬ ಮಾತು ತಿರುಮಲಾರ್ಯನ 'ಚಿಕದೇವರಾಜವಿಜಯ'ದ್ದು. ಒಲ್ ಎಂಬ ಧಾತುವು 'ಒಲಿ' ಎಂಬ ರೂಪದಲ್ಲಿಯೂ ಇದೆ: "ಕುಲನಿಂತು ಪಿಕ್ಕದಿರಿಂ ನೀಂ ಒಲಿದಲ್ಲಿ ಪುಟ್ಟಿ ಬಳೆದಿರೋ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ" ಎಂಬ ಹರಿತವಾದ ಕರ್ಣನ ಮಾತು 'ಪಂಪಭಾರತ'ದ್ದು. 'ಒಲ್ಮೆ' ಎಂದರೆ ಅನುಗ್ರಹ ಅಥವಾ ಕೃಪೆ ಎಂಬರ್ಥವೂ ಆಗುತ್ತದೆ: "ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ಬಡವಂ ಬಲ್ಲಿದನಾಗನೇ" ಎಂಬುದು 'ಸೋಮೇಶ್ವರಶತಕ'ದಲ್ಲಿ ಬರುವ ನುಡಿ. "ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ" ಎಂಬುದು ಅಲ್ಲಮ ವಚನದ ಸಾಲು. ಒಲುಮೆ ಎಂದೂ ಪ್ರೀತಿ. "ಒಲುಮೆ ಒಲಿದೇ ಒಲಿವುದು" ಎಂಬುದು ಕೆಎಸ್ನ ಅವರ ಒಂದು ಕವನದ ಶೀರ್ಷಿಕೆ. ಈ ವಾಕ್ಯದಲ್ಲಿಯೇ 'ಒಲುಮೆ' ಇದೆ. ಇದು ವ್ಯಾಪಕವಾಗಿ ಬಳಕೆಯಾಗುವ ಪದ. "ಅಂಗಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ" ಎಂಬುದು ಕೋಲಶಾಂತಯ್ಯನೆಂಬ ವಚನಕಾರನ ಸೂತ್ರವಾಕ್ಯ. ಹರಿಹರನ 'ಬಸವರಾಜದೇವರರಗಳೆ'ಯಲ್ಲಿ "ಶರಣರೊಡನೊಲುಮೆಯಿಂ ಲಿಂಗಾರ್ಚನಂಗೆಯ್ದು" ಎಂಬ ಮಾತಿದೆ. ತೀನಂಶ್ರೀ ಅವರ 'ಒಲುಮೆ' ಎಂಬ ಹೆಸರಿನ ಪ್ರೇಮಕವನ ಸಂಕಲನವೇ ಇದೆ (ಇದು ಮೊಟ್ಟ ಮೊದಲ ಆಧುನಿಕ ಪ್ರೇಮಕವನ ಸಂಕಲನ).
ಒಲ್ಮೆ ಹಾಗೂ ಒಲುಮೆಗಳಿಂದ ಅನೇಕ ಸಮಾಸಗಳು ಸೃಷ್ಟಿಯಾಗುತ್ತವೆ. 'ಒಲ್ಮೆವೆರು' ಎಂದರೆ ಪ್ರೀತಿ ಹೊಂದು ಎಂದರ್ಥ: "ಶಿವಾಕ್ಷಿಮಣಿಪ್ರತಾನಮಂ ಧರಿಸುತ್ತಂಗದೊಳೊಲ್ಮೆವೆತ್ತು ಶಿವಮಂತ್ರಧ್ಯಾನಯಕ್ತನಾದಂ" ಎಂಬ ವಾಕ್ಯ 'ವೃಷಭೇದ್ರವಿಜಯ'ದ್ದು. 'ಒಲುಮೆದೋರು' ಎಂದರೆ ಪ್ರೀತಿ ತೋರಿಸು: "ಹುಸಿಯೊಲುಮೆದೋರುವರಾ ಪರಿಯಲಿ ಹೃದಯಗೊಡರನೃತವನಾಡುವರು" - ಚೌಂಡರಸನ 'ನಳಚಂಪು'. ಮೂರನೆಯ ಮಂಗರಸನ 'ನೇಮಿಜಿನೇಶ ಸಂಗತಿ'ಯಲ್ಲಿ 'ಒಲುಮೆಮದ್ದು' ಎಂದರೆ 'ವಶೀಕರಣದ ಮದ್ದು': "ಓಪನವಳ ಕೈವಶವಾಗಲದಕೆ ಅವಳಾತಗೊಲುಮೆಮದ್ದನು ತಿನಿಸಿದಳೆಂದು ತಮತಮಗೆಲ್ಲರಾಡವರು." ಕೆಎಸ್ನ "ನಿನ್ನೊಲುಮೆ ತಾರೆಗಳ ಹರಡಿರುವ ಬಾನು" ಎಂಬ ಸಾಲಿನಲ್ಲಿ 'ಒಲುಮೆತಾರೆ' ಪದವನ್ನು ಸೃಷ್ಟಿಸಿಕೊಳ್ಳುತ್ತಾರೆ.
=====
ಕಡಲೆ: ಇದು ತಮಿಳಿನಲ್ಲಿ ಕಡಲೈ ಎಂದೂ, ತುಳುವಿನಲ್ಲಿ ಕಡಲೆ ಎಂದೂ, ಮಲಯಾಳಂನಲ್ಲಿ ಕಡಲ ಎಂದು ಬಳಕೆಯಲ್ಲಿರುವ ಪದ. ಕನ್ನಡ ನಾಡಿನಲ್ಲಿ ಮೊದಲಿದ್ದದ್ದು ಕಡಲೆ ಎಂಬ ದ್ವಿದಳ ಧಾನ್ಯ. ಇದರ ಉಲ್ಲೇಖ 'ಪಂಪಭಾರತ'ದಲ್ಲಿಯೇ ಇದೆ: ("ಮೆಳಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು"). ಇಲ್ಲಿ ಹೇಳಿರುವುದು ಹೆಂಡಕುಡುಕರು ನಂಜಿಕೊಳ್ಳುತ್ತಿದ್ದ ಕಾರ ಹಚ್ಚಿದ ಕಡಲೆಯನ್ನು ಕುರಿತು. ಪೊನ್ನನ 'ಶಾಂತಿಪುರಾಣ'ದಲ್ಲಿ ಹುರಿಗಡಲೆಯ ಪ್ರಸ್ತಾಪವಿದೆ. ಹಾಗೆಯೇ ನಯಸೇನನ 'ಧರ್ಮಾಮೃತ'ದಲ್ಲಿ "ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ" ಎಂಬ ಗಾದೆ ಮಾತು ಕಾಣಸಿಗುತ್ತದೆ. ಅಂದರೆ ಬಾಯಿರುಚಿಗಾಗಿ ಕಡಲೆಯನ್ನು ವ್ಯಾಪಕವಾಗಿ ಬಳಸುತ್ತಿದ್ದರೆಂಬುದು ಈ ಉಲ್ಲೇಖಗಳಿಂದ ತಿಳಿಯಬಹುದು. ಇದನ್ನು ಈಗ ಸೊಪ್ಪಿನ ಕಡಲೆ ಎಂದೂ  ಕರೆಯುವ ರೂಢಿ ಇದೆ.
ಸೊಪ್ಪಿನ ಕಡಲೆಯು ಗಿಡದಲ್ಲಿ ಎಲೆಗಳ ನಡುವೆ ಬಿಡುವಂಥದು, ಎಣ್ಣೆಯ ಅಂಶ ಇಲ್ಲದಂಥದ್ದು, ಹಾಗೂ ಮೃದುವಾದ ಸಿಪ್ಪೆಯಲ್ಲಿ ಅಡಗಿರುವಂಥದು. ಈಚೆಗೆ, ಅಂದರೆ ಹದಿನಾರನೆಯ ಶತಮಾನದ ಎರಡನೆಯ ಅರ್ಧದ ಬಳಿಕ ನಮ್ಮಲ್ಲಿ ಮತ್ತೊಂದು ಬಗೆಯ ಕಡಲೆ ಬಳಕೆಯಲ್ಲಿ ಬಂದಿದೆ. ಅದು ನೆಲದೊಳಗೆ ಬೇರಿನಲ್ಲಿ ಬಿಡುವಂಥದು, ಎಣ್ಣೆಯ ಅಂಶ ಹೆಚ್ಚು ಇರುವಂಥದು ಹಾಗೂ ಸ್ವಲ್ಪ ಗಟ್ಟಿ ಸಿಪ್ಪೆಯನ್ನು ಹೊಂದಿರುವಂಥದು.  ಈ ಸಸ್ಯವನ್ನು ಕಡಲೆಯ ಮತ್ತೊಂದು ರೀತಿ ಎಂದು ಭಾವಿಸಿ ಇದನ್ನು ನೆಲಗಡಲೆ ಎನ್ನುವ ವಾಡಿಕೆ ಬಂತು; ತಮಿಳಿನಲ್ಲಿ ಇದನ್ನು ನೆಲಕಡಲೈ ಎಂದೂ, ತೆಲುಗಿನಲ್ಲಿ ನೆಲಶನಿಗ ಅಥವಾ ವೇರುಶನಿಗ (ವೇರು=ಬೇರು) ಎಂದೂ ಕರೆಯುವ ರೂಢಿಯಿದೆ. ಇದು 7600 ವರ್ಷಗಳಷ್ಟು ಹಿಂದೆಯೇ ಬೆಳೆಯುತ್ತಿತ್ತು ಎಂದು ಪ್ರಾಚ್ಯಶಾಸ್ತ್ರಜ್ಞರು ಹೇಳುತ್ತಾರೆ. ಈ ಸಸ್ಯದ ಮೂಲಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ: ಪೆರು, ಅಥವಾ ಘಾನಾ, ಕ್ಯೂಬ ಎಂಬುದು ವಿವಿಧ ವಿದ್ವಾಂಸರ ಅಭಿಪ್ರಾಯ. ತೆಲುಗಿನಲ್ಲಿ ಇದನ್ನು ಶನಿಗಕಾಯ ಅಥವಾ ಶನಿಕ್ಕಾಯ ಎನ್ನುತ್ತಾರೆ. ಇದಕ್ಕೆ ಸಮೀಪವಾಗಿರುವ ಸೇಂಗ(ಗಾ) ಅಥವಾ ಶೇಂಗ(ಗಾ) ಎಂಬ ಶಬ್ದವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿಗೆ ಬಳಕೆಯಲ್ಲಿದೆ. ದಕ್ಷಿಣ ಕರ್ಣಾಟಕದಲ್ಲಿ ಇದನ್ನು ಕಡಲೆಕಾಯಿ, ಕಳ್ಳೇಕಾಯಿ ಎನ್ನುತ್ತಾರೆ.
=====
ಕಣ್ಣಾಮುಚ್ಚಾಲೆ:  ಇದು ಅನೇಕ ಶಬ್ದಗಳ ಕೂಡುಪದ. ಕಣ್ಣು ಮತ್ತು ಮುಚ್ಚು ಎಂಬಿವು ಸ್ಪಷ್ಟವಾಗಿವೆ. ಇದು ಮಕ್ಕಳ ಒಂದು ಆಟದ ಹೆಸರು. ಒಬ್ಬರ ಕಣ್ಣು ಮುಚ್ಚಿ ಮಿಕ್ಕವರೆಲ್ಲ ಬಚ್ಚಿಟ್ಟುಕೊಂಡ ಮೇಲೆ ಕಣ್ಣು ಬಿಡಿಸಿಕೊಂಡ ಮಗು ಬಚ್ಚಿಟ್ಟುಕೊಂಡವರನ್ನು ಹುಡುಕುವ ಆಟ. "ಕಿವಿಗೆ ಹಿತವಾಗಿ ಸಂತಸ ಹುಟ್ಟಿಸುವ ಲಯಬದ್ಧ ನಾದಪ್ರವಾಹ ಮುಖ್ಯ .. .. ಆದಿಪ್ರಾಸವೋ, ಅಂತ್ಯಪ್ರಾಸವೋ, ಅಡಿಗಡಿಗೆ ಮರುಕಳಿಸುವ ಪ್ರಾಸವೋ ಅಲ್ಲಿ ಮುಖ್ಯವಿನಿಸೀತು. ಉದ್ದೇಶ ಅರ್ಥವನ್ನು ಕೊಡಲೇಬೇಕಾಗಿಲ್ಲ ಹಾಡು" ಎಂದು ಶಿವರಾಮ ಕಾರಂತರು ಮಕ್ಕಳಹಾಡಿನ ಸ್ವರೂಪವನ್ನು ವಿವರಿಸುತ್ತಾರೆ. ಆದರೆ ಕಣ್ಣಾಮುಚ್ಚಾಲೆ ಒಂದು ಆಟವಾದರೂ ಕಣ್ಮುಚ್ಚಿದಾಗ ಹೇಳುವ "ಕಣ್ಣಾ ಮುಚ್ಚೆ ಕಾಡೇಗೂಡೇ ಉದ್ದಿನ ಮೂಟೆ ಉರುಳೇ ಹೊಯ್ತು, ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ, ಬಚ್ಚಿಟ್ಟುಕೊಳ್ಳಿ" ಎಂಬ ಹಾಡಿನಂತಹ ರಚನೆ ಏನೋ ನಿಗೂಢವನ್ನೇ ಸೂಚಿಸುತ್ತಿರುವಂತಿದೆ. ಕಣ್ಮುಚ್ಚು ಎಂಬುದಕ್ಕೆ 'ಸಾವು' ಎಂಬರ್ಥವೂ ಇದ್ದು, ಕಾಡಿನ ಗೂಡು, ಉರುಳಿ ಹೋಗು, ಬಚ್ಚಿಟ್ಟುಕೊ ಮುಂತಾದವು ಸಾವಿನ ಪರಿಯನ್ನು ಹೇಳುತ್ತಿವೆಯೇನೋ ಎಂಬಂತಿದೆ. ಮೂಲದಲ್ಲಿ ಮಕ್ಕಳು ಈ ಮಾತುಗಳನ್ನು ಸೃಷ್ಟಿಸದೆ ಹಿರಿಯರು ಇವುಗಳನ್ನು ಹೇಳಿಕೊಟ್ಟಿರಬಹುದು. ಈಶ್ವರ ಕಮ್ಮಾರರ ಒಂದು ಮಕ್ಕಳ ಪದ್ಯದ ಮೊದಲ ಸಾಲುಗಳಿವು: "ಕೊಕ್ಕ ಬತ್ತಿ ಕ್ವಾಡಾ ಬತ್ತಿ ಊರಿಗೆಲ್ಲ ಒಂದೇ ಬತ್ತಿ ಓಡಲೆ ಬತ್ತಿ.. .. " ಇದೂ ಕಣ್ಣಾಣಾಮುಚ್ಚಾಲೆಯ ಪದ್ಯವನ್ನೇ ಹೋಲುವಂತಿದೆ.
ಈ ಶಬ್ದವು ಕಣ್ಮುಚ್ಚಲೆ, ಕಣ್ಣಾಮುಚ್ಚಿ, ಕಣ್ಣಾಮುಚ್ಚೆ, ಕಣ್ಣುಮುಚ್ಚಲೆ, ಕಣ್ಣುಮುಚ್ಚಳಿಕೆ, ಕಣ್ಣುಮುಚ್ಚಣಿಕೆ ಮುಂತಾಗಿ ಅನೇಕ ವಿಧಗಳಲ್ಲಿ ಬಳಕೆಯಲ್ಲಿದೆ. ಇದೊಂದು ನುಡಿಗಟ್ಟಾಗಿಯೂ ಬಳಕೆಯಲ್ಲಿದೆ. ಕಾಣಿಸಿಕೊಂಡು ಇಲ್ಲವಾಗುವ ಪರಿಯನ್ನು ಈ ನುಡಿಗಟ್ಟು ಸೂಚಿಸುತ್ತದೆ: 'ವಿದ್ಯುತ್ ಕಣ್ಣಾಮುಚ್ಚಾಲೆ' ಎಂಬುದು ದಿನಪತ್ರಿಕೆಯ ಸಾಮಾನ್ಯ ಶೀರ್ಷಿಕೆ. 'ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ' ಎಂಬುದು ಸಿದ್ಧಯ್ಯ ಪುರಾಣಿಕರ ಆತ್ಮಚರಿತ್ರೆಯ ಶೀರ್ಷಿಕೆ. ಮರೆಯಲ್ಲಿ ಅಥವಾ ತಿಳಿಯದಂತೆ ನಡೆಯುವುದು ಎಂಬರ್ಥವೂ ಈ ನುಡಿಗಟ್ಟಿಗಿದೆ: 'ಈ ದೊಡ್ಡಸ್ತನವನ್ನು ತೋರಿಸುವುದರಲ್ಲೇ ಏನೋ ಕಣ್ಣಾಮುಚ್ಚಾಲೆಯಾಟವಿದೆ'. ಎಂದರೆ ಹುನ್ನಾರ ಎಂರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ.
=====
ಕತ್ತಲೆ: ಇದರ ಮೂಲ ಹಳಗನ್ನಡದಲ್ಲಿ ಬಳಕೆಯಲ್ಲಿದ್ದ 'ಕೞ್ತಲೆ' ಎಂಬ ಶಬ್ದ. ಕತ್ತಲು ಎಂಬುದು ಮತ್ತೊಂದು ರೂಪ. ತುಳುವಿನಲ್ಲೂ 'ಕತ್ತಲೆ' ಬಳಕೆಯಲ್ಲಿದೆ. "ಕೞ್ತಲೆ-ಮರ್ವು" ಎಂದು 'ಶಬ್ದಮಣಿದರ್ಪಣ'ವು ಅರ್ಥ (ಮರ್ವು=ಮಬ್ಬು) ನೀಡುತ್ತದೆ. "ನಿನಗೆ ಪಗಲೊಳೇಂ ಕೞ್ತಲೆಯೆ" ಎಂಬುದು 'ಪಂಪಭಾರತ'ದ ಮಾತು. 'ಕಳ್ತಲಿಸು' ಎಂಬುದು ಕತ್ತಲೆಯಾಗು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ ಬಳಕೆಗೊಂಡಿದೆ ("ಇಮ್ಮಾವು ಕಳ್ತಲಿಸಿರ್ದತ್ತು ಎಲೆವಳ್ಳಿ ಕಾಯ್ತು ಕರೆವಂತಿರ್ದತ್ತು"). ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯು 'ಕೞ್ತಲೆವಿಡು' ಎಂಬ ಶಬ್ದವನ್ನು ಬಳಸುತ್ತದೆ ("ಕೞ್ತಲೆವಿಡುವ ತಮಾಲಂಗಳೊಳ್"). ಗೂಬೆಯನ್ನು 'ಲೀಲಾವತಿ'ಯಲ್ಲಿ 'ಕೞ್ತಲೆವಕ್ಕಿ' ಎಂದು ಕರೆದಿದೆ ("ಇಕ್ಕಿದ ತತ್ತಿಗೆ ಕೞ್ತಲೆವಕ್ಕಿ ಭಯಂಬಿಟ್ಟು"). ಸೋಮದೇವನ 'ಉದ್ಭಟಕಾವ್ಯ'ವು ಕತ್ತಲೆಯ ಸಂತಾನವೆಂಬರ್ಥದಲ್ಲಿ 'ಕೞ್ತಲೆವ' ಶಬ್ದಪ್ರಯೋಗಿಸುತ್ತಾನೆ ("ಮಿಸುಗುವ ಕಳ್ತಲೆವಱೆಗಳೊಳ್ ಅಸವಸದಿಂ ಶಶಿಮರೀಚಿಗಳ್ ಪೊಣರ್ವವೊಲ್").
'ಕರ್ತಲೆ' ಎಂಬ ಅಪರೂಪದ ರೂಪವು ಒಂದು ಶಾಸನದಲ್ಲಿ ದೊರೆಯುತ್ತದೆ ("ಭಾನೂದಯದೊಳ್ ಕರ್ತಲೆಯನ್ತಿರೆ"). ಹಳಗನ್ನಡ ಬರವಣಿಗೆಯಲ್ಲಿಯೇ ಕೆಲವೆಡೆ ಕತ್ತಲೆ ಎಂಬ ರೂಪವು ಸಿಕ್ಕುತ್ತದೆ: "ಹೃದಯದೊಳೊದವಿದ ಕತ್ತಲೆ ಚೆದರುವಿನಂ" - 'ಕರ್ಣಾಟಕ ಕಾದಂಬರಿ'). ನಡುಗನ್ನಡದಲ್ಲಿ ಈ ಶಬ್ದವು 'ಕತ್ತಲೆ' ಎಂದು ವ್ಯಾಪಕವಾಗಿ ಬಳಕೆಗೆ ಬಂತು. "ಕತ್ತಲೆಯೆಂಬುದು ಇತ್ತಲೆಯಯ್ಯಾ, ಗುಹೇಶ್ವರನೆಂಬುದು ಅತ್ತಲೆಯ್ಯಾ" ಎಂಬುದು ಅಲ್ಲಮಪ್ರಭುವಿನ ಪ್ರಸಿದ್ಧವಾದ ಮಾತು. "ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ" ಎಂಬುದು ಅಕ್ಕನ ವಚನದ ಸಾಲು. "ಮಿಂಚುಬುಳುವಿಗೆ ಸೋಲುವುದೆ ಕತ್ತಲೆಯ ಕಟಕವು" ಎಂಬುದು ಕುಮಾರವ್ಯಾಸನ ರೂಪಕ. "ಎತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ" ಎಂಬಲ್ಲಿ ಲಕ್ಷ್ಮೀಶನು ಈ ಶಬ್ದದ ಬಹುವಚನ ಬಳಸಿದ್ದಾನೆ. ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕತ್ತಲೆಗೆಯ್' ಶಬ್ದ ಬಳಕೆಯಾಗಿದೆ ("ಕಳಿವಣ್ಣುಗಳ್ ತರುಲತೆ ಕತ್ತಲೆಗೆಯ್ದುವಾ ಬನದಿ"). "ಕತ್ತಲೆಯಲಿ ಬತ್ತಲೆಯಲಿ ತಲೆಗೆದರಿದೆ ಬದುಕು" ಎಂಬುದು ಕೆ.ಎಸ್.ನ. ಅವರ 'ಅನ್ನಪೂರ್ಣೆಗೆ' ಕವನದ ಒಂದು ಸಾಲು. ಇಲ್ಲಿ ಕತ್ತಲೆ ಎಂಬ ಪದಕ್ಕೆ ಅಜ್ಞಾನ ಎಂಬರ್ಥವೂ ಹೊಂದುತ್ತದೆ. ದಟ್ಟ ಕತ್ತಲೆ ಎಂಬರ್ಥ 'ಕಗ್ಗತ್ತಲೆ' ಶಬ್ದ ಕುಮಾರವ್ಯಾಸ ಭಾರತಕಿದಲ್ಲಿಯೇ ಬಂದಿದೆ ("ಕಗ್ಗತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ").
ಕತ್ತಲು ಎಂಬ ರೂಪವೂ ಈಗ ವ್ಯಾಪಕವಾಗಿ ಬಳಕೆಯಲ್ಲಿದೆ. "ಹಬ್ಬಿತು ಕತ್ತಲು ಎದೆಎದೆಯೊಳಗೆ" ಎಂಬ ಸಾಲು ಪು.ತಿ.ನ. ಅವರ 'ವಿಕಟಕವಿ ವಿಜಯ' ನಾಟಕದ್ದು. 'ಕಗ್ಗತ್ತಲು' ರೂಪವೂ ಇದೆ. "ಕದ್ದಿಂಗಳು ಕಗ್ಗತ್ತಲು" ಕುವೆಂಪು ಪ್ರಯೋಗ.
=====
ಕನ್ನಡ: ಕನ್ನಡ ಎಂಬ ಪದವು ಅತ್ಯಂತ ಪ್ರಾಚೀನ ಉಪಲಬ್ಧ ಕನ್ನಡ ಕೃತಿಯಾದ ಕ್ರಿಶ ಒಂಬತ್ತನೇ ಶತಮಾನದ 'ಕವಿರಾಜಮಾರ್ಗ'ದಲ್ಲಿ ಸ್ಪಷ್ಟವಾಗಿ ಎರಡು ಅರ್ಥಗಳಲ್ಲಿ ಬಳಕೆಯಾಗಿದೆ: ಒಂದು ಕನ್ನಡ ನಾಡು, ಇನ್ನೊಂದು ಕನ್ನಡ ನುಡಿ. ಬಹಳ ಪ್ರಸಿದ್ಧವಾದ ಅದರ ಪದ್ಯವೊಂದು "ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್: ಎನ್ನುತ್ತದೆ. ಅಂದರೆ ಕನ್ನಡ ಎಂಬುದು ಈ ನಾಡಿನ ಹೆಸರು; ಕನ್ನಡವನ್ನು ಮಾತನಾಡುವವರು ವಾಸಿಸುತ್ತಿದ್ದ ಪ್ರದೇಶ. ಆ ಗ್ರಂಥದಲ್ಲಿಯೇ ಇರುವ "ಪರಮಾಚಾರ್ಯರವೋಲ್ ಸೈತಿರಲಯರ್ ಕನ್ನಡಕ್ಕೆ ನಾಡವರೋಜರ್" ಎಂಬ ಪದ್ಯದಲ್ಲಿ ಕನ್ನಡ ಎಂಬುದನ್ನು ನುಡಿಯ ಹೆಸರಾಗಿ ಬಳಸಲಾಗಿದೆ. ಅಷ್ಟೇ ಅಲ್ಲ, ಕನ್ನಡದ ಪ್ರಾದೇಶಿಕ ಪ್ರಭೇದಗಳನ್ನೂ (ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ, 'ಉಪಭಾಷೆ') ಕನ್ನಡಂಗಳ್ ಎಂಬ ಪದದಿಂದ ಸೂಚಿಸಲಾಗಿದೆ. ಆದರೆ ಕನ್ನಡ ಎಂಬ ಶಬ್ದದ ಹುಟ್ಟು ಹೇಗಾಯಿತೋ ತಿಳಿಯದು.
ಕ್ರಿಶ ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ 'ಕನ್ನಡ ಸಂಧಿವಿಗ್ರಹಿ' (ಸಂಧಿವಿಗ್ರಹಿ ಎಂದರೆ ಸಂಧಾನ ಮತ್ತು ಯುದ್ಧಗಳ ಹೊಣೆ ಹೊತ್ತ ಮಂತ್ರಿ) ಎಂಬ ಮಾತು ದೊರೆಯುತ್ತದೆ. ಅದರರ್ಥ ಕನ್ನಡ ದೇಶದ ಸಂಧಿವಿಗ್ರಹಿ ಎಂದು ನನಿಘಂಟುಗಳೇನೋ ಅರ್ಥವನ್ನು ಕೊಡುತ್ತವೆ. ಆದರೆ ಆ ಕಾಲದಲ್ಲಿ ಕನ್ನಡ ಮಾತಾಡುವ ಪ್ರದೇಶವೆಲ್ಲ ಒಂದಾಗಿದ್ದ ನಾಡೆಲ್ಲಿತ್ತು? ವಿವಿಧ ರಾಜರ ಆಳ್ವಿಕೆಯಲ್ಲಿ ಕನ್ನಡ ಜನ ವಾಸಿಸುತ್ತಿದ್ದರು. ಹೀಗಾಗಿ ನಿಘಂಟಿನ ಈ ಅರ್ಥ ಸರಿಹೊಂದುವಂತೆ ಕಾಣದು. ಕನ್ನಡಗಬ್ಬ, ಕನ್ನಡಕವಿತೆ ಎಂಬ ಶಬ್ದಗಳೂ ತುಂಬ ಹಿಂದಿನಿಂದಲೇ ದೊರೆಯುತ್ತವೆ.
ಆನಂತರದ ಕನ್ನಡ ಕಾವ್ಯಗಳಲ್ಲಿ 'ಕನ್ನಡವಕ್ಕಿ' ಎಂಬುದನ್ನು ಗಿಳಿ ಎಂಬಂರ್ಥದಲ್ಲಿ ಬಳಸಲಾಗಿದೆ. ಕನ್ನಡಗೌಳ, ಕನ್ನಡವೀಣೆ, ಕನ್ನಡವರಾಳಿ ಎಂಬ ಮಾತುಗಳು ಸಂಗೀತಕ್ಕೆ ಸಂಬಂಧಿಸಿದಂತೆ ಬಳಕೆಯಾಗಿವೆ. ಇವಕ್ಕೂ ಕನ್ನಡ ನುಡಿ ಅಥವಾ ನಾಡಿಗೆ ಯಾವ ರೀತಿ ಸಂಬಂಧವಿದೆಯೋ ಸ್ಪಷ್ಟವಾಗುವುದಿಲ್ಲ. ಕನ್ನಡಗಿತಿ (ಕನ್ನಡ ನಾಡಿನ ಹೆಣ್ಣು) ಎಂಬ ಮಾತು ಹದಿಮೂರನೆಯ ಶತಮಾನದ 'ಶಬ್ದಮಣಿದರ್ಪಣ'ವೆಂಬ ವ್ಯಾಕರಣ ಗ್ರಂಥದಲ್ಲಿ ದೊರಕುತ್ತದೆ. ಆದರೆ ಕನ್ನಡಿಗ ಎಂಬ ಶಬ್ದವು ಮೊದಲು ಸಿಕ್ಕುವುದು ಹದಿನಾಲ್ಕನೆಯ ಶತಮಾನದ ನಾಗರಾಜ ಕವಿಯ 'ಪುಣ್ಯಾಸ್ರವ' ಎಂಬ ಕಾವ್ಯದಲ್ಲಿ. ಹದಿನೇಳನೇ ಶತಮಾನದ ಸಂಸ್ಕೃತ ಭಾಷೆಯಲ್ಲಿರುವ 'ಶಬ್ದಾನುಶಾಸನ' ಎಂಬ ಕನ್ನಡ ವ್ಯಾಕರಣದಲ್ಲಿ ಕನ್ನಡ ನಾಡಿನವನು ಎಂಬರ್ಥದಲ್ಲಿ ಕನ್ನಡಿಚ ಎಂಬ ಶಬ್ದವನ್ನು ಬಳಸಲಾಗಿದೆ.
ಕನ್ನಡಿಸು ಎಂಬ ಮಾತೊಂದಿದೆ: ಇದನ್ನು ಕನ್ನಡ ಭಾಷೆಯಲ್ಲಿ ಹೇಳು ಎಂಬರ್ಥದಲ್ಲಿ ಬಳಸಲಾಗುತ್ತಿದೆ, ಪ್ರಾಯಶಃ ಇದು ಈಚಿನ ಪ್ರಯೋಗ. ಈ ಶಬ್ದವನ್ನು ಕನ್ನಡಿ+ಇಸು ಎಂದು ಒಡೆಯಬೇಕು: ಕನ್ನಡಿಯ ಪ್ರತಿಬಿಂಬದಂತೆ ಮಾಡು, ಅನುವಾದಿಸು ಎಂಬರ್ಥದಲ್ಲಿ ಈ ಶಬ್ದವನ್ನು ಬಳಸಿದಂತೆ ತೋರುತ್ತದೆ.
=====
ಕಬ್ಬ: ಈ ಶಬ್ದವು ಸಂಸ್ಕೃತದ ಕಾವ್ಯ ಎಂಬುದರ ತದ್ಭವ (ಕಾವ್ಯ ಎಂಬುದೇ ಕವಿ ಎಂಬುದರಿಂದ ಬಂದು, ಕವಿಯ ಕೃತಿ ಎಂಬ ಅರ್ಥವನ್ನು ಹೊಂದಿದೆ; ಪ್ರಾಕೃತದಲ್ಲಿದು ಕವ್ವ ಎಂಬ ರೂಪವನ್ನು ಪಡೆಯುತ್ತದೆ). ಈಗ ಕವಿ ಎಂಬ ಶಬ್ದವೇ ಹೆಚ್ಚು ಬಳಕೆಯಲ್ಲಿದ್ದರೂ ಹಿಂದೆ ಕಬ್ಬ ಎಂಬ ಶಬ್ದವೂ ವ್ಯಾಪಕವಾಗಿ ಬಳಕೆಯಲ್ಲಿತ್ತು. ಈ ಶಬ್ದವು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿಯಾದ 'ಕವಿರಾಜಮಾರ್ಗ'ದಲ್ಲಿಯೇ ಬಂದಿದೆ: "ಮಿಗೆ ಕನ್ನಡಗಬ್ಬಂಗಳೊಳ್ ಅಗಣಿತಗುಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗದಿಸುವರ್ ಗದ್ಯಕಥಾಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್" ಎಂಬುದು ಅಲ್ಲಿಯ ಪ್ರಯೋಗ. ಅಲ್ಲದೆ 'ಬೆದಂಡೆಗಬ್ಬ' ಎಂಬ ವಿಶಿಷ್ಟ ಪ್ರಭೇದವನ್ನೂ ಅಲ್ಲಿ ಹೇಳಿದೆ; ಇದು ಕನ್ನಡದ ಸ್ವಂತ ಕಾವ್ಯ ಪ್ರಕಾರ, ಇನ್ನೊಂದು ಚತ್ತಾಣ.  ಕಬ್ಬವನ್ನು ರಚಿಸುವವನು ಅಥವಾ ಕವಿಯೇ ಕಬ್ಬಿಗ. "ಸೊಗಯಿಸುವ ಕಬ್ಬಮಂ ಕಬ್ಬಿಗರಲ್ಲದೆ ಮೆಚ್ಚರ್" ಎಂಬುದು ಆಂಡಯ್ಯನ 'ಕಬ್ಬಿಗರ ಕಾವ'ದ ಮಾತು. ಕವಿಸಮುದಾಯವನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಕಬ್ಬಿಗವಂದಿ'  {ಕಬ್ಬಿಗ+ಮಂದಿ) ಎಂದು ಕರೆದಿದೆ. ಅಲ್ಲಿಯೇ ಬೇರೆಯವರ ಕೃತಿಯಿಂದ ಹಾರಿಸಿಕೊಂಡು ಬರೆಯುವವನನ್ನು 'ಕಬ್ಬಿಗಗಳ್ಳ' ಎಂದು ಕರೆದಿದೆ.
ಹಳಗನ್ನಡದಲ್ಲಿ ಸಂಸ್ಕೃತ ಮಾದರಿಯ ಕಾವ್ಯಪರಂಪರೆಯನ್ನು 'ಮಾರ್ಗ' ಎಂದೂ ಕನ್ನಡ ನಾಡಿನ ಸತ್ವವನ್ನೊಳಗೊಂಡುದನ್ನು 'ದೇಸಿ' ಎಂದೂ ಕರೆಯುತ್ತಿದ್ದರು. ಮಾರ್ಗವು ಕಾವ್ಯವಸ್ತುವಿಗೆ ಹೆಚ್ಚು ಪ್ರಾಧಾನ್ಯವಿತ್ತರೆ, ದೇಸಿಯು ಭಾವನೆಗೆ ಒತ್ತು ನೀಡುವಂತೆ ತೋರುತ್ತದೆ. ಇದು ಕ್ರಮವಾಗಿ ವಸ್ತುಕ ವರ್ಣಕ ಎಂಬ ಶಬ್ದಗಳಿಂದಲೂ ಸೂಚಿತವಾಗುತ್ತಿತ್ತು. ಹಾಗೆಯೇ ಇವುಗಳನ್ನು ಓದುಗಬ್ಬ ಪಾಡುಗಬ್ಬ (ಹಾಡುಗಬ್ಬ) ಎಂಬ ಶಬ್ದಗಳಿಂದಲೂ ಕರೆಯುತ್ತಿದ್ದರು. "ಕಬ್ಬಿಗರೋದುಗಬ್ಬವ ಹಾಡುಗಬ್ಬವ ಕಬ್ಬದೊಳೊರೆವರವೆರಡು ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇಕಬ್ಬೆ ಸರಸತಿಯೇ" ಎಂಬುದು ರತ್ನಾಕರವರ್ಣಿಯ 'ಭರತೇಶ್ವರ ವೈಭವ'ದ ಪದ್ಯ. ಪಾಡುಗಬ್ಬವನ್ನು ಸಾಳ್ವನೆಂಬ ಕವಿಯು 'ಪಾಡುಗವಿತೆ' ಎಂಬ ಶಬ್ದದಿಂದಲೂ ಕರೆಯುತ್ತಾನೆ.
=====
ಕರ್ನಾಟಕ: ಕರ್ನಾಟಕ ಎಂಬುದು ಕನ್ನಡ ನಾಡಿನ ಹೆಸರಾಗಿ ಇಂದು ಬಳಕೆಯಲ್ಲಿದೆ. ಇದು ಮಹಾಭಾರತದಂತಹ ತುಂಬ ಪ್ರಾಚೀನವಾದ ಸಂಸ್ಕೃತ ಕಾವ್ಯಗಳಲ್ಲಿಯೇ ಉಲ್ಲೇಖಗೊಂಡಿದೆಯೆಂದು ವಿದ್ವಾಂಸರು ಹೇಳುತ್ತಾರೆ. ಕರ್ನಾಟಕ ಎಂಬುದು ಕನ್ನಡ ಎಂಬುದರ ಸಂಸ್ಕೃತೀಕರಣಗೊಂಡ ರೂಪ ಎಂದೂ ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಮಹಾಭಾರತದ ರಚನಾಕಾಲದಲ್ಲಿ ಕನ್ನಡ ಭಾಷೆಯಿತ್ತೆ? ಅಲ್ಲದೆ, ಮಹಾಭಾರತದ ಕಾಲವೇ ಗೊತ್ತಿಲ್ಲ. ಜೊತೆಗೆ, ಈ ಶಬ್ದವನ್ನು ಇತರ ಕನ್ನಡ ಪ್ರದೇಶಗಳ ಜೊತೆಗೆ ಹೇಳಲಾಗಿದೆಯೆಂದು ಭೀಷ್ಮಪರ್ವದ ಶ್ಲೋಕವೊಂದನ್ನು ಉದ್ಧರಿಸಲಾಗುತ್ತದೆ: "ಅಥಾಪರೇ ಜನಪದಾಃ ದಕ್ಷಿಣಾ ಭರತರ್ಷಭ| ದ್ರಾವಿಡಾಕೇರಲಾಪ್ರಾಚ್ಯಾ ಮೂಷಿಕಾ ವನವಾಸಿಕಾ|| ಕರ್ನಾಟಕಾ ಮಹಿಷಕಾ ವಿಕಲ್ಪಾ  ಮೂಷಕಾಸ್ತಥಾ| ಝಿಲ್ಲಿಕಾ ಕುಂತಲಾಶ್ಚೈವ ಸೌಹೃದಾ ನಭಕಾನನಾ||" ಹಾಗೆಯೇ ಛಪ್ಪನ್ನ ದೇಶಗಳಲ್ಲಿ ಕರ್ನಾಟಕವನ್ನೂ ಸೇರಿಸಿ ಹೇಳುವ ರೂಢಿಯಿದೆ. ಆದರೆ ಆ ಕರ್ನಾಟಕ ಯಾವುದು? 'ಕರ್ನಾಟಕ ಸಿಂಹಾಸನಾಧೀಶ್ವರ' ಎಂದು ಹಲವಾರು ದೊರೆಗಳು ತಮ್ಮನ್ನು ಕರೆದುಕೊಳ್ಳುತ್ತಾರೆ. ಅವರ ಕರ್ಣಾಟಕ ಯಾವುದು? ಕರ್ನಾಟಕ ಎಂಬುದು ಅಷ್ಟೊಂದು ಪ್ರಾಚೀನವಾದರೆ ಕನ್ನಡ ನಾಡು ನುಡಿ ನಾಡವರ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ 'ಕವಿರಾಜಮಾರ್ಗ'ದ ಕರ್ತೃ ಈ ಹೆಸರನ್ನು ಬಳಸದೆ ಈ ನಾಡನ್ನು ಕನ್ನಡ ಎಂದು ಕರೆಯುವುದೇಕೆ? ಪ್ರಾಯಶಃ ಕರ್ನಾಟಕ ಎಂಬ ಶಬ್ದವು ಈ ಕೃತಿಯ ಕಾಲದ ನಂತರ ಸೃಷ್ಟಿಯಾಗಿರಬೇಕು.
ಕರ್ನಾಟಕ ಎಂಬುದರ ಮೂಲರೂಪ 'ಕರ್ಣಾಟ'; ದೇಶವನ್ನು 'ಕರ್ಣಾಟ' ಎಂದೂ ಭಾಷೆಯನ್ನು 'ಕರ್ಣಾಟ ಭಾಷೆ'ಯೆಂದೂ ಸಂಸ್ಕೃತಪ್ರಿಯರು ಹೇಳುತ್ತಿದ್ದರು. ವಿಜಯನಗರದ ಅರಸನನ್ನು ಭೇಟಿಮಾಡಲು ಬಂದ ತೆಲುಗಿನ ದೊಡ್ಡ ಕವಿ ಶ್ರೀನಾಥನು ಹೇಳಿದನೆನ್ನಲಾದ ಚಾಟುಪದ್ಯವೊಂದರಲ್ಲಿ "ಎವ್ವರೇಮನುಚುನ್ರು ನಾಕೇಮಿ ಕೊರತ ನಾ ಕವಿತ್ವಂಬು ನಿಜಮು ಕರ್ಣಾಟ ಭಾಷಾ" ಎಂಬ ಸಾಲಿದೆ. ಕರ್ಣಾಟಕ ವಿಷಯ ಎಂಬುದು ಕನ್ನಡ ನಾಡನ್ನು ಸೂಚಿಸುತ್ತಿತ್ತು. ಕರ್ನಾಟಕ ಸಂಗೀತ ಎಂಬ ಮಾತಿದೆ; ಹಾಗೆಯೇ ಕರ್ಣಾಟಗೌಳ ಎಂಬ ರಾಗದ ಹೆಸರಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಹೆಸರು 'ಕರ್ಣಾಟಕ ಸಾಹಿತ್ಯ ಪರಿಷತ್ತು' ಎಂದು, ಅದನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಬದಲಿಸಲು ಪ್ರಯತ್ನಗಳಾದವು. ಕರ್ಣಾಟಕ ಎಂಬುದು ಸಂಸ್ಕೃತ ವ್ಯಾಕರಣಕ್ಕನುಗುಣವಾದುದು, ಹಾಗಾಗಿ ಅದನ್ನೇ ಉಳಿಸಿಕೊಳ್ಳಬೇಕೆಂದು ಒಂದು ಪಕ್ಷದವರು ಪಟ್ಟುಹಿಡಿದರು. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ನಡೆದ ನ ಅಥವಾ ಣ ಯಾವುದಿರಬೇಕು ಎಂಬ ಈ ವಿವಾದವನ್ನು 'ನೊಣ ಜಗಳ' ಎಂದೇ ಕರೆಯುತ್ತಿದ್ದರು! ಜಾಣರು ಎರಡನ್ನೂ ಬಿಟ್ಟು ಕನ್ನಡ ಎಂಬುದನ್ನು ಅಳವಡಿಸಿದರು. ಕರ್ಣಾಟ ಎಂಬುದು ಕನ್ನಡವನ್ನು (ಶ್ರೀನಾಥನ ಪದ್ಯ ಅಥವಾ ಕರ್ಣಾಟಕ ಸಂಗೀತದಲ್ಲಿ) ಸೂಚಿಸದೆ ಕರ್ಣ+ಅಟ ಅಂದರೆ ಕಿವಿಗೆ ಹಿತಕರವಾದ ಎಂಬ ಅರ್ಥವೇ ವಿಹಿತ ಎಂಬುದೂ ಕೆಲವರ ವಾದವಾಗಿದೆ.
=====
ಕವಡೆ: ಇದು ಸಂಸ್ಕೃತದ 'ಕಪರ್ದ' ಶಬ್ದದ ತದ್ಭವ. ಕವಡೆ ಎಂಬುದು ಒಂದು ಸಣ್ಣ ಸಮುದ್ರಪ್ರಾಣಿಯ ಚಿಪ್ಪು. ಇಂಡಿಯಾದಲ್ಲಿ ಹಿಂದೆ ಕವಡೆ ಒಂದು ನಾಣ್ಯವಾಗಿ ಚಲಾವಣೆಯಲ್ಲಿದ್ದುದನ್ನು ಸುಲೇಮಾನ್ ಎಂಬ ಪರ್ಷಿಯನ್ ಪ್ರವಾಸಿ ಬರೆಯುತ್ತಾನೆ. ಈಗಲೂ 'ಕವಡೆಯ ಕಿಮ್ಮತ್ತಿಲ್ಲ' ಎಂಬ ಮಾತನ್ನು ಬಳಸುವುದು ರೂಢಿಯಲ್ಲಿದೆ. ಮಾಯಿದೇವಿ ಅಥವಾ ಮಾಳಚಿ (ಮಹಾಲಕ್ಷ್ಮಿ) ಎಂಬ ದೇವತೆಯ ಭಕ್ತರು ಕೊರಳಲ್ಲಿ ಕವಡೆಯ ಮಾಲೆ ಧರಿಸುತ್ತಿದ್ದರು: ಉರಿಲಿಂಗಪೆದ್ದಿ ಎಂಬ ವಚನಕಾರನ ವಚನವೊಂದರಲ್ಲಿ "ಮಾಯಿರಾಣಿಯೇ ದೈವವೆಂದಾರಾಧಿಸಿದಾತನು ಕೊರಳಿಗೆ ಕವಡೆಯ ಕಟ್ಟಿ ತಲೆಯಲ್ಲಿ ಕೆರಹ ಹೊತ್ತು ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ" ಎಂಬ ಮಾತಿದೆ. ಈ ಸಂಪ್ರದಾಯ ಈಗಲೂ ಕೊಲ್ಲಾಪುರ ಲಕ್ಷ್ಮೀ ದೇವತೆಯ ಭಕ್ತರಲ್ಲಿದೆಯೆಂಬುದಕ್ಕೆ ಬೇಂದ್ರೆಯವರ 'ಕುರುಡು ಕಾಂಚಾಣ' ಕವನದಲ್ಲಿನ ಚಿತ್ರದ ಭಾಗವಾಗಿ ಬರುವ "ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ" ಎಂಬ ವರ್ಣನೆಯನ್ನು ನೋಡಬಹುದು. ಅಳಗುಳಿಮನೆ, ಚೌಕಾಬಾರದಂತಹ ಆಟಗಳಲ್ಲಿ ಕವಡೆಯನ್ನು ಗರ ಹಾಕಲು ಬಳಸುತ್ತಾರೆ. ಜ್ಯೋತಿಷಿಗಳು ಭವಿಷ್ಯದ ಆಗುಹೋಗುಗಳನ್ನು ಲೆಕ್ಕಹಾಕಲು ಈಗಲೂ 'ಕವಡೆ ಹಾಕು'ತ್ತಾರೆ.
'ಕವಡಿಕೆ' ಎಂದರೂ ಕವಡೆಯೇ. ಇದು ಸಂಸ್ಕೃತದ ಕಪರ್ದಿಕಾ (=ಸಣ್ಣ ಕವಡೆ) ಎಂಬ ಶಬ್ದದ ತದ್ಭವರೂಪ. ಈಗ ಕವಡೆ ಎಂಬ ರೂಪ ಹೆಚ್ಚು ಬಳಕೆಯಲ್ಲಿದ್ದರೂ ಹಿಂದಿನ ಕನ್ನಡ ಕಾವ್ಯಗಳಲ್ಲಿ ಕವಡಿಕೆ ಎಂಬ ರೂಪವೇ ಹೆಚ್ಚು ಪ್ರಚಲಿತವಾಗಿತ್ತು. "ಬಾಯೊಳ್ ಕವಡಿಕೆಗಳಂ ಪಲ್ಗಳಂತೆ ಮಾಡಿ" ಎಂದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದೇ ರೀತಿಯ ವರ್ಣನೆ ಕವಡೆ ರೂಪದೊಡನೆ 'ಭರತೇಶವೈಭವ'ದಲ್ಲಿ ಬರುತ್ತದೆ: "ಹಲ್ಲೆಲ್ಲ ಕವಡೆಯ ಚೀಲವಂ ಕೊಡಹಿದಂತುದಿರ್ದುವು ಧರೆಗೆ." ಶಾಂತಿನಾಥನ 'ಸುಕುಮಾರ ಚರಿತೆ' ಯಲ್ಲಿ "ಇಂತೊಂದು ಕೋಟಿ ಪೊನ್ನನೊಂದು ಕವಡಿಕೆಯಂ ಕುಡುವಂತೇನುಂ ಅಪೋಹಮಿಲ್ಲದೆ ಕೊಟ್ಟು" ಎಂಬ ವಾಕ್ಯದಲ್ಲಿ 'ಕವಡಿಕೆ' ಒಂದು ನಾಣ್ಯದ ರೂಪದಲ್ಲಿ ಬಳಕೆಯಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಬರುವ "ಕವಡಿಕೆಯುಂ ಕಾಚುಂ ಸಲ್ಗುಮೆ ಹೊನ್ನವೊಲೆಲ್ಲಿಯಾದೊಡಂ" ಎಂಬ ಮಾತಿನಲ್ಲಿ ಅದಕ್ಕಿದ್ದ ಅಲ್ಪಮೌಲ್ಯ ವ್ಯಕ್ತವಾಗುತ್ತದೆ. "ಕವಡಿಕೆ ನೆತ್ತ ಮೊದಲಾದ ನಾಟಕದ ಮೊಗರಂಗವೆನಿಪ ಕವಾಟ ತೆಯದು" ಎಂಬ ಕುಮಾರವ್ಯಾಸನ ಮಾತಿನಿಂದ ಅದೊಂದು ಬಗೆಯ ಆಟವೆಂಬುದೂ ತಿಳಿಯುತ್ತದೆ. ಕವಡೆಯ ಬೆನ್ನ ಬಣ್ಣದಿಂದ ಅವುಗಳನ್ನು ಐದು ರೀತಿಯಲ್ಲಿ ವಿಂಗಡಿಸುತ್ತಿದ್ದರಂತೆ: ಸುವರ್ಣಛಾಯೆ-ಸಿಂಹಿ, ಧೂಮ್ರವರ್ಣ-ವ್ಯಾಘ್ರಿ, ಹಳದಿ-ಮೃಗಿ, ಬಿಳಿಪು-ಹಂಸಿ ಹಾಗೂ ಉದ್ದವಾದುದು ವಿದಂತ.
=====
ಕಳ್ಳ: ಇದು ದ್ರಾವಿಡ ಪದ; ಕಳ್ ಎಂಬ ಧಾತುವಿಗೆ 'ಅ' ಎಂಬ ಪ್ರತ್ಯಯ ಹತ್ತಿ ರೂಪಿತವಾದುದು. ಕಳ್ ಎಂಬ ಧಾತುವಿಗೆ ಅಪಹರಿಸು ಎಂಬ ಅರ್ಥವಿದೆ. ತಮಿಳು ಮತ್ತು ಮಲಯಾಲಂಗಳಲ್ಲಿ ಕಳ್ಳ ಎಂಬ ರೂಪಲ್ಲಿಯೂ, ತುಳುವಿನಲ್ಲಿ ಕಳುವೆ ಎಂಬ ರೂಪದಲ್ಲಿಯೂ ಈ ಶಬ್ದ ಬಳಕೆಯಲ್ಲಿದೆ. ಕಳ್ಳತನ ಮಾಡುವವನು ಎಂಬುದನ್ನು ಸೂಚಿಸುವ ಈ ಶಬ್ದ ಹಳೆಯದು: ”ಎಲ್ಲಮಂ ಕಳ್ಳರ್ ಕೊಂಡುಪೋದರ್" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಇದು ಕಳ ಎಂಬ ರೂಪದಲ್ಲಿಯೂ ಪ್ರಾಚೀನ ಕಾವ್ಯ-ಶಾಸನಗಳಲ್ಲಿ ದೊರೆಯುತ್ತದೆ. ಇದರ ಭಾವನಾಮರೂಪವೇ ಕಳವು ಅಥವಾ ಕಳ್ಳತನ. ನಿಷೇಧಾರ್ಥದಲ್ಲಿ ಕಳ್ಳದ ಎಂಬ ರೂಪವೂ ದೊರೆಯುತ್ತದೆ: ಪಂಚಾಣುವ್ರತಗಳಲ್ಲಿ ಒಂದಾದ ಅಸ್ತೇಯವನ್ನು 'ವಡ್ಡಾರಾಧನೆ'ಯು 'ಕಳ್ಳದ ವ್ರತ' ಎನ್ನುತ್ತದೆ. ಕಳ್ಳಕಾಕ ಎಂಬ ಶಬ್ದವೂ ಇದೆ, 'ಕಳ್ಳನ ಮಗ' ಅಥವಾ 'ಕಳ್ಳ ನನ್ನ ಮಗ' ಎಂಬುದು ಒಂದು ಸಾಮಾನ್ಯ ಬೈಗುಳ.
ಕಳ್ಳ ಎಂಬ ವಿಶೇಷಣವು ಮೋಸದ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಕಳ್ಳಗಂಡಿ ಎಂದರೆ ಗೊತ್ತಾಗದಂತೆ ಹೋಗಬಹುದಾದ ಕಳ್ಳಬಾಗಿಲು. ಹಾಗೆಯೇ ಕಳ್ಳಜ್ವರ ಎಂಬುದು ನಟನೆಯ ಜ್ವರ ಎಂಬರ್ಥವನ್ನು ಸೂಚಿಸುತ್ತದೆ. ಕಳ್ಳಕಿಂಡಿ ಎಂದರೆ ಕಳ್ಳರು ಹಾಕಿದ ಕನ್ನ ಎಂದು. ಕನ್ನ ಹಾಕಿ ಕದಿಯುವವನನ್ನು "ಸುಕುಮಾರಚರಿತೆ'ಯಲ್ಲಿ ಕನ್ನಗಳ್ಳ ಎಂದು ಕರೆದಿದೆ. ಕದ್ದಿರುವ ವಸ್ತುವನ್ನು ಕಳ್ಳಮಾಲು ಎನ್ನುವುದು ಸಾಮಾನ್ಯ. ಅನಧಿಕೃತ ಮಾರಾಟ ಮಾಡುವ ಜಾಗವೇ ಕಳ್ಳಪೇಟೆ ಅಥವಾ ಕಳ್ಳಸಂತೆ. ಕೆಲವೆಡೆ ಕಳ್ಳಕುಪ್ಪಸ ಎಂಬ ಮಾತನ್ನು ಬಳಸುತ್ತಾರೆ: ಮೊದಲ ಸಲ ಬಸಿರಿಯಾದ ಮಗಳಿಗೆ ತವರಿವನರು ಗುಟ್ಟಾಗಿ ಕುಪ್ಪಸ ಕೊಡುವ ಶಾಸ್ತ್ರವನ್ನಿದು ಸೂಚಿಸುತ್ತದೆ.
ಅಧಿಕೃತವಲ್ಲದ ನಾಣ್ಯಗಳನ್ನು ಹಿಂದಿನ ಕಾವ್ಯಗಳು ಕಳ್ಳವಣ ಎಂದು ಕರೆಯುತ್ತವೆ. ಬಸವಣ್ಣನ ಒಂದು ವಚನದಲ್ಲಿ "ಕಳ್ಳನಾಣ್ಯ ಸಲುಗೆಗೆ ಸಲ್ಲದು" ಎಂಬ ವಾಕ್ಯವಿದೆ. ದ್ರಮ್ಮ ಎಂಬುದು ಹಿಂದೆ ಪ್ರಚಲಿತವಿದ್ದ ಒಂದು ನಾಣ್ಯ. ಒಂದು ವಚನದಲ್ಲಿ "ಹಾದರಕ್ಕೆ ಹೋದರೆ ಕಳ್ಳದ್ರಮ್ಮವಾಯಿತ್ತು" ಎಂಬ ಮಾತಿದೆ. ದ್ರಮ್ಮ ಎಂಬ ನಿರ್ದಿಷ್ಟ ನಾಣ್ಯದ ಅನಧಿಕೃತ ರೂಪವನ್ನಿದು ಸೂಚಿಸುತ್ತದೆ.
=====
ಕಳ್ಳು: ಕಳ್ ಎಂಬುದು ಇದರ ಮೂಲ ರೂಪ; ಇದೊಂದು ನಾಮಪದ. ಹೆಂಡ ಎಂಬುದು ಇದರರ್ಥ. ಈ ಶಬ್ದ ತಮಿಳಿನಲ್ಲಿ ಕಳ್ ಎಂದೂ, ತೆಲುಗಿನಲ್ಲಿ ಕಲ್ಲು ಎಂದೂ, ಮಲಯಾಳಂನಲ್ಲಿ ಕಳ್, ಕಳ್ಳು ಎಂದೂ, ತುಳುವಿನಲ್ಲಿ ಕಲಿ ಎಂದೂ ಬಳಕೆಯಲ್ಲಿದೆ. ನಾಗವರ್ಮನ 'ಆಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಮದಿರೆ ಸುರೆ ಕಳ್ಳುಂ" ಎಂಬ ಸಮಾನಾರ್ಥಕಗಳನ್ನು ಕೊಡಲಾಗಿದೆ. ಕಳ್ಗುಡಿ ಎಂದರೆ ಹೆಂಡ ಕುಡಿ ಎಂದು. "ಕಳ್ಗುಡಿದವರಂದಂ ಇಂತು ಸಿರಿ ಸಾರ್ತರೆ ಸಾರ್ವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಹೆಂಡ ಕುಡಿಯುವವನು 'ಕಳ್ಕುಣಿ' ("ಖಳನುಂ ಕಳ್ಕುಣಿಯುಂ ಘುಳುಮ್ಮನಿೞಿಗುಂ ಶ್ವಭ್ರಾಂತಮಂ ತಾಪಿನಂಕ" - ಪಂಪನ 'ಆದಿಪುರಾಣ'), ಕಳ್ಗುಡಿಹ ("ಶುಂಡಾಪನಂ ಕಳ್ಗುಡಿಹಕ" 'ಆಭಿಧಾನ ವಸ್ತುಕೋಶ') ಅಥವಾ 'ಕಳ್ಗುಡುಕಿ' ("ಕಳ್ಗುಡಿಕಿಗಳುಂ ನಿರ್ದಯರುಂ ಮಾಡದ ಪಾಪಮಿಲ್ಲ_ - ನಯಸೇನನ 'ಧರ್ಮಾಮೃತ'). ಹೆಂಡ ಕುಡಿಯುವ ಹವ್ಯಾಸವನ್ನು ಕೆಲವೆಡೆ 'ಕಳ್ಗುಡುಹಿತನ' ಎಂದು ಕರೆಯಲಾಗಿದೆ. ಕಳ್ಳನ್ನು ಮಾಡಿ ಮಾರುವವನನನ್ನು 'ಕಳ್ಳವಳ' ಎನ್ನುತ್ತಿದ್ದರು ("ಆ ಪೊಳಲ ಕಳ್ಳವಳನೊರ್ವಂಕ" - ಕರ್ಣಪಾರ್ಯನ 'ನೇಮಿನಾಥ ಪುರಾಣ'). ಮತ್ತೊಂದು ಕಾವ್ಯದಲ್ಲಿ (ನೇಮಿನಾಥನ 'ಅರ್ಧನೇಮಿ ಪುರಾಣ') 'ಕಳ್ಳಸಿಗ' ಎಂದು ಕರೆಯಲಾಗಿದೆ. ಅಂಥ ಹೆಂಗಸನ್ನು 'ಕಳ್ಳವತಿ' ಎಂದು ಅದೇ ಕಾವ್ಯದಲ್ಲಿ ಕರೆದಿದೆ ("ಕೌಶಂಬಿಯ ಕಳ್ಳವತಿ ಮಂಡೋದರಿಯ ಮಗ"). ಹೆಂಡ ಮಾರುವವರ ಕೇರಿಯನ್ನು 'ಕಳ್ಳಸಿಗಗೇರಿ' ಎಂದು ಕರೆಯುತ್ತಿದ್ದರು ("ಕಳ್ಳಸಿಗಗೇರಿಯೊಳಗಣ ಕಳ್ಳೆಲ್ಲಮಮಂ ಎಱೆದು ತರಿಸಿ"  - ನಯಸೇನನ 'ಧರ್ಮಾಮೃತ').
ಪಂಪ ತನ್ನ 'ಪಂಪಭಾರತ'ದಲ್ಲಿ "ಮುನೂಱಱುವತ್ತು ಜಾತಿ ಕಳ್ಗಳಂ" ಎನ್ನುತ್ತಾನೆ. ಬಾಹುಬಲಿ ಎಂಬ ಕವಿಯು ತನ್ನ 'ಧರ್ಮನಾಥಪುರಾಣ'ದಲ್ಲಿ "ಸಿರಿ ಸಿಂಬಿ ತಂಪುಗಂ ಬಬ್ಬರಿ ಗಂಗಾಸಾಗರಂ ಸುರಾಳಂ ಸೋಮಂ ವರವಾಣಿ ಮಾಳವೋದರಿ ಮರವಟ್ಟಿಗೆಯೆಂಬ ಕೆಲವು ಪೆಸರಿನ ಕಳ್ಳಂ" ಉಲ್ಲೇಖಿಸುತ್ತಾನೆ. ಹೆಂಡದ ಮಾರಯ್ಯನೆಂಬೊಬ್ಬ ವಚನಕಾರನು ಹೆಂಡವಿಳಿಸುವ ರೂಪಕದ ಮೂಲಕವಾಗಿಯೇ ತನ್ನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುತ್ಥಾನೆ.
=====
ಕಾಂಚಾಣ: ಈ ಶಬ್ದ ಕಾಂಚನ ಎಂಬ ಸಂಸ್ಕೃತ ಶಬ್ದದ ಕನ್ನಡೀಕರಣಗೊಂಡ ರೂಪ ಅಥವಾ ತದ್ಭವ. ಚಿನ್ನ ಎಂಬುದು ಮೂಲಾರ್ಥ; ಆದರೆ ಹಳದಿ ಬಣ್ಣದ ಬಹು ವಸ್ತುಗಳಿಗೆ ಅನ್ವಯಿಸುವಂತೆ ಇದರ ಅರ್ಥ ವಿಸ್ತಾರಗೊಂಡಿದೆ: ಸಂಸ್ಕೃತದಲ್ಲಿಯೇ ಕಾಂಚನ ಎಂಬುದಕ್ಕೆ ಸಂಪಿಗೆ, ದತ್ತೂರಿ, ನಾಗಕೇಸರ, ಪುನ್ನಾಗ ಮುಂತಾದ ವಿವಿಧ ಮರಗಳು ಮತ್ತು ಹೂವು ಎಂಬರ್ಥ ಪ್ರಾಪ್ತವಾಗಿದೆ. ಚಿನ್ನದ ಡಾಬನ್ನು ಕಾಂಚೀ ಕಾಂಚೀಲತೆ, ಕಾಂಚೀಪಟ್ಟಿಕೆ, ಕಾಂಚೀದಾಮ ಮುಂತಾದ ಹೆಸರುಗಳಿಂದ ಕನ್ನಡ ಕಾವ್ಯಗಳೂ ಕರೆಯುತ್ತವೆ. ಸೀತಾರಾಮರನ್ನು ಆಕರ್ಷಿಸಲು ಮಾರೀಚನು ಬಂದುದು 'ಕಾಂಚನಮೃಗ'ದ ರೂಪದಲ್ಲಿ. ಕಾಂಚನವರ್ಣ ಎಂದರೆ ಚಿನ್ನದ ಬಣ್ಣ ಅಂದರೆ ಹಳದಿ. ಆ ಲೋಹದ ಆಕರ್ಷಣೆಯೇ ಅದರ ಬಣ್ಣವಾದ್ದರಿಂದ ಚಿನ್ನವನ್ನು 'ಸುವರ್ಣ' ಅಥವಾ ಸ್ವರ್ಣ ಎಂದು ಕರೆದರು. ಅತ್ಯಂತ ಶ್ರೇಷ್ಠವಾದ ಚಿನ್ನದ ಪರ್ವತವೆಂದು ಹೇಳಲಾದ ಮೇರುವನ್ನು ಕಾಂಚನಾದ್ರಿ ಎಂದೇ ಕಾವ್ಯಗಳು ಕರೆಯುತ್ತವೆ. ಹೊನ್ನಿನ ಬಣ್ಣದ ಬಾಳೆಯನ್ನು 'ಮಲ್ಲಿನಾಥ ಪುರಾಣ'ವೆಂಬ ನಾಗಚಂದ್ರನ ಕಾವ್ಯದಲ್ಲಿ 'ಕಾಂಚನಕದಳೀ' ಎಂದು ಕರೆಯಲಾಗಿದೆ.
ಕಾಂಚಾಣ ಎಂಬುದು ಕನ್ನಡದಲ್ಲಿ ದುಡ್ಡು ಎಂಬರ್ಥದಲ್ಲಿ ಬಳಕೆಯಾಗಿದೆ. ಕನ್ನಡ ನಾಡಿನಲ್ಲಿ ಹಿಂದೆ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿದ್ದುವು; ಗದ್ಯಾಣ, ಪೊನ್, ವರಹ ಮುಂತಾದ ಹೆಸರಿನಲ್ಲಿ ಬಕೆಯಲ್ಲಿದ್ದುವು; ಹೀಗಾಗಿ ಆ ಶಬ್ದಕ್ಕೆ ದುಡ್ಡು ಎಂಬ ಅರ್ಥ ಬಂದಿದೆ. ಇದು ತದ್ಭವ ಶಬ್ದವಾದರೂ ಅದನ್ನು ಸಂಸ್ಕೃತ ಶಬ್ದವೆಂಬಂತೆ "ಕಾಂಚಾಣಂ ಕಾರ್ಯಸಿದ್ಧಿಃ" ಎಂಬ ವಾಕ್ಯವನ್ನು ಮಾಡಿಕೊಂಡು, ದುಡ್ಡು ಕೊಟ್ಟರೆ (ಲಂಚವಿತ್ತರೆ) ಏನು ಬೇಕಾದರೂ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಮಾಡಲು ಕೆಲವರು ತಮಾಷೆಯಾಗಿ ಹೇಳುತ್ತಾರೆ. ಹಣಕ್ಕೆ ಅರ್ಥಾತ್ ಹಣವಂತರಿಗೆ ಭಾವನೆಗಳಿಲ್ಲ ಎಂದು ಸೂಚಿಸಲು 'ಕುರುಡು ಕಾಂಚಾಣ' ಎಂಬ 'ನುಡಿಗಟ್ಟು' ಬಂದಿದೆ. ಬೇಂದ್ರೆಯವರ ತುಂಬ ಪ್ರಸಿದ್ಧವಾದ ಪದ್ಯದ ಹೆಸರೇ 'ಕುರುಡು ಕಾಂಚಾಣ'. ನಾನಾ ನೆಲೆಗಳಲ್ಲಿ ವ್ಯಕ್ತವಾಗುವ ಹಣವಂತರ ಸೊಕ್ಕನ್ನು ಕಂಡು ಕೆರಳುವ ಕವಿಯು "ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ ಹೆಗಲೊಳಗೆತ್ತೋ" ಎಂದು ಕರೆ ಕೊಡುತ್ತಾರೆ. ಕಾಂಚಾಣ ಪದದಲ್ಲಿನ ಣ ಮತ್ತು ಲೋಹದ ನಾಣ್ಯಗಳು ಬಿದ್ದಾಗ ಟಣ್ ಎಂದು ಸದ್ದುಮಾಡುವುದರಿಂದ ಝಣಝಣ ಎಂಬ ಅನುಕರಣಪದವೂ ಹಣವನ್ನು ಸೂಚಿಸುತ್ತದೆ.
=====
ಕಾಕತಾಳೀಯ: ತರ್ಕಶಾಸ್ತ್ರದಲ್ಲಿ ಹೇಳುವ ಅನೇಕ ಲೌಕಿಕ 'ನ್ಯಾಯ'ಗಳಲ್ಲಿ ಇದೂ ಒಂದು. ನ್ಯಾಯ ಎಂದರೆ ಎರಡು ವಸ್ತುಗಳ ನಡುವಣ ವಿಶಿಷ್ಟ ಸಂಬಂಧವೆಂದು ಸ್ಥೂಲವಾಗಿ ಹೇಳಬಹುದು. ಕಾಕತಾಳೀಯ ಎಂದರೆ ಆಕಸ್ಮಿಕ ಘಟನೆ ಎಂದರ್ಥ. ಇದರಲ್ಲಿ ಒಂದು ಪುಟ್ಟ ಕತೆಯೇ ಅಡಕವಾಗಿದೆ. ತಾಳವೃಕ್ಷದಿಂದ ಒಂದು ಹಣ್ಣು ಕೆಳಗೆ ಬೀಳುವ ಹೊತ್ತಿಗೆ ಸರಿಯಾಗಿ ಕಾಗೆಯೊಂದು ಅಲ್ಲಿಗೆ ಹಾರಿ ಬಂದಿತು, ಆ ಹಣ್ಣನ್ನು ಕಾಗೆಯು ತಿಂದಿತು. ಕಾಗೆ ಬರುವುದಾಗಲೀ ಹಣ್ಣು ಬೀಳುವುದಾಗಲೀ ಪೂರ್ವನಿಶ್ಚಿತ ಘಟನೆಗಳಲ್ಲ. ಆದರೆ ಎರಡೂ ಒಂದೇ ಹೊತ್ತಿಗೆ ಸಂಭವಿಸಿದವು. ಇದೇ ಕಾಕತಾಳೀಯ. ಇದನ್ನು ಕಾಕತಾಳನ್ಯಾಯ ಎಂಬ ಶಬ್ದದಿಂದಲೂ ಸೂಚಿಸಲಾಗುತ್ತದೆ.
ಕಾಕತಾಳೀಯ ಅಥವಾ ಕಾಕತಾಳನ್ಯಾಯ ಎಂಬ ಶಬ್ದಗಳು ಸಂಸ್ಕೃತ ಮೂಲದಿಂದ ಬಂದವು. ಆ ಭಾಷೆಯಲ್ಲಿ ಅವುಗಳ ರೂಪವು ಕ್ರಮವಾಗಿ ಕಾಕತಾಲೀಯ ಮತ್ತು ಕಾಕತಾಲನ್ಯಾಯ ಎಂದು. ಸಂಸ್ಕೃತ ಶಬ್ದಗಳು ಹೇರಳ ಸಂಖ್ಯೆಯಲ್ಲಿ ಕನ್ನಡ ಶಬ್ದಕೋಶದಲ್ಲಿ ಬಂದು ಸೇರಿಕೊಂಡಿವೆ. ಹಾಗೆ ಸೇರುವಾಗ ಸಂಸ್ಕೃತ ಶಬ್ದಗಳಲ್ಲಿ ಬರುವ 'ಲ' ಕಾರಕ್ಕೆ ಕನ್ನಡದಲ್ಲಿ 'ಳ'ಕಾರ ಬರುತ್ತದೆ. ಮಂಗಲ > ಮಂಗಳ, ಬಲ > ಬಳ, ಕಲಭ > ಕಳಭ ಇತ್ಯಾದಿ. ಹೀಗೆ ಸಂಸ್ಕೃತ ಶಬ್ದಗಳಲ್ಲಿನ ಲಕಾರಕ್ಕೆ ಕನ್ನಡದಲ್ಲಿ ಬರುವ ಳ ಕಾರವನ್ನು 'ಕ್ಷಳ' ಎಂದು ಹಳಗನ್ನಡ ವ್ಯಾಕರಣಕಾರರು ಕರೆಯುತ್ತಾರೆ. ಳ ವರ್ಣಕ್ಕೆ ಹತ್ತಿರವಾಗಿ ಉಚ್ಚಾರಗೊಳ್ಳುವ ಎರಡು ಬಗೆಯ ವರ್ಣಗಳು ಮೂಲತಃ ಕನ್ನಡದಲ್ಲಿಯೇ ಇವೆ: ಳ (ಇದನ್ನು ಱಳ ಎನ್ನುತ್ತಾರೆ) ಮತ್ತು ಳ (ಇದನ್ನು ಕುಳ ಎನ್ನುತ್ತಾರೆ). 'ೞ' ವರ್ಣದ ಉಚ್ಚಾರ ಹೇಗಿತ್ತೋ ನಮಗೆ ತಿಳಿಯದು. ಆದರೆ ಬರಬರುತ್ತ ಇವೆರಡೂ ಳ ಎಂಬಂತೆಯೇ ಉಚ್ಚಾರವಾಗತೊಡಗಿ ಈಗ ಒಂದೇ ಎನ್ನಿಸಿಬಿಟ್ಟಿತು. ೞ ಮತ್ತು ಳ ವರ್ಣಗಳ ಉಚ್ಚಾರ ಒಂದೇ ಎಂದು ಕ್ರಿಸ್ತಶಕ ಹದಿಮೂರನೆಯ ಶತಮಾನದ ಹರಿಹರಕವಿಯೇ ಹೇಳುತ್ತಾನೆ. ಆ ಕಾರಣದಿಂದ ಹಳಗನ್ನಡದಲ್ಲಿನ ೞ ಅಕ್ಷರ ಈಗ ಬಳಕೆಯಲ್ಲಿಲ್ಲ. ಬಾಳೆ, ಬಾೞೆ - ಇಂಬಿವುಗಳು ಹಳಗನ್ನಡದಲ್ಲಿ ಬೇರೆ ಬೇರೆ ಅರ್ಥಗಳನ್ನು ಹೊಂದಿದ್ದ ಬೇರೆ ಬೇರೆ ಪದಗಳು: ಮೊದಲನೆಯದು ಮೀನು ಎಂಬುದನ್ನೂ, ಎರಡನೆಯದು ಬಾಳೆಯ ಗಿಡ ಅಥವಾ ಹಣ್ಣು ಎಂಬುದನ್ನೂ ಸೂಚಿಸುತ್ತಿದ್ದವು. ಈಗಾದರೆ ಕನ್ನಡ ನಿಘಂಟುಗಳಲ್ಲಿ ಬಾಳೆ ಎಂಬ ಶಬ್ದಕ್ಕೆ ಈ ಎರಡು ಅರ್ಥಗಳೂ ಇವೆ ಎಂದು ಹೇಳುತ್ತವೆ.
*****
ಕಾಡು1: ಮುಖ್ಯ ದ್ರಾವಿಡ ಭಾಷೆಗಳಲ್ಲೆಲ್ಲ ಈ ರೂಪವೇ ಇರುವ ಈ ಶಬ್ದಕ್ಕೆ ಅಡವಿ ಎಂಬುದು ಅರ್ಥ. 'ಶಬ್ದಮಣಿ ದರ್ಪಣ'ವು ಕ್ರಿಯಾರ್ಥವನ್ನು ಕೊಡುವುದರ ಜೊತೆಗೆ "ಕಾಡು- .. .. ಅರಣ್ಯೇಚ" ಎಂದು ಹೇಳುತ್ತದೆ. "ವಿಯೋಗಿ ಜನಕ್ಕೆ ಬೇಟಮಂ ಬಳೆವುದು ನಾಡ ಕಾಡ ಬೆಳಸಿಂ ಬೆಳಸಾ ವಿಷಯಾಂತರಾಳದೊಳ್" ಎಂಬುದು 'ಪಂಪಭಾರತ'ದ ಮಾತು. "ಕೆಲವು ವಾಯಸಂಗಳ್ ಬಿಱಿತೋಡಿ ಕಾಡೊಳ್ಕೂಡಿರ್ದುವೆಲ್ಲಂ ಬಂದು" ಎಂಬುದು 'ಪಂಚತಂತ್ರ'ದಲ್ಲಿನ ಮಾತು. "ಕರುಬರಿದ್ದೂಂದೆ ಕಾಡೊಳ್ಳಿತು" ಎಂಬುದು 'ಜೈಮಿನಿ ಭಾರತ'ದಲ್ಲಿನ ವಾಕ್ಯ.
ಕಾಡಿನಲ್ಲಿನ ಪ್ರಾಣಿಗಳು ಕಾಡುಮೃಗಗಳು. "ಅರಸಂ ಕಾಡಾನೆಯಂ ಪಿಡಿಯಲೈದಿ" ಎಂಬ ಮಾತು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. "ಬಾಯ ಚೆಲ್ವನಪ್ಪ ಬನಮಂ ಕಾಡಾನೆ ಪೊಕ್ಕಂತೆ" ಎಂಬುದು 'ಪಂಪಭಾರತ'ದಲ್ಲಿನ ಗಾದೆ. ಕೃಷಿ ಮಾಡದೆ ತಾವಾಗಿ ತಾನಾಗಿ ಬೆಳೆದ ಸಸ್ಯಗಳು ಕಾಡುಸಸ್ಯಗಳು. ಕಾಡರಳೆ, ಕಾಡಮಾದಲ, ಕಾಡಮಲ್ಲಿಗೆ, ಕಾಡವರೆ ಇತ್ಯಾದಿ. "ವನಪೂರ ಬೀಜಕಃ-ಕಾಡಮಾದಲ" ಎನ್ನುತ್ತದೆ 'ಓಷಧಿಕೋಶ'. "ಕಾಡವರೆ ಮಣಲು ಸುಣ್ಣಮೀ ವೀಡಿತ ವಜ್ರೋಪಮಾನ ತಿವುರೆನಿಸಿರ್ಕುಂ" ಎಂದು 'ಖಗೇಂದ್ರಮಣಿದರ್ಪಣ'ವು ವಿಷಚಿಕಿತ್ಸೆಯ ಸಂದರ್ಭದಲ್ಲಿ ಹೇಳುತ್ತದೆ. "ಹಿತ್ತಿಲಲ್ಲಿ ಬೆಳೆದಿದ್ದಾವೆ ಕಾಡು ಗಿಡಗಂಟಿ ಮೆಳೇ" ಎಂಬುದು ಗಂಗಾಧರ ಚಿತ್ತಾಲರ ಕವನವೊಂದರ ಸಾಲು.
ಕಾಡು-ನಾಡು ಒಂದು ಬಗೆಯ ವಿರುದ್ಧಾರ್ಥದ ಜೋಡಿಶಬ್ದ. ಕಾಡು ಎಂಬುದು ಒರಟು, ಅನಾಗರಿಕ ಎಂಬ ಅರ್ಥವನ್ನು ಹೊಂದುತ್ತದೆ. ಅನಾಗರಿಕ ಪರಾಕ್ರಮವನ್ನು 'ಶ್ರೀ ರಾಮಾಯಣ ದರ್ಶನಂ'ನಲ್ಲಿ 'ಕಾಡದಟು' ಎನ್ನಲಾಗಿದೆ ("ನಮಗೀಗಳೇಕೀ ಕಪಿಧ್ವಜರ ಕಾಡದಟಿನೊಂದು ಹಂಗು?"). ಕಾಡುಮನುಷ್ಯನನ್ನು ಮುದ್ದಣನ 'ರಾಮಾಶ್ವಮೇಧ'ವು ಕಾಡಾಡಿ ಎನ್ನುತ್ತದೆ: "ಕಾಡಾಡಿರಾಯನೊಂದು ಗೆಯ್ಮೆಯಂ."
ಭೂಮಿ ಎಂಬ ಅರ್ಥವೂ ಈ ಶಬ್ದಕ್ಕಿದೆ. "ಐವತ್ತು ಮತ್ತರ್ ಕೆಸುಕಾಡುಂ ಕೀೞ್ಕೆಱೆ ಮೂವತ್ತಿರ್ಮಡಿ ಕಾಡುಂ" ಎಂಬ ಮಾತು ಒಂಬತ್ತನೆಯ ಶತಮಾನದ ಶಾಸನವೊಂದರಲ್ಲಿ ಬಂದಿದೆ. ಇಲ್ಲಿನ ಕೆಸುಕಾಡು ಎಂಬುದಕ್ಕೆ ಕಿಸುಕಾಡು ಅಥವಾ ಕಿಸುಗಾಡು (ಕೆಚ್ಚನೆಯ ಕಾಡು) ಎಂಬ ಪರ್ಯಾಯ ರೂಪವೂ ಇದೆ: "ಕಿಸುಗಾಡ ನೆಲಂಗಳ್ ಎಳದಳಿರ ಬಣ್ಣಮಂ ಕೆಯ್ಕೊಂಡು" ('ಪಂಪಭಾರತ'). 'ಕಾಡಾರಂಬ' ಅಥವಾ 'ಕಾಡಾರಂಭ' ಎಂಬುದು ಕುಷ್ಕಿ ಜಮೀನಿಗೆ ಅನ್ವಯಿಸುತ್ತಿದ್ದ ಹೆಸರು: "ಚತುಸ್ಸೀಮೆವೊಳಗಾದ .. .. ಕಾಡಾರಂಭ ನೀರಾರಂಭ"ಗಳ ಪ್ರಸ್ತಾಪ ಶಾಸನವೊಂದರಲ್ಲಿದೆ. (ನೀರಾರಂಭ ಎಂದರೆ ನೀರಾವರಿ). ಇವುಗಳ ಮೇಲಿನ ತೆರಿಗೆಯನ್ನೂ ಈ ಹೆಸರುಗಳಿಂದಲೇ ಕರೆಯುತ್ತಿದ್ದರೆಂಬುದಕ್ಕೂ ಶಾಸನಾಧಾರಗಳಿವೆ: "ಬಾಲಗೆರೆ ಮಗ್ಗದೆರೆ ಕಾಡಾರಂಬ ನೀರಾರಂಬ" ಎಂಬುದು ಹದಿನೈದನೆಯ ಶತಮಾನದ ಶಾಸನವೊಂದರ ಪ್ರಯೋಗ.
=====
ಕಾಡು2: ಕಾಡು ಎಂಬ ಧಾತುವಿಗೆ ಪೀಡಿಸು ಎಂಬ ಅರ್ಥವಿದೆ. 'ಶಬ್ದಮಣಿದರ್ಪಣ'ವು "ಕಾಡು-ಅವಹೇಳನೇ" ಎನ್ನುತ್ತದೆ. "ಪೆಂಡತಿಯಾಗೆಂದು ಕೈಯಂ ಪಿಡಿದು ಕಾಡುತ್ತಿರ್ಪನ್ನೆಗಂ" ಎಂಬುದು 'ವಡ್ಡಾರಾಧನೆ'ಯ ಮಾತು. "ಕೋಡಗಂ ಱೋಡಾಡಿ ಕಾಡುರ್ತಿರ್ಪುದುಂ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ಮಾತು. "ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು" ಎಂಬುದು ಬಸವಣ್ಣನ ಮಾತು. ಇನ್ನೊಂದು ಕಡೆ "ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ" ಎಂಬ ಅವನದೇ ಮಾತಿದೆ. "ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ" ಎಂದು ಅಲ್ಲಮ ಹೇಳುತ್ತಾನೆ. "ಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ" ಗೋಪಾಲಕೃಷ್ಣ ಅಡಿಗರ 'ನನ್ನ ಅವತಾರ' ಕವನದ ಸಾಲು.
'ಕಾಡು' ಶಬ್ದದ ನಾಮರೂಪವೇ ಕಾಟ. ತೊಂದರೆ ಅಥವಾ ಪೀಡೆ ಎಂಬುದು ಈ ಶಬ್ದದ ಅರ್ಥ. "ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕಂ ಅಳ್ಕದ" ಎಂದು 'ಪಂಪಭಾರತ'ದಲ್ಲಿದೆ.  "ನರಿಯ ಕಾಟಕ್ಕೆ ಬೇಸತ್ತುವೊಂದು ದಿವಸಮಾ ನರಿಯಂ ಕೊಲಲುಪಾಯಮಂ ಕಂಡು" ಎಂಬ ಮಾತು 'ಪಂಚತಂತ್ರ'ದ್ದು.
ಕಾಟ ಎಂಬುದು ಒಂದು ಕ್ಷುದ್ರದೈವದ ಹೆಸರು. "ವರಮೀಗುಮೆ ಮೈಲಾರಂ ಕೇತಂ ಕಾಟಂ ಮಾರಿಗೆ ಮಸಣಿಗೆಯೆನಿಪ್ಪ ಕೊೞೆದೆಯ್ವಂಗಳ್" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯ ಪ್ರಶ್ನೆ. ಇದನ್ನು ವ್ಯಕ್ತಿನಾಮವಾಗಿಯೂ ಬಳಸುತ್ತಿದ್ದರು. 'ಶಬ್ದಮಣಿದರ್ಪಣ'ದಲ್ಲಿ "ಅಂಕಿತನಾಮಕ್ಕೆ-ಕಾಟಂ, ಕಸವಂ, ದೂಡಿಗಂ" ಎಂದು ಉದಾಹರಣೆಗಳನ್ನು ಕೊಟ್ಟಿದೆ. ಪ್ರಾಯಶಃ ಇದರ ಮತ್ತೊಂದು ರೂಪ 'ಕಾಟುಗ'. "ಕಾಟುಗ ಕೆತ್ತುಗ ಪೋಲುಗ ಎಂಬುದು ಎನ್ನ ಹೆಸರು" - ಈ ಸಾಲು ಬಸವಣ್ಣನ ಒಂದು ವಚನದ್ದು. 'ಕಾಟಿ' ಎಂಬುದು ಸ್ತ್ರೀ ಕ್ಷುದ್ರದೇವತೆ: "ಹೂಂಕೃತಿಗೈವ ಭೈರವಂ ನೊಸಲುಗಣ್ಣನಾಳ್ವ ಚೌಡೇಶ್ವರಿ ಕೂಂಕಿಱಿದಾರ್ವ ಕಾಟಿಯುಂ" ('ಪಾರ್ಶ್ವನಾಥಪುರಾಣ').
ಕಾಟಕ ಎಂದರೆ ಕಾಟ ಕೊಡುವವನು: "ಕೌರವರ್ ಕಾಟಕರ ಸೊಲ್ಲುಗಳ್ಕೇಳ್ದು" ಎಂಬ ಮಾತು 'ತುರಂಗಭಾರತ'ದಲ್ಲಿದೆ. ಕಾಟಕ ಎಂದರೆ ಬೇಟೆಗಾರ ಎಂಬರ್ಥವೂ ಇದೆ; ಕಾಟನಾಯಕ ಎಂಬ ಹೆಸರು ಸಾಮಾನ್ಯ; ಹಾಗೆಯೇ 'ಕಾಟಣ್ಣ' ಬೇಡರ ದೇವತೆ. ಕಾಟಕೊಡುವ ಸ್ವಭಾವವೇ 'ಕಾಟಕತನ'. 'ಕಾಟಕಾಯಿ' ಎಂದರೆ ಕೊಳ್ಳೆ ಅಥವಾ 'ದರೋಡೆ': "ಆ ತುದಿಯಿನೀ ತುದಿವರಂ ಕಾಟಕಾಯಿಗಳನೆಬ್ಬಿಸದೆ ಬಿಡುವನೇನು" ಎಂಬುದು ಗೋವಿಂದ ಪೈ ಅವರ 'ಗೊಲ್ಗೊಥ'ದ ಸಾಲು. 'ಕಾಟಾಚಾರ' ಎಂಬುದು ಕಾಟ ತಪ್ಪಿಸಿಕೊಳ್ಳಲು ಮಾಡುವ ಕೆಲಸ. ಕಾಟ ಶಬ್ದವನ್ನೊಳಗೊಂಡ ಇಂತಹ ಇನ್ನೂ ಅನೇಕ ಶಬ್ದಗಳಿವೆ.
=====
ಕಾಲು: ಇದೊಂದು ದ್ರಾವಿಡ ಪದವಾಗಿದ್ದು, ಕನ್ನಡ ತಮಿಳು ಮಲಯಾಳಂಗಳಲ್ಲಿ ಮೂಲರೂಪ ಕಾಲ್ ಎಂದೂ, ತೆಲುಗಿನಲ್ಲಿ ಕಾಲು ಎಂದೂ ತುಳುವಿನಲ್ಲಿ ಕಾರ್ ಎಂದೂ ಇದೆ. ಸಾಮಾನ್ಯವಾಗಿ, ಪ್ರಾಣಿಗಳ ಮೊಳಕಾಲಿನಿಂದ ಕೆಳಗಿನ ಭಾಗ ಎಂಬರ್ಥ ಈ ಶಬ್ದಕ್ಕಿದೆ. "ಕೈಕಾಲ್ ನಡೆನುಡಿಯುಳ್ಳ ಮನುಷ್ಯನಿಂದೆಂತುಂ ಕಾರ್ಯಮುಂಟು" (ದುರ್ಗಸಿಂಹನ 'ಪಂಚತಂತ್ರ') ಎಂಬುದರಲ್ಲಿ ಇದು ಸ್ಪಷ್ಟವಾಗಿದೆ. ನಡೆಯಲು ತೊಡಗುವ ಮಗುವಿಗೆ 'ಕಾಲು ಬಂತು' ಎನ್ನುವುದು ವಾಡಿಕೆ. ಮಂಚ, ಸ್ಟೂಲು, ಮೇಜು ಮುಂತಾದವುಗಳನ್ನು ಹೊತ್ತ ಮರದ ತುಂಡುಗಳನ್ನೂ ಕಾಲ್ ಎನ್ನುತ್ತಾರೆ ("ಪಗೆವರಂ ಎನ್ನ ಮಂಚದ ಕಾಲೊಳ್ ಕಟ್ಟಿದೆಂ" 'ಪಂಪಭಾರತ'). ಆದರೆ "ನಿಮ್ಮ ಕಾಲಂ ತೊಳವೆ" ಎಂಬ 'ವಡ್ಡಾರಾಧನೆ'ಯ ಪ್ರಯೋಗದಲ್ಲಿ ಇದಕ್ಕೆ ಪಾದವೆಂಬ ಅರ್ಥವಿದೆ. 'ಕಾಲೂರು' ಎಂದರೆ ನೆಲೆನಿಲ್ಲು ಎಂದರ್ಥ ("ಕಾರಮುಗಿಲೊಡ್ಡು ಕಾಲೂಱಿದಂತಿರ್ಪುದು" - ಜನ್ನನ 'ಅನಂತನಾಥ ಪುರಾಣ'). ಕಾಲನ್ನು ಪ್ರಾಣಿಗಳು ಮುಂದೆ ಹೋಗಲು ಬಳಸುವುದರಿಂದಾಗಿಯೋ ಏನೋ ಹರಿಯುವ ನದಿ ಹಳ್ಳ ಕಾಲುವೆಗಳಿಗೂ ಕಾಲ್ ಎಂಬರ್ಥ ಬಂತು ("ತೊಱೆ ಪೊರ್ದಿದ ಕಾಲ್ ತಾಂ ಕುಲ್ಯಾಹ್ವಂ" - 'ಅಭಿಧಾನ ವಸ್ತುಕೋಶ'). ಕಾಲ್ ಈಗಿನ ಕಾಲುವೆ.
ಕಾಲ್ಗಾಪು (ಕಾಲ್+ಕಾಪು) ಎಂದರೆ ಪದಾತಿ (ನಡೆಯುವ ಸೈನ್ಯ ಅಥವಾ ಸೈನಿಕ) ಎಂದರ್ಥ. ಕಾಲಾಳ್ ಎಂಬುದೂ ಇದೇ. ಹಳಗನ್ನಡದಲ್ಲಿ 'ಕಾಲ್ವಟ್ಟೆ' ಎಂದರೆ ಕಾಲು ದಾರಿ ("ಕಾಡೊಳಿರ್ದ ಕಾಲ್ವಟ್ಟೆಗಳೆಲ್ಲಂ ಎಯ್ದುವುವು ನೀರ್ನೆಲೆಯಂ" - 'ಸೂಕ್ತಿಸುಧಾರ್ಣವ'). ಇಂಗ್ಲಿಷಿನ ಫುಟ್‍ಪಾತ್ ಎಂಬುದಕ್ಕೆ ಈಗ ಸಂವಾದಿ. 'ಕಾಲಿಗೆ ಬೀಳು' ಎಂದರೆ ನಮಸ್ಕರಿಸು ಎಂದೂ, 'ಕಾಲುಹಿಡಿ' ಎಂದರೆ ಬೇಡಿಕೊ ಎಂದೂ ಅರ್ಥ. ಕಾಲಕಸ ಎಂದರೆ ಕೆಲಸಕ್ಕೆ ಬಾರದ್ದು ಎಂದರ್ಥ. 'ಕಾಲಿಗೆ ಬುದ್ಧಿ ಹೇಳು' ಎಂದರೆ ಪಲಾಯನ ಮಾಡು ಎಂದರ್ಥ.
ಪ್ರಾಣಿಗಳು ನಿಲ್ಲುವುದು ನಾಲ್ಕು ಕಾಲುಗಳ ಮೇಲೆ; ಹೀಗಾಗಿಯೋ ಏನೋ ಕಾಲು ಎಂಬುದಕ್ಕೆ ನಾಲ್ಕನೇ ಒಂದು ಭಾಗ ಎಂದೂ ಅರ್ಥ ಬಂದಿದೆ. "ಓದು ಕಾಲು ಬುದ್ಧಿ ಮುಕ್ಕಾಲು" ಎಂಬುದೊಂದು ಗಾದೆ. ಕಾಲ್ ಎಂದರೆ ಚಿಕ್ಕ ಎಂಬ ಅರ್ಥವೂ ಇದೆ; ಕಾಲೂರ್ ಎಂದರೆ ಸಣ್ಣ ಹಳ್ಳಿ: "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" (ಆಂಡಯ್ಯನ 'ಕಬ್ಬಿಗರ ಕಾವ').
=====
ಕುದುರು: ಕನ್ನಡದ ಈ ಶಬ್ದವು ಕಣಜ ಎಂಬರ್ಥದ ಸಂಸ್ಕೃತದ 'ಕೃದರ'ದ ತದ್ಭವ. ಕುದಿರ್, ಕುದಿರು ಕುದುರು ಮುಂತಾದ ರೂಪಗಳಲ್ಲಿ ಬಳಕೆಯಾಗಿರುವ ಇದರ ಅರ್ಥವು ಭಿನ್ನವಾಗಿದೆ. "ಕುಶೂಳಂ ಕುದಿರ್ ಅಱಿಗೆ" ಎನ್ನುತ್ತದೆ 'ಅಭಿಧಾನ ವಸ್ತುಕೋಶ'. ಬಿದಿರಿನ ತಟ್ಟಿಯನ್ನು ಗುಂಡಗೆ ಕಟ್ಟಿ ಮಣ್ಣು ಲೇಪಿಸಿದ ಕಣಜವೇ ಕುದುರು. "ಕುದುರನೇಸು ತೊಳೆದಡೆಯೂ ಕೆಸರು ಮಾಬುದೆ?" ಎಂಬ ಬಸವಣ್ಣನ ಪ್ರಶ್ನೆ ಇದನ್ನು ಸೂಚಿಸುತ್ತದೆ. ಕುದಿರ್ ಎಂಬುದಕ್ಕೆ ಗೋಡೆ ಎಂಬರ್ಥವೂ ಇದೆ: "ಕುದಿರೊಳ್ ಕಳ್ಳವನಿಕ್ಕಿಸಿ"  'ಯಶೋಧರ ಚರಿತೆ'). ದವಸವನ್ನು ಕುಟ್ಟುವಾಗ ಒರಳಿನಿಂದ ಹೊರಚೆಲ್ಲದಂತೆ ಇಡುತ್ತಿದ್ದ ಬಿದಿರು ಅಥವಾ ಮರದ ಸುತ್ತು ಕುದುರು. ಹಗ್ಗದ ಸಿಂಬೆಯನ್ನೂ ಕುದಿರು ಎಂಬ ಶಬ್ದ ಸೂಚಿಸುತ್ತದೆ. ಕಣ್ಣ ಕುದುರು ಎಂಬ ಸಮಾಸದಲ್ಲಿನ ಕುದುರು ಶಬ್ದಕ್ಕೆ ಕುಳಿ ಎಂಬ ಅರ್ಥವಿದೆ. ಕುದುರು ಎಂಬುದನ್ನು ನದಿಯ ಪಾತ್ರ ಎಂಬರ್ಥದಲ್ಲಿ ಕುವೆಂಪು 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಬಳಸುತ್ತಾರೆ ("ಕೋಟಿ ಕಣ್ಣುಗಳೊಡ್ಡಿದೊಂದು ಕುದುರಿಗೆ ಕೆಡೆದು"). ತುಳುವಿನಲ್ಲಿ ಈ ಶಬ್ದಕ್ಕೆ ಸಣ್ಣದ್ವೀಪ ಎಂಬರ್ಥವಿದೆಯಂತೆ. ಕನ್ನಡದಲ್ಲೂ ಇದರ ಬಳಕೆಯಿದೆ. ಒರಳಿನ ಸುತ್ತ ಇರುವ ಕುದುರು ಎಂಬುದು ಇದರಿಂದ ಪ್ರೇರಿತವಾಗಿರಬಹುದೇ?
ನೆಲೆಯಾಗು ಎಂಬ ಕ್ರಿಯಾರ್ಥದಲ್ಲಿ ಕುದುರು ಎಂಬ ಶಬ್ದ ಬಳಕೆಯಾಗುತ್ತದೆ. ತಮಿಳಿನಲ್ಲಿದು ಕುದಿರ್ ಆದರೆ ತೆಲುಗಿನಲ್ಲಿ ಕುದುರು ಎಂದೂ ತುಳುವಿನಲ್ಲಿ ಕುದುರುಣಿ ಎಂದೂ ಆಗುತ್ತದೆ. ಸ್ತಿಮಿತಕ್ಕೆ ಬರು ಎಂಬರ್ಥವೂ ಇದಕ್ಕಿದೆ. "ವ್ಯಾಪಾರ ಕುದುರಿತು" ಎಂಬಂತಹ ಕಡೆ ಇದನ್ನು ಕಾಣಬಹುದು. ಒಪ್ಪಿಗೆಯಾಗು ಎಂಬರ್ಥವು "ಮದುವೆ ಕುದುರಿತು" ಎಂಬಂತಹ ಕಡೆಗಳಲ್ಲಿ ಕಾಣಬಹುದು.
ಕುದುರಿಸು ಎಂಬ ಪ್ರೇರಣಾರ್ಥದಲ್ಲಿಯೂ ಈ ಶಬ್ದದ ಬಳಕೆಯಿದೆ. ಏಳಿಗೆ ಹೊಂದು ಎಂಬರ್ಥ ಇದರದ್ದು. 'ವಿದ್ಯಾಗಳಲ್ಲಿ ಆಸಕ್ತಿ ಕುದುರಿಸುವುದು' ಎಂಬಂತಹ ಪ್ರಯೋಗವಿದೆ. 'ಕುದುರುಗೊಳಿಸು' ಎಂಬುದನ್ನು ಸರಿಹೊಂದಿಸು ಎಂಬರ್ಥದಲ್ಲಿ ಬಳಸುವುದುಂಟು. ಸರಿಹೊಂದುವ ಕ್ರಮವೇ 'ಕುದುರುಗೊಳ್ಳು'. ವ್ಯವಸ್ಥೆಗೊಳಿಸು ಎಂಬರ್ಥದಲ್ಲಿ 'ಕುದುರುಪಾಟು' ಎಂಬ ಸಮಾಸದ ಬಳಕೆಯಿದೆ.
=====
ಕುದುರೆ: ಈ ಶಬ್ದವು ತಮಿಳಿನಲ್ಲಿ ಕುದಿರೈ ಎಂದೂ, ಮಲಯಾಳಂನಲ್ಲಿ ಕುದಿರ ಎಂದೂ ತುಳುವಿನಲ್ಲಿ ಕುದುರೆ ಎಂದೂ ತೆಲುಗಿನಲ್ಲಿ ಕುದಿರ, ಗುಱ್ಱ ಎಂದೂ ಬಳಕೆಯಲ್ಲಿದೆ. ಕನ್ನಡದಲ್ಲಿಯೂ ಕುದಿರೆ ಎಂಬ ರೂಪವೂ ಬಳಕೆಯಲ್ಲಿತ್ತು. ಸಮಾನಾರ್ಥಗಳನ್ನು ಕೊಡುವ 'ಅಭಿಧಾನ ವಸ್ತುಕೋಶ'ವು "ತುರಗಂ ಯಯು ಸಪ್ತಿ ಹಯಂ ತುರಂಗಮಂ ವಾಜಿ ವಾಹಂ ಅಶ್ವಂ ತಾಕ್ಷ್ರ್ಯಂ ಹರಿ ಘೋಟಕ ಮರ್ವಾಖ್ಯಂ ತುರಂಗಮೆನೆ ಕುದಿರೆ" ಎಂದು ಹೇಳುತ್ತದೆ. "ಬಿಲ್ವಿಲ್ಲಳ್ಕುದುರೆ ಕುದುರೆಯೊಳ್ಕಿಟ್ಟ  ಅತಿತುಮುಲ ಕಾಳಗ ಪೆೞ್ಚಿ" ಎಂದು ಕ್ರಿಶ 800 ರ ಶಾಸನವೊಂದರಲ್ಲಿ ಬರುವ ಇದರ ಉಲ್ಲೇಖವೇ ಪ್ರಾಯಶಃ ಕನ್ನಡದಲ್ಲಿ ಅತ್ಯಂತ ಪ್ರಾಚೀನವಾದುದು. "ಕುದುರೆ ನಾಯ್ ಒಟ್ಟೆ ಉಡುವುಂ" ಎಂಬುದು 'ವಡ್ಡಾರಾಧನೆಯ' ಉಲ್ಲೇಖ. "ಕುದುರೆಯ ಪಂದಿಯ ವಿಷ್ಠೆ"ಯನ್ನು ಬಾಳೆಗೊನೆಯು ದೊಡ್ಡದಾಗಿ ಬೆಳೆಯಲು ಬಳಸಿಕೊಳ್ಳುವ ವಿಧಾನವನ್ನು 'ಲೋಕೋಪಕಾರ' ವಿವರಿಸುತ್ತದೆ.
ಈ ಶಬ್ದಕ್ಕೆ ಈ ಪ್ರಾಣಿಯಲ್ಲದೆ ಬೇರೆ ಬೇರೆ ಅರ್ಥಗಳೂ ಇವೆ. ಹಿಂದಿನ ಕಾಲದ ಚತುರಂಗ ಸೈನ್ಯದಲ್ಲಿ ಕುದುರೆಯೂ ಒಂದಾದುದರಿಂದ ಅದನ್ನನುಕರಿಸಿ ಆಡುವ ಆಟವಾದ ಚತುರಂಗ ಅಥವಾ ಚದುರಂಗದಲ್ಲಿ ಒಂದು ಕಾಯಿಯ ಹೆಸರು ಕುದುರೆ. ಬಂದೂಕಿನ ಕೀಲನ್ನೂ (ಟ್ರಿಗರ್) ಕುದುರೆ ಎನ್ನುತ್ತಾರೆ. ಹಸಿರು ಬಣ್ಣದ ಮಿಡಿತೆಯ ಪ್ರಭೇದವೊಂದನ್ನೂ ಕುದುರೆ ಎನ್ನುತ್ತಾರೆ. ಕುದುರೆಯಾಕಾರದ ರಚನೆಯನ್ನು ಸೊಂಟದಲ್ಲಿ ಧರಿಸಿ ನಡೆದಾಡುವುದೇ ಕೀಲುಕುದುರೆಯಾಟ.
ಕುದುರೆ ಶಬ್ದವನ್ನೊಳಗೊಂಡ ಅನೇಕ ನುಡಿಗಟ್ಟುಗಳಿವೆ. "ಕುದುರೆ ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು" ಎಂಬ ಬಸವಣ್ಣನ ಮಾತಿನಲ್ಲಿ ಇದು ಅಧಿಕಾರಸ್ತರು ಎಂಬ ಅರ್ಥ ಹೊಮ್ಮುತ್ತದೆ. ಕೋಟೆಯಲ್ಲಿ ಕುದುರೆ ನುಗ್ಗುವಷ್ಟು ಜಾಗವನ್ನು 'ಕುದುರೆಗಂಡಿ' ಎನ್ನುತ್ತಿದ್ದರು ("ನೀರಕಂಡಿಯ ಕುದುರೆಗಂಡಿಯ ತೆರಪುಗಳುಮಂ ವಸುಷೇಣಂ ಬಳಸಿ ನೋಡುತ್ತುಂ" - 'ಅನಂತನಾಥ ಪುರಾಣ'). ಕುದುರೆಗಳನ್ನು ಬೆಳೆಸುತ್ತಿದ್ದ ಜಾಗ ಕುದುರೆಗಾವಲ್ ("ಕುದುರೆಗಾವಲ ಸುಭಟರನಿತರೊಳೊದಗಿ ಬಂದು" 'ಜೈಮಿನಿ ಭಾರತ'). ಕುದುರೆಯಂತೆ ಹೆಜ್ಜೆಯಿಡುವುದನ್ನು 'ಧರ್ಮಾಮೃತ'ವು 'ಕುದುರೆಗಾಲಿಕ್ಕು' ಎನ್ನುತ್ತದೆ ("ಮೂರುಂ ದೇವರಂ ಬಂದಿಸುತ್ತುಂ ಮತ್ತಂ ಕುದುರೆಗಾಲಿಕ್ಕುತ್ತುಂ"). ಕುದುರೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕುದುರೆಯ ಸೇಸೆ' ಎನ್ನುತ್ತವೆ ("ಕುದುರೆಯ ಸೇಸೆ ಗ 5 ಪ 9 ಹಾ 3ಖ) (ಗ=ಗದ್ಯಾಣ, ಪ=ಪಣ, ಹಾ=ಹಾಗ ಎಂಬ ನಾಣ್ಯಗಳು). "ಏರಿದೇರಿದನೇರಿ ಗಾಳಿಗುದುರೆ ಸವಾರಿ ಸೂರ್ಯ ಸೇರಿ" ಎಂದು ಬೇಂದ್ರೆಯವರು ಬುದ್ಧನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುವಾಗ ಬಳಸುವ 'ಗಾಳಿಗುದುರೆ' ಅತೀವ ವೇಗವನ್ನು ಸೂಚಿಸುತ್ತದೆ. 'ಸಾವಿರ ಕುದುರೆ ಸರದಾರ, ಮನೆ ಹೆಂಡ್ತಿ ಕಾಸ್ದಾರ' ಎಂಬುದು ಜನಜನಿತವಾದ ಗಾದೆ.
=====
ಕುಪ್ಪೆ: ರಾಶಿ ಎಂಬರ್ಥದ ಈ ದ್ರಾವಿಡ ಶಬ್ದವು ತಮಿಳಿನಲ್ಲಿ ಕುಪ್ಪಂ, ಕುಪ್ಪೈ ಎಬ ರೂಪಗಳಲ್ಲಿಯೂ, ತೆಲುಗು ಮಲಯಾಳಂನಲ್ಲಿ ಕುಪ್ಪ ಎಂಬರೂಪದಲ್ಲಿಯೂ, ತುಳುವಿನಲ್ಲಿ ಕುಪ್ಪೆ, ಗುಪ್ಪೆ ರೂಪಗಳಲ್ಲಿಯೂ ಬಳಕೆಯಲ್ಲಿದೆ. "ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಸಮುದ್ರಂ ಮೇಱೆದಪ್ಪಿದುದುಮಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಕುಪ್ಪೆ ಎಂದರೇ ಕಸ ಎಂಬರ್ಥವೂ ಇತ್ತು: "ನೊಳವಿಂಗೆ ಕುಪ್ಪೆವರಮೇಂ ತ್ರಿಳೋಕಮೊಂದಾಗಿ ಬಂದು ತಾಗುವೊಡಕ್ಕುಂ" - ಜನ್ನನ 'ಅನಂತನಾಥ ಪುರಾಣ'. 'ಕುಪ್ಪೆಗೊಳ್' ಎಂದರೆ ರಾಶಿಯಾಗು ಎಂದರ್ಥ ನೇಮಿನಾಥನ 'ನೇಮಿನಾಥ ಪುರಾಣ'ದಲ್ಲಿನ "ಕೆಲದೊಳ್ ಕುಪ್ಪೆಗೊಂಡ ಮಾಣಿಕಂಗಳ ಬೆಳಗಿನೊಡನೆ ಬಾಳಕನ ಮೆಯ್ವೆಳಗು ದಳವೇಱಿ" ಎಂಬಲ್ಲಿ ಕಾಣಿಸುತ್ತದೆ. ಹಾಗೆಯೇ 'ಕುಪ್ಪು' ಎಂದರೆ ರಾಶಿಮಾಡು ಎಂದರ್ಥ: "ಕುಪ್ಪು-ಪಂಜೀಕರಣೇ" - 'ಶಬ್ದಮಣಿದರ್ಪಣ'. 'ಕುಪ್ಪಿಸು' ಎಂದರೆ ಒಟ್ಟುಗೂಡಿಸು, ರಾಶಿಮಾಡು ಎಂದರ್ಥ: "ಮುಂದೆ ಕುಪ್ಪಿಸಿ ಕುಪ್ಪೆಯಾಗಿ ಮಾನಸರಂ ತೆಗಿಸಿ ರಕ್ಕಸರ ಮುಂದೆ ರಾಸಿಗೆಯ್ದಂತೆ" 'ಲೀಲಾವತಿ'. 'ಕುಪ್ಪೆಗೆಯ್' ಎಂದರೂ ರಾಶಿಮಾಡು ಎಂದರ್ಥ: "ಪೊಮ್ಮಗದಪ್ಪುದು ಗುಡಿಸಿ ಕುಪ್ಪೆಗೆಯ್ವಂ ಬರ್ಪುದು" - ತಿರುಮಲಾರ್ಯನ 'ಚಿಕದೇವರಾಜವಿಜಯ'.
ಈ ಶಬ್ದವು 'ಗುಪ್ಪೆ' ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ. "ಅಡಕೆಯ ಗುಪ್ಪೆಯಷ್ಟಾಭರಣಂಗಳುಂಟು" ಎಂಬುದು 'ಭರತೇಶವೈಭವ'ದ ಮಾತು. "ಬೆಚ್ಚಗಿನ ನೆಲಕೆ ಕುಸಿದ ಮಣ್ಣಿನ ಗುಪ್ಪೆ ಹಳೆ ನೆಹುಗಳನೆಲ್ಲ ಹುಗಿದಿಟ್ಟುಕೊಂಡು ಬಿದ್ದಿತ್ತು ತಬ್ಬಲಿಯಾಗಿ" ಎಂಬಿವು ಗಂಗಾಧರ ಚಿತ್ತಾಲರ 'ಘಾಟಿ' ಕವನದ ಸಾಲುಗಳು. ರಾಶಿಯಾಗು ಎಂಬರ್ಥದಲ್ಲಿ 'ಗುಪ್ಪೆಗೊಳ್' ಎಂಬ ರೂಪ ಪ್ರಯೋಗವಾಗುತ್ತದೆ: "ಮಡುಗಟ್ಟಿದ ನೆತ್ತರ ಪೆರ್ವೊನಲಿಂ ಕುಪ್ಪಳಿಸಿ ಗುಪ್ಪೆಗೊಂಡ ದೊಂಡೆಗರುಳ್ಗಳಿಂ" ಎಂಬುದು ಷಡಕ್ಷರನ 'ರಾಜಶೇಖರ ವಿಳಾಸ'ದ ಮಾತು. ಗುಪ್ಪೆ ಎಂದರೆ ದಿಣ್ಣೆ ಎಂದರ್ಥವಿದೆ: ಮಕ್ಕಳು ಮರಳನ್ನು 'ಗುಪ್ಪೆಮಾಡಿ' ಆಡುವುದನ್ನು ನೋಡಬಹುದು. 'ಜಾರುಗುಪ್ಪೆ' (ಜಾರೋಬಂಡೆ) ಎಂಬ ಪದವನ್ನು ನೋಡಬಹುದು: "ಕಾಮನ ಬಿಲ್ಲಿನ ಜಾರುಗುಪ್ಪೆಯೊಳು ಜಾರುತ ಬಂದಳು ಮುಗಿಲಿಂದ" ಎಂಬುದು ಪುತಿನ ಅವರ 'ಅಹಲ್ಯೆ' ಗೀತನಾಟಕದ ಸಾಲು. ಕುಪ್ಪೆ ಅಥವಾ ಗುಪ್ಪೆ ಎಂಬುದು ಊರಿನ ಹೆಸರಿನ ಕೊನೆಯಲ್ಲಿ ಬರುವ ಅನೇಕ ನಿದರ್ಶನಗಳಿವೆ: ಬೆಂಗಳೂರಿನಲ್ಲಿ ಸೇರಿಹೋಗಿರುವ ಅತ್ತಿಗುಪ್ಪೆ, ಕತ್ತರಿಗುಪ್ಪೆ, ತಟ್ಟುಗುಪ್ಪೆ ಮುಂತಾದುವನ್ನು ನೋಡಬಹುದು. ಈ ಊರುಗಳು ತಮ್ಮ ಸುತ್ತಮುತ್ತಲಲ್ಲಿ ಎತ್ತರವಾದ ಜಾಗದಲ್ಲಿರುವುದನ್ನು ಗಮನಿಸಬಹುದು.
=====
ಕೂಡಲಸಂಗಮದೇವ: ಎಲ್ಲರಿಗೂ ಪರಿಚಿತವಾದ ಶಬ್ದವಿದು. ಬಸವಣ್ಣನ ವಚನಗಳ ಅಂಕಿತ ಅಥವಾ ಮುದ್ರಿಕೆ. ಇದರಲ್ಲಿ ಮೂರು ಭಾಗಗಳಿವೆ: ಕೂಡಲ್, ಸಂಗಮ ಹಾಗೂ ದೇವ. ಕೂಡಲ್ ಅಥವಾ ಕೂಡಲು ಎಂಬುದು ಕನ್ನಡ ಶಬ್ದ; ಉಳಿದೆರಡು ಸಂಸ್ಕೃತ ಶಬ್ದಗಳು. ಕೂಡಲ್ ಎಂಬುದಕ್ಕೆ ಷಷ್ಠೀವಿಭಕ್ತಿ ಪ್ರತ್ಯಯ ಸೇರಿಸಿದಾಗ ಆಗುವ ಕೂಡಲ ಅಥವಾ ಕೂಡಲಿನ ಸಂಗಮದೇವ ಎಂದೂ ಅರ್ಥವಾಗವಾಗಬಹುದು, ಕೂಡಲಸಂಗಮದ ಅಧಿವ ಎಂದೂ ಅರ್ಥವಾಗಬಹುದು. ಕೂಡು ಎಂದರೆ ಎಂದರೆ ಸೇರುವಿಕೆ, ಸಂಗಮ ಎಂದರೂ ಸೇರುವಿಕೆ; ಸಾಮಾನ್ಯವಾಗಿ ಎರಡು ಅಥವಾ ಹೆಚ್ಚಿನ ನದಿಗಳ ಸೇರುವಿಕೆಯನ್ನು ಕೂಡಲು ಎನ್ನುತ್ತಾರೆ. ಕೂಡಲಿ, ಕೂಡಲು ಕೂಡಲೂರ್ ಎಂಬ ಊರುಗಳಿವೆ. ಕೂಡುವುದರ ಭಾವವೇ ಕೂಟ. ಅನೇಕರು ಸೇರುವ ಸಂಸ್ಥೆ ಎಂಬ ಹೆಸರಿನಲ್ಲಿಯೂ ಈ ಶಬ್ದದ ಬಳಕೆಯಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿಗಳು ಸೇರುವ ಬಹು ಪ್ರಸಿದ್ಧ ಕ್ಷೇತ್ರವನ್ನು ಕೂಡಲಸಂಗಮ ಎಂದು ಕರೆಯುತ್ತಾರೆ. ಬಸವಣ್ಣನ ಆರಾಧ್ಯವ ಅಲ್ಲಿಯ ಕೂಡಲಸಂಗಮೇಶ್ವರ, ಹಾಗಾಗಿ ತನ್ನ ವಚನಗಳ ಮುದ್ರಿಕೆಯನ್ನಾಗಿ ಆ ಶಬ್ದವನ್ನೇ ಬಳಸುತ್ತಾನೆ. ಈ ಕ್ಷೇತ್ರಕ್ಕೆ ಕಪ್ಪಡಿ ಸಂಗಮ ಎಂದೂ ಕರೆಯುತ್ತಿದ್ದರು. ತನ್ನ ಹುಟ್ಟೂರಾದ ಇಂಗುಳೇಶ್ವರ ಬಾಗೇವಾಡಿಯಿಂದ ಬಂದ ಬಸವಣ್ಣನ ಪ್ರಸಂಗವನ್ನು ಹೇಳುವಾಗ ಹರಿಹರಕವಿಯು ತನ್ನ 'ಬಸವರಾಜದೇವರ ರಗಳೆ'ಯಲ್ಲಿ "ಮಲಪ್ರಹರಿ ಕೃಷ್ಣವೇಣಿಗಳ ಸಂಗಸುಖಮಂ ಪಿಂಗದ ಕೂಡಲಸಂಗಮೇಶ್ವರನಿಪ್ಪ ಕಪ್ಪಡಿಯ ಸಂಗಮಮಂ ಪೊಕ್ಕು" ಎಂದು ವರ್ಣಿಸುತ್ತಾನೆ. ಕಪ್ಪಡಿ ಎನ್ನುವುದು ಸಂಸ್ಕೃತದ 'ಕರ್ಪಟಿನ್' ಎಂಬ ಶಬ್ದದ ತದ್ಭವ (ತದ್ಭವವೆಂದರೆ ಕನ್ನಡೀಕರಣಗೊಂಡ ಸಂಸ್ಕೃತ ಶಬ್ದ ಎಂದರ್ಥ); ಕರ್ಪಟ ಅಥವಾ ಹರಕಲು ಬಟ್ಟೆ ತೊಟ್ಟವನು ಕರ್ಪಟಿನ್; ಹಾಗಿರುವವನು ಸಾಧಕ.  ಕೂಡಲ ಸಂಗಮವು ಹಿಂದಿನಿಂದಲೂ ಸಾಧಕರ ಕ್ಷೇತ್ರವಾಗಿತ್ತು; ಸಾಧಕರು ದೂರದೆಡೆಗಳಿಂದ ಇಲ್ಲಿಗೆ ಬಂದು ತಮ್ಮ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿರುತ್ತಿದ್ದರು. ಅದಕ್ಕೇ ಈ ಜಾಗಕ್ಕೆ ಈ ಹೆಸರಾಯಿತು.
ಮೈಸೂರು ಜಿಲ್ಲೆಯಲ್ಲಿ ತಿರುಮಕೂಡಲು ನರಸೀಪುರ ಎಂಬ ಊರಿದೆ. ಈ ಎರಡು ಹೆಸರುಗಳಲ್ಲಿ ಮೊದಲನೆಯದು ತಿರು+ಮುಕ್ಕೂಡಲು ಸೇರಿ ಆದುದು. ತಿರು ಎಂಬುದು ಶ್ರೀ ಎಂಬುದರ ತದ್ಭವರೂಪ, ಶ್ರೇಷ್ಠವಾದ, ಪವಿತ್ರವಾದ ಎಂಬ ಅರ್ಥ ಹೊಂದಿದೆ. ಅಂತಹ ಮುಕ್ಕೂಡಲು ಅದು; ಅಲ್ಲಿ ಸೇರುವುದು ಕಾವೇರಿ ಮತ್ತು ಕಪಿಲಾ ನದಿಗಳೂ, ಜೊತೆಗೆ ಅಂತರ್ವಾಹಿನಿಯೊಂದೂ ಹರಿಯುತ್ತದೆ (ಪ್ರಯಾಗದಲ್ಲಿ ಗಂಗಾ ಯಮುನೆಯರ ಜೊತೆ ಸರಸ್ವತಿ ಅಂತರ್ಗಾಮಿಯಾಗಿ ಹರಿಯುತ್ತದೆ ಎಂಬಂತೆ) ಎಂದು ನಂಬಿಕೆ. ಹೀಗಾಗಿ ಅದು ಮೂರು ನದಿಗಳ ಸಂಗಮ; ಇದೇ ಮುಕ್ಕೂಡಲ್ (ಮೂರ್+ಕೂಡಲ್).
=====
ಕೂದಲು: ಕೇಶ ಎಂಬರ್ಥದ ಈ ಶಬ್ದದ ಹಳಗನ್ನಡ ರೂಪ ಕಕೂಂದಲ್ಕಿ ಎಂದು. ತಮಿಳು ಮಲಯಾಳಂಗಳಲ್ಲಿದು 'ಕೂಂತಲ್' ಎಂಬ ರೂಪದಲ್ಲಿಯೂ ತುಳುವಿನಲ್ಲಿ ಕುಜಲ್' ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. (ತೆಲುಗಿನಲ್ಲಿ ವೆಂಡ್ರುಕ ಎಂಬುದು ಗ್ರಾಂಥಿಕ ರೂಪವಾಗಿದ್ದರೂ ಆಡುಮಾತಿನಲ್ಲದು 'ಎಂಟಿಕಲು' ಎಂದಾಗುತ್ತದೆ). ಇದು ಸಂಸ್ಕೃತದ 'ಕುಂತಲ' ಶಬ್ದದ ರೂಪಾಂತರವೆಂದು ಹೇಳುವುದುಂಟು. (ಕುಂತಲ ಶಬ್ದವೂ ಹಳಗನ್ನಡದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು). ಹಳಗನ್ನಡದಲ್ಲಿ 'ಕೂಂದಲ್' ಮತ್ತು 'ಕೂದಲು' ಎರಡು ರೂಪಗಳೂ ದೊರೆಯುತ್ತವೆ. "ಸೋಗೆ ಕೂಂದಲ್ವೊಯಂ ಕಾಳೋರಗಂಗೆತ್ತು ಎಳಸಿದಪುದು" ಎಂಬುದು ನೇಮಿಚಂದ್ರನ 'ಲೀಲಾವತಿ'ಯ ವರ್ಣನೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರ'ದಲ್ಲಿ "ಬೆಲ್ಲದ ನೀರಾದೊಡಂ ಬೆಲ್ಲವತ್ತದ ಕಾಯ ತಿರುಳಾದೊಡಂ ತಲೆಯಂ ಪೂಸಲ್ ಜಡೆಗೊಂಡ ಕೂಂದಲ್ ಮಾಣ್ದು ಚೆನ್ನಪ್ಪುದು" ಎಂದು ಒಂದು ಪದ್ಯಕ್ಕೆ ಟೀಕೆಯಿದೆ (ಈ ಟೀಕೆಯನ್ನು ಕೃತಿಕಾರನೇ ಬರೆದನೋ, ಅಥವಾ ಬೇರೆ ಯಾರು, ಯಾವಾಗ ಬರೆದರೋ ತಿಳಿಯದು). "ತಲೆಯಲಿ ಕರಿದು ಕೂಂದಲುಗಳೌಷಧಿಗಿಲ್ಲ" ಎಂಬುದು ಕನಕದಾಸನ 'ಮೋಹನತರಂಗಿಣಿ' ಕಾವ್ಯದ ಮಾತು. "ಮೂದಲೆಯ ಮಾತು ಕೂದಲ ಕೀಲಿನಂತಲ್ಲದರಿಯಬಾರದು" ಎಂಬುದು ಚಂದಿಮರಸ ಎಂಬೊಬ್ಬ ವಚನಕಾರನ ಮಾತು. ಇಲ್ಲಿನ 'ಕೂದಲ ಕೀಲು' ಪ್ರಾಯಶಃ ಕೂದಲಿನ ಬುಡವನ್ನು ಸೂಚಿಸುತ್ತದೆ. "ನವಿರೆಂದು ಕೂದಲು" ಎಂದು 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. "ತುಱುಕಱು ಕೂದಲು ತುಱುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ" ಎಂಬುದು ಪುರಂದರದಾಸನ ಮಾತು.
ಕುಮಾರವ್ಯಾಸ 'ಕೂದಲು ಹಱಿ' ಎಂಬುದನ್ನು ಒಂದು ನುಡಿಗಟ್ಟಾಗಿ ಬಳಸುತ್ತಾನೆ: "ಬಿಸುಡು ಚಕ್ರವನೆನ್ನ ಕಾಯದಲಿ ಅಳುಕಿ ಕೂದಲು ಹಱಿದುದಾದರೆ ಬಳಿಕ ನಾ ಡಿಂಗರಿಗನಲ್ಲ" ಎಂಬಲ್ಲಿ ಈ ನುಡಿಗಟ್ಟಿಗೆ ಈಗಿನ 'ಕೂದಲೂ ಕೊಂಕಲಾರದು' ಎಂಬರ್ಥವಿದೆ. ನಾವೀಗ ಕೂದಲು ಶಬ್ದವನ್ನೊಳಗೊಂಡ ಇನ್ನೂ ಅನೇಕ ನುಡಿಗಟ್ಟುಗಳನ್ನು ಬಳಸುತ್ತೇವೆ. 'ಕೂದಲೆಳೆಯಷ್ಟು' ಎಂದರೆ ತೀರ ಕಡಿಮೆ ಅಂತರ ಎಂಬರ್ಥವಿದ್ದರೆ, ಕೃತ್ರಿಮ ನಯಗಾರಿಕೆಯಿಂದ ಮಾತನಾಡುವುದನ್ನು 'ಬೆಣ್ಣೆಯೊಳಗೆ ಕೂದಲು ತೆಗೆದಂತೆ' ಎಂದು ಹೇಳುವುದು ವಾಡಿಕೆ.
======
ಕೃಷಿ: ಕೃಷಿ ಎಂಬ ಸಂಸ್ಕೃತ ಪದಕ್ಕೆ ಬೇಸಾಯ ಎಂಬ ಅರ್ಥವಿದೆ. ಕೃಷಿಕ ಎಂಬುದು ರೈತ ಮತ್ತು ನೇಗಿಲ ಗುಳ ಎರಡನ್ನೂ ಸೂಚಿಸುತ. ಕೃಷೀವಲ ಎಂದರೂ ರೈತನೇ. ಪಂಪನ 'ಆದಿಪುರಾಣ'ದಲ್ಲಿ ಈ ಕೃಷಿ, ಕೃಷೀವಲ ಎರಡೂ ಒಂದೆಡೆಯೇ ಸಿಕ್ಕುತ್ತವೆ: "ಕೃಷೀವಲ ಕುಲೋಚಿತಮಪ್ಪ ಕೃಷಿಯುಮಂ". ನಾಗವರ್ಮನ 'ಅಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಕೃಷಿಕಂ ಕ್ಷೇತ್ರಾಜೀವಂ, ಕೃಷೀವಳಂ ಕರ್ಷಕಂ, ಕುಟುಂಬಿನಿಯೆನಿಕ್ಕುಂ, ಕೃಷಿ ತತ್ಕರ್ಮಮದಕ್ಕುಂ" ಎಂಬ ವಿವರಣೆಯಿದೆ. ಕೃಷಿಯಲ್ಲಿ ತೊಡಗಿದವನೇ 'ಕೃಷಿನಿರತ' ("ಕೃಷಿನಿರತನಂತೆ ರಾಸಿಯಂ ನಿಲಿಸಿ" - ಶಾಂತಿನಾಥನ 'ಸುಕುಮಾರಚರಿತೆ'). ಅದರಲ್ಲಿ ಆಸಕ್ತಿ ತಾಳಿದವನೇ 'ಕೃಷಿಕುತೂಹಳ' ("ಕೃಷೀಕುತೂಹಳಜನಂ ಮರವಟ್ಟಿರುತಿರ್ದುದು" - ಕಮಲಭವನ 'ಶಾಂತೀಶ್ವರಪುರಾಣ'). ಕೃಷಿ ಶಬ್ದಕ್ಕಿರುವ ಬೇಸಾಯ ಎಂಬ ಅರ್ಥವು ವಿಸ್ತಾರಗೊಂಡು ಈಗ ಯಾವುದೇ ರಂಗದಲ್ಲಿಮಾಡುವ ಸಾಧನೆ ಎಂಬುದನ್ನು ಸೂಚಿಸುವ ಪದವಾಗಿದೆ; ಸಾಹಿತ್ಯಕೃಷಿ ಎಂಬಂತೆ. ಮೋಳಿಗೆ ಮಾರಯ್ಯನ ವಚನದವೊಂದರಲ್ಲಿ "ವಾಣಿಜ್ಯ ಮುಂತಾದ ಕೃಷಿಯ ಮಾಡುವಾಗ" ಎಂಬ ಮಾತಿದೆ.
ಬೇಸಾಯದ ಆರಂಭದ ಬಗ್ಗೆ ಪಂಪನ 'ಆದಿಪುರಾಣ'ವು ಕೆಲವು ಕುತೂಹಲಕರ ವಿವರಗಳನ್ನು ಒಳಗೊಂಡಿದೆ. ಅದು ಆದಿ ತೀರ್ಥಂಕರನ ತಂದೆಯಾದ ನಾಭಿರಾಜನ ಆಳ್ವಿಕೆಯ ಕಾಲ. ಪ್ರಕೃತಿಯಲ್ಲಿ ಸಿಕ್ಕುವುದನ್ನೇ  ಅವಲಂಬಿಸಿದ್ದ ಜನರಿಗೆ ಬರಬರುತ್ತ ಬೇಕಾದಷ್ಟು ಆಹಾರ ಸಿಗುತ್ತಿರಲಿಲ್ಲ. ಅಕೃಷ್ಟಪಚ್ಯ(ಬೇಸಾಯವಿಲ್ಲದೆ ತಾವಾಗಿ ಬೆಳೆದ ಆಹಾರಧಾನ್ಯ)ಗಳನ್ನು ಅವರು ಹುಲ್ಲುಗಳೆಂದು ತಿಳಿದಿದ್ದರು. ಜನ ನಾಭಿಯಲ್ಲಿಗೆ ಬಂದಾಗ, ಅಕೃಷ್ಟಪಚ್ಯಗಳ ಧಾನ್ಯವನ್ನು ಪಡೆದು, ಸಂಸ್ಕಾರ ಮಾಡಿ ಸೇವಿಸುವ ಬಗೆಯನ್ನು ಆತ ಜನರಿಗೆ ತಿಳಿಸಿಕೊಟ್ಟನಂತೆ. ಮುಂದೆ ಅವನ ಮಗ ಆದಿದೇವನ ಕಾಲದ ಹೊತ್ತಿಗೆ ಅದೂ ಸಾಲದೆ ಹೋಯಿತು. ಆಗ ಆದಿದೇವನು ಪ್ರಜೆಗಗಳಿಗೆ ಬೇಸಾಯ ಮಾಡುವ ಕ್ರಮವನ್ನು ತಿಳಿಸಿಕೊಟ್ಟು, ಜನರನ್ನು ವರ್ಣಗಳಾಗಿ ವಿಂಗಡಿಸಿ, ವೈಶ್ಯವರ್ಗಕ್ಕೆ "ಪಾಶುಪಾಲ್ಯ ಕೃಷೀ ಪಣ್ಯಕರ್ಮ"ಗಳನ್ನು ನಿಯೋಜಿಸಿದನಂತೆ. ಆಗಿನಿಂದ ಭೋಗಭೂಮಿಯಾಗಿದ್ದುದು ಕರ್ಮಭೂಮಿಯಾಯಿತಂತೆ; ಕೃತಯುಗ ಆರಂಭಗೊಂಡಿತಂತೆ.
=====
ಕಳೆ: ಈ ಪದವು ಕ್ರಿಯಾರ್ಥ ಹಾಗೂ ನಾಮಾರ್ಥಗಳಲ್ಲಿ ಬಳಕೆಯಾಗುತ್ತದೆ. ಈ ಶಬ್ದವು ತಮಿಳಿನಲ್ಲಿ 'ಕಳೈ' ಎಂದೂ ಮಲಯಾಳಂನಲಲ್ಲಿ 'ಕಳ' ಎಂದೂ ತುಳುವಿನಲ್ಲಿ 'ಕಳೆ' 'ಕಳ' ಎಂದೂ ಬಳಕೆಯಲ್ಲಿವೆ. ಕಳೆ ಎಂದರೆ ಬೇಕಾದ ಬೆಳೆಯ ನಡುವೆ ಬೆಳೆಯುವ ಅಪ್ರಯೋಜಕ ಸಸ್ಯ ಎಂಬರ್ಥವಿದೆ. "ಬೆಳೆಯ ಭೂಮಿಯಲೊಂದು ಪ್ರಳಯದ ಕಳೆ ಹುಟ್ಟಿ" ಎಂಬ ಬಸವಣ್ಣನ ವಚನದಲ್ಲಿ ಬೆಳೆ ಕಳೆಗಳ ಸಂಬಂಧ ಸ್ಪಷ್ಟವಾಗಿದೆ. ವಿಪುಲವಾಗಿ ಬೆಳೆದ ಕಳೆಯನ್ನು ಮೋಳಿಗೆ ಮಾರಯ್ಯನೆಂಬ ವಚನಕಾರ 'ಕಳೆಮೆಳೆ' ಎಂಬ ಶಬ್ದದಿಂದ ಸೂಚಿಸುತ್ತಾನೆ (ಮೆಳೆ=ದಟ್ಟವಾದ ಪೊದೆ): "ಕಳೆಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ," ಬೇಸಾಯಕ್ರಮದಲ್ಲಿ 'ಕಳೆ ಕೀಳು'ವುದು ಸಾಮಾನ್ಯ ಕ್ರಿಯೆ. ಇದನ್ನು ಬಸವಣ್ಣ 'ಕಸವ ಕೀಳು' ಎನ್ನುತ್ತಾನೆ ("ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ"). ಇದಕ್ಕನುಗುಣವಾಗಿಯೇ ಇಂದು ನಾವು ನಿಷ್ಪ್ರಯೋಜಕವಾದುದನ್ನು ಕಕಳೆಕಿ ಎಂಬ ಮಾತಿನಿಂದ ಸೂಚಿಸುತ್ತೇವೆ.
'ಕಳೆ' ಎಂಬ ಶಬ್ದಕ್ಕೆ ತೀರ ಬೇರೆಯೇ ಆದ ಅರ್ಥವೊಂದೂ ಇದೆ; ಇದು ಒಂದು ಕಾಲ ಪರಿಮಾಣವನ್ನು ಸೂಚಿಸುವ ಶಬ್ದವೆಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ: "ಹದಿನೆಂಟು ನಿಮೇಷದಿನಂತದೊಂದು ತಾಂ ಕಾಷ್ಠೆ ಕಾಷ್ಠೆ ಮೂವತ್ತಾದಂದದು ಕಳೆ ಕಳೆಗಳ್ ಮೂವತ್ತದು ಕ್ಷಣಂ".
ಸಂಸ್ಕೃತದ 'ಕಲಾ' ಕನ್ನಡದಲ್ಲಿ 'ಕಲೆ' ಎಂದಾಗಿ ಅದರಲ್ಲಿನ ಲಕಾರ ಳಕಾರವಾಗುತ್ತದೆ (ಇಂತಹ ಳಕಾರವನ್ನು ಕ್ಷಳ ಎನ್ನುತ್ತಾರೆ).  ಅರ್ಥ ಅದೇ. ಹೀಗಾಗಿ ಆ ಶಬ್ದಕ್ಕಿರುವ ಕಾಂತಿ ಎಂಬ ಅರ್ಥವೇ ಕನ್ನಡದಲ್ಲಿಯೂ ಇದೆ: "ಕಳೆ ಪೊಳೆಪು" ಎಂದು ಒಂದು ನನಿಘಂಟು ಅರ್ಥ ನೀಡುತ್ತದೆ. ಚಂದ್ರನ ಹದಿನಾರನೇ ಒಂದು ಭಾಗ ಕಳೆ ("ಚಂದ್ರನಂಶಂ ಕಳೆ" - 'ಅಭಿಧಾನ ವಸ್ತುಕೋಶ').
ಕಳೆ ಕ್ರಿಯಾರೂಪದಲ್ಲಿ ಅನೇಕ ಅರ್ಥಚ್ಛಾಯೆಗಳನ್ನು ಪಡೆದಿದೆ. ಬಿಟ್ಟುಬಿಡು ಎಂಬುದು ಇದರ ಒಂದು ಅರ್ಥ "ಕಳೇ-ವಿಸರ್ಜನೇ" - 'ಶಬ್ದಮಣಿದರ್ಪಣ'). ನಿವಾರಿಸು, ಕಳಿಸು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ ("ಕುಂಚದ ಅಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದು"). ಹಾಗೆಯೇ ಹೋಗಲಾಡಿಸಿ, ಅಳಿಸಿಹಾಕು ಎಂಬರ್ಥದಲ್ಲಿ 'ಆದಿಪುರಾಣ'ವು ಈ ಶಬ್ದವನ್ನು ಬಳಸುತ್ತದೆ: "ಬರೆಯಿಸಿದಂ ಪೂರ್ವಮಹೀಶ್ವರರನಾಮಮಂ ಎಯ್ದೆ ಕಳೆದು ವೃಷಭಾಚಲದೊಳ್ ಭರತಂ ನಿಜನಾಮಮಂ". 'ಪಂಚತಂತ್ರ'ದಲ್ಲಿ ತೆಗೆದುಹಾಕು ಎಂಬರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ: "ಕೃತಕ ಪುರುಷಾಕಾರಚಿಹ್ನಂಗಳಂ ಕಳೆಯಲ್ ಮಱೆದು". ಕಳೆ ಶಬ್ದದಿಂದ 'ಕಳೆದಿಡು' (ನೀಗಿಕೊ) ("ಕಳೆದಿಡುವುದೆ ಕಷ್ಟಂ ಭೂತಳರಾಜ್ಯವಿಮೋಹಂ" - 'ಆದಿಪುರಾಣ'); 'ಕಳೆದುಕೊ' (ತೆಗೆದುಕೊ) ("ಆ ಲೇಖನಮಂ ಕಳೆದುಕೊಂಡು ನಿಮಿರ್ಚಿ ನೋಳ್ಪನ್ನೆಗಂ" - 'ಕರ್ಣಾಟಕ ಕಾದಂಬರಿ') ಮುಂತಾದ ಕ್ರಿಯಾಸಮಾಸಗಳನ್ನೂ ಸೃಷ್ಟಿಸಿಕೊಳ್ಳಲಾಗಿದೆ. 
======
ಕೆತ್ತು: ಈ ಶಬ್ದವು ಮಿಡುಕು ಎಂಬರ್ಥದಲ್ಲಿ ಬಳಕೆಯಾಗುವ ಕ್ರಿಯಾಪದ. ತಮಿಳಿನಲ್ಲಿದು 'ಕೆತ್ತು' ಎಂದೂ, ತುಳುವಿನಲ್ಲಿ 'ಕಿತ್ತುನಿ' ಎಂದೂ ಬಳಕೆಯಲ್ಲಿದೆ. "ಕೆತ್ತು-ಸ್ಪಂದನೇ" ಎಂದು ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. ಕಣ್ಣಮಿಡುಕು, ತೋಳಿನ ಮಾಂಸಖಂಡದ ಮಿಡುಕು ಎಂಬರ್ಥಗಳಲ್ಲಿ ಈ ಶಬ್ದವು 'ಪಂಪಭಾರತ'ದಲ್ಲಿದೆ ("ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಂ ಆ ಬಲಿಬಲಪ್ರಧ್ವಂಸಿಗೆ"). ಈ ಕ್ರಿಯೆಗಳು ಶುಭಶಕುನದ ಸಂಕೇತ ಎಂಬ ಇಂದಿನ ನಂಬಿಕೆಯು ಅಂದೂ ಇದ್ದುದನ್ನು ಈ ವಾಕ್ಯ ದೃಢಪಡಿಸುತ್ತದೆ. "ಅಂಗೈ ತಿಂದುದೆನ್ನ ಕಂಗಳು ಕೆತ್ತುತ್ತಿಹವಯ್ಯಾ, ಬಂದಹರಯ್ಯಾ ಪುರಾತನರೆನ್ನ ಮನೆಗೆ" ಎಂಬ ಇದೇ ಅರ್ಥದ ಮಾತು ಬಸವಣ್ಣನ ವಚನವೊಂದರಲ್ಲಿದೆ. ಪಂಪ ಈ ಶಬ್ದವನ್ನು ಸನ್ನೆ ಎಂಬರ್ಥದಲ್ಲಿಯೂ ಬಳಸಿದ್ದಾನೆ: "ಕುಂಚದಡಪದ ಡವಕೆಯ ಪರಿಚಾರಕರೆಲ್ಲರುಮಂ ಕಣ್ಗೆತ್ತಿ ಕಳೆದು ಏಕಾಂತದೊಳ್ ಕನ್ನೆಯನಿಂತೆಂದರ್" (ಕಣ್ಗೆತ್ತು=ಕಣ್ಸನ್ನೆ ಮಾಡು). 'ಕೆತ್ತುಗುಂದು' ಎಂಬುದು ಹೃದಯದ ಮಿಡಿತ ನಿಂತುಹೋಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ: "ಇಂಗದ ಬೆಮರ್ ಮಿಡುಕೋಡದ ಪುರ್ವು ಬೀಗಿ ಬೀಯದ ತುಟಿ ಕೆತ್ತುಗುಂದದ ಕುಚಂ ನಡುಕಂಗಿಡದೂರುಕ" (ನೇಮಿಚಂದ್ರನ 'ಲೀಲಾವತಿ'). ಹಲವು ವೇಳೆ ಅಲುಗಾಡು, ನಡುಗು ಎಂಬರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ: "ಕೆತ್ತುವ ತೋಳ್ ಕಂಪಿಸುವ ಹಸ್ತಂ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದ ವಾಕ್ಯ. ಇದಕ್ಕೆ ಉದಾಹರಣೆ. "ಕೆತ್ತಿದವು ಮೀಸೆಗಳು" ಕೋಪವನ್ನು ಹೇಳಲು ಕುಮಾರವ್ಯಾಸನು ಬಳಸುವ ನುಡಿಗಟ್ಟು.
'ಕೆತ್ತು' ಎಂದರೆ ಮೇಲ್ಪದರವನ್ನು ಕತ್ತರಿಸು ಎಂಬರ್ಥವೂ ಇದೆ. ಈ ಅರ್ಥದಲ್ಲಿ ಈ ಶಬ್ದವು ತಮಿಳಿನಲ್ಲಿ 'ಚೆಟ್ಟು' ಎಂದೂ, ಮಲಯಾಳಂನಲ್ಲಿ 'ಚೆಟ್ಟುಕ' ಎಂದೂ, ತುಳುವಿನಲ್ಲಿ 'ಕೆತ್ತುಣಿ' ಎಂದೂ ಬಳಕೆಯಲ್ಲಿದೆಯೆಂದು ಹೇಳುತ್ತಾರೆ. ಮಿಡುಕು ಎಂಬರ್ಥದೊಡನೆ 'ಶಬ್ದಮಣಿದರ್ಪಣ'ವು "ಕೆತ್ತು-ತನೂಕರಣೇ" ಎಂದೂ ಅರ್ಥವನ್ನು ನೀಡುತ್ತದೆ. "ಕೆತ್ತಿದ ತಿಗುಡು ಹತ್ತುವುದೆ ಮುನ್ನಿನಂತೆ" ಎಂಬ ವಾಕ್ಯವು ಅಕ್ಕಮಹಾದೇವಿಯ ಒಂದು ವಚನದ್ದು (ತಿಗುಡು=ತೊಗಟೆ). "ಕುಪ್ಪಸದಂತೆ ಬೆನ್ನಂ ಪತ್ತಿ ಕೆತ್ತುವರ್" ಎಂಬುದು 'ಧರ್ಮಾಮೃತ'ದ ಪ್ರಯೋಗ. "ಭಕ್ತರ ಕಂಡು ಬಂಧಿಪಳ ನಡುನೆತ್ತಿಯ ಕೆತ್ತಬೇಕು" ಎಂಬುದು ಪುರಂದರದಾಸರ ಹಾಡಿನ ಮಾತು. ಈ ಶಬ್ದವನ್ನು ಮುಚ್ಚು ಎಂಬರ್ಥದಲ್ಲಿಯೂ ಬಳಸುತ್ತಿದ್ದರು: "ಪಡಿಯಂ ಕೆತ್ತಿ ಅಗುಳಿಯನಿಕ್ಕಿ .. .. ಪಂಜರದ ಪಡಿಕೆಯೊಳಿರ್ದ ಎನ್ನೊಳಿಂತೆಂದಂ" ಎಂಬುದು 'ಕರ್ಣಾಟಕ ಕಾದಂಬರಿ' ಕಾವ್ಯದ ಮಾತು.
ವಿಗ್ರಹವನ್ನು ಕಂಡರಿಸು ಎಂಬರ್ಥವೂ ಈ ಶಬ್ದಕ್ಕಿದೆ. "ಗರ್ಭಗೃಹಸ್ತಿತ ಮಂಟಪ ಶಿಖರ ಶಿಷ್ಟಿ ಸಹವಾಗಿ ಕೆತ್ತು ಜಲ್ಲಾಂದರವ ಮಾಡಿಸಿ" ಎಂಬ ವಾಕ್ಯಖಂಡ ಶಾಸನವೊದರಲ್ಲಿದೆ. "ಹುತ್ತುಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ" ಎಂಬ ಸಾಲುಗಳು ಗೋಪಾಲಕೃಷ್ಣ ಅಡಿಗರ 'ಶ್ರೀರಾಮನವಮಿಯ ದಿವಸ' ಕವನದ ಕೊನೆಯ ಸಾಲುಗಳು.
=====
ಕೈ1: ಇದನ್ನು ಕೆಯ್ ಕಯ್ ಎಂತಲೂ ಬರೆಯುತ್ತಿದ್ದರು. ಕನ್ನಡದಲ್ಲಿ ಇದಕ್ಕೆ ಕ್ರಿಯಾಪದವಾಗಿ ಮಾಡು ಎಂದೂ ನಾಮವಾಚಕವಾಗಿ ಹಸ್ತ ಎಂದೂ ಅರ್ಥವಿದೆ. ದ್ರಾವಿಡ ಪದವಾದ ಇದು ಕ್ರಿಯೆಯ ಅರ್ಥದಲ್ಲಿ ತಮಿಳು ಮಲಯಾಳಂಗಳಲ್ಲಿ ಚೆಯ್ ಎಂದೂ, ತೆಲುಗಿನಲ್ಲಿ ಚೇಯು ಎಂದೂ ಆಗುತ್ತದೆ. ಪ್ರಾಯಶಃ ಮಾಡುವುದು ಕೈಗಳಿಂದಾದ್ದರಿಂದ ಕ್ರಿಯಾರ್ಥವಿದ್ದುದು ನಾಮಪದವಾಗಿಯೂ ಬಳಕೆಗೊಂಡಿರಬಹುದು. ಈ ಅರ್ಥದಲ್ಲಿ ಈ ಪದವು ತಮಿಳು ತುಳುಗಳಲ್ಲಿ ಕೈ ಎಂದೂ ಮಲಯಾಳಂನಲ್ಲಿ ಕಯ್ಯಿ ಎಂದೂ ತೆಲುಗಿನಲ್ಲಿ ಚೇಯಿ ಎಂದೂ ಆಗುತ್ತದೆ.  ಕ್ರಿಶ. ಏಳನೆಯ ಶತಮಾನದ ಬಾದಾಮಿಯ ಕಪ್ಪೆಯ ಅರಭಟ್ಟನ ಶಾಸನದಲ್ಲಿ "ಒಳ್ಳಿತ್ತ ಕೆಯ್ವೊರಾರ್" ಎಂಬ ಪ್ರಯೋಗವಿದೆ. "ವಾದಂಗೆಯ್ದು ಗೆಲ್ದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲದೆ. ಈ ಶಬ್ದಕ್ಕೆ ಈಗಲೂ ಸಂಭೋಗಿಸು ಎಂಬ ಅರ್ಥವಿದೆ. ರಾಜ್ಯ ಎಂಬ ಶಬ್ದದೊಡನೆ ಸೇರಿ 'ರಾಜ್ಯಂಕೆಯ್' ಎಂಬ ಸಮಾಸಪದಕ್ಕೆ ರಾಜ್ಯವನ್ನಾಳು ಎಂಬ ಅರ್ಥ ಉಂಟಾಗುತ್ತದೆ ("ಸ್ವಸ್ತಿಶ್ರೀಪುರುಷ ರಾಜ್ಯಂಕೆಯೆ.. .." - ಎಂಟನೆಯ ಶತಮಾನದ ಶಾಸನ). ಇದು ರಾಜ್ಯಂಗೆಯ್ ಎಂಬ ರೂಪದಲ್ಲಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ ("ಸಿಂಹವರ್ಮನೆಂಬರಸಾಗಿ ರಾಜ್ಯಂಗೈಯ್ಯುತ್ತುಂ" - ದುರ್ಗಸಿಂಹನ 'ಪಂಚತಂತ್ರ'). ಕೆಯ್ ಎಂಬುದಕ್ಕೆ ಪ್ರತ್ಯಯ ಸೇರಿ ಕೈತ ಅಥವಾ ಕೈಮೆ ಎಂಬ ರೂಪವನ್ನು ಪಡೆದು ಕೆಲಸ ಎಂಬರ್ಥವನ್ನು ಸೂಚಿಸುತ್ತದೆ.   ಕೈತ ಎಂದರೆ ಮಾಡಿದ ಎಂಬರ್ಥವೂ ಇದೆ ("ಒಂದಿದಳಂಕೃತಿ ಕೈತ ದೇಸಿ"  - 'ಪಂಪಭಾರತ').
ಮಾಡು ಎಂಬರ್ಥದಲ್ಲಿ ಗೆಯ್ ಎಂಬ ರೂಪವೂ ವ್ಯಾಪಕವಾಗಿ ಬಳಕೆಯಲ್ಲಿದೆ. "ಗೆಯ್ (ಕೆಯ್) ಶಿಲ್ಪೇ" ಎಂದು 'ಶಬ್ದಮಣಿದರ್ಪಣ' ಹೇಳುತ್ತದೆ. ಗೆಯ್ ಅನ್ನು ಗೈ ಎಂದೂ ಬರೆಯುವುದು ರೂಢಿ. ಇದು ಗೇ ಎಂದೂ ಬಳಕೆಯಲ್ಲಿದೆ. 'ಗೇದೂ ಗೇದೂ ಸಾಕಾಗದೆ' ಎಂಬಂತಹ ಮಾತು ಸಾಮಾನ್ಯ. ಇದರ ನಾಮರೂಪಗಳಾದ ಗೆಯ್ತ ("ಈ ಮನುಜರ ಗೆಯ್ತಮಂ ಬಿಸುಟು" - 'ಕರ್ಣಾಟಕ ಕಾದಂಬರಿ') ಅಥವಾ ಗೆಯ್ಮೆ ಅಥವಾ ಗೇಮೆ ಕೆಲಸ ಎಂಬರ್ಥವನ್ನು ಪಡೆಯುತ್ತವೆ. ಗೆಯ್ವೊಗ ಎಂಬ ರೂಪವು ಕಾರ್ಯವೈಖರಿ ಎಂಬರ್ಥದಲ್ಲಿ ಪೊನ್ನನ 'ಶಾಂತಿಪುರಾಣ'ದಲ್ಲಿ ಬಳಕೆಯಾಗಿದೆ ("ಬಗೆ ಮತ್ತೊಂದೆನೆಯುಂ ಗೆಯ್ವೊಗಂ ಇತ್ತೊಂದೆನೆಯುಂ").
=====
ಕೈ2ಕೈ ಎಂಬ ನಾಮರೂಪವನ್ನೀಗ ಪರಿಶೀಲಿಸೋಣ. ಇದಕ್ಕೆ ಹಸ್ತ ಎಂಬ ಆರ್ಥವಿದೆ ("ಮುಂದು ನಿಂದು ಕೈಗಳಂ ಮುಗಿದು" - 'ವಡ್ಡಾರಾಧನೆ'). ಆನೆಯ ಸೊಂಡಿಲು ಎಂಬರ್ಥವೂ ಇದಕ್ಕಿದೆ; "ಕೈಗಳ್ ಆನೆಯ ಕೈಯಂ ನಖಂ ಇಂದುವಂ ನಗುಗುಂ" ಎಂಬುದು 'ಪಂಪಭಾರತ'ದ ಪ್ರಯೋಗ. ಹಾಗೆಯೇ ಮರದ ಕೊಂಬೆಯನ್ನೂ ಕೈ ಎಂದು ಕವಿಗಳು ಕರೆಯುತ್ತಾರೆ ("ಮಾವಿನ ಕೆಯ್ಯಂ ಪಿಡಿದಲ್ಲಿ ಮೆಲ್ಲಮೆಲ್ಲನೆ ನಡೆವುದು .. .. ಉಪವನಪವನಂ" - ಮಧುರಕವಿಯ 'ಧರ್ಮನಾಥಪುರಾಣ'). ಅಲಂಕರಿಸಿಕೋ (ಮೇಕಪ್) ಎಂಬರ್ಥವೂ ಸಾಧಿತವಾಗುತ್ತದೆ ("ಮುತ್ತಿನ ಕೈಯಿಂದಡಿಕಿಲ್ವೆತ್ತ ಉರುಶೃಂಗಾರ" - ಸೋಮದೇವನ 'ಉದ್ಭಟಕಾವ್ಯ').
ಈ ಅರ್ಥಗಳನ್ನು ಹಿಂಬಾಲಿಸಿ ಅನೇಕ ಸಮಾಸಪದಗಳು ಸೃಷ್ಟಿಗೊಂಡಿವೆ. ಕೈಕೊಳ್ ("ಈಕೆಯಂ ಕೆಯ್ಕೊಳ್ವುದೆ ಕಜ್ಜಂ" - 'ಪಂಪಭಾರತ') ಅಥವಾ ಕೈಗೊಳ್ ಎಂದರೆ ಕೈಹಿಡಿ, ಸ್ವೀಕರಿಸು ಎಂದರ್ಥ. ಇದಕ್ಕೆ ತಾಳು, ಧರಿಸು ಎಂಬರ್ಥವೂ ಇದೆ ("ತಪಮಂ ಕೈಕೊಳ್ವುದು" - ಶಾಂತಿನಾಥನ 'ಸುಕುಮಾರ ಚರಿತೆ' ). ಆರಂಭಮಾಡು ("ಸಂಸರಾಣಾಂಭೋರಾಶಿಯಂ ದಾಂಟುವ ಬಗೆಯನೆ ಕಯ್ಕೊಂಡಂ" - ಪಂಪನ 'ಆದಿಪುರಾಣ'). ಈ ರೂಪಕ್ಕೆ ಆಕ್ರಮಿಸು, ಸಮ್ಮತಿನೀಡು, ಗಮನಿಸು ಮುಂತಾದ ಅರ್ಥಗಳು ಸಂದರ್ಭಕ್ಕನುಗುಣವಾಗಿ ಸ್ಫುರಿಸುತ್ತವೆ. 'ಕೈಗಣ್ಮು' ಎಂದರೆ ಪ್ರಕಟಗೊಳ್ಳು ("ನಿರ್ಭರ ಭಕ್ತಿ ತಮ್ಮ ಮನದೊಳ್ ಕೈಗಣ್ಮೆ" - 'ಆದಿಪುರಾಣ'), ವಶವಾಗು ("ಶಕ್ತಿಸ್ಫುರಣಂ ಕೈಗಣ್ಮೆ" - ಷಡಕ್ಷರನ 'ರಾಜಶೇಖರ ವಿಳಾಸ') ಎಂದರ್ಥವಾದರೆ, ಕೈಗುಡು ಎಂದರೆ ನೆರವಾಗು ಎಂದು ("ಅವರ್ಗಳ ಸನ್ಮತಿ ಕೈಗುಡುಗೆ ಎಮಗೆ ಸರಸಪದಪದ್ಧತಿಯೊಳ್" - ಜನ್ನನ 'ಯಶೋಧರ ಚರಿತೆಕ'). ಕೈಗಟ್ಟಿ ಎಂದರೆ ಕೈಗೆ ಸವರಿಕೊಳ್ಳುವ ಸುಗಂಧ ("ಆರೋಗಣೆಯ ಕಡೆಯೊಳಮರ ವಟುಗಳಟವಯ್ಸಿದ ಕೆಯ್ಗಟ್ಟಿಯೊಳ್" - ಅಗ್ಗಳನ 'ಚಂದ್ರಪ್ರಭಪುರಾಣ'), 'ಕೈಗವು' ಎಂದರೆ ಮಿತಿಮೀರುವಿಕೆ ("ನಿನ್ನ ಒರಂಟುತನಂ ಕೈಗವಾಯ್ತು" - 'ಪಂಪಭಾರತ'). ಕೈಪಱೆ ಎಂಬುದನ್ನು ಎಂದರೆ ಚಪ್ಪಾಳೆ ಎಂದೂ ಕೈಯಿಂದ ಕುಟ್ಟುವ ತಮಟೆ ಎಂದೂ ರುದ್ರಭಟ್ಟನ 'ಜಗನ್ನಾಥವಿಜಯ' ಬಳಸುತ್ತದೆ ("ಕೈಪಱೆಯೊಳಾಡುವ ರಕ್ಕಸಿಯರೊಪ್ಪಿದರ್"). ಕೈನೀರ್ ಎಂದರೆ ಧಾರೆ, ಕೈಪಿಡಿ ಎಂದರೆ ಕನ್ನಡಿ, ಕೈದು ಎಂದರೆ ಆಯುಧ, ಕೈದಳ ಎಂದರೆ ಬೆರಳು, ಕೈಯಾಣೆಯಿಡು, ಎಂದರೆ ಕೈ ಮೇಲೆ ಕೈಯಿಟ್ಟು ಮಾತುಕೊಡು, ಕೈಸಾಲ, ಕೈಗಾರಿಕೆ - ಹೀಗೆ ಕೈ ಶಬ್ದದಿಂದ ರೂಪಿತಗೊಳ್ಳುವ ಅಸಂಖ್ಯಾತ ಶಬ್ದಗಳಿವೆ.
=====
ಕೈ3: ಕೈ, ಕೆಯ್, ಕಯಿ, ಕೆಯ್ಯಿ ಮುಂತಾದ ರೂಪಗಳಲ್ಲಿ ದೊರೆಯುವ ಶಬ್ದವು ಹೊಲ ಅಥವಾ ಸಾಗುವಳಿಯ ಭೂಮಿ ಎಂಬ ಅರ್ಥವನ್ನು ಹೊಂದಿದೆ. ಇದು ಇತರ ದ್ರಾವಿಡ ಭಾಷೆಗಳಲ್ಲಿಯೂ ಈ ಅರ್ಥವನ್ನು ಪಡೆಯುತ್ತದೆ: ತಮಿಳಿನಲ್ಲಿ ಚೆಯ್, ಮಲಯಾಳಂನಲ್ಲಿ ಚೆಯ್ಯಿ, ತೆಲುಗಿನಲ್ಲಿ ಚೇನು ಹಾಗೂ ತುಳುವಿನಲ್ಲಿ ಕೆಯಿ ಎಂಬ ರೂಪಗಳನ್ನು ತಾಳುತ್ತದೆ. "ತನ್ನ ಕೆಯ್ಯನುಳಲೆಂದು ಪೋಗಿ"  ಎಂಬುದು 'ವಡ್ಡಾರಾಧನೆ'ಯ ಮಾತು. ಹೊಲದಲ್ಲಿ ಬೆಳೆದು ನಿಂತ ಪೈರು ಎಂಬರ್ಥದಲ್ಲಿಯೂ ಕೆಯ್ ಬಳಕೆಗೊಂಡಿದೆ ("ಪಂದಿ ಕೆಯ್ಯಂ ತಿಂದೊಡೆ ಕತ್ತೆಯ ಕಿವಿಯಂ ಕೊಂದರೆಂಬತೆ" - ನಯಸೇನನ 'ಧರ್ಮಾಮೃತ'). ಗದ್ದೆ ಎಂಬರ್ಥದಲ್ಲಿ ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" ಎಂಬಲ್ಲಿ ಈ ಪದ ಬಳಕೆಗೊಂಡಿದೆ. ತನ್ನ 'ಪಂಚತಂತ್ರ'ದಲ್ಲಿ ದುರ್ಗಸಿಂಹನು ಗದ್ದೆ ಎಂಬರ್ಥದಲ್ಲಿ ಕಯ್ ಎಂಬ ರೂಪವನ್ನು ಬಳಸುತ್ತಾನೆ: "ಬೆಳದೊರಗಿದ ಕಳವೆಯ ಕಯ್ಗಳಿನೊಪ್ಪುವ ತಿಳಿಗೊಳಂಗಳಿಂ ರಮ್ಯವನಾವಳಿಯಿಂ ಸೊಗಯಿಸುವುದು".
ಕೆಇ ಎಂಬ ರೂಪವು ಹಲವು ಶಾಸನಗಳಲ್ಲಿದೆ ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ "ಬೊಂಬಸಮುದ್ರದ ಹಿಂದಣ ಕೆಇ" ಎಂಬ ಬರಹವಿದೆ. (ಹಲವು ವೇಳೆ ಶಾಸನಗಳನ್ನು ಬರೆಯುತ್ತಿದ್ದವರು ಹಾಗೂ ಓಲೆಗರಿಯ ಮೇಲೆ ಬರೆದುಕೊಡುತ್ತಿದ್ದವರು ಚೆನ್ನಾಗಿ ಓದಿಕೊಂಡವರಾಗೇನೂ ಇರುತ್ತಿರಲಿಲ್ಲ. ಹೀಗಾಗಿ ಪ್ರಮಾಣಭಾಷೆಯಲ್ಲಿ ಕಾಣದ ಕಾಗುಣಿತ ರೂಪಗಳನ್ನವರು ಬಳಸಿರುವ ಸಾಧ್ಯತೆಗಳೂ ಇವೆ. ಇಂಥ ಬರವಣಿಗೆಯನ್ನು ಕಾಗುಣಿತದ ತಪ್ಪು ಎನ್ನಬೇಕೋ, ಶಬ್ದದ ಮತ್ತೊಂದು ರೂಪವೆಂದು ಪರಿಗಣಿಸಬೇಕೋ ತೀರ್ಮಾನಿಸುವುದು ಕಷ್ಟ). ಇದು ಮತ್ತೆ ಕೆಲವು ಕಾವ್ಯ ಶಾಸನಗಳಲ್ಲಿ ಕೆಯಿ ಎಂಬ ರೂಪದಲ್ಲಿ ಬಳಕೆಗೊಂಡಿದೆ: "ರಸವುಗುವ ಕಬ್ಬಿನ ಕೆಯಿಗಳಿಂ ಸೊಗಯಿಸುವುದಾ ವಿಷಯಂ" ಎಂಬುದು 'ಸಾಳ್ವಭಾರತ'ದ ಮಾತು. "ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?" ಎಂಬುದು ಮಹಾದೇವಿಯಕ್ಕನ ವಚನದ ಭಾಗ. "ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ" ಎಂಬುದು ಬಸವಣ್ಣನ ವಚನದ ಮಾತು.  ಹೀಗೆಯೇ ಕೈ, ಗಯ್ ಎಂಬ ರೂಪಗಳು ಹಳಗನ್ನಡದ ಬರವಣಿಗೆಯಲ್ಲಿ ದೊರಕುತ್ತವೆ.
ಗದ್ದೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕೆಯಿಸುಂಕ' ಎಂದು ಕರೆಯುತ್ತವೆ.
======
ಗಂಡಸು: ಈ ಶಬ್ದವು ಹೆಂಗಸು ಎಂಬಂತೆಯೇ ರೂಪಿತವಾಗಿರುವ ಶಬ್ದವೆಂಬುದು ಸ್ಪಷ್ಟವಾಗಿದೆ: ಗಂಡು+ಕೂಸು=ಗಂಡುಸು<ಗಂಡಸು. ಗಂಡು ಎಂಬುದರ ರೂಪವು ತಮಿಳಿನಲ್ಲಿ ಗಿಂಡ ಎಂದಿದ್ದರೆ, ತುಳು ತೆಲುಗುಗಳಲ್ಲಿ ಗಂಡು ಎಂಬ ರೂಪದಲ್ಲಿದೆ. ಗಂಡು ಎಂಬುದಕ್ಕೆ ಶೌರ್ಯ ಎಂಬುದು ಮೂಲಾರ್ಥ, "ಗಂಡಿನೊಳ್ ಭೀಮಸೇನಂ" ಎಂಬ ಪಂಪನ ಮಾತಿನಲ್ಲಿ ಈ ಅರ್ಥವಿದೆ. ಶೌರ್ಯವು ಗಂಡಿಗೆ ಸಹಜ ಎಂಬ ಭಾವನೆಯಿಂದ  ಗಂಡು ಅಥವಾ ಗಂಡಸು ಎಂಬ ಶಬ್ದ ಈ ಅರ್ಥವನ್ನು ಪಡೆದಂತಿದೆ. ಬರಬರುತ್ತ ಗಂಡು ಎಂಬುದಕ್ಕೂ ಗಂಡಸು ಎಂಬುದಕ್ಕೂ ಅರ್ಥವ್ಯತ್ಯಾಸವಾದಂತೆ ಕಾಣುತ್ತದೆ: ಗಂಡಸು ಎಂಬುದು ಸಾಮಾನ್ಯಾರ್ಥವನ್ನು ಹೊಂದಿದ್ದರೆ, ಗಂಡ ಎಂಬುದು ಹೆಣ್ಣೊಬ್ಬಳ ಪತಿ ಎಂಬರ್ಥವನ್ನು ಪಡೆದಿದೆ. ಪಂಪನ 'ಆದಿಪುರಾಣ'ದಲ್ಲಿ "ಕುಲಮುಂ ಚಲಮುಂ ದೊರೆಯುಂ ಕಿಡೆ ಬಾಳ್ವಂ ಗಂಡರೂಪಿನೊಳ್ ಗಂಡನಲ್ತು ಪೆಂಡತಿಯೆ ವಲಂ" ಎಂಬ ಮಾತಿದೆ. ಇದರಲ್ಲಿನ 'ಗಂಡರೂಪು' ಎಂಬುದಕ್ಕೆ ಗಂಡಸಿನ ಆಕೃತಿ ಎಂದು ಅರ್ಥ.
ಹೆಣ್ಣಿಗೆ ಲಾವಣ್ಯದಂತೆ ಗಂಡಸಿಗೆ ಶೌರ್ಯವೇ ಸೌಂದರ್ಯದ ನೆಲೆ ಎಂಬ ಭಾವನೆಯಿಂದಾಗಿ 'ಗಂಡಗಾಡಿ' ಎಂಬ ಪದ ರೂಪುಗೊಂಡಿತು. ಹಾಗೆಯೇ ಪೌರುಷದಿಂದ ಉಂಟಾಗುವ ಹೆಮ್ಮೆಯನ್ನು 'ಗಂಡಗರ್ವ' ಎಂದು ರನ್ನ ಕರೆಯುತ್ತಾನೆ ("ಈ ಗಂಡಗರ್ವಮುಂ ಅದೆಲ್ಲಿಗೆ ಪೋಯ್ತು"). ಕೆಟ್ಟುದಕ್ಕೆ ಶೌರ್ಯವನ್ನು ಬಳಸಿಕೊಳ್ಳುವುದನ್ನು ಜನ್ನನ 'ಯಶೋಧರ ಚರಿತೆ'ಯಲ್ಲಿ 'ಗಂಡಗಾಳಿಕೆ' - ಗಂಡ+ಕಾಳಿಕೆ - ಎಂದಿರುವಂತೆ ತೋರುತ್ತದೆ ("ಪರನೃಪರ ಗಂಡಗಾಳಿಕೆಯನದೇಂ ಕಳೆದನೋ ನೃಪತಿ"). ಶೌರ್ಯಸೂಚಕವಾಗಿ ಕೊಡುವ ಬಿರುದು ಅಥವಾ ಆಭರಣವನ್ನು ಗಂಡಪೆಂಡೇರ ಎಂದು ಕರೆಯುತ್ತಿದ್ದ ಉಲ್ಲೇಖಗಳು ಶಾಸನಗಳಲ್ಲಿವೆ. ಶೌರ್ಯದ ಮಾತು 'ಗಂಡವಾತು' ಎನಿಸಿಕೊಳ್ಳುತ್ತದೆ.
ಗಂಡು ಎಂಬುದಕ್ಕೆ ಶೌರ್ಯ ಎಂಬುದರ ಜೊತೆಯಲ್ಲೇ ಧೈರ್ಯ ಎಂಬರ್ಥವೂ ಇದೆ. ಹೀಗಾಗಿ ಧೈರ್ಯಕೆಡುವುದನ್ನು 'ಗಂಡುಗೆಡು' ಎಂದು 'ಪಂಪಭಾರತ'ದಲ್ಲಿ ಕರೆಯಲಾಗಿದೆ. ಹೆಣ್ಣಿಗೆ ಸಹಜವಲ್ಲವೆಂದು ಭಾವಿಸಲಾದ ಶೌರ್ಯ-ಧೈರ್ಯಗಳನ್ನು ಪಡೆದ ಹೆಣ್ಣನ್ನು 'ಗಂಡುಬೀರಿ' ಎನ್ನುವುದು ಸಾಮಾನ್ಯ.  ಈ ಆರ್ಥದಲ್ಲೇ 'ಗಂಡವೞ‍್ತಿ' ಎಂಬ ಮಾತು 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ.
=====
ಗಾಳಿ: ಇದು ದೇಶೀ ಪದ; ಪಂಚಭೂತಗಳಲ್ಲಿ ಒಂದಾದ ವಾಯುವನ್ನು ಸೂಚಿಸುತ್ತದೆ. ತೆಲುಗಿನಲ್ಲಿ ಗಾಲಿ, ಮಲಯಾಳಂನಲ್ಲಿ ಕಾಳುಕ, ತುಳುವಿನಲ್ಲಿ ಗಾಲಿ ಅಥವಾ ಗಾಳಿ ಎಂಬ ರೂಪಗಳನ್ನು ಪಡೆಯುತ್ತದೆ. "ಗಾಳಿಗೆ ಮಾತನಾಡುವರು .. .. ಕಾೞ್ಕೋೞಿಗಳಾಗಿ ಕೂಗುವರದೇಂ ಮಧುಪಾನದ ಸೊರ್ಕು ಸಾಲದೇ" ಎಂಬ ಹೆಂಡಕುಡುಕರನ್ನು ವರ್ಣಿಸುವ ಪದ್ಯವೊಂದು ಹದಿಮೂರನೆಯ ಶತಮಾನದ 'ಸೂಕ್ತಿಸುಧಾರ್ಣವ'ವೆಂಬ ಸಂಕಲನಗ್ರಂಥದಲ್ಲಿದೆ.  ಚೆನ್ನಬಸವಣ್ಣನ ವಚನವೊಂದರಲ್ಲಿ ಗಾಳಿ ಬೀಸುವಾಗಿನ ಸದ್ದನ್ನು 'ಗಾಳಿಯ ಸರ' ಎಂದು ವರ್ಣಿಸುತ್ತದೆ (ಸರ=ಧ್ವನಿ, ಕಂಠ). ಇಂಥ ಗಾಳಿ ಸದ್ದನ್ನು "ಗಾಳಿ ಗಿರುಕೆನ್ನು" ಎಂದು 'ಹರಿಶ್ಚಂದ್ರ ಕಾವ್ಯ' ವರ್ಣಿಸುತ್ತದೆ. "ದೀಪವೂ ನಿನ್ನದೆ, ಗಾಳಿಯೂ ನಿನ್ನದೆ - ಆರದಿರಲಿ ಬೆಳಕು" ಎಂಬ ಸಾಲುಗಳು ಕೆ.ಎಸ್. ನರಸಿಂಹಸ್ವಾಮಿಯವರ 'ಪ್ರಥಮ ರಾಜನಿಗೆ' ಎಂಬ ಕವನದವು.
'ಕಬ್ಬಿಗರ ಕಾವ'ವು ಆಕಾಶವನ್ನು 'ಗಾಳಿವಟ್ಟೆಕ' (ಗಾಳಿ ಬೀಸುವ ಮಾರ್ಗ) ಎನ್ನುತ್ತದೆ: "ಗಾಳಿವಟ್ಟೆಯೊಳ್ ನಡೆವನ ಕಾಯ್ಪು ತಣ್ಣಗಿರೆ". ಈ ಮಾತನ್ನು ಕುವೆಂಪು ತಮ್ಮ 'ಯಮನ ಸೋಲು' ನಾಟಕದಲ್ಲಿ ಬಳಸುತ್ತಾರೆ. ಗಾಳಿ ಬೀಸುವ ಜಾಗವೆಂಬ ಅರ್ಥದಲ್ಲಿ 'ಪುಷ್ಪದಂತಪುರಾಣ'ವು 'ಗಾಳಿವೆಱಗು' ಎಂಬ ಮಾತನ್ನು ಬಳಸುತ್ತದೆ ("ಕಿಱಿದು ಬೇಗಂ ಆ ಗಾಳಿವೆಱಗಿನೊಳು ರಥಮಂ ನಿಲಿಸಿ"). ಗಾಳಿಯ ಮೂಲಕ ವಾಸನೆ ತಿಳಿಯುವುದೇ 'ಗಾಳಿಗೊಳ್' ("ಅದು ಗಾಳಿಗೊಂಡು ಒಂದು ದೆಸೆಗೆ ತಗುಳ್ದೊಡೆ" ಎಂಬುದು 'ವಡ್ಡಾರಾಧನೆ'ಯ ಮಾತು). 'ಗಾಳಿವಾತು' ಎಂದರೆ ಬೈಗುಳ ("ಗಾಳಿವಾತೆಂದು ಬೈಗುಳ್" - 'ಶಬ್ದಮಣಿದರ್ಪಣ'). ಈಗ 'ಗಾಳಿ ಮಾತು' ಎಂಬುದಕ್ಕೆ ವದಂತಿ (hearsay) ಎಂಬ ಅರ್ಥವಿದೆ. "ಸಂಸಾರವೆಂಬುದು ಗಾಳಿಯ ಸೊಡರು" ಎಂಬ ಬಸವಣ್ಣನು 'ಗಾಳಿಯ ಸೊಡರ'ನ್ನು ಅಸ್ಥಿರತೆಯ ಸಂಕೇತವಾಗಿಸಿದ್ದಾನೆ. ಬೇಟೆಯಲ್ಲಿ 'ಮೇಗಾಳಿ' (ಬೇಟೆಯ ಪ್ರಾಣಿಯ ಮೇಲೆ ಹಾದು ಬೇಟೆಯ ಮೃಗದ ಕಡೆಗೆ ಬೀಸುವ ಗಾಳಿ) 'ಕಿಗ್ಗಾಳಿ' (ಬೇಟೆಯ ಮೃಗದ ಮೇಲಿಂದ ಹಾದು ಬೇಟೆಯಾಡುವ ಪ್ರಾಣಿಯ ಕಡೆಗೆ ಬೀಸುವ ಗಾಳಿ) ಎಂಬ ಮಾತುಗಳ ಬಳಕೆಯಿದೆ. 'ಹರಿಶ್ಚಂದ್ರ ಕಾವ್ಯ'ದಲ್ಲಿ "ಮೇಗಾಳಿಯಿಂ ದೂರದಿಂ ತೋಱೆತ್ತನೊಡ್ಡಿ ಕಿಗ್ಗಾಳಿಯಿಂ .. .. ಹುಲಿಯ ಹಾರಯಿಸಿ" ಎಂದು ಮುಂತಾದ ವರ್ಣನೆಯಿದೆ.
'ಗಾಳಿ' ಎಂದರೆ ದೆವ್ವ ಎಂಬರ್ಥವೂ ಇದೆ. "ಗಾಳಿ ಸೋಂಕಿದತ್ತು ಪಿಶಾಚಂ ತೊಡರ್ದುದು ಭೂತಂ ಬನ್ನಂಬಡಿಸಿದುದು" ('ಕರ್ಣಾಟಕ ಕಾದಂಬರಿ'). ಇದು ಹೂಬಿಟ್ಟ ಹುಣಿಸೆ ಮರದಲ್ಲಿರುತ್ತದೆಂಬ ನಂಬಿಕೆಯಿತ್ತು ("ಪೂತ ಪುಣಿಸೆಯಂ ಗಾಳಿ ಪೊಕ್ಕಂತೆ"  - 'ಧರ್ಮಾಮೃತ'). 'ಗಾಳಿಗೆ ತೂರು' ಎಂದರೆ ಉದಾಸೀನ ಮಾಡು; 'ಗಾಳಿ ಬಂದಾಗ ತೂರಿಕೊ' ಎಂದರೆ ಅವಕಾಶವಾದಿಯಾಗು ಮುಂತಾದ ಅನೇಕ ನುಡಿಗಟ್ಟುಗಳಲ್ಲದೆ, 'ಗಾಳಿ' ಪೂರ್ವಪದವಾಗುಳ್ಳ 'ಗಾಳಿಗುದುರೆ' 'ಗಾಳಿಗಿರಣಿ' 'ಗಾಳಿಕೋಳಿ' ಎಂಬ ಸಮಾಸಪದಗಳೂ ಬಳಕೆಯಲ್ಲಿವೆ.
=====
ಗೌಡ: ಈ ಶಬ್ದ ಕನ್ನಡದಲ್ಲಿ ಸುಪರಿಚಿತವಾದುದು. ಆದರೆ ಇದು ಅಚ್ಚ ಕನ್ನಡ ಪದವೇನಲ್ಲ; ಸಂಸ್ಕೃತದ ಎರಡು ಪದಗಳು ಸೇರಿ ಬರಬರುತ್ತ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತ ಈಗ ಈ ರೂಪದಲ್ಲಿದೆ: ಹಳ್ಳಿಯ ಹಿರಿಯ ಎಂಬರ್ಥದಲ್ಲಿ ಗ್ರಾಮ+ವೃದ್ಧ ಪದಗಳು ಸೇರಿ ಪ್ರಾಕೃತದಲ್ಲಿ ಗಾಮಉಡ>ಗವುಂಡ>ಗೌಂಡ>ಗೌಡ ಎಂಬ ಕ್ರಮದಲ್ಲಿ ಬದಲಾಗಿದೆಯೆಂಬುದು ಕೆಲವು ಭಾಷಾವಿಜ್ಞಾನಿಗಳ ಊಹೆ; 'ಗ್ರಾಮಕೂಟ' ಎಂಬ ಶಬ್ದದಿಂದ ಗೌಡ ಬಂದಿದೆಯೆಂಬುದು ಮತ್ತೂ ಕೆಲವರ ವಾದ.  'ಗಾಮುಣ್ಡ' ಎಂಬ ರೂಪವು ಆರನೆಯ ಶತಮಾನದ್ದೆಂದು ಬಗೆಯಲಾದ ಶಾಸನವೊಂದರಲ್ಲಿ ಕಾಣಿಸುತ್ತದೆ; 'ಗಾಮುಂಡಂ' ಎಂಬ ರೂಪವು 'ವಡ್ಡಾರಾಧನೆ'ಯಲ್ಲಿಯೂ ದೊರೆಯುತ್ತದೆ. 'ಧರ್ಮಾಮೃತ'ವೆಂಬ ನಯಸೇನನ ಹನ್ನೆರಡನೆಯ ಶತಮಾನದ ಕಾವ್ಯದಲ್ಲಿಯೂ, ಶಾಸನದಲ್ಲಿಯೂ 'ಗೌಂಡ' ಎಂಬ ರೂಪವು ದೊರೆಯುತ್ತದೆ. 'ಗೌಡ' ಎಂಬ ಶಬ್ದದ ಅತ್ಯಂತ ಪ್ರಾಚೀನ ಬಳಕೆ ಹದಿಮೂರನೆಯ ಶತಮಾನದ ಕವಿ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ತಮಿಳಿನಲ್ಲಿ ಗೌಂಡರ್ ಎಂಬ ರೂಪವೂ ತೆಲುಗಿನಲ್ಲಿ ಗೌಡು ಎಂಬ ರೂಪವೂ ಬಳಕೆಯಲ್ಲಿದೆ.
ಇದಕ್ಕೆ ವಿವಿಧ ಪ್ರತ್ಯಯಗಳನ್ನು ಸೇರಿಸಿ ಅನೇಕ ಶಬ್ದಗಳನ್ನು ಮಾಡಿಕೊಳ್ಳಲಾಗಿದೆ. ಗೌಡನ ಕೆಲಸ ಎಂಬರ್ಥದಲ್ಲಿ ಗಾವುಂಡಿಕೆ ಎಂಬ ರೂಪವು ಹನ್ನೆರಡನೆಯ ಶತಮಾನದ ನವಲಗುಂದದ ಶಾಸನವೊಂದರಲ್ಲಿ ಸಿಕ್ಕುತ್ತದೆ; ಇದೇ ಮುಂದೆ ಗೌಡಿಕೆ ಎಂದಾಯಿತು. ಇದೇ ಅರ್ಥದಲ್ಲಿ ಗಾವುಂಡತನ ಎಂಬ ರೂಪವೂ ಶಾಸನಗಳಲ್ಲಿ ದೊರೆಯುತ್ತದೆ. ಗೌಡನ ಹೆಂಡತಿ ಎಂಬರ್ಥದಲ್ಲಿ ಗಾವುಂಡಿ ಎಂಬ ರೂಪವುಂಟಾಗಿ ಮುಂದೆ ಅದೇ ಗಾವುಂಡಿತಿ ಎಂದಾಗಿ ಆನಂತರ ಗೌಡಿತಿ ಎಂದಾಗಿದೆ. ಈ ಕೆಲಸವನ್ನು ನಿರ್ವಹಿಸು ಎಂಬರ್ಥದಲ್ಲಿ ಶಾಸನಗಳು 'ಗಾಮುಂಡುಗೆಯ್' ಎಂಬ ರೂಪವನ್ನು ಬಳಸುತ್ತವೆ. ಇದಕ್ಕೆ ಸಂಬಂಧಸೂಚಕ ಪದಗಳು ಸೇರಿ ಗಾಮುಂಡಬ್ಬೆ, ಗಾಮುಂಡಸ್ವಾಮಿ ಎಂಬ ವ್ಯಕ್ತಿನಾಮಗಳಾಗಿಯೂ ಶಾಸನಗಳಲ್ಲಿ ಬಳಕೆಗೊಂಡಿವೆ. ಕೆಲವರು ಗೌಡ ಶಬ್ದವನ್ನು ಜಾತಿಸೂಚಕವಾಗಿಯೂ ಬಳಸುತ್ತಾರೆ.
ಗೌಡ ಎಂಬ ಸ್ವತಂತ್ರ ಸಂಸ್ಕೃತ ಶಬ್ದವೂ ಇದೆ. ಇದು ಉತ್ತರ ಭಾರತದ ಪ್ರದೇಶವೊಂದಕ್ಕೆ ಇದ್ದ ಹೆಸರು. ದಂಡಿ ಎಂಬ ಆಲಂಕಾರಕನ 'ಕಾವ್ಯಾದರ್ಶ' ಎಂಬ ಕೃತಿಯಲ್ಲಿ ಈ ಪ್ರದೇಶದಲ್ಲಿ ಸಂಸ್ಕೃತವನ್ನು ಬರೆಯುತ್ತಿದ್ದ ಬಗೆಯನ್ನು 'ಗೌಡೀ' ರೀತಿ ಎಂದು ಕರೆಯುತ್ತಾನೆ. ಗೌಡರೀತಿ ಎಂದೂ ಇದನ್ನು ಕರೆಯಲಾಗುತ್ತಿತ್ತು. ಸಂಸ್ಕೃತದಲ್ಲಿ ಈ ಪದಕ್ಕೆ ಕಾಕಂಬಿಯ ಮದ್ಯವೆಂಬ ಅರ್ಥವೂ ಇದೆ.
======
ಚಾಟಿ: ಇದು ಸಂಸ್ಕೃತದ ಚರ್ಮಪಟ್ಟಿಕಾ ಎಂಬುದರ ತದ್ಭವ. ಈ ಶಬ್ದವು ಚಮ್ಮಟಿಗೆ ಎಂದಾಗಿ ಆ ಬಳಿಕ ಚಾವಟಿಯಾಗಿ, ನಂತರ ಚಾಟಿಯಾಗಿದೆ. ಎಮೆನೋ ಮತ್ತು ಬರೋ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಇತರ ದ್ರಾವಿಡ ಭಾಷೆಗಳ ಅದರ ಜ್ಞಾತಿ ಪದಗಳನ್ನು ನೀಡುತ್ತಾರೆ: ತಮಿಳಿನಲ್ಲಿ ಚಾಟ್ಟಿ, ಚಾಟ್ಟೈ ಎಂದೂ, ತೆಲುಗಿನಲ್ಲಿ ಜಾಟಿ ಎಂದೂ, ಮಲಯಾಳಂನಲ್ಲಿ ಚಾಟ್ಟ ಎಂದೂ ಆಗುತ್ತದಂತೆ. ಅಲ್ಲದೆ ಚಮ್ಮಟಿಗೆ ಎಂಬ ರೂಪವು ತಮಿಳಿನಲ್ಲಿ ಚಮ್ಮಟ್ಟಿ ಎಂದೂ, ತೆಲುಗಿನಲ್ಲಿ ಸಮ್ಮೆಟ ಎಂದೂ, ಮಲಯಾಳಂನಲ್ಲಿ ಚಮ್ಮಟ್ಟಿಕೂಟಂ ಎಂದೂ, ತುಳುವಿನಲ್ಲಿ ಚಮಟಿಗೆ ಎಂದೂ ಆಗುತ್ತದೆಂದು ಅಲ್ಲಿಯೇ ಹೇಳಿ, ಅದಕ್ಕೆ ಕಮ್ಮಾರನ ಸುತ್ತಿಗೆ ಎಂಬ ಅರ್ಥವನ್ನು ನೀಡಿದೆ.
ಚರ್ಮಪಟ್ಟಿಕಾ ಎಂಬುದು ಮೂಲತಃ ಪಗಡೆಯ ಹಾಸು ಎಂಬರ್ಥವನ್ನು ಹೊಂದಿದ್ದರೂ ಕನ್ನಡದಲ್ಲಿ ಚಮ್ಮಟಿಗೆ ಎಂಬುದಕ್ಕೆ ಹಳೆಯ ನಿಘಂಟುಗಳು ಚರ್ಮದಂಡ (ಬಾರುಕೋಲು) ಎಂಬ ಅರ್ಥವನ್ನು ನೀಡುತ್ತವೆ. 'ಶಬ್ದಮಣಿದರ್ಪಣ'ದಲ್ಲಿ "ಚರ್ಮಪಟ್ಟಿಕಾ - ಚಮ್ಮಟ್ಟಿಗೆಯುಂ ಸಮಟಿಗೆಯೆನಲುಮಕ್ಕುಂ" ಎಂದು ಹೇಳಲಾಗಿದೆ. 'ಪಂಪಭಾರತ'ದಲ್ಲಿ ಈ ಅರ್ಥದಲ್ಲಿಯೇ ಈ ಪದ ಬಳಕೆಯಾಗಿದೆ ("ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯುಮಂ ಒರ್ವ ಕೀೞಾಳಿಂ ಪಿಡಿಯಿಸಿಕೊಂಡು ಬಂದು"). ರಾಘವಾಂಕನು ತನ್ನ 'ಹರಿಶ್ಚಂದ್ರ ಕಾವ್ಯ'ದಲ್ಲಿ ಹರಿಶ್ಚಂದ್ರನು "ತುಡುಕಿ ಚಮ್ಮಟಿಗೆಯಂ ಸೆಳೆದು" ಗಾನರಾಣಿಯರಿಗೆ ಹೊಡೆದ ಪ್ರಸಂಗವಿದೆ.
ರೈತರು ಎತ್ತುಗಳನ್ನು ಹೊಡೆಯಲು ಬಳಸುವ ಬಾರುಕೋಲು ದಪ್ಪ ಹುರಿಯಿಂದ ಮಾಡಿದುದಾದರೂ ತುದಿಗೆ ಚರ್ಮದ ಪಟ್ಟಿ ಕಟ್ಟಿರುತ್ತಾರೆ. ಹೀಗಾಗಿ ಬುಗುರಿಯನ್ನು ಆಡಿಸುವ ದಾರಕ್ಕೂ ಚಾವಟಿ ಅಥವಾ ಚಾಟಿ ಎನ್ನುವುದು ರೂಢಿಯಲ್ಲಿದೆ. 'ಚಾಟಿಯಿಲ್ಲದೆ ಬುಗುರಿ ಆಡಿಸು' ಎಂಬ ಗಾದೆಯು ಕಾರ್ಯವನ್ನು ಹೇಗೋ ಸಾಧಿಸುವ ಚಾಲಾಕಿತನವನ್ನು ಸೂಚಿಸುತ್ತದೆ. ಹೀಗೆ ಚಮ್ಮಟಿಗೆ ಎಂಬ ಶಬ್ದವು ಒಂದೆಡೆ ದ್ರಾವಿಡಪದವಾಗಿ ಮತ್ತೊಂದೆಡೆ ಸಂಸ್ಕೃತ ಶಬ್ದವೊಂದರ ತದ್ಭವವಾಗಿ ಬೇರೆ ಬೇರೆ ಅರ್ಥಗಳನ್ನು ಪಡೆಯುತ್ತದೆ.
=====
ಚಿಪ್ಪಿಗ: ಇದು ಈಗಿನ ದರ್ಜಿಯನ್ನು ಸೂಚಿಸುವ ಶಬ್ದ. ಇದರ ಮೂಲ ಶಬ್ದ ಸಂಸ್ಕೃತದ 'ಶಿಲ್ಪಿಕ'. ಇದು ಪ್ರಾಕೃತದಲ್ಲಿ ಸಿಪ್ಪಿಅ ಎಂದಾಗಿ ಕನ್ನಡದಲ್ಲಿ ಸಿಂಪಿಗ, ಸಿಂಪಿ, ಚಿಂಪಿಗ, ಚಿಪ್ಪಿಗ ಎಂಬ ರೂಪಗಳನ್ನು ಪಡೆಯುತ್ತದೆ. ಹಾಗೆಯೇ ಇದು ತಮಿಳಿನಲ್ಲಿ ಚಿಪ್ಪಿ, ಚಿಪ್ಪಯನ್ ಎಂದೂ, ತೆಲುಗಿನಲ್ಲಿ ಚಿಪ್ಪೆವಾಡು ಎಂದೂ, ತುಳುವಿನಲ್ಲಿ ಚಿಪ್ಪಿಗ ಎಂದೂ ಆಗುತ್ತದೆ. ನಯಸೇನನ 'ಧರ್ಮಾಮೃತ'ದಲ್ಲಿನ ನರಕದ ವರ್ಣನೆಯಲ್ಲಿ ಪಾಪಿಯನ್ನು ಕತ್ತರಿಸಿ "ಸಿಪ್ಪಿಗನಂತೆ ಪೊಲಿವರ್" ಎಂಬ ವರ್ಣನೆ ಬರುತ್ತದೆ. ಸೂಜಿಯನ್ನು ಹಿಡಿದು ಕೈಯಿಂದ ಬಟ್ಟೆ ಹೊಲಿಯಬೇಕಾದ್ದರಿಂದ ಹೊಲಿಯುವ ಕೆಲಸವನ್ನು ಸೂಜಿಕಾಯಕ ಎಂದೂ ಕರೆಯುತ್ತಿದ್ದರು. ಸೂಜಿಕಾಯಕದ ರಾಮಿತಂದೆ ಎಂಬೊಬ್ಬ ವಚನಕಾರ ತನ್ನ ಕಾಯಕವಿವರದ ರೂಪಕದಲ್ಲಿ ಸಾಧನೆಯ ಸ್ವರೂಪವನ್ನು ವರ್ಣಿಸುತ್ತಾನೆ; "ತಲೆಗೆ ಮೂರು ಚಿಪ್ಪು, ಅಂಗಕ್ಕಾರು ಚಿಪ್ಪು, ಮಿಕ್ಕಾಗ ಸರ್ವಾಂಗವೆಲ್ಲಕ್ಕೂ ಒಂದೇ ಚಿಪ್ಪಿನ ಕುಪ್ಪಸ". ಇಲ್ಲಿ ಹೇಳಿರುವ ಚಿಪ್ಪು ಪ್ರಾಯಶಃ ಕತ್ತರಿಸಿದ ಬಟ್ಟೆಯ ತುಂಡಿಗೆ ಅನ್ವಯಿಸುತ್ತದೆ. (ಆದ್ದರಿಂದಲೇ ಈ ಕಾಯಕ ಮಾಡುವವನು ಚಿಪ್ಪಿಗ ಎನ್ನಿಸಿಕೊಂಡನೇ?). ನೆವ ಹೇಳುತ್ತಿದ್ದ ಸಿಂಪಿಗನನ್ನು ಕುರಿತು ಸರ್ವಜ್ಞನು "ಎಳ್ಳು ಗಾಣಿಗ ಬಲ್ಲ; ಸುಳ್ಳು ಸಿಂಪಿಗ ಬಲ್ಲ" ಎನ್ನುತ್ತಾನೆ!
ಹಿಂದೆಯೂ ಬೇರೆ ಬೇರೆ ವೃತ್ತಿಗಳವರ ಸಂಘಗಳಿರುತ್ತಿದ್ದವು. ಕೊತ್ತೞಿ ಎಂದರೆ ಕಾಗೆಗಳ ಗುಂಪು ಮತ್ತು ಜನರ ನೆರವಿ ಎಂಬ ಅರ್ಥಗಳನ್ನು 'ಶಬ್ದಮಣಿದರ್ಪಣ'ವು ಕೊಡುತ್ತದೆ. ಹೀಗಾಗಿ ವೃತ್ತಿಸಂಘಗಳನ್ನು ಆಯಾ ವೃತ್ತಿಗಳವರ 'ಕೊತ್ತೞಿ'ಗಳೆಂದು ಕರೆಯುತ್ತಿದ್ದರು. ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ ಗಾಣದ ಕೊತ್ತಳೞಿಗಳು ದೇವರ ಉಪಯೋಗದ ಎಣ್ಣೆಗಾಗಿ ದತ್ತಿ ಬಿಟ್ಟ ಉಲ್ಲೇಖವಿದೆ. ಹಾಗೆಯೇ ದರ್ಜಿಗಳ ವೃತ್ತಿಸಂಘವನ್ನು 'ಸಿಪ್ಪಿಗಗೊತ್ತಳಿಕ' (ಸಿಪ್ಪಿಗ+ಕೊತ್ತಳಿ) ಎನ್ನುತ್ತಿದ್ದರು. ಹನ್ನೆರಡನೆಯ ಶತಮಾನದ ಶಿಕಾರಿಪುರದ ಶಾಸನವೊಂದರಲ್ಲಿ "ಸಮಸ್ತ ಸಿಪ್ಪಿಗಗೊತ್ತಳಿಯೆಲ್ಲಂ ದೇವರ ಚೈತ್ರಪವಿತ್ರದ ಪರ್ವಕ್ಕೆ" ಒಂದು ಪಣ (ಚಿನ್ನದ ನಾಣ್ಯ)ವನ್ನು  ದತ್ತಿಯಾಗಿ ನೀಡಿದ ವಿವರವಿದೆ. ಸಿಂಪಿ ಲಿಂಗಣ್ಣ ಆಧುನಿಕ ಕನ್ನಡದ ಪ್ರಸಿದ್ಧ ಗದ್ಯಲೇಖಕರು.
=====
ಚಿಪ್ಪು: ಇದು ಶುಕ್ತಿ ಎಂಬ ಸಂಸ್ಕೃತ ಪದದ ತದ್ಭವವೆಂದು ಹೇಳುತ್ತಾರೆ; ಪ್ರಾಕೃತದಲ್ಲಿ ಸಿಪ್ಪಿ ಎಂದಾಗುತ್ತದೆ. ಕನ್ನಡದಲ್ಲಿಯೇ ಚಿಂಪಿ, ಚಿಂಪೆ, ಸಿಂಪಿ, ಸಿಂಪೆ, ಸಿರ್ಪು ಮುಂತಾದ ರೂಪಗಳನ್ನು ತಾಳುತ್ತದೆ. ತಮಿಳು, ಮಲಯಾಳಂಗಳಲ್ಲಿ ಚಿಪ್ಪಿ, ಚಿಂಪು ಎಂಬ, ತೆಲುಗಿನಲ್ಲಿ ಚಿಪ್ಪ ಎಂಬ, ತುಳುವಿನಲ್ಲಿ ಚಿಪ್ಪಿ, ತಿಪ್ಪಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ. ಮೂಲದಲ್ಲಿ ಇದರ ಅರ್ಥ ಸಮುದ್ರದಲ್ಲಿ ದೊರಕುವ ಗಟ್ಟಿ ಕವಚದ ಪದಾರ್ಥ ಎಂದು; ಮುತ್ತಿನ ಚಿಪ್ಪು, ಕಪ್ಪೆ ಚಿಪ್ಪು ಎಂಬಿವು ಸಾಮಾನ್ಯವಾದ ಶಬ್ದಗಳು. ಹೀಗಾಗಿ ಮುಂದೆ ಗಟ್ಟಿಯಾದ ಮೇಲುಕವಚ ಎಂಬ ಅರ್ಥವನ್ನು ಪಡೆಯಿತು; ಜೊತೆಗೆ ಬಟ್ಟಲು ಎಂಬರ್ಥವನ್ನೂ ಪಡೆಯಿತು.
ಸಿಪ್ಪು ಎಂಬ ರೂಪದಲ್ಲಿ ಬಟ್ಟಲು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಯಾಗಿದೆ ("ಪೊನ್ನ ಬೆಳ್ಳಿಯ .. .. ಸಿಪ್ಪುಗಳೊಳ್"). ಸಿಂಪು ಎಂಬ ರೂಪದಲ್ಲಿದು ಮುತ್ತಿನ ಚಿಪ್ಪು ಎಂಬರ್ಥದಲ್ಲಿ ಹನ್ನೊಂದನೆಯ ಶತಮಾನದ 'ಕರ್ಣಾಟಕ ಕಾದಂಬರಿ'ಯಲ್ಲಿ ದೊರೆಯುತ್ತದೆ. ("ನಸುದೆಱೆಯುತ್ತುಮಿರ್ದ ಪೊಸಮುತ್ತಿನ ಸಂಪುಟಂಗಳಿಂ"). ತಲೆಬುರುಡೆಯನ್ನೂ ಈ ಶಬ್ದವು ಸೂಚಿಸುತ್ತದೆ: ರನ್ನಕವಿಯ 'ಅಜಿತಪುರಾಣ'ದಲ್ಲಿ "ಪಳವದ ತಿವಳಯ ಜುಂಕದ ಮೊಳಸಿನ ಜೇಕಿರದ ಸಿವಿಱ ಸಿಪ್ಪಿನ ಲಯದಿಂದ ಎಳಲದೆ ಕುಣಿದರ್" ಎಂಬ ಪ್ರಯೋಗವಿದೆ. ಈ ಶಬ್ದವು ಚಿಪ್ಪು ಎಂಬ ರೂಪದಲ್ಲಿ ತೆಂಗಿನ ಕಾಯಿ ಮುಂತಾದವುಗಳ ಕವಚ ಎಂಬರ್ಥವನ್ನು ಪಡೆಯಿತು. ತೆಂಗಿನ ಚಿಪ್ಪು ಎಂಬುದು ಸಾಮಾನ್ಯ ಬಳಕೆಯಲ್ಲಿನ ಪ್ರಯೋಗ. "ಕೈಗೆ ಚಿಪ್ಪು ಕೊಡು" ಎಂಬುದು ನಿರ್ಗತಿಕನನ್ನಾಗಿಸು ಎಂಬರ್ಥದ ನಾಣ್ಣುಡಿ. ಸಿಂಪಿ ಎಂಬ ರೂಪದಲ್ಲಿದು ಒಳಲೆಯನ್ನೂ ಸೂಚಿಸುತ್ತದೆ. ಬಾಳೆಯ ಹಣ್ಣುಗಳಿರುವ ಬೇರ್ಪಡಿಸಬಹುದಾದ ಗುಂಪಿಗೆ ಚಿಪ್ಪು ಎಂಬುದು ಸಾಮಾನ್ಯವಾಗಿ ಬಳಸುವ ಪದ. ಮುಂದೆ ಸಿಪ್ಪೆ ಎಂಬ ರೂಪದಲ್ಲಿ ಈ ಶಬ್ದಕ್ಕೆ ಹೊರಮೈ ಎಂಬ ಅರ್ಥ ಪ್ರಾಪ್ತವಾಯಿತು. ಹಣ್ಣಿನ ಸಿಪ್ಪೆ ಸಾಮಾನ್ಯ ಬಳಕೆಯ ಶಬ್ದ. 'ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿಹಾಕಿಕೊಂಡ' ಎಂಬುದು ಜನಬಳಕೆಯಲ್ಲಿರುವ ಒಂದು ಗಾದೆ. 'ಸಿಪ್ಪೆಗಟ್ಟು' ಎಂಬ ರೂಪವು ಹೆಕ್ಕಳಿಕೆಯುಂಟಾಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ಚೊಂಬು: ತಂಬಿಗೆ ಎಂಬರ್ಥದ ಈ ಪದದ ಇನ್ನೊಂದು ರೂಪ ಚೆಂಬು ಅಥವಾ ಚಂಬು. ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳಲ್ಲೂ ಈ ಶಬ್ದ ಬಳಕೆಯಲ್ಲಿದೆ. ಇದು ಚೆಂಬೊನ್ ಎಂಬ ರೂಪದಿಂದ ಬಂದುದು, ಅಥವಾ ಅದರ ಸವಕಳಿ ರೂಪ. ಚೆಂಬೊನ್ ಎಂದರೆ ತಾಮ್ರ ಎಂಬ ಅರ್ಥವಿತ್ತು, ಕೆಚ್ಚನೆಯ ಅಥವಾ ಕೆಂಪಾದ ಎಂಬರ್ಥದ ಚೆಂ ಪೂರ್ವಪದವಾಗಿ ಬಂದ ಅನೇಕ ಶಬ್ದಗಳಿವೆ: ಚೆಂಬುಗೆಂಪು ಎಂದರೆ ತಾಮ್ರದಂತಹ ಕೆಂಪು, ಚೆಂಬೆರಲ್ ಎಂದರೆ ಕೆಂಪು ಬೆರಳು, ಚೆಂಬೆಳಗು ಎಂದರೆ ಬೆಳಗಿನ ಕೆಂಪಾದ ಕಾಂತಿ ಇತ್ಯಾದಿ. ಚೆಂಬೋತ ಎಂಬುದು ಒಂದು ಬಗೆಯ ಕೆಂಪು ಬಣ್ಣದ ಪಕ್ಷಿಯ ಹೆಸರು; ಅದೇ ಕೆಂಬೋತ ಅಥವಾ ಕೆಂಬೂತ ಎಂದಾಗಿದೆ. ಸಮಾಸವಾಗುವಾಗ ಕೆಂಪು ಎಂಬರ್ಥದ ಪೂರ್ವಪದ ಕೆಂ ಎಂಬುದು ಚೆಂ ಎಂಬುದಾಗಿ ಬದಲಾಗುತ್ತದೆ (ಇದನ್ನು ಭಾಷಾವಿಜ್ಷಾನದಲ್ಲಿ ತಾಲವ್ಯೀಕರಣ ಎನ್ನುತ್ತಾರೆ; ಚ ಎಂಬ ವರ್ಣವು ತಾಲುವಿನಲ್ಲಿ - ಅಂದರೆ ಬಾಯ ಅಂಗುಳು -  ಹುಟ್ಟುವುದರಿಂದ ಈ ಪ್ರಕ್ರಿಯೆಗೆ ಈ ಹೆಸರು ಬಂದಿದೆ). ಕೆಂ ಎಂಬುದಕ್ಕೆ ಪೊನ್ ಎಂಬುದು ಸೇರಿ ಚೆಂಬೊನ್ ಆಗಿದೆ. ಹಳಗನ್ನಡದಲ್ಲಿ ಪೊನ್ ಎಂದರೆ ಲೋಹ ಎಂದಷ್ಟೇ ಅರ್ಥವಿದ್ದುದು; ಹೀಗಾಗಿ ಚೆಂಬೊನ್ ಎಂದರೆ ಕೆಂಪು ಲೋಹ ಎಂಬ ಅರ್ಥವಿತ್ತು. "ಚೆಂಬೊನ್ನ ಘಟ" (ತಾಮ್ರದ ಕೊಡ)ಎಂಬ ಪ್ರಯೋಗವು ಹದಿಮೂರನೆಯ ಶತಮಾನದ ಕವಿ ಎರಡನೆಯ ಗುಣವರ್ಮನ 'ಪಾರ್ಶ್ವನಾಥಪುರಾಣ'ದಲ್ಲಿದೆ. ಚೆಂಬು ಎಂದರೂ ತಾಮ್ರ ಎಂದೇ ಅರ್ಥವಿತ್ತು. ಚೆಂಬುಕುಟಿಗ ಅಥವಾ ಚೆಂಬುಕುಟ್ಟಿಗ ಎಂದರೆ ತಾಮ್ರದ ಕೆಲಸ ಮಾಡುವವನು.
ಕೆಲವು ಕಾವ್ಯಗಳಲ್ಲಿ ಚೆಂಬೊನ್ ಎಂಬ ಪದವನ್ನು ಚಿನ್ನದ ನಾಣ್ಯ ಎಂಬರ್ಥದಲ್ಲಿಯೂ ಬಳಸಿರುವುದು ಕಾಣುತ್ತದೆ. "ಚೆಂಬೊಂಗಳಂ ಓರಂತಿರೆ ಬೇಡಿಕೊಳ್ವೆಂ ಎನ್ನಾರ್ಪನಿತಂ" ಎಂಬ ಮಾತು ಕ್ರಿಶ ಹನ್ನೆರಡನೆಯ ಶತಮಾನದ ಕವಿ ನಯಸೇನನ 'ಧರ್ಮಾಮೃತ'ದಲ್ಲಿದೆ. ಚೆಂಬು ಎಂಬುದು ಮುಂದೆ ಗೋಪುರದ ಕಳಶ ಎಂಬರ್ಥದಲ್ಲಿಯೂ ಬಳಕೆಯಾಗಿದೆ.
'ಕೈಗೆ ಚೆಂಬು ಕೊಟ್ಟ' 'ಚೆಂಬೇ ಗತಿ' ಇತ್ಯಾದಿ ಮಾತುಗಳನ್ನು ಹೊಸಗನ್ನಡದಲ್ಲಿ ನಾವು ಬಳಸುತ್ತೇನೆ. ದಾಸಯ್ಯಗಳು ಚೆಂಬುಹಿಡಿದು ಭಿಕ್ಷೆಗೆ ಬರುವುದು ಹೀಗಾಗಿ ಚೆಂಬು ಹಿಡಿಯುವುದು ಎಂದರೆ ಭಿಕ್ಷೆ ಬೇಡು ಎಂಬರ್ಥ ಬಂದು, ಚೆಂಬು ಕೊಡು ಎಂದರೆ ಭಿಕ್ಷೆ ಬೇಡುವ ಸ್ಥಿತಿಯುಂಟುಮಾಡು ಎಂಬ ವ್ಯಂಗ್ಯದ ಅರ್ಥ ಬಂದಿದೆ. 'ನಮ್ಮಪ್ಪ ದೊಡ್ಡ ಚೆಂಬು ಕೊಟ್ಟ' ಎಂದರೆ ಏನೇನೂ ಕೊಡಲಿಲ್ಲ ಎಂಬುದೇ ಅರ್ಥ.
=====
ತಂಬಾಕು: ತಂಬಾಕ ಎಂಬದು ಇದರ ಮತ್ತೊಂದು ರೂಪ. ಎಲೆಯಡಿಕೆಯ ಜೊತೆ ಅಗಿಯುವ, ಒಣಗಿದೆಲೆಗಳಿಂದ ಮಾಡಿದ ಪುಡಿಯನ್ನು ಮೂಗಿಗೇರಿಸುವ, ಹಾಗೂ ಅದರ ಹೊಗೆಯನ್ನು ಸೇವಿಸುವ ರೂಢಿಯಿದೆ. ಈ ಕೊನೆಯ ರೀತಿಯಿಂದಾಗಿ ಈ ಸಸ್ಯವನ್ನು ಹೊಗೆಸೊಪ್ಪು ಎಂಬ ಹೆಸರಿನಿಂದಲೂ ಕರೆಯುತ್ತಾರೆ.  ತಂಬಾಕು ಎಂಬ ಶಬ್ದವು ಇಂಗ್ಲಿಷ್ನ 'ಟೊಬಾಕೊ'ದಿಂದ ಬಂದುದೆಂದು ಹೇಳುತ್ತಾರೆ.
ಧೂಮವರ್ತಿಯ ಉಲ್ಲೇಖ ಬಾಣ, ಸುಶ್ರುತ, ವಾಗ್ಭಟ, ಮತ್ತು ಚರಕರ ಪ್ರಾಚೀನ ಸಂಸ್ಕೃತ ಕೃತಿಗಳಲ್ಲಿ ಸಿಕ್ಕುತ್ತದೆ; 'ಸ್ಕಾಂದಪುರಾಣ'ದಲ್ಲಿ "ಧೂಮಪಾನೇನ ಭೋ ಪ್ರೇತಾ ಪ್ರೇತತ್ವಂ ಚೈವ ಜಾಯತೇ| ಕಲೌತು ಕಾಲರೂಪಂ ಹಿ ತಮಾಲಮೇವ ಜಾಯತೇ||" ಎಂಬ ಶ್ಲೋಕವಿದೆ. (ಧೂಮಪಾನ ಮಾಡುವವರು ಮರಣಾನಂತರ ಪ್ರೇತಗಳಾಗುತ್ತಾರೆ; ಕಲಿಯುಗದಲ್ಲಿ ಕಲಿಯೇ ತಮಾಲಪತ್ರದ ರೂಪದಲ್ಲಿ ಅವತರಿಸುತ್ತಾನೆ - ಎಂಬುದು ಇದರ ಅರ್ಥ). ಹೀಗಾಗಿ ಧೂಮಪಾನವು ನಮ್ಮಲ್ಲಿನ ಹಳೆಯ ಪದ್ಧತಿ ಎಂಬುದು ಕೆಲವರ ವಾದ. ಕನ್ನಡದಲ್ಲಿ 'ನಾಶಿ ತಂಬಾಕ'ದ ಪ್ರಸ್ತಾಪ ಅಂಬಿಗರ ಚೌಡಯ್ಯ ಮತ್ತು ಬಹುರೂಪಿ ಚೌಡಯ್ಯ ಎಂಬ ಇಬ್ಬರು ವಚನಕಾರರ ವಚನಗಳಲ್ಲಿದೆ. ನಮ್ಮಲ್ಲಿನ ಧೂಮಪಾನವು ತಮಾಲ ಅಥವಾ ತಮಾಲಪಾಕ ಎಂಬ ಸಸ್ಯದ ಹೊಗೆಯ ಸೇವನೆ. ತಮಾಲಪಾಕ ಎಂಬ ಶಬ್ದವೇ ತಂಬಾಕ ಏಕಾಗಿರಬಾರದು ಎಂಬುದು ಕೆಲವರ ವಾದ.
ಆದರೆ ಚರಿತ್ರೆ ಬೇರೆ ಕತೆಯನ್ನೇ ಹೇಳುತ್ತದೆ. ಕೊಲಂಬಸ್ನ ತಂಡ ಇಂಡಿಯವನ್ನು ಕಾಣಲೆಂದು ಸಮುದ್ರಯಾನ ಕೈಗೊಂಡದ್ದು ಮೊದಲು ಕ್ರಿಶ 1492 ರಲ್ಲಿ; ಅದು ತಲುಪಿದ್ದು ಲ್ಯಾಟಿನ್ ಅಮೆರಿಕವನ್ನು. ಅಲ್ಲಿನ ಜನ ಕೈಯಲ್ಲಿ ಸಣ್ಣ ಕೊಳವೆ ಹಿಡಿದು, ಅದರಲ್ಲಿ ಸಸ್ಯವೊಂದರ ಒಣಗಿದ ಎಲೆಯ ಪುಡಿಯನ್ನು ತುಂಬಿ ಒಂದು ತುದಿಗೆ ಬೆಂಕಿ ತಾಕಿಸಿ ಮತ್ತೊಂದು ತುದಿಯಿಂದ ಅದರ ಹೋಗೆಯನ್ನು ಸೇವಿಸುತ್ತಿದ್ದರು; ಆ ಕೊಳವೆಗೆ ಟೊಬಾಕೊ ಎಂದವರು ಕರೆಯುತ್ತಿದ್ದರು. ಅದು ಪೋರ್ಚುಗೀಸರ ಮೂಲಕ ಇಂಡಿಯ ಪ್ರವೇಶಿಸಿದ್ದು ಕ್ರಿಶ. 1556 ರ ನಂತರ. ಹೀಗಾಗಿ ಇಲ್ಲಿನ ತಮಾಲಪಾಕ ತಂಬಾಕಕ್ಕಿಂತ ಭಿನ್ನ ಸಸ್ಯವಾಗಿರಬೇಕು; ಆದ್ದರಿಂದ ಮೇಲೆ ಹೇಳಿದವರ ವಚನಗಳು ಪ್ರಾಯಶಃ ಪ್ರಕ್ಷಿಪ್ತವಾದವು.
=====
ತಲೆ: ಇದೊಂದು ದ್ರಾವಿಡ ಪದ; ಶಿರಸ್ಸು ಎಂಬ ಅರ್ಥವನ್ನು ಪಡೆದ ಈ ಶಬವು ತಮಿಳಿನಲ್ಲಿ ತಲೈ ಎಂದೂ ಮಲಯಾಳಂ ಮತ್ತು ತೆಲುಗಿನಲ್ಲಿ ತಲ ಎಂದೂ ತುಳುವಿನಲ್ಲಿ ತರೆ ಎಂದೂ ಆಗುತ್ತದೆ. ಮುಖ್ಯವಾದುದು ಎಂಬರ್ಥದಲ್ಲಿ ತಲೆ ಅನೇಕ ಸಮಾಸಪದಗಳಲ್ಲಿ ಬಳಕೆಯಲ್ಲಿದೆ; ತಲೆಬಾಗಿಲು, ತಲೆಮಣಿ ಇತ್ಯಾದಿ. ಹೆಡೆ ಎಂಬರ್ಥವೂ ಈ ಶಬ್ದಕ್ಕಿದೆ: 'ವಡ್ಡಾರಾಧನೆ'ಯಲ್ಲಿ "ಪನ್ನೆರಡು ತಲೆಯ ಪಾವುಮಂ" ಎಂಬ ಪ್ರಯೋಗವಿದೆ. ತಲೆಮಾರು ಎಂಬರ್ಥದಲ್ಲಿ ತಲೆ 'ಪಂಪಭಾರತ'ದಲ್ಲಿ ಬಂದಿದೆ ("ಸಲೆ ಸಂದಿರ್ಪತ್ತೊಂದು ತಲೆವರೆಗಂ"). ತಲೆ ಎಂದರೆ ಶ್ರೇಷ್ಠ ಎಂಬರ್ಥವೂ ಇದೆ: "ಅಂತು ಅರಿಸೇನೆಯಂ ಇದಿರ್ಚಿ ತಲೆವಿಲ್ ಎನೆ ಎಱೆದು ತವಿಸುವ ತೆಱದಿಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
'ತಲೆಯಿಕ್ಕು' ಎಂಬ ರೂಪವು ಮಲಗು ಎಂಬರ್ಥವನ್ನು ಪಡೆಯುತ್ತದೆ ("ಅಂತದರ ಮೊದಲೊಳ್ ಕೆಲವು ದಿವಸಂ ತಲೆಯಿಕ್ಕಿ ಪಟ್ಟಿರ್ದುದಂ" - ದುರ್ಗಸಿಂಹನ 'ಪಂಚತಂತ್ರ'). ತಲೆದೋರು ಎಂಬುದು ಕಾಣಿಸಿಕೊ ಎಂಬರ್ಥವನ್ನು ಪಡೆಯುತ್ತದೆ ("ತದ್ಭೋಗಿಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" - 'ಪಂಪಭಾರತ'). ತಲೆಗಾಯ್ ಎಂದರೆ ರಕ್ಷಿಸು ಎಂದು: "ಧರ್ಮಮೆ ತಲೆಗಾಯ್ಗುಂ" ಎಂಬುದು ರನ್ನನ 'ಅಜಿತಪುರಾಣ'ದ ಮಾತು. ರಕ್ಷಣೆಗಿರುವ ಮೈಗಾವಲ ಭಟನೇ 'ತಲೆಗಾಪಿನಾಳ್'; "ತಲೆಗಾಪಿನಾಳ್ ಉಕ್ಕಡದಾಳ ಮೇಲಿಕ್ಕಿ ಉಕ್ಕಡದಾಳ್ ರವಟ್ಟಿಗೆಯಾಳ ಮೇಲಿಕ್ಕಿ" (ರನ್ನನ 'ಗದಾಯುದ್ಧ'). ತಲೆಗರೆ ಎಂದರೆ ತಲೆಮರೆಸಿಕೊಳ್ಳುವುದು: "ಮಂತ್ರಪದಕ್ಕೆ ಉರಗಂ ಸುಗಿವಂತೆವೊಲ್ ಅಗಿದು ಸುಗಿದು ತಲೆಗರೆದಿರ್ಪಂ" - 'ಪಂಪಭಾರತ'.
ಕನ್ನಡದ ಕೆಲವು ವ್ಯಂಜನಾಕ್ಷರಗಳನ್ನು ಬರೆಯುವಾಗಿನ ಮೇಲುಗಡೆಯ ಗೆರೆಯೇ 'ತಲೆಕಟ್ಟು'. "ಬಿಂದುವಿನೊಂದು ಶೋಭೆ ತಲೆಕಟ್ಟಿನ ಪೊರ್ಕುಳ ಚೆಲ್ವು" ಇವುಗಳ ಬಗ್ಗೆ ಎರಡನೆಯ ಗುಣವರ್ಮನ 'ಪುಷ್ಪದಂತಪುರಾಣ'ದಲ್ಲಿ ಹೆಮ್ಮೆಯ ವರ್ಣನೆಯಿದೆ. ತಲೆವೊಯ್ಕ ಅಥವಾ ತಲೆಹೊಯ್ಕ ಎಂದರೆ ಕೊಲೆಗಾರ ಎಂದಿದ್ದುದು ಈಗಿನ 'ತಲೆಹೋಕ' ಎಂದರೆ ಮೂರ್ಖ ಎಂದಾಗಿದೆ. ಅತಿ ಮಾತು 'ತಲೆಹರಟೆ'. ಹೀಗೆ ತಲೆಯನ್ನು ಒಳಗೊಂಡ ಶಬ್ದಗಳು ಅಸಂಖ್ಯವಾಗಿವೆ.
=====
ತಾಯಿಗ್ಗಂಡ: ಹೀಗೆಂದು ಬಯ್ಯವುದನ್ನು ಕೇಳಿರಬಹುದು. ಸರಳವಲ್ಲದ ಹಾಗೂ ವಿದ್ರೋಹಕಾರಿಯಾದ ಕೃತ್ಯಗಳಲ್ಲಿ ತೊಡಗಿದವನನ್ನು 'ತಾಯಿಗ್ಗಂಡ' ಅಥವಾ 'ತಾಯಿಗಂಡ' ಎಂಬ ಶಬ್ದದಿಂದ ತಿರಸ್ಕಾರಪೂರ್ವಕವಾಗಿ  ಕರೆಯುತ್ತಾರೆ. ಪ್ರಾಯಶಃ ಈ ಶಬ್ದವು ತಾಯಿಗೆ+ಗಂಡ ಎಂಬುದರಿಂದ ಆಗಿರಬಹುದು. ತಾಯಿಯನ್ನೂ ಒಂದು ಹೆಣ್ಣೆಂದೇ ಭಾವಿಸಿ ನೆರೆಯುವ ಮನೋಭಾವವನ್ನು ಈ ಸಮಾಸಪದ ಸೂಚಿಸುತ್ತದೆ. (ಇಲ್ಲಿ ಸಾಫೋಕ್ಲೀಸ್ ಕವಿಯ ನಾಟಕದ ಪಾತ್ರವಾದ ಈಡಿಪಸ್ ದೊರೆಯ ನೆನಪಾಗುವುದು ಸಹಜ, ಆದರೆ ಅಲ್ಲಿನ ಸಂದರ್ಭ ಬೇರೆ). ಬೇಂದ್ರೆಯವರು ತಮ್ಮೊಂದು ಕವನದಲ್ಲಿ ಈ ಪದವನ್ನು ಬಳಸಿದ್ದಾರೆ. ಅವರ 'ಮೊದಲಗಿತ್ತಿ'ಯಲ್ಲಿ ಈ ಸಾಲುಗಳಿವೆ: "ಹಿಂಡಾಗಿ ಪುಂಡಾಗಿ ಅಂಡಲೆಯಲು ನಿನ್ನ ನೆತ್ತರು ಒರೆಹಚ್ಚಿ ನೋಡಿರುವೆ; ಪಾತಾಳ ಕಂಡರು ಕೆಲ ತಾಯಿಗ್ಗಂಡರು ಅವರನ್ನು ಮಡಿಲಾಗ ಮಡಗಿಸಿಹೆ; ಹದಿನಾರು ರಾಜರು ತಲೆಕೆಳಕಾದರು, ಆದರೂ ತಲೆಯೆತ್ತಿ ನಿಂತಿರುವೆ, ನಿನ್ನ ತೇಜದ ಮುಂದೆ ರಾಜತೇಜವು ಕೂಸು, ಮೊದಲಗಿತ್ತಿಯು ನೀನು ಮೆರೆಯುತಿಹೆ!". ಭೂಮಿಯನ್ನು ಮೊದಲಗಿತ್ತಿ ಎಂದು ಕರೆಯುವ ಕವಿಯು ಎಲ್ಲರಿಗೂ ಅವಳು ತಾಯಿಸ್ವರೂಪಳು; ಆದರೆ ರಾಜರುಗಳು (ರಾಜಕಾರಣಿಗಳು?) ಮಾತ್ರ ಅವಳನ್ನು ಕೇವಲ ಹೆಣ್ಣಿನಂತೆಯೇ ಕಂಡು ನಡೆಸಿಕೊಂಡಿದ್ದಾರೆ ಎಂಬುದು ಕವಿಯ ಆಕ್ರೋಶ; ಆದರೆ ಅಂಥವರನ್ನೂ ಸಹಿಸಿಕೊಂಡು ಮಡಿಲಲ್ಲಿ ಹಾಕಿಕೊಳ್ಳುವ ಕರುಣಾಮಯಿ ಈ ತಾಯಿ ಎಂಬುದು ಕವಿಯ ಆಶಯ. "ವೀರಭೋಜ್ಯಾ ವಸುಂಧರಾ'" ಎಂಬುದು ಒಂದು ಸಂಸ್ಕೃತದ ಮಾತು; ವೀರರು ಮಾತ್ರವೇ ವಸುಂಧರೆ(ಭೂಮಿ)ಯನ್ನು ಭೋಗಿಸುವವರು ಎಂಬುದು ಅದರರ್ಥ. ಎಂದರೆ ಹೆಣ್ಣನ್ನು ಪರಾಕ್ರಮದಿಂದ ಗೆಲ್ಲಬೇಕು ಎಂಬ ಅಭಿಪ್ರಾಯ. 'ಭೂಪತಿ' 'ಭೂಪ' 'ಭುವನಪತಿ' ಎಂಬಂತಹ ಸಂಸ್ಕೃತ ಶಬ್ದಗಳು ರಾಜನನ್ನು ಸೂಚಿಸುವ ಪದಗಳು; ಅವುಗಳ ಅರ್ಥವೇ ಭೂಮಿಯ ಒಡೆಯ, ಯಜಮಾನ, ಗಂಡ ಎಂದು. ಪಂಪನ 'ಆದಿಪುರಾಣ'ದಲ್ಲಿ ಅಣ್ಣನಾದ ಭರತನನ್ನು ಕುರಿತು ಬಾಹುಬಲಿಯು "ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ" ಎಂದು ಕೇಳುವ ಮಾತಿನಲ್ಲಿ ಹೆಣ್ಣು ಮತ್ತು ಭೂಮಿ ಎರಡನ್ನೂ ಸಮಾನವೆಂದು ಪರಿಗಣಿಸುವ ರೂಢಿಯು ವ್ಯಕ್ತವಾಗಿದೆ. ರನ್ನನ 'ಗದಾಯುದ್ಧ'ದಲ್ಲಿ ಅಶ್ವತ್ಥಾಮನು ರಾಜ್ಯಲಕ್ಷ್ಮಿಯ ಕೂದಲು ಹಿಡಿದು ಎಳೆದೊಯ್ಯುವ ಪ್ರಸಂಗವಿದೆ!
======
      
ತಾಳಿ: ತಾಲಿ ಅಥವಾ ತಾಳಿ ಎಂಬ ರೂಪಗಳು ತೆಲುಗು, ತಮಿಳು, ಮಲಯಾಳಂ ಮತ್ತು ತುಳುಭಾಷೆಗಳಲ್ಲಿಯೂ ದೊರೆಯುತ್ತದೆ. ಮದುವೆಯಲ್ಲಿ ಗಂಡು ಹೆಣ್ಣಿನ ಕೊರಳಿಗೆ ಕಟ್ಟುವ ಮಾಂಗಲ್ಯ ಅಥವಾ ಮಂಗಳಸೂತ್ರದ ಮಧ್ಯದ ಚಿನ್ನದ ಬಟ್ಟನ್ನು ತಾಲಿ ಎಂದು ಕರೆಯುತ್ತಾರೆಂಬುದು ಸರ್ವವಿದಿತ. 'ಪಂಪಭಾರತ'ದಲ್ಲಿ ತಾಳಿ ಎಂಬುದಕ್ಕೆ ಸಂವಾದಿಯಾಗಿ 'ಅಯ್ದೆಮಿನುಗು' ಎಂಬ ಶಬ್ದವಿದೆ ("ವರುಣಾನಿಯ ಕೊರಲೊಳ್ ಅಯ್ದೆಮಿನುಗುಮುೞಿಯೆ") ಅಯ್ದೆ ಎಂದರೆ ಸುಮಂಗಲಿ; ಅವಳ ಕೊರಳಿನ ಮಿನುಗುವ ವಸ್ತು, ಪ್ರಾಯಶಃ ಚಿನ್ನದ ತಾಳಿ. ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ 'ತಾಳಿಗಟ್ಟು' ಎಂಬ ಪ್ರಯೋಗವಿದೆ ("ಚಂದ್ರಾಭರಣಂ ಮನಮೊಸೆದು ತಾಳಿಗಟ್ಟಿದನೆನೆ"). ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿ, ಚಂದ್ರಮತಿಯು ಮಗ ರೋಹಿತಾಶ್ವ ಸತ್ತಾಗ ಅವನ ದೇಹವನ್ನು ಸುಡಲು ಶ್ಮಶಾನಕ್ಕೆ ಬರುತ್ತಾಳೆ. ಕೊಡಬೇಕಾದ ಮಸಣವಾಡಗೆಯ ಹಣ ತನ್ನಲ್ಲಿಲ್ಲವೆಂದಾಗ ಹರಿಶ್ಚಂದ್ರನು "ನಿನ್ನ ಕೊರಳಿನೊಳಿರ್ದ ಕಡುಚೆಲುವ ತಾಳಿಯನದನು ಅಡವನಿರಿಸಿ ನೀ ಬಿಡಿಸಿಕೊ ಬಳಿಕ" ಎನ್ನುತ್ತಾನಂತೆ. ತಾಳಿಯು ಚಿನ್ನದ್ದಾಗಿರುತ್ತಿತ್ತೆಂಬುದು ಇಲ್ಲಿ ಹೆಚ್ಚು ಸ್ಪಷ್ಟವಾಗಿದೆ.
ತಾಲ ಎಂಬುದು ಸಂಸ್ಕೃತದಲ್ಲಿ ಪನೆಮರಕ್ಕಿರುವ ಹೆಸರು. ತಾಲಿ ಅಥವಾ ತಾಳಿ ಎಂದರೂ ತಾಳೆಯ ಮರ ಎಂಬ ಅರ್ಥವಿದೆ. 'ಪಂಪಭಾರತ'ದಲ್ಲಿ "ಲವಂಗ ಲುಂಗ ಹಿಂತಾಳ ತಾಳೀ ತಮಾಳತಾಲ ಸುಂದರ ನಂದನ" ಎಂಬಲ್ಲಿ ಅನೇಕ ಮರಗಳ ಜೊತೆಗೆ ತಾಳಿಯ ಪ್ರಸ್ತಾಪವಿದೆ. ಚಿನ್ನದ ತಾಳಿಯು ಬಳಕೆಗೆ ಬರುವುದಕ್ಕೆ ಮುಂಚೆ ಪ್ರಾಯಶಃ ತಾಳೆಯ ಗರಿಯನ್ನು ಒಣಗಿಸಿ ನಂತರ ನೆನೆಸಿ ಮೆತ್ತಗೆ ಮಾಡಿ ಸುರುಳಿ ಸುತ್ತಿ ಕಟ್ಟಿಕೊಳ್ಳುವ ಪದ್ಧತಿಯಿತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಅದಕ್ಕೇ ಅದು ತಾಳಿ ಎನ್ನಿಸಿಕೊಳ್ಳುತ್ತದೆ. ಸಂಸ್ಕೃತದಲ್ಲಿ ತಾಲಂಕ ಅಥವಾ ತಾಲಕ ಎಂದರೆ ಕಿವಿಯ ಓಲೆ. ಅದೂ ತಾಳೆಗರಿಯ ಸುರುಳಿ; ಅದಕ್ಕೆ ಕರ್ಣಪತ್ರ ಎಂಬ ಹೆಸರೂ ಇದೆ. ಪ್ರಾಯಶಃ ತಾಳಿಯೂ ಮೊದಲು ಅದೇ ರೂಪದಲ್ಲಿತ್ತು. ಗೌರಿಯ ಹಬ್ಬದ ದಿನ ಕೊಡುವ ಮೊರದ ಬಾಗಿನದಲ್ಲಿ ಇತರ ವಸ್ತುಗಳ ಜೊತೆ ತಾಳೆಗರಿಯ ಬಿಚ್ಚೋಲೆಯನ್ನು ಕೊಡುವುದು ರೂಢಿ.
=====
ತಿಂಗಳು1: ಇದೊಂದು ದ್ರಾವಿಡ ಪದ: ಹಳಗನ್ನಡದಲ್ಲಿ ತಿಂಗಳ್ ಎಂಬ ರೂಪದಲ್ಲಿದ್ದು, ತಮಿಳು, ಮಲಯಾಳಂಗಳಲ್ಲಿ ತಿಙ್ಕಳ್ ಎಂದೂ ತುಳುವಿನಲ್ಲಿ ತಿಂಗೊಳು ಎಂದೂ ಬಳಕೆಯಲ್ಲಿದೆ. ಇದರ ಒಂದು ಅರ್ಥ ಚಂದ್ರ ಎಂದು. "ನಗೆಯೆಂಬ ನೆವದೆ ಬೆಳೆಗೀ ಮೊಗಮೆಂಬೀ ನೆವದೆ ತಿಂಗಳೊಳಗೆಸೆದಾದಂ ಸೊಗಯಿಸಿ ತೋರ್ಕುಂ ಲೋಚನಯುಗಂ" ಎಂಬುದು 'ಕವಿರಾಜಮಾರ್ಗ'ದ ವರ್ಣನೆ. "ತಿಂಗಳ ತಣ್ಣನಪ್ಪ ಕದಿರ್ದೊಂಗಲೊಳಭ್ಯಸಿಸಿತ್ತೋ" ಎಂದು ತನ್ನ ಮಾತಿನ ಬಂದ ಬಗ್ಗೆ ಅಗ್ಗಳ ತನ್ನ 'ಚಂದ್ರಪ್ರಭಪುರಾಣ'ದಲ್ಲಿ ಹೇಳಿಕೊಳ್ಳುತ್ತಾನೆ. "ತಿಂಗಳ ಸಿರಿಯಂತೆ ಸೋಲಿಸದೆ ಕಾವನ ಕಬ್ಬಮನದಾರನಾದೊಡಂ" ಎಂಬ ಹೆಮ್ಮೆಯ ಮಾತು 'ಕಬ್ಬಿಗರ ಕಾವ'ದ ಕವಿ ಆಂಡಯ್ಯನದ್ದು. "ಇಂಗಡಲ ಒಡನಾಡಿಯೋ ನೆಱೆ ತಿಂಗಳ ಸೋದರಮೋ" ಎಂಬ ಉದ್ಗಾರ ಷಡಕ್ಷರದೇವನ 'ರಾಜಶೇಖರ ವಿಳಾಸ'ದ್ದು. "ತಿಂಗಳಿಗೆ ತಂಪಿಹುದೆ ಸಾಗರಕೆ ಪೆಂಪಿಹುದೆ" ಎಂಬುದು ಗೋವಿಂದ ಪೈ ಅವರ 'ಗಿಳಿವಿಂಡು' ಕವನದ ಸಾಲು. ಚಂದ್ರಕಾಂತ ಶಿಲೆ ಎಂಬರ್ಥದಲ್ಲಿ 'ನೇಮಿನಾಥಪುರಾಣ'ದಲ್ಲಿ 'ತಿಂಗಳ್ಗಲ್' ಎಂಬ ಪ್ರಯೋಗವಿದೆ. ಶಿವನು ಚಂದ್ರಧರ; ಹೀಗಾಗಿ ಕನ್ನಡ ಕವಿಗಳನೇಕರು ಅಚ್ಚಗನ್ನಡದಲ್ಲಿ ಹೇಳುತ್ತಾರೆ: ಸಿದ್ಧರಾಮನು ತನ್ನ ವಚನಗಳಲ್ಲಿ 'ತಿಂಗಳಧರ', 'ತಿಂಗಳಸೂಡ' ಎಂದು ಕರೆದಿದ್ದರೆ ಭೀಮಕವಿಯು ತನ್ನ 'ಬಸವಪುರಾಣ'ದಲ್ಲಿ 'ತಿಂಗಳ ಸೂಡಿದವ' ಎನ್ನುತ್ತಾನೆ.
ತಿಂಗಳು ಎಂದರೆ ಚಂದ್ರನ ಬೆಳಕು. "ತಂಗಾಳಿಯುಂ ತಿಂಗಳುಂ ಬನಮುಂ ಬೆಂಬಲಮಾಗಿ ತೀರ್ಚವೆ ಗಡಂ ಕೊಂಡುಗ್ಗಿಯಂ ಸುಗ್ಗಿಯೊಳ್" ಎಂಬ ಮಾತು ರನ್ನನ 'ಅಜಿತಪುರಾಣ'ದ್ದು. "ತಿಂಗಳ ಸೊಂಪು ಪುಷ್ಪಬಾಣದ ಪೊದೆ" ಎಂಬುದು ಮಧುರಕವಿಯ 'ಧರ್ಮನಾಥಪುರಾಣ'ದ್ದು. ಚಂದ್ರನ ಬೆಳಕು ಬೆಳ್ಳಗಿರುವುದರಿಂದಾಗಿ ಅದು ಬೆಳುದಿಂಗಳು, ಬೆಳ್ದಿಂಗಳು ಎಂದೂ ಕರೆಯುವುದು ವಾಡಿ. "ಬೆಳ್ದಿಂಗಳೆಂಬೊಂದು ಪಂಬಲ ಬಂಬಲ್ಗೆಡೆಯಾಗೆ" ಎಂಬುದು 'ಪಂಪಭಾರತ'ದ ವರ್ಣನೆ. ನೇಮಿಚಂದ್ರನ 'ಲೀಲಾವತಿ'ಯಲ್ಲಿ "ಬೆಳ್ದಿಂಗಳ ಬೆಳತಿಗೆಯಂ ಪಂಸೆ ಪಾಲ್ಗೆತ್ತು ಸಾರ್ದಪ್ಪುದೋ" ಎಂಬ ವರ್ಣನೆಯಿದೆ. "ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವ, ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ" ಎಂಬ ಮಾತು ಚೆನ್ನಮಲ್ಲಿಕಾರ್ಜುನನ ವಿರಹದಲ್ಲಿ ಬೆಂದ ಮಹಾದೇವಿಯಕ್ಕನ ಚೀತ್ಕಾರ. "ಮೇಘವೇ ಜಡೆ ಬೆಳುದಿಂಗಳೇ ವಿಭೂತಿ ಪರ್ವತಂಗಳೇ ರುದ್ರಾಕ್ಷಿ" ಎಂಬ ಅದ್ಭುತ ಚಿತ್ರ ಆದಯ್ಯನ ವಚನವೊಂದರಲ್ಲಿದೆ. 'ಬೆಳುದಿಂಗಳ ನೋಡಾ' ಎಂಬ ಬೇಂದ್ರೆಯವರ ಒಂದು  ಪ್ರಸಿದ್ಧ ಕವನವಿದೆ. 'ಬೆಳ್ದಿಂಗಪ್ಪನ ಪೂಜೆ' ಎಂಬ ಜಾನಪದ ಗೀತೆ ಪ್ರಸಿದ್ಧವಾಗಿದೆ. ಚಕೋರವನ್ನು 'ಬೆಳದಿಂಗಳ ಹಕ್ಕಿ' ಎನ್ನುವುದುಂಟು. 'ಬೆಳುದುಂಗಳೂಟ' ಹಿಂದೆಲ್ಲ ಜನಪ್ರಿಯವಾಗಿತ್ತು. 'ಬೆಳುದಿಂಗಳು' ಎಂಬ ಶಬ್ದಕ್ಕೆ ವಿರುದ್ಧವಾಗಿ ಕುವೆಂಪು 'ಕದ್ದಿಂಗಳು' ಶಬ್ದವನ್ನು ಸೃಷ್ಟಿಸಿಕೊಳ್ಳುತ್ತಾರೆ: "ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ" ಎಂಬುದು ಅವರ ಸಾಲು.
=====
ತಿಂಗಳು2: ಈಗ ತಿಂಗಳು ಶಬ್ದದ ಮತ್ತೊಂದು ಅರ್ಥದ ಬಗ್ಗೆ ಗಮನ ಹರಿಸೋಣ. ಚಂದ್ರನು ಕಾಣಿಸಿಕೊಂಡು ಬೆಳೆಯುತ್ತ ಪೂರ್ಣಗೊಂಡು ಮತ್ತೆ ಇಳಿಯುತ್ತ ಕಣ್ಮರೆಯಾಗುವ ಅವಧಿಯನ್ನು ಕನ್ನಡದಲ್ಲಿ ತಿಂಗಳು ಎನ್ನುತ್ತೇವೆ. ಇದು ರೂಢಿಗೆ ಬಂದಿರುವುದು ಪ್ರಾಯಶಃ ನಾವು ಚಾಂದ್ರಮಾನವನ್ನು ಅನುಸರಿಸಿ ಕಾಲಗಣನೆ ಮಾಡುವುದರಿಂದಾಗಿ. ಕ್ರಿಶ 800 ರ ಶಾಸನವೊಂದರಲ್ಲಿಯೇ ಈ ಅರ್ಥದಲ್ಲಿ ಈ ಶಬ್ದವನ್ನು ಬಳಸಲಾಗಿದೆ: "ಉಗ್ರಸೇನ ಗುರುವಡಿಗಳ್ ಒನ್ದು ತಿಙ್ಗಳ್ ಸನ್ಯಾಸನಂ ನೋನ್ತು". ಹಾಗೆಯೇ 'ವಡ್ಡಾರಾಧನೆ'ಯಲ್ಲಿ "ಇಂತು ವರ್ಷಾಕಾಲದ ನಾಲ್ಕು ತಿಂಗಳೊಳು ಮರ್ದನೂಡಿ" ಎಂಬ ಪ್ರಯೋಗವಿದೆ. "ಒಂದು ತಿಂಗಳು ಪಲವು ಮನ್ನಣೆಯಿಂದ ಮನ್ನಿಸಿ ತನ್ನ ಸೇನಾವೃಂದವನು" ಎಂಬುದು ಕುಮಾರವ್ಯಾಸನ ಮಾತು.  "ಹಿಂದಿರುಗಿ ಬಂದೆನ್ನನೊಂದೆ ಮಾತಿನಲಿ 'ತಿಂಗಳಾಯಿತೆ?' ಎಂದಳೆನ್ನ ಹೊಸಹುಡುಗಿ" ಎಂಬ ಸಾಲುಗಳು ಕೆಎಸ್ನ ಅವರ 'ತಿಂಗಳಾಯಿತೆ' ಕವನದ್ದು. ತಿಂಗಳು ಎಂಬುದನ್ನು ಮೂವತ್ತು ದಿವಸಗಳ ಅವಧಿ ಎಂಬುದರ ಜೊತೆಗೆ ಚೈತ್ರ ವೈಶಾಖ ಮುಂತಾದ ನಮ್ಮ ಮಾಸಗಳನ್ನು ಸೂಚಿಸುವಂತೆಯೇ ಜನವರಿ ಫೆಬ್ರವರಿ ಮುಂತಾದ ಇಂಗ್ಲಿಷ್ ಮಾಸಗಳನ್ನು ಸೂಚಿಸಲೂ ಬಳಸುತ್ತೇವೆ.
ಈ ಎರಡೂ ಅರ್ಥಗಳ ಶ್ಲೇಷೆಯನ್ನು ಅನೇಕ ಕಡೆಗಳಲ್ಲಿ ಕಾಣಬಹುದು. ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಇಂತಹ ಪ್ರಯೋಗವಿದೆ. "ತಿಂಗಳ್ವರಂ ಅಮೃತಮಂ ಆ ತಿಂಗಳ್ ಸುರಿದಪುದೆ ಬಯಸಿ ನೋಡುವರೆಲ್ಲಂ ತಿಂಗಳೊಳ್ ಒಂದು ದಿನಂ ಚೌತಿಯೊಳೆ ವಿಷಮನುಗುಳೞ್ವುದೆ ನೋಡಲ್". ಹಾಗೆಯೇ "ತಿಂಗಳ ಸಿರಿಯಿದು ಮುನ್ನಮೆ ತಿಂಗಳ ಸಿರಿಯಲ್ತು ಪಕ್ಷಮೆಂಬಾ ಪಕ್ಷಂ ಸಂಗತಿವಡೆಯದು ಪಗಲೀ ಭಂಗಿ ದಲದಱದವಾರೋ ನೆರೆಸಿರಿಯೆಱೆಯರ್" ಎಂಬುದು 'ಚಂದ್ರಪ್ರಭ ಪುರಾಣ'ದ ಅಗ್ಗಳನ ಚಮತ್ಕಾರದ ಮಾತು. ಬೇಂದ್ರೆಯವರಂತೂ ಇಂತಹುದಕ್ಕೆ ಖ್ಯಾತರಾದವರು. ಅವರ 'ಅನಂತ ಪ್ರಣಯ' ಎಂಬ ಗೀತೆಯಲ್ಲಿ "ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ" ಎಂಬ ಸಾಲು ಇಂತಹ ಶ್ಲೇಷೆಯುಳ್ಳದ್ದು.
ನಿರಂತರತೆಯನ್ನು ಸೂಚಿಸಲು ಈ ಶಬ್ದದ ದ್ವಿರುಕ್ತಿಯನ್ನು ಬಳಸುವುದು ರೂಢಿ: "ಸ್ಥಳದ ಹೆಜ್ಜುಂಕದಲ್ಲಿ ತಿಂಗಳ್ ತಿಂಗಳ್ಗೆ ಕೊಟ್ಟ ಗದ್ಯಾಣ 1" ಎಂಬ ಮಾತು ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ ಬಂದಿರುವ ಸಾಲು. ತಿಂಗಳ ಲೇಖೆ ಎಂದರೆ ಚಂದ್ರನ ಕಲೆ: "ತಿಂಗಳ ಲೇಖೆಯಂ ಬಿಡದೆ ಗೂಡಿವಂಗೆ ಮಹೇಶ್ವರಂಗೆ" (ಸೋಮದೇವನ 'ಉದ್ಭಟಕಾವ್ಯ'). 'ತಿಂಗಳುಗಟ್ಟಲೆ' 'ತಿಂಗಳುವಾರು' 'ತಿಂಗಳೊಪ್ಪತ್ತು' ಮುಂತಾದ ಮಾತುಗಳೂ ದಿನನಿತ್ಯದ ಪ್ರಯೋಗದಲ್ಲಿ ಹೇರಳವಾಗಿವೆ.
=====
ತಿಪ್ಪೆ: ಈ ದ್ರಾವಿಡ ಶಬ್ದವು ತಮಿಳಿನಲ್ಲಿ 'ತಿಪ್ಪೈ' ಎಂದೂ, ತೆಲುಗಿನಲ್ಲಿ 'ತಿಪ್ಪ' ಎಂದೂ, ತುಳುವಿನಲ್ಲಿ 'ತಿಪ್ಪೆ' ಎಂದೂ ಬಳಕೆಯಲ್ಲಿದೆ. ಇದರ ಅರ್ಥ ರಾಶಿ, ಗುಡ್ಡ ಎಂದರ್ಥ ('ದಿಬ್ಬ' ಎಂಬುದು ಇದಕ್ಕೆ ಸಂಬಂಧಿಸಿದ ಶಬ್ದ). ಆದರೆ ಈಗ ಈ ಶಬ್ದಕ್ಕಿರುವ ಅರ್ಥ ಕಸದ ರಾಶಿ ಅಥವಾ ಸಗಣಿ ರಾಶಿ ಎಂದು. ತಿಪ್ಪೆಗುಂಡಿ ಎಂದರೆ ಕಸ ಅಥವಾ ಸಗಣಿ ಹಾಕುವ ಗುಂಡಿ ಎಂದರ್ಥ. ಕಸದ ರಾಶಿ ಎಂಬರ್ಥದಲ್ಲಿ ನಯಸೇನನ 'ಧರ್ಮಾಮೃತ'ದಲ್ಲಿ ಈ ಶಬ್ದ ಬಳಕೆಯಾಗಿದೆ: "ವಾರಿಜಷಂಡಮಂ ಪದೆದು ಪೊರ್ದುವವೋಲ್ ಕಳಹಂಸೆ ತಿಪ್ಪೆಯಂ".
ಹಲವು ಮಕ್ಕಳು ಹುಟ್ಟಿ ಬಹುಬೇಗ ತೀರಿಕೊಂಡರೆ, ಮುಂದೆ ಆಗುವ ಮಗುವಿಗೆ, ತಿಪ್ಪೆಯ ಮೇಲೆ ಗಿಡವು ದೈವಕೃಪೆಯಿಂದ ಯಾರ ಹಂಗಿಗೂ ಒಳಗಾಗದೆ ಬೆಳೆಯುವ ರೀತಿಯಲ್ಲಿ ಈ ಮಗುವಾದರೂ ಬದುಕಿಕೊಳ್ಳಲಿ ಎಂಬ ಆಶಯದಿಂದ, ತಿಪ್ಪೆ ಹೆಸರನ್ನಿಡುವ ರೂಢಿಯಿದೆ. ಪ್ರಾಯಶಃ ಈ ರೂಢಿ ತುಂಬ ಹಳೆಯದೆಂದು ಕಾಣುತ್ತದೆ. ಏಕೆಂದರೆ ತಿಪ್ಪಣ್ಣ, ತಿಪ್ಪಯ್ಯ ಎಂಬ ಹೆಸರುಗಳು ಒಂಬತ್ತನೆಯ ಶತಮಾನದಿಂದಲೇ ಶಾಸನಗಳಲ್ಲಿ ದೊರೆಯುತ್ತವೆ. ಅಥವಾ ತಿಪ್ಪೆ ಎಂದರೆ ಬೂದಿಯ ರಾಶಿ ಎಂದು ಅರ್ಥೈಸಿ, ತಿಪ್ಪ ಎಂದರೆ ಅದರ ಮೇಲಿರುವವನು, ಶಿವ ಎಂಬ ಎಂದಾಗಿದೆಯೇ ಅಥವಾ ತಿರಿಪೆಯೇ ತಿಪ್ಪೆ ಎಂದಾಗಿ, ಶಿವ ಭಿಕ್ಷುಕನಾದ್ದರಿಂದ ಅವನಿಗೆ ಈ ಹೆಸರು ಬಂತೋ! ಇದಕ್ಕೆ ಸಮರ್ಥನೆಯಾಗಿ ತಿಪ್ಪೆ ಎಂಬುದು ಕೆಲವೆಡೆ 'ತಿರ್ಪೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ: 'ತಿರ್ಪೆಸುಂಕ' (ಗೊಬ್ಬರದ ಗುಂಡಿಯ ಮೇಲೆ ಹಾಕುವ ಸುಂಕ)ದ ಪ್ರಸ್ತಾಪ  ಹದಿಮೂರನೆಯ ಶತಮಾನದ ಶಾಸನದಲ್ಲಿ ಉಲ್ಲೇಖವಾಗಿದೆ. ಹೀಗಾಗಿದ್ದರೆ ಮೊದಲು ತಿರ್ಪೆ ಎಂಬ ರೂಪ ದೊರೆತು, ಆ ಬಳಿಕ ತಿಪ್ಪೆ ರೂಪ ದೊರೆಯಬೇಕಾಗಿತ್ತು. ಅಲ್ಲದೆ, ಇತರ ದ್ರಾವಿಡ ಭಾಷೆಗಳಲ್ಲಿ ರೇಫವಿಲ್ಲ. ಆದ್ದರಿಂದ ಇದು ಹಿಂರಚನೆ (ಬ್ಯಾಕ್ ಫಾರ್ಮೇಷನ್) ಆಗಿರಬಹುದು. ಈಗಲೂ ಈ ಮೇಲೆ ಹೇಳಿದ ಹೆಸರುಗಳ ಜೊತೆಗೆ ತಿಪ್ಪೇಸ್ವಾಮಿ, ತಿಪ್ಪೇರುದ್ರಸ್ವಾಮಿ ಮುಂತಾದವು ಜನಜನಿತ ಹೆಸರುಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿಯ ತಿಪ್ಪೇಸ್ವಾಮಿ ಎಂಬ ದೈವ ಹಲವರ ಆರಾಧ್ಯ ದೈವ. ಊರುಗಳ ಹೆಸರಲ್ಲೂ ಈ ಶಬ್ದ ಬಳಕೆಯಾಗುತ್ತದೆ: ತಿಪ್ಪೆಯೂರ್ ಎಂಬ ಹೆಸರು ಹತ್ತನೆಯ ಶತಮಾನದ ಶಾಸನದಲ್ಲಿಯೇ ಸಿಕ್ಕುತ್ತದೆ. ತಿಪ್ಪೆಗೊಂಡನಹಳ್ಳಿ ಈಗಲೂ ಇದೆ.
'ತಿಪ್ಪೆ ಕೆದಕು' ಎಂಬ ನುಡಿಗಟ್ಟಿಗೆ ಹಳೆಯದನ್ನು ಹೊರತೆಗೆ ಎಂದರ್ಥವಿದೆ. 'ತಿಪ್ಪೆ ಸಾರಿಸು' ಎಂದರೆ ಸರಿಯಾದ ಉತ್ತರವೀಯದೆ ವಿಷಯವನ್ನು ಮರೆಮಾಚುವುದು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ತೊಗರಿ ನಮ್ಮದೇ ಅಥವಾ ಎರವಲು ತಂದದ್ದೆ?
ಪ್ರತಿನಿತ್ಯ ನಮ್ಮ ಮನೆಗಳಲ್ಲಿ ತೊಗರಿಯಿಲ್ಲದೆ ಅಡುಗೆಯೇ ಇಲ್ಲ; ಸಾರು, ಹುಳಿ, ತೊವ್ವೆ ಅಥವಾ ಹಬ್ಬದ ದಿನ ಒಬ್ಬಟ್ಟಿನ ಹೂರಣ ಇವೆಲ್ಲಕ್ಕೂ ನಾವು ಬಳಸುವುದು ತೊಗರಿ ಬೇಳೆಯನ್ನು, ಕೆಲವು ವೇಳೆ ಹಸಿ ತೊಗರಿ ಕಾಯನ್ನೂ ಹುಳಿ ಮಾಡಲು ಬಳಸುತ್ತೇವೆ. ಇದರಲ್ಲಿ ಹೆಚ್ಚು ಪ್ರೊಟೀನ್ ಇದೆ. ತೊಗರಿಗೆ ಸಸ್ಯವಿಜ್ಞಾನದಲ್ಲಿ ಲ್ಯಾಟಿನ್ನ Cajanus cajan ಎಂದು ಹೆಸರು. ಹಿಂದೆ ಇದನ್ನು ಆ ವಿಜ್ಞಾನದಲ್ಲಿ cajanus indicus ಅಥವಾ Cajanus indica ಎನ್ನುತ್ತಿದ್ದರು. ಇಂಗ್ಲಿಷಿನಲ್ಲಿ ಈ ಸಸ್ಯವನ್ನು pigeon pea ಎನ್ನುತ್ತಾರೆ. ಆದರೆ ಖ್ಯಾತ ಸಸ್ಯವಿಜ್ಞಾನಿಗಳಾಗಿದ್ದ ಬಿ.ಜಿ.ಎಲ್. ಸ್ವಾಮಿ ಅವರು ಇದು ನಮ್ಮ ದೇಶದ್ದಲ್ಲವೇ ಅಲ್ಲ ಎಂದು ವಾದಿಸಿದರು: ಮೂವತ್ತಮೂರು ವರ್ಷಗಳ ಹಿಂದೆ ಪ್ರಕಟವಾದ ತಮ್ಮ 'ತಮಿಳು ತಲೆಗಳ ನಡುವೆ' ಎಂಬ ಪುಸ್ತಕದಲ್ಲಿ, ಬೇರಾವುದೋ ಒಂದು ವಿಷಯದ ಬಗ್ಗೆ ಬರೆಯುತ್ತ ಅವರು ಇದು "ಆಫ್ರಿಕ ಖಂಡದಿಂದ ಪೂರ್ಚುಗೀಸರು ಕ್ರಿ.ಶ. ಹದಿನಾರನೆಯ ಶತಮಾನದಿಂದೀಚೆಗೆ ತಂದದ್ದು. ಅದು ಹೇಗೋ ನಮ್ಮ ನಾಲಗೆ ತೊಗರಿ ಬೇಳೆಯ ರುಚಿಗೆ ಒಗ್ಗಿಬಿಟ್ಟಿತು" ಎನ್ನುತ್ತಾರೆ. ಆದರೆ ಈ ಶಬ್ದದ ಬೆನ್ನು ಹತ್ತಿ ಹೋದಾಗ ಅದು ನಮ್ಮ ಪ್ರಾಚೀನ ಕನ್ನಡ ಗ್ರಂಥಗಳಲ್ಲಿಯೂ ಸಾಕಷ್ಟು ಬಳಕೆಯಲ್ಲಿದ್ದ ಶಬ್ದವೆಂದು ಗೊತ್ತಾಗುತ್ತದೆ.
ಈ ಶಬ್ದ ಕನ್ನಡದಲ್ಲಿ ತೊವರಿ, ತುವರಿ, ತೊಗರಿ ಎಂಬ ರೂಪಗಳಲ್ಲಿ ಬಳಕೆಯಾಗಿದೆ; ಈಗ ತೊಗರಿ ಎಂಬ ರೂಪ ಸಾರ್ವತ್ರಿಕವಾಗಿದೆ. ತಮಿಳಿನಲ್ಲಿ ತುವರೈ, ತುಳುವಿನಲ್ಲಿ ತೊಗರಿ ಅಥವಾ ತೊಗರೆ, ಮಲಯಾಳಂನಲ್ಲಿ ತೋರಿ ಹಾಗೂ ತೆಲುಗಿನಲ್ಲಿ ತೊಗರಿ, ತೊಗರು, ತೊಗರಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ (ಈ ಬೇಳೆಗೆ ತೆಲುಗಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದು ಕಂದುಲು ಎಂದು). "ಈ ಪಯಿರು ನಮ್ಮಲ್ಲಿದ್ದುದಾಗಿ ಸಾಹಿತ್ಯದಲ್ಲಾಗಲೀ ಶಾಸನದಲ್ಲಾಗಲೀ ದಾಖಲೆಯಲ್ಲಿಲ್ಲ" ಎಂದಿದ್ದಾರೆ ಸ್ವಾಮಿ ಅವರು. ಆದರೆ ಕ್ರಿ.ಶ. 1025 ರಲ್ಲಿ ರಚಿತವಾದ ಚಾವುಂಡರಾಯನ 'ಲೋಕೋಪಕಾರಂ' ಗ್ರಂಥದಲ್ಲಿನ 'ಸೂಪಶಾಸ್ತ್ರಂ' ಎಂಬ ಅಧ್ಯಾಯಲಿಲ್ಲಲ್ಲದಿದ್ದರೂ 'ನರಾದಿವೈದ್ಯಪ್ರಕರಣಂ' ಎಂಬ ಅಧ್ಯಾಯದಲ್ಲಿ "ತೊವರಿ ಗೋದುವೆ ಜೋಳಮುರ್ದ್ದು ಪೆಸರ್ ಮಸೂರಿಗೆ ಗುಂಜಿಯೆಂಬಿವಱೊಂದಱೊಳಾದ ತೈಲ"ವನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹಚ್ಚಿದರೆ ತುರಿ ವಾಸಿಯಾಗುತ್ತದೆ ಎಂದಿದ್ದಾನೆ. ಇಲ್ಲಿ ತೊವರಿ ಧಾನ್ಯ ಎಂಬುದು ಸ್ಪಷ್ಟವಾಗಿದೆ. ಸ್ವಾಮಿಯವರು "ಸೂಪಶಾಸ್ತ್ರಗಳಲ್ಲೂ ಇದರ ಉಲ್ಲೇಖವಿಲ್ಲ" ಎಂದಿದ್ದಾರೆ. ಆದರೆ ಎರಡನೇ ನಾಗವರ್ಮನು (ಇವನ ಕಾಲವೂ ಹನ್ನೊಂದನೇ ಶತಮಾನ) 'ಕಾವ್ಯಾವಲೋಕನ' ಎಂಬ ತನ್ನ ಗ್ರಂಥದಲ್ಲಿನ 'ಶಬ್ದಸ್ಮೃತಿ' ಎಂಬ ಭಾಗದ ವ್ಯಾಕರಣ ಸೂತ್ರವೊಂದಕ್ಕೆ ಉದಾಹರಣೆಯಾಗಿ ನೀಡಿರುವ (ತನಗಿಂತ ಹಿಂದೆ ಇದ್ದ ಗ್ರಂಥವೊಂದರಿಂದ ಆಯ್ದ) ಪದ್ಯ ಹೀಗಿದೆ: "ತುೞಿಕಲಡುಗೆಗಳೊಳೇಂ ಪೞಗೞವೆಯ ಕೂಳ್ ತಿವುಡುಗೞಿದ ತೊವರಿಯ ತೊವೆ ಕಾಯ್ದಿೞಿಪಿದ ತುಪ್ಪಂ ಕೋಡುವ ಕೞಲಲ್ಲದೆ ದಿವ್ಯಭೋಜನಂ ಪೆಱತುಂಟೇ" (ರುಚಿಯಿಲ್ಲದ ಅಡುಗೆಯಿಂದೇನು, ಹಳೆಯ ಅಕ್ಕಿಯಿಂದ ಮಾಡಿದ ಅನ್ನ, ಹೊಟ್ಟು ತೆಗೆದ ತೊಗರಿ (ಬೇಳೆಯ) ತೊವ್ವೆ, ಕಾಸಿದ ತುಪ್ಪ ಹಾಗೂ ತಂಪಾದ ಮೊಸರಲ್ಲದೆ ಬೇರೆ ಒಳ್ಳೆಯ ಊಟವಿದೆಯೇ!) ಎಂದು ಬಾಯಿ ಚಪ್ಪರಿಸುತ್ತ ಕೇಳುತ್ತಾನೆ. (ಈ ಪದ್ಯ ಹದಿಮೂರನೇ ಶತಮಾನದ 'ಸೂಕ್ತಿಸುಧಾರ್ಣವ' ಎಂಬ ಗ್ರಂಥದಲ್ಲೂ ಇದೆ). ಇದೇ ನಾಗವರ್ಮನ ಇನ್ನೊಂದು ಕೃತಿ 'ಅಭಿಧಾನ ವಸ್ತುಕೋಶ' ಎಂಬ ನಿಘಂಟುವಿನಲ್ಲಿ "ತುವರ್ಯಾಢಕಿ" (ತುವರಿ=ಆಢಕಿ) ಎಂದು ಸಮಾನಾರ್ಥಕಗಳಾಗಿ ಕೊಡುತ್ತಾನೆ. ಅಂದರೆ ಒಬ್ಬನೇ ತೊವರಿ, ತುವರಿ ಎರಡೂ ರೂಪಗಳನ್ನು ಬಳಸುತ್ತಾನೆ.
ತೊಗರಿ ಎಂಬ ರೂಪವೂ ಹಿಂದಿನ ಕಾಲದಿಂದಲೇ ಬಳಕೆಯಲ್ಲಿದೆ; ಕ್ರಿ.ಶ. 1159 ರ ಒಂದು ಶಾಸನದಲ್ಲಿ "ದೇವರ್ಗ್ಗೆ .. .. ಕಡಲೆ ತೊಗರಿಯಾದಿಯಾಗಿ ಸಲುವುದು" ಎಂದಿದೆ. ಹದಿಮೂರನೆಯ ಶತಮಾನದ ಪ್ರಸಿದ್ಧ ಕವಿ ಹರಿಹರನ 'ಬಸವರಾಜದೇವರರಗಳೆ'ಯಲ್ಲಿ ರಾಶಿಗಟ್ಟಲೆ ಕನಕರತ್ನಗಳನ್ನು ಬೇಡಿ ಬಸವಣ್ಣನನ್ನು ಪರೀಕ್ಷಿಸಲು ಬಂದ ಮಹದೇವಿಸೆಟ್ಟಿ ಎಂಬುವವನು ಅವನನ್ನು ಕಂಡೊಡನೆ ತಾನೇ ಬೆದರಿ "ಮೂವತ್ತೆತ್ತಿನೊಳ್ ಜೋಳದಕ್ಕಿ ಕಡಲೆ ತೊಗರಿಗಳಂ ತೀವೆ ಕೊಡುವುದು" ಎಂದು ಕೇಳುತ್ತಾನೆಂಬ ಪ್ರಸಂಗವಿದೆ. ಕ್ರಿ. ಶ. ಹದಿನೈದನೆಯ ಶತಮಾನದ ಮೂರನೆಯ ಮಂಗರಾಜನೆಂಬ ಕವಿ ಮಿಕ್ಕ ಗ್ರಂಥಗಳ ಜೊತೆಗೆ  'ಸೂಪಶಾಸ್ತ್ರ'ವೊಂದನ್ನೂ (ಅಡುಗೆ ಕಲೆ) ಬರೆದಿದ್ದಾನೆ. ಆದರೆ ತನ್ನ ಬೇರೊಂದು ಕಾವ್ಯವಾದ 'ನೇಮಿಜಿನೇಶ ಸಂಗತಿ'ಯಲ್ಲಿ "ಸಣ್ಣಗಳ ಮೇಲೋಗರ ತೊಗರಿಯ ತೋಯೆ ಬೆಣ್ಣೆಗಾಸಿದ ತುಪ್ಪವೆಱೆದು ಅಣ್ಣಂದಿರಂ ಬನ್ನಿ" ಎಂದು ಕರೆಯುವ ಉಲ್ಲೇಖವಿದೆ. ಹೀಗೆಯೇ ಆನಂತರದ ಗ್ರಂಥಗಳಲ್ಲಿಯೂ ಈ ಬೇಳೆಯ ಉಲ್ಲೇಖ ಸ್ಪಷ್ಟವಾಗಿದೆ; ಅದು ವ್ಯಾಪಕವಾಗಿ ಬಳಕೆಯಲ್ಲಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.
ಸ್ವಾಮಿಯವರು ತಮ್ಮ ಲೇಖನದಲ್ಲಿ "ಸಂಸ್ಕೃತದ ತುಬರಿಕಾ ಎಂಬ ಸಮಾನಾರ್ಥದ ಪದ ಈಚೀಚೆಗೆ ಹುಟ್ಟಿಕೊಂಡದ್ದು" ಎನ್ನುತ್ತಾರೆ. ಆದರೆ ತುವರೀ ಮತ್ತು ತುವರಿಕಾ ಎಂಬ ಶಬ್ದಗಳು 'ಅಮರಕೋಶ'ದಲ್ಲಿ ಸಿಕ್ಕುತ್ತವೆ. ಹಿಂದೆ ಅದಕ್ಕೆ 'ಆಢಕಿ' ಎಂಬ ಹೆಸರೂ ಇತ್ತು. ನಾಗವರ್ಮ ತುವರಿಗೆ ಆಢಕಿಯನ್ನು ಸಮಾನಾರ್ಥಕವಾಗಿ ಹೇಳಿರುವುದನ್ನು ಈ ಹಿಂದೆಯೇ ಗಮನಿಸಿದ್ದೇವೆ. ಸರ್ ಮೊನಿಯೇರ್ ವಿಲಿಯಮ್ಸ್ ಅವರು ತಮ್ಮ ಸಂಸ್ಕೃತ-ಇಂಗ್ಲಿಷ್ ನಿಂಟುವಿನಲ್ಲಿ ಆಢಕ ಶಬ್ದವನ್ನು ಕೊಟ್ಟು ಅದಕ್ಕೆ the pulse Cajanus Indicus Spreng ಎಂಬ ಅರ್ಥವನ್ನಿತ್ತು, ಈ ಶಬ್ದದ ಆಕರವೆಂದು ಸುಶ್ರುತ ಸಂಹಿತೆಯನ್ನು ಉಲ್ಲೇಖಿಸುತ್ತಾರೆ. ಭಾರತ ಸರ್ಕಾರದ 'ಆಯುರ್ವೇದಿಕ್ ಫಾರ್ಮಕೋಪಿಯ ಆಫ್ ಇಂಡಿಯ'ದಲ್ಲಿ ಆಢಕಿಯಿಂದ ಕಿಂಕಾಯಣ ಘುಟಿಕಾ ಎಂಬ ಔಷಧಿಯನ್ನು ತಯಾರಿಸುವ ಬಗ್ಗೆ ವಿವರವಿದೆ.
ತೊಗರಿಯಲ್ಲಿ ಎರಡು ಪ್ರಭೇದಗಳ ಉಲ್ಲೇಖವೂ ನಮ್ಮ ಬರವಣಿಗೆ ಮತ್ತು ಆಡುಮಾತುಗಳಲ್ಲಿ ರೂಢಿಯಲ್ಲಿದೆ. ಅವೆಂದರೆ ಅಚ್ಛತೊಗರಿ ಮತ್ತು ಕಾಡು ತೊಗರಿ. ವಿಶೇಷಣಗಳೇ ಸೂಚಿಸುವಂತೆ ಇವು ಹೊಲದಲ್ಲಿ ಬೆಳೆದ ಹಾಗೂ ಕಾಡಿನಲ್ಲಿ ಬೇಸಾಯವಿಲ್ಲದೆ ಬೆಳೆದ ಪ್ರಭೇದಗಳನ್ನು ಸೂಚಿಸುತ್ತವೆ. (ಕಾಡುತೊಗರಿ ಎಂಬುಕ್ಕೆ ಕಿಟೆಲ್ Atylosia candollei ಎಂಬ ಲ್ಯಾಟಿನ್ ಸಸ್ಯವೈಜ್ಞಾನಿಕ ಹೆಸರು ನೀಡುತ್ತಾರೆ). ತೆಲುಗಿನಲ್ಲಿ ಇವನ್ನು ಕೊಂಡಕಂದುಲು ಮತ್ತು ಪೊಟ್ಟಿಕಂದುಲು ಎನ್ನುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ತೊದವ (ತೋಡ)ದಲ್ಲಿ ತಿಫಿನಿ ಎಂಬುದು ಕಾಡು ತೊಗರಿಗಿರುವ ಹೆಸರೆಂದು (Atylosia candollei) ಟಿ. ಬರೋ ಮತ್ತು ಎಂ. ಬಿ ಎಮೆನೂ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಹೇಳುತ್ತಾರೆ. ಅಲ್ಲದೆ ತೊಗರಿಯ ಗಿಡವು ಹೊಲಗಳಲ್ಲಿ ಚಿಕ್ಕ ಪೊದೆಯಂತೆ ಬೆಳೆಯುವುದನ್ನೂ, ಮರದ ಹಾಗೆ ಬೆಳೆಯುವ ಪ್ರಭೇದವನ್ನೂ ನಾವು ನೋಡಿದ್ದೇವೆ.
ಸಸ್ಯವಿಜ್ಞಾನದಲ್ಲಿ ಇದರ ಬಗ್ಗೆ ಏನಿದೆಯೆಂದು ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು. ಇದರಲ್ಲಿ ಬೇಸಾಯ ಮಾಡುವ ಮತ್ತು ತಾನಾಗಿ ಬೆಳೆಯುವ Cajanus ಜಾತಿಯ ಮೂವತ್ತೆರಡು ಬಗೆಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸುತ್ತಾರೆ. ಭಾರತ ಆಫ್ರಿಕದಂತಹ ಉಷ್ಣವಲಯವು ಇದರ ತವರು ತಾಣ. ಬರ್ಕ್ಹಿಲ್ ಎಂಬುವವರು ಭಾರತದ ಈ ಸಸ್ಯ ಕ್ರಿ.ಪೂ. ಮೂರನೆಯ ಶತಮಾನದ ಹೊತ್ತಿಗೆ ಮಲಯಕ್ಕೆ ಹೋಯಿತು, ಆನಂತರ ಇತರೆಡೆಗಳಿಗೆ ಹಬ್ಬಿತು ಎನ್ನುತ್ತಾರೆ. ಮೊದಲು ಇದು ಪ್ರಾಯಶಃ ಹೆಚ್ಚು ಬೆಳೆಯುತ್ತಿದ್ದುದು ದಕ್ಷಿಣ ಭಾರತದಲ್ಲೇ ಇರಬಹುದು. ಹಲವಾರು ಸ್ವತಂತ್ರ ಭಾಷೆಗಳಗಿ ಬೇರ್ಪಡುವ ಮುನ್ನ ಕ್ರಿ.ಪೂ. ಆರನೆಯ ಶತಮಾನದ ಹೊತ್ತಿಗಿದ್ದ ದ್ರಾವಿಡ ಭಾಷಾ ಸ್ವರೂಪವನ್ನು ಮೂಲದ್ರಾವಿಡ (Proto-Dravidian) ಎಂದು ಭಾಷಾವಿಜ್ಞಾನಿಗಳು ಕರೆಯುವುದು ರೂಢಿ. ಸುಪ್ರಸಿದ್ಧ ದ್ರಾವಿಡ ಭಾಷಾವಿಜ್ಞಾನಿಗಳಾಗಿದ್ದ ಭದ್ರಮರಾಜು ಕೃಷ್ಣಮೂರ್ತಿ ಅವರು ಮೂಲ ದ್ರಾವಿಡದಲ್ಲ್ಲಿ ತೊಗರಿಗೆ 'ತುವರ್' ಎಂಬ ರೂಪವಿದ್ದಿರಬೇಕೆಂದು ಅದನ್ನು ಪುನಾರಚಿಸಿರುವುದಾಗಿ 'Proto-Dravidian Agriculture' ಎಂಬ ತಮ್ಮ ಸಂಶೋಧನ ಲೇಖನದಲ್ಲಿ ಎಫ್.ಸಿ. ಸೌತ್‍ವರ್ತ್ ಎಂಬುವವರು ಉಲ್ಲೇಖಿಸುತ್ತಾರೆ.
ಸ್ವಾಮಿಯವರು ಹೇಳುವಂತೆ ತೊಗರಿ ಕೆಲವರಲ್ಲಿ ಶ್ರಾದ್ಧಕರ್ಮಗಳಲ್ಲಿ ನಿಷಿದ್ಧವಿರಬಹುದು. (ಹೀಗೆ ನಿಷಿದ್ಧಗೊಳ್ಳುವ ಧಾನ್ಯ ತರಕಾರಿಗಳನ್ನು 'ವಿಶ್ವಾಮಿತ್ರ ಸೃಷ್ಟಿ' ಎಂದು ಹೇಳುವುದನ್ನು ಕೇಳಿದ್ದೇವೆ, ಅಂದರೆ ಅವು 'ಬ್ರಹ್ಮಸೃಷ್ಟಿ'ಯಲ್ಲ, ಅರ್ಥಾತ್ ಸ್ಥಳೀಯವಾದದ್ದಲ್ಲ ಎಂಬುದು). ಆದರೆ ಅದಕ್ಕೆ ಕಾರಣ ಏನೋ ತಿಳಿಯದು. ಇಷ್ಟನ್ನು ಬಿಟ್ಟರೆ ತೊಗರಿ ನಮ್ಮದೇ, ಎರವಲು ತಂದದ್ದಲ್ಲ ಎಂಬುದು ರುಜುವಾತಾಗುತ್ತದೆ.
=====
ತೊತ್ತು: ಇದೊಂದು ದ್ರಾವಿಡ ಪದ; ಇದರ ಹಳಗನ್ನಡ ರೂಪ 'ತೊೞ್ತು' ಎಂದು. ತಮಿಳಿನಲ್ಲಿದು ತೊಳುತ್ತೈ, ತೊತ್ತು ಎಂಬ ರೂಪಗಳಲ್ಲಿಯೂ, ತೆಲುಗಿನಲ್ಲಿ ತೊತ್ತು ಎಂಬುದಾಗಿಯೂ ಸಿಕ್ಕುತ್ತದೆ. ಇದರ ಮೂಲ 'ತೊೞಿಲ್' ಎಂದರೆ ಕೆಲಸ (ಮಲಯಾಳಂ ಮತ್ತು ತುಳುಗಳಲ್ಲಿ ಕೆಲಸ ಎಂಬರ್ಥದಲ್ಲಿ ಈ ಶಬ್ದದ ಬಳಕೆಯಿದೆ). 'ತೊೞಿಲ್' ಅನ್ನು ಮಾಡುವವನೇ 'ತೊೞ್ತು'. ಈ ಶಬ್ದವು ಪುಲ್ಲಿಂಗ ಸ್ತೀಲಿಂಗಗಳೆರಡರಲ್ಲೂ ಒಂದೇ ಆಗಿದೆ: "ತೊೞ್ತೆಂದು ದಾಸನುಂ ದಾಸಿಯುಮಕ್ಕುಂ" ('ಶಬ್ದಮಣಿದರ್ಪಣ'). ತೊೞ್ತು ಮಾಡುವ ಕೆಲಸವೇ 'ತೊೞ್ತುವೆಸ' ("ಎನಗೆಡೆಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ" - 'ಪಂಪಭಾರತ') ಅಥವಾ ತೊೞ್ತುಗೆಲಸ ("ತೊೞ್ತುಗೆಲಸಕ್ಕರಮನೆಯಂ ಪುಗುವ ಪೊಱಮಡುವ" - ದುರ್ಗಸಿಂಹನ 'ಪಂಚತಂತ್ರ').
ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ತನ್ನನ್ನು ಒಬ್ಬರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ ತೊತ್ತಿನ ಲಕ್ಷಣ. "ತೊತ್ತಿಂಗೆ ಲಕ್ಷಣವೇಕಯ್ಯ? ಅವರೊಕ್ಕುದನುಂಡು ಮಿಕ್ಕುದ ಕಾಯ್ದುಕೊಂಡಿಪ್ಪುದು" ಎಂಬುದು ಬಸವಣ್ಣನ ವಚನದ ಮಾತು. ಹಲವು ವೇಳೆ ಮಕ್ಕಳನ್ನು ತೊತ್ತುಗಳಾಗಿ ಬಿಡುತ್ತಿದ್ದರು. ಇಂತಹವರನ್ನು 'ಬೞಿದೊತ್ತುಕ' (ಬೞಿ=ವಂಶ) ಎನ್ನುತ್ತಿದ್ದರು. ಹರಿಹರನ 'ನಂಬಿಯಣ್ಣನ ರಗಳೆ'ಯಲ್ಲಿ "ತಾವಿವರ್ಗೆ ವಂಶಾವಳಿಯಲಿ ಬಂದ ಬಳಿದೊತ್ತಿರ ಮಕ್ಕಳಾದ ಕಾರಣ" ಎಂಬ ಮಾತಿದೆ.
ತೊತ್ತುಗಳ ಮೇಲೆ ಸಂಪೂರ್ಣ ಹಕ್ಕಿರುತ್ತಿದ್ದುದರಿಂದ ಒಡೆಯರು ಹೆಣ್ಣುದೊತ್ತುಗಳನ್ನು  ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದುದರಿಂದ ಅಂತಹವರ ಮಕ್ಕಳನ್ನು 'ತೊೞ್ಪುಟ್ಟಿ' ಎನ್ನುತ್ತಿದ್ದರು ("ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ" - 'ಪಂಪಭಾರತ'). ತೊತ್ತುಗಳನ್ನು ಕಾಣಿಕೆಯಾಗಿ ಕೊಡುವ ಪದ್ಧತಿ ತೀರ ಹಳೆಯದು. ರೆಬ್ಬಕಬ್ಬೆ ಎನ್ನುವವಳು ತನ್ನ ತೊತ್ತು ಮಾಚಬ್ಬೆಯನ್ನು ಸಕಳೇಶ್ವರ ದೇವರಿಗೆ (ದೇವಸ್ಥಾನದ ಕೆಲಸಗಳನ್ನು ಮಾಡಲು) ಕಾಣಿಕೆ ಕೊಟ್ಟ ಉಲ್ಲೇಖ 11ನೆಯ ಶತಮಾನದ ಶಾಸನವೊಂದರಲ್ಲಿದೆ.
"ಕೂರ್ಪ ತಾಯಂ ಮಾ ತೊತ್ತ ಕೊಂಬಂತೆಕ" ಎಂಬ ಗಾದೆಯ ಉಲ್ಲೇಖ ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿದೆ. ತೊತ್ತುಗಳನ್ನು ಸಂತೆಯಲ್ಲಿ ಮಾರುತ್ತಿದ್ದ ಅಂಶ ಶಾಸನೋಕ್ತವಾಗಿದೆ. ಹರಿಶ್ಚಂದ್ರನು ತನ್ನ ಹೆಂಡತಿಯನ್ನು ಕಾಶಿಯ ಬ್ರಾಹ್ಮಣನೊಬ್ಬನಿಗೆ ಮಾರಿದ ಪ್ರಸಂಗವೂ ಅದೇ ಕಾವ್ಯದಲ್ಲಿದೆ.
=====
ದಂಡ: ಇದು ಸಂಸ್ಕೃತ ಶಬ್ದ. ದಂಡ ಎಂದರೆ ಕೋಲು. 'ಪಂಪಭಾರತ'ದಲ್ಲಿ ಉದ್ದವಾದ ಕೋಲನ್ನು 'ದಂಡಕಾಷ್ಠ' ಎಂದಿದ್ದರೆ ("ದಂಡಕಾಷ್ಠದ ತುದಿಯೊಳ್ ಪಳಂಚಲೆಯೆ ಕೋವಣಮಂ ಕಟ್ಟಿ"), ಚಿಕ್ಕ ಕೋಲನ್ನು 'ಸುಕುಮಾರ ಚರಿತೆ' ಯು 'ದಂಡಖಂಡ' ಎನ್ನುತ್ತದೆ. ("ದಂಡಖಂಡಾಘಾತದೊಳು"). ಬಂಧುವರ್ಮನ 'ಜೀವಸಂಬೋಧನೆ'ಯಲ್ಲಿ "ಊಱುವ ದಂಡವೆರಸು" ಎಂಬಲ್ಲಿ ಊರೆಗೋಲು ಸೂಚಿತವಾಗಿದೆ.
ತಕ್ಕಡಿಯ ಕೋಲನ್ನು 'ತುಲಾದಂಡ'ವೆನ್ನುತ್ತಿದ್ದರು. "ಧರೆಯಱಿಯಲೊಡಂ ತೂಗಲ್ ಧರೆಗೆ ತುಲಾದಂಡಮಲ್ತೆ ಮದ್ಭುಜದಂಡಂ" ಎಂಬ ಮಾತು 'ಆದಿಪುರಾಣ'ದಲ್ಲಿದೆ. ನಾಲ್ಕು ಮೊಳದ ಅಳತೆಯನ್ನು 'ವ್ಯವಹಾರ ಗಣಿತ'ವು ದಂಡ ಎಂಬ ಹೆಸರಿನಿಂದ ಕರೆಯುತ್ತದೆ. ಸನ್ಯಾಸಿಗಳು ಹಿಡಿದುಕೊಳ್ಳುವ ಕೋಲನ್ನೂ 'ದಂಡ' ಎಂಬ ಶಬ್ದವು ಸೂಚಿಸುತ್ತದೆ. ಹಾಗೆಯೇ ಅಧಿಕಾರದ ಸೂಚಕವಾಗಿ 'ದಂಡ' ಬಳಕೆಯಲ್ಲಿದೆ. ಸೈನ್ಯವನ್ನೂ 'ದಂಡ' ಎನ್ನುತ್ತಿದ್ದರು ("ನೃಪಸೇನೆಯೊಳಂ ದಂಡಂ" - 'ಅಭಿಧಾನ ವಸ್ತುಕೋಶ'). ಅದಕ್ಕೇ ಸೇನೆಯ ನಾಯಕನನ್ನು 'ದಂಡನಾಯಕ' ಅಥವಾ 'ದಂಡನಾಥ' ಎನ್ನುತ್ತಿದ್ದುದು.
ಪ್ರಾಯಶಃ ಕೋಲಿಗೂ ಹೊಡೆಯುವಿಕೆಗೂ ಇರುವ ಸಂಬಂಧದಿಂದಾಗಿ ದಂಡ ಎಂದರೆ ಶಿಕ್ಷೆ ಎಂಬರ್ಥ ಪ್ರಾಪ್ತವಾಗುತ್ತದೆ. ಮರಣದಂಡನೆಯನ್ನು ವಚನಗಳು 'ತಲೆದಂಡ' ಎನ್ನುತ್ತವೆ.  ಹೀಗೆ ಶಿಕ್ಷೆ ಕೊಡಬಲ್ಲ ಅಧಿಕಾರಿಯೇ ದಂಡಧರ ("ಮತ್ತಂ ದಂಡಧರರಿಲ್ಲದಂದು ತಂತಮ್ಮ ವೃತ್ತಿಗಳಂ ಪ್ರಜೆಗಳತಿಕ್ರಮಿಸಿ ನಡೆಗುಮೆಂದು" ಎಂಬುದು ಪಂಪನ 'ಆದಿಪುರಾಣ'ದ ಮಾತು. ಅತ್ಯಂತ ದೊಡ್ಡ ಶಿಕ್ಷೆಗಾರ ಯಮನಾದ್ದರಿಂದ ಅವನನ್ನು 'ದಂಡಪಾಣಿ' ಎನ್ನುತ್ತವೆ ಕಾವ್ಯಗಳು ("ಕೋದಂಡಪಾಣಿಗಳ್ ದಂಡಪಾಣಿಗೆಣೆಯೆನೆ ತಳರ್ದರ್" 'ಪಂಪರಾಮಾಯಣ'). ಶಿಕ್ಷಿಸುವ ಅಧಿಕಾರವೇ 'ದಂಡನೀತಿ' ಅಥವಾ ರಾಜನೀತಿ. "ನಿನ್ನ ದಂಡನೀತಿಯ ಪುದುವೆ ವಲಂ ದಂಡರತ್ನಮೆಂಬುದು ಪೆಱತೇ" ಎಂದೂ ಅಲ್ಲಿಯೇ ಬಳಕೆಯಾಗಿದೆ. ದಂಡನೆಗೊಳಗಾಗುವುದು 'ದಂಡಂಗೊಳ್ಳು'ವುದು ("ಲೆಂಕರ್ ದಂಡಗೊಂಡರಂತೆ ಶಂಕಿಸುತ್ತುಂ" - 'ಧರ್ಮಾಮೃತ'). ಜುಲ್ಮಾನೆಯನ್ನೂ ದಂಡ ಎಂಬ ಶಬ್ದವೇ ಸೂಚಿಸುತ್ತದೆ.
======
ದಿವ್ಯ: ಈ ಶಬ್ದವು ದೈವಕ್ಕೆ ಅಥವಾ ಸ್ವರ್ಗಕ್ಕೆ ಸಂಬಂಧಿಸಿದುದು ಎಂಬರ್ಥದ ಸಂಸ್ಕೃತ ವಿಶೇಷಣ. ಆದರೆ ಇದನ್ನು ಒಂದು ನಾಮಪದವಾಗಿ ಹಾಗೂ ಪರಿಭಾಷೆಯಾಗಿ ಬಳಸುವ ರೂಢಿಯು ಕನ್ನಡ ನಾಡಿನಲ್ಲಿ ಹಿಂದಿನಿಂದಲೂ ಇದೆ. ಅಪರಾಧವೊಂದು ನಡೆದರೆ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಬೇಕು. ಸಾಕ್ಷ್ಯಗಳು ಎರಡು ಬಗೆ: ಮಾನುಷ ಹಾಗೂ ದೈವ. ಅಪರಾಧವನ್ನು ಕಣ್ಣಾರೆ ಕಂಡವನು ಇಲ್ಲದಿದ್ದಾಗ ಹಿಂದಿನವರು ಮೊರೆಹೊಗುತ್ತಿದ್ದುದು ದಿವ್ಯಸಾಕ್ಷ್ಯವನ್ನು. ಇದನ್ನೇ 'ದಿವ್ಯ' ಅಥವಾ 'ದಿಬ್ಯ' ಎಂದು ಕರೆಯುವುದು (ಇಂಗ್ಲಿಷಿನಲ್ಲಿ ಆರ್ಡಿಯಲ್ ಎನ್ನುತ್ತಾರೆ). ರಾಜದ್ರೋಹ, ದೊಡ್ಡ ಪಾತಕಗಳು ಅಥವಾ ಭಾರಿ ಮೊತ್ತದ ಹಣ ವ್ಯವಹಾರದ ಮೋಸ ಇಂಥವುಗಳ ತೀರ್ಮಾನ ಮಾಡಲು ಮಾತ್ರವೇ 'ದಿವ್ಯ'ವನ್ನು ಆಧರಿಸಬೇಕು ಎಂದು 'ಅಗ್ನಿಪುರಾಣ'ವು ಹೇಳುತ್ತದೆ. ಕನ್ನಡದ ಕಾವ್ಯ ಶಾಸನಗಳಲ್ಲಿ ದಿವ್ಯದ ಉಲ್ಲೇಖಗಳನ್ನು ಹೇರಳವಾಗಿ ಕಾಣಬಹುದು.
ದಿವ್ಯಗಳಲ್ಲಿ ಎಷ್ಟು ವಿಧ ಹಾಗೂ ಅವುಗಳ ಸ್ವರೂಪದ ಬಗ್ಗೆ ಏಕಾಭಿಪ್ರಾಯವಿಲ್ಲ. ಐದರಿಂದ ಒಂಬತ್ತು ವಿಧಧ ದಿವ್ಯಗಳನ್ನು ವಿವಿಧ ಸ್ಮೃತಿಗಳು ಉಲ್ಲೇಖಿಸುತ್ತವೆ. ವಿಷ್ಣುಸ್ಮೃತಿಯು ದಿವ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತದೆ: ಸಾಧಾರಣ ಮತ್ತು ಮುಖ್ಯ. ಮೊದಲನೆಯವು ಕೆಲವು ವಸ್ತುಗಳನ್ನು ಹಿಡಿದು ಪ್ರಮಾಣ ಮಾಡುವುದನ್ನು ಒಳಗೊಂಡರೆ, ಎರಡನೆಯದು ಕಷ್ಟಕರವಾದ ನಾನಾ ಬಗೆಯ ಪರೀಕ್ಷೆಗಳನ್ನು ಒಳಗೊಳ್ಳುವಂಥದು.
ಕನ್ನಡ ನಾಡಿನಲ್ಲಿ ಪ್ರಚಲಿತವಿದ್ದುದು ಮುಖ್ಯವಾಗಿ ಏಳು ಬಗೆಯ ದಿವ್ಯಗಳು ಎನ್ನಲಾಗಿದೆ. ಅವುಗಳೆಂದರೆ ಕೋಶ, ರವಿ, ತಂಡುಲ, ಅಗ್ನಿ, ತಪ್ತಮಾಷ, ಜಲ ಮತ್ತು ವಿಷ. ಹಲ್ಲು ಕೀಳದ ಸರ್ಪವನ್ನು ಹಿಡಿದುಕೊಂಡರೂ ಅದು ಕಚ್ಚದಿದ್ದರೆ ಅಂಥವನು ನಿರಪರಾಧಿ; ಈ 'ಸರ್ಪದಿವ್ಯ'ದ ಉಲ್ಲೇಖ ಬಸವಣ್ಣನ ವಚನವೊಂದರಲ್ಲಿದೆ. ಅಂತೆಯೇ ಕೆಂಪಗೆ ಕಾದ ಪಂಚಲೋಹದ ಗುಂಡು ಅಥವಾ ಕಬ್ಬಿಣದ ಗುಳವನ್ನು ಹಿಡಿದುಕೊಳ್ಳುವ ಅಗ್ನಿದಿವ್ಯದ ಪ್ರಸ್ತಾಪ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ಹೀಗೆ ದಿವ್ಯಕ್ಕೊಳಗಾಗಿ ನಿರಪರಾಧಿಯೆಂದು ಪರಿಗಣಿತನಾದವನಿಗೆ 'ಜಯಪತ್ರ'ವನ್ನು ಕೊಡುತ್ತಿದ್ದರಂತೆ.
=====
ದೇಸಿ: ಇದು ದೇಶ ಎಂಬುದರಿಂದಾದ ದೇಶಿ ಎಂಬ ಸಂಸ್ಕೃತ ಶಬ್ದದ ಮತ್ತೊಂದು ರೂಪ. ಈ ಶಬ್ದವು ಅನೇಕ ಅರ್ಥಗಳನ್ನೊಳಗೊಂಡು ಬಳಕೆಯಾಗಿದೆ. ಸ್ಥಳೀಯ ಸಂಸ್ಕೃತಿಗೆ ಈ ಹೆಸರೀಗ ಸಲ್ಲುತ್ತಿದೆ. ಕವಿರಾಜಮಾರ್ಗದಲ್ಲಿಯೇ ದೇಶಿ ದೇಸಿ ಎಂಬೆರಡು ರೂಪಗಳೂ ಸಿಕ್ಕುತ್ತವೆ. ದೇಶಿ ಎಂಬುದು (ಕನ್ನಡದ) ಉಪಭಾಷೆ ("ದೇಶಿ ಬೇಱೆವೇಱಪ್ಪುದಱಿಂ") ಎಂಬರ್ಥದಲ್ಲಿದ್ದರೆ, ದೇಸಿ ಎಂಬುದು ಬಳಕೆಯ ನುಡಿ ("ದೇಸಿಯಲ್ಲವೆಂದದನಱಿದಿರ್ದುಂ") ಎಂಬರ್ಥದಲ್ಲಿಯೂ, ಅಚ್ಚಗನ್ನಡದ (ದೇಶಿಯನೆ ನಿಱಿಸಿ) ಎಂಬರ್ಥದಲ್ಲಿಯೂ ಬಳಕೆಯಾಗಿದೆ. 'ಪಂಪಭಾರತ'ದ "ಬಗೆ ಪೊಸತಪ್ಪುದಾಗೆ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು" ಎಂಬ ಪ್ರಸಿದ್ಧವಾಕ್ಯದಲ್ಲಿ ಈ ಶಬ್ದವು ಜನಪದದ ಸ್ವಂತಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ.
ಬಹು ಹಿಂದಿನಿಂದಲೇ ಕನ್ನಡದಲ್ಲಿ ಮಾರ್ಗ-ದೇಶಿ ಎಂಬ ಶಬ್ದಗಳು ಕಾವ್ಯರೂಪಕ್ಕೆ ಅನ್ವಯಿಸುವಂತೆ ಬಳಕೆಯಾಗಿವೆ. ಮಾರ್ಗವು ಸಂಸ್ಕೃತ ಪರಂಪರೆಯನ್ನು ಮಾದರಿಯಾಗಿರಿಸಿಕೊಂಡಂಥದಕ್ಕೂ, ದೇಸಿ ಕನ್ನಡಕ್ಕೆ ವಿಶಿಷ್ಟವಾದ ಸ್ವಂತದ್ದಕ್ಕೂ ಅನ್ವಯಿಸುತ್ತದೆಂದು ಸ್ಥೂಲವಾಗಿ ಹೇಳಬಹುದು. ಇದು ಪಂಪನ ಮಾತಿನಲ್ಲಿಯೇ ವ್ಯಕ್ತವಾಗಿದೆ. ಜಾನಪದ ಎಂಬ ಅರ್ಥವೂ ಇದಕ್ಕೆ ಹೊಂದುವಂತಿದೆ.
ಸ್ವಂತದ್ದೇ ಸುಂದರವಾದುದು ಎಂಬ ಭಾವನೆಯಿಂದಾಗಿಯೋ ಏನೋ ಮುಂದೆ ಈ ಪದಕ್ಕೆ ಸುಂದರವಾದುದು ಎಂಬ ಅರ್ಥವೇ ಪ್ರಾಪ್ತವಾಗಿದೆ. "ಚರಣಂ ನವಕೇಸರದೊಂದು ದೇಸಿಯಂ ಪ್ರಕಟಿಸೆ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯಲ್ಲಿದ್ದರೆ, "ಪೊಸದೇಸಿವೆತ್ತು ಎಸೆದುದಲ್ಲಿ ನರೇಂದ್ರಕುಮಾರಸಂಕುಳಂ" ಎಂಬ 'ರಾಜಶೇಖರವಿಳಾಸ'ವೆಂಬ ಕಾವ್ಯದ ಮಾತಿನಲ್ಲಿ ಬೆಡಗು ಎಂಬರ್ಥವನ್ನು ತಾಳಿದೆ. ದೇಸಿ ಎಂಬುದು ದೇಸೆ ಎಂಬ ರೂಪವನ್ನೂ ಪಡೆಯುತ್ತದೆ. ದೇಸಿಯಿಂದ ರೂಪಿತವಾದ ದೇಸಿಗ, ದೇಸಿಗಿತಿ ಎಂಬ ಶಬ್ದಗಳು ನಿರ್ಗತಿಕ(ಳು) ಎಂಬರ್ಥದಲ್ಲಿ ಬಳಕೆಯಾಗಿವೆ. "ಲಲ್ಲೆಯ ಸಗ್ಗದ ದೇಸೆಕಾರ್ತಿಯರ್" ಎಂಬ 'ಆದಿಪುರಾಣ'ದ ಮಾತಿನಲ್ಲಿ ದೇಸೆಕಾರ್ತಿ ಎಂಬುದು ಸುಂದರಿ ಎಂಬರ್ಥದಲ್ಲಿ ಬಳಕೆಯಾಗಿದೆ.
=====
ದೋಣಿ: ಸಂಸ್ಕೃತ 'ದ್ರೋಣೀ' ಶಬ್ದದ ತದ್ಭವ. ಇದು ನೀರಿನಲ್ಲಿ ತೇಲಲು ಬಳಸುವ ಮರದ ಸಾಧನ. "ದ್ರೋಣೀ ಕಾಷ್ಠಾಂಬುವಾಹಿನೀ" ಎಂದು 'ಅಮರಕೋಶ'ವು ಹೇಳುತ್ತದೆ. ಈ ಅರ್ಥದಲ್ಲಿ ಶಾಂತಿನಾಥನ 'ಸುಕುಮಾರಚರಿತೆ'ಯಲ್ಲಿ ಈ ಶಬ್ದ ಬಳಕೆಯಾಗಿದೆ ("ತುಳುಕು ನೀರಾಡಿದಂ ದೋಣಿಯಿಂದೇಱಿದನೆಂಬಂತೆ"). "ದೋಣಿಯೆಂದೆನಲ್ ನಾವೆಯಕ್ಕುಂಕ" ಎಂದು ಮಂಗರಾಜ ನಿಘಂಟುವಿನಲ್ಲಿ ಅರ್ಥ ಹೇಳಿದೆ. ನೀರು ತುಂಬಿಡುವ ತೊಟ್ಟಿಗೂ ದ್ರೋಣಿ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಕನ್ನಡದಲ್ಲಿ ಈ ಅರ್ಥವೂ ಇದೆ. "ಕಲ್ಲ ದೋಣಿಯಲೆಱೆದ ನೀರಂತೆ" ಎಂಬುದು ನಯಸೇನನ 'ಧರ್ಮಾಮೃತ'ದ ಮಾತು.  ಆಕಾರವನ್ನು ಹೋಲುವ ಮತ್ತು ನೀರಿನೊಡನೆ ಸಂಬಂಧ ಹೊಂದಿರುವ ಕಾರಣ ಇನ್ನೂ ಹಲವಾರು ವಸ್ತುಗಳನ್ನು ಸೂಚಿಸಲು ಈ ಈ ಶಬ್ದವು ಕನ್ನಡದಲ್ಲಿ ಬಳಕೆಯಲ್ಲಿದೆ. ಮನೆಯ ಸೂರಿನ ಮೇಲೆ ಬಿದ್ದ ಮಳೆ ನೀರು ಕೆಳಗೆ ಹರಿದು ಹೋಗಲು ಬಿಟ್ಟಿರುವ ಕಂಡಿಯನ್ನೂ ದೋಣಿ ಎನ್ನುತ್ತಾರೆ.
ದೋಣಿ ಎಂಬ ಶಬ್ದವನ್ನು ತಟ್ಟೆ ಎಂಬರ್ಥದಲ್ಲಿಯೂ ಬಳಸುತ್ತಾರೆ. "ನಾಯುಣ್ಣದ ದೋಣಿಯೊಳ್ ಊಡಿದಂಗೆ ಪದಯಿದನೆ ಕರಂ" ಎಂಬುದು 'ಸುಕುಮಾರ ಚರಿತೆ' ಯ ಮಾತು. ತಟ್ಟೆಯಂತೆ ಅಗಲವಾಗಿದ್ದು ಅದಕ್ಕಿಂತ ಆಳವಾದ ಬಾನಿಯನ್ನೂ ಈ ಶಬ್ದದಿಂದಲೇ ಕರೆಯುವ ರೂಢಿಯಿತ್ತು. ತಗ್ಗು ಬೀಳು ಎಂಬರ್ಥದಲ್ಲಿ 'ದೋಣಿವೋಗು' ಎಂಬ ಪ್ರಯೋಗವಿತ್ತು. ("ಇರ್ಬಗಿಯಾಗಿ ಪೋಳ್ದು ನೀರೇಱೆದ ನಾಳಿಪುಣ್ಣೊಡೆದು ಸೌಳೆನೆ ಸೀಳ್ದುದು ದೋಣಿವೋಪಿನಂ" ಗ 'ಸುಕುಮಾರಚರಿತೆ'). ದೋಣಿಯಾಕಾರದ ಹರವಿಯನ್ನು 'ದೋಣಿಕೊಂಡ' ಎಂದು 'ವಡ್ಡಾರಾಧನೆ'ಯಲ್ಲಿ ಕರೆದಿದೆ ("ಒಂದು ದೋಣಿಕೊಂಡಮಂ ತಱಿಸಿ") ಇದು 'ದ್ರೋಣಿಕುಂಡ'ದ ತದ್ಭವರೂಪ.
ಡೋಣಿ ಎಂಬ ರೂಪದಲ್ಲಿಯೂ ಈ ಶಬ್ದದ ಬಳಕೆಯಿದೆ. "ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ, ಬೈಚಿಟ್ಟ ನೆಲೆಯಿರ್ದಡೇನು ಭೋಗಿಸಲರಿಯನಾಗಿ. ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ?" ಎಂಬುದು ಮೋಳಿಗೆ ಮಾರಯ್ಯನೆಂಬ ವಚನಕಾರನ ಮಾತು. ಈ ರೂಪವು ದೋಣಿ ಶಬ್ದಕ್ಕಿರುವ ಬಹುತೇಕ ಎಲ್ಲ ಅರ್ಥಗಳಲ್ಲಿಯೂ ಬಳಕೆಯಾಗಿದೆ.
=====
ನಂಜು: ಇದೊಂದು ಕನ್ನಡ ಪದ, ವಿಷ ಎಂಬುದು ಅದರ ಅರ್ಥ. ಈ ಶಬ್ದವು ಇತರ ದ್ರಾವಿಡ ಭಾಷೆಗಳಲ್ಲೂ ದೊರೆಯುತ್ತದೆ: ತಮಿಳು ಮಲಯಾಳಂಗಳಲ್ಲಿ ನಂಚು, ತುಳುವಿನಲ್ಲಿ ನಂಜು, ನಂಜಿ ಎಂಬ ರೂಪಗಳಿವೆ. ರಕ್ತದ ವಿಷಪೂರಿತವಾಗುವಿಕೆಯನ್ನು ನಂಜು ಎನ್ನುತ್ತಾರೆ. ವಿಷಯುಕ್ತ ನೀರನ್ನು ಪಂಪ 'ನಂಜುನೀರ್' ಎನ್ನುತ್ತಾನೆ. 'ನಂಜುರುಳಿ' ಎಂದರೆ ವಿಷದ ಉಂಡೆ; ಈ ಶಬ್ದ ಬಳಕೆಯಾಗಿರುವುದು ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ; ಇದೇ ಅರ್ಥದಲ್ಲಿ 'ಧರ್ಮಾಮೃತ'ದಲ್ಲಿ 'ನಂಜಿನುರುಳಿ' ಎನ್ನಲಾಗಿದೆ. ವಿಷವನ್ನುಳ್ಳುದರಿಂದ ಕುಮಾರವ್ಯಾಸ ಹಾವನ್ನೂ ನಂಜು ಎನ್ನುತ್ತಾನೆ; ಕೃಷ್ಣನನ್ನು  "ನಂಜಿನಲಿ ಪವಡಿಸುವ"(ವನು) ಎಂದು ವರ್ಣಿಸುತ್ತಾನೆ. ಪುರಂದರದಾಸ ಆದಿಶೇಷನನ್ನು 'ನಂಜಿನೊಡೆಯ' (ಹಾವುಗಳ ಒಡೆಯ) ಎನ್ನುತ್ತಾನೆ. ಮಾತಿನಲ್ಲಿ ತುಂಬಿರುವ ಕೆಟ್ಟ ಭಾವನೆಯನ್ನೂ ನಂಜು ಎನ್ನುತ್ತಾರೆ.
ಈ ನಾಮಪದಕ್ಕೆ ಆಗು ಎಂದು ಸೇರಿ ಮಾಡಿಕೊಳ್ಳುವ ಕ್ರಿಯಾಪದ ನಂಜಾಗು ಎಂಬುದು ವಿಷಪೂರಿತವಾಗುವುದನ್ನು ಸೂಚಿಸುತ್ತದೆ. "ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾಗೆ ದೂರುವೆನಯ್ಯಾ" ಎಂಬ ಸಾಲು ಬಸವಣ್ಣನ ವಚನವೊಂದರಲ್ಲಿದೆ.  ಹಾಗೆಯೇ ವಿಷ ಹಾಕುವುದನ್ನು 'ನಂಜೂಡು' ಎನ್ನುತ್ತಾರೆ; ವಿಷಜಂತು ಕಚ್ಚಿದಾಗ ಮೈಯಲ್ಲಿ 'ನಂಜೂರು'ತ್ತದೆ.
ಸಮುದ್ರಮಥನ ಕಾಲದಲ್ಲಿ ಮೊದಲು ಬಂದ ವಿಷವನ್ನು ಲೋಕಕಲ್ಯಾಣಾರ್ಥವಾಗಿ ಶಿವ ಕುಡಿಯುತ್ತಾನೆ; ಅದು ಹೊಟ್ಟೆ ಸೇರದ ಹಾಗೆ ಪಾರ್ವತಿ ಆತನ ಕತ್ತನ್ನು ಅದುಮಿ ಹಿಡಿದುದರಿಂದ ವಿಷವು ಕೊರಳಲ್ಲೇ ಉಳಿದುಬಿಡುತ್ತದೆ. ಆದ್ದರಿಂದಲೇ ಅವನಿಗೆ ವಿಷಕಂಠ ಎಂದು ಹೆಸರಾಯಿತು; ಇದರ ನೇರ ಅನುವಾದವೇ 'ನಂಜುಗೊರಲ' ಎಂಬುದು. ಆಂಡಯ್ಯ ಶಿವನನ್ನು ಈ ಮಾತಿನಿಂದ ಸಂಬೋಧಿಸುತ್ತಾನೆ. ನಂಜುಂಡ ಎಂದರೂ ಇದೇ ಅರ್ಥ: ನಂಜು+ಉಂಡ(ವನು). ಇದಕ್ಕೆ ಮುಂದೆ ಒಡೆಯ ಎಂಬರ್ಥದ ಈಈ್ವರ ಎಂಬ ಸಂಸ್ಕೃತ ಶಬ್ದ ಸೇರಿ ನಂಜುಂಡೇಶ್ವರ ಎಂದಾಯಿತು (ಈ ರೂಪವು ಹದಿನಾಲ್ಕನೆಯ ಶತಮಾನದ ಶಾಸನದಲ್ಲಿ ದೊರೆಯುತ್ತದೆ). (ಇದು ಅಚ್ಚಗನ್ನಡ ಮತ್ತು ಸಂಸ್ಕೃತ ಶಬ್ದಗಳು ಸೇರಿ ಆಗಿರುವ ಸಮಾಸಪದ). ಹಾಗೆಯೇ ನಂಜಾಂಬಾ ಎಂಬುದು; ಪಾರದವತಿಯನ್ನು ಸೂಚಿಸುವ ಹೆಸರು. ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡು ನಂಜುಂಡನ ಆವಾಸ. ಆ ಊರಿನ ಈ ದೈವವನ್ನು ಟಿಪ್ಪು 'ಹಕೀಂ ನಂಜುಂಡ' ಎಂದು ಕರೆಯುತ್ತಿದ್ದನಂತೆ. ಸಂಬಂಧಸೂಚಕ ಪದವು ಸೇರಿ ಅಂಕಿನಾಮವಾಗುವುದು ಕನ್ನಡದಲ್ಲಿ ಸಾಮಾನ್ಯ. ಈ ರೀತಿ ಆಗಿರುವ ಶಬ್ದಗಳೇ ನಂಜಯ್ಯ, ನಂಜಪ್ಪ, ನಂಜಣ್ಣ, ನಂಜಪ್ಪಯ್ಯ, ನಂಜಪ್ಪಣ್ಣಯ್ಯ ಮುಂತಾದುವು.
=====
ನಮ್ಮಭಿಮಾನ: ಈಚೆಗೆ ಶಿವಮೊಗ್ಗದಲ್ಲಿ ಒಂದು ಸಮಾವೇಶ ನಡೆಯಿತು, ಅದನ್ನು ಸಂಘಟಕರು 'ನಮ್ಮಭಿಮಾನ' ಎಂದು ಕರೆದುಕೊಂಡರು. ಅದು ಯಾತಕ್ಕಾಯಿತು, ಯಾರಿಗಾಗಿ ಆಯಿತು ಎಂಬುದು ನಮಗೆ ಪ್ರಸ್ತುತವಲ್ಲ. ಬೇಕಾಗಿರುವುದು ಆ ಶಬ್ದದ ಸ್ವರೂಪ ಚರ್ಚೆ, ಅದರ ಅರ್ಥ ಏನಿರಬಹುದು ಎಂಬುದು.  ಈ ಶಬ್ದವು 'ನಮ್ಮ' ಹಾಗೂ 'ಅಭಿಮಾನ' ಎಂಬ ಎರಡು ಪದಗಳಿಂದ ಕೂಡಿದೆ. ನಮ್ಮ ಎಂಬುದು ನಮಗೆ ಸೇರಿದ ಅಥವಾ ನಮಗೆ ಸಂಬಧಿಸಿದ ಅಥವಾ ನಾವು ಹೊಂದಿರುವ ಎಂಬ ಅರ್ಥವನ್ನು ಹೊಂದಿರುವುದರಿಂದ ಈ ಶಬ್ದಕ್ಕೆ ಒಟ್ಟಾಗಿ 'ನಾವು (ಇಂಥವರ ಬಗ್ಗೆ) ಹೊಂದಿರುವ ಅಭಿಮಾನ' ಎಂಬ ಅರ್ಥ ಹೊರಡಬಹುದು. ಹೊರನೋಟಕ್ಕೆ ಅಭಿಮಾನ ಎಂಬ ಪದಕ್ಕೆ ಪ್ರೀತಿ ಎಂಬ ಅರ್ಥವಿರುವುದು ಸ್ಪಷ್ಟ. ಯಾರಿಗಾಗಿ ಸಮಾವೇಶವನ್ನು ಮಾಡುತ್ತಿರುವರೋ ಅವರ ಬಗ್ಗೆ ಸಂಘಟಕರು ಹೊಂದಿರುವ ಅಭಿಮಾನ ಇದು ಎಂಬುದು ಅಭಿಪ್ರಾಯ.
ನಮ್ಮ ಎಂಬುದು ನಾವು ಎಂಬುದರ ಷಷ್ಠೀವಿಭಕ್ತಿಯ ರೂಪ, ಕನ್ನಡದ್ದೇ ಪದ; ಅಭಿಮಾನ ಸಂಸ್ಕೃತ ಮೂಲದ್ದು. ಸಂಪ್ರದಾಯನಿಷ್ಠ ವೈಯಾಕರಣಿಗಳ ದೃಷ್ಟಿಯಲ್ಲಿ ಇದೊಂದು ಅರಿಸಮಾಸ. ಅಭಿಮಾನ ಎಂಬುದಕ್ಕೆ ಸಂಸ್ಕೃತದಲ್ಲಿ ಅಹಂಕಾರ, ಆತ್ಮಗೌರವ ಎಂಬ ಅರ್ಥಗಳಿವೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿಯೂ ಸುಮಾರು ಇದೇ ಅರ್ಥವಿದೆ, ಆದರೆ ಅರ್ಥಚ್ಛಾಯೆ ಕೊಂಚ ಭಿನ್ನ. 'ಪಂಪಭಾರತ'ದಲ್ಲಿ "ಅಭಿಮಾನಮೊಂದೆ ಕುಲಂ" ಎಂಬ ಮಾತಿದೆ. ವ್ಯಕ್ತಿಯು ಹೊಂದಿರಬೇಕಾದ ಅಪೇಕ್ಷಣೀಯ ಗುಣವಾದ ಆತ್ಮಗೌರವ ಎಂಬ ಅರ್ಥವಿದೆ ಅಲ್ಲಿ. "ಅಭಿಮಾನಧನ" - ಯಾರಿಗೆ ಅಭಿಮಾನವೇ ಸಂಪತ್ತೋ ಅಂಥವನು - ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ ಪ್ರಯೋಗಗೊಂಡಿದೆ. ಹಾಗಾಗಿಯೇ ರನ್ನಕವಿಯು ದುರ್ಯೋಧನನನ್ನು "ಅಭಿಮಾನಧನ" ಎನ್ನುತ್ತಾನೆ. ತನ್ನ ಬಗೆಗಿನ ಗೌರವ ಎಂಬುದು ಸಡಿಲಗೊಂಡು ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಟ್ಟ ಗೌರವವೂ ಅಭಿಮಾನ ಎನಿಸಿಕೊಂಡು, ಅದೇ ಮುಂದೆ ಪ್ರೀತಿ ಎಂಬ ಅರ್ಥವನ್ನು ಪಡದಿದೆ. ತನ್ನ ಬಗೆಗಿನ ಗೌರವವನ್ನು ಸೂಚಿಸಲು 'ಸ್ವಾಭಿಮಾನ' ಹಾಗೂ 'ಆತ್ಮಾಭಿಮಾನ' ಎಂಬ ಶಬ್ದಗಳು ಈಗ ಹೆಚ್ಚು ರೂಢಿಯಲ್ಲಿವೆ. ಶಬ್ದಗಳಿಗೆ ಕಾಲಕಾಲಕ್ಕೆ ಬದಲಾಗುವ ಅರ್ಥಚ್ಛಾಯೆಗೆ ಇದೊಂದು ಒಳ್ಳೆಯ ಉದಾಹರಣೆ.
*****
ನಿಲ್ಲು: ಇದೊಂದು ಕ್ರಿಯಾಪದ; ಹಳಗನ್ನಡದಲ್ಲಿದು 'ನಿಲ್' ಎಂಬ ರೂಪದಲ್ಲಿತ್ತು. ತಮಿಳು, ಮಲಯಾಳಂಗಳಲ್ಲಿ ನಿಲ್ ಎಂಬ ರೂಪದಲ್ಲಿಯೂ, ತೆಲುಗಿನಲ್ಲಿ ನಿಲುಚು ಎಂಬುದಾಗಿಯೂ, ತುಳುನಲ್ಲ್ಲಿ ನಿಲ್, ನಿಲಿ ಎಂಬ ರೂಪಗಳಲ್ಲಿಯೂ ದೊರೆಯುತ್ತದೆ. ನಿಲ್ ಎಂಬುದಕ್ಕೆ ಕೇಶಿರಾಜನ 'ಶಬ್ದಮಣಿದರ್ಪಣ'ವು ಎರಡು ಅರ್ಥಗಳನ್ನು ನೀಡುತ್ತದೆ: "ನಿಲ್ - ಗತಿಮುಕ್ತೌ ಸ್ಥಾಪನೇಚ"; ಅಂದರೆ ಚಲನೆಯಿಲ್ಲದ್ದು ಮತ್ತು ಸ್ಥಾಪನೆಗೊಂಡದ್ದು ಎಂದು. ತಂಗುವುದು ಎಂಬರ್ಥವೂ ಇದಕ್ಕಿದೆ ("ತಡೆದಿಲ್ಲಿ ನಿಂದೆನಪ್ಪೊಡೆ ಮಡಿವಾದಪುದು" - ನಯಸೇನನನ 'ಧರ್ಮಾಮೃತ'). ಸ್ಥಿರವಾಗಿರು ಎಂಬರ್ಥದಲ್ಲಿಯೂ ಇದು ಬಳಕೆಯಲ್ಲಿದೆ ("ಶ್ರೀರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ" - ಎಂಟನೆಯ ಶತಮಾನದ ಒಂದು ಶಾಸನ). ನಿಲ್ ಎಂಬುದಕ್ಕೆ ಎ ಎಂಬ ಪ್ರತ್ಯಯ ಸೇರಿಸಿ ಅವಧಾರಣೆಯಾಗಿ ನಿಲೆ, 'ನಿಲೆ ನುಡಿ' ಎಂಬ ರೂಪಗಳಲ್ಲಿಯೂ ಈ ಶಬ್ದವು ಬಳಕೆಗೊಂಡಿದೆ. ಕಾಯುವುದು ಎಂಬರ್ಥವೂ ಇದಕ್ಕಿದೆ: "ಬೇಡಲ್ಕೆ ಬಂದು ನಿಂದಿರ್ಪಂ" ಎಂಬ ಪ್ರಯೋಗ 'ಕರ್ಣಾಟಕ ಕಾದಂಬರಿ'ಯದು. ನೆಲೆ ಎಂಬರ್ಥವೂ ಈ ಶಬ್ದಕ್ಕಿದೆ ("ಆನತನಲ್ಲದಂಗೆ ಪದುಳಂ ನಿಲವಿಲ್ಲ" - ನಾಗಚಂದ್ರನ 'ಪಂಪರಾಮಾಯಣ").
ನಿಂತ ವ್ಯಕ್ತಿಯ ಸ್ವರೂಪವೇ ನಿಲವು ಅಥವಾ ನಿಲುವು. "ನಿಲವು ಮೋಹನಂ" ಎಂಬುದು 'ಹರಿಚಂದ್ರಕಾವ್ಯ'ದ ಪ್ರಯೋಗ. ಇದು ರೂಪಕವಾಗಿ ವ್ಯಕ್ತಿಯ ಧೋರಣೆ ಅಥವಾ ಸ್ವಭಾವ ಎಂಬರ್ಥಕ್ಕೆ ವಿಸ್ತಾರಗೊಳ್ಳುತ್ತದೆ. "ಮಹಾದೇವಿಯಕ್ಕಗಳ ನಿಲವ ಬಸವಣ್ಣನ ಕೃಪೆಯಿಂದಲರಿದೆನಯ್ಯಾ" ಎಂಬುದು ಮಡಿವಾಳ ಮಾಚಿದೇವನ ಮಾತು. ನಿಂತು ಎಟುಕಿಸಿಕೊಳ್ಳುವುದು 'ನಿಲ್ಕಿಸು' ಅಥವಾ 'ನಿಲುಕಿಸು'. ಹಾಗೆ ನಿಂತು ಎಟುಕಿಸಿಕೊಳ್ಳಬಹುದಾದ, ಹಾಲು ಮೊಸರುಗಳ ಗಡಿಗೆಗಳನ್ನಿಡುವ ಹಗ್ಗದ ಜೋತಾಡುವ ಸಾಧನವೇ 'ನಿಲವು' ಅಥವಾ 'ನೆಲವು'.
ವಾಹನಗಳು ಹೊರಡುವ ಹಾಗೂ ಬಂದು ನಿಲ್ಲುವ ಜಾಗಗಳನ್ನು ನಿಲ್ದಾಣ ಎಂದೂ, ಮಧ್ಯೆ ಜನರನ್ನು ಹತ್ತಿಸಿಕೊಳ್ಳುವ ಜಾಗವನ್ನು ನಿಲುಗಡೆ ಎಂದೂ ಕರೆಯುತ್ತೇವೆ. ವಾಹನಗಳನ್ನು ನಿಲ್ಲಿಸುವ ಜಾಗವೂ (ಪಾರ್ಕಿಂಗ್) ನಿಲುಗಡೆಯೇ. ಬಹು ತುರ್ತಾಗಿ ಚರ್ಚಿಸಬೇಕಾದ ವಿಷಯ ಬಂದಾಗ ಸಾಗುತ್ತಿರುವ ವಿಷಯದ ಚರ್ಚೆಯನ್ನು ನಿಲ್ಲಿಸಲು ಮಾಡುವ ಕೋರಿಕೆಯೇ ಶಾಸನಸಭೆಗಳಲ್ಲಿನ 'ನಿಲುವಳಿ ಸೂಚನೆ'.
======
ನಿವೃತ್ತಿ: ಈಗ ಸಾಮಾನ್ಯವಾಗಿ ನಿವೃತ್ತಿ ಎಂಬ ಶಬ್ದವು ನೌಕರಿಯಲ್ಲಿದ್ದು ನಿಯಮಾನುಸಾರ ಅವಧಿ ಮುಗಿದ ಬಳಿಕ ನೌಕರನೊಬ್ಬ ಅದರಿಂದ ಬಿಡುಗಡೆಗೊಳ್ಳುವುದನ್ನು ಸೂಚಿಸುತ್ತದೆ. ಸಹಜವಾಗಿಯೇ ಈ ಪರಿಕಲ್ಪನೆ ಹಿಂದೆ ಇರಲಿಲ್ಲ: ಏಕೆಂದರೆ ಆಗ ನೌಕರಿಯಾಗಲೀ, ನಿವೃತ್ತಿಯಾಗಲೀ ರೂಢಿಯಲ್ಲಿರಲಿಲ್ಲ. ಇದೆಲ್ಲ ಕಚೇರಿ, ನೌಕರಿ, ಸಂಬಳ ಮುಂತಾದ ಪದ್ಧತಿಗಳು ಬಂದ ಆಧುನಿಕ ಕಾಲದವು. ಹೊಸ ಪದ್ಧತಿಗಳನ್ನು ಸೂಚಿಸಲು ಹೊಸ ಶಬ್ದಗಳು ಸೃಷ್ಟಿಗೊಳ್ಳಬೇಕು.
ಮೂಲತಃ ನಿವೃತ್ತಿ ಎಂಬುದು ಸಂಸ್ಕೃತ ಪದ. ಹಿಂದಿರುಗುವುದು, ಹಿಂದಕ್ಕೆ ನಡೆಯುವುದು ಎಂಬುದು ಇದಕ್ಕಿದ್ದ ಅರ್ಥ. ಕೊನೆಯಾಗುವುದೂ ಎಂಬ ಅರ್ಥವೂ ಇದಕ್ಕಿದೆ. ಪ್ರಾಪಂಚಿಕ ವ್ಯವಹಾರದಿಂದ ದೂರ ಸರಿಯುವುದೂ ಎಂಬ ಅರ್ಥವೂ ಬಳಕೆಯಲ್ಲಿತ್ತು. ಇದಕ್ಕೆ ಹತ್ತಿರವಾದ ಮತ್ತೊಂದು ಶಬ್ದವೂ ಸಂಸ್ಕೃತದಲ್ಲಿದೆ, ಅದೇ ನಿರ್ವೃತಿ. ಇದಕ್ಕೂ ಬಿಡುಗಡೆ ಎಂಬ ಅರ್ಥವಿದೆ, ಜೊತೆಗೆ ಸಂತೋಷ ಎಂಬ ಅರ್ಥವೂ ಇದೆ. ಕಾವ್ಯದ ಪ್ರಯೋಜನಗಳನ್ನು ಹೇಳುವಾಗ ಕೆಲವರು 'ಸದ್ಯಃಪರನಿರ್ವೃತಯೇ' ಎಂದೂ ಹೇಳುತ್ತಾರೆ ಅಂದರೆ ತನ್ಮಯವಾಗಿ ಓದುತ್ತಿರುವಷ್ಟು ಕಾಲ ಕಾವ್ಯವು ನಮ್ಮ ಮನಸ್ಸನ್ನು ಇಲ್ಲಿಂದ ಬಿಡುಗಡೆಗೊಳಿಸಿ ಸಂತೋಷ ನೀಡುವಂಥದು ಎಂಬುದು ಅಭಿಪ್ರಾಯ.
ಈಗ ನಿವೃತ್ತಿವೇತನ ಎಂಬ ಶಬ್ದವೂ ಬಳಕೆಯಲ್ಲಿದೆ. ನೌಕರಿಯಲ್ಲಿ ದೀರ್ಘ ಕಾಲ ದುಡಿದ ವ್ಯಕ್ತಿಯು ಅದರಿಂದ ಬಿಡುಗಡೆಗೊಂಡ ಮೇಲೆ ಪಡೆಯುವ ಸಂಭಾವನೆ ಎಂಬರ್ಥ ಅದಕ್ಕಿದೆ. ಹಿಂದೆಯೇ ಬಳಕೆಯಲ್ಲಿದ್ದ ಎರಡು ಶಬ್ದಗಳನ್ನು ಸೇರಿಸಿ ಹೊಸ ಪರಿಕಲ್ಪನೆಯೊಂದನ್ನು ಸೂಚಿಸಲು ಸಿದ್ಧಗೊಂಡ ಶಬ್ದ ಇದು. ಭಾಷೆಯು ಹೊಸ ಪರಿಕಲ್ಪನೆಗಳನ್ನು ಹಳೆಯ ಶಬ್ದಗಳ ಸಂಯೋಜನೆಗೊಳಿಸುವ ಮೂಲಕವೂ ಹೇಳುವ ಪರಿ ಇದು. ನಿವೃತ್ತಿವೇತನ ಎಂಬ ಶಬ್ದಕ್ಕೆ ಈಗ 'ಪಿಂಚಣಿ' ಎಂಬ ಇನ್ನೊಂದು ಶಬ್ದವೂ ರೂಢಿಯಲ್ಲಿದೆ; ಅದು ಇಂಗ್ಲಿಷ್ನ 'ಪೆನ್ಶನ್' ಎಂಬುದರ ಕನ್ನಡೀಕರಣಗೊಂಡ ರೂಪ. ಒಂದು ಶಬ್ದ ಸಂಸ್ಕೃತದ ಈ ಕಡೆಯಿಂದ ಬಂದುದಾದರೆ, ಮತ್ತೊಂದು ಇಂಗ್ಲಿಷ್ನ ಆ ಕಡೆಯಿಂದ ಬಂದುದು. ಈ ಎರಡೂ ಭಾಷೆಗಳು ಕನ್ನಡ ಶಬ್ದಭಂಡಾರದ ಹೊಲಕ್ಕೆ ಹೊಸ ಮೆಕ್ಕಲನ್ನು ತಂದು ಫಲವತ್ತಾಗಿಸುವ ಎರಡು ದೊಡ್ಡ ನದಿಗಳು. ನದಿಗಳಿರುವುದೇ ಸಮೃದ್ಧವಾಗಿ ನೀರು ಮೆಕ್ಕಲುಗಳನ್ನು ಒದಗಿಸುವುದಕ್ಕಲ್ಲವೇ?
******
ನೆರಳು: ಈ ದ್ರಾವಿಡ ಪದವು ಹಳಗನ್ನಡದಲ್ಲಿ 'ನೆೞಲ್' ಎಂಬ ರೂಪದಲ್ಲಿ ದೊರೆತರೆ ತಮಿಳಿನಲ್ಲಿ ನಿೞಲ್, ನೀೞಲ್ ಎಂದೂ, ಮಲಯಾಳಂನಲ್ಲಿ ನಿೞಲ್ ಎಂದೂ, ತೆಲುಗಿನಲ್ಲಿ ನೀಡ ಎಂದೂ, ತುಳುವಿನಲ್ಲಿ ನೆರಳ್, ನಿರಲ್ ಎಂದೂ ದೊರೆಯುತ್ತದೆ. ಛಾಯೆ ಎಂಬುದು ಇದರ ಮೂಲಾರ್ಥ. "ನೆೞಲ್=ಆತಪತ್ರಾದಿ ಛಾಯೆ" ಎಂದು 'ಶಬ್ದಮಣಿದರ್ಪಣ' ಅರ್ಥ ಕೊಡುತ್ತದೆ. "ಜಲದದ ನೆೞಲುಂ .. .. ನೆಲಸವು" ಎಂಬುದು 'ಕವಿರಾಜಮಾರ್ಗ'ದ ಮಾತು. ಪಂಪನ 'ಆದಿಪುರಾಣ'ದ ಒಂದು ಸುಂದರ ಪದ್ಯದಲ್ಲಿ "ತನು ರೂಪ ವಿಭವ ಯೌವನಧನ ಸೌಭಾಗ್ಯಾಯುರಾದಿಗಳ"ನ್ನು "ಕುಡುಮಿಂಚಿನ ಪೊಳಪು ಮುಗಿಲ ನೆೞಲ್" ಮುಂತಾದುವಕ್ಕೆ ಹೋಲಿಸಲಾಗಿದೆ. "ನೆೞಲಂಚೆಯಂತೆ ನೆೞಲನೆ ತೋರ್ಪ ನೆೞಲ ಮರಂಗಳುಮಂ" ಎಂಬುದು ಬಂಧುವರ್ಮನ 'ಹರಿವಂಶಾಭ್ಯುದಯ' ಕಾವ್ಯದ ಸಾಲು (ನೆೞಲ್ ಎಂಬುದು ಒಂದು ಮರದ ಹೆಸರೂ ಹೌದು). "ನೀರೊಳಗಿರ್ದ ತನ್ನ ನಲ್ಲಳ ನೆೞಲಂ ಕಂಡು ನಲ್ಲಳೆಂದು ಮತಿಗೆಟ್ಟು" ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಪ್ರತಿಬಿಂಬ ಎಂಬರ್ಥ ಹೊರಡುತ್ತದೆ. ಆಧುನಿಕ ಬರಹಗಾರರಾದರೂ ತಮ್ಮ ನಾಟಕಗಳಲ್ಲಿ ಹಳಗನ್ನಡ ಬಳಸಿದ ಬಿಎಂಶ್ರೀ ಅವರು 'ಅಶ್ವತ್ಥಾಮನ್' ನಾಟಕದಲ್ಲಿ "ಇಂದವನ್, ನಾಳೆ ನಾನ್, ಏನ್ ಪಾಡೊ ಆಳ ಬಾಳ್! ಬೀಸುವ ಬಯಲ್ಗಾಳಿ, ಪರಿದಡಂಗುವ ನೆಳಲ್" ಎಂದು ಬರೆಯುತ್ತಾರೆ.
ನಡುಗನ್ನಡದಲ್ಲಿ ಈ ಶಬ್ದದಲ್ಲಿನ ಳಕಾರ(ಅಂದರೆ ಱಳ)ದ ಸ್ಥಳದಲ್ಲಿ ಳಕಾರ(ಅಂದರೆ ಕುಳ) ಬಳಕೆಗೆ ಬಂತು. "ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ" ಎಂಬ ಅದ್ಭುತ ರೂಪಕ ಅಲ್ಲಮನದು. ಪ್ರತಿಬಿಂಬ ಎಂಬರ್ಥದಲ್ಲಿ ಕುಮಾರವ್ಯಾಸನು "ನೆಳಲು ಜಲದಲಿ ನಡುಗಲಿನ ಮಂಡಲಕೆ ಕಂಪವೆ" ಎಂಬ ಸಾಲನ್ನು ಬರೆಯುತ್ತಾನೆ. ನೆಳಲು ಎಂಬುದಕ್ಕೆ ಕೃಪೆ ಎಂಬರ್ಥದಲ್ಲಿ ಕುಮಾರವ್ಯಾಸನು "ಕೃಷ್ಣನ ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು" ಎಂಬಲ್ಲಿ ಬಳಸುತ್ತಾನೆ.
ಪುರಂದರದಾಸರ ಕೀರ್ತನೆಯೊಂದರಲ್ಲಿಯೇ ನೆರಳು ಎಂಬ ರೂಪ ಬಳಕೆಯಾಗಿದೆ: "ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ" ಇತ್ಯಾದಿ. ಹೊಸಗನ್ನಡದಲ್ಲಿ ಈ ರೂಪವೇ ಹೆಚ್ಚು ಬಳಕೆಯಲ್ಲಿರುವುದು. ಪುತಿನ ಗಾಂಧಿಜಿಯನ್ನು ಗರುಡನ ನೆರಳಿಗೆ ಹೋಲಿಸುತ್ತಾರೆ: "ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು" ಎಂಬುದು 'ಗಾಂಧಿ' ಎಂಬ ಕವನದ ಸಾಲು. 'ನನ್ನ ನೆರಳು' ಎಂಬ ತಮ್ಮೊಂದು ಕವನದಲ್ಲಿ ಚಂದ್ರಶೇಖರ ಪಾಟೀಲರು "ಸುಳಿದು ಸುಳಿಹಿಡಿವ ಆ ತುಂಟ ನೆರಳನು ಕಂಡು ಒದೆಯಬೇಕೆನಿಸಿತ್ತು" ಎನ್ನುತ್ತಾರೆ. ಹಿಂಬಾಲಕ, ಆಶ್ರಯ, ಕೃಪೆ ಎಂಬ ಅರ್ಥಗಳಲ್ಲಿಯೂ ಈ ಪದದ ಬಳಕೆಯಿದೆ.
=====
ನೇಗಿಲಯೋಗಿ: ತನ್ನಲ್ಲಿರುವ ಭಾವನೆಯನ್ನು ಸಮರ್ಪಕವಾಗಿ ತೋಡಿಕೊಳ್ಳಲು ಕವಿಗಳು ಅನೇಕ ಸಂದರ್ಭಗಳಲ್ಲಿ ಹೊಸ ಶಬ್ದಗಳನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಅದು ಇದುವರೆಗೆ ಇಲ್ಲದಿರುವ ಶಬ್ದವಾಗಿರಬಹುದು, ಅಥವಾ ಹಳೆಯ ಶಬ್ದವನ್ನೇ ಹೊಸ ಅರ್ಥದಿಂದ ಬಳಸಿದುದಾಗಿರಬಹುದು, ಅಥವಾ ಇರುವ ಶಬ್ದಗಳ ಮರುಜೋಡಣೆಯಿಂದ ಮತ್ತೊಂದನ್ನು ರೂಪಿಸಿಕೊಂಡಿರುವುದಾಗಿರಬಹುದು. ಇಂಥ ಕವಿಗಳನ್ನು ಅಥವಾ ಹೊಸ ಶಬ್ದವನ್ನು ರೂಪಿಸುವವರನ್ನು 'ಶಬ್ದಬ್ರಹ್ಮ' ಎಂದು ಕರೆಯಬಹುದು. 'ನೇಗಿಲಯೋಗಿ' ಎಂಬ ಶಬ್ದವು ರೈತನನ್ನು ಸೂಚಿಸಲು ಸೃಷ್ಟಿಸಿಕೊಂಡಿರುವ ಹೊಸ ಶಬ್ದ. ಇದನ್ನು ಸೃಷ್ಟಿಸಿದವರು ಕುವೆಂಪು. ಆ ಹೆಸರಿನ ತಮ್ಮ ಕವನವೊಂದರಲ್ಲಿ ರೈತನನ್ನು ಹೀಗೆ ಕರೆದಿದ್ದಾರೆ. ನಿಸ್ವಾರ್ಥಿಯಾಗಿ ಹೊಲದಲ್ಲಿ ದುಡಿದು ಮಿಕ್ಕವರಿಗೆಲ್ಲ ಅನ್ನ ಬೆಳೆದು ಕೊಡುವ ರೈತನ ಕಾಯಕ ಕವಿಗೆ ಯೋಗದ ಹಾಗೆ ಕಾಣುತ್ತದೆ.
ಈ ಪದದಲ್ಲಿ ಎರಡು ಶಬ್ದಗಳು ಸೇರಿವೆ: ನೇಗಿಲು ಮತ್ತು ಯೋಗಿ. ಇವೆರಡೂ ಕೂಡಿ ಆದ ರೂಪವನ್ನು ಸಮಾಸ ಎನ್ನುತ್ತಾರೆ. ಇಲ್ಲಿ ಮೊದಲ ಪದ ಅಚ್ಚಗನ್ನಡದ್ದಾದರೆ, ಎರಡನೆಯದು ಸಂಸ್ಕೃತದ್ದು. ಇಂಥ ಶಬ್ದಸೃಷ್ಟಿಯನ್ನು ಹಿಂದಿನ ವ್ಯಾಕರಣಶಾಸ್ತ್ರಜ್ಞರು ತಪ್ಪು ಎನ್ನುತ್ತಿದ್ದರು. ಕನ್ನಡ ಶಬ್ದಕ್ಕೆ ಕನ್ನಡ ಪದ ಸೇರಬೇಕು, ಸಂಸ್ಕೃತದ್ದಾದರೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬೇಕು ಎಂಬುದು ಅವರ ವಾದ. ಕನ್ನಡ-ಸಂಸ್ಕೃತ ಶಬ್ದಗಳು ಸೇರಿ ಆದುದು 'ಅರಿಸಮಾಸ'ವಂತೆ. ಕನ್ನಡ ಸಂಸ್ಕೃತಗಳು ಶತ್ರು(ಅರಿ)ಗಳು! ಆದರೆ ಶಬ್ದಬ್ರಹ್ಮರಾದ ಕವಿಗಳು, ತಮ್ಮ ಭಾವನೆಯನ್ನು ಸಮರ್ಪಕವಾಗಿ ಹೇಳಲು ತವಕಿಸುವ ಸಾಮಾನ್ಯ ಜನರು ಕೂಡ ಇಂಥ ಶಾಸ್ತ್ರಜ್ಞರ ಅಪ್ಪಣೆಯನ್ನೆಲ್ಲಿ ಪಾಲಿಸುತ್ತಾರೆ! ವ್ಯಾಕರಣ ನಿಯಮವನ್ನು ಮೀರುವುದರಿಂದಲೇ ಭಾಷೆಗೆ ಎಷ್ಟೋ ವೇಳೆ ಒಳ್ಳೆಯದಾಗುವುದು!
ಅಂದ ಹಾಗೆ, ಇನ್ನೊಂದು ಮಾತು. ರೈತನನ್ನು ಬೇಂದ್ರೆಯವರು 'ಭೂಮಿತಾಯಿಯ ಚೊಚ್ಚಿಲಮಗ' ಎಂದು ಕರೆಯುತ್ತಾರೆ. ಯಾಕಂದರೆ ಅವನು ತಾನೇ ಸದಾ ಭೂಮಿಯನ್ನು ಅವಲಂಬಿಸಿರುವುದು. ಆದರೂ ಅವನಿಗೆ ಕಡುಕಷ್ಟ ತಪ್ಪದಲ್ಲ ಎಂಬ ವಿಷಾದ ಬೇಂದ್ರೆಯವರ ಅದೇ ಹೆಸರಿನ ಕವಿತೆಯೊಂದರಲ್ಲಿ ಸೂಚಿತವಾಗಿದೆ. ಒಬ್ಬನನ್ನೇ ಕುರಿತು ಇಬ್ಬರು ಕವಿಗಳು ಬೇರೆ ಬೇರೆ ಶಬ್ದಗಳನ್ನು ರೂಪಿಸಿರುವುದರ ಹಿಂದೆ ಆಯಾ ಕವಿಗಳ ಮನೋಭಾವವವೇ ಅಡಕವಾಗಿದೆ.
*****
ಪಂಚಮಹಾಪಾತಕ: ಇದೊಂದು ಸಂಸ್ಕೃತ ಸಮಾಸಪದ, ಐದು ದೊಡ್ಡ ಪಾತಕಗಳನ್ನು ಹೇಳುತ್ತದೆ. ಅತಿಮಾನುಷವೆಂದು ನಂಬಲಾದ ಶಕ್ತಿಯನ್ನು ಕೆರಳಿಸುವ ಭಾವನೆಯನ್ನೋ ಕಾರ್ಯವನ್ನೋ ಸ್ಥೂಲವಾಗಿ ಪಾತಕ ಎಂದು ಹೇಳಬಹುದು. ಪಾತಕದ ಕಲ್ಪನೆ ವೇದಗಳಷ್ಟೇ ಹಳೆಯದು. ಮನುಷ್ಯ ಪಾತಕವನ್ನು ಮಾಡಲು ಕಾರಣ ವಿಧಿ, ಮಾದಕ ದ್ರವ್ಯಗಳು, ಕೋಪ, ದ್ಯೂತ, ಅಜಾಗರೂಕತೆ ಅಥವಾ ಸ್ವಪ್ನಸ್ಥಿತಿ ಎಂದು ಋಗ್ವೇದದಲ್ಲಿ ಹೇಳಿದೆ. ನಾನಾ ಬಗೆಯ ಪಾತಕಗಳಿದ್ದರೂ ಛಾಂದೋಗ್ಯ ಉಪನಿಷತ್ತಿನ ಕಾಲದ ಹೊತ್ತಿಗೆ ಅತ್ಯಂತ ದೊಡ್ಡ ಪಾತಕಗಳೆಂದು ಭಾವಿಸಲಾದ ಬ್ರಹ್ಮಹತ್ಯೆ, ಸುರಾಪಾನ, ಬ್ರಾಹ್ಮಣಸುವರ್ಣಾಪಹರಣ, ಗುರುತಲ್ಪಗಮನ ಮತ್ತು ಈ ನಾಲ್ಕು ಪಾತಕಗಳಲ್ಲಿ ಒಂದನ್ನಾದರೂ ಮಾಡಿದವನ ಸಹವಾಸ - ಇವುಗಳು 'ಪಂಚಮಹಾಪಾತಕ' ಎಂದು ಪರಿಗಣಿತವಾಗಿದ್ದವು.
ಮುಂದೆ 'ಪಂಚಮಹಾಪಾತಕ' ಎಂಬುದು ನುಡಿಗಟ್ಟಿನಂತಾಗಿ ವಿವಿಧ ಧರ್ಮಗಳವರು ವಿವಿಧ ಪಟ್ಟಿಗಳನ್ನು ಪರಿಗಣಿಸಿದರು. ಜೈನ ದೃಷ್ಟಿಕೋನದ ಗ್ರಂಥವಾದ 'ವಡ್ಡಾರಾಧನೆ'ಯಲ್ಲಿ "ಬಾಲವಧೆ ಸ್ತ್ರೀವಧೆ ಗೋವಧೆ ಬ್ರಾಹ್ಮಣವಧೆ ಋಷಿವಧೆಯೆಂದೀ ಪಂಚಮಹಾಪಾತಕಂಗಳಂ" ಎಂಬ ವಿವರ ಸಿಕ್ಕುತ್ತದೆ. ಬೌದ್ಧರಲ್ಲಿ ಪಂಚಾಂತರಾಯಗಳಾದ ಮಾತೃವಧೆ, ಪಿತೃವಧೆ, ಅರ್ಹತ್‍ವಧೆ, ಬೌದ್ಧನೊಬ್ಬನ ರಕ್ತಪಾತ ಮತ್ತು ಪುರೋಹಿತವರ್ಗದಲ್ಲಿ ಭೇದವುಂಟುಮಾಡುವುದನ್ನೇ ಪಂಚಪಾತಕಗಳೆಂದು ಪರಿಗಣಿಸಲಾಗುತ್ತಿತ್ತು. ವಚನಕಾರರು ವಿವಿಧ ರೀತಿಗಳಲ್ಲಿ 'ಪಂಚಮಹಾಪಾಕ'ಗಳನ್ನು ಅರ್ಥೈಸಿದರು. ಉದಾಹರಣೆಗೆ ಜೇಡರ ದಾಸಿಮಯ್ಯನು "ದರುಶನ ತಪ್ಪುಕ ಪ್ರಥಮ ಪಾತಕ, ಸ್ಪರ್ಶನ ತಪ್ಪುಕ ದ್ವಿತೀಯ ಪಾತಕ, ಗುರು ತಪ್ಪುಕ ತೃತೀಯ ಪಾತಕ, ಪರದಾರ ಚತುರ್ಥ ಪಾತಕ, ಮಾಂಸಾಹಾರ ಪಂಚಮ ಮಹಾಪಾತಕ" ಎಂದರೆ; ಚೆನ್ನಬಸವಣ್ಣನು "ಭವಿಪಾಕವೆಂಬುದು ಪ್ರಥಮ ಪಾತಕ, ಪ್ರತಿಮಾದಿಗಳಿಗೆರಗಿದಡೆ ಎರಡನೆಯ ಪಾತಕ, ಗುರುವಾಕ್ಯವ ಮೀರಿದಡೆ ಮೂರನೆಯ ಪಾತಕ, ಪರಧನಪರಸ್ತ್ರೀಗಳುಪಿದಡೆ ನಾಲ್ಕನೆಯ ಪಾತಕ, ಶಿವನಿಂದೆಯ ಕೇಳಿದಡೆ ಐದನೆಯ ಪಾತಕ" ಎನ್ನುತ್ತಾನೆ. ಮತ್ತೂ ಕೆಲವು ವಚನಕಾರರ ವಿಭಿನ್ನ ಹೇಳಿಕೆಗಳಿವೆ. ಈಗಲೂ ಈ ನುಡಿಗಟ್ಟು ಬಳಕೆಯಲ್ಲಿದೆ.
=====
ಪಂಚಮಹಾವಾದ್ಯ: ದೇವಸ್ಥಾನಗಳಲ್ಲಿಯೂ ಮಹಾಗಣ್ಯರ ಸ್ವಾಗತಕ್ಕೂ ಬಳಸುತ್ತಿದ್ದ ಐದು ವಾದ್ಯಗಳನ್ನು 'ಪಂಚಮಹಾವಾದ್ಯ' ಅಥವಾ 'ಪಂಚವಾದ್ಯ'ಗಳೆಂದು ಕರೆಯುವುದು ರೂಢಿ. ಇದನ್ನು ಕಪಂಚಮಹಾಶಬ್ದಕಿ ಎಂಬ ಮಾತಿನಿಂದಲೂ ಕರೆಯಲಾಗುತ್ತಿತ್ತು. ಕನ್ನಡ ನಾಡಿನ ಪ್ರಾಚೀನ ಶಾಸನಗಳಲ್ಲಿ ರಾಜರುಗಳನ್ನು ಹಲವು ವೇಳೆ ಕಸಮಧಿಗತಪಂಚಮಹಾಶಬ್ದಕಿ ಎಂಬ ವಿಶೇಷಣದಿಂದ ವರ್ಣಿಸಲಾಗಿದೆ. ಖಸ್ವಸ್ತಿ ಸಮಧಿಗತ ಪಞ್ಚಮಹಾಶಬ್ದ ಮಹಾಸಾಮನ್ತಾಧಿಪತಿ ಪ್ರಭೂತ ವರಿಷ ಶ್ರೀಮಾನ್ಗೋಯಿನ್ದರಸರ್ಖ ಎಂಬ ಒಕ್ಕಣೆ ಎಂಟನೆಯ ಶತಮಾನದ ಶಾಸನದಲ್ಲಿದೆ. ಖಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತರೆನಲ್ ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್ಖ ಎಂಬುದು 'ಪಂಪಭಾರತ'ದಲ್ಲಿ ಅರಿಕೇಸರಿಯನ್ನು ವರ್ಣಿಸುವ ಪದ್ಯ. ದೊಡ್ಡವರನ್ನು ಸನ್ಮಾನ ಮಾಡುವ ರೀತಿಯೂ ಇದೇ ಅಗಿದ್ದಿತೆಂದು ಕಾಣುತ್ತದೆ: ಏಕೆಂದರೆ ಬಸವಣ್ಣನ ವಚನವೊಂದು ಖಹೊಲೆಯ ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ?ಖ ಎಂಬ ಮಾತಿದೆ.
'ಪಂಚಮಹಾವಾದ್ಯ'ಗಳೆಂದು ಕರೆದರೂ ಎಲ್ಲ ಕಾಲಗಳಲ್ಲಿಯೂ ಮತ್ತು ಸ್ಥಳಗಳಲ್ಲಿಯೂ ಐದು ವಾದ್ಯಗಳ ಪಟ್ಟಿ ಒಂದೇ ಆಗಿರದೆ, ವ್ಯತ್ಯಾಸಗೊಂಡಿರುವುದನ್ನು ಗುರುತಿಸಬಹುದು. ನಂಜನಗೂಡಿನ ಶಾಸನವೊಂದು ತಿವಿರಿ, ದಟ್ಟ, ಖಂಡಿಕ್ಕೆ, ಜಯಗಂಟೆ ಮತ್ತು ಕಾಳೆಗಳನ್ನು 'ಪಂಚಮಹಾವಾದ್ಯ'ಗಳೆಂದು ಹೆಸರಿಸಲಾಗಿದೆ. 'ವಿವೇಕ ಚಿಂತಾಮಣಿ'ಯು ಶೃಂಗ, ತಮ್ಮಟ, ಶಂಖ, ಭೇರಿ, ಜಯಗಂಟೆಗಳನ್ನು 'ಪಂಚಮಹಾವಾದ್ಯ'ಗಳೆಂದು ಹೇಳಿದೆ. ಕೆಲವು ವೇಳೆ ನಾಲ್ಕು ವಾದ್ಯಗಳೊಡನೆ ಮನುಷ್ಯಧ್ವನಿಯೂ ಸೇರುತ್ತಿತ್ತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಕೇವಲ ಸಾರ್ವಜನಿಕ ಸನ್ಮಾನಗಳಲ್ಲಿ ಮಾತ್ರವಲ್ಲದೆ ಬೇರೆ ಸಂದರ್ಭದಲ್ಲಿಯೂ ಬಳಸುತ್ತಿದ್ದ ಐದು ವಾದ್ಯಗಳ ಸಮೂಹವನ್ನು ಈ ಮಾತಿನಿಂದ ಕರೆಯುತ್ತಿದ್ದರು: 'ಆದಿಪುರಾಣ'ದಲ್ಲಿ ಪಂಪನು ಭರತ ಚಕ್ರವರ್ತಿಯು ಬೆಳಿಗ್ಗೆ ಏಳುವ ಹೊತ್ತಿಗೆ "ಪಂಚಮಹಾವಿಜೃಂಭಿತಧ್ವನಿ ಲಸದ್ಗಾಂಧಾರನಾದಂ" ಎಂದು ವರ್ಣಿಸುವುದರಿಂದ ಅರಮನೆಯಲ್ಲಿ ಬೆಳಿಗ್ಗೆ ಈ ವಾದ್ಯಗಳ ಧ್ವನಿಯನ್ನು ಮಾಡಲಾಗುತ್ತಿತ್ತೆಂದು ಭಾವಿಸಬಹುದು. ಇವುಗಳ ಜೊತೆಗೆ ಇತರ ವಾದ್ಯಗಳೂ ಇರುತ್ತಿದ್ದವು: "ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ಅರಮನೆಯಂ ಪೊಕ್ಕು" ಎಂಬ ವರ್ಣನೆ 'ವಡ್ಡಾರಾಧನೆ'ಯಲ್ಲಿದೆ. ಈ ವಾದ್ಯಗಳ ಬಜಾವಣೆ ಮೊದಲು ದೇವಸ್ಥಾನಗಳಲ್ಲಿ ವಾಡಿಕೆಯಲ್ಲ್ಲಿದ್ದು ಆನಂತರ ರಾಜಮರ್ಯಾದೆಗೆ ವಿಸ್ತಾರಗೊಂಡಿರಬೇಕು.
======
ಪಂಚಾಂಗ: ಇದೊಂದು ಸಂಸ್ಕೃತ ಪದ; ಪಂಚ+ಅಂಗ=ಐದು ಭಾಗ ಎಂಬ ಅರ್ಥವುಳ್ಳದ್ದು. ಸಾಮಾನ್ಯವಾಗಿ ಇದು ದಿನದ ಐದು ಅಂಶಗಳನ್ನು ಸೂಚಿಸುವಂಥದು. ಅವುಗಳೆಂದರೆ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ. ಹೀಗಾಗಿ ವರ್ಷದ ಎಲ್ಲ ದಿನಗಳ ಈ ಐದರ ವಿವರಣೆಗಳನ್ನು ನೀಡುವ ಪುಸ್ತಕವನ್ನೂ ಪಂಚಾಂಗ ಎಂದೇ ಕರೆಯುತ್ತಾರೆ. ದಿನದ ಈ ಅಂಶಗಳಲ್ಲಿ ಯಾವುದೇ ದೋಷವಿಲ್ಲದಿರುವುದನ್ನು ಪಂಚಾಂಗಶುದ್ಧಿ ಎನ್ನುತ್ತಾರೆ. ಹೊಸವರ್ಷದ ಆರಂಭದಲ್ಲಿ ಮುಂಬರುವ ವರ್ಷದ ಶುಭಾಶುಭ ಫಲಗಳನ್ನು ಹೇಳುವುದು ಮತ್ತು ಕೇಳವುದು ಪಂಚಾಂಗಶ್ರವಣ ಎನಿಸಿಕೊಳ್ಳುತ್ತದೆ. ಈ ಫಲಗಳೇ ಪಂಚಾಂಗಫಲ. ಇದನ್ನು ವಚನಕಾರರು ವಿಡಂಬಿಸುತ್ತಾರೆ. 'ಪಂಚಾಂಗಬಿಚ್ಚು' ಎಂಬ ಈಗಿನ ಮಾತೂ ಬುರುಡೆ ಹೇಳು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
ಪಂಚಾಂಗವೆಂಬ ಶಬ್ದವು (ಆಯುರ್ವೇದ) ಔಷಧದ ತಯಾರಿಕೆಯಲ್ಲಿ ಬಳಸುವ ಸಸ್ಯದ ಐದು ಭಾಗಗಳನ್ನು ಸೂಚಿಸುತ್ತದೆ: ತೊಗಟೆ, ಎಲೆ, ಹೂವು, ಬೇರು ಮತ್ತು ಹಣ್ಣು. ದೋಷರಹಿತವಾದ ಈ ಐದು ಅಂಶಗಳನ್ನು ನೋಡುವುದನ್ನು ಶಾಂತಿನಾಥನ 'ಸುಕುಮಾರಚರಿತೆ'ಯು 'ಪಂಚಾಂಗಶುದ್ಧಿ' ಎನ್ನುತ್ತದೆ ("ವೈದ್ಯನಂತೆ ಪಂಚಾಂಗಶುದ್ಧಿಯಂ ನೋಡಿ").
ರಾಜನೀತಿಯ ಐದು ಅಂಶಗಳನ್ನೊಳಗೊಂಡ ಸಮಾಲೋಚನೆಯನ್ನು 'ಪಂಚಾಂಗಮಂತ್ರ' ಎಂದು ಕೆಲವು ಕಡೆಗಳಲ್ಲಿ ಹೇಳಲಾಗಿದೆ: "ವಿಭವಮಂ ಪಂಚಾಂಗಮಂತ್ರಂ ಚತುರ್ಬಲಮಂ ಪ್ರಾಭವಂ ಎಯ್ದೆ ಮಾಡೆ" ಎಂಬುದು ಪೊನ್ನನ 'ಶಾಂತಿಪುರಾಣ'ದಲ್ಲಿ ಬರುವ ಮಾತು. ಕರ್ಮಾರಂಭೋಪಾಯ, ಪುರುಷದ್ರವ್ಯಸಂಪತ್ತು, ದೇಶಕಾಲವಿಭಾಗ, ವಿನಿಪಾತಪ್ರತೀಕಾರ ಮತ್ತು ಕಾರ್ಯಸಿದ್ಧಿ - ಎಂಬಿವು ರಾಜನೀತಿಯ ಐದು ಅಂಶಗಳು.
ಷಡಕ್ಷರದೇವನ 'ರಾಜಶೇಖರವಿಳಾಸ' ಕಾವ್ಯದಲ್ಲಿ ಐದು ಅಕ್ಷರಗಳ ಶ್ರೇಷ್ಠ ಮಂತ್ರ ಎಂಬರ್ಥದಲ್ಲಿ ('ನಮಃಶಿವಾಯ' ಎಂಬ ಐದಕ್ಷರದ ಮಂತ್ರ) 'ಪಂಚಾಂಗಸನ್ಮಂತ್ರ' ಎಂಬ ಮಾತನ್ನು ಬಳಸಿದಂತಿದೆ: "ಅರಿವರ್ಗಧ್ವಂಸಮಂ ಪೂಣ್ದೆಸಗಿ ಕಳೆದು ತಳೆದು ಪಂಚಾಂಗ ಸನ್ಮಂತ್ರಮಂ .. .. ತಾಳ್ದು".
=====
ಪಡು: ಇದೊಂದು ಕ್ರಿಯಾಪದ, ದ್ರಾವಿಡ ಮೂಲದ್ದು. ತಮಿಳಿನಲ್ಲಿ ಪಟು, ಎಂದೂ, ತುಳುವಿನಲ್ಲಿ ಪಡ ಎಂದೂ, ಮಲಯಾಳಂನಲ್ಲಿ ಪಟುಕ ಎಂದೂ, ತೆಲುಗಿನಲ್ಲಿಯೂ ಪಡು ಎಂದು ಬಳಕೆಯಲ್ಲಿದೆ. ಇದಕ್ಕೆ ಅನೇಕ ಅರ್ಥಗಳಿವೆ. ಕ್ರಿಯಾಪದವಾಗಿ ಈ ಶಬ್ದಕ್ಕೆ ಕೇಶಿರಾಜನು ಎರಡು ಅರ್ಥಗಳನ್ನು ನೀಡುತ್ತಾನೆ: ಮಲಗು (ನಿದ್ರಿಸು) ಹಾಗೂ ಸಾಯು ಎಂದು ("ಪಡು-ಮರಣೇ, ಶಯನೇ ಚ"). ಅನುಭವಿಸು ಎಂಬ ಅರ್ಥವು ಆಯಾಸಪಡು, ಕಷ್ಟಪಡು. ಸಂತೋಷಪಡು ಮುಂತಾದ ಕ್ರಿಯಾಸಮಾಸಗಳಲ್ಲಿ ಕಾಣಿಸುತ್ತದೆ. ಬೀಳು ಎಂಬರ್ಥದಲ್ಲಿ ಈ ಪದವು 'ಪಂಪಭಾರತ'ದಲ್ಲಿದೆ ("ಧರ್ಮನಂದನನ ಕಾಲ ಮೇಲೆ ಕವಿದು ಪಟ್ಟು"). ಮಲಗು ಎಂಬುದು ರೂಪಕವಾಗಿ ಕೂಡು ಅಥವಾ (ಲೈಂಗಿಕಕ್ರಿಯೆಯಲ್ಲಿ) ಸೇರು ಎಂಬ ಅರ್ಥವನ್ನೂ ಪಡೆಯುತ್ತದೆ. ಈ ಅರ್ಥದಲ್ಲಿ ಬ್ರಹ್ಮಶಿವ ತನ್ನ 'ಸಮಯಪರೀಕ್ಷೆ'ಯಲ್ಲಿ "ಪರಲಲನೆಯೊಳಂ ಪಡುಗೆ ಶಿವಭಕ್ತನಾಗಿರ್ದೊಡೆ ಪೊರ್ದವು ಪಾಪಮೆಂಬರ್ ಆಱಡಿಕಾರರ್" ಎನ್ನುತ್ತಾನೆ. (ಪಡುಗೆ=ನೆರೆಯಲಿ). ಪಡು ಎಂಬುದಕ್ಕಿರುವ ಮಲಗು ಎಂಬ ಅರ್ಥವು ರೂಪಕವಾಗಿ ಸೂರ್ಯನು ಮುಳುಗುವುದನ್ನು (ಸೂರ್ಯ ಮಲಗುವುದನ್ನು) ಸೂಚಿಸುತ್ತದೆ. "ನೇಸರ್ ಪಟ್ಟೊಡೆ ಕಿತ್ತಯ್ಯಂಗೆ ಆಸನ್ನಕಾಲಮಾದುದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದೆ. ಈ ಅರ್ಥಗಳೆಲ್ಲವೂ ತೆಲುಗು ತಮಿಳುಗಳಲ್ಲಿಯೂ ಇವೆ.
ಪಡು ಎಂಬುದು ವಿಶೇಷಣವಾಗಿಯೂ ಬಳಕೆಯಲ್ಲಿದೆ: ಪಡುಕೋಣೆ ಎಂದರೆ ಮಲಗುವ ಮನೆ (ಈ ಹೆಸರಿನ ಊರೊಂದಿದೆ); ಈ ಅರ್ಥದಲ್ಲಿ ಪಡುವೋವರಿ ಎಂಬ ಶಬ್ದವು 'ಸುಕುಮಾರಚರಿತೆ'ಯಲ್ಲದೆ ("ಆ ಕನ್ಯೆ ಧನದೇವನ ಪಡುವೋವರಿಯ ಮನೆಯನೆಯ್ದಿ"). 'ಪಡುನೇಸರ್' ಎಂದರೆ ಅಸ್ತಮಿಸುತ್ತಿರುವ ಸೂರ್ಯ; ಸೂರ್ಯ ಮುಳುಗುವ ದಿಕ್ಕು ಎಂಬರ್ಥದಲ್ಲಿ ಪಡುವು ಎಂಬ ಶಬ್ದ 'ಪಂಪಭಾರತ'ದಲ್ಲಿದೆ ("ನರನ ರಥಮಂ ಪಡುವು ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚು"). ಪಡುವಣ ಎಂಬು ಇದರ ಇನ್ನೊಂದು ರೂಪ. ಸೂರ್ಯ ಮುಳುಗುವಾಗಿನ ಕೆಂಪು ಬಣ್ಣವನ್ನು ಕುವೆಂಪು ಪಡುಗೆಂಪು ಎನ್ನುತ್ತಾರೆ; 'ಶ್ರೀ ರಾಮಾಯಣ ದರ್ಶನಂ'ನಲ್ಲಿ "ರವಿ ಮುಳುಗಿ, ಮೂಡಣ ದೆಸೆಗೆ ಪಡುಗೆಂಪು ಪಸರಿಸುತ್ತಿರೆ" ಎಂಬ ಸಾಲಿದೆ.
=====
ಪಡುವಲಕಾಯಿ: ಈ ಶಬ್ದದ ಮೊದಲ ಭಾಗ ಪಡುವಲ ಎಂಬುದನ್ನು ನೋಡಿದರೆ ಇದು ಪಡುವಲ ಅಥವಾ ಪಶ್ಚಿಮ ದೇಶದಿಂದ ಬಂದಿರುವ ಪರಂಗಿ ಅಥವಾ ಟೊಮೆಟೋಗಳಂತಹ ತರಕಾರಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಸುವಂತಿದೆ. ಆದರೆ ಹಾಗೇನಿಲ್ಲ; ಇದು ದೇಶೀಯ ಬಳ್ಳಿ ಮತ್ತು ಅದರ ಕಾಯಿಯನ್ನು ಸೂಚಿಸುತ್ತದೆ. ಇದು ಸಂಸ್ಕೃತದ ಪಟೋಲ ಎಂಬ ಶಬ್ದದ ತದ್ಭವರೂಪ. ಈ ಕಾಯಿಯಲ್ಲಿ ಎರಡು ಬಗೆ: ಕಹಿ ಮತ್ತು ಕಹಿಯಲ್ಲದ್ದು. ಕಹಿಯಾದ ಪ್ರಭೇದಕ್ಕೆ 'ಪಟೋಲ' (ಈ ಶಬ್ದ ಪುಲ್ಲಿಂಗ ಶಬ್ದ) ಎಂಬ ಹೆಸರಿದ್ದರೆ ಕಹಿಯಲ್ಲದ್ದಕ್ಕೆ 'ಪಟೋಲಿಕಾ' (ಇದು ಸ್ತ್ರೀಲಿಂಗ ಶಬ್ದ) ಎಂಬ ಹೆಸರಿದೆ. ಅದೇ ಕನ್ನಡದಲ್ಲಿ 'ಪಟಲ' ಎಂದಾಗಿ 'ಪಡಲ' ಎಂದೂ 'ಪಡಳ' ಎಂದೂ ಆಗಿದೆ. ಹಳಗನ್ನಡದಲ್ಲಿನ ಅನೇಕ ಶಬ್ದಗಳ 'ಪ'ಕಾರವು ನಡುಗನ್ನಡದಲ್ಲಿ 'ಹ'ಕಾರವಾಗುವಂತೆ ಪಡಲ ಎಂಬುದು 'ಹಡಲ' ಎಂಬ ರೂಪವನ್ನೂ ಪಡೆಯುತ್ತದೆ; ಈ ರೂಪವು ಅನೇಕ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿದೆ.  ಕ್ರಿಶ 1025 ರಲ್ಲಿ ರಚಿತವಾದ ಚಾವುಂಡರಾಯನ 'ಲೋಕೋಪಕಾರ' ಎಂಬ ಕೃತಿಯಲ್ಲಿ ಪಡಲದ ಕಾಯಿ ಉಲ್ಲೇಖಗೊಂಡಿದೆ; ಪಡಲದ ಕಹಿಯನ್ನು ಹೋಗಲಾಡಿಸುವ ಪರಿಯನ್ನು ಅಲ್ಲಿ ತಿಳಿಸಲಾಗಿದೆ. ಅಂದರೆ ಈ ತರಕಾರಿಯ ಉಪಯೋಗ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟೋಲ ಎಂಬ ಶಬ್ದವು ಪ್ರಾಕೃತದಲ್ಲಿ ಪಡೋಲ ಎಂದಾಗುತ್ತದೆ, ತಮಿಳಿನಲ್ಲಿ ಪುಟಲ್ ಎಂದೂ, ಪುಟಲೈ ಎಂದೂ  ತೆಲುಗಿನಲ್ಲಿ ಪೊಟ್ಲ ಎಂದೂ ಪಟಲ ಎಂದೂ, ತುಳುವಿನಲ್ಲಿ ಪಟ್ಲ ಎಂದೂ, ಮಲಯಾಳಂನಲ್ಲಿ ಪುಟ್ಟಲ್ ಅಥವಾ ಪಿಟ್ಟಲ್ ಅಥವಾ ಪುಟೋಲ್ ಎಂದೂ ಆಗುತ್ತದೆ. ಪಡುವಲ ಕಾಯಿ ಬೂದುಬಣ್ಣವಾಗಿರುತ್ತದೆ; ಒಂದು ಪ್ರಭೇದದಲ್ಲಿ ಉದ್ದುದ್ದು ಪಟ್ಟೆಗಳೂ ಇರುತ್ತವೆ. ಪಡುವಲ ಕಾಯಿಯು ಸಣಕಲಾಗಿ ಉದ್ದವಾಗಿದ್ದು ಹಾವಿನ ಆಕಾರವನ್ನು ಹೋಲುವುದರಿಂದ ಇಂಗ್ಲಿಷ್‍ನಲ್ಲಿ ಇದನ್ನು 'ಸ್ನೇಕ್ ಗೌರ್ಡ್' ಎಂದೇ ಕರೆಯುತ್ತಾರೆ. ಆದರೆ ಈಚೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದರ ಆಕಾರವನ್ನು ಪರಿಷ್ಕರಿಸಿ ಗಿಡ್ಡದಾಗಿ ಮಾಡಲಾಗಿದೆ.
======
ಪದ1:  ವೇದಮಂತ್ರಗಳನ್ನು ಉಚ್ಚರಿಸುವ ಒಂದು ಬಗೆಯನ್ನು ಪದ ಎನ್ನುತ್ತಾರೆ. ವೇದಮಂತ್ರಗಳನ್ನು ಬಿಡಿಸಿ ಹೇಳುವ ಗ್ರಂಥವನ್ನು ಪದಪಾಠ ಎನ್ನುತ್ತಾರೆ. ಪದ ಎಂಬುದು ಶಬ್ದ ಎಂಬುದಕ್ಕೆ ಸಂವಾದಿಯಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹಾಗೆಯೇ 'ಪದಕ್ರಮಕ' ಎಂದರೆ ವೇದದ ಪದ ಮತ್ತು ಕ್ರಮಪಾಠಗಳನ್ನು ಅಧ್ಯಯನ ಮಾಡುವವನು ಹಾಗೂ ತಿಳಿದಿರುವವನು ಎಂದರ್ಥ. 'ಪದಕ' ಎಂದರೆ ವೇದಪಾಠವನ್ನು ಅಧ್ಯಯನ ಮಾಡುವವನು ಎಂದು. ವ್ಯಾಕರಣದ ಪ್ರಕಾರ ಕಪ್ರಯೋಗಕ್ಕೆ ಅರ್ಹವಾದ ಅರ್ಥವತ್ತಾದ ವರ್ಣಗಳುಕಿ ಪದ ಎನ್ನಿಸಿಕೊಳ್ಳುತ್ತದೆ; ಆದರೆ ವ್ಯಾಕರಣದಲ್ಲಿ "ಪ್ರಕೃತಿ ಪ್ರತ್ಯಯಂಗಳೆರಡುಂ ಕೂಡೆ ಪದಮಕ್ಕುಂ" ಎಂದು ಕೇಶಿರಾಜನೆಂಬ ಹದಿಮೂರನೆಯ ಶತಮಾನದ ವೈಯಾಕರಣಿ ಹೇಳುತ್ತಾನೆ. "ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ" ಎಂದು ಕುಮಾರವ್ಯಾಸ ಹೇಳಿಕೊಳ್ಳುವ ಮಾತು ಕಾವ್ಯವನ್ನು ತಾನು ಎಲ್ಲಿಯೂ ಅಳಿಸದೆ ಸರಾಗವಾಗಿ ಬರೆದುಕೊಂಡು ಹೋಗುತ್ತೇನೆಂದು ಹೆಮ್ಮೆಪಡುವಾಗ ಹೇಳುವಾಗಿನದು. ಹಳಗನ್ನಡ ಕಾವ್ಯಗಳಲ್ಲಿ, ವಿಶೇಷವಾಗಿ ಚಂಪೂ ಕಾವ್ಯಗಳ ವೃತ್ತಗಳಲ್ಲಿ ಅನೇಕ ಶಬ್ದಗಳು ಕೂಡಿ ದೀರ್ಘ ಸಮಾಸಗಳಾಗಿರುವುದುಂಟು. ಅಂಥದರ ಅರ್ಥ ಹೇಳಲು ಅಲ್ಲಿರುವ ವಿವಿಧ ಪದಗಳನ್ನು ಬಿಡಿಸಿ ಹೇಳುವ ರೂಢಿಯನ್ನು 'ಪದವಿಭಾಗ' ಅಥವಾ 'ಪದಚ್ಛೇದ' ಎನ್ನುತ್ತಾರೆ. 'ಪದಸಂಚಯ' ಎಂದರೆ ಶಬ್ದಗಳ ಸಮೂಹ; "ಕೆಟ್ಟುದು ಈಗಡೀಗಡಿನ ಕವಿವ್ರಜಕ್ಕೆ ಪದಸಂಚಯಂ" ಎಂದು ಪೊನ್ನನೆಂಬ ಹತ್ತನೆಯ ಶತಮಾನದಕವಿ ತನ್ನ 'ಶಾಂತಿಪುರಾಣ'ದಲ್ಲಿ ಹೇಳುತ್ತಾನೆ! ಈ ಪದಗಳ ಬಗೆಗಿನ ಶಾಸ್ತ್ರವೇ ಪದಾಗಮ; ಅದನ್ನು ತಿಳಿದವನೇ ಪದಾಗಮಜ್ಞ. ಪದಾರ್ಥ ಎಂಬುದು ಈಗ ವಸ್ತು ಎಂಬ ಅರ್ಥವನ್ನು ಪಡೆದಿದ್ದರೂ ಅದರಲ್ಲಿ 'ಪದ+ಅರ್ಥ' ಎಂಬೆರಡು ಶಬ್ದಗಳು ಸೇರಿ ಅಭಿಪ್ರಾಯ ಎಂಬುದನ್ನು ಸೂಚಿಸುತ್ತದೆ. ಪದಗಳಿಗೆ ಅರ್ಥಗಳನ್ನು ಸೂಚಿಸುವ ಗ್ರಂಥವೇ 'ಪದಕೋಶ' ಅಥವಾ ನಿಂಟು. 'ಪದವಿದ್ಯೆ' ಎಂದರೆ ವ್ಯಾಕರಣ.
ಪದ ಎಂಬುದು ಹಾಡು ಎಂಬರ್ಥದಲ್ಲಿಯೂ ಕನ್ನಡದಲ್ಲಿ ಬಳಕೆಯಲ್ಲಿರುವ ಶಬ್ದ. 'ಒಂದು ಪದ ಹೇಳು' ಎಂದರೆ ಒಂದು ಹಾಡು ಹೇಳು ಎಂದರ್ಥ. ಹರಿದಾಸರ ಕೀರ್ತನೆಗಳನ್ನು ದಾಸರ ಪದಗಳು ಎಂದೇ ಕರೆಯುವ ರೂಢಿಯಿದೆ. ಹಾಡುವುದಕ್ಕೆಂದೇ ರಚಿತವಾದ ಕಾವ್ಯವನ್ನು ಹಿಂದೆ 'ಪದಕವಿತೆ' ಎನ್ನುತ್ತಿದ್ದರು. 'ಪದಗಾರ್ತಿ' ಎಂಬುದನ್ನು ಹಾಡು ಹೇಳುವವಳು ಎಂಬರ್ಥದಲ್ಲಿ ಕಾವ್ಯಗಳಲ್ಲಿ ಬಳಸಲಾಗಿದೆ. ಗೀತರಚನೆಯಲ್ಲಿನ ಒಂದು ವಿಶಿಷ್ಟ ಪ್ರಭೇದವನ್ನೂ ಪದ ಎಂದು ಕರೆಯುತ್ತಾರೆ: ಶೃಂಗಾರಪ್ರಧಾನವಾಗಿದ್ದು, ದೇವರ ಲೀಲಾವಿನೋದಗಳನ್ನು ಒಳಗೊಂಡು ಭರತನಾಟ್ಯಕ್ಕೆ ಮೀಸಲಾದ ಸಾಹಿತ್ಯರಚನೆಗಳೇ ಈ ಪದಗಳು, ಜಾವಳಿ ಮುಂತಾದವು.
=====
ಪದ2: ಈ ಶಬ್ದದ ಮತ್ತೊಂದು ನೆಲೆಯ ಅರ್ಥಗಳನ್ನೀಗ ನೋಡೋಣ. ಇದರ ಮೂಲಪದ 'ಪದ್' ಎಂಬುದು, ಅದರರ್ಥ ಪಾದ, ಚರಣ, ಕಾಲು ಎಂದು. ಪದ ಎಂದರೂ ಅದೇ ಅರ್ಥಗಳಿವೆ. ಹಾಗೆಯೇ ಕಾಲಿನ ಹೆಜ್ಜೆ, ಅಡಿ ಎಂಬ ಅರ್ಥಗಳೂ ಇವೆ. ಪಾದ ಎಂಬುದು ಈ ಶಬ್ದದ ಸಮಾನಾರ್ಥಕ ಪದ. ಕಾಲಿಗೆ ಸಂಬಂಧಿಸಿದುದು ಎಂದು ಸೂಚಿಸಲು ಇದನ್ನು ಪೂರ್ವಪದವಾಗುಳ್ಳ ಅನೇಕ ಸಮಾಸಗಳು ರೂಢಿಯಲ್ಲಿವೆ. ಪದಾತಿ ಅಥವಾ ಪದಾಜಿ ಎಂಬುದು ಚತುರಂಗ ಸೈನ್ಯದ ಕಾಲಾಳು ದಳವನ್ನು ಸೂಚಿಸುತ್ತದೆ. ಪದಪದ್ಧತಿ, ಪದನ್ಯಾಸಗಳು ಹೆಜ್ಜೆಯ ಗುರುತನ್ನು ಸೂಚಿಸುತ್ತವೆ. ಪದಕಟಕ ಎಂಬ ಶಬ್ದವನ್ನು ಷಡಕ್ಷರ ಕವಿ ಕಾಲ್ಗಡಗ ಎಂಬರ್ಥದಲ್ಲಿ ಬಳಸಿದ್ದಾನೆ. ಪದಪೀಠ ಎಂಬ ಶಬ್ದವು ಪಾದಗಳನ್ನಿರಿಸಿಕೊಳ್ಳಲು ಬಳಸುತ್ತಿದ್ದ ಪೀಠವನ್ನು ಸೂಚಿಸುತ್ತದೆ. ಪದ್ಯ ಎಂಬ ಶಬ್ದವು ಪದದಿಂದಲೇ ಬಂದುದು. ಇದಕ್ಕೆ ಸಂಸ್ಕೃತ ನಿಘಂಟುಗಳು ಎರಡು ಅರ್ಥಗಳನ್ನು ಹೇಳುತ್ತವೆ. ದೇವರ ಪಾದದಿಂದ ಹುಟ್ಟಿದ ನಾಲ್ಕನೆಯ ವರ್ಣದವನು ಎಂಬುದು ಒಂದು ಅರ್ಥವಾದರೆ ನಾಲ್ಕು ಪಾದಗಳುಳ್ಳ ಶ್ಲೋಕ ಎಂಬುದು ಮತ್ತೊಂದು.
ಪದ ಎಂಬುದು ಛಂದಶ್ಶಾಸ್ತ್ರದಲ್ಲಿಯೂ ಬಳಕೆಯಲ್ಲಿರುವ ಶಬ್ದ. ಛಂದ ಎಂದರೇ ನಡಿಗೆ; ನಡಿಗೆಯಲ್ಲಿ ಪಾದಗಳದ್ದೇ ಮುಖ್ಯ ಪಾತ್ರ. ಛಂದಸ್ಸು ಎಂಬುದು ಪದ್ಯಗಳ ನಡೆಯನ್ನು, ಪದ ಎಂಬುದು ಅಲ್ಲಿನ ಸಾಲನ್ನು ಸೂಚಿಸುತ್ತದೆ. ಸಂಸ್ಕೃತದ ಅನುಷ್ಟುಬ್ ಅಥವಾ ಶ್ಲೋಕದ ನಾಲ್ಕನೇ ಒಂದು ಭಾಗವನ್ನು ಪದ ಎಂದು ಕರೆಯುತ್ತಾರೆ; ಶ್ಲೋಕಕ್ಕೆ ನಾಲ್ಕು ಸಾಲುಗಳು. ಮುಂದೆ ಯಾವುದೇ ಪದ್ಯಜಾತಿಯ ಸಾಲನ್ನು ಪದ ಎಂದೇ ಕರೆಯುವ ರೂಢಿ ಬಂತು. ಸರಸ್ವತಿ ಮತ್ತು ಕಾವ್ಯ ಎರಡನ್ನೂ ಕವಿರಾಜಮಾರ್ಗಕಾರನು "ಚತುರರುಚಿರ ಪದರಚನೆ" ಎಂದು ಶ್ಲೇಷೆಯಿಂದ ವರ್ಣಿಸುತ್ತಾನೆ. ಸರಸ್ವತಿಯ ಕಾಲು ಹಾಗೂ ಕಾವ್ಯದ ಪದ್ಯದ ಸಾಲು ಎರಡೂ ಅರ್ಥಗಳನ್ನಿದು ಒಳಗೊಂಡಿದೆ.
ಪದ ಎಂಬುದು ಸ್ಥಾನವನ್ನೂ ಸೂಚಿಸುತ್ತದೆ. ಪದವಿ ಎಂಬುದು ಇದರ ಇನ್ನೊಂದು ರೂಪ; ಇದಕ್ಕ ಮಾರ್ಗ ಹಾಗೂ ಸ್ಥಾನ ಎಂಬ ಅರ್ಥಗಳಿವೆ. ಪದಚ್ಯುತ ಎಂದರೆ ಸ್ಥಾನವನ್ನು ಕಳೆದುಕೊಂಡವನು ಎಂಬರ್ಥವಿದೆ. ಹಾಗೆಯೇ ಅಧಿಕಾರದಲ್ಲಿ ಮೇಲಿನ ಹಂತಕ್ಕೇರುವುದನ್ನು 'ಪದೋನ್ನತಿ' ಎಂಬ ಶಬ್ದದಿಂದ ಸೂಚಿಸುತ್ತಾರೆ.
=====
ಬಾಳು1: ಹಳಗನ್ನಡದಲ್ಲಿ ಬಾೞ್ ಮತ್ತು ಬಾಳ್ ಎಂಬ ಎರಡು ರೂಪಗಳೂ ಬೇರೆ ಬೇರೆ ಅರ್ಥದಲ್ಲಿದ್ದವು. ಈಗ ಇವೆರಡೂ ಒಂದೇ ರೂಪದಲ್ಲಿವೆ: ಅದೇ ಬಾಳು. ಇದರ ಮೂಲ ಸ್ವರೂಪವಾದ ಬಾೞ್ ಎಂಬುದು ತಮಿಳಿನಲ್ಲಿ ವಾೞ್ ಎಂದೂ ಮಲಯಾಳಂನಲ್ಲಿ ವಾೞು ಎಂದೂ ತುಳುವಿನಲ್ಲಿ ಬಾಳು ಎಂದೂ ದೊರಕುತ್ತದೆ. ಬಾೞ್ ಹಳಗನ್ನಡದಲ್ಲಿ ಕ್ರಿಯಾರ್ಥ ಮತ್ತು ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ಮೊದಲಿಗೆ ಇದರ ಕ್ರಿಯಾರೂಪದನ್ನು ವಿವೇಚಿಸಬಹುದು. ಜೀವಿಸು ಎಂಬುದು ಇದರರ್ಥ. "ಇಂತು ಬಾೞ್ವುದೆ ಚೋದ್ಯಂ" ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ ಇದೆ. "ಜೋಳಕ್ಕೆ ತಪ್ಪಿಯುಂ ಇಂ ಬಾೞ್ವುದೆ, ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತಕೀರ್ತಿಯವೊಲ್ ಈ ಒಡಲ್ ಅಬ್ಬೆ ಪೇೞಿಮೆನಗೇಂ ಕಲ್ಪಾಂತರಸ್ಥಾಯಿಯೇ" ಎಂಬ 'ಪಂಪಭಾರತ'ದ ಪ್ರಖ್ಯಾತ ವಾಕ್ಯದಲ್ಲಿ ಈ ಪದ ಎರಡು ಬಾರಿ ಬಳಕೆಯಾಗಿದೆ. ಕೃದಂತರೂಪದಲ್ಲಿ ಆದಿದೀರ್ಘವು ಹ್ರಸ್ವವಾಗುತ್ತದೆ. "ತನ್ನ ಸಂತತಿಗೆ ಮಕ್ಕಳಿಲ್ಲದಳ್ ಬೞ್ದು ಬಾೞ್ವಳ್" ಎಂಬಲ್ಲಿ 'ಬೞ್ದು' ಎಂದಾಗಿ ಬದುಕಿ ಎಂಬರ್ಥವನ್ನು ಪಡೆಯುತ್ತದೆ. ಬಾೞ್ ಎಂದರೆ ಸುಖವಾಗಿರು ಎಂಬ ಅರ್ಥವೂ ಧ್ವನಿಸುತ್ತದೆ: "ಅರವಿಂದಮಿತ್ರನ ಬಲದಿಂ ಕಾದಿ ಕೊಂದೆವಪ್ಪೊಡೆ ಸುಖದಿಂ ಬಾೞ್ವೆವು" ಎಂಬ 'ಪಂಚತಂತ್ರ'ದ ಮಾತು ಇದಕ್ಕೆ ಉದಾಹರಣೆ. ಹಾಗೆಯೇ ಜೀವನ ಮಾಡು ಎಂಬರ್ಥವೂ ಇದಕ್ಕಿದೆ. "ಜೀವಿತಮಂ ಕೊಂಡು ಬಾೞ್ವನೆಂಬವಂ ಪ್ರಾಣಮಂ ಕುಡಲ್ವೇೞ್ಕುಂ" ಎಂಬ ಅದರದ್ದೇ ಮತ್ತೊಂದು ವಾಕ್ಯದಲ್ಲಿ ಇದು ಸ್ಪಷ್ಟವಾಗುತ್ತದೆ. 'ಶಬ್ದಮಣಿದರ್ಪಣ'ವು "ಬೞ್ದಂ (ಬಾೞ್ದಂ)=ಜೀವಿಸಿದಂ, ಒಕ್ಕಲಾದಂ" ಎಂಬ ಅರ್ಥವನ್ನು ಕೊಡುತ್ತದೆ.
ಮುಂದಿನ ಬರವಣಿಗೆಯಲ್ಲಿ ೞಕಾರ ಳಕಾರವಾಯಿತು; ಜೊತೆಗೆ ವ್ಯಂಜನಾಂತವು ಸ್ವರಾಂತವಾಯಿತು; ಹೀಗಾಗಿ ಇದರ ರೂಪ ಬಾಳು ಎಂದಾಯಿತು. ನಡುಗನ್ನಡ ಕಾವ್ಯಗಳು 'ಬಾಳ್' ಎಂಬ ಶಬ್ದಕ್ಕಿರುವ ಅರ್ಥಗಳಲ್ಲಿ ಈ ರೂಪವನ್ನೇ ಬಳಸುತ್ತವೆ. ಬದುಕಿರುವ ಹೆಣ ಎಂಬರ್ಥದಲ್ಲಿ ಬಸವಣ್ಣ 'ಬಾಳುವೆಣ' ಎಂಬ ರೂಪವನ್ನು ಸೃಷ್ಟಿಸಿಕೊಳ್ಳುತ್ತಾನೆ: "ಬಾಳುವೆಣನ ಬೀಳುವೆಣನ ಸಂಸಾರವೇನವನ?" "ವನಿತೆ ನಿನ್ನಂ ಬಾಳಲೀಯೆವು" ಎಂಬುದು 'ಬಸವಪುರಾಣ'ದ ವಾಕ್ಯ. ಹೊಸಗನ್ನಡದಲ್ಲೂ ಇದೇ ರೂಢಿ ಮುಂದುವರಿಯಿತು. "ತಾಯೆ - ಬಾಳಮ್ಮ, ಬಾಳು" ಎಂಬುದು ಬಿಎಂಶ್ರೀ ಅವರ 'ಕನ್ನಡ ತಾಯ್ ನೋಟ'ದ ಸಾಲು. ಇಲ್ಲಿರುವುದು ಹಾರೈಕೆ. ಹಳಗನ್ನಡದಲ್ಲಿ ಕೃದಂತ ರೂಪದಲ್ಲಿ ಆದಿ ಹ್ರಸ್ವವಾಗದೆ ಹೊಸಗನ್ನಡದಲ್ಲಿ ದೀರ್ಘವೇ ಉಳಿದುಕೊಳ್ಳುತ್ತದೆ: ಅದೇ ಪದ್ಯದ "ಬಾಳ್ವವರು ಮೆರೆವವರು" ಎಂಬ ರೂಪವನ್ನು ನೋಡಬಹುದು.
=====
ಬಾಳು2: ಈಗ ಈ ಶಬ್ದದ ನಾಮರೂಪವನ್ನು ಪರಿಶೀಲಿಸೋಣ. ಕ್ರಿಯಾರ್ಥದಲ್ಲಿ ಯಾವ ಯಾವ ಅರ್ಥಛಾಯೆಗಳನ್ನು ಪಡೆದಿತ್ತೋ ಆ ಎಲ್ಲ ಅರ್ಥಛಾಯೆಗಳ ನಾಮರೂಪವಿದು. ಕರ್ಣಪಾರ್ಯನ 'ನೇಮಿನಾಥಪುರಾಣ'ದ ಮಾತು ಹೀಗಿದೆ: "ಶಂಕಾತಂಕದ ಸುತ್ತಿನೊಳಗುೞಿದುೞಿ ನಮೆವ ಬಾೞುಂ ಬಾೞೆ". "ಮಂತ್ರಪದವಿಯಂ ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ" ಎಂಬುದು 'ವಡ್ಡಾರಾಧನೆ'ಯ ಮಾತು. ಈ ಶಬ್ದದಿಂದ ಹಳಗನ್ನಡದಲ್ಲಿ ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡು ಹೊಸ ಪರಿಕಲ್ಪನೆಗಳನ್ನು ತುಂಬಲಾಯಿತು. ಕನ್ನಡದ ಮೊತ್ತ ಮೊದಲ ಶಾಸನ (ಹಲ್ಮಿಡಿ)ದಲ್ಲಿ "ವಿಜ ಅರಸನ್ಗೆ ಬಾೞ್ಗೞ್ಚು ಪಲ್ಮಿಡಿಉಂ ಮೂವಳ್ಳಿಉಂ ಕೊಟ್ಟಾರ್" ಎಂಬ ವಾಕ್ಯವಿದೆ. ಗೆಲವನ್ನು ತಂದಿತ್ತ ವೀರನಿಗೆ ಸಾರ್ವಜನಿಕವಾಗಿ ಅವನ ಕತ್ತಿಯನ್ನು ತೊಳೆದು ಮಾಡುವ ಗೌರವವೇ 'ಬಾೞ್ಗೞ್ಚು'. ಬದುಕು ಎಂಬರ್ಥದಲ್ಲಿ ಬಾೞ್ಕೆ ಎಂಬ ಪ್ರಯೋಗವೂ ಇದೆ: "ಸತ್ತೊಡೆ ಪುಟ್ಟರೆ ತನಗಿದೇಕೆ ಬಾೞ್ಕೆಯ ಮೋಹಂ" ('ಧರ್ಮಾಮೃತ'). ಇಷ್ಟ ಎಂಬರ್ಥದಲ್ಲಿ ಬಾೞ್ತೆ ಎಂಬ ಪ್ರಯೋಗವೂ ಇದೆ ("ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ" - 'ಪಂಪಭಾರತ').  ಇದನ್ನೇ ಬೆಳೆಸಿ ಉಪಯುಕ್ತವಾಗು ಎಂಬರ್ಥದಲ್ಲಿ 'ಬಾೞ್ತೆಯಾಗು' ಎಂಬ ಪ್ರಯೋಗ 'ಪಂಚತಂತ್ರ'ದಲ್ಲಿದೆ ("ಅರಸುಗೆಯ್ವಾತಂಗೆ ಎಂತಪ್ಪನುಂ ಬಾೞ್ತೆಯಾಗದನಿಲ್ಲಂ"). ಉಂಬಳಿ ಕೊಡುವುದನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ದಲ್ಲಿ 'ಬಾೞ್ಕೆಗೊಡು' ಎಂದಿದೆ ("ಕರುಣಾಗ್ರಾಮಮಂ ಈ ಮಾಮರಕ್ಕೆ ಮಧು ಬಾೞ್ಕೆಗೊಟ್ಟು"). ಜನ್ನನ 'ಅನಂತನಾಥಪುರಾಣ'ದ "ಕೋಳ್ಗುದಿ ಬಾೞ್ಗುದಿಯಾಗಿ" ಬಲ್ಲಿನ ಬಾಳ್ಗುದಿ ಎಂದರೆ ಪ್ರಾಣಸಂಕಟ. ಫಲವತ್ತಾದ ನೆಲ ಎಂಬರ್ಥದಲ್ಲಿ 'ಲೀಲಾವತಿ'ಯು ಬಾೞ್ನೆಲ ಎಂಬ ಶಬ್ದವನ್ನು ಬಳಸುತ್ತದೆ ("ಫಲಭರದಿಂದ ಅಲ್ಲಾಡುವ ಬಳ್ಳಿವನದ ಬಾೞ್ನೆಲದಿಂ ತೆರಳ್ದು"). ಬಾೞ್ದಲೆವಿಡಿ ಎಂದರೆ ಜೀವಂತವಾಗಿ ಸೆರೆಹಿಡಿ ಎಂಬರ್ಥ ("ಪೆಱೆಯಂ ಬೀರದಿನಾ ಗೊರವನೆಯ್ದೆ ಬಾೞ್ದಲೆವಿಡಿದಂ" - 'ಕಬ್ಬಿಗರ ಕಾವ'). ಬಾೞ್ಮೊದಲ್ ಎಂದರೆ ಬಂಡವಾಳ ಎಂಬರ್ಥವು "ಅಂಗಜಂಗೆ ಬಾೞ್ಮೊದಲ್ ಅದು ಚಿತ್ತಜಂಗೆ ಕುಲವಂ" ಎಂಬ 'ಆದಿಪುರಾಣ'ದ ಮಾತಿನಲ್ಲಿದೆ. ಗಟ್ಟಿ ಎಂಬರ್ಥದಲ್ಲಿಯೂ ಈ ಶಬ್ದದ ಬಳಕೆಯಾಗಿದೆ ("ಇದು ಬಾೞ್ಮೊಸರ್ ಇದು ಕಳಲ್ ಇಂತಿದು ರುಚಿವೆತ್ತಿರ್ದ ಪಾನಂ" - 'ಶಾಂತಿಪುರಾಣ').
ಹೊಸಗನ್ನಡದಲ್ಲಿ ಜೀವನ ಎಂಬರ್ಥದಲ್ಲಿ ಬಾಳು, ಬಾಳ್ವೆ ರೂಪಗಳು ವ್ಯಾಪಕವಾಗಿ ಬಳಕೆಯಾಗುತ್ತದೆ. "ಇಂಥ ಬಾಳಿಗೆ ಒಲವೆ, ನಿನ್ನ ಕನಸು?" ಗ ಕೆಎಸ್ನ; "ಬಾಳ್ಗೆ ಬಾಳನು ಬೆಸೆದೆವು" ಗ ಜಿಎಸ್ಎಸ್; "ಮೇಲು ಬಾಳಿನ ಆಸೆ ಹೊತ್ತು ತನ್ನಿರಿ, ಅಣ್ಣ" - ಅಡಿಗ; "ನೀನೆ ಕಣಾ ನಮ್ಮ ಬಾಳ್ವೆ" ಗೋವಿಂದ ಪೈ ಇತ್ಯಾದಿ.
=====
ಪುರಾಣ: ಇದೊಂದು ಸಂಸ್ಕೃತ ಪದ, ಕನ್ನಡದಲ್ಲಿಯೂ ವ್ಯಾಪಕವಾಗಿಯೂ ವಿವಿಧಾರ್ಥಗಳಲ್ಲಿಯೂ ಬಳಕೆಯಲ್ಲಿದೆ. ಪುರಾಣ ಎಂದರೆ ಹಳೆಯದು, ಪುರಾತನವಾದದ್ದು ಎಂಬುದು ಮೂಲಾರ್ಥ. "ಪುರಾಣಮಿತ್ಯೇವ ನ ಸಾಧು ಸರ್ವಂ| ನಚಾಪಿ ಸರ್ವಂ ನವಮಿತ್ಯವದ್ಯಂ" ಎಂಬ ಕಾಳಿದಾಸನ ಮಾತು ಪ್ರಸಿದ್ಧ. ಹಳೆಯದೆಲ್ಲ ಶ್ರೇಷ್ಠವಲ್ಲ, ಹೊಸತೆಲ್ಲ ಕನಿಷ್ಠವಲ್ಲ ಎಂಬುದು ಇದರ ಸ್ಥೂಲಾರ್ಥ. ದೇವರನ್ನು ಪುರಾಣಪುರುಷ ಎಂದು ಕರೆಯುತ್ತಾರೆ (ಈ ಶಬ್ದಕ್ಕೆ ಮುದುಕ ಎಂಬರ್ಥವೂ ಇದೆ). ಕೆಲವು ಹಳಗನ್ನಡ ಕಾವ್ಯಗಳಲ್ಲಿಯೂ ಈ ಪದ ಈ ಅರ್ಥದಲ್ಲಿಯೇ ಬಳಕೆಯಾಗಿದೆ: ಪುರಾಣಕವಿ ಎಂಬ ಮಾತು 'ಕವಿರಾಜಮಾರ್ಗ'ದಲ್ಲಿ ಹಾಗೂ 'ಪಂಪಭಾರತ'ಗಳಲ್ಲಿದ್ದರೆ, ಪುರಾಣಕೂಪ (ಹಳೆಯ ಬಾವಿ) ಎಂಬುದು ದುರ್ಗಸಿಂಹನ 'ಪಂಚತಂತ್ರ'ದಲ್ಲಿ ಬಂದಿದೆ. ವಿಷ್ಣುವು ತಳೆದನೆನ್ನಲಾದ ಕೂರ್ಮಾವತಾರವನ್ನು 'ಲೀಲಾವತಿ' ಎಂಬ ಕಾವ್ಯದಲ್ಲಿ 'ಪುರಾಣಕಮಠ' ಎಂದು ಕರೆಯಲಾಗಿದೆ.
ಆನಂತರ ಹಿಂದೆ ನಡೆದ ಕತೆ, ದೇವತೆಗಳ ಸಂಕಥನ ಎಂಬರ್ಥದಲ್ಲಿ ಪುರಾಣ ಎಂಬ ಶಬ್ದ ಬಳಕೆಯಾಯಿತು. ವ್ಯಾಸನು ಹದಿನೆಂಟು ಪುರಾಣಗಳನ್ನೂ, ಹದಿನೆಂಟು ಉಪಪುರಾಣಗಳನ್ನೂ ಬರೆದನೆಂಬ ಪ್ರತೀತಿಯಿದೆ. ವೈದಿಕ ಪುರಾಣದ ಲಕ್ಷಣಗಳನ್ನು ಹೀಗೆ ಹೇಳುತ್ತಾರೆ: "ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ| ವಂಶಾನುಚರಿತಂ ಚೇತಿ ಲಕ್ಷಣಾನಾಂತು ಪಂಚಕಂ" (ಸೃಷ್ಟಿ, ವಿಕಾಸ, ಋಷಿವಂಶವರ್ಣನೆ, ಮನುಗಳ ಕಾಲಾವಧಿ, ರಾಜವಂಶಾವಳಿಯ ಕಥನ). ಇಂಗ್ಲಿಷ್‍ನಲ್ಲಿ ಇದನ್ನು ಮೈಥಾಲಜಿ ಎನ್ನುತ್ತಾರೆ (ಗ್ರೀಕ್ ಭಾಷೆಯಲ್ಲಿ ಮೈಥಾಸ್ ಎಂದರೆ ಕಟ್ಟು ಕತೆ ಎಂದರ್ಥ). ವಿವಿಧ ಧರ್ಮಗಳಿಗೆ ಸಂಬಂಧಿಸಿದಂತೆ ಪುರಾಣಗಳ ಲಕ್ಷಣಗಳು ಬದಲಾಗುತ್ತವೆ: ಜೈನ ಪುರಾಣ, ವೀರಶೈವಪುರಾಣ ಹೀಗೆ. ಆಯಾ ಮತಧರ್ಮದ ಪುರಾಣಗಳಲ್ಲಿ ಅವಕ್ಕೆ ಸಂಬಂಧಿಸಿದ ಆಚರಣೆಗಳು, ಚಾರಿತ್ರಿಕ ಪುರುಷರ ದೈವೀಕರಣ, ಸಾಮೂಹಿಕ ಸ್ವಭಾವ, ನೀತಿಬೋಧೆಗಳಿರುತ್ತವೆ ಎಂದು ವಿದ್ವಾಂಸರು ವಿಶ್ಲೇಷಿಸುತ್ತಾರೆ. 
ಪುರಾಣ ಹೇಳುವವನು ಪೌರಾಣಿಕ, ಪುರಾಣವನ್ನು ಕೇಳುವುದು ಪುರಾಣಶ್ರವಣ, ಹಿಂದಿನಕಾಲದಿಂದ ನಡೆದ ಬಂದ ರೀತಿಯೇ ಪುರಾಣಮಾರ್ಗ. ಪುರಾಣ ಕತೆಗಳಿಗೆ ಆಧಾರವಿಲ್ಲದ್ದರಿಂದ ಅದಕ್ಕೆ ಸುಳ್ಳು ಎಂಬರ್ಥವೂ, ಕಾಲಹರಣದ ಹರಟೆ ಎಂಬರ್ಥವೂ ಬಂದಿದೆ. ಅಪ್ಪಟ ಸುಳ್ಳಿನ ಕತೆಯನ್ನು 'ಬುರುಡೆ ಪುರಾಣ' ಎಂದೇ ಗೇಲಿಮಾಡುತ್ತಾರೆ.
=====
ಪಂಚಪ್ರಾಣ: ಶರೀರದಲ್ಲಿನ ಐದು ಬಗೆಯ ವಾಯುಗಳಿಗೆ ಒಟ್ಟಾರೆ ಈ ಹೆಸರಿದೆ; ಅವನ್ನು ಪ್ರಾಣವಾಯುಗಳೆಂದು ಕರೆಯುವ ವಾಡಿಕೆಯೂ ಇದೆ. ಅವುಗಳನ್ನು 'ಅಮರಕೋಶ'ವು "ಪ್ರಾಣೋಪಾನಸ್ಸಮಾನಶ್ಚೋದಾನವ್ಯಾನೌ ಚ ವಾಯವಃ" ಎಂದು ಹೆಸರಿಸುತ್ತದೆ (ಪ್ರಾಣ ಉಪಾನ ಸಮಾನ ಉದಾನ ಮತ್ತು ವ್ಯಾನ). ಇವು ಕ್ರಮವಾಗಿ ದೇಹದಲ್ಲಿ ಹೃದಯ, ಗುದಪ್ರದೇಶ, ನಾಭಿ, ಕಂಠ ಹಾಗೂ ಶರೀರದ ಎಲ್ಲ ಭಾಗಗಳಲ್ಲೂ ಇರುವುದೆಂದು ಹೇಳುತ್ತಾರೆ. ಪ್ರಾಣವಾಯುವು ಉಚ್ಛ್ವಾಸ-ನಿಶ್ವಾಸ, ಅಪಾನವಾಯುವು ಮಲಮೂತ್ರವಿಸರ್ಜನೆ, ಸಮಾನವಾಯುವು ಆಹಾರಪಚನ, ಉದಾನವಾಯುವು ಮಾತನಾಡುವಿಕೆ ಅಥವಾ ಉದ್ಗಾರ, ವ್ಯಾನವಾಯುವು ಕಣ್ಣುರೆಪ್ಪೆ ಮಿಟುಕಿಸುವುದು - ಈ ಕಾರ್ಯಗಳನ್ನು ನೆರವೇರಿಸುವುವೆಂದು ಹೇಳುತ್ತಾರೆ. "ಪ್ರಾಣವಾಯುಗಳವರು ಸುಭಟಶ್ರೇಣಿದೇಹಕೆ" ಎಂಬುದು ಕುಮಾರವ್ಯಾಸನ ಪ್ರಯೋಗ. ಕೃಷ್ಣನು "ಮಮ ಪ್ರಾಣಾಹಿ ಪಾಂಡವಾಃ" ಎಂದು ಮಹಾಭಾರತದಲ್ಲಿ ಹೇಳುತ್ತಾನೆ. 'ಪ್ರಾಣಸಂಯಮ' ಎಂದರೆ ಉಸಿರಾಟದ ಹತೋಟಿ. ದೇಹ ಮತ್ತು ಪ್ರಾಣವಾಯುಗಳ ಸಂಬಂಧವೇ ಜೀವನ; ಪ್ರಾಣವಾಯುವನ್ನು ದೇಹದಲ್ಲಿ ತಡೆದು ನಿಲ್ಲಿಸಿದಷ್ಟು ಕಾಲವೂ ಮನುಷ್ಯ ಬದುಕಿರಬಹುದು ಎಂಬ ಕಾರಣದಿಂದ ಅದನ್ನು ಒಂದು ಕ್ರಮದಲ್ಲಿ ವ್ಯವಸ್ಥೆಗೊಳಿಸುವುದನ್ನೇ ಯೋಗಶಾಸ್ತ್ರದಲ್ಲಿ 'ಪ್ರಾಣಾಯಾಮ' ಎನ್ನುತ್ತಾರೆ. "ವಿಪ್ರೋತ್ತಮರನುಮತದಿಂ ಪ್ರಾಣಾಯಾಮಮಂ ಮಂತ್ರಿಸಿ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ ಬರುವ ಮಾತು. ಐದು ಉಪವಾಯುಗಳನ್ನೂ ಹೆಸರಿಸುತ್ತಾರೆ. ಅವೆಂದರೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ಎಂಬವು.
ದ್ವಿಜರು ಊಟಕ್ಕೆ ಕುಳಿತಾಗ ಪ್ರತಿನಿತ್ಯವೂ ಪಂಚಪ್ರಾಣಗಳ ಅಧಿದೇವತೆಗೆ ಪೂಜೆಯನ್ನು ಸಮರ್ಪಿಸುತ್ತಾರೆ. ಇದನ್ನು ಬಸವಣ್ಣನು "ಪ್ರಾಣಲಿಂಗ ಪ್ರಸಾದವ ಮುಂದಿಟ್ಟುಕೊಂಡು ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ ಕರ್ಮಿಗಳನೇನೆಂಬೆ" ಎಂದು ಲೇವಡಿ ಮಾಡುತ್ತಾನೆ. ಬೇಂದ್ರೆಯವರು ತಮ್ಮ 'ನಾನು' ಎಂಬ ಕವನದಲ್ಲಿ ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡತಾಯಿ ಹಾಗೂ ಹಡೆದವ್ವ ಎಂಬ "ಈ ಐದು ಐದೆಯರೆ ಪಂಚಪ್ರಾಣಗಳಾಗಿ ಈ ಜೀವದೇವನಿಹನು" ಎಂದು ಹೇಳಿಕೊಳ್ಳುತ್ತಾರೆ. 'ಪಂಚಪ್ರಾಣ' ಎಂಬುದು ತುಂಬ ಇಷ್ಟವೆಂದು ಹೇಳಲು ಈಗ ಬಳಸುವ ಸಾಮಾನ್ಯ ನುಡಿಗಟ್ಟಾಗಿದೆ.
=====
ಪ್ರಾಣ: ಇದೊಂದು ಸಂಸ್ಕೃತ ಶಬ್ದ. ಇದಕ್ಕೆ ಕನ್ನಡದಲ್ಲಿ ತದ್ಭವವಾಗಿ 'ಹರಣ' ಎಂಬ ರೂಪವಿದೆ; ಆದರೆ ಪ್ರಾಣ ಶಬ್ದವೇ ಹೆಚ್ಚು ಬಳಕೆಯಲ್ಲಿದೆ. ಪ್ರಾಣ ಎಂದರೆ ಉಸಿರು ಎಂದರ್ಥ. ಉಸಿರಾಟ ಜೀವವಿರುವ ಲಕ್ಷಣವಾದದ್ದರಿಂದ ಪ್ರಾಣ ಎಂದರೆ ಜೀವ ಎಂಬ ಅರ್ಥವೂ ಇದೆ. "ನಿನ್ನನಗಲ್ವಗಲ್ಕೆಯುಂ ಪ್ರಾಣದಗಲ್ಕೆಯುಂ ಸಮಂ" ('ಆದಿಪುರಾಣ'). ಹೀಗಾಗಿ ತುಂಬ ಪ್ರೀತಿಪಾತ್ರ ಎಂಬರ್ಥವೂ ಪ್ರಾಪ್ತವಾಗುತ್ತದೆ.  ("ಪ್ರಾಣದಿನಧಿಕ ಎನಗೆ ನೀಂ" 'ಪಾರ್ಶ್ವನಾಥ ಪುರಾಣ'). 'ಅಮರಕೋಶ'ದಲ್ಲಿ ಈ ಶಬ್ದಕ್ಕೆ ಶಕ್ತಿ, ಪರಾಕ್ರಮ ಎಂಬರ್ಥಗಳನ್ನೂ ಹೇಳಿದೆ ("ಶಕ್ತಿಃ ಪರಾಕ್ರಮಪ್ರಾಣೌ"). ಪ್ರಾಣ ಎಂಬುದು ಐದು ಬಗೆಯ ವಾಯುಗಳಲ್ಲಿ ಒಂದು. ಈ ಶಬ್ದಕ್ಕೆ ಬ್ರಹ್ಮ ಎಂಬರ್ಥವೂ ಇದೆ. "ಪ್ರಾಣದೇವರು', 'ಮುಖ್ಯಪ್ರಾಣ', 'ಪ್ರಾಣೇಶ', 'ಪ್ರಾಣನಾಥ', 'ಪ್ರಾಣರಾಯ' ಮುಂತಾದವಕ್ಕೆ ಆಂಜನೇಯ ಎಂಬರ್ಥವಿದೆ _ ಈ ಎಲ್ಲ ಶಬ್ದಗಳನ್ನೂ ಈ ಅರ್ಥದಲ್ಲಿ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ಬಳಸುತ್ತಾರೆ.
'ಪ್ರಾಣನ' ಎಂದರೆ ಬದುಕಿಸುವುದು ಎಂದರ್ಥ ("ಎನ್ನ ತಂದೆ .. .. ಮತ್ ಪ್ರಾಣನ ಪ್ರಯತ್ನ ತತ್ಪರನಾಗಿ" - 'ಕರ್ಣಾಟಕ ಕಾದಂಬರಿ'). "ಪ್ರಾಣೋಪಕಾರ' ಎಂದರೆ ಜೀವವನ್ನುಳಿಸುವಂಥ ಉಪಕಾರ ("ನೀಮೆನಗೆ ಪ್ರಾಣೋಪಕಾರಂಗೆಯ್ದಿರ್" - 'ಪಂಚತಂತ್ರ'). 'ಪ್ರಾಣಂಬಡೆ' ಎಂದರೆ ಜೀವವನ್ನು ಹೊಂದು ಎಂದರ್ಥ ("ವೀರಭಕ್ತಿಯೊಳಟ್ಟೆಯಲಿ ತಲೆ ಸೇರಿಸಲು ಪ್ರಾಣಂಬಡೆದನು" - ಭೀಮಕವಿಯ 'ಬಸವಪುರಾಣ'). 'ಪ್ರಾಣಾಹುತಿ' ಎಂದರೆ ಬಲಿ ("ಗಾಳದ ತುದಿಯೊಳಿಪ್ಪ ಭೂನಾಗನಂ ಕಂಡು ಪ್ರಾಣಾಹುತಿಯೆಂದು ಸವಿವ" - ಕನಕದಾಸರ ಕೀರ್ತನೆ). 'ಪ್ರಾಣತೆಗೆ' ಎಂದರೆ ಕೊಲ್ಲು ಎಂಬರ್ಥದ ಜೊತೆಗೆ ಕಾಟ ಕೊಡು ಎಂಬರ್ಥವೂ. 'ಸುಮ್ಮನೆ ನನ್ನ ಪ್ರಾಣ ತೆಗೀಬೇಡ' ಎಂಬಂತಹ ಮಾತುಗಳನ್ನು ಗಮನಿಸಿ. 'ಪ್ರಾಣಹಿಂಡು' ಎಂದರೂ ಇದೇ ಅರ್ಥವೇ. 'ಪ್ರಾಣ ಕಳೆದುಕೋ' 'ಪ್ರಾಣ ಹೋಗು' 'ಪ್ರಾಣಾಂತಕ, 'ಪ್ರಾಣಯಾತನೆ' ಮುಂತಾದ ನುಡಿಗಟ್ಟುಗಳು ಬಳಕೆಯಲ್ಲಿವೆ. 'ಪ್ರಾಣವಲ್ಲಭ' 'ಪ್ರಾಣವಲ್ಲಭೆ' ಅಥವಾ 'ಪ್ರಾಣೇಶ್ವರ' 'ಪ್ರಾಣೇಶ್ವರಿ' ಎಂದರೆ ಪ್ರಿಯಪ್ರೇಯಸಿಯರು. "ಬಿಡದೆ ಪೊಗೆ ಸುತ್ತೆ ತೋಳಂ ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂದೊಡಗಳೆದರ್ ಓಪರೋಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸದಯ್ಪೊಳವೇ" ಎಂಬುದು ಪಂಪನ 'ಆದಿಪುರಾಣ'ದ ಪದ್ಯ. ವೀರಶೈವದಲ್ಲಿ 'ಪ್ರಾಣಲಿಂಗ'ದ ಪರಿಕಲ್ಪನೆಯಿದೆ.
ಪ್ರಾಣವುಳ್ಳುದೇ 'ಪ್ರಾಣಿ'. 'ಪ್ರಾಣಿ ಜಂತು ದೇಹಿಯೆನಿಕ್ಕುಂ" ಎಂದು 'ಅಭಿಧಾನ ವಸ್ತುಕೋಶ'ದ ವಿವರಣೆ. ಪ್ರಾಣಿಯನ್ನು ಕೊಲ್ಲುವುದೇ 'ಪ್ರಾಣಿವಧೆ' "ಪ್ರಾಣಿವಧೆಯೆ ಪರಮಪಾತಕವೆಂಬುದಂ" - 'ಪಂಚತಂತ್ರ'). ಪ್ರಾಣಿಗಳ ಬಗ್ಗೆ ತಿಳಿಸುವ ವಿಜ್ಞಾನವೇ 'ಪ್ರಾಣೀಶಾಸ್ತ್ರ' ಅಥವಾ 'ಪ್ರಾಣಿವಿಜ್ಞಾನ'.
======
ಬಂಡವಾಳ: ಇದರ ಮೂಲ ಸಂಸ್ಕೃತದ 'ಭಾಂಡ' ಎಂಬಂತೆ ತೋರುತ್ತದೆ. ಅದರ ಅರ್ಥ ಸರಕು ಅಥವಾ ಸಾಮಗ್ರಿ ಇಡುವ ಉಗ್ರಾಣ ಅಥವಾ ಪಾತ್ರೆ ಎಂದು. ಭಾಂಡಾಗಾರ ಎಂಬುದೂ ಉಗ್ರಾಣವನ್ನು ಸೂಚಿಸುತ್ತದೆ. ಮುಂದೆ ಅದು ಹಣವಿರುವ ಕೋಶ ಎಂರ್ಥವನ್ನೂ ಪಡೆದಂತೆ ಕಾಣುತ್ತದೆ. ಭಾಂಡಾಗಾರ>ಭಾಂಡಾರ>ಭಂಡಾರ ಎಂದಾಗಿದೆ. 'ಭಂಡ' ಕನ್ನಡದಲ್ಲಿ ಅಲ್ಪಪ್ರಾಣವಾಗಿ ಬಂಡ ಎಂಬ ರೂಪ ತಳೆಯಿತು. ಮಾರಾಟದ ಸರಕು ಎಂಬರ್ಥದಲ್ಲಿ ಈ ಶಬ್ದ 'ವಡ್ಡಾರಾಧನೆ'ಯಲ್ಲೇ 'ಭಂಡ' ಹಾಗೂ 'ಬಂಡ' ಎರಡು ರೂಪಗಳಲ್ಲೂ ಬಂದಿದೆ ("ತಮ್ಮ ಕೊಂಡುಪೋದ ಭಂಡಮಂ " ಹಾಗೂ "ಬಂಡಮುಮೆಳ್ತುಗಳುಂ ಮೊದಲಾಗೆಲ್ಲಮಂ ಕಳ್ಳರ್ ಕೊಂಡು ಪೋದರ್").
ವ್ಯಾಪಾರದ ಮೂಲಧನ ಎಂಬರ್ಥದಲ್ಲಿ ಬಂಡವಾಳ ಶಬ್ದವು ಬಂಡ ಮತ್ತು (ಕರವಾಲ, ಭಿಂಡಿವಾಳ ಮುಂತಾದೆಡೆಗಳಲ್ಲಿರುವಂತೆ) ವಾಲ ಎಂಬುದರೊಡನೆ ಸೇರಿರಬೇಕು. ಈ ಶಬ್ದವು ಭಂಡವಾಳ, ಭಂಡವಲು, ಬಂಡವಲ, ಬಾಂಡವಲು ಮುಂತಾದ ರೂಪಗಳನ್ನು ತಳೆಯುತ್ತದೆ. ಹದಿನಾಲ್ಕನೆಯ ಶತಮಾನದ ನಾಗರಾಜನ ಕೃತಿಯಾದ 'ಪುಣ್ಯಾಸ್ರವ'ದಲ್ಲಿ "ವ್ಯವಹಾರಿಸುವಂಗೆ ಬಂಡವಲಮಿಲ್ಲದೆಂತು ಪೋದಪ್ಪೆ" ಎಂಬ ವಾಕ್ಯವಿದೆ. ಮೊದಲು ಸರಕು ವ್ಯಾಪಾರದ ಮೂಲವಾಗಿದ್ದರೆ ಬರಬರುತ್ತ, ಹಣದ ಬಳಕೆ ಹೆಚ್ಚಾದಂತೆ, ಹಣವಾಯಿತು. ಹೀಗಾಗಿ ಎಲ್ಲದಕ್ಕೂ ಮೂಲವಾದುದನ್ನೂ ಬಂಡವಾಳ ಎಂಬ ಹೆಸರಿನಿಂದಲೇ ಸೂಚಿಸುವಂತಾಯಿತು. 'ಮಾತೇ ಅವನ ಬಂಡವಾಳ' ಎಂಬಂತಹ ಕಡೆಗಳಲ್ಲಿ ಈ ಅರ್ಥವಿದೆ. ಮುಂದೆ ಅದು ಸಾಮರ್ಥ್ಯವನ್ನೂ ಸೂಚಿಸುವಂತಾಯಿತು: ಸಾಮರ್ಥ್ಯವಿಲ್ಲದೆ ಕೊಚ್ಚಿಕೊಳ್ಳುವುದನ್ನು ಸೂಚಿಸುವ 'ಬಂಡವಾಳ್ವಿಲ್ಲದ ಬಡಾಯಿ' ಎಂಬ ನಾಣ್ಣುಡಿಯೇ ಇದೆ. ಆ ಹೆಸರಿನ ಟಿ.ಪಿ. ಕೈಲಾಸಂ ಅವರ ನಾಟಕ ಪ್ರಸಿದ್ಧವಾಗಿದೆ.
ಹಣವಿರುವವನು 'ಬಂಡವಾಳಗಾರ' ಅಥವಾ 'ಬಂಡವಾಳಿಗ'ನಾದರೆ, ಹಣಗಳಿಕೆಗೇ ಪ್ರಾಶಸ್ತ್ಯವೀಯುವ ಪ್ರವೃತ್ತಿ ಬಂಡವಾಳಶಾಹಿ ಬುದ್ಧಿ. ಮಿತಿಯಿಲ್ಲದ ಹಣಗಳಿಕೆಗೆ ಅವಕಾಶವೀಯುವ ಸರ್ಕಾರದ ಧೋರಣೆ ಬಂಡವಾಳಶಾಹಿ ಪ್ರಭುತ್ವ. ಇಂಗ್ಲಿಷ್ನ 'ಕ್ಯಾಪಿಟಲಿಸ್ಮ್' ಎಂಬುದಕ್ಕಿದು ಸಂವಾದಿ.
=====
ಬಡ್ಡಿ: ಸಾಲವಾಗಿ ಪಡೆದ ಹಣದ ಮೇಲೆ ಹೆಚ್ಚಿಗೆ ನೀಡಬೇಕಾದ ಮೊತ್ತವನ್ನು ಬಡ್ಡಿ ಎಂದು ಕರೆಯುವುದು ಎಲ್ಲರಿಗೂ ತಿಳಿದ ವಿಷಯ. ತಮಿಳು ಮಲಯಾಳಂಗಳಲ್ಲಿ ವಟ್ಟಿ ಎಂಬ ರೂಪದಲ್ಲಿಯೂ ತೆಲುಗಿನಲ್ಲಿ ವಡ್ಡಿ ಎಂಬ ರೂಪದಲ್ಲಿಯೂ ದೊರೆಯುತ್ತದಾದರೂ ಇದು ದ್ರಾವಿಡ ಮೂಲದ ಶಬ್ದವಾಗಿರದೆ ಸಂಸ್ಕೃತದ 'ವೃದ್ಧಿ' ಎಂಬುದರ ತದ್ಭವವಾಗಿದೆ. ಈ ಶಬ್ದಕ್ಕೆ ಆ ಭಾಷೆಯಲ್ಲಿ ಮೂಲತಃ ಹೆಚ್ಚುವುದು, ಬೆಳೆಯುವುದು ಎಂಬ ಅರ್ಥವಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿ 'ವ್ರಿದ್ಧಿ' ಎಂಬ ರೂಪ ದೊರೆಯುತ್ತದೆ. (ವಯಸ್ಸು) ಹೆಚ್ಚಾದ ಅಥವಾ ವೃದ್ಧಿಯಾದ ಎಂಬರ್ಥದಲ್ಲಿ ಮುದುಕನನ್ನು ಸಂಸ್ಕೃತದಲ್ಲಿ ವೃದ್ಧ ಎಂದು ಕರೆದಂ ಕಾಣುತ್ತದೆ. ಸಾಲದ ಹಣ ಹೆಚ್ಚಾಗುವುದರಿಂದಾಗಿ ಆ ಹೆಚ್ಚಿನದನ್ನು ವೃದ್ಧಿ ಎಂದು ಕರೆದಂತೆ ತೋರುತ್ತದೆ. ಹಣವನ್ನು ಬಡ್ಡಿಗೆ ಕೊಟ್ಟು ಜೀವಿಸುವವನನ್ನು 'ವೃದ್ಧಿಜೀವಿಕಾ' ಎಂದೇ ಕರೆಯುತ್ತಿದ್ದರು. 'ಕಡಬಡ್ಡಿ' (ಸಾಲ ಬಡ್ಡಿ) ಎಂಬುದು ಒಟ್ಟಿಗೆ ಬಳಕೆಯಾಗುತ್ತಿದ್ದ ಪದ. ಕನ್ನಡ ಕಾವ್ಯಗಳಲ್ಲಿ ಕೆಲವೆಡೆ 'ಬಡ್ಡಿಕಾರ' ಎಂದು ಇದೇ ಅರ್ಥದಲ್ಲಿ ಬಳಸಲಾಗಿದೆ. 'ಬಡ್ಡಿಯುಣ್' ಎಂಬ ಮಾತನ್ನು ಬಡ್ಡಿಯ ಹಣದಿಂದ ಜೀವಿಸು ಎಂಬರ್ಥದಲ್ಲಿ ಬಳಸಲಾಗಿದೆ. ಹಡೆದೊಡವೆಯ ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು ಎಂಬುದು ಬಸವಣ್ಣನ ಮಾತು (ಭಕ್ತನು ತನ್ನಲ್ಲಿರುವ ಹಣವನ್ನು ಇತರ ಭಕ್ತರಿಗಾಗಿ ಬಳಸಬೇಕೇ ಹೊರತು ಬಡ್ಡಿಯ ಆಸೆಯಿಂದ ಸಾಲವಾಗಿ ಕೊಡಬಾರದು ಎಂಬುದು ಇಲ್ಲಿನ ಆಶಯ).
ಆಧುನಿಕ ಸನ್ನಿವೇಶದಲ್ಲಿ ಬಡ್ಡಿಯ ಪ್ರಭೇದಗಳನ್ನು ಗುರುತಿಸುತ್ತೇವೆ: ಸರಳ ಬಡ್ಡಿ, ಚಕ್ರ ಬಡ್ಡಿ - ಹೀಗೆ. 'ಚಕ್ರವೃದ್ಧಿ' ಎಂಬ ಮಾತು ಸಂಸ್ಕೃತದಲ್ಲಿಯೂ ದೊರೆಯುತ್ತದೆ. ಕೊಡಲು ತಡಮಾಡುವುದರಿಂದ ತೆರಬೇಕಾದ ಹೆಚ್ಚಿನ ಬಡ್ಡಿಯನ್ನು 'ಸುಸ್ತಿ ಬಡ್ಡಿ' ಎನ್ನುತ್ತಾರೆ. 'ಬಡ್ಡಿ ವ್ಯವಹಾರ' ಈಗ ಸಾಮಾನ್ಯ.
'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!
=====
ಬಯಕೆ: ಆಸೆ ಎಂಬರ್ಥದ ಈ ಶಬ್ದವು ತಮಿಳಿನಲ್ಲಿ 'ವಯಮ್' ಎಂದೂ ತೆಲುಗಿನಲ್ಲಿ 'ಬಯ್ಯಂಕ' ಎಂದೂ ತುಳುವಿನಲ್ಲಿ ಬಯಕೆ' ಎಂದೂ ಬಳಕೆಯಲ್ಲಿದೆ. "ಬಯಕೆ ತೀರದ ಕಾರಣದಿಂ ವಿಪರ್ಯಯಂ" ಎಂಬ ಮಾತು 'ಕವಿರಾಜಮಾರ್ಗ'ದ್ದು. "ಸಾಮದೊಳಂ ಪದವಡದೊಡೆ ಬೞಿಕಿರ್ದಪ್ಪುದಲ್ತೆ ಮದವಡಿಸಲೆನ್ನ ಬಯಕೆಯ ದಂಡಂ" ಎಂಬ 'ಆದಿಪುರಾಣ'ದ ಮಾತಿನಲ್ಲಿ ಈ ಶಬ್ದಕ್ಕೆ ಇಷ್ಟ ಎಂಬರ್ಥ ಬಂದಿದೆ. ನೇಮಿಚಂದ್ರ ತನ್ನ 'ಲೀಲಾವತಿ'ಯಲ್ಲಿ ಈ ಶಬ್ದವನ್ನು ಆಸೆಬುರುಕ ಎಂಬರ್ಥದಲ್ಲಿ ಬಳಸುವಂತೆ ತೋರುತ್ತದೆ: "ಅಹಂಕಾರದೊಳ್ ಬಾತು ಬಲ್ಮೆಗೆ ಹಾರೈಸುವರೇಕೆ ಬಯಕೆಗವಿಗಳ್" (ಬಯಕೆ+ಕವಿ). "ಹುಲುಬಯಕೆ ಬಾ ಎನಲು ಓ ಎಂದು ಬಾರದಿರು ವಾತಾಪಿಯಂದದೊಳು ಬಾಳನೊಡೆದು" ಎಂಬ ಆಶಯ ನುಡಿ ಪುತಿನ ಅವರ 'ಅಹಲ್ಯೆ' ನಾಟಕದ್ದು. ಮಧುರಚೆನ್ನರ 'ನನ್ನ ನಲ್ಲ' ಎಂಬ ಪ್ರಸಿದ್ಧ ಕವನದಲ್ಲಿ "ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು, ಬಯಕೆ ಬರುವದರ ಕಣ್ಸನ್ನೆ ಕಾಣೋ" ಎಂಬ ಸಾಲುಗಳಿವೆ.
ಈ ಶಬ್ದವು 'ಬಯಕ್ಕೆ' ಎಂಬ ರೂಪದಲ್ಲಿಯೂ ಬಳಕೆಗೊಂಡಿದೆ. "ಸೂಡುಶಯ್ಯೆಗಳ ಬಯಕ್ಕೆ ಜೊಂಪಲರ್ದವು" ಎಂಬ ಮಾತು 'ಪಂಪಭಾರತ'ದಲ್ಲಿನದು. ಹಾಗೆಯೇ "ಭವಸಂತಾನಂಗಳೊಳ್ ಕೂರ್ಪ ಕೂಡುವ ತೞ್ತಿರ್ಪ ಬಯಕ್ಕೆಯಂ ಬಯಸುಗುಂ" ಎಂಬ ಮಾತು ಪೊನ್ನನ 'ಶಾಂತಿಪುರಾಣ'ದಲ್ಲಿದೆ. ಈ ಶಬ್ದಕ್ಕೆ 'ಬಯ್ಕೆ' ಎಂಬ ರೂಪವೂ ಇದೆ. "ಚದುರರ ಮೆಚ್ಚು ಭಾವುಕರ ಕೈಪಿಡಿ ಜಾಣರ ಬಯ್ಕೆ" ಎಂಬ ಮಾತು 'ಸೂಕ್ತಿಸುಧಾರ್ಣವ'ದ ಒಂದು ಪದ್ಯದಲ್ಲಿನ ಮಾತು.
ಈ ಮಾತನ್ನು ವಿಶೇಷವಾಗಿ ಬಸುರಿ ಹೆಂಗಸಿನ ಅಭೀಪ್ಸೆಗಳಿಗೆ ಅನ್ವಯಿಸುವುದುಂಟು. "ಗರ್ಭಿಣಿಗಳಪ್ಪ ಕಾಮಿನಿಯರ್ ಬಯಸುವ ಬಯಕೆ ದೋಹಲಂ ದೌಹೃದಮುಂ" ಎಂದು 'ಅಭಿಧಾನ ವಸ್ತುಕೋಶ'ವು ವಿವರಣೆ ನೀಡುತ್ತದೆ. "ಆಕೆಗೆ ಎಲ್ಲ ಜೀವಂಗಳಂ ದಯೆಗೆಯ್ವ ಬಯಕೆಯಾದುದು" ಎಂದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಗರ್ಭಿಣಿ ಹೆಂಗಸನ್ನು ನಯಸೇನನ 'ಧರ್ಮಾಮೃತ'ದಲ್ಲಿ ಬಯಕೆವೆಂಡಿರ್ ಎಂದು ಕರೆದಿದೆ: "ಬಯಕೆವೆಂಡಿರಂತೆ ಉಗುಳುತ್ತುಂ". ಮುದ್ದಣನು ತನ್ನ 'ರಾಮಾಶ್ವಮೇಧ'ದಲ್ಲಿ ಅಕ್ಷಯಪಾತ್ರೆಯನ್ನು 'ಬಯಕೆವಟ್ಟಲ್' ಎಂದು ಕರೆದಿದ್ದಾನೆ. ಈಗಲೂ ಗರ್ಭಿಣಿಯರ ಸೀಮಂತವನ್ನು 'ಬಯಕೆ ಮಾಡು' ಎನ್ನುತ್ತಾರೆ. ಬಯಕೆಗಪ್ಪು ಅಥವಾ ಬೈಕೆಗಪ್ಪು ಬಸುರಿಯರಿಗೆ ಹಚ್ಚುವ ಕಾಡಿಗೆ. ಆಸೆ ಎಂಬರ್ಥದಲ್ಲಿ 'ಬಯಕ್ಕೆ' ಎಂಬ ರೂಪವೂ ಬಳಕೆಯಲ್ಲಿತ್ತು. "ಜಿನಭವನಂಗಳಂ ಮಾಳ್ಪ .. .. ಚತುರ್ವಿಧ ದಾನಮಂ ಮಾಳ್ಪ ಬಯಕ್ಕೆಯಾಯ್ತು ಜಿನದತ್ತೆಗೆ" ಎಂಬುದು ನೇಮಿಚಂದ್ರನ 'ಆರ್ಧನೇಮಿಪುರಾಣ'ದ ಮಾತು.
ಈ ಶಬ್ದ ಹಾಗೂ ಇದರ ರೂಪಾಂತರಗಳು ಹಿಂದೆ ಮತ್ತೊಂದು ಆರ್ಥದಲ್ಲಿಯೂ ಬಳಕೆಯಲ್ಲಿತ್ತು. ಅದೆಂದರೆ ನಿಧಿ ಎಂಬುದು. "ಕವರಲ್ ಬಂದಂಗೆ ಬಯಕೆಯಂ ತೋದರೆಂಬಂತೆ" ಎಂಬುದು 'ಧರ್ಮಾಮೃತ'ದ ಮಾತು.. "ಸತ್ತ ಹೆಣ ಕೂಗಿದುದುಂಟು ಬೈತಿಟ್ಟ ಬಯಕೆ ಕರೆದುದುಂಟು ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು" ಎಂಬುದು ಮಹಾದೇವಿಯಕ್ಕನ ಒಂದು ವಚನದ ಭಾಗ. 'ಬೈಕೆ' ರೂಪಕ್ಕೂ ಈ ಅರ್ಥವಿದೆ: "ಇವರ ಬಯ್ತ ಬೈಕೆಯಂ ಆ ಪೊಳಲ ಕಳ್ಳನೊರ್ವಂ .. .. ಕಂಡು" ಎಂಬ ವಾಕ್ಯಖಂಡ ಕರ್ಣಪಾಯನ 'ನೇಮಿನಾಥಪುರಾಣ'ದ್ದು. "ಬೈಚಿಟ್ಟ ಬೈಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೇ?" ಎಂಬುದು ಅರಿವಿನ ಮಾರಿತಂದೆಯ ವಚನದ ಸಾಲು. ಬ್ರಹ್ಮಶಿವ ತನ್ನ 'ಸಮಯ ಪರೀಕ್ಷೆ'ಯಲ್ಲಿ 'ಬಯ್ಕೆ' ರೂಪವನ್ನು ಬಳಸುತ್ತಾನೆ. "ಫಣಿಕಟಕನ ಕೆೞಗೆ ಬಯ್ಕೆಯಿರ್ದಪುದೆಂಬರ್". ಈ ಶಬ್ದ ವಿಸ್ತಾರಗೊಂಡು ಒತ್ತೆಯಿಡು ಎಂಬರ್ಥದಲ್ಲಿ 'ಬೈಕೆಗೊಡು' ಎಂಬ ರೂಪದಲ್ಲಿ ಬಳಕೆಯಾಗಿದೆ: "ಬಗೆಗೆ ಬಂದೊಡಮೆಯಂ ಒಲ್ದಾ ನೆರೆದಾಗಳೆ ಕುಡಿ ಎಂದಾ ನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ" ಎಂಬುದು 'ಪಂಪರಾಮಾಯಣ'ದ ಮಾತು.  'ಸಮಯಪರೀಕ್ಷೆ'ಯು 'ಬಯ್ಕೆಗೊಳ್' ರೂಪವನ್ನು ಅಡಗಿಸಿಕೊ ಎಂಬರ್ಥದಲ್ಲಿ ಬಳಸುತ್ತದೆ: "ಮುನಿವಂದು ಅಧಿಕಂ ಗಡ ದೇವನಿಕಾಯದೆ ಬಯ್ಕೆಗೊಂಡು .. .. ಬಸಿಳಿಕ್ಕಿದಂ ಶಸ್ತ್ರಚಯಮುಮಂ".
ಈ ಶಬ್ದಕ್ಕೆ 'ಬಯ್' ಎಂಬ ಧಾತು ಮೂಲ. ತಮಿಳಿನಲ್ಲಿದು 'ವೈ' ಎಂದೂ, ಮಲಯಾಳಂನಲಲ್ಲಿ 'ವೆಕ್ಕ' ಎಂದೂ, ತೆಲುಗಿನಲ್ಲಿ 'ವೇಯು' ಎಂದೂ ಬಳಕೆಯಲ್ಲಿದೆ. ಅದರರ್ಥ ಮರೆಮಾಚು, ಅಡಗಿಸು ಎಂದು. "ಬಯ್-ನಿಕ್ಷೇಪೇ" ಎಂದು 'ಶಬ್ದಮಣಿದರ್ಪಣ' ಅರ್ಥ ನೀಡುತ್ತದೆ. "ಅದನಾತಂ ಬಯ್ದೊನಲ್ಲ ನಾಂ ಬಯ್ದೆಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಪ್ರಯೋಗ. "ವಿಷಾನಿಲದಂಷ್ಟ್ರಂ ಶ್ವಯುವಾಗಿ ಪುಟ್ಟಿ ಸುೞಿಗುಂ ಮುಂ ಬಯ್ತ ಭಂಡಾರದೊಳ್" ಎಂಬ ಪಂಪನ 'ಆದಿಪುರಾಣ'ದ ಸಾಲಿನಲ್ಲಿಯೂ ಈ ಅರ್ಥವಿದೆ. ಇದು ಕೂಡ ಕಬೈಕಿ ಎಂಬ ರೂಪದಲ್ಲಿ ಬಳಕೆಯಲ್ಲಿತ್ತು: "ನಾರಾಯಣ ಬಾಹುದಡದಳವಂ ನೋಡಲ್ ಗದಾದಂಡದಿಂ ಹಲಂ ಕೂಡಿದ ಚಾಪ ದಂಡಯುಗಮಂ ಬೈತಲ್ಲಿ ಕಾದಿರ್ಪುದುಂ" ಎಂಬ ವಾಕ್ಯ ನಾಚಂದ್ರನ 'ಪಂಪರಾಮಾಯಣ'ದಲ್ಲಿ  ಬಂದಿದೆ. ಈ ಶಬ್ದವು 'ಬಯ್ಚಿಡು' ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ. "ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು" ಎಂಬುದು ಬಸವಣ್ಣನ ವಚನದ ಸಾಲು.
ಒಂದೇ ಶಬ್ದದ ವಿವಿಧ ರೂಪಗಳು ದೊರೆಯುವುದೇತಕ್ಕೆ? ಪ್ರಾಯಶಃ ಅದರ ಉಚ್ಚಾರಣೆ ವಿವಿಧವಾಗಿರಬಹುದು, ಹಾಗಿರುವುದು ಹೆಚ್ಚು ಸಾಧ್ಯ. ಆಡುಮಾತಿನ ಬಳಕೆಯ ಶಬ್ದಗಳೇ ಗ್ರಾಂಥಿಕಗೊಂಡು ಶಿಷ್ಟೀಕರಣಗೊಳ್ಳುತ್ತವೆ. ಅಂದರೆ ವಿವಿಧ ರೂಪಗಗಳಲ್ಲಿ ಉಚ್ಚಾರಣೆಯಲ್ಲಿದ್ದ ಶಬ್ದದ ಬರವಣಿಗೆಯ ರೂಪವು ಅದನ್ನು ಬಳಸುವ ವ್ಯಕ್ತಿಯನ್ನು ಅವಲಂಬಿಸುತ್ತದೇನೋ. ಅಂದರೆ ಹೆಚ್ಚು ಗೌರವಾನ್ವಿತನಾದವನ ಬಳಕೆಯನ್ನು ಜನರು ಅನುಸರಿಸುವುದು ರೂಢಿ. ಆದರೂ ಕೆಲ ಕವಿಗಳು ಅದರ ವಿಭಿನ್ನ ರೂಪಗಳನ್ನೂ ಬಳಸುವುದಕ್ಕೆ ಪ್ರಾಯಶಃ ಕಾರಣ, ಛಂದಸ್ಸಾಗಿರಬಹುದು, ತನ್ನ ಕಾವ್ಯದ ಭಾಷೆಗೆ ತಕ್ಕುದಾಗಿರಬಹುದು ಅಥವಾ ತನಗೇ ಅದು ಸರಿಯೆನ್ನಿಸಿದ್ದಿರಬಹುದು. ಜನರ ಬಳಕೆಯಲ್ಲಿ ಯಾವ ರೂಪಗಳಿದ್ದುವು, ಯಾವಾಗ ಬರವಣಿಗೆಯಲ್ಲಿ ಈ ರೂಪಗಳು ಬಂದುವು ಎಂದು ಹೇಳವುದು ಅಸಾಧ್ಯದ ಮಾತು, ಏಕೆಂದರೆ ನಮಗೀಗ ದೊರೆಯುವುದು ಬರಹದ ರೂಪವೇ ಹೊರತು, ಆಡು ಮಾತಿನ ರೂಪಗಳಲ್ಲ. ಹಾಗಾಗಿ ಇದನ್ನು ನಾವು ತಾರ್ಕಿಕ ಮಂಡನೆಯಿಂದಲೇ ಊಹಿಸಬೇಕಾಗುತ್ತದೆ.
ಈಗ ಈ ಶಬ್ದದ ವಿವೇಚನೆಗೆ ಬರೋಣ. ಬಯಕೆ ಎಂಬ ಶಬ್ದದ ಎರಡೂ ಅರ್ಥದ - ಆಸೆ ಮತ್ತು ನಿಧಿ - ನಾಮರೂಪಗಳಿಗೆ ಒಂದೇ ಮೂಲವಿರಬಹುದೇ? ಅಂದರೆ 'ಬಯ್' ಎಂಬ ಧಾತುವೇ ಎರಡಕ್ಕೂ ಮೂಲವಾಗಿರಬಹುದೇ ಎಂಬ ಅನುಮಾನ ಮೂಡುತ್ತದೆ. ಸಾಮಾನ್ಯವಾಗಿ ಒಂದು ಶಬ್ದದ ಎರಡು ಅರ್ಥಗಳಲ್ಲಿ ಒಂದು ಇಂದ್ರಿಯಗ್ರಾಹ್ಯವಾಗಿದ್ದು, ಮತ್ತೊಂದು ಅಮೂರ್ತವಾದುದಾಗಿದ್ದರೆ, ಮೊದಲ ಅರ್ಥವು ಮೊದಲು ರೂಪಿತವಾಗಿ ಆನಂತರ ಎರಡನೆಯದು ಬಂದಿರುವುದು ಹೆಚ್ಚು ಸಂಭಾವ್ಯ. ಇದನ್ನೊಂದು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. 'ಮಂಕು' ಎಂಬ ಶಬ್ದಕ್ಕೆ ಎರಡರ್ಥವಿದೆ: ಕಾಂತಿ ಕಡಿಮಯಾಗುವುದು ಮತ್ತು ದಡ್ಡತನ ಎಂದು. ಉರಿಯುವ ದೀಪ ಬರಬರುತ್ತ (ಕಾರಣ ಯಾವುದೇ ಇರಲಿ) ತನ್ನ ಬೆಳಕನ್ನು ಕಡಿಮೆ ಮಾಡಿಕೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಸ್ಥಿತಿಯನ್ನು ಮುಂದೆ ಅಮೂರ್ತ ಕಲ್ಪನೆಗೆ, ಅಂದರೆ ಕಾಣದ ಬುದ್ಧಿಯ ಕಾಂತಿಹೀನತ್ವಕ್ಕೆ ಅನ್ವಯಗೊಳಿಸಿರಬೇಕು. ಅಂದರೆ ಕಾಲಕ್ರಮೇಣ ಅದೊಂದು ರೂಪಕವಾಗಿ ಮಾರ್ಪಾಟಾಗುತ್ತದೆ. ಮೊದಲು ಅಮೂರ್ತವಾದುದಕ್ಕೆ ಪದ ರೂಪಿತವಾಗಿ ಆನಂತರ ಸ್ಪಷ್ಟವಾದದ್ದಕ್ಕೆ ಅನ್ವಯಿಸಿರುವುದು ಪ್ರಾಯಶ ಅಸಂಭವ.
ಇದರಂತೆಯೇ ಕಣ್ಣಿಗೆ ಕಾಣುವ  ಹಣ, ಒಡವೆ, ಅಥವಾ ವಸ್ತುಗಳನ್ನು ಕಾಣದಂತೆ ಅಡಗಿಸಿಡುವ ಕ್ರಿಯೆಗೆ ಮೊದಲು ಬಯ್ ಎಂಬ ರೂಪ ಬಳಕೆಗೆ ಬಂದು, ಆ ಕ್ರಿಯೆಯ ನಾಮರೂಪವಾದ ಬಯ್ಕೆ ಮತ್ತದರ ರೂಪಾಂತರಗಳು ಬಂದಿರಬಹುದು. ಇನ್ನು, ಆಸೆ ಎಂಬರ್ಥವು ಅದರ ಮುಂದಿನ ಹಂತವಿರಬೇಕು. ಅಂದರೆ ಮನಸ್ಸಿನಲ್ಲಿ ಇತರರಿಗೆ ಕಾಣದಂತಿರಿಸಿಕೊಳ್ಳುವ ಭಾವನೆ, ಅಂದರೆ 'ಆಸೆಪಡು' ಎಂಬರ್ಥದಲ್ಲಿ ಅಮೂರ್ತವಾದುದಕ್ಕೆ ಈ ಧಾತು ಅನ್ವಯಗೊಂಡು, ಅದು ಮುಂದೆ ಆಸೆ ಎಂಬ ಅರ್ಥದ ಬಯ್ಕೆ ಎಂಬ ನಾಮರೂಪವನ್ನು ಪಡೆದಿರಬೇಕು ಅನ್ನಿಸುತ್ತದೆ. ಈಗ ನಿಧಿ ಎಂಬರ್ಥದಲ್ಲಿ 'ಬಯಕೆ' ಅಥವಾ 'ಬೈಕೆ' ಶಬ್ದ ಬಳಕೆಯಲ್ಲಿಲ್ಲ. ಇದಕ್ಕೆ ಕಾರಣ 'ನಿಧಿ' 'ನಿಧಾನ' ಮುಂತಾದ ಸಂಸ್ಕೃತ ಶಬ್ದಗಳೇ ವ್ಯಾಪಕ ಬಳಕೆಯಲ್ಲಿ ಬಂದಿರಬೇಕು.
'ಬಯ್' ಧಾತುವಿಗೆ ಇನ್ನೂ ಒಂದರ್ಥವಿದೆ, ಅವಹೇಳನ ಮಾಡು ಎಂದು. ಈ ಅರ್ಥದಲ್ಲಿ 'ವೈ' ಎಂಬ ರೂಪ ತಮಿಳಿನಲ್ಲಿದೆಯಂತೆ. ತೆಲುಗು ತಮಿಳುಗಳಲ್ಲಿ ತೆಗಳು ಎಂಬರ್ಥದಲ್ಲಿ 'ತಿಟ್ಟು' ಎಂಬ ಶಬ್ದವಿದೆ. ಕನ್ನಡದಲ್ಲೂ ಈ ಪದ ಅಲ್ಪಸ್ವಲ್ಪ ಬಳಕೆಯಲ್ಲಿದೆ.  ಬೈಗುಳ ಬೇರೆಯವರ ಬಗ್ಗೆ ಮುಚ್ಚಿಟ್ಟುಕೊಂಡ ಭಾವನೆಯ ಹೊರ ರೂಪವೇ ತಾನೇ! ಹಾಗಾಗಿ ಇದೂ ಅದೇ ಮೂಲದಿಂದ ಬಂದಿರಬಹುದೇ? ಅಲ್ಲದೆ, ಹೀಗೆ ಒಂದೇ ಶಬ್ದರೂಪಕ್ಕೆ ಬೇರೆ ಬೇರೆ ಅರ್ಥಗಳು ಬರುವುದಕ್ಕೇನು ಕಾರಣ ಎಂಬುದೂ ವಿಚಾರಣೀಯವೇ.
=====
ಬಸವ: ಇದು ಸಂಸ್ಕೃತ ಶಬ್ದವಾದ 'ವೃಷಭ' ಎಂಬುದರ ತದ್ಭವ. ಇದರ ಮೂಲ ಅರ್ಥ ಹೋರಿ ಅಥವಾ ಎತ್ತು ಎಂದು. ಈ ಅರ್ಥದಲ್ಲಿ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಈ ಶಬ್ದ ಬಳಕೆಗೊಂಡಿದೆ: "ಬಸವಂ ಸತ್ತಿರ್ದಡೆ ಸಂತಸದಿಂದಂ ಮೀಸಿ ಪೂಜಿಸುತೆ .. .." ದೇವರಿಗೆ ಮೀಸಲಿಡುವ ಹೋರಿಯನ್ನೂ ಬಸವ ಎಂದು ಕರೆಯುತ್ತಾರೆ. ಇಂತಹ ಹೋರಿಗಳ ಮೈಮೇಲೆ ಗುರುತುಮಾಡುವ ಪರಿಪಾಟವೂ ಉಂಟು: "ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು ಬಸವಗಳಪ್ಪುವೇ ಲಿಂಗಮುದ್ರಯನೊತ್ತದನ್ನಕ್ಕರ" ಎಂಬುದು ಚೆನ್ನಬಸವಣ್ಣನ ವಚನದ ಮಾತು. ಇದಕ್ಕೆ 'ಬಸವನ ಮುದ್ರೆ' ಎಂದೇ ಕರೆಯುತ್ತಿದ್ದರು: "ಮುದ್ದು ಮಾಡಿ ಸಾಕಿ ಮಗನಿಗೆ ಬಸವನ ಮುದ್ರೆಯ ಒತ್ತಿದ್ಯೇನೇ" ಎಂಬುದು ಪುರಂದರದಾಸರ ಹಾಡಿನ ಮಾತು. ಮುಂದೆ ಅದು ದೇವರ ಮೀಸಲ ಇತರ ಪ್ರಾಣಿಗಳಿಗೂ ಅನ್ವಯವಾಯಿತು, ಮನುಷ್ಯರಿಗೂ ಅನ್ವಯವಾಯಿತು. ಬಸವ ನಂದಿಯ ವಾಹನ ಎಂಬ ಕಾರಣದಿಂದ ಅದು ಜನರಿಗೆ ಪೂಜ್ಯವೂ ಆಯಿತು. 'ಬಸವ ನೋಂಪಿ'ಯ ಪ್ರಸ್ತಾಪ ಅನೇಕ ಕಡೆಗಳಲ್ಲಿದೆ.
ಕನ್ನಡ ತೆಲುಗುಗಳಲ್ಲಿ ಬಸವ ಎಂಬುದು ವ್ಯಕ್ತಿಯ ಅಂಕಿತನಾಮವೂ ಆಗಿದೆ. ಬಸವ ಎಂಬ ಪದಕ್ಕೆ ಅಣ್ಣ, ಅಪ್ಪ, ಅಯ್ಯ ಮುಂತಾದ ಸಂಬಂಧಸೂಚಕ ಪದಗಳೂ ಸೇರುತ್ತವೆ. ಬಸವಣ್ಣ ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲೊಬ್ಬ. ಹರಿಹರ ಕನ್ನಡದಲ್ಲಿ 'ಬಸವರಾಜದೇವರರಗಳೆ' ಎಂಬ ಕಾವ್ಯವನ್ನು ಬರೆದರೆ, ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ 'ಬಸವ ಪುರಾಣಮು'ವನ್ನು ರಚಿಸಿದ. ಮೊದಲಿನಿಂದ ಬಂದ ಬಸವಪೂಜೆಯ ಜೊತೆ ಹೊಂದಿಸಿ ಬಸವಣ್ಣನ ಹುಟ್ಟಿದ ದಿನವೆಂದು ಪುರಾಣಗಳಲ್ಲಿ ಉಕ್ತವಾದ ವೈಶಾಖ ಶುದ್ಧ ತದಿಗೆಯನ್ನು 'ಬಸವಜಯಂತಿ'ಯಾಗಿ ಆಚರಿಸುವ ಸಂಪ್ರದಾಯ ಉಂಟಾಯಿತು. ಬಸವ ಎಂಬ ತದ್ಭವ ಶಬ್ದಕ್ಕೆ ಈಶ್ವರ ಸೇರಿಸಿದರೆ ಬಸವೇಶ್ವರ ಎಂಬ ರೂಪವಾಗುತ್ತದೆ, ಹಾಗೆಯೇ ಬಸವಪ್ರಭು. ಬಸವನಗೌಡ ಮುಂತಾದೆಡೆಗಳಲ್ಲಿ ಬಸವಣ್ಣ ಎಂಬುದರ ಕೊನೆಯ ದ್ವಿತ್ವ ಸವಕಳಿಗೊಂಡಿದೆ. ಯಜಮಾನನ ಮಾತಿಗೆ ತಲೆಯಾಡಿಸುವ ಅಲಂಕೃತ ಎತ್ತನ್ನು 'ಕೋಲೆ ಬಸವ' (<ಕೌಲೆ<ಕವಿಲೆ) ಎನ್ನುತ್ತಾರೆ; ಎಲ್ಲದಕ್ಕೂ ಒಪ್ಪುವವನಿಗೂ ಈ ಹೆಸರು ಸಲ್ಲುತ್ತದೆ.
=====
ಬಿಟ್ಟಿ: ಬಿಟ್ಟಿ ಎಂಬುದು ಈಗ ಪುಕ್ಕಟೆ, ಪ್ರತಿಫಲವಿಲ್ಲದ ಎಂಬರ್ಥದಲ್ಲಿ ಬಳಕೆಗೊಳ್ಳುತ್ತಿರುವ ಶಬ್ದ. ಇದು 'ವಿಷ್ಟಿ' ಎಂಬ ಸಂಸ್ಕೃತ ಶಬ್ದದ ತದ್ಭವ. ಇದು ಪ್ರಾಕೃತದಲ್ಲಿ ವಿಟ್ಠಿ ಎಂಬ ರೂಪದಲ್ಲಿ ದೊರೆಯುತ್ತದೆ. ಯುದ್ಧಕಾಲದಲ್ಲಿ 'ಕೂಲಿಯಿಲ್ಲದೆ ನಿರ್ಬಂಧದಿಂದ ಮಾಡಿಸುತ್ತಿದ್ದ ಕೆಲಸ'ವನ್ನು ಬಿಟ್ಟಿ ಎನ್ನುತ್ತಿದ್ದರು. ವಿಷ್ಟಿ ಶಬ್ದವು ಮೊದಲು ಕಾಣಿಸಿಕೊಳ್ಳುವುದು ಕೌಟಿಲ್ಯನ 'ಅರ್ಥಶಾಸ್ತ್ರ'ದಲ್ಲಿ. "ಶಿಬಿರ ಮಾರ್ಗ ಸೇತು ಕೂಪ ತೀರ್ಥ ಶೋಧನಕರ್ಮ, ಯಂತ್ರಾಯುಧೋಪಕರಣ ಗ್ರಾಸ ವಹನಂ, ಅಯೋಧನಾಚ್ಯ ಪ್ರಹರಣಾವರಣ ಪ್ರತಿವಿದ್ದ ಅಪನಯನಮಿತಿ ವಿಷ್ಟಿಕರ್ಮಾಣಿ" ಎಂಬುದು ಅಲ್ಲಿನ ವಿವರಣೆ. ಎಂದರೆ ಶಿಬಿರ, ದಾರಿ, ಸೇತುವೆ, ಬಾವಿ, ನೀರು ಇವುಗಳನ್ನು ಸರಿಪಡಿಸುವುದು ಶೋಧನ ಕರ್ಮ ಎಂಬ ಬಿಟ್ಟಿ; ಆಯುಧಗಳು, ಯಂತ್ರಗಳು, ಆವರಣಗಳು, ಉಪಕರಣಗಳು ಆಹಾರ - ಇವುಗಳನ್ನು ಹೊತ್ತು ಸಾಗಿಸುವುದು ವಹನಕರ್ಮ ಎಂಬ ಬಿಟ್ಟಿ; ಯುದ್ಧದಲ್ಲಿ ಸತ್ತವರನ್ನು ಅಥವಾ ಗಾಯಗೊಂಡವರನ್ನು ಹೊತ್ತೊಯ್ಯುವುದು ಅಪನಯನ ಕರ್ಮ ಎಂಬ ಬಿಟ್ಟಿ. ಹೀಗೆ ಬಿಟ್ಟಿಗಳು ಮೂರು ಬಗೆಯಾದ್ದರಿಂದ ಕನ್ನಡದಲ್ಲಿ ಅದನ್ನು ಮೂವಿಟ್ಟಿ ಎನ್ನುತ್ತಿದ್ದರು (ಮೂರು+ಬಿಟ್ಟಿ). ಕನ್ನಡದಲ್ಲಿ 'ಮೂವಿಟ್ಟಿ' ಎಂಬ ಪದವು 'ಪಂಪಭಾರತ'ದಲ್ಲಿಯೇ ಬಂದಿದೆ. ಅಲ್ಲಿನ 'ಮೂವಿಟ್ಟಿಯ ಒಕ್ಕಲ್' ಎಂಬ ಮಾತಿಗೆ ಮೂವಿಟ್ಟಿ ಮಾಡುವ ಜನ ಎಂದರ್ಥ.
ಯುದ್ಧಕಾಲದಲ್ಲಿ ರಾಜನ ಸೈನ್ಯವು ಸಾಗುವ ದಾರಿಯ ಅಕ್ಕಪಕ್ಕದ ಊರುಗಳಲ್ಲಿನ ಯುವಕರನ್ನು ಕರೆಸಿಕೊಂಡು ಈ ಬಿಟ್ಟಿ ಕೆಲಸಗಳನ್ನು ಮಾಡಿಸುತ್ತಿದ್ದರು. ಇದಕ್ಕೆ ಕೂಲಿಯಿಲ್ಲದ್ದರಿಂದಾಗಿ ಜನರಿಗೆ ಬಿಟ್ಟಿ ಎಂದರೆ ಹೆದರಿಕೆಯಿರುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಿಟ್ಟಿಬೆಸ, ಬಿಟ್ಟಿಗೆಯ್ಮೆ, ಬಿಟ್ಟಿಗೆಲಸ ಎಂಬ ಶಬ್ದಗಳೂ ಹಳೆಯ ಕಾವ್ಯಗಳಲ್ಲಿ ಸಿಕ್ಕುತ್ತದೆ. ಪುಕ್ಕಟೆ ಕೆಲಸಕ್ಕೆ ಹೋಗುವುದನ್ನು 'ಬಿಟ್ಟಿವೋಗು' ಎಂದೇ ಕರೆಯುತ್ತಿದ್ದರು. ಕೆಲವು ವೇಳೆ ರಾಜನು (ಯುದ್ಧಕಾಲದಲ್ಲಿ?) ಕೊಟ್ಟಣದಲ್ಲಿ ಬತ್ತ ಕುಟ್ಟಿಸುತ್ತಿದ್ದ, ಅದೂ ಕೂಲಿಯಿಲ್ಲದೆ. ಇದನ್ನು 'ಕೊಟ್ಟಣ ಹಾಕಿಸು' ಎಂದು ಶಾಸನಗಳು ಕರೆಯುತ್ತವೆ. ಹೀಗಾಗಿ ಬಿಟ್ಟಿ ಎಂದರೆ ವ್ಯರ್ಥ ಎಂಬ ಅರ್ಥವೂ ಪ್ರಾಪ್ತವಾಯಿತು. 'ಬಿಟ್ಟಿವೇಳ್' ಎಂದರೆ ವ್ಯರ್ಥವಾದ ಮಾತಾಡು ಎಂಬ ರೂಪವು ಬಂದಿದೆ. ಭಕ್ತಿಯಿಲ್ಲದೆ ಮಾಡುವ ಪೂಜೆಯನ್ನು ಬಸವಣ್ಣನು 'ಅರಸಯದ ಬಿಟ್ಟಿ' ಎನ್ನುತ್ತಾನೆ. ಯುದ್ಧಕಾಲದಲ್ಲಿ ರಾಜನಿಗೆ ಅವನ ಕಣ್ಣಿಗೆ ಬೀಳುವಂತೆ ಬಿಟ್ಟಿಯ ಮೂಲಕ ಸಹಾಯ ಮಾಡಿದರೆ ಶಾಂತಿಕಾಲದಲ್ಲಿ ಅವನು ಸಹಾಯಮಾಡಿಯಾನು; ಆದರೆ ರಾಜನಿಗೆ ತಿಳಿಯದೆ ಮಾಡಿದ ಬಿಟ್ಟಿ ವ್ಯರ್ಥ ಎಂಬುದು ಬಸವಣ್ಣನ ಮಾತಿನ ಅರ್ಥ.
=====
ಬಿಸಿಲು: ಸೂರ್ಯನ ಬೆಳಕನ್ನು ತಿಳಿಸುವ ಕನ್ನಡದ ಈ ಶಬ್ದ ತಮಿಳು ಮಲಯಾಳಂಗಳಲ್ಲಿ 'ಚೆಯಿಲ್' ಎಂದೂ, ತುಳುವಿನಲ್ಲಿ 'ಬಿಸುಲು' ಎಂದೂ ಬಳಕೆಯಲ್ಲಿದೆ. "ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ .. .. ಪೊಕ್ಕುದಾಗ ಬಗೆದಾ ಕೊಳನಂ" ಎಂಬುದು 'ಕವಿರಾಜಮಾರ್ಗ'ದ ಮಾತು. ಖಬಿಸಿಲಂ ಬೆಳ್ದಿಂಗಳುಮಂ ಪಸರಿಸೆ ಕೞ್ತಲೆ ತೆರಳ್ದು" ಎಂಬ ವರ್ಣನೆ 'ಆದಿಪುರಾಣ'ದ್ದು. ವಿಶಿಷ್ಟವಾಗಿ ತಯಾರಿಸಿದ "ತಿಲತೈಲಮನಲ್ಲಿ ಪೊಯ್ದು ಬೞಿಕೇಳುದಿನಂ ಬಿಸಿಲೊಳದನಿಟ್ಟು ಚಂಪಕಕುಸುಮದಿನಿಂಬಾಗೆ" ಪ್ರತಿವಾಸನೆಯಿತ್ತರೆ ಚಂಪಕತೈಲವೆನಿಸುತ್ತದೆ ಎಂಬುದು 'ಲೋಕೋಪಕಾರಂ'ನ ವಿವರಣೆ. "ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ" ಎಂಬ ಬೆಡಗಿನ ಮಾತು ಅಲ್ಲಪ್ರಭುವಿನದು. ಗುರುಕರುಣೆಯಾದಾಗ ಪ್ರಾಪಂಚಿಕತೆಯು "ಬಿಸಿಲ ಮುಂದಣ ಮಂಜಿನಂತಾಯಿತ್ತು" ಎಂದು ಕೋಲಶಾಂತಯ್ಯನೆಂಬ ವಚನಕಾರ ವರ್ಣಿಸುತ್ತಾನೆ. ಇದರಂತೆಯೇ ಆತನು "ಮಂಜಿನ ಹರಿಗೆಯ ಬಿಸಿಲಂಬು ತಾಗಿದಂತಾಯಿತ್ತು" ಎಂದು ಮತ್ತೊಂದೆಡೆ ಹೇಳುತ್ತಾನೆ. "ಬಿಸಿನಿ ಬಿಸಿಲಂ ಉಟ್ಟಳೆಂಬಂತೆ" ಎಂಬ ಸುಂದರ ಚಿತ್ರವನ್ನು 'ರಾಜಶೇಖರವಿಳಾಸ'ದಲ್ಲಿ ಕಾಣಬಹುದು.
'ಬಿಸಿಲುಗೊಳ್' ಎಂದರೆ ಪ್ರಕಾಶಮಾನವಾಗು ಎಂದು: "ದೇವನ ದಿವ್ಯಚ್ಛಾಯೆ ಪ್ರತಿಬಿಂಬಿಸೆ ಬಿಸಿಲುಗೊಂಡು ಸೋಂಕಿದ ಕಣ್ಣಂ ತುಳ್ಕೆ" - ಪೊನ್ನನ 'ಶಾಂತಿಪುರಾಣ'ದ್ದು. ಕವಿಗಳು ಬಿಸಿಲು ಶಬ್ದದಿಂದ ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡರು. 'ಬಿಸಿಲ್ಗುದುರೆ' ಎಂದರೆ ಮರೀಚಿಕೆ, ಭ್ರಾಂತಿ: "ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ" - 'ಪಂಪಭಾರತ'. 'ಬಿಸಲ್ಮೞೆ' ಬಿಸಿಲು ಮಳೆ ಎಡರೂ ಒಟ್ಟಿಗಿರುವುದು: "ಅರಲಂ ಸುಱಿದಪುದೆನೆ ಸುರಿವ ಬಿಸಿಲ್ಮಗಳೆಸೆದುವಭ್ರಾಂಗಣದೊಳ್" 'ಜಗನ್ನಾಥ ವಿಜಯ'. ಹಗಲು ಜೊತೆಯಾಗಿರುವ ಚಕ್ರವಾಕ ಪಕ್ಷಿಯನ್ನು 'ಬಿಸಿಲ್ವಕ್ಕಿ' ಎಂದು ಕರೆಯುತ್ತಾನೆ ವೆಂಕಾಮಾತ್ಯ ತನ್ನ 'ರಾಮಾಯಣ'ದಲ್ಲಿ: "ಬನವಂ ಪಗಲಂ ಬಿಸಿಲ್ವಕ್ಕಿ ಸೋಗೆ ಕಾರ್ಮುಗಿಲಂ:. 'ಬಿಸಿಲ್ದೊರೆ' (ಬಿಸಿಲಿನ ನದಿ) ಎಂಬ ರೂಪಕ ಕುವೆಂಪು ಅವರದು: "ಮಿಥ್ಯೆ ತಾಂ ಪುಸಿಸಾಸದ ಬಿಸಿಲ್ದೊರೆಯ ಬೇಂಟೆಯಿಂ ಬೇಸತ್ತು" 'ಶ್ರೀ ರಾಮಾಯಣ ದರ್ಶನಂ". "ಬಿಸಿಲ್ಹಣ್ಣು ಕಂಡೀದಿ ಬೆಳದಿಂಗಳ ಕಂಡೀದಿ" ಎಂದು ಕಷ್ಟವನ್ನು 'ಬಿಸಿಲ್ಹಣ್ಣು' ಎಂದವರು ಬೇಂದ್ರೆ ('ಬಿಸಿಲು ಬಾಳೆಹಣ್ಣು' ಇಂದಿಗೂ ಇದೆ). "ಬೆನ್ನು ಹೆಂಚನು ಬಗಿದು ಬಿಸಿಲುಕೋಲಂತಿಳಿದು ಬಂದವರು ಮಾವನವರೇ?" ಎಂಬುದು 'ಬಿಸಿಲ ಕೋಲು' ಎಂಬ ಕೆಎಸ್‍ನ ಕವನದ ಸಾಲು. "ಮೇಲಿಂದ ಬಿಸಿಲುಗಳು ಕಾಯಿಸಲು ಬಯಲಲ್ಲಿ" - ಇಲ್ಲಿ ವಿಸೀ ಈ ಶಬ್ದದ ಬಹುವಚನ ಬಳಸುತ್ತಾರೆ.
=====
ಬೀಜ: ಇದೊಂದು ಸಂಸ್ಕೃತ ಶಬ್ದ. ಬೀಜ ಶಬ್ದಕ್ಕೆ 'ಅಮರಕೋಶ'ವು ಒಂದೆಡೆ "ಹೇತುರ್ನಾ ಕಾರಣಂ ಬೀಜಂ" ಎಂದರೆ, ಮತ್ತೊಂದೆಡೆ "ಶುಕ್ರಂ ತೇಜೋ ರೇತಸೀಚ ಬೀಜವೀರ್ಯೇಂದ್ರಿಣಿಯಾಣಿ ಚ" ಎನ್ನುತ್ತದೆ; ಅಂದರೆ ಕಾರಣ ಹಾಗೂ ಸಂತಾನೋತ್ಪತ್ತಿ ಸತ್ವ. "ಹೇತು ನಿದಾನಂ ಬೀಜಂ" ಎಂದೇ 'ಅಭಿಧಾನ ವಸ್ತುಕೋಶ' ಅರ್ಥ ಕೊಡುತ್ತದೆ. "ರಾಜಬೀಜ ಸಂಜನಿತ ಗುಣಂ ಮದಂ" ಎಂಬುದು 'ಪಂಪಭಾರತ'ದ ವಾಕ್ಯ. ಬೇಂದ್ರೆಯವರ 'ಸಖೀಗೀತ'ದಲ್ಲಿ ಬರುವ "ಚೈತ್ರ ವೈಶಾಖಗಳು ಜೈತ್ರಯಾತ್ರೆಗೆ ಹೊರಟು ಪ್ರಾಯವ ಕೈಸೆರೆಗೊಳಿಸುತಿರೆ; ಮೈತ್ರಿಯ ಬೀಜವು ಮದುವೆ ಮುಹೂರ್ತಕೆ ಆಗಾಗ ಕಲ್ಲೊಳು ಬೀಳುತಿದೆ" ಎಂಬ ಮಾತಿನಲ್ಲಿಯೂ ಈ ಅರ್ಥ ಸೂಚಿತವಾದಂತಿದೆ. "ನಿನ್ನದೇ ಬೀಜ; ಸಂತಾನ ನಿನ್ನದೆನ್ನುವುದಕ್ಕೆ ಅಭ್ಯಂತರವೆ ಇಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನಲ್ಲಿ ಈ ಅರ್ಥ ಸ್ಪಷ್ಟವಾಗಿದೆ. ಬೀಜ ಉತ್ಪತ್ತಿಯಾಗುವ ವೃಷಣವನ್ನೂ ಬೀಜ ಎನ್ನುವುದು ವಾಡಿಕೆ; ಸಂತಾನವೃದ್ಧಿಗಾಗಿ ಮೀಸಲಾದ ಹೋರಿ 'ಬೀಜದ ಹೋರಿ'.
"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ" ಎಂಬ ಅಕ್ಕಮಹಾದೇವಿಯ ಮಾತಿನಲ್ಲಿ ಈ ಶಬ್ದಕ್ಕೆ ಕಾರಣ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲಿ ಬೀಜ ಶಬ್ದಕ್ಕೆ ಈ ಅರ್ಥಗಳು ಇವೆಯಾದರೂ ವ್ಯಾಪಕವಾಗಿ ಸಸ್ಯಗಳಿಗೆ ಅನ್ವಯಿಸುವಂತೆ ಈ ಮಾತಿನ ಬಳಕೆಯಿದೆ. "ಬೀಜವಿಲ್ಲದೆ ವೃಕ್ಷ ಬೇಳೆಯಬಲ್ಲುದೆ" ಎಂಬುದು ಅಮುಗೆ ರಾಯಮ್ಮನೆಂಬ ವಚನಕಾರ್ತಿಯ ಪ್ರಶ್ನೆ. "ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು?" ಎಂಬ ಕೌತುಕಪೂರ್ಣ ಪ್ರಶ್ನೆಯನ್ನು ಕೇಳುವವಳು ಮೋಳಿಗೆ ಮಹಾದೇವಿ ಎಂಬ ಮತ್ತೊಬ್ಬ ವಚನಕಾರ್ತಿ. "ಬೀಜದಿಂದಾಯಿತ್ತು ಅಂಕುರವೆಂದೆಂಬರು; ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು" ಎಂಬ ಗಾಢಾರ್ಥದ ಮಾತು ಚೆನ್ನಬಸವಣ್ಣನದು. ಮತ್ತೊಂದು ವಚನದಲ್ಲಿ ಈತ "ಬಿತ್ತಿದ ಬೀಜದ ಫಲವು ವಿಪರೀತ ನೋಡಾ" ಎಂದು ಹೇಳುವಾಗ ಬೀಜದಿಂದಲೇ ಫಲ ಎಂಬುದನ್ನೂ ಸೂಚಿಸುತ್ತಿದ್ದಾನೆ. ವಾಸ್ತವ ನೆಲೆಯಲ್ಲಿ ಮಾತನಾಡುವ 'ಲೋಕೋಪಕಾರಂ' ಹಣ್ಣುಗಳನ್ನು ಬಿಡುವ ಮರಗಳ "ಕೊಂಬು ಬೀಜಮಂ ಸೆಗಣದೊಳಗೞ್ದಿ ಬಿತ್ತುಗೆ" ಎಂದು ಸಲಹೆ ನೀಡುತ್ತದೆ. ಬಿತ್ತನೆಯನ್ನು ಕಾವ್ಯಗಳು 'ಬೀಜಾವಾಪ' ಎನ್ನುತ್ತವೆ: "ಅದಿಂ ಬೀಜಾವಾಪಮೆನೆ ಜನ್ಮಲತೆಗೆ ಕಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ" - ಜನ್ನನ 'ಯಶೋಧರ ಚರಿತೆ'.
ಹಣ್ಣು ಕಾಯಿಗಳಲ್ಲಿರುವ ಕಾಳನ್ನೂ ಬೀಜ ಎನ್ನುತ್ತಾರೆ. "ಆ ದಾಡಿಮದ್ರುಮದೊಳ್ ಬಿಡೆ ಸವಿಯಲ್ ಬೀಜಮನುಗಿವೆಡೆಯೊಳ್ ಚಂಚೂಪುಟಂಗಳಂ ಬಿಡದೆಂತುಂ" ಎಂಬುದು 'ಕುಸುಮಾವಳೀ ಕಾವ್ಯ'ದ ವರ್ಣನೆ. 'ಬೀಜಕೋಶ'ವೆಂದರೆ ಅಂಡಾಶಯ: "ವರಾಳಕಂ ಬೀಜಕೋಶಮದು ಕರ್ನ್ನಿಕೆಯುಂ" - 'ಅಭಿಧಾನ ವಸ್ತುಕೋಶ'. 'ಬೀಜವೃಕ್ಷನ್ಯಾಯ' ಎಂಬುದು ಕಾರ್ಯಕಾರಣಗಳ ಸಾತತ್ಯವನ್ನು ಸೂಚಿಸುವ ಪರಿಕಲ್ಪನೆಯಾಗಿದೆ.
=====
ಬೆಳಗು1: ಕನ್ನಡದಲ್ಲಿ ಇದರ ಇನ್ನೊಂದು ರೂಪ ಬೆಳಕು. ಈ ಶಬ್ದ ಕ್ರಿಯಾರ್ಥ ಹಾಗೂ ನಾಮವಾಚಕವಾಗಿ ಬಳಕೆಯಲ್ಲಿದೆ. ನಾಮವಾಚಕವಾಗಿ ಇದು ತಮಿಳು ಮಲಯಾಳಂಗಳಲ್ಲಿ ವಿಳಕ್ಕು ಎಂದೂ, ತೆಲುಗಿನಲ್ಲಿ ವೆಲುಗು ಎಂದೂ ರೂಢಿಯಲ್ಲಿದೆ. ಇದರ ಅರ್ಥ ಕಾಂತಿ, ಹೊಳಪು ಎಂದು "ಅಱಿಗೆ ಬೆಳಗುಂ ದ್ಯುತಿಯುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ತೋರ ಮಾಣಿಕಂಗಳ ಬೆಳಗಿಟ್ಟಳಂ ತನಗೊಡಂಬಡೆ" ಎಂಬುದು 'ಪಂಪಭಾರತ'ದ ಮಾತು. "ಬೆಳಗುವ ಜ್ಯೋತಿಯ ತಿರುಳಿನಂತೆ ಕಂಗಳ ಕಾಂತಿ" ಎಂಬ ಅಲ್ಲಮನ ಸುಂದರ ಮಾತಿನಲ್ಲಿಯೂ ಈ ಅರ್ಥವಿದೆ. ಹಗಲು ಎಂಬರ್ಥದಲ್ಲಿಯೂ ಬೆಳಗು ಶಬ್ದಕ್ಕೆ ಅರ್ಥವಿದೆ. "ಬೆಳಗಿನೊಳಂ ಕಾಣದು ನಿಶೆಯೊಳ್ ಕಾಣ್ಬುದು ಪೆಗ್ಗಣಕ್ಕೆ" ಎಂಬ ವಾಕ್ಯ 'ಧರ್ಮಾಮೃತ'ದ್ದು. "ಚೋರಂಗೆ ಬೆಳಗು ಗುಣವಪ್ಪುದೆ" ಎಂಬ ಘಟ್ಟಿವಾಳಯ್ಯನೆಂಬ ವಚನಕಾರನ ಮಾತಿನಲ್ಲಿಯೂ ಇದೇ ಅರ್ಥವೇ ಇದೆ. 'ಬೆಳಗಪ್ಪ ಜಾವ' ಅಥವಾ 'ಬೆಳುಗು ಜಾವ' ಹಗಲಿನ ಆರಂಭದ ದೆಸೆಯನ್ನು ಸೂಚಿಸುತ್ತದೆ: "ಬೆಳಗಪ್ಪ ಜಾವದೊಳ್ ಪದಿನಾರು ಕನಸುಗಳಂ ಕಂಡೆಂ" ಎಂಬುದು 'ಆದಿಪುರಾಣ'ದ ಮಾತಾದರೆ, "ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ" ಎಂಬುದು ಅಲ್ಲಮನ ಮಾತು. ಇದಕ್ಕೆ ಜ್ಞಾನ ಎಂಬರ್ಥವೂ ಸೂಚಿತವಾಗುತ್ತದೆ: "ಬೆಳಗಿನೊಳಗಣ ರೂಪ ತಿಳಿದು ನೋಡಿಯೆ ಕಳೆದು ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ - ಆತ ಲಿಂಗಪ್ರಸಾದಿ" ಎಂಬುದೂ ಅಲ್ಲಮನ ಮಾತು. "ಬೆಳಗು ಬೆಳಗು ಹಳಚುವಲ್ಲಿ ಕತ್ತಲೆ ಉಳಿಯಬಲ್ಲುದೆ ಅಯ್ಯಾ?" ಎಂಬ ಅದ್ಭುತವಾದ ಪ್ರಶ್ನೆಯು ಸಿದ್ಧರಾಮನದು. 'ಬೆಳಗಾಗು' ಎಂದರೆ ಹಗಲು ಆರಂಭವಾಗು ಎಂದರ್ಥ. "ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ, ಒಂದು ದಿನ, ಒಂದೇ ಒಂದು ದಿನವಾದರೂ ಈ ರಾತ್ರಿ ಮುಗಿಯದಿರಲಿ" ಎಂಬುದು ಜಿ.ಎಸ್. ಶಿವರುದ್ರಪ್ಪನವರ 'ಬೆಳಗು'ಕವನದ ಆರಂಭದ ಸಾಲುಗಳು. 
ಬೆಳಕು ಎಂಬ ರೂಪವೂ ಬಳಕೆಯಲ್ಲಿತ್ತು, ಈಗಲೂ ಇದೆ: "ಬೆಳಕೆನೆ ದೀಪಂ" ಎಂಬುದು ರನ್ನನ ನನಘಂಟಿನ ಅರ್ಥ. ಮನೆಗೆ ಬೆಳಕನ್ನು ತರುವ ಗವಾಕ್ಷವನ್ನು ವೃತ್ತವಿಲಾಸನ 'ಧರ್ಮಪರೀಕ್ಷೆ'ಯು 'ಬೆಳಕಂಡಿ' ಎನ್ನುತ್ತದೆ: "ನೆಲನಗಲಕೆ ತೀವಿದ ಕೞ್ತಲೆಯಂ ಕಳೆಯಲ್ಕೆ ಗಗನದೊಳ್ ಪಲವುಂ ಬೆಳಕಂಡಿಗಳಂ ಸಮೆದಂ"." "ಜ್ಞಾನದೀಪದ ಬೆಳಕಲಿ ಓಡಾಡಬೇಕು" ಎಂಬ ಪುರಂದರದಾಸರ ಮಾತಿನಲ್ಲಿ ಈ ಶಬ್ದಕ್ಕೆ ಜ್ಜಾನ ಎಂಬರ್ಥ ಸ್ಪಷ್ಟವಾಗಿಯೇ ಇದೆ. 'ಬೆಳಕು ಹರಿ' ಎಂದರೆ ಬೆಳಗಾಗು ಎಂದರ್ಥ. "ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲ ತೊಯ್ದಾ" ಎಂಬುದು ಬೇಂದ್ರೆಯವರ 'ಬೆಳಗು' ಎಂಬ ಪ್ರಸಿದ್ಧವಾದ ಪದ್ಯದ ಸಾಲು. 'ಬೆಳಕಿಗೆ ತಾ' (ಪ್ರಕಟಗೊಳಿಸು), ಬೆಳಕು ಚೆಲ್ಲು (ಸ್ಪಷ್ಟವಾಗಿಸು), ಬೆಳ್ಳಂಬೆಳಕು (ತೀರ ಸ್ಪಷ್ಟ) ಮುಂತಾದ ಅನೇಕ ನುಡಿಗಟ್ಟುಗಳನ್ನು ಬೆಳಕು ಶಬ್ದದಿಂದ ಸೃಷ್ಟಿಸಿಕೊಳ್ಳಲಾಗಿದೆ.
======
 ಬೇಸರ: ಇದರ ಮೂಲ ಕನ್ನಡದಲ್ಲಿ 'ಬೇಸರು'. ಇದು ಹಳಗನ್ನಡದಲ್ಲಿ ಬೇಜಾರುಮಾಡಿಕೋ ಮತ್ತು ಬೇಜಾರು ಎಂಬ ಕ್ರಿಯಾರ್ಥಕ ಹಾಗೂ ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ತಮಿಳಿನಲ್ಲಿದು 'ವೇಚರು' ಆಗಿದ್ದರೆ, ತೆಲುಗಿನಲ್ಲಿ 'ವೇಸರು'  ಎಂದೂ ಮಲಯಾಳಂ ಮತ್ತು ತುಳುಗಳಲ್ಲಿ ನಾಮವಾಚಕವಾಗಿ ಕ್ರಮವಾಗಿ 'ವೇಚರು' ಹಾಗೂ 'ಬೇಸರ್' ಎಂದೂ ಬಳಕೆಯಲ್ಲಿದೆ. ಕ್ರಿಯಾರ್ಥದಲ್ಲಿ 'ಕವಿರಾಜಮಾರ್ಗ'ದಲ್ಲಿಯೇ ಇದರ ಪ್ರಯೋಗವಿದೆ: "ವಾಸುಗಿಯುಂ ಬೇಸರುಗುಂ ದೇಶಿ ಬೇವೇರಪ್ಪುದಂ". ಈ ಅರ್ಥದಲ್ಲಿಯೇ "ಬೇಸಱಿಸು' ಎಂಬ ರೂಪವೂ ಬಳಕೆಯಲ್ಲಿತ್ತು: "ಪಿರಿದುಂ ಬೇಸಱಿಸಿದುವು ಬಿರಯಿಯಂ ಜಳದಂಗಳ್" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಅರ್ಥದಲ್ಲಿಯೇ ರನ್ನನು 'ಬೇಸಱೆಯ್' ಎಂದು ಪ್ರಯೋಗಿಸುತ್ತಾನೆ: "ಒನಲಂ ಅಳ್ಕಂ ಚಳವಳಿಸಂ ಚಪ್ಪರಿಸಂ ತಳವಳಿಸಂ ಬೇಸಱೆಯ್ದು ಬೆಳ್ಮೊಗದಿನಿರಂ" ('ಅಜಿತಪುರಾಣ'). ನಡುಗನ್ನಡಲ್ಲಿ ಕೊಳ್ ಪ್ರತ್ಯಯವನ್ನು ಪಡೆದು ಕ್ರಿಯಾರ್ಥದಲ್ಲಿ ಬಳಕೆಗೆ ಬಂತು: ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ "ಬೇಸರುಗೊಂಬ ತತ್ಕುವರಿಯ ಮನದೊಳಗಾಸರು ಬಹಳ ವೆಗ್ಗಳಿಸಿ" ಎಂಬ ಮಾತಿದೆ. 'ಬೇಸರು' ಎಂಬ ಮಾತಿಗೆ ಆಲಸ್ಯ ಎಂಬ ಅರ್ಥವೂ ಇದೆ ("ಬೇಸರು-ಆಲಸ್ಯೇ" 'ಶಬ್ದಮಣಿದರ್ಪಣ').
ನಾಮಪದವಾಗಿಯೂ ಇದರ ಬಳಕೆ ಹಿಂದಿನಿಂದಲೂ ಇದೆ. ಪಂಪನ 'ಆದಿಪುರಾಣ'ದಲ್ಲಿ "ತನ್ನ ಸೂಳೆಯ ಬೇಸಱಂ ಕೆಳೆಯಂಗಿಂತೆಂದಂ" ಎಂಬ ಪ್ರಯೋಗವಿದೆ. 'ಕುಮಾರವ್ಯಾಸ ಭಾರತ'ದಲ್ಲಿ "ಘನಸಂಗರಕೆ ಬೇಸರು ತೋಱಿತೇ" ಎಂಬ ಮಾತಿದೆ. ಕನಕದಾಸರು ತಮ್ಮ 'ನಳಚರಿತ್ರೆ'ಯಲ್ಲಿ 'ಬೇಸರ' ರೂಪವನ್ನು ಬಳಸುವುದುಂಟು: "ಸತಿಯರ ಮನ್ನಣೆಗೆ ಮೈಗೊಡವಿ ಬಲುಬೇಸರದಿ ಬಳಲುವಳು".
ಆಸರು-ಬೇಸರು ಎಂಬಿವು ಕೆಲವೇಳೆ ಜೋಡಿಪದವಾಗಿ ಬರುತ್ತದೆ. ಬೇಸರು ಮಾನಸಿಕ ಸ್ಥಿತಿಯಾದರೆ ಆಸರು ಎಂದರೆ ದೇಹದ ದಣಿವು. "ಈ ಗತಿಯುಡುಗದಾರದೆ ಬೇಸರದೆ" ಎಂಬುದು ಭೀಮಕವಿಯ 'ಬಸವಪುರಾಣ'ದ ಪ್ರಯೋಗ. "ಅಲ್ಲಮಲಿಂಗನಿದಿರಲಿ ಸೂಸಿದರು ತಮ್ಮೊಡತಿಯಾಸರುಬೇಸಲ್ಲವನು" ಎಂಬುದು ಚಾಮರಸನ 'ಪ್ರಭುಲಿಂಗಲೀಲೆ'ಯ ಮಾತು.
'ಬ್ಯಾಸರ' ಎಂಬುದು ಆಡುಮಾತಿನ ರೂಪ. "ಕವಿಜೀವದ ಬ್ಯಾಸರ ಹರಿಸಾಕ ಹಾಡ ನುಡಿಸಾಕ ಹೆಚ್ಚಿಗೇನು ಬೇಕ ಒಂದ ಹೂತ ಹುಣಿಸೇಮರ ಸಾಕ" ಎಂಬುದು ಬೇಂದ್ರೆಯವರ ಕವನವೊಂದರ ಸಾಲು. ಬ್ಯಾಸರಿಕೆ ಎಂಬ ರೂಪವೂ ಬಳಕೆಯಲ್ಲಿದೆ.
=====
ಬೇಸಾಯ: ಇದು ಸಂಸ್ಕೃತದ 'ವ್ಯವಸಾಯ' ಎಂಬ ಶಬ್ದದ ತದ್ಭವ. ಇದು ಹಿಂದಿನ ಕಾವ್ಯಗಳಲ್ಲಿ ಬೆವಸಾಯ, ಬವಸ, ಬವಸು ಮುಂತಾದ ರೂಪಗಳಲ್ಲಿಯೂ ದೊರೆಯುತ್ತದೆ. "ಎರಡಾರ ಬೆವಸಾಯಂ; ಹತ್ತು ಹಸುಕಱೆಹ" ಎಂಬುದು 'ಪಂಚತಂತ್ರ'ದ ಮಾತು. "ಬೆವಸಾಯವ ಮಾಡಿ ಬೀಯಕ್ಕೆ ಬತ್ತವಿಲ್ಲರ್ದಿಡೆ" ಎಂಬುದು ಅಲ್ಲಮಪ್ರಭುವಿನ ವಚನದ ಭಾಗ. "ಬವಸೆಂದು ವ್ಯವಸಾಯಂ" ಎಂದು 'ಶಬ್ದಮಣಿದರ್ಪಣ' ಅರ್ಥ ಕೊಡುತ್ತದೆ. "ದಾರುಣ ಸಂಸರಣ ವಿಷೋರ್ವೀರುಹಮಂ ಕೀಳ್ವ ಬವಸೆಯಿಂದಿರ್ದಪನೀ ಧೀರಂ" ಎಂಬುದು 'ಪಂಪರಾಮಾಯಣ'ದಲ್ಲಿ ಬರುವ ಮಾತು.  "ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ" ಎಂಬುದು 'ಸೋಮೇಶ್ವರ ಶತಕ'ದ ಮಾತು. ಹನ್ನೆರಡನೆ ಶತಮಾನದ ಶಾಸನವೊಂದರಲ್ಲಿ "ಆತನ ಬ್ಯವಸಾಯ ಬ್ಯವಹಾರವೆನ್ತೆನೆ" ಎಂಬ ಪ್ರಯೋಗವಿದೆ. ಬೇಸಾಯ ಮಾಡುವವನೇ 'ಬೇಸಾಯಗಾರ'. ಎಂ.ಆರ್. ಶ್ರೀ. ವಚನಕಾರರನ್ನು "ಅಚ್ಚಗನ್ನಡದ ಬೇಸಾಯಗಾರರು" ಎಂದು ಕರೆಯುತ್ತಾರೆ.
ಬೆವಸಾಯ ಎಂಬ ಶಬ್ದವನ್ನು 'ಧರ್ಮಾಮೃತ'ವು ಪ್ರಯತ್ನ ಎಂಬರ್ಥದಲ್ಲಿ ಬಳಸುತ್ತದೆ: "ಪುಣ್ಯಮಿಲ್ಲದೆ ಬೆವಸಾಯದಿಂ ಸಿರಿಯಕ್ಕುಮೆಂದೆಯಪ್ಪೊಡೆ". 'ಪಂಪಭಾರತ'ದಲ್ಲಿ "ಬೆವಸಾಯಂಗೆಯ್' ಎಂಬ ನುಡಿಗಟ್ಟಿನ ಅರ್ಥ ಪ್ರಯತ್ನ ಮಾಡು ಎಂದು: "ಬೆವಸಾಯಂಗೆಯಲ್ ಇನ್ನುಮುಂಟು ಎಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂಡವರಂ ಗೆಲ್ವುದಸಾಧ್ಯಮಾಯ್ತೇ". ಸಿದ್ಧತೆಯನ್ನು ಶಾಸನವೊಂದು 'ಬವಸ' ಎನ್ನುತ್ತದೆ: "ಕವಿದುರ್ಗ್ಗಂ ಚಾತುರಂಗಂ ಬವಸ ದಳವುಳಂ" (ಹನ್ನೊಂದನೆಯ ಶತಮಾನದ ಶಾಸನ). ವೃತ್ತಿ, ಕೆಲಸ ಎಂಬರ್ಥದಲ್ಲಿ ಬವಸ ಎಬ ಶಬ್ದವನ್ನು ಅಗ್ಗಳನ 'ಚಂದ್ರಪ್ರಭಪುರಾಣ' ಬಳಸುತ್ತದೆ: "ಎನಗೆ ಮನೋಭವನೆ ದೇವಂ ಬಸನಮೆ ಬವಸಂ ಬಲವೆ ಕುಲಧನಂ".
ವ್ಯವಸಾಯ ಶಬ್ದವೂ ಬಳಕೆಯಲ್ಲಿದೆ. ಮೂಲತಃ ಈ ಅರ್ಥಕ್ಕೆ ಸಂಸ್ಕೃತದಲ್ಲಿ ಪ್ರಯತ್ನ, ನಿಶ್ಚಯ, ಆಚರಣೆ ಮುಂತಾದ ಅರ್ಥಗಳಿವೆ. ಈ ಪದಕ್ಕೆ ಕನ್ನಡದಲ್ಲಿ ಕೃಷಿ ಎಂಬರ್ಥದ ಜೊತೆಗೆ ಪ್ರಯತ್ನ ಎಂಬರ್ಥವಿದೆ. "ಈತನ ಭಕ್ತಿಗಂ ವ್ಯವಸಾಯಕ್ಕಂ ಮೆಚ್ಚಿ ತನ್ನ ತಂದ ಎರ್ಮ್ಮೆಗಳೊಳೊಂದುಮಂ ಕೊಳ್ಳದೆ" ಎಂಬ ಶಾಂತಿನಾಥನ 'ಸುಕುಮಾರಚರಿತೆ'ಯ ಮಾತಿನಲ್ಲಿ ಈ ಅರ್ಥವಿದೆ. ಪ್ರಯತ್ನ ಮಾಡದವನನ್ನು 'ಸಮಯ ಪರೀಕ್ಷೆ' "ಬೆವಸಾಯಹೀನ" ಎಂದು ಕರೆಯುತ್ತದೆ. ಅದೇ ಉತ್ಸಾಹದಿಂದ ಕೆಲಸಮಾಡುವವನನನ್ನು 'ಮಹಾವ್ಯವಸಾಯಿ' ಎನ್ನುತ್ತದೆ: "ಭುವನೈಕಮಲ್ಲದೇವನ ಭವನದೊಳಂ ತಾನೆ ಮಾನಸಂ ತಾನೆ ಮಹಾವ್ಯವಸಾಯಿ". ವ್ಯವಸಾಯ ಮಾಡುವವನೇ ವ್ಯವಸಾಯಗಾರ.
=====
ಭೋಗ1: ಈ ಸಂಸ್ಕೃತಮೂಲದ ಶಬ್ದವು ವ್ಯಾಪಕವಾಗಿ ಬಿಡಿಯಾಗಿಯೂ ಸಮಾಸಗಳಲ್ಲಿಯೂ ಬಳಕೆಯಲ್ಲಿದೆ. "ಭೋಗಂ ವಿಷಯಾನುಭವಂ" ಎಂದು ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸೂತ್ರಬದ್ಧವಾಗಿ ಹೇಳುತ್ತದೆ. ವಿಷಯಾನುಭವ ಎಂದರೆ ಇಂದ್ರಿಯಾನುಭವಗಳು. ಹೀಗಾಗಿ ಸುಖವನ್ನು ತರುವ ವಸ್ತುಗಳೂ ಭೋಗಗಳೇ: "ಅಮರಾಧಿಪಪ್ರಹಿತಸುರತರುಪ್ರಸೂನಗ್ರತ .. .. ಸುರಭಿವಿಲೇಪನ ಪ್ರಮುಖ ಭೋಗೋಪಭೋಗಂಗಳೊಳಂ" ಎಂಬುದು 'ಆದಿಪುರಾಣ'ದ ಮಾತು. ಇಲ್ಲಿ ಬಂದಿರುವ 'ಉಪಭೋಗ'ವೂ ವಿಷಯಸುಖ ಎಂಬರ್ಥವುಳ್ಳದ್ದು. 'ಅಭಿಧಾನ ವಸ್ತುಕೋಶ'ದಲ್ಲಿಯೇ "ಅನುಭವಂ ಉಪಭೋಗಂ" ಎಂಬರ್ಥ ಹೇಳಿದೆ. ಹೀಗೆ ಅನುಭವಿಸಬಹುದಾದುದೇ 'ಉಪಭೋಗ್ಯ'. ಪಂಪನ 'ಆದಿಪುರಾಣ'ದಲ್ಲಿನ "ಎನಗೊರ್ವಂಗುಪಭೋಗ್ಯಮಲ್ತು ವಸುಧಾ ಸಾಮ್ರಾಜ್ಯಂ ಓರಂತೆ ನಿಮ್ಮನಿಬರ್ಗಂ" ಎಂಬ ಮಾತನ್ನು ಗಮನಿಸಿ. 'ಅನುಭೋಗ' ಎಂದರೂ ವಿಷಯಸುಖವೇ. "ತನ್ನ ಸತಿಯುಂ ತಾನುಂ ಸುರತಾನುಭೋಗದಲಿ" ಎಂಬುದು ಭೀಮಕವಿಯ 'ಬಸವಪುರಾಣ'ದ ಮಾತು. ಭೋಗವನ್ನು ಅನುಭವಿಸಬೇಕೆಂಬ ತೀವ್ರವಾದ ಆಸೆಯೇ 'ಭೋಗತೃಷ್ಣೆ': "ತನ್ನ ಭೋಗತೃಷ್ಣೆಯಂ ತಾನೆ ತನ್ನ ಮನದೊಳ್ ನಿಂದಿಸುತ್ತುಂ" ('ಆದಿಪುರಾಣ'). ಭೋಗಿಸುವವನೇ 'ಭೋಗಿ', ಅಂದರೆ ರಸಿಕ. "ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ" ಎಂಬುದು ಜನ್ನನ 'ಅನಂತನಾಥಪುರಾಣ'ದ ಮಾತು.
ಭೋಗವನ್ನು ಅನುಭವಿಸುವ ಭೂಮಿಯೇ 'ಭೋಗಭೂಮಿ'. ಸತ್ತಮೇಲೆ ಪುಣ್ಯಫಲಗಳನ್ನು ಅನುಭವಿಸುವ ಸ್ವರ್ಗವನ್ನೇ ಭೋಗಭೂಮಿ ಎನ್ನುತ್ತಿದ್ದರು. ಅಗ್ಗಳನು ತನ್ನ 'ಚಂದ್ರಪ್ರಭಪುರಾಣ'ದಲ್ಲಿ "ಭೋಗಭೂತಲ' ಎಂಬ ಶಬ್ದವನ್ನು ಈ ಪದಕ್ಕೆ ಸಮಾನಾರ್ಥಕವಾಗಿ ಬಳಸಿದ್ದಾನೆ: "ತನ್ನೊಳೆ ಸರಿದೊರೆ ಸುರರೇಂ ಭೋಗಭೂತಲಂ ಸುಖಮಯಮೋ". ಹೀಗಾಗಿ ಪುಣ್ಯವಂತರು ಹುಟ್ಟುವ ಪ್ರದೇಶವನ್ನು ಪೊನ್ನ ತನ್ನ 'ಶಾಂತಿಪುರಾಣ'ದಲ್ಲಿ ಈ ಹೆಸರಿನಿಂದ ಕರೆದಿದ್ದಾನೆ: "ಈ ಭರತಾವನಿ ಭೋಗಭೂಮಿ ಭೂಭಾಗಿ ಸುಖಾವಾಪ್ತಿಯಂ ಪಡೆದುದು". ಪಂಪನು 'ಆದಿಪುರಾಣ'ದಲ್ಲಿ 'ಭೋಗಭೂಮಿ'ಯನ್ನು ಒಂದೆಡೆ 'ಸುಖದ ಭೂಮಿ' ಎಂಬರ್ಥದಲ್ಲಿ ಬಳಸಿದರೂ ("ಉತ್ತರಕುರುವೆಂಬ ಭೋಗಭೂಮಿಯೆ ಜನ್ಮಭೂಮಿಯಾದುದು") ಅದನ್ನು ಬೇರೆ ರೀತಿಯಲ್ಲಿಯೂ ಆರ್ಥೈಸುತ್ತಾನೆ: "ಭೋಗಭೂಮಿವಿರಾಮದೊಳ್ ಈ ಕರ್ಮಭೂಮಿ ಪ್ರಾರಂಭದೊಳ್" ಎಂಬ ಮಾತುಗಳಲ್ಲಿ ಮನುಷ್ಯರಿಗೆ ಪ್ರಕೃತಿಯಲ್ಲಿ ತಾನಾಗಿ ಆಹಾರ ಸಿಕ್ಕುತ್ತಿದ್ದ ಸ್ಥಿತಿಯನ್ನು 'ಭೋಗಭೂಮಿ' ಎಂದೂ ಗೆಯ್ಮೆ ಮಾಡಿ ಆಹಾರ ಬೆಳೆದುಕೊಳ್ಳಬೇಕಾದ ಸ್ಥಿತಿಯನ್ನು 'ಕರ್ಮಭೂಮಿ' ಎಂದೂ ವಿಭೇದ ಮಾಡುತ್ತಿದ್ದಾನೆ.
=====
ಭೋಗ2: ಭೋಗ ಎಂಬ ಶಬ್ದಕ್ಕೆ ಹಾವು ಹಾಗೂ ಹೆಡೆ ಎಂಬರ್ಥಗಳೂ ಇವೆ. "ಭೋಗಂ ನಾಗನ ಶರೀರಮುಂ ತತ್ಫಣಮುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ಶ್ರೀಮನ್ನಾಗೇಂದ್ರಭೋಗ ಸ್ಫುರದರುಣಮಣಿದ್ಯೋತಿ ಸಂಧ್ಯಾನಿಬದ್ಧಪ್ರೇಮಂ" ಎಂಬುದು 'ಕರ್ಣಾಟಕ ಕಾದಂಬರಿ'ಯ ಮಾತು. 'ಭೋಗ' (ಹೆಡೆ)ವನ್ನುಳ್ಳದ್ದು 'ಭೋಗಿ': "ಉರಗಂ ಭೋಗಿ" ('ಅಭಿಧಾನ ವಸ್ತುಕೋಶ'). "ತತ್ ಭೋಗಿ ಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" 'ಪಂಪಭಾರತ'). 'ಭೋಗಿನಿ' ಎಂದರೆ ಹೆಣ್ಣು ಹಾವು "ಪೆಡೆಯುಡುಗಿದ ಭೋಗಿನಿಯೆಮೆ ಮಿಡುಕಂ ಸಂಗಳಿಸಿದಮರಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಶಬ್ದಕ್ಕೆ ರಾಜನ ಭೋಗದ ಹೆಣ್ಣು ಎಂಬರ್ಥವನ್ನೂ 'ಅಮರಕೋಶ' ನೀಡುತ್ತದೆ: "ಭೋಗಿನ್ಯೋನ್ಯಾ ನೃಪಸ್ತ್ರಿಯಃ".  ಭೋಗೀಂದ್ರ ಎಂದರೆ ನಾಗಗಳ ಒಡೆಯ ನಾಗರಾಜ: "ಇಂದ್ರನೆ ಭೋಗೀಂದ್ರನೆ ಖಚರೇಂದ್ರನೆ ದಲ್ ಭೂಪೇಂದ್ರನೆಂಬನ್ನೆಗಂ" ('ಆದಿಪುರಾಣ').
ಪಂಪನು ಹಾವಿನ ಹೆಡೆಯನ್ನು 'ಭೋಗಿಭೋಗ' ಎಂಬ ಶಬ್ದದಿಂದಲೂ ಸೂಚಿಸುತ್ತಾನೆ: "ಸಂಸೃತಿಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್". 'ಭೋಗರತ್ನ' ಎಂಬುದು ಹಾವಿನ ಹೆಡೆಯಲ್ಲಿರುತ್ತದೆಂದು ನಂಬಲಾಗಿದ್ದ ಮಣಿ: "ಮಿಕ್ಕಂ ವಿಷವಹ್ನಿಯಿಂ ವಿಳಯಕಾಲಜ್ವಾಲೆಯಂ ಭೋಗರತ್ನದ ಚೆಲ್ವಿಂ ದ್ಯುತಿಮಾಲೆಯಂ ಮಸಕದಂಭೋಳಿಯಿಂ ಕಾಳಿಯಂ" ಎಂಬುದು ರುದ್ರಭಟ್ಟನ 'ಜಗನ್ನಾಥವಿಜಯ'ದ ಪ್ರಯೋಗ. 'ಭೋಗವತಿ' ಎಂಬುದು ನಾಗಲೋಕದ ರಾಜಧಾನಿ ಹಾಗೂ ಅಲ್ಲಿನ ಹೊಳೆಯ ಹೆಸರುಗಳು: "ನದೀನಗರ್ಯೋರ್ನಾಗಾನಾಂ ಭೋಗವತ್ಯಥ ಸಂಗರೇ" ('ಅಮರಕೋಶ').
ಭೋಗತಲ್ಪ ವಿಷ್ಣು ಮಲಗಿರುವನೆಂದು ನಂಬಲಾದ ಹಾವಿನ ಹಾಸುಗೆಯನ್ನು ಸೂಚಿಸುತ್ತದೆ: "ಭೋಗತಲ್ಪದ ಹರಿಯೊಲಿಹ ಶತಯಾಗಸುತನನು" ಎಂಬುದು ಕುಮಾರವ್ಯಾಸನ ಮಾತು. ಭೋಗಿಶಯನ ಎಂದರೆ ವಿಷ್ಣು "ಭೋಗಿಶಯನ ಶ್ರೀ ಪುರಂದರವಿಠಲನ" ಎಂಬುದು ಪುರಂದರದಾಸರ ವರ್ಣನೆ. ಹಾವುಗಳನ್ನೇ ತನ್ನ ಕಟಕ (ಕಂಕಣ) ಗಳನ್ನಾಗಿ ಮಾಡಿಕೊಂಡಿರುವವನು ಭೋಗಿಕಟಕ, ಶಿವ: "ಭೋಗಿಕಟಕನ ಗಾಣಪತ್ಯಕೆ ಹೋಗನೇ ತಂತ್ರಂ ಬೆರಸಿ" ಎಂಬ ಮಾತು 'ಬಸವಪುರಾಣ'ದಲ್ಲಿ ಬಂದಿದೆ. 'ಭೋಗಿವಿಭೂಷ' ಎಂದರೆ ಹಾವಿನ ಆಭರಣ; ಅದನ್ನು ಧರಿಸಿದವನೇ ಶಿವ: "ಅಪರ್ಣೆಯ ವಕ್ತ್ರಮನೊರ್ಮೆ ನೇಹದುತ್ಸವದೊಳೆ ನೋಡುತುಂ .. .. ಭೋಗಿವಿಭೂಷನೊಪ್ಪಿದಂ" (ಷಡಕ್ಷರದೇವನ 'ಶಬರಶಂಕರವಿಲಾಸ').
=====
ಮಂತ್ರ1: ತುಂಬ ವ್ಯಾಪಕವಾದ ಬಳಕೆಯ ಸಂಸ್ಕೃತ ಶಬ್ದವಿದು. "ವೇದಭೇದೇ ಗುಪ್ತವಾದೌ ಮಂತ್ರಃ" ಎಂದು 'ಅಮರಕೋಶ'ದಲ್ಲಿ ಹೇಳಿದೆ. ಇದರ ಪ್ರಕಾರ 'ಮಂತ್ರ' ಎಂದರೆ ವೇದದ ಭಾಗ, ರಹಸ್ಯವಾಗಿ ಹೇಳುವುದು ಎಂದರ್ಥ. ಇದಕ್ಕೆ ಬ್ರಾಹ್ಮಣವನ್ನುಳಿದು ಸಂಹಿತೆಯು ಸೇರಿದ ವೇದ ಎಂಬ ವಿವರಣೆಯೂ ಇದೆ. ಹಾಗೆಯೇ  ದೇವತೆಗಳನ್ನು ಒಲಿಸಿಕೊಳ್ಳಲು ಹೇಳುವ ಮಾತು ಎಂಬರ್ಥವೂ ಇದೆ: ಅಸ್ತ್ರಗಳ "ಪ್ರಯೋಗಸಂಹಾರವಿಭಕ್ತಮಂತ್ರಂ"ದ ಉಲ್ಲೇಖ ಕಾಳಿದಾಸನ 'ರಘುವಂಶ'ದಲ್ಲಿದೆ. "ಮಗಳೆ ಬಾ ಕೊಳ್ ಐದು ಮಂತ್ರಾಳಿಗಳಂ" ಎಂಬುದು 'ಕುಮಾರವ್ಯಾಸಭಾರತ'ದ ಮಾತು. ಧಾರ್ಮಿಕ ಆಚರಣೆಗಳಲ್ಲಿ ಮಂತ್ರ-ತಂತ್ರ ಎಂಬೆರಡು ಭಾಗಗಳಲ್ಲಿ 'ಮಂತ್ರ' ಎಂದರೆ ಹೇಳುವ ಅಕ್ಷರಸಮೂಹ ಎಂಬರ್ಥ ಪ್ರಾಪ್ತವಾಗುತ್ತದೆ. ಕಾಲಕ್ರಮದಲ್ಲಿ ಸಂಸ್ಕೃತದ ಶ್ಲೋಕಗಳನ್ನೆಲ್ಲ 'ಮಂತ್ರ' ಎಂಬ ಶಬ್ದದಿಂದ ಸೂಚಿಸುವ ಪರಿಪಾಟವುಂಟಾಯಿತು.
ಮಂತ್ರದ್ರಷ್ಟಾರನಾದ ಋಷಿಯನ್ನು 'ಮಂತ್ರಕೃತ್' ಎನ್ನುತ್ತಾರೆ. ಮಂತ್ರದ ಅಭಿಮಾನಿ ದೇವತೆಯನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಮಂತ್ರದೇವತೆ' ಎನ್ನಲಾಗಿದೆ ("ಮನಸಿಜಮಂತ್ರದೇವತೆಯರಂಗನೆಯರ್"). ಮಂತ್ರದಿಂದ ಪಾವನಗೊಂಡವನು 'ಮಂತ್ರಪೂತ' ("ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯಚ್ಛೃಂಗಮಂ ಆ ಶತಶೃಂಗಮಂ" - 'ಪಂಪಭಾರತ'). ಮಂತ್ರಶಕ್ತಿಯನ್ನು ಕೈವಶಮಾಡಿಕೊಂಡವನು 'ಮಂತ್ರಸಿದ್ಧ' ("ಮಹನೀಯಂ ಮಂತ್ರಸಿದ್ಧಂ ಬಿಡೆ ಪಿಡಿದ ಮಹಾಮುದ್ರೆಯಂ" 'ಪಾರ್ಶ್ವನಾಥಪುರಾಣ'). "ಆತ್ಮನೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗಟ್ಟಿ ಕಚ್ಚೆ .. .. ಮಂತ್ರಸಿದ್ಧರ ಮಂತ್ರ ಮರೆದು ಹೋದವು" ಎಂದು ಅಲ್ಲಮಪ್ರಭು ಒಂದೆಡೆ ಗೇಲಿಮಾಡುತ್ತಾನೆ.
ವೀರಶೈವರ 'ಅಷ್ಟಾವರಣ'ಗಳಲ್ಲಿ (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ತಿ ಮತ್ತು 'ಮಂತ್ರ') ಇದೂ ಒಂದು. 'ಮನ್' (ಆಲೋಚಿಸು) ಮತ್ತು ತ್ರ' (ಕಾಪಾಡು) ಎಂದರೆ ಇದನ್ನು ಉಸುರುವವರನ್ನು ಕಾಪಾಡುವಂಥದು "ಮನನಾತ್ ತ್ರಾಯತೇ ಇತಿ ಮಂತ್ರಃ" - ಎಂಬರ್ಥವನ್ನು ಹೇಳಲಾಗುತ್ತದೆ. ಇದು ಶಿವಮಂತ್ರ; "ಶಿವಮಂತ್ರಕ್ಕೆ ಸರಿ  ಬೇರೆ ಮಂತ್ರವಿಲ್ಲ" ಎಂಬುದು ಬಸವಣ್ಣನ ಮಾತು. ಶಿವಮಂತ್ರಕ್ಕೆ ಎರಡು ರೂಪ. 'ನಮಃಶಿವಾಯ' ಎಂಬುದು ಪಂಚಾಕ್ಷರ ಮಂತ್ರ; ಅದಕ್ಕೆ ಮೊದಲು 'ಓಂ' ಸೇರಿದರೆ ಷಡಕ್ಷರಮಂತ್ರ. "ಮಂತ್ರವೆ ಅವಯವಂಗಳಾಗುಳ್ಳ ಶಿವ" ಎಂದು ಚೆನ್ನಬಸವಣ್ಣ ವರ್ಣಿಸುತ್ತಾನೆ. "ಮಂತ್ರವ ತನ್ನಲ್ಲಿ ಸಯವ ಮಾಡಲರಿಯದ ಮಂತ್ರಭ್ರಷ್ಟರ ನೋಡಾ" ಎಂದು ಚೆನ್ನಬಸವಣ್ಣ ತನ್ನೊಂದು ವಚನದಲ್ಲಿ ಹೇಳುತ್ತಾನೆ. ಮಂತ್ರಗಳ ಗುಟ್ಟನ್ನು ವಿವರಿಸುವುದೇ 'ಮಂತ್ರಗೋಪ್ಯ'.
======
ಮಂತ್ರ2: ಮಂತ್ರ ಎಂಬುದು ರಹಸ್ಯವಾದುದು ಎಂಬರ್ಥವನ್ನೂ ಪಡೆದಿದ್ದುದರಿಂದ ಗ್ರಹ ದೆವ್ವ ಪಿಶಾಚಿ ಬೇತಾಳಗಳಿಂದ ಪೀಡಿತರಾದವರನ್ನು ರಕ್ಷಿಸಲು ಬಳಸುವ ಅಕ್ಷರಸಮೂಹವನ್ನೂ ಮಂತ್ರ ಎಂಬ ಶಬ್ದದಿಂದ ಕರೆಯುವ ರೂಢಿ ಇತ್ತು ಮತ್ತು ಇದೆ. ಕನ್ನಡದಲ್ಲಿ ಇಂತಹ ಪೀಡಕ ಸತ್ವಗಳನ್ನು 'ಗಾಳಿ' ಎಂದೂ ಕರೆಯುತ್ತಿದ್ದರು. ಇವುಗಳನ್ನು ಹೋಗಲಾಡಿಸಬಲ್ಲವರನ್ನು ಮಂತ್ರವಿದರೆಂದೂ ಮಂತ್ರವಾದಿಗಳೆಂದೂ ಮಾಂತ್ರಿಕರೆಂದೂ ಕರೆಯುತ್ತಿದ್ದರು. "ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ, ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ" (ಗರ=ಗ್ರಹ) ಎಂಬ ಬಸವಣ್ಣನ ಮಾತಿನಲ್ಲಿ ಮಂತ್ರವಾದಿಗಳು ಗ್ರಹಪೀಡಿತರಲ್ಲಿ ಸೇರಿಕೊಂಡ ಗ್ರಹಗಳೊಡನೆ ವ್ಯವಹರಿಸಬಲ್ಲರೆಂಬ ಅರ್ಥವಿದೆ. ಬಸವಣ್ಣನ ಮತ್ತೊಂದು ವಚನದಲ್ಲಿ "ಶೂರತ್ವವುಳ್ಳವನಾತನೇ ಮಾಂತ್ರಿಕನು" ಎಂಬ ಮಾತಿದೆ. ಮಂತ್ರ ಹಾಗೂ ತಂತ್ರಸಿದ್ಧಿಗಳನ್ನು ಹಿಂದೆ ಅರುವತ್ತನಾಲ್ಕು (ಚೌಷಷ್ಟಿ) ವಿದ್ಯೆಗಳಲ್ಲಿ ಸೇರಿಸಿದ್ದರು.
ಇಂಥವರು ಕ್ಷುದ್ರದೈವಗಳನ್ನು ತಮ್ಮ ಕೈವಶಮಾಡಿಕೊಂಡವರು ಎಂಬ ನಂಬಿಕೆಯಿತ್ತು. ಅವುಗಳಿಂದ ಬೇಕಾದಾಗ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಹಾಗೂ ಜನರನ್ನು ಮೆಟ್ಟಿದ ಗ್ರಹಗಳನ್ನು ಓಡಿಸುವುದನ್ನು ಮಾಡುತ್ತಿದ್ದರು. ಇದನ್ನು ಮಾಟ ಅಥವಾ ಅಭಿಚಾರ ಎನ್ನುತ್ತಿದ್ದರು. ದುರ್ಯೋಧನನು ಪಾಂಡವರ ವಿರುದ್ಧ ಮಾಟಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮನುಷ್ಯನನ್ನು ಮೆಟ್ಟಿದ ದೆವ್ವವು ಮಂತ್ರವಾದಿಯನ್ನು ಎದುರಿಸಲಾಗದು ಎಂಬ ಭಾವನೆಯಿತ್ತು ("ಮಂತ್ರವಾದಿಯಂ ಕಂಡ ಗ್ರಹದಂತೆ ಸಮ್ಮುಖದೊಳ್ ನೋಡಲಣ್ಮದಿರೆಯುಂ" - 'ಪಂಚತಂತ್ರ'). ಹೀಗೆ ಮಾಡಬಲ್ಲವರು ಮಾಟಗಾರರೆಂದೂ ಹೆಸರನ್ನು ಪಡೆದವರು. ಇವರು ಹಲವು ವೇಳೆ ಪಿಶಾಚಿಗಳ ಬಾಧೆಯಿಂದ ರಕ್ಷಿಸಲು 'ಯಂತ್ರ'ಗಳನ್ನು ಕಟ್ಟುತ್ತಿದ್ದರು. ಹಾಗಾಗಿ ಇಂಥವರು 'ಯಾಂತ್ರಿಕ'ರೆಂಬ ಹೆಸರಿಗೂ ಪಾತ್ರವಾಗುತ್ತಿದ್ದರು. "ಯಾಂತ್ರಿಕನ ಯಂತ್ರ ಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಪಲಾಯನವಪ್ಪ ತೆರನಂತೆ" ಎಂಬ ಮಾತು ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸ್ತ್ರೀ ಮಾಂತ್ರಿಕಳನ್ನು 'ಮಾಟಗಾತಿ' ಎನ್ನುತ್ತಿದ್ದರು. ತಮಗೆ ರೋಗ ಬಂದಾಗ ಮಾಟಗಾತಿಯಲ್ಲಿಗೆ ಹೋಗಿ ಗ್ರಹಗಳಿಗೆ ಶಾಂತಿಕರ್ಮ ಮಾಡಿಸುತ್ತಿದ್ದುದನ್ನು ಮಡಿವಾಳ ಮಾಚಯ್ಯ ಎಂಬ ವಚನಕಾರ ಟೀಕಿಸುತ್ತಾನೆ.
ಯಕ್ಷಿಣಿಯನ್ನು 'ಮಂತ್ರವಾದ'ವೆನ್ನುತ್ತಿದ್ದರು: "ಜ್ಯೋತಿಷ್ಯಂ ಮಂತ್ರವಾದಂ ಮೊದಲಾಗೊಡೆಯ  ಶಾಸ್ತ್ರಂಗಳೆಲ್ಲಮುಮಂ ಈ ಕೂಸನೋದಿಸಿದಾ" ಎಂಬುದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದನ್ನು ಮಾಡುವವರನ್ನು ಮಂತ್ರವಾದಿಯೆನ್ನುತ್ತಿದ್ದರು: "ಕೊಟ್ಟಂ ಅರ್ಥಿಜನಕ್ಕಾ ದಿವಿಜೇಂದ್ರಂ ಬಳವಿಯ ಮಂತ್ರವಾದಿಯೆನೆ ಮಕುಟಬದ್ಧ ಸಮಾಜಂ" ಎಂಬ ಮಾತು ಪೊನ್ನನ 'ಶಾಂತಿಪುರಾಣ'ದ್ದು. ಯಕ್ಷಿಣಿಗಾರರು ಹಿಡಿದುಕೊಳ್ಳುತ್ತಿದ್ದ ಕೋಲೇ 'ಮಂತ್ರದಂಡ'.
=====
ಮಂತ್ರ3: ಹಾವು ಮುಂತಾದ ವಿಷಜಂತುಗಳ ವಿಷವನ್ನಿಳುಹಲು ಮಂತ್ರವನ್ನು ಬಳಸುತ್ತಿದ್ದರು. ವಸುಮಿತ್ರನೆಂಬ ಬಾಲಕನಿಗೆ ಹಾವು ಕಚ್ಚಿದಾಗ ಮಂತ್ರವಾದಿಯೊಬ್ಬ 'ಪಱೆಗುಟ್ಟಿ ಮಂತ್ರಿಸಿ' ಅವನನ್ನು ಬದುಕಿಸುವ ಸನ್ನಿವೇಶ 'ವಡ್ಡಾರಾಧನೆ'ಯಲ್ಲಿದೆ. ರಾಜಕುಮಾರನ್ನು ಹಾವು ಕಚ್ಚಿದಾಗ ಶಿವಭೂತಿ ಎಂಬುವವನು "ಗುಂಡಿಗೆಯ ನೀರನಭಿಮಂತ್ರಿಸಿ ತಳಿಯಲೊಡಂ ಕುಮಾರಂ" ನಿರ್ವಿಷನಾದನೆಂದು 'ಪಂಚತಂತ್ರ'ದಲ್ಲಿ ವರ್ಣಿತವಾಗಿದೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರಂ'ನಲ್ಲಿ ವಿಷವೈದ್ಯ ಪ್ರಕರಣದಲ್ಲಿ ವಿಷವನ್ನಿಳುಹುವ ಎರಡು ಬಗೆಯ ಚಿಕಿತ್ಸೆಗಳ ಬಗ್ಗೆ ವಿಸ್ತಾರವಾದ ಪ್ರಸ್ತಾಪವಿದೆ: "ಓಂ ಹ್ರೀಂ ವಃ ಎಂಬ ಮಂತ್ರದಿನಭಿಮಂತ್ರಿಸಿ ಜಲಮಂ ಮೊಗದೊಳ್ ತಳಿಯೆ ಸಾಧ್ಯಮೆಂದಱಿಗೆ ತೆಱೆದೊಡಕ್ಷಿದ್ವಯಮಂ" ಎಂದೂ, ಗಾರುಡ, ವಾಯು ಹಾಗೂ ಗಗನಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಚಿಮುಕಿಸಿ ಅಥವಾ ಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಕುಡಿಸಿ ವಿಷವಿಳಿಸುವುದು ಒಂದು ಬಗೆಯಾದರೆ, "ಪಾವು ಕೊಳೆ ಕರ್ಣಮಲಮಂ ತೀವುಗೆ ಮೇಣ್ ಕೊಯ್ದು ಕಳೆಗೆ ಪಿಂಡುಗೆ ರಕ್ತಸ್ರಾವಂ ಮಾಡುಗೆ ಚುರ್ಚುಗೆ ನೀವುಗೆ ವಿಷಹರಣಮಲ್ತೆ ತಾತ್ಕಾಲಿಕದೊಳ್" ಎಂದು ಹಾವು ಕಚ್ಚಿದ ಜಾಗದಲ್ಲಿ ಗಾಯಮಾಡಿ ರಕ್ತ ಹೊರತೆಗೆಯುವುದು ಇನ್ನೊಂದು ಬಗೆ.  ಇವುಗಳನ್ನು ಬಸವಣ್ಣ ಕ್ರಮವಾಗಿ 'ಮಂತ್ರವೈದ್ಯಕಿ ಕಶಸ್ತ್ರವೈದ್ಯ' ಎಂದು ಕರೆಯುತ್ತಾನೆ: "ಗುರೂಪದೇಶ ಮಂತ್ರವೈದ್ಯ, ಜಂಗಮೋಪದೇ ಶಸ್ತ್ರವೈದ್ಯ ನೋಡಾ". ಹಾವು ಕಚ್ಚಿದ ವ್ಯಕ್ತಿಯೂ ಮಂತ್ರವನ್ನು ಉಚ್ಚರಿಸಿದರೆ ವಿಷ ಇಳಿಯುತ್ತದೆಂಬ ನಂಬಿಕೆಯಿತ್ತು: "ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದ ಆನು ಮುಂದುಗೆಟ್ಟೆನಯ್ಯಾ; .. .. ಓಂ ನಮಶ್ಶಿವಾಯ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ" ಎಂಬುದು ಬಸವಣ್ಣನ ಇನ್ನೊಂದು ವಚನ.
ಹಾವನ್ನು ಹಿಡಿಯುವಾಗ ಅದು ಮತ್ತಿಗೊಳಗಾಗುವಂತೆ ಮಂತ್ರವನ್ನು ಹೇಳುತ್ತಿದ್ದರಂತೆ; ಆಗ ಅದರ ಹಲ್ಲಿನ ವಿಷ ಹೋಗುತ್ತಿತ್ತು. "ಪಾವಿನ ಪಲ್ಲ ನಂಜು ಕಿಡುವಂತಿರೆ ಮಾಂತ್ರಿಕ ಮಂತ್ರಶಕ್ತಿಯಿಂ" ಎಂಬ ಹೋಲಿಕೆ ನಾಗಚಂದ್ರನ 'ಪಂಪರಾಮಾಯಣ'ದಲ್ಲಿ ಬರುತ್ತದೆ. ಇದೇ ಕಾವ್ಯದಲ್ಲಿ ಮತ್ತೊಂದೆಡೆ ಹಾವಿನಂತೆ ಗೆರೆಯನ್ನು ಬರೆದು ಮಂತ್ರಶಕ್ತಿಯಿಂದ ವ್ಯಕ್ತಿಯನ್ನು ಮೂರ್ಚೆಗೊಳಿಸುತ್ತಿದ್ದ ಬಗೆಯೂ ವರ್ಣಿತವಾಗಿದೆ: "ಬರೆದು ಉರಗಲೇಖೆ ಮೂರ್ಛಾಪರಿಣತಿಯಂ ಮಂತ್ರಶಕ್ತಿಯಿಂ ಪುಟ್ಟಿಪವೋಲ್". ವಿಷವಿಳಿಸುವ ಮಂತ್ರವನ್ನು ರಚಿಸಿದವನು ಗರುಡನಾದ್ದರಿಂದ ಇದಕ್ಕೆ 'ಗಾರುಡಮಂತ್ರ'ವೆಂಬ ಹೆಸರು ಜನಜನಿತವಾಯ್ತು. ಅದನ್ನು ಬಲ್ಲವನು 'ಗಾರುಡಿಗ'. "ಓರ್ವ ನಿರ್ಬುದ್ಧಿ ಗಾರುಡಿಗಂ ಗಾರುಡಮಂ ಕಲ್ತು ವಿದ್ಯಾಪ್ರಚಯಮಂ ನೋಡಲೆಂದು ಸರ್ಪದಷ್ಟನಂ ಅರಸುತ್ತುಂ" ಹೋಗುವ ಪ್ರಸ್ತಾಪ 'ಪಂಚತಂತ್ರ'ದಲ್ಲಿ ಬರುತ್ತದೆ.
=====
ಮಂತ್ರ4: ಮಂತ್ರ ಎಂದರೆ ಸಮಾಲೋಚನೆ ಎಂಬರ್ಥವೂ ಇದೆ. "ಸತ್ಯವತಿ ತಾನುಂ ಆತನುಂ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣ್ವಪಾಯನನಂ ನೆನೆದು: ಎಂಬುದು 'ಪಂಪಭಾರತ'ದ ಮಾತು. 'ಮಂತ್ರಗುಪ್ತಿ' ಎಂಬ ಶಬ್ದವನ್ನೂ ಸಮಾಲೋಚನೆ ಎಂಬರ್ಥದಲ್ಲಿ ಪಂಪ ಬಳಸಿದ್ದಾನೆ: "ಆ ಮುನಿನಾಥಂ ತ್ರಿಗುಪ್ತಿಯೊಳ್ ನೆರೆದಂ ಈ ಮಹೀನಾಥಂ ಮಂತ್ರಗುಪ್ತಿಯೊಳ್ ನೆರೆದಂ" ('ಆದಿಪುರಾಣ'). ರಾಜರುಗಳು ಸಮಾಲೋಚನೆಯಲ್ಲಿ ತೊಡಗುವ ಕೋಣೆಯನ್ನು ಪಂಪನು 'ಮಂತ್ರಾವಾಸ' ಎನ್ನುತ್ತಾನೆ ("ಮಂತ್ರಾವಾಸದೊಳ್ ಮಂತ್ರನಿಶ್ಚಿತನಾಗಿ" 'ಪಂಪಭಾರತ'). ಇದನ್ನು 'ಮಂತ್ರಶಾಲೆ' ಎಂದೂ ಕರೆಯಲಾಗುತ್ತಿತು: "ವಾಲಿ ಮಂತ್ರಶಾಲೆಯಂ ಸುಗ್ರೀವಂಬೆರಸು ಪೊಕ್ಕು ಮಂತ್ರಿಮಂಡಲಮಂ ಆಪ್ತಪರಿಜನಮುಮಂ ಬರಿಸಿ" ('ಪಂಪರಾಮಾಯಣ'). ಇದನ್ನು 'ಚಂದ್ರಪ್ರಭಪುರಾಣ'ದಲ್ಲಿ 'ಮಂತ್ರಾಗಾರ' ಎಂದಿದೆ ("ಮಂತ್ರಾಗಾರದಿಂದಂ ಕ್ಷಿತಿಪತಿ ಪೊರಮಟ್ಟಂ").
ರಾಜನ ಮೂರು ಬಗೆಯ ಶಕ್ತಿಗಳೆಂದರೆ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬಿವುಗಳೆಂದು 'ಪಂಚತಂತ್ರ'ದಲ್ಲಿ ಹೇಳಿದೆ; ಮಂತ್ರಶಕ್ತಿ ಎಂದರೆ "ಹಿತರ್ ಅರ್ಥಶಾಸ್ತ್ರಕುಶಲರ್ ಚತುರುಪಧಾವಿಶುದ್ಧರೆನಿಪ ಸಚಿವರೊಳ್ ಅನ್ವಿತಮಾಗೆ ಮಾಳ್ಪ ಕಾರ್ಯಂ ಪತಿಗೆಂದುಂ ಮಂತ್ರಶಕ್ತಿ ಮನುಮುನಿಮತದಿಂ" ಎಂದು ಅದೇ ಕಾವ್ಯದಲ್ಲಿ ವಿವರಿಸಲಾಗಿದೆ. ವಿಶೇಷವಾಗಿ ಯುದ್ಧಸಮಯಗಳಲ್ಲಿ ಇಂತಹ ಸಮಾಲೋಚನೆ ಅತ್ಯಂತ ಆವಶ್ಯಕ ಎಂಬ ಅಭಿಪ್ರಾಯದಲ್ಲಿ 'ಪಂಚತಂತ್ರ'ವು "ಚತುರಂಗಬಲಮೇವುದೋ ಸನ್ಮಂತ್ರಮೆ ಸಾಲ್ಗುಂ ಪುಸಿಗುಮೆ ದೇವ ಮಂತ್ರಮೂಲೋಹಿ ವಿಜಯಃ ಎಂಬೀ ವಾಕ್ಯಂ" ಎಂದು ವಿವರಿಸಿದೆ. ಇಂತಹ ಸಮಾಲೋಚನೆಯಲ್ಲಿ ದಾರಿತಪ್ಪಿದವನನ್ನು 'ಕುಮಾರವ್ಯಾಸ ಭಾರತ'ವು 'ಮಂತ್ರಭ್ರಮಿತ' ಎನ್ನುತ್ತದೆ ("ಸಮರಜಯಸಾಧಕರು ಮಂತ್ರಭ್ರಮಿತರಾಯ್ತಪಜಯವಧೂವಿಭ್ರಮಕಟಾಕ್ಷದ ಘಾಯದಲಿ ಕಳವಳಿಸದವರಾರು").
ಸಮಾಲೋಚನೆ ನಡೆಯಿಸುವುದೇ 'ಮಂತ್ರಾಲೋಚನೆ' ("ವಿಶಾಖಭೂತಿ ಮಂತ್ರಾಲೋಚನೆಯೊಳ್ ಯುವರಾಜಂಗೆ ಬೞಿಯನಟ್ಟಿ" 'ಶಾಂತಿಪುರಾಣ'). ಯಾವ ಸಂದರ್ಭಗಳಲ್ಲಿ ಮಂತ್ರಾಲೋಚನೆ ಆವಶ್ಯಕ ಎಂಬುದನ್ನು 'ಪಂಚತಂತ್ರ'ವು ಹೀಗೆ ವಿವರಿಸುತ್ತದೆ: "ಆಗಿರ್ದ ಕಾರ್ಯದ ಪೆರ್ಚುಗೆಗಂ ಮುಂತಪ್ಪ ಕಜ್ಜಮುಮಂ ಮಾಳ್ಪುದರ್ಕಂ ಅನರ್ಥಕಮಪ್ಪ ಕಜ್ಜದ ಪ್ರತೀಕಾರಕ್ಕಂ ಆವುದಾನೊಂದಾಲೋಚನೆಗೆಯ್ದು ಮಾಳ್ಪುದುತ್ತಮ ಮಂತ್ರಂ". ಅಂತೆಯೇ ಮಂತಾಲೋಚನೆಯ ನಿರ್ಣಯವನ್ನು ಗೋಪ್ಯವಾಗಿಡುವುದೂ ಆವಶ್ಯಕವೆಂದು 'ಪಂಚತಂತ್ರ'ವು ಹೇಳುತ್ತದೆ: "ಮಂತ್ರವು ಹೊರಪಟ್ಟಲ್ಲಿ ಕಾರ್ಯವು ಕಿಡುವುದು; ಅದುಕಾರಣಮದು ಎಲ್ಲಾ ಕಡೆಯಿಂದಲೂ ಗೋಪ್ಯವಾಗಿ ರಕ್ಷಿಸಲ್ಪಡತಕ್ಕುದು".
=====
ಮಂತ್ರಿ:  ಯಾವುದೇ ಬಗೆಯ ಅರ್ಥದಲ್ಲಿ ಮಂತ್ರವನ್ನು ಅರಿತವನು 'ಮಂತ್ರಿ' ಎನ್ನಿಸಿಕೊಳ್ಳುತ್ತಾನಾದರೂ ರಾಜನ ಸಮಾಲೋಚನೆಯಲ್ಲಿ ಸೇರುವವನನ್ನು ಈ ಶಬ್ದದಿಂದ ಕರೆಯುವುದು ಈಗಿನ ರೂಢಿ. "ಮಂತ್ರೀ ಧೀಸಚಿವೋ ಅಮಾತ್ಯೋ" ಎಂದು ಸಮಾನಾರ್ಥಕಗಳನ್ನು ಸೂಚಿಸುವ 'ಅಮರಕೋಶ'ವು ಮಂತ್ರಿಯನ್ನು 'ಧೀಸಚಿವ' ಎಂದಿರುವುದು ಗಮನಾರ್ಹ. ಅವನು ರಾಜ್ಯದ ಆಲೋಚನೆಯನ್ನು ಹೇಳುವವನು. "ನರಪತಿಯ ಬುದ್ಧಿಸಚಿವಂ ನಯಶಾಸ್ತ್ರನಪ್ಪವಂ ಮಂತ್ರಿ" ಎಂದು 'ಅಭಿಧಾನ ವಸ್ತುಕೋಶ'ವು ಹೇಳುತ್ತದೆ. ಸಚಿವನಿಗಿರಬೇಕಾದ ಅರ್ಹತೆಗಳ ಕುರಿತು 'ಮನುಸ್ಮೃತಿ'ಯಲ್ಲಿ ದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಸತ್ತ ಮಂತ್ರಿಯ ಸ್ಥಾನವನ್ನು ರಾಜನು ಅವನ ಮಕ್ಕಳಿಗೆ ನೀಡುತ್ತಿದ್ದ ಪದ್ಧತಿ ಒಂದು ಕಾಲದಲ್ಲಾದರೂ ಇದ್ದಂತೆ ಕಾಣುತ್ತದೆ: ಅತಿಬಳ ಅರಸನ ಮಂತ್ರಿ ಸೋಮಶರ್ಮಖನೆಂಬುವವನು ಸತ್ತಾಗ ಅವನ ಮಕ್ಕಳಿಗೆ ಆ ಸ್ಥಾನ ನೀಡುವ ಬಗ್ಗೆ ರಾಜ ಆಲೋಚಿಸುವ ಪ್ರಸಂಗವು 'ವಡ್ಡಾರಾಧನೆ'ಯಲ್ಲಿದೆ. ಮಂತ್ರಿಗಳಿಗಿರಬೇಕಾದ ಗುಣಗಳೇ 'ಮಂತ್ರಿಗುಣ'; ಇವುಗಳು ಯಾವುವೆಂಬುದನ್ನು 'ಪಂಚತಂತ್ರ' ಹೀಗೆ ವಿವರಿಸುತ್ತದೆ: "ಗೂಢಲಕ್ಷಣ ಭಿನ್ನಪ್ರತಿಸಂಧಾನ ಸಂಧಿದೂಷಣ ಪರಿಚಿತ್ತ ಪರೀಕ್ಷಾಲಕ್ಷಣಮೆಂಬ ಮಂತ್ರಿಗುಣಂಗಳು". ತನ್ನ ಕಾವ್ಯವು ವಿವಿಧ ಬಗೆಯ ಜನರಿಗೆ ಅವರಿಗೆ ಬೇಕಾದುದನ್ನು ನೀಡುತ್ತದೆ ಎಂದು ಹೇಳುವಾಗ ಕುಮಾರವ್ಯಾಸನು "ಮಂತ್ರೀಜನಕ್ಕೆ ಬುದ್ಧಿಗುಣ" ಎಂಬುದನ್ನೂ ಸೇರಿಸುತ್ತಾನೆ.
ರಾಜ್ಯವೊಂದರ "ಸ್ವಾಮಿ ಅಮಾತ್ಯ ಜನಪದ ದುರ್ಗ ಸುಹೃತ್ ಕೋಶ ದಂಡಮೆಂಬ ಏಳಂಗ"ಗಳಲ್ಲಿ ರಾಜನಾದ ಮೇಲೆ ಮಹತ್ವ ಪಡೆಯುವವನು 'ಅಮಾತ್ಯ' ಅಥವಾ ಮಂತ್ರಿಯೇ. ರಾಜನ ಬಳಿ ಒಬ್ಬರಿಗಿಂತ ಹೆಚ್ಚು ಮಂತ್ರಿಗಳಿರುತ್ತಿದ್ದರು; ಅವರೆಲ್ಲ ಸೇರಿ 'ಮಂತ್ರಿಮಂಡಲ'ವಾಗುತ್ತಿತ್ತು: "ವಾಲಿ ಮಂತ್ರಶಾಲೆಯಂ ಪೊಕ್ಕು ಸುಗ್ರೀವಂಬೆರಸು ಮಂತ್ರಿಮಂಡಲಮುಂ ಆಪ್ತಪರಿಜನಮುಮಂ ಬರಿಸಿ" 'ಪಂಪರಾಮಯಣ'). ಅನೇಕ ಶಾಸನಗಳಲ್ಲಿ ಮಂತ್ರಿಗಳನ್ನು 'ಪ್ರಧಾನ'ರು ಎಂದೂ ಕರೆಯಲಾಗಿದೆ; ವಚನಗಳಲ್ಲಿ 'ಪ್ರಧಾನಿ' ಎಂಬ ರೂಪವೂ ದೊರೆಯುತ್ತದೆ. ಶಾಸನಗಳೆಲ್ಲ ಎಲ್ಲ ಮಂತ್ರಿಗಳನ್ನೂ ದಂಡನಾಯಕ ಎಂಬ ವಿಶೇಷಣದಿಂದ ಕರೆಯುತ್ತವೆ. ದುಷ್ಟಮಂತ್ರಿಯನ್ನು ತೆಗೆದುಹಾಕಬೇಕೆಂದು 'ಪಂಚತಂತ್ರ'ವು ಶಾಸ್ತ್ರಗ್ರಂಥವೊಂದನ್ನು ಉಲ್ಲೇಖಿಸಿ ಹೇಳುತ್ತದೆ: "ಪಗೆಯಪ್ಪ ಭೃತ್ಯನಂ, ಅಲುಗಾಡುವ ಹಲ್ಲಂ ದುಷ್ಟನಪ್ಪ ಮಂತ್ರಿಯಂ ಬೇರ್ವೆರಸಿ ಕೀಳ್ವುದೇ ಸುಖಂ" ವ್ಯಕ್ತಿಯೊಬ್ಬನಿಗೆ ಅವನ ಅಂತಃಕರಣಗಳೇ ಬುದ್ಧಿವಾದವನ್ನು ಹೇಳಬಲ್ಲವು ಎಂಬರ್ಥದಲ್ಲಿ ಜೋದರ ಮಾಯಣ್ಣ ಎಂಬ ವಚನಕಾರನು "ಅಂತಃಕರಣಚತುಷ್ಟಯಂಗಳೇ ನಿಮ್ಮ ಮಂತ್ರಿಗಳಯ್ಯ" ಎನ್ನುತ್ತಾನೆ.
=====
ಮಂದಾಸನ: ಇದು ಸಂಸ್ಕೃತದ 'ಮಂಜೂಷಾ' ಮತ್ತು 'ಆಸನ' ಎಂಬೆರಡು ಶಬ್ದಗಳಿಂದ ಆದ ಹಾಗೆ ತೋರುತ್ತದೆ. ಸಂಸ್ಕೃತದಲ್ಲಿ ಮಂಜೂಷಾ ಎಂದರೆ ಪೆಟ್ಟಿಗೆ: "ಪಿಟಕಃ ಪೇಟಕಃ ಪೇಟಾ ಮಂಜೂಷಾ" ಎಂದು 'ಅಮರಕೋಶ'ದಲ್ಲಿದೆ. "ಪೇೞಿಗೆಯದು ಮಂಜೂಷೆ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ ('ಪೇೞಿಗೆ' ಎಂಬುದು 'ಪೇಟಿಕಾ'ದ ತದ್ಭವ). 'ಮಂದಸು' ಎಂಬ ಶಬ್ದವನ್ನು 'ಚಾವುಂಡರಾಯಪುರಾಣ' ಪೆಟ್ಟಿಗೆ ಎಂಬರ್ಥದಲ್ಲಿ ಬಳಸಿದೆ: "ಮಂದಸಿನೊಳಿರ್ದ ತಳಾರನ ಸಾಕ್ಷಿ ನುಡಿಯಿಸಿದೊಡಂ". 'ಮಂದಾಸ' ಎಂಬ ರೂಪವು 'ಜೀವಸಂಬೋಧನೆ'ಯಲ್ಲಿದೆ: "ಮೇಗೆ ನೆಗೆದ ಮಂದಾಸಂ ಸಿಡಿಲ್ ಬಡಿಯೆ ಸುಭೌಮಂ ಸತ್ತು". ಕರ್ಣಪಾರ್ಯನ 'ನೇಮಿನಾಥಪುರಾಣ'ದಲ್ಲಿ ಬರುವ "ಕುಮಾರನಂ ಆಗಳೆ ಕೊಂಡು ಬಂದವರ್ ಸೊಗಯಿಸುತಿರ್ಪ ಮಂದಸಿನೊಳಿಕ್ಕಿ" ಎಂಬ ವಾಕ್ಯವನ್ನು ಗಮನಿಸಿದರೆ 'ಮಂದಸು' ಪದಕ್ಕೆ ಪೆಟ್ಟಿಗೆ ಎಂಬರ್ಥ ಮಾಡುವುದಕ್ಕಿಂತ ತೊಟ್ಟಿಲು ಎಂದು ಅರ್ಥೈಸುವುದು ಹೆಚ್ಚು ಸೂಕ್ತವಾಗಿ ಕಾಣುತ್ತದೆ. 'ಮಂದಾಸು' ಎಂಬ ರೂಪವು ಮೂರನೆಯ ಮಂಗರಸನ 'ನೇಮಿಜಿನೇಶಸಂಗತಿ'ಯಲ್ಲಿದೆ: "ಆ ಸುಕುಮಾರನನೊಂದು ಮಂದಾಸಿನೊಳ್ ರಾಸಿ ಮಾಡಿದ ರತ್ನಸಹಿತ ಆ ಸಹಚರಿಯರಿಸಿ". ಇಲ್ಲಿಯೂ 'ಮಂದಾಸು'ವಿಗೆ ಪೆಟ್ಟಿಗೆ ಎಂಬುದಕ್ಕಿಂತ ತೊಟ್ಟಿಲು ಎಂಬರ್ಥ ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಬಾಹುಬಲಿಯ 'ನಾಗಕುಮಾರಚರಿತೆ' ಎಂಬ ಕಾವ್ಯದಲ್ಲಿ 'ಮಂದಾಸು' ಶಬ್ದವನ್ನು ಪ್ರಾಣಿಗಳನ್ನಿಡುವ ಬೋನು ಎಂಬರ್ಥದಲ್ಲಿ ಬಳಸಲಾಗಿದೆ: "ಘೋಟದರಸು ಅಟ್ಟಿದ ಮಂದಾಸಿನೊಳು ಶಕಟದ ಮೇಲಿಟ್ಟು". ಈಗ ಮಂದಸು ಎಂಬ ಶಬ್ದ ಸ್ವತಂತ್ರವಾಗಿ ಬಳಕೆಯಲ್ಲಿಲ್ಲದಿದ್ದರೂ 'ಮಂದಾಸನ' ಎಂಬುದು ಸರ್ವಸಾಮಾನ್ಯ ಬಳಕೆಯ ಶಬ್ದವಾಗಿದೆ,  ಮಂದಾಸನ ಎಂದರೆ ದೇವರ ವಿಗ್ರಹವನ್ನು ಪೂಜೆಗಾಗಿ ಇಡುವ ಪೆಟ್ಟಿಗೆ ಅಥವಾ ಮಂಟಪದಾಕಾರದ ಮರದ ರಚನೆಗೆ ಅನ್ವಯಿಸುತ್ತದೆ. ಹೀಗಾಗಿ, ಪ್ರಾಯಶಃ ಪೆಟ್ಟಿಗೆಯಾಕಾರದ ಎಲ್ಲ ವಸ್ತುಗಳನ್ನೂ ಮಂದಸ ಎಂಬುದರೊಡನೆ ಸಮೀಕರಿಸುವ ಹಾಗೆ ಕಾಣುತ್ತದೆ. ಮಂಜೂಷಾ>ಮಂದಸ ಆದ ಮೇಲೆ ಕನ್ನಡದಲ್ಲಿ ಈ ತದ್ಭವಕ್ಕೇ 'ಆಸನ' ಎಂಬ ಶಬ್ದವನ್ನು ಸೇರಿಸಿ ಸವರ್ಣಸಂಧಿಯಾಗಿಸಿ 'ಮಂದಾಸನ'ವಾಗಿ ಮಾಡಿಕೊಂಡಿರುವಂತೆ ಕಾಣುತ್ತದೆ. ಆದ್ದರಿಂದ 'ಮಂದಾಸನ' ಎಂಬ ಶಬ್ದಕ್ಕೆ ಮಂದಸ+ಆಸನ=ಮಂದಸಾಸನ>ಮಂದಾಸನ ಎಂಬ ವ್ಯತ್ಪತ್ತಿಯನ್ನು ಹೇಳಬಹುದೆಂದು ಕಾಣುತ್ತದೆ.

=====
ಮಗು: ಇದೊಂದು ದ್ರಾವಿಡ ಪದ. ಇದರರ್ಥ ಶಿಶು ಎಂದು. ತಮಿಳಿನಲ್ಲಿ ಮಕ, ತುಳುವಿನಲ್ಲಿ ಮಗೆ, ಮಲಯಾಳಂನಲ್ಲಿ ಮಗನ್ ಎಂಬ ರೂಪಗಳಿವೆ. ಸಂತಾನ ಎಂಬರ್ಥದಲ್ಲಿ ಮಗ, ಮಗಳು ಎಂಬ ಶಬ್ದಗಳು ಬಳಕೆಯಲ್ಲಿವೆ. ಮಗು+ಅನ್=ಮಗನ್>ಮಗ ಎಂದೂ ಮಗು+ಅಳ್+ಮಗಳ್ (ಅವನ್, ಅವಳ್ ಎಂಬ ಸರ್ವನಾಮಗಳು ಗಂಡು-ಹೆಣ್ಣು ಎಂದು ಸೂಚಿಸುವ ಅನ್, ಅಳ್ ಎಂಬ ಪ್ರತ್ಯಯಗಳಾಗಿವೆ) ಎಂದೂ ಆಗಿವೆ. ಮಗ ಎಂಬುದು ಪುಂವಾಚಿಯಾಗಿ (ಗಂಡು ಎಂಬುದನ್ನು ಸೂಚಿಸಲು) ಮಗವಾಡು ಆಲುಮಗ ಮುಂತಾಗಿ ತೆಲುಗಿನಲ್ಲಿ ಬಳಕೆಯಾಗುತ್ತದೆ; ಮಗಡು ಎಂಬುದು ಅಲ್ಲಿ ಗಂಡನನ್ನು ಸೂಚಿಸುತ್ತದೆ. ಕನ್ನಡದಲ್ಲಿ ಮಗು ಎಂಬುದಕ್ಕೆ (ಕ)ಗಳ್ ಎಂಬ ಬಹುವಚನ ಪ್ರತ್ಯಯ ಹತ್ತಿಸಿ ಮಗುಗಳ್>ಮಕ್ಕಳ್ ಎಂಬ ರೂಪವನ್ನು ಮಾಡಿಕೊಳ್ಳುತ್ತೇವೆ.
ಚಿಕ್ಕವರನ್ನು ಅಕ್ಕರೆಯಿಂದ ಕರೆಯುವಾಗ 'ಮಗು' ಎಂದು ಸಂಬೋಧಿಸುವ ರೂಢಿಯಿದೆ. ಮಗು ಪುಂಸ್ತ್ರೀವಾಚಿಯಾದ (ಹೆಣ್ಣು ಗಂಡು ಎರಡಕ್ಕೂ ಅನ್ವಯಿಸುವ) ಪದವಾದುದರಿಂದ ಕನ್ನಡದಲ್ಲಿ ಅದರ ಹಿಂದೆ ಗಂಡು ಹೆಣ್ಣು ಎಂದು ಸೇರಿಸಿ ಗಂಡುಮಗು, ಹೆಣ್ಣು ಮಗು ಎಂದು ಮಾಡಿಕೊಳ್ಳುವ ಪರಿಪಾಟವಿದೆ: ಮಗ, ಮಗಳು ಎಂಬುದು ಸಿದ್ಧವಾದ ಮೇಲೆ ಬಹುವಚನವನ್ನು ಸೂಚಿಸಲು 'ಅಂದಿರು' ಎಂಬ ಪ್ರತ್ಯಯ ಸೇರಿಸಿದಾಗ ಮಗಂದಿರು, ಮಗಳಂದಿರು ಎಂಬ ರೂಪಗಳುಂಟಾಗುತ್ತವೆ. ಕ್ರಿಶ ಹತ್ತನೆಯ ಶತಮಾನದ ಗದ್ಯಕಾವ್ಯ 'ಚಾವುಂಡರಾಯಪುರಾಣ'ದಲ್ಲಿ "ಸಾಗರದತ್ತನುಂ ಸಮುದ್ರದತ್ತನುಂ ಎಂಬ ಮಗಂದಿರುಂ" ಎಂಬ ಹಾಗೂ ಹೆಣ್ಣುಮಕ್ಕಳು ಎಂಬರ್ಥದಲ್ಲಿ 'ಮಗಳ್ದಿರ್" ಎಂಬ ಪ್ರಯೋಗಗಳಿವೆ.
ಸಮಾಸಪದಗಳಲ್ಲೂ ಮಗ ಶಬ್ದವನ್ನು ಬಳಸಿ, ಮದುಮಗ, ಮದುಮಗಳು, ಮದುಮಕ್ಕಳು ಎಂಬ ರೂಪಗಳನ್ನು ಮಾಡಿಕೊಳ್ಳುತ್ತೇವೆ. ಮಕ್ಕಳಾಟ ಎಂಬುದು ಹುಡುಗಾಟವನ್ನು ಸೂಚಿಸುವಂತೆಯೇ ಗಂಭಿರವಾಗಿ ಪರಿಗಣಿಸದುದನ್ನೂ ಧ್ವನಿಸುತ್ತದೆ. ಹೀಗೆಯೇ ಮಕ್ಕಳಾಟಿಕೆ ಎಂಬುದು ಆಟದ ಸಾಮಾನು ಮತ್ತು ಮಕ್ಕಳು ಆಟವಾಡುವುದು ಹಾಗೂ ಗಂಭೀರವಾಗಿ ಪರಿಗಣಿಸದ ಮನೋಭಾವವನ್ನು ಸೂಚಿಸುತ್ತದೆ.
=====
ಮಜ್ಜನ: ಈ ಸಂಸ್ಕೃತ ಶಬ್ದದ ಮೂಲಾರ್ಥ ನೀರಲ್ಲಿ ಮುಳುಗುಹಾಕುವುದು ಎಂದು. ಕನ್ನಡದಲ್ಲಿದು ಸ್ನಾನ ಎಂಬ ವಿಶಾಲಾರ್ಥವನ್ನು ಪಡೆದಿದೆ. "ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದ .. .. ನೀರರುಹ ಎಂಬ ಮಾತು 'ಪಂಪಭಾರತ'ದಲ್ಲಿದೆ. "ಮಜ್ಜನಕೀಗಳೆ ರಾಜಪುತ್ರಿ ನೀಂ ನಡೆ" ಎಂಬ ವಾಕ್ಯ 'ಕರ್ಣಾಟಕ ಕಾದಂಬರಿ'ಯದು. 'ಮಜ್ಜನಂಬುಗು' ಎಂದರೆ ಸ್ನಾನಮಾಡು ಎಂದರ್ಥ: "ಉದಿತೋದಿತಂ ದಿಗಿಭಗಳೆಂಟುಂ ಒಳ್ಪೊಡರಿಸಿ ಮಜ್ಜನಂಬುಗುಸೆ" ('ಪಂಪಭಾರತ'). 'ಮಜ್ಜನಂಬೊಗು' ಎಂಬ ರೂಪವೂ ಸಿಕ್ಕತ್ತದೆ: "ಮಜ್ಜನಂಬೊಕ್ಕು ದಿವ್ಯವಸ್ತ್ರಮನುಟ್ಟು ಮಗುಳ್ದು ಬಂದು" (ನಯಸೇನನ 'ಧರ್ಮಾಮೃತ'). 'ಮಜ್ಜನವಳ್ಳ' ಎಂದರೆ ಸ್ನಾನ ಮಾಡಿಸುವವನು ("ಮಜ್ಜನಪೀಠಂ ಸುರಗಿರಿ ಮಜ್ಜನಜಳವಮೃತಜಳಧಿಜಳವು ಅಮರೇಂದ್ರಂ ಮಜ್ಜನವಳ್ಳಂ" ('ಆದಿಪುರಾಣ'). ಹಾಗೆಯೇ ಸ್ನಾನಮಾಡಿಸುವವಳು 'ಮಜ್ಜನವಳ್ತಿ': "ಅಮರ್ತ್ಯೆಯರೆ ಮಜ್ಜನವಳ್ತಿಯರಾಗಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಸ್ನಾನ ಮಾಡುವಾಗ ಕುಳಿತುಕೊಳ್ಳುವ ಮಣೆಯನ್ನು 'ಮಜ್ಜನಪೀಠ' ಎನ್ನುತ್ತಿದ್ದರು: "ವಿಭವಂ ಜನ್ಮಾಭಿಷೇಕಕ್ಕೆ ತಾನೆ ವಲಂ ಮಜ್ಜನಪೀಠಮಾದತಿಶಯಂ ಹೇಮಾದ್ರಿಗುನ್ಮುದ್ರಿತಂ" (ನಾಗಚಂದ್ರನ 'ಮಲ್ಲಿನಾಥ ಪುರಾಣ'). ಸ್ನಾನದ ಮನೆ 'ಮಜ್ಜನ ಗೃಹ': "ವಸುಧಾರಕಮೆಂಬ ಕೋಷ್ಠಾಂಗಾರಮುಂ ಜೀಮೂತಮೆಂಬ ಮಜ್ಜನಗೃಹಮುಂ" ('ಆದಿಪುರಾಣ') ಎಂಬ ಮಾತಿನಲ್ಲಿ ಅರಮನೆಗಳಲ್ಲಿ ವಿವಿಧ ಕೋಣೆಗಳಿಗೆ ಬೇರೆ ಬೇರೆ ಹೆಸರುಗಳನ್ನಿಡುತ್ತಿದ್ದ ಪರಿಪಾಟವೂ ತಿಳಿದುಬರುತ್ತದೆ.
ಮೇಲೆ ಉಲ್ಲೇಖಿಸಿದ 'ಪಂಪಭಾರತ' 'ಆದಿಪುರಾಣ' 'ಮಲ್ಲಿನಾಥ ಪುರಾಣ'ಗಳ ಸಾಲುಗಳಲ್ಲಿ 'ಮಜ್ಜನ' ಶಬ್ದಕ್ಕೆ ಅಭಿಷೇಕ ಎಂಬರ್ಥವೂ ಪ್ರಾಪ್ತವಾಗುವುದು ಸ್ಪಷ್ಟವಾಗುತ್ತದೆ. ಈ ಅರ್ಥದಲ್ಲಿ ಈ ಶಬ್ದವು ವೀರಶೈವ ಪರಿಭಾಷೆಯಲ್ಲಿ ಸೇರಿಹೋಗಿದೆ. ಲಿಂಗಕ್ಕೆ ಅಭಿಷೇಕ ಮಾಡು ಎಂಬರ್ಥದಲ್ಲಿ ಬಸವಣ್ಣನ ವಚನಗಳಲ್ಲಿ "ಬಂಡಿ ತುಂಬ ಪತ್ರೆಯ ತಂದು ಕಂಡಕಂಡಲ್ಲಿ ಮಜ್ಜನಕ್ಕೆರೆವಿರಿ" "ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ" ಎಂಬಂತಹ ಮಾತುಗಳು ಸಿಗುತ್ತವೆ. ಜಂಗಮದ ವಿಷಯದಲ್ಲಾದರೆ 'ಮಜ್ಜನ ಮಾಡಿಸು' ಶಬ್ದಕ್ಕೆ ಸ್ನಾನಮಾಡಿಸು ಎಂಬ ಅರ್ಥ ಪ್ರಾಪ್ತವಾಗುತ್ತದೆ: "ನಾನು ಮಜ್ಜನವ ಮಾಡುವ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ" ಎಂಬ ಮಹಾದೇವಿಯಕ್ಕನ ಮಾತಿನಲ್ಲಿ ಈ ಅರ್ಥವಿದೆ. ಅಷ್ಟಾವರಣಗಳಲ್ಲಿ ಒಂದಾದ ಪಾದೋಕವೆಂದರೆ, ಚೆನ್ನಬಸವಣ್ಣ ಮಾತುಗಳಲ್ಲಿ, "ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು". ಅಲ್ಲದೆ "ಪಾದೋದಕದಲ್ಲಿ ಮುಖಪ್ರಕ್ಷಾಲನ ಮಾಡುವುದು" ಎಂದು ಅವನು ವಿಧಿಸುತ್ತಾನೆ. ಹರಿಹರನು 'ಮಹಮಜ್ಜನ' ಎಂಬ ಶಬ್ದವನ್ನು ಬಳಸುತ್ತಾನೆ: "ಚರಿತದಿಂ ಮನೆಗೆ ಬಿಜಯಂಗೆಯ್ಸಿ ತಂದಂದು| ಪರಿಮಳೋದಕದಿಂದೆ ಮಹಮಜ್ಜನಕ್ಕೆರೆದು".
=====
ಮಡಿ: 'ಹಿಮ್ಮಡಿ' ಮುಮ್ಮಡಿಗಳ ಕಾರುಬಾರು
ಮಠಮಾನ್ಯಗಳಳ್ಲಿ ಪಾಠಪೀಠಗಳಲ್ಲಿ ಹಿಮ್ಮಡಿ (ಹಿಂದೆಯೂ ಮಡಿ) ಮುಮ್ಮಡಿ (ಮುಂದೆಯೂ ಮಡಿ) ಪಾರುಪತ್ಯೆ ಮಾಡುವುದು ನಮ್ಮೆಲ್ಲರ ಅನುಭಕ್ಕೆ ಬಂದಿರುವಂಥದೇ. ಹೌದು, ಇದು ಮಡಿ ಪುರಾಣವನ್ನು ಕುರಿತದ್ದೇ. ಅಲ್ಲದೆ, ಮಡಿಮೈಲಿಗೆಗಳು ಅವಳಿಜವಳಿಗಳು, ಹೀಗಾಗಿ ಇದು ಜೋಡಿ ಸಂಕಥನವೂ ಹೌದು.
ಮಡಿ ದ್ರಾವಿಡ ಮೂಲದ್ದೇ; ಈ ಶಬ್ದ ಸಂಸ್ಕೃತದಲ್ಲಿ ಕಾಣಸಿಗುವುದಿಲ್ಲ. ತಮಿಳಿನಲ್ಲಿ ಮಟಿ ಎಂದೂ, ತೆಲುಗಿನಲ್ಲಿ ಮಡಿ, ಮಡುಗು ಎಂದೂ, ತುಳುವಿನಲ್ಲಿ ಮಡಿ ಎಂದೂ ಇದರ ರೂಪಗಳು ದೊರೆಯುತ್ತವೆ. ಎಲ್ಲ ಭಾಷೆಗಳಲ್ಲೂ ಅರ್ಥ ಸುಮಾರು ಒಂದೇ; ಪರಿಶುದ್ಧತೆ, ಒಗೆದ ಬಟ್ಟೆ, ನಾರುಡೆ, ಹತ್ತಿಯ ಅಥವಾ ರೇಷ್ಮೆ ಬಟ್ಟೆ ಹಾಗೂ ಧಾರ್ಮಿಕ ಶುಚಿತ್ವ ಎಂಬರ್ಥಗಳಿವೆ. ಪ್ರಾಯಶಃ ಇವೆಲ್ಲ ಮೊದಲಿನಿಂದಲೂ ಇದ್ದುವಾಗಿರದೆ, ಕ್ರಮೇಣ ಈ ಶಬ್ದದ ಅರ್ಥ ವಿಸ್ತಾರಗೊಂಡಂತೆ ಕಾಣುತ್ತದೆ. ಏಕೆಂದರೆ, ಕನ್ನಡದ ನಿದರ್ಶನಗಳನ್ನು ತೆಗೆದುಕೊಂಡರೆ, ಮಡಿ ಎಂಬುದು ಬಟ್ಟೆ ಒಗೆಯುವುದು ಎಂಬರ್ಥದಲ್ಲಿಯೂ, ಬಟ್ಟೆ ಒಗೆಯುವ ವೃತ್ತಿಯವನು ಎಂಬರ್ಥದಲ್ಲಿ ಮಡಿವಳ, ಮಡಿವಾಳ, ಮಡಿವಳ್ಳ ಎಂಬ ಶಬ್ದಗಳೂ ಮೊದಲಿನಿಂದಲೇ ಬಳಕೆಯಲ್ಲಿವೆ. ಹೀಗಾಗಿ ಮೊದಲು ಬಟ್ಟೆ ಶುದ್ಧಿಗೆ ಅನ್ವಯಿಸುತ್ತಿದ್ದ ಅರ್ಥವು ಬರಬರುತ್ತ ವ್ಯಾಪಕತೆಯನ್ನು ಪಡೆಯಿತು.
"ಬಗೆಯುತ್ತುಮಿರ್ದ ಮಡಿವಳನ ಮುಂದಣ ಮಡಿಯುಮಂ ತನ್ನೊಡನೆಯ ಗೋವಳಿಗರುಟ್ಟ ಮೈಲಿಗೆಯುಮಂ ಮಧುಸೂದನಂ ಕಂಡು" ಎಂಬ ನೇಮಿಚಂದ್ರನ 'ನೇಮಿನಾಥ ಪುರಾಣ'ದಲ್ಲಿ ಮಡಿ ಎಂಬುದಕ್ಕೆ ಶುಭ್ರವಾದ ಬಟ್ಟೆ ಎಂಬುದು ಅದಕ್ಕೆ ವಿರುದ್ಧವಾದ ಮೈಲಿಗೆಯ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ. ಅಂತೆಯೇ "ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು?" ಎಂಬ ಜೇಡರ ದಾಸಿಮಯ್ಯನ ಮಾತಿನಲ್ಲೂ ಶುಭ್ರವಾದ (ಮಡಿದು=ಮಡಿಯಾದ) ಬಟ್ಟೆ ಎಂಬರ್ಥವಿದೆ. 'ಬಸವ ಪುರಾಣ'ದಲ್ಲಿ ಉಬ್ಬ ಹಾಕುವ ರೀತಿ ವರ್ಣಿತವಾಗಿದೆ: "ಕುದಿಸಿ ಉದಕದೊಳುಲುಬಿ ಬೀಸುತ್ತೊಗೆದು ಪರಡಿ ಮಡಿಗಳಹುದಕ್ಕಟಾ ಮುನಿದೆ". ಆದರೆ 'ಪಂಪಭಾರತ'ದ "ತನ್ನುಡುವುಪ್ಪಟಂಗಳ್ ಮಡಿಯೊಳಾಗೆಯುಂ" ಎಂಬಲ್ಲಿಯೂ 'ಧರ್ಮಾಮೃತ' "ಮಡಿಯನುಡುವಂತೆ ಸಮೆದಾಭರಣಮಂ ತೊಡುವಂತೆ" ಎಂಬಲ್ಲಿ ರೇಷ್ಮೆ ಎಂಬರ್ಥವಿರುವಂತೆ ತೋರುತ್ತದೆ. 'ಮಡಿ' ದ್ರಾವಿಡ ಪದ, ಆದರಿದು ಕ್ವಚಿತ್ತಾಗಿ ಸಂಸ್ಕೃತದಲ್ಲಿಯೂ ಬಳಕೆಯಾದಂತಿದೆ: ಇಡಿಯಾದ ಬಟ್ಟೆ ಎಂಬರ್ಥದಲ್ಲಿ ಜೈನ ಕಾವ್ಯಗಳಲ್ಲಿದು ಬಳಕೆಯಾಗಿದೆಯೆಂದು ಕೆಲವು ವಿದ್ವಾಂಸರ ಸಂಶೋಧನೆ.
ಕೇವಲ ಒಗೆದು ಶುಭ್ರಗೊಂಡ ಬಟ್ಟೆ ಎನ್ನುವುದು ಬರಬರುತ್ತ ವೈಯಕ್ತಿಕ ಶೌಚ ಎಂಬರ್ಥದಲ್ಲಿ ಅಮೂರ್ತ ಕಲ್ಪನೆಯಾಯಿತು. ಕನ್ನಡದ ಮಡಿ ಶಬ್ದ ಈ ಅರ್ಥದಲ್ಲಿ ಬಳಕೆಗೊಂಡುದು ಈಚಿನ ಶತಮಾನಗಳಲ್ಲಿ. "ಮಡಿಮಡಿಯೆಂದು ಅಡಿಗಡಿಗ್ಹಾರುವೆ ಮಡಿಮಾಡುವ ಬಗೆ ಬೇರುಂಟು" ಎಂಬಂತಹ ಕಡೆಗಳಲ್ಲಿ, ಅಂದರೆ ಬ್ರಾಹ್ಮಣ ಬರಹಗಳಲ್ಲಿ. ಈ ಆಚರಣೆ ಮೊದಲಿನಿಂದಲೂ ಇರಬಹುದು, ಆದರೆ ಬ್ರಾಹ್ಮಣರಲ್ಲಾದ್ದರಿಂದಲೂ, ಬ್ರಾಹ್ಮಣೇತರರ ರಚನೆಗಳಲ್ಲಿ ಈ ಅರ್ಥದಲ್ಲಿ ಇದನ್ನು ಬಳಸುವ ಪ್ರಮೇಯ ಬಂದಿಲ್ಲ. ಪಂಚಸೂತಕಗಳ ಪರಿಕಲ್ಪನೆಯಲ್ಲಿ ಮಡಿಯಾದ ವ್ಯಕ್ತಿ ಇತರರನ್ನು ಮುಟ್ಟಿಕೊಳ್ಳದಿರುವುದು ಮುಖ್ಯವಾಯಿತು. ಜಾತಿಸೂತಕ, ಜನನಸೂತಕ, ಪ್ರೇತಸೂತಕ, ಉಚ್ಚಿಷ್ಟಸೂತಕ ಮತ್ತು ರಜಸ್ಸೂತಕಗಳೇ ಇವು. ಸೂತಕ ಎಂಬ ಶಬ್ದದಲ್ಲಿನ 'ಸೂತ' ಎಂಬುದು ಹುಟ್ಟನ್ನು ಸೂಚಿಸುತ್ತದೆ; ಹಾಗಾಗಿ ಜಾತಿಯನ್ನೂ ಸೂಚಿಸುತ್ತದೆ. ಮಗು ಹುಟ್ಟಿದಾಗ ಅಥವಾ ಗರ್ಭಪಾತವಾದಾಗ ತಂದೆತಾಯಿಯರಿಬ್ಬರೂ ಅಶೌಚವನ್ನಾಚರಿಸಬೇಕೆಂದು ಗೌತಮ, ವಾಸಿಷ್ಠರಂತಹ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ; ಆದರೆ ಇದು ಅನ್ವಯಿಸುವುದು ಮೇಲುವರ್ಣದವರಿಗೆ, ಅದರಲ್ಲೂ ಬ್ರಾಹ್ಮಣರಿಗೆ. ಇದು ಮಾನಸಿಕ ಶುಚಿತ್ವದ ಜೊತೆಗೆ ದೇಹಸ್ಥಿತಿಯ ಶುಭ್ರತೆ ಹಾಗೂ ಹುಟ್ಟಿನ ಶ್ರೇಷ್ಠತೆಗಳಿಗೂ ಅನ್ವಯಿಸಿತ್ತು. ಧಾರ್ಮಿಕಾಚರಣೆಗಳಲ್ಲಿ ಮಡಿಗೆ ವಿಶೇಷಪ್ರಾಧಾನ್ಯ: ಪೂಜೆ, ಯಜ್ಞ, ವ್ರತ ಮುಂತಾದವುಗಳನ್ನು ಮಾಡುವವನು ಮಡಿ ಉಡಬೇಕು. ಮಡಿ ವ್ಯಕ್ತಿ ಎಂದರೆ ಪವಿತ್ರ; ಆದ್ದರಿಂದ ಅಪವಿತ್ರನನ್ನು ಮುಟ್ಟಿಕೊಂಡರೆ ಸ್ನಾನಮಾಡಬೇಕೆಂಬ ನಿಯಮ ಬಂತು. ಗಂಡನನ್ನು ಕಳೆದುಕೊಂಡ ವಿಧವೆ (ಪ್ರಾಯಶಃ ಸದಾ ಪಾವಿತ್ರ್ಯವನ್ನುಳಿಸಿಕೊಳ್ಳಬೇಕೆಂಬ ನಿರೀಕ್ಷೆಯಿಂದ) ತಲೆ ಬೋಳಿಸಿಕೊಂಡು 'ಮಡಿ'ಯಾಗುವ ಸಂಪ್ರದಾಯ ಬಂತು. 'ಮಡಿ ಹೆಂಗಸು' ಬ್ರಾಹ್ಮಣವರ್ಗದಲ್ಲಿ ವ್ಯಾಪಕ ಬಳಕೆಯ ಶಬ್ದ. 'ಮಡಿ ಗಂಡಸು' ಎಂಬ ಶಬ್ದವಿಲ್ಲ!
ಮಡಿಯಲ್ಲಿರುವ ವ್ಯಕ್ತಿ ಅದಕ್ಕೆಂದೇ ಒಗೆದು ಹಾಕಿದ ಬಟ್ಟೆಯನ್ನೋ, ರೇಷ್ಮೆ ವಸ್ತ್ರವನ್ನೋ ನಾರುಮಡಿಯನ್ನೋ ಧರಿಸುತ್ತಾನೆ. ಸಂಸ್ಕೃತದ 'ವಲ್ಕಲ' ಎಂದರೆ ನಾರುವಸ್ತ್ರ; ವಲ್ಕಲ, ಅದು ಮರದ ತೊಗಟೆಯನ್ನೂ ನಾರಿನಿಂದ ಮಾಡಿದ ವಸ್ತ್ರವನ್ನೂ ಸೂಚಿಸುತ್ತದೆ; ತಪಸ್ವಿಗಳು ಉಡುತ್ತಿದ್ದ ಬಟ್ಟೆ. ಕನ್ನಡದಲ್ಲಿ ನಾರು, ನಾರುಡೆ, ನಾರುಡು, ನಾರಸೀರೆ ಮುಂತಾದ ಶಬ್ದಳ ಬಳಕೆಯಿತ್ತು; ನಾರುಮಡಿ ಪ್ರಾಯಶಃ ಈಚಿನ ರೂಪ. ನಾರಿನಿಂದ ತಯಾರಿಸಿದ ಬಟ್ಟೆ ಎಂರ್ಥದ ಜೊತೆಗೆ, ನಾರೇ ಮಡಿ ಎಂಬ ಭಾವನೆ ಇದರಲ್ಲಿ ಸೇರಿರುವಂತಿದೆ.
ಭಾಷೆಯಲ್ಲಿ ಸಾಮಾನ್ಯವಾಗಿ ಒಂದು ಪರಿಕಲ್ಪನೆಗೆ ವಿರುದ್ಧವಾದ ಮತ್ತೊಂದು ಇದ್ದೇ ಇರುತ್ತದೆ, ಅದಕ್ಕನುಗುಣವಾದ ಶಬ್ದವೂ ಸೃಷ್ಟಿತವಾಗುತ್ತದೆ. ಹೀಗೆ ಕನ್ನಡದಲ್ಲಿ 'ಮೈಲಿಗೆ' ಎಂಬುದು 'ಮಡಿ'ಯ ವಿರುದ್ಧ ಪರಿಕಲ್ಪನೆಯ ಶಬ್ದ. ಈ ಶಬ್ದವು ಮೈಲಗೆ ಹಾಗೂ ಮೈಲಿಗೆ ಎಂಬೆರಡೂ ರೂಪಗಳಲ್ಲಿ ದೊರೆಯುತ್ತದೆ. 'ಮಡಿ' ಯಾವ್ಯಾವ ನೆಲೆಗಳಲ್ಲಿ ಬಳಕೆಯಾಯಿತೋ ಆ ಎಲ್ಲ ನೆಲೆಗಳಲ್ಲಿ ಅದರ ವಿರುದ್ಧವಾದ ಮೈಲಿಗೆಯೂ ಬಳಕೆಯಾಗಿದೆ. ರನ್ನನ 'ಅಜಿತ ಪುರಾಣ'ದಲ್ಲಿ "ಅಗಲೊಳಿಕ್ಕಿದ ಉಳ್ಳುಣಿಸಮೇಧ್ಯಮೆಂ ಎಂಜಲುಂ ಅಪ್ಪುದು, ಉಟ್ಟ ಪುಟ್ಟುಗೆಗಳುಂ ಅಂತೆ ಮೈಲಗೆಗಳಪ್ಪುವು" ಎಂಬ ವಾಕ್ಯವಿದೆ. ಇಲ್ಲಿ ಉಟ್ಟು ಬಿಟ್ಟ ಬಟ್ಟೆ ಎಂಬರ್ಥ ಇಲ್ಲದೆ. ಇದು 'ಹರಿಶ್ಚಂದ್ರ ಕಾವ್ಯ'ದಲ್ಲಿ ನೇರವಾಗಿಯೇ ಬಂದಿದೆ: "ಉಟ್ಟು ಕಳೆದ ಮೈಲಿಗೆಗೆ ಸವಿದೊಗಡಿಸಿದ ಕೂಳ್ಗೆ ಕೈಯಾಂತವಂ ಬೇರೆ ಸಂದೆಗವಿಲ್ಲ". ಆಗಲೇ ನೋಡಿದ 'ನೇಮಿನಾಥ ಪುರಾಣ'ದ ಉಲ್ಲೇಖದಲ್ಲಿನ "ಗೋವಳಿಗರುಟ್ಟ ಮೈಲಿಗೆಯುಮಂ ಕಂಡು" ಎಂಬಲ್ಲಿ ಕೊಳಕು ಬಟ್ಟೆ ಎಂಬರ್ಥವಿದೆ. ಈ ಅರ್ಥ ಕನಕದಾಸರ 'ನಳಚರಿತ್ರೆ'ಯಲ್ಲಿ ಸ್ಪಷ್ಟವಾಗಿಯೇ ಇದೆ: "ಮೈಲಿಗೆಯ ಸೀರೆಯನುಟ್ಟು ತನು ಕಳೆತೆಗೆಯೆ ಕೈಗಲ್ಲದಲಿ ನಿಂದಿಹ ಸತಿಯನೀಕ್ಷಿಸಿದ". ಅಂದರೆ ಒಗೆಯಬೇಕಾದ ಬಟ್ಟೆ ಎಂಬ ಒಟ್ಟರ್ಥವು "ಧರ್ಮಾಮೃತ'ದ "ಮೈಲಿಗೆಯಂತೊಗೆಹಕ್ಕೆ ವಂದು" ಎಂಬ ವಾಕ್ಯಖಂಡದಲ್ಲಿ ಸ್ಪಷ್ಟವಾಗಿದೆ.
ಮುಂದೆ, ಈ ಶಬ್ದ ಮಾನಸಿಕ ಅಪವಿತ್ರತೆ ಎಂಬ ಅರ್ಥದಲ್ಲಿ ಹಿಗ್ಗಲಿಕೆಯಾಯಿತು. "ಮನದ ಮೈಲಿಗೆಯ ಕಳೆಯ ಬಂದನಯ್ಯಾ ಮಡಿವಾಳನು" ಎಂಬ ಬಸವಣ್ಣನ ವಚನದ ಮಾತಿನಲ್ಲಿದು ವೇದ್ಯವಾಗುತ್ತದೆ. "ಮತ್ಸರಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ" ಎಂಬ ಕುಮಾರವ್ಯಾಸನ ಮಾತೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಇದು ಧಾರ್ಮಿಕಾಚರಣೆಯ ಪರಿಕಲ್ಪನೆಯ ಆರ್ಥದಲ್ಲಿ ಕಾಣಿಸಿಕೊಳ್ಳುವುದು ಪುರಂದರದಾಸರ ಮಾತಿನಲ್ಲಿ: "ಮಡಿಯುಂ ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ". ಆ ಮೊದಲು ರೂಢಿಯಲ್ಲಿರದಿದ್ದ ಮಡಿ-ಮೈಲಿಗೆಯ ಪರಿಕಲ್ಪನೆ ಬ್ರಾಹ್ಮಣರು ಅಂದರೆ ಮೇಲುವರ್ಣದವರಲ್ಲಿ ಬುದ್ಧನ ನಂತರ ಆರಂಭವಾಗಿರಬೇಕು ಎಂದು ಡಾ. ಶ್ಯಾಮಾಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ.
======
ಮದ್ದು: ಕನ್ನಡದಲ್ಲಿ ಈ ಶಬ್ದಕ್ಕೆ ಔಷಧಿ ಎಂಬ ಅರ್ಥವಿದೆ. ಇದು ದ್ರಾವಿಡ ಪದ (ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಮುಖ್ಯವಾದ ದ್ರಾವಿಡ ಭಾಷಾ ಕುಟುಂಬದಲ್ಲಿರುವ ಪದ). ಇದರ ಮೂಲ ರೂಪ ಕನ್ನಡದಲ್ಲಿ  ಮರ್ದು ಎಂದು. ತಮಿಳಿನಲ್ಲಿ ಮರುಂದು, ತೆಲುಗಿನಲ್ಲಿ ಮಂದು, ಮಲಯಾಳಂನಲ್ಲಿ ಮರುನ್ನು, ತುಳುವಿನಲ್ಲಿ ಮರ್ದ್ ಎಂಬ ರೂಪಗಳಿವೆ. ತುಂಬ ಹಿಂದಿನ ಕನ್ನಡ ಕಾವ್ಯಗಳಲ್ಲಿಯೂ ಔಷಧಿ ಎಂಬ ಅರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ. "ಮರ್ದುಂ ಮಂತ್ರಮುಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದ್ದರೆ, ಚಿಕಿತ್ಸೆಯ ಎರಡು ಕ್ರಮಗಳಾದ ಔಷಧಪ್ರಯೋಗ ಮತ್ತು ಮಂತ್ರ ಹಾಕುವುದು ಇವುಗಳನ್ನಿದು ಸೂಚಿಸುತ್ತದೆ. "ಕುತ್ತಕ್ಕೆ ಮರ್ದು ಮಾಡದೆ ಕುತ್ತಂ ಪೋಗೆಂದೊಡಂತೆ ಪೋಕುಮೇ" ಎಂದು ಬ್ರಹ್ಮಶಿವನ 'ಸಮಯ ಪರೀಕ್ಷೆ' ಯಲ್ಲಿ ಹೇಳಿದೆ. ಮದ್ದು ರೋಗನಿವಾರಣೆಗಾಗಿ ಬಳಸುವ ವಸ್ತು ಎಂಬುದು ಸ್ಪಷ್ಟವಾದ ಅರ್ಥ.
ಮರ್ದು ಎಂಬ ಶಬ್ದವನ್ನು ವಿಷ, ನಂಜು ಎಂಬರ್ಥದಲ್ಲಿಯೂ ಬಳಸುತ್ತಿದ್ದರು. 'ಸಮಯಪರೀಕ್ಷೆ'ಯಲ್ಲಿಯೇ "ಮಕ್ಕಳಿಗೆ ಬೆಣ್ಣೆಯೊಳ್ ಮರ್ದಿಕ್ಕುವವೊಲ್" ಎಂದು ಹೇಳಿದೆ. ಕೈಮದ್ದು ಎಂದೂ ಇದನ್ನು ಕರೆಯುತ್ತಾರೆ. ಕೈಮಸಕ ಅಥವಾ ಕೈಮಸಕು ಎಂಬ ಶಬ್ದಗಳನ್ನೂ ಈ ಅರ್ಥದಲ್ಲಿ ಬಳಸುತ್ತಾರೆ. ಆರೋಗ್ಯ ಹಾಳು ಮಾಡಲು ಆಹಾರದೊಡನೆ ಬೆರೆಸುವ ಮದ್ದನ್ನಿದು ಸೂಚಿಸುತ್ತದೆ. ಮಸಕ ಎಂದರೆ ಕೆಲಸ ಎಂಬ ಅರ್ಥವೂ ಇರುವುದರಿಂದ, ಕೈಮಸಕ ಎಂದರೆ ಕೈಚಳಕ ಎಂಬ ಅರ್ಥವೂ ಆಗಬಹುದೇನೋ. ಏಕೆಂದರೆ ಇದು ಬಹಿರಂಗವಾಗಿ ಮಾಡುವಂಥ ಕಾರ್ಯವಲ್ಲವಲ್ಲ. ಅಪರಿಚಿತರು ಕೊಡುವ ಏನನ್ನೂ ತಿನ್ನಬೇಡ ಎಂದು ಚಿಕ್ಕ ವಯಸ್ಸಿನಲ್ಲಿ ಹಳ್ಳಿಯಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದರು. ಕೆಲವರಿಗೆ ಹೀಗೆ ಕೈಮಸಕವಿಕ್ಕುವುದು ಅನಿವಾರ್ಯ ಎಂಬ ನಂಬಿಕೆಯಿತ್ತು; ಯಾರಿಗಾದರೂ ಅದನ್ನು ಹಾಕಲೇಬೇಕಂತೆ; ಇಲ್ಲದಿದ್ದರೆ ಅವರಿಗೇ ಕೇಡು. ಆಹಾರದಲ್ಲಿ ಬೆರಸಿದ ಏನೋ ವಿಷಪದಾರ್ಥ ಹೊಟ್ಟೆಯಲ್ಲೇ ಉಳಿದು ತಿಂದವವನ್ನು ಕೃಶಗೊಳಿಸುತ್ತದೆ ಎಂಬ ನಂಬಿಕೆ. "ನವನೀತಮುಮಂ ಶುಕತುಂಡವುಮಂ ಮೇಣ್ ಬಿಸಿಯ ನೀರುಮಂ ಕೋಳದ ಮೂಳವುಮಂ ಮರವಸಲೆಯ ಪತ್ರೆ ತೊಳಸಿ ಸೇವಿಸುಗೆ ಪಿಂಗುಗುಂ ಕೆಯ್ಮಸಕಂ" ಎಂದು ಚಾವುಂಡರಾಯನ 'ಲೋಕೋಪಕಾರ'ದಲ್ಲಿ ಇಂಥ ವಿಷವನ್ನಿಳಿಸುವ ಉಪಾಯವು ಸೂಚಿತವಾಗಿದೆ. ಆನೆಗನ ತಿಗುಡನ್ನು ಅರೆದು ಬೆಣ್ಣೆಯಲ್ಲಿ ಕಲಸಿ ತಿನ್ನುವುದು, ಅಂಕೋಲೆಯ ಬೇರನ್ನು ಬಿಸಿನೀರಲ್ಲಿ ತೇಯ್ದು ಕುಡಿಸುವುದು ಅಥವಾ ಬಸಲೆಸೊಪ್ಪನ್ನು ತುಳಸಿಗಳನ್ನು ಮೆಲ್ಲವುದು ಇದಕ್ಕೆ ಪರಿಹಾರ ಎಂದು ಅರ್ಥ. ಇಲ್ಲಿ ಸೂಚಿತವಾದ ಸಸ್ಯಗಳನ್ನು ಗುರುತಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ..
======
ಮರ1: ತಮಿಳು ಮಲಯಾಳಗಳಲ್ಲಿ 'ಮರಂ' ಎಂದೂ, ತೆಲುಗಿನಲ್ಲಿ 'ಮ್ರಾನು' ಎಂದೂ, ಕನ್ನಡ ತುಳುಗಳಲ್ಲಿ 'ಮರ' ಎಂದೂ ಇರುವ ಈ ಶಬ್ದವು ದೊಡ್ಡ ಗಿಡ ಎಂಬರ್ಥದಲ್ಲಿದೆ. "ಆಮೋದ ಕುಮುದಸಮಿತಿಯನಾ ಮರಂಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ" ಎಂಬುದು 'ಕವಿರಾಜಮಾರ್ಗ'ದಲ್ಲಿಯ ಸಾಲು. "ಕಜ್ಜಂ ಪಲಸಿನ ಮರದಂತೆ ಫಲಮನೆತ್ತಿಕೊಂಡು ಬರಲಕ್ಕುಂ" ಎಂಬುದು 'ಪಂಚತಂತ್ರ'ದ ವಾಕ್ಯ. ಮರಗಳಿಂದ ಕೂಡಿದ ದಟ್ಟ ಕಾಡಿನ ಕತ್ತಲೆಯನ್ನು 'ಮರಗಳ್ತಲೆ' ಸೂಚಿಸುತ್ತದೆ: "ತುರುಗೆದೆಗಣ್ಣ ಕಾಂತಿ ಮರಗಳ್ತಲೆಯಂ ಬೆದರಟ್ಟೆ" ಎಂಬುದು 'ಜಗನ್ನಾಥವಿಜಯ' ಸಾಲು. ಇಂತಹ ಕಾಡನ್ನು ಕುಮಾರವ್ಯಾಸ 'ಮರಗಾಡು' ಎನ್ನುತ್ತಾನೆ: "ಮರಗಾಡಿನಲಿ ಮೃಗಗಣದ ನೆಲೆಯಲಿ ಕಾಣಿರೆಲೆ ನೀವು" ಎಂಬುದು ಅವನ ಪ್ರಯೋಗ. 'ಮರಗಟ್ಟು' ಎಂದರೆ ಮರದ ಬುಡದ ಪಾತಿ: "ಮರಗಟ್ಟೆಂಬಂತೆ ಸುತ್ತುಂ ಮೊದಲೊಳ್ ಅಜಗರಂ .. .. ನೀಳ್ದಂತಿರೆ" 'ಕರ್ನಾಟಕ ಕಾದಂಬರಿ'. 'ಮರಮೊದಲ್' ಎಂದರೆ ಮರದ ಬುಡ: "ಮುನೀಂದ್ರಂ ಬೇರೂಱಿದ ಬೀಳಲಂತೆ ಮರಮೊದಲಿರ್ದಂ" - 'ಚಂದ್ರಪ್ರಭಪುರಾಣ'. 'ಮರಗೊಂಬು' = ಮರದ ಕೊಂಬೆ: "ಮರಗೊಂಬಿನೊಳವುಂಕಿದ ಸೆಲ್ಲದ ಮುಷ್ಟಿ" - ಆಚಣ್ಣನ 'ವರ್ಧಮಾನಪುರಾಣ'. ಈ ಶಬ್ದಕ್ಕೆ ಮರಕೋತಿಯಾಟ ಎಂಬ ಅರ್ಥವೂ ಇದೆ: "ವಿನೋದರಸದ ಬಸದಿಂ ಮರಗೊಂಬನಾಡುತಿರ್ದ ವೀರಜಿನಕುಮಾರನಂ" ಎಂಬುದೂ ಅಲ್ಲಿಯದೇ ಪ್ರಯೋಗ. 'ಮರದುರುಗಲ್' ಎಂದರೆ ತೋಪು: "ಪರ್ವತದ ಮೇಲೆ ಕರಂಗಿ ಕಳ್ತಲಿಸಿದ ಮರದುರುಗಲ ನಡುವೆ" - 'ಪಂಪಭಾರತ'. 'ಮರವಕ್ಕಿ' ಎಂದರೆ ಮರಕುಟಿಗ ಪಕ್ಷಿ: "ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಜಿಂಕೆಗಳು" ಎಂಬ ಸಾಲು ಏಲೇಶ್ವರ ಕೇತಯ್ಯನ ವಚನದ್ದು. 'ಮರವಡೆ' ಎಂಬುದು ಮರಗಳ ಆದಾಯದ ಮೇಲೆ ಹಾಕುತ್ತಿದ್ದ ತೆರಿಗೆಯೆಂಬಂತೆ ಶಾಸನಗಳಲ್ಲಿ ಬಂದಿದೆ: "ತೋಟ ತುಡಿಗೆ ಗದೆ ಬೆದಲು ಮಾವಡೆ ಮರವಡೆ ನಿಧಿ ನಿಕ್ಷೇಪ .. ..." ಎಂಬುದು ಹದಿನಾರನೆಯ ಶತಮಾನದ ಶಾಸನವೊಂದರ ಉಲ್ಲೇಖ.
"ಮರ ಬೇರು ಸಾರದಿಂದ ನಾನಾ ಶಾಖೆಗಳು ಪಲ್ಲವಿಸುವ ತೆರನಂತೆ .. .. ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ" ಎಂಬ ಉಪಮೆ ಅಂಬಿಗರ ಚೌಡಯ್ಯನ ವಚನದಲ್ಲಿದೆ. ಬಸವಣ್ಣ "ಮರನೇರಿದ ಮರ್ಕಟನಂತೆ" ಎಂದು ಚಂಚಲ ಮನಸ್ಸನ್ನು ವರ್ಣಿಸುತ್ತಾನೆ. ಮತ್ತೊಂದೆಡೆ "ಮರಕ್ಕೆ ಬೇರು ಬಾಯೆಂದು ತಳಯಿಂಕೆ ನೀರನೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ" ಎಂದು ಜಂಗಮದ ಶ್ರೇಷ್ಠತೆಯನ್ನು ವರ್ಣಿಸುತ್ತಾನೆ. "ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ" ಎಂದು ಕನಕದಾಸರು 'ಮರ'ವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ. "ಮರದ ಇಂಬಿಗೆ ಬಾಗಿ ಬಳುಕುತಿರುವೆಳಲತೆಯು ತಳಿರ ತೂಗುಯ್ಯಾಲೆ ಹೂ ತೊಂಗಲು" ಎಂಬುದು ವಿಸೀಯವರು ನೀಡುವ ಚಿತ್ರ. "ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ, ಕೊಂಬೆರೆಂಬೆಗಳಿರಲಿ ಇದ್ದ ಹಾಗೆ" ಎಂಬ ಸಾಲು ದೇಶದ ಸ್ಥಿತಿ ವರ್ಣಿಸುವ ಗೋಪಾಲಕೃಷ್ಣ ಅಡಿಗರ 'ಇಂದು ನಮ್ಮೀ ನಾಡು - 3ಕ' ಕವನದ್ದು.
=====
ಮರ2: ಮರ ಶಬ್ದವನ್ನು ಕಾಷ್ಠ, ಒಣಮರದ ತುಂಡು ಎಂಬರ್ಥದಲ್ಲಿಯೂ ಬಳಸುತ್ತೇವೆ, "ಅರದಿದಾರ್ಪುದೆನ್ನದೆ ತಗುಳ್ದು ಮರಂಗಳನೊಟ್ಟಿ" ಎಂಬುದು 'ಸುಕುಮಾರಚರತೆ' ಕಾವ್ಯದ ಸಾಲು. "ಕೀಲಂ ಬೆಟ್ಟಿರ್ದ ಮರನಂ ಕಂಡದರ ಮೇಲೆ ಕುಳ್ಳಿರ್ದು" ಎಂಬುದು 'ಪಂಚತಂತ್ರ'ದ ಸಾಲು. ಈ ಶಬ್ದವು ಅನೇಕ ಭಾವಗಳನ್ನು ಸೂಚಿಸಲು ಬಳಕೆಯಾಗಿದೆ. "ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ" ಎಂಬಲ್ಲಿ ಜೇಡರ ದಾಸಿಮಯ್ಯ ವಿಸ್ಮಯವನ್ನು ಸೂಚಿಸಿದರೆ, "ಮರದೊಳಗಣ ಕಿಚ್ಚು ಮರನ ಸುಟ್ಟಂತಾದೆನಯ್ಯಾ" ಎಂಬ ಅಲ್ಲಮಪ್ರಭುವಿನ ಮಾತು ಲಿಂಗಪೂಜೆಯ ಪರಿಣಾಮವನ್ನು ಹೇಳಲು ಬಳಕೆಯಾಗಿದೆ. 
 "ಮರಮರ ಮಥನಿಸಿ ಕಿಚ್ಚು ಹುಟ್ಟಿ" ಎಂಬ ಮಹಾದೇವಿಯಕ್ಕನ ವಚನದ ಸಾಲಿನಲ್ಲಿ ಮರದ ತುಂಡುಗಳನ್ನು ಉಜ್ಜಿಯೋ ಕಡೆದೋ ಬೆಂಕಿ ಮಾಡಿಕೊಳ್ಳುತ್ತಿದ್ದ ಅರ್ಥವಿದೆ. ಮರದಿಂದ ಅನೇಕ ವಸ್ತುಗಳನ್ನು ಮಾಡಿಕೊಳ್ಳುವ ರೂಢಿ ಹಿಂದಿನದು. ಮರಗೋಲಿನ ಉಲ್ಲೇಖ 'ಧರ್ಮಾಮೃತ'ದಲ್ಲಿದೆ: "ಜಾತ್ಯಶ್ವಮಂ ಬಿಟ್ಟು ಮರಗಾಲಂ ಕೊಳ್ವ." ಬಸವಣ್ಣನೂ ಇದನ್ನು ಉಲ್ಲೇಖಿಸುತ್ತಾನೆ: "ಮರಗಾಲಲಟ್ಟಿ ಸದೆದು ನೋಡಯ್ಯಾ". ಮರದಿಂದ ಮಾಡಿದ ಮುಖವಾಡವನ್ನು 'ಮರಮೊಗ' ಎಂಬ ಶಬ್ದದಿಂದಲೇ ಕರೆಯುತ್ತಿದ್ದರು. "ಲೋಗರ್ ಪಗರಣಿಗರಾಗಿ ಎನಿತಾನುಂ ತೆರದ ರೂಪುಗಳುಮಂ ಕೈಕೊಂಡು ಮರಮೊಗಂಗಳನಿಟ್ಟು" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಮರವಾಳ್ ಎಂದರೆ ಮರದ ಕತ್ತಿ: "ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಮಕ್ಕುಮೇ" - 'ಗದಾಯುದ್ಧ'. ಮರದ ಬಿಲ್ಲೇ 'ಮರವಿಲ್': "ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು" - 'ಪಂಪಭಾರತ'.  ಮರದಿಂದ ಮಾಡಿದ ಮಣಿಯೇ 'ಮರವಣೆ'; "ಮರವಣೆಗಂ ಬೀಣೆಗಮಂತರಮಾವುದೋ" ಎಂಬುದು 'ಕಾವ್ಯಾವಲೋಕನ'ದಲ್ಲಿನ ಪದ್ಯವೊಂದರ ಸಾಲು.
ಮರವನ್ನು ಪೂರ್ವಪದವಾಗಿಟ್ಟುಕೊಂಡು ಅನೇಕ ನುಡಿಗಟ್ಟುಗಳು ರಚಿತವಾಗಿವೆ. ಹಳಗನ್ನಡ ಕಾವ್ಯಗಳಲ್ಲಿ 'ಮರವಡು' ಎಂಬ ಪ್ರಯೋಗ ಮೊದಲು ಚಲನೆಯಿಲ್ಲದಿರು ಎಂಬರ್ಥದಲ್ಲಿ ಪ್ರಯೋಗವಾಗಿದೆ. ಇದು ಪಂಪನ 'ಆದಿಪುರಾಣ'ದಲ್ಲಿ "ಮರವಟ್ಟು ಕುಡದೆ ಕಲ್ಪಮಹೀಜಂ ನಿಂದುವು" ಎಂಬಲ್ಲಿ ಸ್ಪಷ್ಟವಾಗಿದೆ. ಆದರೆ ಇದೇ ರೂಪವು ರೂಪಕವಾಗಿ ಜಡ್ಡುಗಟ್ಟು ಎಂಬ ಅರ್ಥದಲ್ಲಿ 'ಪಂಪಭಾರತ'ದಲ್ಲಿ ಪ್ರಯೋಗವಾಗಿದೆ: "ಅತ್ತ ಸುಭದ್ರೆಯುಮೊಡಲುರಿಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋಡುತ್ತಿರೆ". ಅಂತೆಯೇ "ಅಂತಃಪೀಡಾಕ್ರಾಂತಿಯನೊಂದಿನಿತು ಪೊಳ್ತು ಮರವಟ್ಟಿರ್ದಳ್" ಎಂಬುದು 'ಕರ್ಣಾಟಕ ಕಾದಂಬರಿ'ಯಲ್ಲಿನ ವರ್ಣನೆ. ಮರವಾನಸ, ಮರವಾನಸಿ, ಮರವಾನಸೆ ಮುಂತಾದವು ಮರದಿಂದ ಮಾಡಿದ ಗಂಡು-ಹೆಣ್ಣು ಬೊಂಬೆಗಳನ್ನು ಸೂಚಿಸುತ್ತವೆ: "ಪೊಯ್ವ ಸಿಡಿಲ್ ಕಾರಿರೊಳಗುರ್ವಂ ಪಡೆದಿರೆ ಮರವಾನಸನೆನೆ ತಪಸ್ವಿ ಮರದ ಮೊದಲಿರ್ದಂ" ('ಪಂಪಭಾರತ'); "ನೋಡ ಮಾನಸೆಯಣಮಲ್ಲಮೀಕೆ ಮಾರವಾನಸಿಯಾಗಿಯುಂ .. .." ('ಆದಿಪುರಾಣ'); "ಅರವಿಂದವಕ್ತ್ರೆ  ಕೋಮಳೆ ಕಡುಗಾಡಿಕಾರ್ತಿ ಮರವಾನಿಸೆಯೆಂಬುದನುಮಟುಮಾಡಿದೌ" ('ಧರ್ಮಾಮೃತ') ಎಂಬ ಪ್ರಯೋಗಗಳನ್ನು ನೋಡಬಹುದು. ಬಿರುಸನ್ನು ಸೂಚಿಸಲೂ ಮರ ಬಳಕೆಯಾಗಿದೆ: ಕಾಡುಬಾಳೆಯನ್ನು ಮರವಾೞೆ ಎನ್ನುತ್ತಿದ್ದರು: "ಕಾಷ್ಠಕದಳೀ-ಮರವಾೞೆ" ಎಂದು 'ಓಷಧಿಕೋಶ'ದಲ್ಲಿ ಅರ್ಥ ಹೇಳಿದೆ. ಮರಗೆಣಸು, ಮರಗಬ್ಬು ಇತ್ಯಾದಿ. ಮರಗಟ್ಟು ಎಂದರೆ ಜೋಮು ಹಿಡಿ; ನಾಲಗೆ ಮರವಾಗು ಎಂದರೆ ರುಚಿಯಿಲ್ಲದಾಗು ಎಂದರ್ಥ ಇತ್ಯಾದಿ.
ಮರವಲಗೆ ಎಂಬುದು ಒಣಮರದ ಹಲಗೆ. "ಶರದೀಮಧ್ಯದಿ ಹಡಗೊಡೆದು ಮುಳುಗಲಾ ಮರವಲಗೆಯ ಪಿಡಿದವನು ಭರದಿ ತಡಿಯ ಸಾರ್ದು" ಎಂಬ ಮಾತು 'ಜೀವಂಧರ ಸಾಂಗತ್ಯ'ದಲ್ಲಿದೆ.
=====
ಮರುಗು: ಇದರ ಮೂಲ ರೂಪ 'ಮಱು'ಗು ಎಂದು; ಇದೊಂದು ದ್ರಾವಿಡ ಕ್ರಿಯಾಪದ, ತಮಿಳಿನಲ್ಲಿ ಮಱುಕು (ತಮಿಳಿನಲ್ಲಿ ಪದಮಧ್ಯದ 'ಕ' ವು 'ಗ' ಎಂದೇ ಉಚ್ಚಾರವಾಗುತ್ತದೆ), ತೆಲುಗಿನಲ್ಲಿ ಮಱುಗು ಹಾಗೂ ತುಳುವಿನಲ್ಲಿ ಮರ್ಕುನಿ ಎಂಬ ರೂಪಗಳಲ್ಲಿ ದೊರೆಯುತ್ತದೆ. ಇದರ ಮೂಲಾರ್ಥ ಕುದಿ, ಮರಳು ಎಂಬುದು. "ಮಱುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದವೋಲ್" (ಅಳೆ=ಮಜ್ಜಿ) ಎಂಬ ಉಪಮೆ 'ಕವಿರಾಜಮಾರ್ಗ'ದಲ್ಲಿಯೇ ಇದೆ. ಇದು ಮುಂದೆ ರೂಪಕವಾಗಿ ಮಾನಸಿಕವಾಗಿ ಕುದಿಯುವುದಕ್ಕೆ, ಅಂದರೆ ಕಳವಳಗೊಳ್ಳುವುದಕ್ಕೆ ಅನ್ವಯವಾಯಿತು. "ಮಗನಳಲೊಳ್ ಕರಂ ಮಱುಗುತ್ತಿರ್ಪಿನಂ" ಎಂಬುದು 'ಪಂಪಭಾರತ'ದ ಮಾತು. ಈ ಅರ್ಥವೂ ವಿಸ್ತಾರಗೊಂಡು ಬೇರೆಯವರ ದುಃಖ ಕಂಡು ಪಡುವ ಸಹಾನುಭೂತಿಗೂ ಅನ್ವಯಿಸುವಂತಾಯಿತು, "ಸುಧನ್ವಂಗೆ ಮಱುಗುವಂತೆ ಸಚಿವನಿಂತೆಂದಂ" ಎಂಬುದು ಜೈಮಿನಿ ಭಾರತದ ಮಾತು. ಈ ಅರ್ಥ ಮುಂದೆ ಪ್ರೀತಿಸು ಎಂಬರ್ಥವನ್ನೂ ಪಡೆಯುತ್ತದೆ; 'ಶಬ್ದಮಣಿದರ್ಪಣ'ದಲ್ಲಿ "ಮಱುಗಿದಂ-ಕೂರ್ತಂ" ಎಂದು ಅರ್ಥ ಕೊಡಲಾಗಿದೆ.
ಪ್ರೇರಣಾರ್ಥದಲ್ಲಿ ಎಂದರೆ ಕುದಿಯುವ ಹಾಗೆ ಮಾಡು ಎಂಬರ್ಥದಲ್ಲಿ ಇದು ಮಱುಗಿಸು ಎಂಬ ರೂಪ ಪಡೆಯುತ್ತದೆ. "ಪಾಲಂ ಅರ್ಧಮಪ್ಪಿನಂ ಮಱುಗಿಸಿ" ಎಂಬ ಸಾಲು 'ಲೋಕೋಪಕಾರ'ದಲ್ಲಿ. ಇದೂ ಮಾನಸಿಕವಾಗಿ ಕೋಟಲೆಗೊಳಿಸು ಎಂಬರ್ಥವನ್ನು ಪಡೆಯುತ್ತದೆ: "ಮನುಷ್ಯಜನ್ಮಮಂ ಮಱುಗಿಸಿ ನಿನ್ನೀ ಪದಕೆ ತಂದುದು ಮುನ್ನಿನ ಗೆಯ್ದ ದೋಷಂ" ಎಂಬ ವಾಕ್ಯ ಕಮಲಭವ ಎಂಬ ಕವಿಯ 'ಶಾಂತೀಶ್ವರ ಪುರಾಣ'ದಲ್ಲಿದೆ.
ಇದರ ನಾಮರೂಪವೇ ಮಱುಕ ಅಥವಾ ಈಗಿನ ಮರುಕ, ಅಂದರೆ ಕುದಿಯುವಿಕೆ. ಹಿಂದೆ ಹೇಳಿದ 'ಲೋಕೋಪಕಾರ'ದಲ್ಲಿ ಈ ಶಬ್ದ ಇದೇ ಅರ್ಥದಲ್ಲಿ ಬಳಕೆಯಾಗಿದೆ. ಇಂತಹ ಮಾನಸಿಕ ಸ್ಥಿತಿಯೂ ಮರುಕವೇ, ದುಃಖ, ತಳಮಳ ಎಂದು. "ಮಱುಕಂ ಅಮಾಯಮಪ್ಪ ಅಪಮೃತ್ಯುವೆಂಬಲ್ಲಿಗೆ ಪೊಱಗೆ" ಎಂಬ ಮಾತು ಪಂಪನ 'ಆದಿಪುರಾಣ'ದಲ್ಲಿದೆ. "ಎನಗೆ ಮನದ ಮಱುಕಂ ಪಿರಿದುಮಾಹಾರಕ್ಕೆಂತು ಚಿಂತೆಗೆಯ್ವೆಂ" ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಚಿಂತೆ ಎಂಬರ್ಥವಿದೆ. ಈ ಅರ್ಥ ಮತ್ತಷ್ಟು ವಿಸ್ತಾರಗೊಂಡು ಸಹಾನುಭೂತಿಪರವಾದ ಕಳವಳಕ್ಕೂ ಅನ್ವಯಸಿ ಕರುಣೆ ಎಂಬರ್ಥವನ್ನು ಪಡೆಯುತ್ತದೆ.: "ವಾಸರಪತಿ ಬಿಸುಗದಿರಂ ಪೇಸದೆ ತವೆ ಪೀರ್ಗುಮೆಂಬ ಮಱುಕದೊಳಂಭೋಜಾಸನನಂಬುಜವನಮಂ ಬಾಸಣಿಸಿದನೆನಿಪುವಿಡಿದ ತಾವರೆಯಗೆಲೆಗಳ್" ಎಂಬುದು 'ಕಾವ್ಯಾವಲೋಕನ'ದ ಒಂದು ಪದ್ಯದ ಸಾಲು. ವ್ಯಾಮೋಹ ಎಂಬರ್ಥದಲ್ಲಿ 'ಜಯನೃಪ ಕಾವ್ಯ'ವು ಈ ಶಬ್ದವನ್ನು ಬಳಸುತ್ತದೆ: "ಎನ್ನವರನ್ನಿಗರೆನುತಂ ಮಱುಕಂ ಮಚ್ಚರಗೊಳ್ಳದ ಸತ್ಯಕ್ಕೆಱೆವಟ್ಟೆನಿಸುವ ಸಾಧುಸಮಿತಿಗತಿಸಮಿತಿಯೊಳೆಱಗುವೆನು". ಹೀಗೆ ಇನ್ನೂ ಅನೇಕ ಅರ್ಥಚ್ಛಾಯೆಗಳು ಈ ಶಬ್ದಕ್ಕೆ ಒದಗುತ್ತವೆ.
=====
ಮಲ್ಲಿಗೆ: ಕನ್ನಡನಾಡಿನಲ್ಲಿ ಸುಪ್ರಸಿದ್ಧವಾದ ಕಂಪಿನ ಹೂ ಮತ್ತು ಅದು ಬಿಡುವ ಬಳ್ಳಿಯ ಹೆಸರು. ಇದು ಸಂಸ್ಕೃತದ ಮಲ್ಲಿಕಾ ಎಂಬುದರ ತದ್ಭವ. "ತೃಣಶೂಲಂ ತು ಮಲ್ಲಿಕಾ ಭೂಪದೀ ಶೀತಭಿರುಶ್ಚ ಸೈವಾಸ್ಫೋಟಾ ವನೋದ್ಭವಾ" ಎಂದು 'ಅಮರಕೋಶ'ದಲ್ಲಿ ವಿವಿಧಾರ್ಥಗಳನ್ನು ಹೇಳಿದೆ. "ಮಲ್ಲಿಗೆ ವಿಚಕಿಳಂ" ಎಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ. ತನಗೆ ಬನವಾಸಿಯ ನೆನಪನ್ನು ತರುವ ವಸ್ತುಗಳಲ್ಲಿ 'ಬಿರಿದ ಮಲ್ಲಿಗೆ'ಯೂ ಒಂದು ಎನ್ನುತ್ತಾನೆ ಪಂಪ ("ಬಿರಿದ ಮಲ್ಲಿಗೆಗಂಡೊಡಂ .. .. ನೆನೆವುದೆನ್ನ ಮನಂ ಬನವಾಸಿ ದೇಶಮಂ" - 'ಪಂಪಭಾರತ'). ಇದರಲ್ಲಿ ಸೂಜಿಮಲ್ಲಿಗೆ, ದುಂಡು ಮಲ್ಲಿಗೆ ಮುಂತಾದ ಭೇದಗಳಿವೆ; ಅಲ್ಲದೆ ಮೈಸೂರ ಮಲ್ಲಿಗೆ, ಆಂಬೂರು ಮಲ್ಲಿಗೆ ಮುಂತಾದ ಪ್ರಾದೇಶಿಕ ಪ್ರಭೇದಗಳೂ ಇವೆ. ಕೆಎಸ್‍ನ ಅವರ 'ಮೈಸೂರ ಮ್ಲಲಿಗೆ' ಅತ್ಯಂತ ಜನಪ್ರಿಯ ಕವನ ಸಂಕಲನ.
ಮನ್ಮಥನ ಬಾಣಗಳು ಹೂಗಳೇ ಎಂಬುದು ಹಿಂದಿನವರ ನಂಬಿಕೆ. "ಅರವಿಂದಂ ಅಶೋಕಂ ಚ ಚೂತಂ ಚ ನವಮಲ್ಲಿಕಾ ನೀಲೋತ್ಪಲಂ ಚ ಪಂಚೈತೆ ಪಂಚಬಾಣಸ್ಯ ಸಾಯಕಾಃ". ಮಲ್ಲಿಕಾಮಾಲೆ ಎಂಬುದು ಪ್ರಾಚೀನ ಕನ್ನಡ ಚಂಪೂ ಕವಿಗಳ ಪ್ರಿಯವಾದ ಒಂದು ಅಕ್ಷರ ವೃತ್ತದ ಹೆಸರು. ಮಲ್ಲಿಗೆಯ ಸುವಾಸನೆಯಂತೆ ಹರಡಿದ ಕೀರ್ತಿಯುಳ್ಳವನು ಎಂಬ ಅರ್ಥದ 'ಮಲ್ಲಿಕಾಮೋದ' ಎಂಬ ಬಿರುದು ಶಾಸನಗಳಲ್ಲಿ ಉಲ್ಲೇಖಗೊಂಡಿದೆ ("ಚಾಳುಕ್ಯಾಭರಣಂ ಮಲ್ಲಿಕಾಮೋದಂ"). ಮಲ್ಲಿಕಾವೃತಿ ಎಂದರೆ ಮಲ್ಲಿಗೆಯ ಪೊದೆ ("ಮಲ್ಲಿಕಾವೃತಿಯೊಳ್ ವಲ್ಲಭೆಯಯಂ ತೊಳಲ್ದರಸಿದಂ ವಿದ್ಯಾವಧೂವಲ್ಲಭಂ" - ನೇಮಿಚಂದ್ರನ 'ಲೀಲಾವತಿ').
ಮಲ್ಲಿಕಾರ್ಜುನ ಶ್ರೀಶೈಲದ ಅಧಿದೈವ. 'ಚೆನ್ನ ಮಲ್ಲಿಕಾರ್ಜುನ' ಎಂಬುದು ಮಹಾದೇವಿಯಕ್ಕನ ಅಂಕಿತವಾದರೆ, 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬುದು ಸಿದ್ಧರಾಮನ ವಚನಾಂಕಿತ. ಮಲ್ಲಿಕಾರ್ಜುನ ಎಂಬ ಹೆಸರು ಕನ್ನಡೀಕರಣಗೊಂಡು ಮಲ್ಲಯ್ಯ, ಮಲ್ಲಣ್ಣ, ಮಲ್ಲಪ್ಪ, ಮಲ್ಲೇಶಪ್ಪ, ಮಲ್ಲಾರಾಧ್ಯ ಮುಂತಾದ ವ್ಯಕ್ತಿನಾಮಗಳಾಗಿವೆ. ಆದರೆ ಮಲ್ಲಿಕಾ+ಅರ್ಜುನ ಎಂಬ ಪದವಿಭಜನೆಯು ಶಿವನಿಗೆ ಹೇಗೆ ಅನ್ವಯವಾಗುತ್ತದೆ? ತಮಿಳು ಪಂಡಿತರೊಬ್ಬರು ಈ ಶಬ್ದದ ವ್ಯುತ್ಪತ್ತಿಯನ್ನು 'ಮಲೈಕ್ಕು ಅರಸನ್' ಎಂದು ಹೇಳುತ್ತಾರೆಂದು ನನ್ನ ಗೆಳೆಯರೊಬ್ಬರು ಹೇಳಿದರು. ಮಲ್ಲಿಕಾರ್ಜುನ ಬೆಟ್ಟದ ದೈವವಾದ್ದರಿಂದ ಈ ವ್ಯತ್ಪತ್ತಿ ವಿಚಾರಯೋಗ್ಯ.
=====
ಮಾಡು ಶಬ್ದದ ಮೂರಾರು ಅವತಾರಗಳು
ಕನ್ನಡ ಮಾತನಾಡುವ ನೀವು ಒಂದು ದಿನ ನಿಮ್ಮ ಮಾತಿನಲ್ಲಿ 'ಮಾಡು' ಶಬ್ದದ ಯಾವ ರೂಪವನ್ನೂ ಬಳಸುವುದಿಲ್ಲ ಎಂದು ಪಂತ ಕಟ್ಟಿ ನೋಡಿ; ಗೆಲ್ಲುವಿರೋ ಸೋಲುವಿರೋ ಗೊತ್ತಾಗುತ್ತದೆ! ಏಕೆಂದರೆ ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಹತ್ತಾರು ಬಾರಿ 'ಮಾಡು'ವನ್ನೊಳಗೊಂಡ ಶಬ್ದರೂಪಗಳನ್ನು ಬಳಸುವುದು ಅನಿವಾರ್ಯ; ಅದರ ಬಳಕೆ ಅಷ್ಟೊಂದು ಸಾಮಾನ್ಯವಾದುದು, ಅನಿವಾರ್ಯವಾದುದು. ಅದರ ಸಹಾಯದಿಂದ ಬಹಳ ಅಭಿವ್ಯಕ್ತಿರೂಪಗಳನ್ನು ಸಾಧಿಸಿಕೊಳ್ಳುತ್ತೇವೆ; ಅದು ನಾನಾ ಬಗೆಯ ಕಾರ್ಯಗಳನ್ನು ನಿರ್ವಹಿಸುತ್ತದೆ.
'ಮಾಡು' ಎಂಬ ಶಬ್ದಕ್ಕೆ ಕೇಶಿರಾಜನು ತನ್ನ 'ಶಬ್ದಮಣಿದರ್ಪಣ'ದಲ್ಲಿ ಧಾತುಗಳಿಗೆ ಅರ್ಥ ಕೊಡುವಾಗ ಎಸಗು ಎಂಬ ಕ್ರಿಯಾರ್ಥ ಹಾಗೂ ಗೋಡೆ (ಕುಡ್ಯ) ಎಂಬ ನಾಮಾರ್ಥವನ್ನು ಕೊಡುತ್ತಾನೆ ("ಮಾಡು-ಕರಣೇ ಕುಡ್ಯ ವಿಶೇಷೇ ಚ"). ಆದರೆ ಗೂಡು ಎಂಬರ್ಥದ ಮಾಡ ಮುಂದೆ ಮಾಡು ಎಂದಾಗಿದೆ: ಪುರಂದರ ದಾಸರ "ಮಾಡು ಸಿಕ್ಕದಲ್ಲ, ಮಾಡಿನ ಗೂಡು ಸಿಕ್ಕದಲ್ಲ" ಎಂದು ಆರಂಭವಾಗುವ ಪ್ರಸಿದ್ಧ ಕೀರ್ತನೆಯ ಪಲ್ಲವಿಯಿದು. ಈ ನಾಮವಾಚಿ ಅರ್ಥಗಳು ಅಷ್ಟಕ್ಕೇ ಸೀಮಿತವಾದ. ಆದರೆ ಅದರ ಕ್ರಿಯಾರ್ಥ ಮಾತ್ರ ವ್ಯಾಪಕವಾದ ಪ್ರಭಾವ ಹೊಂದಿದೆ. 'ಮಾಡು ಇಲ್ಲ ಮಡಿ' ಎಂಬುದು ನಲವತ್ತೇಳರ ಸ್ವಾತಂತ್ರ್ಯ ಚಳವಳಿಯ ಮೂಲ ಮಂತ್ರವಾಗಿತ್ತು. ಈ ಪದ ಬಳಕೆ ಆರಂಭದಿಂದ ಇಂದಿನವರೆಗೂ ಹೀಗೆಯೇ ಇದೆ, ಹೆಚ್ಚುತ್ತಲೂ ಇದೆ. "ಕೇಡಡಸಿದೊಡಂ ಬಗೆಯುಂ ಕೂಡದು ಕೂಡಿದುದುಮದು ವಿಪರೀತಮುಮಂ ಮಾಡುಗುಂ" ಎಂಬ 'ಕವಿರಾಜಮಾರ್ಗ'ದ ವಾಕ್ಯದಿಂದ ಹಿಡಿದು, "ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ" ಎಂಬ ಕನಕದಾಸರ ಮಾತನ್ನೊಳಗೊಂಡು, "ವಾನರನ ಮಾಡಮಾಡುತ್ತಲಿ ವಿನಾಯಕನ ಮಾಡಿಬಿಟ್ಟರು ಸರಿಯೆ" ಎಂಬ ಗೋಪಾಲಕೃಷ್ಣ ಅಡಿಗರ 'ಏನಾದರೂ ಮಾಡುತಿರು ತಮ್ಮ' ಎಂಬ ಕವನದ ಸಾಲಿನವರೆಗೆ ಇದನ್ನು ಸಾಮಾನ್ಯಾರ್ಥದಲ್ಲಿ ಅಸಂಖ್ಯ ಕಡೆ ಬಳಸಲಾಗಿದೆ.
ವಿಧ್ಯರ್ಥದಲ್ಲಿ (ಆಜ್ಞೆ, ಕೋರಿಕೆ, ಆಶಯ) ಮಧ್ಯಮ ಪುರುಷದಲ್ಲಿ (ನೀನು, ನೀವು) 'ಕೊ' ('ಕೊಳ್' ಎಂಬುದರಲ್ಲಿ ಕೊನೆಯ ವ್ಯಂಜನ ಲೋಪವಾಗಿ) ಸೇರಿ ಇದು 'ಮಾಡಿಕೊ' ಆಗುತ್ತದೆ, ಪುರಂದರದಾಸರ "ದಾಸನ್ನ ಮಾಡಿಕೊ ಎನ್ನ, ಇಷ್ಟು ಘಾಸಿ ಮಾಡುವರೇನೊ ಕರುಣಾಸಂಪನ್ನ" ಎಂಬ ಸಾಲಿನಲ್ಲಿನಂತೆ. ಪ್ರಥಮ ಪುರುಷ (ಅವನು, ಅವಳು, ಅವರು, ಅದು, ಅವು)ದಲ್ಲಿ 'ಮಾಡುಗೆ' ಎಂಬುದು ಹಳಗನ್ನಡದಲ್ಲಿ ಬಳಕೆಯಲ್ಲಿತ್ತು  "ಪ್ರೋದ್ಭಾಸಿ ಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ" - 'ಕರ್ಣಾಟಕ ಕಾದಂಬರಿ'). ಹೊಸಗನ್ನಡದಲ್ಲಿದು 'ಮಾಡಲಿ' ಎಂದಾಗುತ್ತದೆ: 'ಇಸು' ಪ್ರತ್ಯಯ ಸೇರಿದಾಗ ಇದು ಪ್ರೇರಣಾರ್ಥವನ್ನು ಪಡೆಯುತ್ತದೆ, ಅಂದರೆ ಕ್ರಿಯೆಯನ್ನು ಮಾಡುವಂತೆ ಮಾಡುವ ಅರ್ಥ ಪಡೆಯುತ್ತದೆ. "ಬೀಡುಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱಿದುಂ ಮಾಡಲ್ ಮಾಡಿಸಲ್ ಪಡೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ" ಎಂಬುದು 'ಪಂಪಭಾರತ'ದ ಪದ್ಯವಾದರೆ, "ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ" ಎಂಬುದು ಬಸವಣ್ಣನ ವಚನ. ಈ ಶಬ್ದ ಮಾಡುವ ಕ್ರಿಯೆ ಎಂಬರ್ಥದಲ್ಲಿ 'ಮಾಡುಹ' ಎಂಬ ಕೃನ್ನಾಮವಾಗುತ್ತದೆ. ಇದಕ್ಕೆ ಉದಾಹರಣೆ ದುರ್ಗಸಿಂಹನ 'ಪಂಚತಂತ್ರ'ದ ಈ ವಾಕ್ಯ: "ನೋಡದೆಯಿರುಹವುಂ, ಪ್ರೀತಿಪೂರ್ವಕವಹಂತಹುದ ಕಿಡಿಸುವಹವುಂ, ವಿವಾದಮಂ ಮಾಡುಹವುಂ, ನುಡಿಯದಿರುಹವುಂ, ವಿಸ್ಮಯವಿಲ್ಲದಿರುಹವುಂ, ಇಂತಿಹವು ಸ್ನೇಹವಿಲ್ಲದ ಜನದ ಲಕ್ಷಣವೆಂದವುದು". ಆಧುನಿಕ ಕನ್ನಡದಲ್ಲಿ ಇದು 'ಮಾಡುವಿಕೆ' ಎಂದಾಗುತ್ತದೆ. ಇದು ಕೆಲಸ ಎಂಬರ್ಥದ 'ಮಾಡಿಕೆ' ಎಂದೂ ಆಗುತ್ತದೆ. ಮಾಡು ಎಂಬುದಕ್ಕೆ 'ಅಣ' ಎಂಬ ಪ್ರತ್ಯಯ ಸೇರಿಸಿದಾಗ (ಮಾಡು+ಅಣ) ಮಾಡುವಣ>ಮಾಡೋಣ  ಎಂಬ ಕೃದಂತ ಭಾವಾನಾಮರೂಪ ಬರುತ್ತದೆ: "'ಈಗೇನು ಮಾಡೋಣ' ಮತ್ತೆ ಕೇಳುವೆಯಲ್ಲ, ಹೊಕ್ಕ ಮನೆಯನ್ನೆಲ್ಲ ಹೊಸ ಮನೆಯೆಂದೆ ಕರೆಯೋಣ" ಎಂಬುದು ಕೆಎಸ್ನ ಅವರ ಕವನದ ಸಾಲು.
ವಾಕ್ಯದಲ್ಲಿ ಮಾಡು ಎಂಬುದರ ಹಿಂದೆ ಬರುವ ದ್ವಿತೀಯಾವಿಭಕ್ತಿಯ ನಾಮಪದದಿಂದಾಗಿ ಬೇರೆ ಬೇರೆ ಅರ್ಥಛಾಯೆಗಳನ್ನು ಪಡೆಯುತ್ತದೆ. 'ವಡ್ಡಾರಾಧನೆ'ಯಲ್ಲಿನ "ಮುಂಜಿಬಂಧನ ಕ್ರಿಯೆಯಂ ಮಾಡಿದ ಬೞಿಕ್ಕೆ" ಎಂಬ ವಾಕ್ಯಖಂಡದಲ್ಲಿ ಮಾಡು ಎಂಬುದಕ್ಕೆ ನೆರವೇರಿಸು ಎಂಬರ್ಥ ಬಂದಿದೆ; "ವಿರಕ್ತಿಯಂ ಮಾಡುವುದುಂ ನಾಡೆಯುಂ ಗಹನಂ" ಎಂಬ 'ಪಂಚತಂತ್ರ' ಮಾತಿನಲ್ಲಿ ಇದಕ್ಕೆ ಕೈಗೊಳ್ಳುವುದು ಎಂಬರ್ಥ ಬಂದಿದೆ; "ಮಡಕೆಯ ಮಾಡುವಡೆ ಮಣ್ಣೇ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು" ಎಂಬ ಬಸವಣ್ಣನ ಮಾತಿನಲ್ಲಿ ಈ ಶಬ್ದಕ್ಕೆ ತಯಾರಿಸು ಎಂಬರ್ಥವಿದೆ; "ಅತಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು ಆಯುತ ವೃತ್ತಿಯನ್ನೆ ಮಾಡುವರು" ಎಂಬ ಪುರಂದರದಾಸರ ಮಾತಿನಲ್ಲಿ ಇದಕ್ಕೆ ಆಚರಿಸು ಎಂಬರ್ಥ ಪ್ರಾಪ್ತವಾಗುತ್ತದೆ.
'ಮಾಡು' ಧಾತು ಮತ್ತೊಂದು ಪದದ ಮುಂದೆ ಬಂದು ಸಂಯುಕ್ತ ಧಾತುವಾದಾಗ ಅದರ ಅರ್ಥದ ಬಣ್ಣಗಳು ಬದಲಾಗುತ್ತ ಹೋಗುತ್ತವೆ. ಈ ಬಗೆಯಲ್ಲಿ ಸಾಧಿತವಾಗುವ ಧಾತುಗಳನ್ನು ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು: (1) ಕನ್ನಡ ನಾಮವಾಚಕಗಳ ಜೊತೆ ಸೇರಿ, (2) ಸಂಸ್ಕೃತ ಶಬ್ದಗಳ ಜೊತೆ ಸೇರಿ ಮತ್ತು (3) ಇಂಗ್ಲಿಷ್ ಧಾತುಗಳ ಮುಂದೆ ಬಂದು, (4) ಸಂಸ್ಕೃತ ಮತ್ತು ಇಂಗ್ಲಿಷ್ ಮತ್ತಿತರ ಅನ್ಯದೇಶ್ಯ ನಾಮಪದಗಳ ಜೊತೆಗೂಡಿ. ಮೇಲೆ ನೋಡಿದಂತೆ, ವಾಕ್ಯಗಳಲ್ಲಿ ದ್ವಿತೀಯಾವಿಭಕ್ತಿಯ 'ಮಾಡು'ವಿಗೆ ಆಯಾ ಪೂರ್ವಪದದ ಕಾರಣದಿಂದ ಬೇರೆ ಬೇರೆ ಆರ್ಥ ಬರುತ್ತದೆ. ಆದರೆ ಸಾಮಾನ್ಯ ಮಾತಿನಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವಾದ 'ಅನ್ನು' ಕೈಬಿಟ್ಟು ಮಾಡು ಜೊತೆಯಲ್ಲಿ ಸೇರಿಸುವುದು ರೂಢಿಯಲ್ಲಿದೆ; ಇದು ಬರವಣಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ. "ದೇವ ನಿನ್ನಂಘ್ರಿಯನು ಪೂಜೆಮಾಡುವೆವೆಂದು" ಎಂಬ ಸಾಲಿನಲ್ಲಿ 'ಪೂಜೆಮಾಡು' ಒಂದೇ ಪದವಾಗಿ ಸಂಯುಕ್ತಧಾತುವಾಗುತ್ತದೆ. "ಮರುಳುಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಗ" ಎಂಬ ಬೇಂದ್ರೆಯವರ ಮಾತನ್ನೂ ನೋಡಬಹುದು; "ಇಡಿಯ ಕೊಡವನ್ನೆಲ್ಲ ಬರಿದುಮಾಡುವ ಆಸೆ" ಎಂಬ ಚಂದ್ರಶೇಖರ ಕಂಬಾರರ ನುಡಿಯನ್ನು ಉದಹರಿಸಬಹುದು. ಹೀಗೆಯೇ ಹಣ, ರಾಡಿ, ಕೀಟಲೆ, ಮುದ್ದೆ, ಸುರುಳಿ, ಕಳ್ಳತನ, ಮಣ್ಣು ಮುಂತಾದ ನಾಮಪದಗಳೊಡನೆ 'ಮಾಡು' ಸೇರಿಸಿ ಸಂಯುಕ್ತಧಾತುವನ್ನಾಗಿ ಮಾಡಿಕೊಳ್ಳುತ್ತೇವೆ.
ಹೀಗೆಯೇ ಸಂಸ್ಕೃತ ಶಬ್ದಗಳು ಹಾಗೂ ತದ್ಭವಗಳೊಡನೆ ಸೇರಿಸಿಯೂ ಇಂತಹ ಸಂಯುಕ್ತಧಾತುಗಳಳನ್ನು ಮಾಡಿಕೊಳ್ಳುತ್ತೇವೆ. "ಸ್ನಾನಮಾಡಿದರೆನ್ನ ದೇಹ ತಾಳದು ಎಂದು ಕಳ್ಳನಾಮವ ತಿದ್ದುವೆ" ಎಂಬ ಪುರಂದರದಾಸರ ಸಾಲಿನಲ್ಲಿನ 'ಸ್ನಾನಮಾಡು' ಇಂತಹ ರಚನೆ. "ಕಟ್ಟಿದ ಲಿಂಗವ ಕಿರಿದುಮಾಡಿ ಬೆಟ್ಟದ ಲಿಂಗವ ಹಿರಿದುಮಾಡುವ ಪರಿಯ ನೋಡ!" ಎಂಬ ಅಂಬಿಗರ ಚೌಡಯ್ಯ ಮಾತಿನಲ್ಲಿ ಇಂತಹ ರಚನೆಯಿದೆ. ದಾನ, ಕರ್ಮ, ಕೃತ್ಯ, ಚೇಷ್ಟೆ ಮುಂತಾದ ಸಂಸ್ಕೃತದ ನಾಮಪದಗಳ ಜೊತೆ 'ಮಾಡು' ಸೇರುತ್ತದೆ. ಹೀಗೆಯೇ ತದ್ಭವಗಳ ಜೊತೆ ಕೂಡ. "ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮೋಸಮಾಡಿ" ಎಂಬ ಕನಕದಾಸರ ಮಾತು (ಮೋಸ <ಮೋಷ), "ಹೆಣ ಹೊತ್ತು ಮಸಣ ಮುಟ್ಟಿಸಿ ಸುಟ್ಟು ಬೂದಿಮಾಡಿ" ಎಂಬ ಗಂಗಾಧರ ಚಿತ್ತಾಲರ ಸಾಲು (ಬೂದಿ<ಭೂತಿ) ಮುಂತಾದುವನ್ನು ನೋಡಬಹುದು. ಹೀಗೆಯೇ ಕತೆ (ಕಥಾ), ಜಾತ್ರೆ (ಯಾತ್ರಾ), ಹಬ್ಬ (ಪರ್ವನ್) ಮುಂತದ ಶಬ್ದಗಳಿಗೂ ಮಾಡು ಸೇರುತ್ತದೆ.
ಇತರ ಅನ್ಯಭಾಷಾ ಶಬ್ದಗಳಿಗೂ ಹಲವೆಡೆ ಮಾಡು ಸೇರಿ ಧಾತುವಾಗುತ್ತದೆ. ಇಂಗ್ಲಿಷ್‍ನ ಕೆಲವು ನಾಮಪದಗಳಿಗೆ ಮಾಡು ಸೇರುವ ಉದಾಹರಣೆಗಳನ್ನು ನೋಡೋಣ: "ಜೋಕ್ ಮಾಡಿ ಪೀಡಿಸ್ತಾನೆ ಕಣೆ, ಹಿತವಾಗಿರತ್ತೆ" ಎಂಬ ನಿಸಾರ್ ಅಹಮದ್ರ ವಾಕ್ಯದಲ್ಲಿನ 'ಜೋಕ್ ಮಾಡು'; "ಆಗಾಗ ಸುಣ್ಣ ಬಣ್ಣ ಹೊಡೆದು ರಿಪೇರಿ ಮಾಡಿದರೆ ಇನ್ನರ್ಧ ಶತಮಾನ ಗ್ಯಾರಂಟಿ" ಎಂಬ ಜಿಎಸ್ಎಸ್ ಅವರ ಸಾಲಿನಲ್ಲಿರುವ 'ರಿಪೇರಿಮಾಡು' ಇಂಥವುಗಳು. ಹೀಗೆಯೇ ಐರನ್‍ಮಾಡು, ಪರ್ಮಿಟ್ ಮಾಡು, ಸ್ಟಡಿಮಾಡು (ಇಂಥವು ಧಾತುಗಳೂ ಹೌದು) ಇತ್ಯಾದಿ. ಇಂಗ್ಲಿಷ್‍ನ ಧಾತುಗಳಿಗೂ ಮಾಡು ಸೇರುತ್ತದೆ: ಟೈಪ್ ಮಾಡು, ಡ್ರೈವ್ ಮಾಡು, ಕಂಡಕ್ಟ್ ಮಾಡು, ಸರ್ವ್‍ ಮಾಡು ಇತ್ಯಾದಿ. ಅರೆಬಿಕ್, ಪರ್ಷಿಯನ್, ಉರ್ದುವಿನಂತಹ ಭಾಷೆಗಳಿಂದ ಬಂದ ನಾಮಪದಗಳಿಗೂ ಮಾಡು ಸೇರಿ ಸಂಯುಕ್ತಧಾತುವಾಗುತ್ತದೆ: "ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ ಹುಸಿನಗುತ್ತ ಎದುರಿಸುವುದಿದೆಯಲ್ಲ" (ತನಿಖೆ<ತನಕೀಹ್, ಅರೆಬಿಕ್); "ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ" (ಮೆಹರುಬಾನಿ<ಮೆಹರ್ಬಾನಗಿ, ಪರ್ಷಿಯನ್) ಮುಂತಾದ ನಿಸಾರ್ ಅಹಮದ್ ಅವರ ಕವನದ ಸಾಲುಗಳನ್ನು ನೋಡಬಹುದು. ಹೀಗೆಯೇ ಜುಲುಮೆಮಾಡು, ಕಬ್ಜಮಾಡು, ಮನ್ನಾ ಮಾಡು, ವಸೂಲುಮಾಡು ಮುಂತಾದ ಹಲವಾರು ಉದಾಹರಣೆಗಳನ್ನು ಕೊಡಬಹುದು. ಈಗ ಹೇಳಿ, 'ಮಾಡು'ವಿಲ್ಲದೆ ಒಂದು ದಿನವಾದರೂ ಕನ್ನಡವನ್ನು ಮಾತನಾಡಬಹುದೇ? ಟ್ರೈ ಮಾಡಿ ನೋಡಿ.
=====
=====
ಮಾಟ: ಇದು ಮಾಡು ಎಂಬ ಕ್ರಿಯಾಪದದ ನಾಮರೂಪ. ಅಂದರೆ ಇದರರ್ಥ ಮಾಡಿದುದು, ಕೆಲಸ ಎಂದು. ಮಲಯಾಳಂನಲ್ಲಿ ಮಾಟ್ಟಂ ಎಂದೂ ತುಳುವಿನಲ್ಲಿ ಮಾಟ ಎಂಬ ರೂಪದಲ್ಲಿಯೂ ಈ ಶಬ್ದವಿದೆ. ಮೂಲವಾದ ಕೆಲಸ ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯಲ್ಲಿ ಈ ಶಬ್ದದ ಪ್ರಯೋಗವಿದೆ: "ನುಡಿಯೊಂದು ಮಾಟವೊಂದು ಎನಿಸಿದ ಮಾನವಂಗೆ". ಪಂಪನ 'ಆದಿಪುರಾಣ'ದಲ್ಲಿ ಇದಕ್ಕೆ ನಿರ್ಮಿತಿ, ರಚನೆ ಎಂಬ ಅರ್ಥವಿದೆ: "ಲಲಿತೋನ್ನತ ಮಣಿಮಯ ಮಾಟದಂದದಮದು ಪಲವುಂ ದೇಸೆಯ ಮಾಟದಂದಂ". ಪಂಪನ 'ಆದಿಪುರಾಣ'ದಲ್ಲಿ "ಮಾಟದ ಕುರುಳ್' ಎಂಬಲ್ಲಿಯೂ ನಾಗಚಂದ್ರನ 'ಪಂಪರಾಮಾಯಣ'ದಲ್ಲಿನ "ಮಾಟಕೂಟಂಗಳಿಂ ನವರತ್ನೋಪಲ ಕರ್ಮದಿಂ" ಎಂಬ ವಾಕ್ಯಖಂಡದಲ್ಲಿಯೂ ಈ ಶಬ್ದಕ್ಕೆ ಸುಂದರವಾದ ಎಂಬ ಅರ್ಥ ಬಂದಿದೆ.
ಮಾಡಿದುದು ಎಂದರೆ ಸಹಜವಲ್ಲದ್ದು, ಅಂದರೆ ಕೃತಕವಾದುದು ಎಂಬರ್ಥವೂ ಈ ಶಬ್ದಕ್ಕೆ ಪ್ರಾಪ್ತವಾಯಿತು. ನಯಸೇನನು ತನ್ನ 'ಧರ್ಮಾಮೃತ'ದಲ್ಲಿ "ಮಾಟದ ಮುಡಿಯಂತೆ ಕಟ್ಟಿದ ಪಲ್ಲಿನಂತೆ ಪೀಲಿಯ ಕಣ್ಣಂತೆ" ಎಂಬ ವಾಕ್ಯವನ್ನು ಬರೆಯುತ್ತಾನೆ. 'ಪಂಪರಾಮಾಯಣ'ದಲ್ಲಿ ಈ ಶಬ್ದವು ಕಣ್ಕಟ್ಟು, ಮಾಯೆ ಎಂಬರ್ಥದಲ್ಲಿಯೂ ಬಳಕೆಗೊಂಡಿದೆ: "ಭವದೀಯ ಪ್ರಸಾದದಿಂ ಎನಗೆ ಬಲ್ವಲಮಪ್ಪ ಬವರಮಿಲ್ಲದಾವನಾನುಮೊರ್ವಂ ಮಾಯಾವಿಯ ಮಾಟಮಕ್ಕುಂ"
ಕ್ಷುದ್ರದೇವತೆಯ ಸಹಾಯದಿಂದ ತನ್ನ ಶತ್ರುಗಳಿಗೆ ಮಾಡಿಸುವ ವಾಮಾಚಾರ ಅಥವಾ ಕೇಡುಗೆಲಸವನ್ನು ಮಾಟ ಅಥವಾ ಅಭಿಚಾರ ಎಂಬ ಮಾತಿನಿಂದ ಕರೆಯುತ್ತಿದ್ದರು. ಕನಕಸ್ವಾಮಿಯೆಂಬುವನಿಂದ ಪಾಂಡವರ ವಿರುದ್ಧ ದುರ್ಯೋಧನನು ಅಭಿಚಾರ ಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮಾಟಮಾಡುವವನು 'ಮಾಟಗಾರ'; ಅಂಥ ಹೆಂಗಸು ಮಾಟಗಾರ್ತಿಯ ಉಲ್ಲೇಖ ಮಡಿವಾಳ ಮಾಚಯ್ಯನ ವಚನವೊಂದರಲ್ಲಿದೆ. ಮಾತಿನಿಂದಲೋ, ಒನಪು ವಯ್ಯಾರಗಳಿಂದಲೋ ಆಕರ್ಷಣೆ ಮಾಡಬಲ್ಲವರನ್ನೂ 'ಮಾಟಗಾರ' 'ಮಾಟಗಾತಿ' ಎಂಬ ಮಾತುಗಳಿಂದ ಕರೆಯುವುದು ರೂಢಿ.
=====
ಮಾವು: 'ಹಣ್ಣುಗಳ ರಾಜ' ಎನಿಸಿಕೊಂಡ ಮಾವು ಎಲ್ಲ ದ್ರಾವಿಡ ಭಾಷೆಗಳಳ್ಲೂ 'ಮಾ' ಇಂದಲೇ ಆರಂಭಗೊಳ್ಳುತ್ತದೆ. ಪಂಪನಿಗೆ ಚಿಗುರಿದ ಮಾವು ಎಂದರೆ ತುಂಬ ಇಷ್ಟ. ಸುಂದರ ಕಾವ್ಯವೆಂದರೆ "ಎಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬಳಲ್ದು ತುಂಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆ" ಇರುತ್ತದಂತೆ ('ಪಂಪಭಾರತ'). ಮಾವಿನ ಕಾಯಿಯೇ ಮಾಂಗಾಯ್ ("ಪೂವಂ ಮಾಂಗಾಯಂ .. .. ಒಲವಿಂ ತೋಂಟಿಗಂ ಕೊಟ್ಟನೊರ್ವಂ" - ಆಂಡಯ್ಯನ 'ಕಬ್ಬಿಗರ ಕಾವ').  ಮಾವಿನ ಚಿಗುರು 'ಮಾಂಗೊನರ್' ("ಮಾಂಗೊನರ ರಸಮಂ .. .. ಉಂಡ ಗಂಡುಗೋಗಿಲೆಖ ಲೀಲಾವತಿ"). 'ಮಾವಿನ ಕೋಡು' ಎಂದರೆ ಮಾವಿನ ಕೊನೆ, ಎಲ್ಲ ಶುಭ ಸಂದರ್ಭಗಳಲ್ಲೂ ಎಲೆಗಳುಳ್ಳ ಕೊನೆ ಬಳಕೆಗೆ ಬರುವಂಥದು. "ಅಭಿಷೇಕಂ ಮಾಡುವರೊಲ್ದುಂ ಮಾವಿನ ಕೋಡಿಂ" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಉಕ್ತವಾದ ಪದ್ಧತಿ. ಮಾವಿನೆಲೆಯ ತುದಿಯನ್ನು ಪವಿತ್ರವಾದ ನೀರಲ್ಲದ್ದಿ ಪ್ರೋಕ್ಷಣೆ ಮಾಡುವ ಪದ್ಧತಿ ಈಗಲೂ ಇದೆ. ಮಾವಿನ ಕಸುಗಾಯಿಯೇ 'ಮಾಮಿಡಿ': "ಮಾಮಿಡಿಗಳಂ ತೆಗೆದು ಪಚ್ಚೆಸಾರಮನಿಕ್ಕಿ ಪೂಮಿಡಿಗಳೊಳ್ ತಳಿರ ಲಂಬಣಮನೆಳಲಿಕ್ಕಿ" - ನೇಮಿಚಂದ್ರನ 'ಲೀಲಾವತಿ').
ಹದಿನಾರನೆಯ ಶತಮಾನಕ್ಕೆ (ಅಂದರೆ ಕಸಿ ಮಾಡುವ ವಿಧಾನ ಬರುವ) ಮುಂಚೆ ನಮ್ಮಲ್ಲಿದ್ದುದು ಹುಳಿಮಾವು ಮಾತ್ರ; ಅದನ್ನು ಸಾವಿರ ವರ್ಷದ ಹಿಂದೆ ಹುಳಿಗಾಗಿ ಬಳಸುತ್ತಿದ್ದರು (ಏಕೆಂದರೆ ಹುಣಿಸೆ ಆಗ ಈ ದೇಶದಲ್ಲಿರಲಿಲ್ಲ), ಅದಕ್ಕೋ ಏನೋ ಸಂಸ್ಕೃತದಲ್ಲಿ ಮಾವು ಎಂಬುದನ್ನು 'ಆಮ್ರ' ಎಂದು ಕರೆಯುತ್ತಾರೆ ಎಂಬುದು ಬಿಜಿಎಲ್ ಸ್ವಾಮಿಯವರ ವಾದ. ಆದರೆ ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಸಿಹಿಮಾವಿನ ಉಲ್ಲೇಖವಿದೆ: "ತನಿವಣ್ಣಾಗಿರ್ದುದು ಇಮ್ಮಾವು ಕಳ್ತಲಿಸಿದತ್ತೆಳವಳ್ಳಿ" ಎಂಬುದು ಪಂಪನ 'ಆದಿಪುರಾಣ'ದ ಮಾತು. (ಇನಿದು ಮಾವು=ಇಮ್ಮಾವು)
ಮಾವಿನ ಕಾಯಿಯ ಆಕಾರದ ಆಭರಣಗಳನ್ನೂ ಅದೇ ಹೆಸರಿನಿಂದ ಕರೆಯುತ್ತಿದ್ದರು ("ಚೆಂಬೊನ್ನ ಮಾಂಗಾಯ ಗೊಂಚಲ್ಗಳ" (ಚೆಂಬೊನ್=ಚಿನ್ನ) 'ಲೀಲಾವತಿ'. ಹಳಗನ್ನಡ ಕಾವ್ಯಗಳಲ್ಲಿ ಮಾವಿನ ಮರಕ್ಕೆ ಹತ್ತಿದ ಮಲ್ಲಿಗೆಯ ಬಳ್ಳಿ ನಲ್ಲನಲ್ಲೆಯರ ಸಂಕೇತ.
=====
ಮೀನು: ಇದೊಂದು ದ್ರಾವಿಡ ಪದ; ಪ್ರಮುಖವಾದ ದ್ರಾವಿಡ ಭಾಷೆಗಳಲ್ಲೆಲ್ಲ 'ಮೀನ್' ಎಂಬ ರೂಪವೇ ಇದೆ. ಇದೊಂದು ಜಲಚರ. ಇದು ದ್ರಾವಿಡ ಭಾಷಾ ವರ್ಗದಿಂದ ಸಂಸ್ಕೃತಕ್ಕೆ ಹೋದ ಒಂದು ಶಬ್ದವೆಂದು ಕಾಲ್ಡ್‍ವೆಲ್ ಅಭಿಪ್ರಾಯಪಡುತ್ತಾರೆ. 'ಮೀಂಗುಲಿ' ಅಥವಾ 'ಮೀಂಗುಲಿಗ' ಎಂದರೆ ಮೀನು ಹಿಡಿಯುವವನು, ಬೆಸ್ತ. ಮೀನ್+ಕುಲಿಗ (ಮೀನನ್ನು ಕೊಲ್ಲುವವನು, ಹಿಡಿಯುವವನು) "ಮೀಂಗುಲಿಗರ್ ಬಲೆಯಂ ತೆಗೆದು ನೋಡಿ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ವಾಕ್ಯ. 'ಮೀಂಗುಲಿಗೆ' ಎಂದರೆ ಬೆಸ್ತ ಹೆಂಗಸು ("ವ್ಯಾಸನ ತಂದೆ ಮೀಂಗುಲಿಗೆಯೊಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಮೀನನ್ನು ತಿನ್ನುವ ಪಕ್ಷಿಯೇ 'ಮೀಂಗುಲಿಗವಕ್ಕಿಕ'. "ಮೀಂಗುಲಿಗವಕ್ಕಿ ಕೊಳದೊಳ್ ಮೀಂಗೆಱಗುವ ತೆಱದಿನೆಱಗಿ" ಎಂಬ ಮಾತು ರನ್ನನ 'ಗದಾಯುದ್ಧ'ದಲ್ಲಿ ಬರುತ್ತದೆ. 'ಮೀನಂಬುಳು' ಎಂಬ ಶಬ್ದವನ್ನು 'ಅನಂತನಾಥಪುರಾಣ'ದಲ್ಲಿ ಬಕಪಕ್ಷಿ ಎಂಬರ್ಥದಲ್ಲಿ ಬಳಸಲಾಗಿದೆ. 'ಮೀಂಚುಳ್ಳಿ' ಮೀನನ್ನು ಹಿಡಿದು ತಿನ್ನುವ ವಿಶಿಷ್ಟ ಹಕ್ಕಿಗೆ (ಕಿಂಗ್‍ಫಿಶರ್) ಇರುವ ಹೆಸರು. ಮೀನಿನ ಮಾಂಸವನ್ನು 'ಸುಕುಮಾರ ಚರಿತೆ' ಯಲ್ಲಿ 'ಮೀಂಬೊಲಸು' ಎಂದಿದೆ ("ಮೀಂಬೊಲಸು ನಾರ್ಪ ಮೆಯ್ಗಂ"). ಮೀನನ್ನು ಹಿಡಿಯಲು ಬಳಸುವ ಸಾಧನವೇ 'ಮೀನ ಗಾಳ'. ಆಕರ್ಷಣೆಗೊಳಗಾಗು ಎಂಬರ್ಥದಲ್ಲಿ 'ಮೀನು ಗಾಳಕ್ಕೆ ಬಿತ್ತು' ಎಂಬ ನಾಣ್ಣುಡಿಯನ್ನು ಬಳಸುವುದು ರೂಢಿ.
ಮೀನ ಶಬ್ದವು ಸಂಸ್ಕೃತದಲ್ಲಿಯೂ ಬಳಕೆಯಲ್ಲಿದ್ದು ಬಹುತೇಕ ಸಮಾಸಗಳಲ್ಲಿ ಮಾತ್ರ ಬರುತ್ತದೆ. 'ಮೀನ' ಎಂಬುದು ದ್ವಾದಶ ರಾಶಿಗಳಲ್ಲೊಂದು. ಅನುಮಾನ ಪಡುವುದನ್ನು 'ಮೀನ ಮೇಷ ಎಣಿಸು' ಎಂಬುದು ಕನ್ನಡದ ನುಡಿಗಟ್ಟು. ಮೀನಕೇತು ಎಂದರೆ ಮೀನಿನ ಗುರುತಿನ ಬಾವುಟ(ವುಳ್ಳವನು) ಎಂದರೆ ಮನ್ನಥ. ("ಮೀನಕೇತುವೆತ್ತಿಸಿದ ಸಮುಲ್ಲಸ ಝಷಪತಾಕೆ"  ಅಗ್ಗಳನ 'ಚಂದ್ರಪ್ರಭಪುರಾಣ'). ಮೀನಧ್ವಜ, ಮೀನಕೇತನ, ಮೀನಾಂಕ ಮುಂತಾದ ಶಬ್ದಗಳೆಲ್ಲ ಇದೇ ಅರ್ಥದವು. ಮೀನಿನಾಕಾರದ ಕಣ್ಣುಳ್ಳವಳು ಎಂಬರ್ಥದಲ್ಲಿ ಸುಂದರಿಯನ್ನು 'ಮೀನಾಕ್ಷಿ' 'ಮೀನಲೋಚನೆ' 'ಮೀನನೇತ್ರೆ' ಮುಂತಾದ ಶಬ್ದಗಳಿಂದ ಕವಿಗಳು ವರ್ಣಿಸುತ್ತಾರೆ.
=====
ಮುತ್ತುಗ: ಇದೊಂದು ಮರ; ಅಗಲವಾದ ಎಲೆಗಳಿಂದಲೂ ಕಡುಗೆಂಪು ಹೂಗಳಿಂದಲೂ ಕೂಡಿರುವುದು. ಇದು ದ್ರಾವಿಡ ಪದ: ಇದನ್ನು ಕನ್ನಡದಲ್ಲಿ ಮುತ್ತ, ಮುತ್ತಕ, ಮುತ್ತಲ, ಮುತ್ತಲು, ಮುತ್ತುಕ ಮುಂತಾದ ಹೆಸರುಗಳಿಂದಲೂ ಕರೆಯುವ ರೂಢಿಯಿದೆ. ತಮಿಳಿನಲ್ಲಿ ಈ ಮರವನ್ನು ಮರುಕ್ಕು ಎಂದೂ, ಮಲಯಾಳಂನಲ್ಲಿ ಮುರಿಕ್ಕು ಎಂದೂ, ತೆಲುಗಿನಲ್ಲಿ ಮೋದುಗ, ಮ್ರೋದುಗು, ಮೋದುವು ಎಂದೂ, ತುಳುವಿನಲ್ಲಿ ಮುತ್ತಕ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಈ ಮರವನ್ನು ಪಲಾಶ ಎಂದೂ ತಾಪಿಚ್ಛ ಎಂದೂ ಕರೆಯುತ್ತಾರೆ. "ಮುೞ್ತುಗಮೆಂದು ಒಂದು ಮರಂ" ಎಂದು 'ಶಬ್ದಮಣಿದರ್ಪಣ'ದಲ್ಲಿ ಹೇಳಿದ್ದರೆ, 'ಅಭಿಧಾನ ವಸ್ತುಕೋಶ'ದಲ್ಲಿ ಖಪಲಾಶಮಾಖ್ಯಂ ಮುತ್ತಂ" ಎಂದಿದೆ. ಮುಳ್ಳುಗಳಿರುವ ಈ ಮರದ ಪ್ರಭೇದವೇ ಮುಳ್ಮುಳ್ತುಗ ಅಥವಾ ಮುಳ್ಮುತ್ತುಗ. "ಸುತ್ತಲುಂ ಪೂತ ಮುಳ್ಮುಳ್ತುಗದ ಮರಂಗಳೊಳಂ" ಎಂಬುದು 'ಕಬ್ಬಿಗರ ಕಾವ'ದ ಮಾತು.
ಆಗಲೇ ಹೇಳಿದಂತೆ ಈ ಮರದ ಹೂಗಳು ಕಡುಗೆಂಪಿನ ದೊಡ್ಡ ಗಾತ್ರದವು. ಇಂತಹ ಅಸಂಖ್ಯಾತ ಹೂಗಳು ಉದುರಿದ್ದುದನ್ನು ಕವಿ ಜನ್ನನು ತನ್ನ 'ಯಶೋಧರ ಚರಿತೆ'ಯಲ್ಲಿ (ಮಾರಿಬಲಿಯ ವರ್ಣನೆಯ ಹಿನ್ನೆಲೆಯಲ್ಲಿ) ವಸಂತನು ಶಿಶಿರನನ್ನು ಹಿಡಿದು "ಕುಸುರಿದದಡಗಿನಂತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್" ಎಂದು ವರ್ಣಿಸುತ್ತಾನೆ. ಮುತ್ತುಗದ ಹೂಗಳು ಕತ್ತರಿಸಿದ ಮಾಂಸದ ತುಂಡುಗಳಂತಿದ್ದುವಂತೆ!
ಈ ಮರದ ಎಲೆಗಳೂ ಅಗಲವಾಗಿರುತ್ತವೆ, ಮಂದವಾಗಿರುತ್ತವೆ, ಸಾಮಾನ್ಯವಾಗಿ ಮೂರೆಲೆಗಳು ಒಟ್ಟಿಗೇ ಇರುತ್ತವೆ, ಈ ಎಲೆಗಳನ್ನು ಒಣಗಿಸಿ ಬೇಕಾದಾಗ ನೀರಲ್ಲದ್ದಿ ಮೃದು ಮಾಡಿಕೊಂಡು ಹಂಚಿಕಡ್ಡಿಯಿಂದ ಹಚ್ಚಿ ದೊಡ್ಡದಾದ ಊಟದೆಲೆಗಳನ್ನು ಮಾಡುವ ರೂಢಿಯಿದೆ. ಈ ಎಲೆಗಳನ್ನು ಇಸ್ತ್ರೆಲೆಗಳೆಂದೂ ಕರೆಯುತ್ತಾರೆ (ಇಸ್ತ್ರ+ಎಲೆ). ತೆಲುಗಿನಲ್ಲಿ 'ಇಸ್ತ್ರಾಕು' ಎಂಬ ಶಬ್ದವಿದೆ. ಇಸ್ತ್ರ ಎಂಬುದು ವಿಸ್ತರ ಎಂಬ ಸಂಸ್ಕೃತ ಪದದ ವ್ಯತ್ಯಸ್ತ ರೂಪವಿರಬಹುದು ಎಂದು ಊಹಿಸಲಾಗಿದೆ. ಮುಂಜಿಯ ಕಾಲದಲ್ಲಿ ವಟುವು ಮುತ್ತುಗದ ರೆಂಬೆಯನ್ನು ಹಿಡಿದುಕೊಳ್ಳುವ ಸಂಪ್ರದಾಯವಿದೆ.
=====
ಮೂಡಲಗಿರಿ: ಇದರಲ್ಲಿ ಎರಡು ಪದಗಳು ಸೇರಿವೆ ಗ ಮೂಡಲ ಮತ್ತು ಗಿರಿ; ಮೊದಲ ಶಬ್ದ ಅಚ್ಚಗನ್ನಡದ್ದಾದರೆ ಎರಡನೆಯದು ಸಂಸ್ಕೃತದ್ದು. ಮೂಡು ಎಂದರೆ ಹುಟ್ಟು, ಕಾಣಿಸಿಕೋ ಎಂದು ಅರ್ಥ. ಹೀಗಾಗಿ ಸೂರ್ಯ ಹುಟ್ಟುವ ದಿಕ್ಕನ್ನು ಮೂಡು ಎಂದು ಕರೆಯುವ ರೂಢಿ ಉಂಟಾಯಿತು. ಹತ್ತನೆಯ ಶತಮಾನದ ಕನ್ನಡ ಶಾಸನದಲ್ಲಿಯೇ ಇದರ ಪ್ರಯೋಗವಿದೆ. ಇದು ಮೂಡಣ್, ಮೂಡಲ್ ಎಂಬ ರೂಪಗಳನ್ನೂ ಪಡೆಯುತ್ತದೆ. ಕಮೂಡಣ್ಕಿ ಎಂಬ ಪ್ರಯೋಗ ಪಂಪಭಾರತದಲ್ಲಿಯೇ ದೊರೆಯುತ್ತದೆ. ಆ ದಿಕ್ಕಿಗೆ ಎದುರು ಅಥವಾ ಅಭಿಮುಖ ಎಂಬರ್ಥದಲ್ಲಿ ಮೂಡಮೊಗ ಎಂಬ ಪ್ರಯೋಗವೂ ಪಂಪಭಾರತದಲ್ಲಿಯೇ ಇದೆ. ಹಳಗನ್ನಡದ ವ್ಯಂಜನದಿಂದ ಕೊನೆಯಾಗುವ ಶಬ್ದಗಳು ಬರಬರುತ್ತ ಸ್ವರಾಂತ್ಯಗೊಳ್ಳುವುದಕ್ಕೆ ಅನುಗುಣವಾಗಿ ಮೂಡಲ್ ಎಂಬುದು ಮೂಡಲು ಎಂದಾಯಿತು. ಈ ರೂಪಗಳು ಹನ್ನೊಂದು ಹನ್ನೆರಡನೇ ಶತಮಾನದ ಕನ್ನಡ ಚಂಪೂ ಕಾವ್ಯಗಳಲ್ಲಿಯೇ ದೊರೆಯುತ್ತವೆ. ಈ ರೂಪಗಳಿಗೆ ಕಅಕಿ ಎಂಬ ಷಷ್ಠೀವಿಭಕ್ತಿ ಪ್ರತ್ಯಯ ಸೇರಿದರೆ ಮೂಡಣ, ಮೂಡಲ ಎಂಬ ರೂಪಗಳಾಗುತ್ತವೆ; ಎರಡರ ಅರ್ಥವೂ ಪೂರ್ವದಿಕ್ಕಿನ, ಪೂರ್ವದಿಕ್ಕಿಗೆ ಸೇರಿದ ಎಂದಾಗುತ್ತದೆ. ಮೂಡಲಗಿರಿ ಎಂದರೆ ಸೂರ್ಯ ಹುಟ್ಟುವ ದಿಕ್ಕಿನ ಬೆಟ್ಟ ಎಂದಾಗಬಹುದು; ಅಥವಾ ಪೂರ್ವದಿಕ್ಕು ಎಂಬ ಬೆಟ್ಟ ಎಂಬ ರೂಪಕವೂ ಆಗಬಹುದು. ಸೂರ್ಯೋದಯವನ್ನು ರೇಖೆಗಳಲ್ಲಿ ಚಿತ್ರಿಸುವಾಗ ಎರಡು ಬೆಟ್ಟಗಳ ನಡುವೆ ಸೂರ್ಯ ಕಾಣಿಸಿಕೊಳ್ಳುವಂತೆ ಬರೆಯುತ್ತಾರಲ್ಲವೇ! ಮೂಡಲಗಿರಿ ಎಂಬರ್ಥದಲ್ಲಿ ಮೂಡುವೆಟ್ಟ, ಮೂಡುವೆಟ್ಟು ಎಂಬ ಎಂಬ ಶಬ್ದಗಳೂ ಮುಂದೆ ಬಳಕೆಯಾಗಿವೆ.
ಮೂಡಲಗಿರಿಯಪ್ಪ, ಮೂಡಲಪ್ಪ, ಮೂಡಲಯ್ಯ ಎಂಬಿವು ಈಗಲೂ ಕನ್ನಡ ನಾಡಿನಲ್ಲಿ ಸಾಮಾನ್ಯವಾದ ವ್ಯಕ್ತಿಯ ಅಂಕಿತನಾಮ. ಮೂಡಲಗಿರಿ ಎಂಬುದಕ್ಕೆ ಅಪ್ಪ ಎಂಬ ಸಂಬಂಧವಾಚಿ ಸೇರಿದೆ. ಅಪ್ಪ ಎಂದರೆ ತಂದೆ, ಒಡೆಯ ಎಂಬ ಅರ್ಥ. ಹೀಗಾಗಿ ಮೂಡಲಗಿರಿಯಪ್ಪ ಎಂದರೆ ಆ ದಿಕ್ಕಿನ ಒಡೆಯನಾದ ಸೂರ್ಯ ಎಂದಾಗುತ್ತದೆ. ಈ ಬಗೆಯ ರಚನೆ ಕನ್ನಡದಲ್ಲಿ ಸಾಮಾನ್ಯ. ಎಡೆಯೂರು ಪ್ರಸಿದ್ಧ ಕ್ಷೇತ್ರ; ಅದರ ಒಡೆಯನಾದ ವ ಎಡೆಯೂರಪ್ಪ; ಮೈಲಾರ ಎಂಬ ಊರಿನ ಒಡೆಯನಾದ ದೈವ ಮೈಲಾರಪ್ಪ ಹೀಗೆ.
======
ಮೈದುನ:  ಹಿಂದೆ ಈ ಪದವನ್ನು ಮೆಯ್ದುನ, ಮಯ್ದುನ, ಮಯಿದುನ ಎಂದು ಮುಂತಾಗಿ ಬರೆಯುತ್ತಿದ್ದುದು ರೂಢಿ. ಇದೊಂದು ದ್ರಾವಿಡ ಪದ: ತಮಿಳಿನಲ್ಲಿ ಮೈತುನನ್, ಮಚ್ಚಾನ್. ಮಚ್ಚುನನ್ ಎಂಬ ರೂಪಗಳಲ್ಲಿಯೂ, ಮಯಲಯಾಳಂನಲ್ಲಿ ಮಚ್ಚುನನ್, ಮಚ್ಚಿನನ್, ಎಂದೂ, ತೆಲುಗಿನಲ್ಲಿ ಮೇನ ಎಂದೂ, ತುಳುವಿನಲ್ಲಿ ಮೈತಿನೆ ಅಥವಾ ಮಯದಿನೆ ಎಂದೂ ರೂಪಗಳನ್ನು ತಾಳುತ್ತದೆ. ಇದರ ಅರ್ಥ ತಂಗಿಯ ಗಂಡ, ಸೋದರಮಾವನ (ತನಗಿಂತ ಚಿಕ್ಕವನಾದ) ಮಗ, ಗಂಡನ ಅಥವಾ ಹೆಂಡತಿಯ ತಮ್ಮ ಎಂಬಿವುಗಳು. ತೆಲುಗಿನಲ್ಲಿ 'ಮರದಿ' ಎಂಬುದು ಈ ಸಂಬಂಧವನ್ನು ಸೂಚಿಸುವ ರೂಢಿಯ ಶಬ್ದ. "ಕಾಶ್ಯಪಿಯೆಂಬೊಳೆನಗೆ ತಂಗೆಯುಮಿಲ್ಲ ಸೋಮಶರ್ಮನೆಂಬೊಂ ಮಯ್ದುನನುಮಿಲ್ಲ" ಎಂಬ ವಾಕ್ಯ 'ವಡ್ಡಾರಾಧನೆ'ಯ 'ಸುಕುಮಾರಸ್ವಾಮಿಯ ಕಥೆ'ಯಲ್ಲಿ ಸಿಕ್ಕುತ್ತದೆ. "ಎನ್ನ ಮೆಯ್ದುನನಪ್ಪ ವಜ್ರಬಾಹುಗಂ ಎನ್ನ ತಂಗೆಯಪ್ಪ ವಸುಂಧರೆಗಂ" ಎಂಬುದು ಪಂಪನ 'ಆದಿಪುರಾಣ'ದ ಮಾತು. ಮಇದು ಎಂಬ ರೂಪವನ್ನೂ ಕೆಲವು ಶಾಸನಗಳಲ್ಲಿ ಕಾಣಬಹುದು. "ಸಹೋದರಿ ಗಿರಿಜೆ ಮೈದುನನು ಶಂಕರನು ಸುರರೆಲ್ಲ ಕಿಂಕರರು" ಎಂಬ ಮಾತು  ಕನಕದಾಸನ 'ಹರಿಭಕ್ತಿಸಾರ'ದಲ್ಲಿದೆ. ಸಾಮಾನ್ಯರ ನುಡಿಯಲ್ಲಿ ಇದು ಮೈದ ಎಂಬ ರೂಪವನ್ನೂ ಪಡೆಯುತ್ತದೆ. 'ಬಾವಮೈದುನ', ಎಂಬುದು ಸಾಮಾನ್ಯರ ಮಾತಿನಲ್ಲಿ ಬಾಮೈದ' ಎಂದಾಗುತ್ತದೆ.
ಮೆಯ್ದುನಿಸು ಎಂಬ ಅಪರೂಪದ ರೂಪವು ಮೈದುನನ ಜೊತೆಯ ಸಲಿಗೆಯಿಂದ ನಡೆದುಕೊಳ್ಳುವುದನ್ನು ಸೂಚಿಸುತ್ತದೆ. ನೇಮಿಚಂದ್ರನೆಂಬ ಕ್ರಿಶ. 1170 ರ ಕವಿಯ 'ಅರ್ಧನೇಮಿಪುರಾಣದ'ಲ್ಲಿ ಈ ವಾಕ್ಯ ದೊರೆಯುತ್ತದೆ: "ವಧು ಮೆಯ್ದುನಿಸುತುಮಡ್ಡಂ ಬಂದಳ್". ಇದರ ಭಾವನಾನ ರೂಪದಲ್ಲಿ ಕುಮಾರವ್ಯಾಸನು 'ಮೈದುನತನ' ಎಂಬ ಮಾತನ್ನು ಬಳಸುತ್ತಾನೆ. ಕರ್ಣನ ದುರ್ಯೋಧನನಿಷ್ಠೆಯ ಮನಸ್ಸನ್ನು ಒಡೆಯಲು ಬಂದ ಕೃಷ್ಣನು ಮೊದಲು "ಇನತನೂಜನ ಕೂಡೆ ಮೈದುನತನದ ಸರಸವನೆಸಗು"ತ್ತಾನಂತೆ.
=====
ರಾಜ: ಇದರ ಮೂಲ ಸಂಸ್ಕೃತ ರೂಪ ರಾಜನ್ ಎಂಬುದು. "ಅವನೀಪತಿ ರಾಜಂ ಪಾರ್ಥಿವಂ ನೃಪಂ ಕ್ಷತ್ರಿಯಂ ಜನಾಧಿಪಂ ಅರಸಂ" ಎಂದು ಮುಂತಾಗಿ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ನೀಡುತ್ತದೆ. ರಾಜರಲ್ಲಿ ವಾರ್ಷಿಕ ವರಮಾನದ ಆಧಾರದಿಂದ ಸಾಮಂತ, ಮಾಂಡಲಿಕ, ರಾಜನ್, ಮಹಾರಾಜ, ಸ್ವರಾಟ್, ಸಮ್ರಾಟ್, ವಿರಾಟ್, ಸಾರ್ವಭೌಮ ಎಂಬ ಬಗೆಗಳನ್ನು ಕಶುಕ್ರನೀತಿಸಾರಕಿವು ಹೇಳುತ್ತದೆ. ಆದರೆ ಈ ವರ್ಗೀಕರಣವು ರೂಢಿಯಲ್ಲೇನೂ ಇರಲಿಲ್ಲ. ಪಂಪನ 'ಆದಿಪುರಾಣ'ದಲ್ಲಿ ಬಾಹುಬಲಿಯು ರಾಜಾಧಿರಾಜ ಎಂಬುದನ್ನು 'ಅಡಕಿಲ್ವೆಸರ್' (ಒಂದರ ಮೇಲೊಂದು ಪೇರಿಸಿದ ಹೆಸರು) ಎಂದು ಹಾಸ್ಯಮಾಡುತ್ತಾನೆ.
ರಾಜನನ್ನು ಸೃಷ್ಟಿಸುವಾಗ ದೇವರು ಅವನಲ್ಲಿ ಅಷ್ಟದಿಕ್ಪಾಲಕರ ಅಂಶಗಳನ್ನು ಸೇರಿಸಿರುವನೆಂದು ಮನು ಹೇಳುತ್ತಾನೆ. ರಾಜನಿಗಿರಬೇಕಾದ ಯೋಗ್ಯತೆಗಳೇ 'ರಾಜಲಕ್ಷಣ'; ನಾಲ್ಕು ಉಪಾಯಗಳು, ಐದು ಬಗೆಯ ತಂತ್ರಗಳು, ಮೂರು ಬಗೆಯ ಶಕ್ತಿಗಳು, ಚತುರಂಗಬಲ, ಸಪ್ತಾಂಗಗಳು - ಇವುಗಳ್ನು 'ವಿವೇಕ ಚಿಂತಾಮಣಿ'ಯು ರಾಜಲಕ್ಷಣಗಳೆಂದು ಕರೆಯುತ್ತದೆ. 'ರಾಜಸಭೆ' ಎಂದರೆ ರಾಜನು ಮಂತ್ರಿ ಮತ್ತಿತರ ಗಣ್ಯರ ಜೊತೆ ಸಮಾಲೋಚನೆ ಮಾಡುತ್ತಿದ್ದ ಸಭೆ; ಇದನ್ನು ಕನ್ನಡದಲ್ಲಿ ಒಡ್ಡೋಲಗ ಎನ್ನುತ್ತಿದ್ದರು. ರಾಜನ ಏಳು ಮೂಲಭೂತ ಆಧಾರಗಳನ್ನು ಬಂಧುವರ್ಮನ 'ಹರಿವಂಶಾಭ್ಯುದಯ'ವು ರಾಜ್ರಕೃತಿಗಳೆಂದು ಕರೆಯುತ್ತದೆ. ಅವುಗಳೆಂದರೆ, ಸ್ವಾಮಿ ಅಮಾತ್ಯ ಜನಪದ ದುರ್ಗ ದಂಡ ಕೋಶ ಮತ್ತು ಮಿತ್ರ. ಪಂಪನ 'ಆದಿಪುರಾಣ'ದಲ್ಲಿ ಒಳ್ಳೆಯ ರಾಜನಿರುವ ನಾಡನ್ನು 'ರಾಜನ್ವತಿ' ಎಂದೂ, ಹೆಸರಿಗೆ ಮಾತ್ರ ರಾಜನಿರುವ ನಾಡನ್ನು 'ರಾಜವತಿ' ಎಂದೂ ಕರೆದಿದೆ: "ರಾಜವತಿಯಕ್ಕುಮಲ್ಲದೆ ರಾಜನ್ವತಿಯಾಗದಲ್ತೆ ಧರೆ". ರಾಜನ ಅರಮನೆಯಿದ್ದು ಆಡಳಿಕೇಂದ್ರವಾಗಿರುವ ಪಟ್ಟಣವೇ 'ರಾಜಧಾನಿ'.
ಮುಖ್ಯವೆಂದು ಸೂಚಿಸುವೆಡೆಯಲ್ಲೆಲ್ಲ ರಾಜ ಎಂಬ ಪೂರ್ವಪದವನ್ನು ಸೇರಿಸುವುದು ರೂಢಿ: ರಾಜಬೀದಿ, ರಾಜಮರ್ಯಾದೆ, ರಾಜವೈಭವ ಇತ್ಯಾದಿ. ರಾಜ ಎಂಬುದಕ್ಕೆ ಚಂದ್ರ ಎಂಬ ಅರ್ಥವೂ ಇದೆ. ರಾಜಶೇಖರ (ಚಂದ್ರನನ್ನು ತೆಯಲ್ಲಿ ಧರಿಸಿರುವವನು, ಶಿವ) ಎಂಬುದು ಇದಕ್ಕೆ ಉದಾಹರಣೆ.
=====
ರೂಪಾಯಿ: ಇದು ಭಾರತದ ಒಂದು ನಾಣ್ಯ ಎಂಬುದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಇದನ್ನು ರೂಪಾಯಿ ಎಂದು ಕರೆಯುವಂತೆ, ಇದರ ವ್ಯತ್ಯಸ್ತ ರೂಪಗಳು ಇತರ ಭಾಷೆಗಳಲ್ಲಿ ಬಳಕೆಯಲ್ಲಿವೆ. ಉದಾಹರಣೆಗೆ ಹಿಂದಿಯಲ್ಲಿ ಇದನ್ನು ರೂಪ್ಯಾ, ರುಪಯ್ಯಾ ಎನ್ನುತ್ತಾರೆ, ಕೆಲವರು ಮಾತನಾಡುವಾಗ ರೂಪಾ ಎಂದಷ್ಟೇ ಉಚ್ಚರಿಸುತ್ತಾರೆ. ತಮಿಳು ಮಲಯಾಳಂ ಭಾಷಿಕರಲ್ಲಿ ಪದಮಧ್ಯದ ಪ ವರ್ಣವು ಬ ಎಂದು ಉಚ್ಚಾರವಾಗುವುದರಿಂದ ಇದು ರುಬಾ ಅಥವಾ ರೂಬಾ ಎಂದಾಗುತ್ತದೆ. ಇಂಗ್ಲಿಷಿನಲ್ಲಿ ಇದನ್ನು ರುಪೀ ಎಂದರು.
ಈ ಎಲ್ಲದರ ಮೂಲದಲ್ಲಿರುವುದು ಸಂಸ್ಕತದ 'ರೌಪ್ಯ' ಎಂಬ ಶಬ್ದ. ಅದರ ಅರ್ಥ ಬೆಳ್ಳಿ ಎಂದು. ಇದು ರೂಪ್ಯ ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. ಬೆಳ್ಳಿಬೆಟ್ಟ ಎಂಬರ್ಥದಲ್ಲಿ ಹಿಮಾಲಯವನ್ನು ರೂಪ್ಯಾಚಲ ಎನ್ನುತ್ತಿದ್ದರು. ಹಿಂದಿನ ಕಾಲದಲ್ಲಿ ವಿವಿಧ ಲೋಹಗಳಿಂದ ಮಾಡಿದ ವಿವಿಧಾಕಾರದ ನಾಣ್ಯಗಳೇ ಬಳಕೆಯಲ್ಲಿದ್ದುದು. ಚಿನ್ನ ಬಹು ಬೆಲೆಬಾಳುವ ಲೋಹ, ಅದಾದನಂತರ ಬೆಳ್ಳಿ. ಈಚೆಗಿನ ಪ್ರಮಾಣೀಕೃತ ನಾಣ್ಯ ಎಂದರೆ ರೂಪಾಯಿಯೇ. ಪೈಸೆ ಬರುವ  ಮುಂಚೆ ಅದನ್ನು ಹದಿನಾರು ಭಾಗ ಮಾಡಿ ಒಂದೊಂದಕ್ಕೂ ಆಣೆ ಎನ್ನುತ್ತಿದ್ದರು; ಒಂದು ಆಣೆಗೆ ಹನ್ನೆರಡು ಕಾಸುಗಳು; ಹೀಗಾಗಿ ಒಂದು ರೂಪಾಯಿಗೆ ತೊಂಬತ್ತಾರು ಕಾಸುಗಳಾಗಿದ್ದವು. ಇವುಗಳಿಗೆ ಬೇರ ಬೇರೆಯೇ ಆಕಾರದ ಲೋಹಗಳ ನಾಣ್ಯಗಳಿದ್ದುವು. ಜೊತೆಗೆ ನಾಲ್ಕು ಆಣೆಗಳ ಪಾವಲಿ ಮತ್ತು ಎರಡು ಪಾವಲಿ ಬೆಲೆಯ ಎಂಟಾಣೆ ನಾಣ್ಯಗಳೂ ಇದ್ದವು. ಒಂದೆರಡು ದಶಕಗಳಿಂದ ಈಗಿನ ದಶಾಂಶ ಪದ್ಧತಿ ಜಾರಿಗೆ ಬಂದಿದೆ; ಒಂದು ರೂಪಾಯಿಗೆ ನೂರು ಪೈಸೆಗಳು. ಬಂದ ಹೊಸತರಲ್ಲಿ ಇದನ್ನು ನಯಾಪೈಸಾ ಎಂದೇ ಕರೆಯುತ್ತಿದ್ದರು.
ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ, ಕಳೆದ ಶತಮಾನದ ಮೊದಲಲ್ಲಿ ಅವರ ರಾಣಿ ವಿಕ್ಟೋರಿಯ. ಆಗ ಅವಳ ಚಿತ್ರವಿದ್ದ ಬೆಳ್ಳಿಯ ರೂಪಾಯಿಗಳು ಚಲಾವಣೆಯಲ್ಲಿದ್ದುವಂತೆ; ಒಂದು ತೊಲ ತೂಕದ ಅಪ್ಪಟ ಬೆಳ್ಳಿಯ ನಾಣ್ಯ ಅದು. ಬರಬರುತ್ತ ರೂಪಾಯಿಯ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತ ಅದರ ಲೋಹ, ತೂಕ, ಆಕಾರಗಳು ಬದಲಾಗುತ್ತ ಬಂದವು; ಜೊತೆಗೆ ಕಾಗದದ ನೋಟು ಕೂಡ ಬಂತು. ಕನ್ನಡದಲ್ಲಿ ರೂಪಾಯಿಯನ್ನು ಸೂಚಿಸಲು ರೂ ಎಂದು ಬರೆಯುವ ವಾಡಿಕೆಯಿದೆ; ಇಂಗ್ಲಿಷ್‍ನಲ್ಲಿ ಒಂದನ್ನು ಸೂಚಿಸುವಾಗ Re. ಎಂದೂ ಹೆಚ್ಚಿನದನ್ನು ಸೂಚಿಸುವಾಗ   Rs. ಎಂದೂ ಈಚಿನವರೆಗೆ ಬರೆಯುತ್ತಿದ್ದರು. ಈಚೆಗೆ ಭಾಷೆ ಯಾವುದೇ ಇರಲಿ ರೂಪಾಯಿಯನ್ನು ಸೂಚಿಸುವ ` ಎಂಬ ಏಕರೂಪದ ಸಂಕೇತವೊಂದನ್ನು ಭಾರತ ಅಂಗೀಕರಿಸಿ ಎಲ್ಲೆಡೆ ಬಳಕೆಯಲ್ಲಿದೆ.
=====
ವಚನ: ಇದೊಂದು ಸಂಸ್ಕೃತ ಶಬ್ದ, ಇದರ ಅರ್ಥ ಮಾತು ಎಂದು. ವಚ ಎಂದರೆ ಮಾತನಾಡುವ ಪಕ್ಷಿ, ಗಿಣಿ ಎಂಬರ್ಥವಿದೆ. ವಚಕ್ನಿ ಎಂಬುದು ಚೆನ್ನಾಗಿ ಮಾತನಾಡಬಲ್ಲವನನ್ನು ಸೂಚಿಸುತ್ತದೆ. ನುಡಿನಿಪುಣತೆಯನ್ನು ನಾಗಚಂದ್ರ ತನ್ನ 'ಮಲ್ಲಿನಾಥ ಪುರಾಣ'ದಲ್ಲಿ 'ವಚನಪ್ರೌಢಿ' ಎನ್ನುತ್ತಾನೆ. ವ್ಯಾಕರಣದಲ್ಲಿ ಇದು ಸಂಖ್ಯೆಯನ್ನು ಸೂಚಿಸುವ ಪಾರಿಭಾಷಿಕ ಶಬ್ದವಾಗಿದೆ: ಏಕವಚನ, ದ್ವಿವಚನ, ಬಹುವಚನ.
ಕನ್ನಡ ಚಂಪೂ ಕಾವ್ಯಗಳಲ್ಲಿ ಪದ್ಯಗಳ ನಡುವೆ ಬರುವ ಗದ್ಯವನ್ನು ವಚನ ಎಂದು ಕರೆಯುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಬಂದ ಬಸವಾದಿ ಶಿವಶರಣರು ರಚಿಸಿದ ಕೃತಿಗಳನ್ನು ವಚನ ಎಂಬ ಮಾತಿನಿಂದ ಸೂಚಿಸುವ ಪರಿಪಾಟ ವಚನಕಾರರಲ್ಲಿಯೇ ಕಾಣಬರುತ್ತದೆ. ನಮಗೆ ತಿಳಿದ ಮೊದಲ ವಚನಕಾರ ಜೇಡರ ದಾಸಿಮಯ್ಯನು 'ಆದ್ಯರ ವಚನ'ವನ್ನು ಉಲ್ಲೇಖಿಸುತ್ತಾನೆ. ಪ್ರಾಯಶಃ ಇದು ಹಿರಿಯ ಭಕ್ತರು ಆಡಿದ ಮಾತು ಎಂಬರ್ಥವನ್ನು ಹೊಂದಿದೆ. "ಎರಡೆಂಬತ್ತು ಕೋಟಿ ವಚನಗಳ ಹಾಡಿ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು" ಎಂಬುದು ಅಲ್ಲಮನ ಮಾತು.. "ಆನು ಒಲಿದಂತೆ ಹಾಡುವೆ" ಎಂಬ ಬಸವಣ್ಣನ ಮಾತಿನಲ್ಲಿ ವಚನಗಳ ಹಾಡುವಿಕೆಯು ನಿರ್ದಿಷ್ಟತೆಯಿಂದ ಕೂಡಿರದೆ ಭಾವಸಂವಾದಿಯಾದುದು ಎಂಬ ಅರ್ಥವು ಸೂಚಿತವಾಗಿದೆ. ಸಿದ್ಧರಾಮನು "ವಚನಾನುಭವ, ವಾಗ್ರಚನೆಯಲ್ಲ" ಎನ್ನುತ್ತಾನೆ. ವಚನಗಳು ಅನುಭ(ಭಾ)ವದ ಅಭಿವ್ಯಕ್ತಿಯೇ ಹೊರತು, ಕೇವಲ ಮಾತಿನ ಜೋಡಣೆಯಲ್ಲ ಎಂಬ ಅರ್ಥ ಇಲ್ಲಿದ್ದಂತಿದೆ.
ವಚನ ಕೊಡು ಎಂಬುದು ಮಾತು ಕೊಡು ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಮಾತಿಗೆ ತಪ್ಪಿದವನನ್ನು 'ವಚನಭ್ರಷ್ಟ' ಎಂದೇ ಕರೆಯುತ್ತಾರೆ. ಮಾತಿನ ಮಲ್ಲ ಎಂಬರ್ಥದಲ್ಲಿ ಕುಮಾರವ್ಯಾಸನು 'ವಚನಶೂರ' ಎಂಬ ಶಬ್ದವನ್ನು ಬಳಸುತ್ತಾನೆ ("ವಚನಶೂರರು ನಾವು ಪಾವನಿಚಯವೇ ಭುಜಶೂರರು"). ಮಾತು ಕೊಡು ಎಂಬರ್ಥದಲ್ಲಿ 'ವಚನಿಸು' ಎಂಬ ಪ್ರಯೋಗವೂ ಕುಮಾರವ್ಯಾಸನಲ್ಲಿಯೇ ಇದೆ ("ವಚನಿಸಿ ಮಾಡದಿಹ ಬಾಹಿರರು ನಾವಲ್ಲ"). ಕಂಠಪಾಠ  ಅಥವಾ ಗಟ್ಟಿಮಾಡಿಕೊಳ್ಳುವುದು 'ವಚೋವಿಧೇಯತೆ' ಎಂದು ಕರೆಯುತ್ತಾರೆ; ಹಾಗೆ ಮಾಡಿಕೊಂಡಿರುವವನಿಗೆ ವಿಷಯ 'ವಚೋವಿಧೇಯ'ವಾಗಿರುತ್ತದೆ.
=====
ವೀಳ್ಯ: ಸಂಸ್ಕೃತದ ವೀಟಿ ಹಾಗೂ ವೀಟಿಕಾಗಳು ವೀಳೆಯದೆಲೆಯ ಹಂಬು ಮತ್ತು ಎಲೆಗಳನ್ನು ಸೂಚಿಸುತ್ತವೆ. ವೀಟಿಕಾ>ವೀಟಿಕೆ>ವೀಳೆಯ>ವೀಳ್ಯ ಆಗಿದೆ. ವೀಟಿಕೆ ವೀಳಿಗೆಯಾಗುತ್ತದೆಂದು 'ಶಬ್ದಮಣಿದರ್ಪಣ' ಹೇಳುತ್ತದೆ.  ಈ ಬಳ್ಳಿಗೆ ಸಂಸ್ಕೃತದಲ್ಲಿ 'ತಾಂಬೂಲವಲ್ಲೀ ತಾಂಬೂಲೀ ನಾಗವಲ್ಲಿ' ಎಂಬ ಹೆಸರುಗಳನ್ನೂ 'ಅಮರಕೋಶ' ಹೇಳುತ್ತದೆ. ಅಡಿಕೆ ಮತ್ತು ಸುಣ್ಣಗಳೊಡನೆ ಸೇರಿ 'ಎಲೆಯಡಿಕೆ' ಆಗುತ್ತದೆ; ಇದೇ ತಾಂಬೂಲ. ತಾಂಬೂಲಚರ್ವಣವು ಎರಡು ಸಾವಿರ ವರ್ಷಗಳಷ್ಟು ಹಳೆಯದೆಂದೂ, ಪೂರ್ವದೇಶಗಳ ಜೊತೆಗೆ ಭಾರತವು ಸಂಪರ್ಕ ಪಡೆದ ಮೇಲೆ ಇಲ್ಲಿಯೂ ಬಳಕೆಗೆ ಬಂತೆಂದೂ ವಿದ್ವಾಂಸರು ಹೇಳುತ್ತಾರೆ. ಇದು ಜೀರ್ಣಕಾರಿಯೆಂಬ ಭಾವನೆಯಿದ್ದುದನ್ನು ಆಲ್ಬೆರೂನಿ ಎಂಬ ಪ್ರವಾಸಿ ಹೇಳುತ್ತಾನಂತೆ. ನಯಸೇನ ತನ್ನ 'ಧರ್ಮಾಮೃತ'ದಲ್ಲಿ ಕರ್ಪೂರ ಬೆರೆಸಿದ ವೀಳೆಯವನ್ನು ಉಲ್ಲೇಖಿಸುತ್ತಾನೆ. ("ಕಿಯರ್ಪಿರಿಯರೆನ್ನದೆ ಮನ್ನಣೆಯಿಂ ಕರ್ಪುರಸಹಿತಂ ವೀಳೆಯಂಗೊಟ್ಟು") 'ಕರ್ಪುರ ವೀಳೆಯ'ದ ಉಲ್ಲೇಖ ಆದಯ್ಯನ ವಚನವೊಂದರಲ್ಲಿಯೂ ಇದೆ.
ಗೌರವಸೂಚಕವಾಗಿ ಇದನ್ನು ದೇವರಿಗೆ ಹಾಗೂ ಹಿರಿಯರಿಗೆ ವೀಳೆಯ ಅರ್ಪಿಸುವುದು ಹಳೆಯ ಪದ್ಧತಿ. ಮದುವೆಯಂತಹ ಶುಭಸಮಾರಂಭಗಳಲಿ ಸುವಾಸಿನಿಯರು ಬಂದ ಹೆಣ್ಣುಮಕ್ಕಳಿಗೆ ಹೂವು ತಾಂಬೂಲಗಳನ್ನು ನೀಡುತ್ತಿದ್ದ 'ಹೂದಂಬುಲ'ದ ಪದ್ಧತಿಯನ್ನು ವಚನಗಳು ಹೇಳುತ್ತವೆ. ಇದೇ ಈಗಿನ 'ಹೂವೀಳ್ಯ'. ವೀರಶೈವರಲ್ಲಿ ವಿಭೂತಿಯೊಡನೆ ವೀಳೆಯ ಕೊಡುವುದನ್ನು ವಚನಗಳು 'ವಿಭೂತಿವೀಳೆಯ' ಎನ್ನುತ್ತವೆ. ಮದುವೆ ನಿಶ್ಚಯದ ಸಂದರ್ಭದಲ್ಲಿ ವೀಳ್ಯ ಬದಲಾಯಿಸುವ ಪದ್ಧತಿ ಈಗಲೂ ಇದೆ.
ಯುದ್ಧದಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿ ತಾಂಬೂಲ ಕೊಡುವುದರ ಉಲ್ಲೇಖ ಕಾವ್ಯಗಳಲ್ಲಿದೆ. "ವೀಳೆಯಗೊಂಡುಕ" ಮೆರೆದ ಸುಧನ್ವನ ಚಿತ್ರ 'ಜೈಮಿನಿಭಾರತ'ದಲ್ಲಿದೆ. ಇದೇ ಈಗಿನ 'ಸುಪಾರಿ ಕೊಡು'ವುದು. ಎಲ್ಲ ಪರಿಕರಗಳನ್ನು ಸೇರಿಸಿ ಮೆಲ್ಲಲು ಸಿದ್ಧಪಡಿಸುವುದನ್ನು 'ವೀಳ್ಯಕಟ್ಟು'ಎನ್ನುವುದು ವಾಡಿಕೆ.
=====
'ಶಾಸ್ತ್ರೀಯ ಭಾಷೆ ಕನ್ನಡ' - ಹಾಗಂದರೇನು? ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಕಸ್ಥಾನ-ಮಾನಕಿ ಬಂದಿರುವ ವಿಷಯ ಈಗ ಇತಿಹಾಸವೆಂಬುದು ನಿಜ. ಅದಕ್ಕೆ ಕಾರಣವಾದ ಹಿನ್ನೆಲೆಯೂ ಸಾಕಷ್ಟು ಜನಕ್ಕೆ ತಿಳಿದಿರಬೇಕು. ಆದರೆ ಈ ಕಶಾಸ್ತ್ರೀಯಕಿ ಎನ್ನುವ ವಿಶೇಷಣದ ಅರ್ಥವೇನು, ಅದರ ಸ್ವರೂಪವಾವುದು ಎಂಬುದು ಜನಗಳಿಗೆ ತಿಳಿಯದು, ಯಾಕಂದರೆ ವಿದ್ವಾಂಸರಿಗೇ ಆ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ.
ಕನ್ನಡಕ್ಕೆ ಯಾವುದೋ ವಿಶೇಷಣವನ್ನು ಸೇರಿಸಿ ಹೇಳುವ ರೂಢಿ ಇಂದಿನದೇನಲ್ಲ, ಹಿಂದೆಯೂ ಇತ್ತು. 'ಕವಿರಾಜಮಾರ್ಗ'ದಲ್ಲಿ (ಕ್ರಿಶ 850) ಕನ್ನಡ ಶಬ್ದವನ್ನು ನಾಡು ಮತ್ತು ನುಡಿ ಎರಡೂ ಅರ್ಥಗಳಲ್ಲಿ ಬಳಸಲಾಗಿದೆ. 'ಕನ್ನಡಂಗಳ್' ಎಂಬ ಶಬ್ದ ಅಲ್ಲಿ ತನ್ನ ಕಾಲದ ಕನ್ನಡದ ಪ್ರಾದೇಶಿಕ ಉಪಭಾಷೆಗಳನ್ನು ಸೂಚಿಸುತ್ತಿದ್ದ ಶಬ್ದ. ಅಲ್ಲಿ ಒಂದೆಡೆ "ಅದಱೊಳಂ ಕಿಸುವೊಳಲಾ ವಿದಿತ ಮಹಾ ಕೊಪಣ ನಗರದಾ ಪುಲಿಗೆಯಾ ಸದಭಿಸ್ತುತಮಪ್ಪ ಒಂಕುಂದದ ನಾಡೆ ನಾಡೆ ಕನ್ನಡದ ತಿರುಳ್" ಎಂಬ ಮಾತಿದೆ. ಪಟ್ಟದಕಲ್ಲು, ಕೊಪ್ಪಳ, ಲಕ್ಷ್ಮೇಶ್ವರ ಒಕ್ಕುಂದ _ ಊರುಗಳ ನಡುವಣ ಪ್ರದೇಶ ಕನ್ನಡದ ಸಾರಪ್ರದೇಶ ಎಂದು ಇದರ ಅರ್ಥ (ಇಲ್ಲಿ ಎರಡು ಬಾರಿ 'ನಾಡೆ' ಎಂದು ಬಳಸಲಾಗಿದೆ; ಮೊದಲನೆಯದು ಪ್ರದೇಶವೇ ಎಂಬ ಅವಧಾರಣೆಯ ಅರ್ಥವನ್ನು ಪಡೆದಿದ್ದರೆ, ಎರಡನೆಯದು 'ವಿಶೇಷವಾಗಿ' ಎಂಬ ಅರ್ಥದಲ್ಲದೆ). ಇಲ್ಲಿ ಸ್ಪಷ್ಟವಾಗಿ ತಿರುಳ್ ಎಂಬುದು ನಾಡನ್ನು ಸೂಚಿಸುತ್ತದೆ. ಆದರೆ ಮತ್ತೊಂದೆಡೆ ಈ ಕೃತಿಯಲ್ಲಿ "ಪಳಗನ್ನಡಮಂ ಪೊಲಗೆಡಿಸಿ ನುಡಿವರ್ ಆಗಮ ಬಲಹೀನರ್" ಎಂಬ ಮಾತಿದೆ. ಇಲ್ಲಿ ತನಗಿಂತ ಹಿಂದಿನ ಕನ್ನಡವನ್ನು ಹಳಗನ್ನಡ ಎನ್ನುವ ಗ್ರಂಥಕರ್ತೃವು ಅದನ್ನು ಕೆಲವರು ಕೆಡಿಸಿ 'ನುಡಿವರ್' ಎನ್ನುತ್ತಾನೆ (ಎಂದರೆ ಬರೆಯುವರು ಎಂದೇ ಅರ್ಥ). ಇಲ್ಲಿಯದು ನುಡಿಯ ಬಗೆಗಿನ ಉಲ್ಲೇಖ. ಮುಂದೆ ಕ್ರಿಶ. ಹತ್ತನೆಯ ಶತಮಾನದ ಪಂಪನು ತನ್ನ 'ವಿಕ್ರಮಾರ್ಜುನ ವಿಜಯ'ದ ಕೊನೆಯಲ್ಲಿ "ರಾಜದ್ರಾಜಕಮೆನಿಸಿದ ಸಾಜದ ಪುಲಿಗೆಯ ತಿರುಳ ಕನ್ನಡದೊಳ್" ರಚಿಸಿದುದು ತನ್ನ ಕವಿತೆ ಎಂದು ಹೇಳಿಕೊಳ್ಳುತ್ತಾನೆ. ಪುಲಿಗೆ ಎಂಬುದು ಈಗಿನ ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಹಿಂದೆ ಇದ್ದ ಹೆಸರು. ಅಲ್ಲಿನ ಕನ್ನಡವನ್ನು ಪಂಪ ಸಾಜದ ಕತಿರುಳ ಕನ್ನಡಕಿ ಎನ್ನುತ್ತಿದ್ದಾನೆ. ಕವಿರಾಜಮಾರ್ಗಕಾರನೂ ಪುಲಿಗೆಯನ್ನು ಹೆಸರಿಸಿದ್ದ. ಹಾಗಾಗಿ ಅವನ ದೃಷ್ಟಿಯಲ್ಲಿಯೂ ಪ್ರದೇಶದ ಜೊತೆಗೆ ನುಡಿಯನ್ನೂ ಸೂಚಿಸುವ ಉದ್ದೇಶವಿದ್ದಿರಬಹುದು ಎನ್ನಿಸುವುದು ಸಹಜ.
ಮುಂದೆ ಹನ್ನೆರಡನೆಯ ಶತಮಾನದ ನಯಸೇನನು ಹೇಳುವ "ಪೊಸಗನ್ನಡದೊಳ್ ವ್ಯಾವರ್ಣಿಸುವೆಂ ಸತ್ಕೃತಿಯಂ" ಎಂಬ ಮಾತಿನಲ್ಲಿ ಹೊಸಗನ್ನಡ ಎಂಬ ಶಬ್ದವಿದೆ. ಅವನ ದೃಷ್ಟಿಯಲ್ಲಿ ತನ್ನ ಕಾಲದಲ್ಲಿ ಬರೆಯುತ್ತಿದ್ದ ಕನ್ನಡದ ಸ್ವರೂಪ ಹೊಸಗನ್ನಡ (ನಾವು ಯಾವುದೇ ಭಾಷೆಯ ಪೂರ್ವ ಸ್ವರೂಪದ ಬಗ್ಗೆ ಮಾತನಾಡುವಾಗ, ಧ್ವನಿಮುದ್ರಣ ಆರಂಭಗೊಳ್ಳುವವರೆಗಿನ ಕಾಲದವರೆಗೂ, ಅನಿವಾರ್ಯವಾಗಿ ಬರವಣಿಗೆಯನ್ನೇ ಅವಲಂಬಿಸಬೇಕು). ಈಚೆಗೆ ಕಳೆದ ಶತಮಾನದಿಂದ ಕನ್ನಡ ಭಾಷೆಯು ಬೆಳೆದು ಬಂದ ವಿವಿಧ ಘಟ್ಟಗಳನ್ನು ಕುರಿತು ಹೇಳುವಾಗ, ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮಾತುಗಳನ್ನು ಬಳಸುವುದು ರೂಢಿಯಲ್ಲಿ ಬಂದಿದೆ. ಆದರೆ ಈಗ ಎಂಟು ವರ್ಷಗಳಿಂದ, ಅದರಲ್ಲೂ ಈಚಿನ ನಾಲ್ಕು ವರ್ಷಗಳಿಂದ, ಅದರಲ್ಲಿಯೂ ಕಳೆದ ಒಂಬತ್ತು ತಿಂಗಳುಗಳಿಂದ ಶಾಸ್ತ್ರೀಯ ಕನ್ನಡದ ಬಗ್ಗೆ ಮಾತನಾಡುತ್ತಿದ್ದೇವೆ. ಅದಕ್ಕೆ ಹಿಂದೆ ಈ ಮಾತನ್ನು ಕನ್ನಡಕ್ಕೆ ಅನ್ವಯಿಸಿ ಹೇಳುತ್ತಿರಲಿಲ್ಲ, ಅಥವಾ ಯಾವುದೇ ಭಾಷೆಗೆ ಅನ್ವಯಿಸುತ್ತಿರಲಿಲ್ಲ.
2004 ರಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಾಗ ಡಿಎಂಕೆ ಹಾಕಿದ ಒಂದು ಷರತ್ತೆಂದರೆ, ಅಧಿಕಾರಕ್ಕೆ ಬಂದ ತಕ್ಷಣ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಬೇಕು ಎಂಬುದು; ಕಾಂಗೆಸ್ ಇದಕ್ಕೆ ಒಪ್ಪಿತು. ಈ ಮೈತ್ರಿಕೂಟ ವಿಜಯದುಂದುಭಿ ಮೊಳಗಿಸಿತು. ತಮಿಳು ನಾಡು ಸರ್ಕಾರ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಲು ಒತ್ತಾಯಿಸಿತು. ಆದರೆ ಆವರೆಗೆ ಶಾಸ್ತ್ರೀಯ ಭಾಷೆಯ ಬಗ್ಗೆ ಯಾರಿಗೂ ಪರಿಕಲ್ಪನೆಯಿರಲಿಲ್ಲ, ತಮಿಳರಿಗೂ. ತಮ್ಮದು ಜಗತ್ತಿನಲ್ಲಿಯೇ ಅತಿಶಯದ ಭಾಷೆ, ಅದರಂತೆ ಮತ್ತೊಂದಿಲ್ಲ ಎಂದು ಅವರು ಹೇಳಿಕೊಳ್ಳಬೇಕಾಗಿತ್ತು, ಅಷ್ಟೆ; ಅದಕ್ಕೇ ತಮಿಳನ್ನು Classical Language ಎಂದು ಕರೆಯಬೇಕೆಂಬ ಒತ್ತಾಯ. ಹಾಗೆ ಕರೆಯಲು ಕಾರಣ ಬೇಕಲ್ಲ, ಕೇಂದ್ರ ಸರ್ಕಾರವು ಭಾಷೆಯೊಂದನ್ನು Classical ಎಂಬ ವಿಶೇಷಣದಿಂದ ಸಂಬೋಧಿಸಲು ಅದಕ್ಕಿರಬೇಕಾದ ಲಕ್ಷಣಗಳನ್ನು ನಿಗದಿ ಪಡಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಕೇಳಿಕೊಂಡಿತು.
ಅಕಾಡೆಮಿಗೆ ತಲೆ ನೋವು ಶುರುವಾಯಿತು, ಏಕೆಂದರೆ Classical Language ಪರಿಕಲ್ಪನೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಭಾಷಾವಿಜ್ಞಾನದಲ್ಲಿಯೂ, ಈಗ ಜನಬಳಕೆಯಲ್ಲಿಲ್ಲದೆ, ಕೇವಲ ಗ್ರಾಂಕ ಸಾಹಿತ್ಯವನ್ನು ಹೊಂದಿರುವ ಸಂಸ್ಕೃತ, ಲ್ಯಾಟಿನ್, ಪಾಲಿ ಮುಂತಾದವುಗಳಂತೆ ಪ್ರಾಚೀನ ಭಾಷೆ ಎಂಬ ಅಸ್ಪಷ್ಟ ಭಾವನೆ ಇತ್ತು; ಯಾರೂ ಜನಬಳಕೆಯ ಭಾಷೆಯನ್ನು Classical ಎಂಬ ವಿಶೇಷಣದಿಂದ ಕರೆಯುತ್ತಿರಲಿಲ್ಲ. ಆದರೆ ಶ್ರೇಷ್ಠ ಕೃತಿ, ಪ್ರಾಚೀನವಾದದ್ದಿರಬಹುದು, ಆಧುನಿಕವಿರಬಹುದು, Classic ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಅಕಾಡೆಮಿ ಏನನ್ನೂ ಮಾಡಲಿಲ್ಲ, ಅದಕ್ಕೆ ಗೊಂದಲ; ಆದರೆ ಡಿಎಂಕೆ ಒತ್ತಾಯ. ಹೀಗಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕೇಳಿದಾಗ, ಅಕಾಡೆಮಿಯು ಒಂದು ಸಮಿತಿಯನ್ನು ರಚಿಸಿತು, ಅದು ತಮಿಳಿಗೆ ಹೊಂದುವಂತಹ ನಾಲ್ಕು ಲಕ್ಷಣಗಳನ್ನು ಗುರುತಿಸಿ ಹೇಳಿತು. ಅದಕ್ಕನುಗುಣವಾಗಿ ಕೇಂದ್ರ ಸರ್ಕಾರ 12-10-2004 ರಂದು ತಮಿಳನ್ನು Classical Language ಎಂದು ಘೋಷಿಸಿತು. ಒಂದು ವರ್ಷದ ನಂತರ ಸಂಸ್ಕೃತವನ್ನೂ ಹಾಗೆ ಕರೆಯಿತು. ಈ ನಾಲ್ಕೂ ಲಕ್ಷಣಗಳಿದ್ದ ಕನ್ನಡ ಮತ್ತು ತೆಲುಗು ಭಾಷೆಗಳವರು ತಮ್ಮದೂ Classical Language ಗಳೇ ಎಂದು ಘೋಷಿಸಲು ವರಾತ ಆರಂಭಿಸಿದರು. ಏನೇನೋ ಅಡಚಣೆಗಳು, ಗೊಂದಲಗಳು, ಕೊನೆಗೆ ಈ ಎರಡಕ್ಕೂ Classical Language 'ಸ್ಥಾನಮಾನ' ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮುಂದಿಟ್ಟಾಗ, ಹಿಂದೆ ನಿಗದಿಪಡಿಸಿದ್ದ 'ಒಂದು ಸಾವಿರ ವರ್ಷದ ಇತಿಹಾಸ' ಎಂಬ ಲಕ್ಷಣವನ್ನು ಸಮಿತಿಯು '1500 ರಿಂದ 2000 ವರ್ಷಗಳು' ಎಂದು ಬದಲಾಯಿಸಿತು. ಆಗಲೂ ಈ ಎರಡು ಭಾಷೆಗಳಿಗೆ ಆ ಲಕ್ಷಣವಿದ್ದುದರಿಂದ ಅಳೆದು ಸುರಿದೂ 31-10-2008 ರಂದು ಕನ್ನಡ ತೆಲುಗುಗಳನ್ನೂ ಶಾಸ್ತ್ರೀಯ ಭಾಷೆಗಳು ಎಂದು ಘೋಷಿಸಲಾಯಿತು. (ಈ ಮಧ್ಯೆ ಸಂಸ್ಕೃತಕ್ಕೆ ಆ ಪಟ್ಟ ಕಟ್ಟಲಾಯಿತು. ಇದೀಗ ಮಲಯಾಳಂಗೂ ಕೇಳದೆಯೇ ಆ ಪಟ್ಟ ದೊರೆತಿದೆ).
ಮುಂದೆಯೂ ಏನೇನೋ ಅಡಚಣೆಗಳು; ಕೊನೆಗೆ ಆ ಗೌರವ ಪಡೆದ ಕನ್ನಡ ಭಾಷೆಯ ಅಧ್ಯಯನಕ್ಕೆ ಒಂದು ಉನ್ನತ ಸಂಸ್ಥೆಯ ಸ್ಥಾಪನೆ ಮಾಡಬೇಕಾಗಿದ್ದು, 18-12-2011 ರಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ 'ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರಕ' (Centre of Excellence for the Study of Classical Kannada) ಉದ್ಘಾಟನೆಗೊಂಡಿತು; ಕಳೆದ ನಾಲ್ಕಾರು ತಿಂಗಳಿಂದ ಹಣಸಹಾಯವೂ ದೊರೆಯುತ್ತಿದೆ. ಆದರೆ ಶಾಸ್ತ್ರೀಯ ಕನ್ನಡ ಅಂದರೆ ಏನು ಎಂಬುದರ ಸ್ಪಷ್ಟ ಪರಿಕಲ್ಪನೆ ಈಗಲೂ ಇಲ್ಲ. (ಹೀಗಾಗಿಯೇ ಏನು ಮಾಡಬೇಕೆಂದು ತೋಚದೆಯೋ ಏನೋ ಬಹುಪಾಲು ಹಣ ಬಳಕೆಯಾಗುತ್ತಲೇ ಇಲ್ಲ). ಒಬ್ಬೊಬ್ಬ ವಿದ್ವಾಂಸರದು ಒಂದೊಂದು ಅಭಿಪ್ರಾಯ. ಆದರೂ ಅದರ ಅಧ್ಯಯನಕ್ಕೆ ಒಂದು ಸಂಸ್ಥೆ ಆಗಿದೆ, ಅದರ ವತಿಯಿಂದ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಹೀಗಾಗಿ ಏನಾದರೂ ಮಾಡಬೇಕಲ್ಲ.
ಶಾಸ್ತ್ರೀಯ ಭಾಷೆಗಿರಬೇಕಾದ ನಾಲ್ಕು ಲಕ್ಷಣಗಳಲ್ಲಿ ನಾಲ್ಕನೆಯದು "ಶಾಸ್ತ್ರೀಯ ಭಾಷಾ ಸಾಹಿತ್ಯಗಳು ಆಧುನಿಕವಾದುದಕ್ಕಿಂತ ಭಿನ್ನವಾದುದಾಗಿದ್ದು, ಶಾಸ್ತ್ರೀಯ ಭಾಷೆ ಹಾಗೂ ಈಚಿನ ಅವಸ್ಥಾಂತರಗಳ ನಡುವೆ ಕಂದರವಿರಬಹುದು" ಎಂಬುದು. ತಮಿಳು ವಿದ್ವಾಂಸರೇ ರೂಪಿಸಿದ್ದರಿಂದ ಈ ಲಕ್ಷಣವೂ ಸೇರಿಕೊಂಡಿದೆ ಎನ್ನಬಹುದು. ಏಕೆಂದರೆ ಕ್ರಿಸ್ತಶಕದ ಆರಂಭಕಾಲದಲ್ಲಿತ್ತೆಂದು ಹೇಳಲಾದ ತಮಿಳಿನ ಚಂಗಕಾಲದ ನಂತರ ಅನೇಕ ಶತಮಾನಗಳ ಕಾಲ ತಮಿಳು ಕೃತಿಗಳು ಕ್ರಿಶ ಒಂಬತ್ತನೇ ಶತಮಾನದವರೆಗೆ ದೊರೆಯದಿರಲು ಕಾರಣ ಅವನ್ನೆಲ್ಲ ನಾಶಮಾಡಿದ ಕಳಪ್ಪರ್ ಎಂಬ ಶತ್ರುಗಳು ಕಾರಣ ಎಂಬ ವಾದ ಮಾಡಿ, ತಮಿಳು ಸಾಹಿತ್ಯದಲ್ಲಿ ನಿರಂತರತೆ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಕ್ರಿಶ. 450 ರ ಹಲ್ಮಿಡಿ ಶಾಸನದಿಂದ ಇಲ್ಲಿಯವರೆಗೂ ಬರವಣಿಗೆ ಹಾಗೂ ಕ್ರಿ 850 ರ 'ಕವಿರಾಜಮಾರ್ಗ'ದಿಂದ ಸಾಹಿತ್ಯ ಕೃತಿಗಳು ನಿರಂತರವಾಗಿ ದೊರೆಯುತ್ತವೆ. ಸರ್ಕಾರ ನಿಗದಿಪಡಿಸಿದ ಲಕ್ಷಣಕ್ಕನುಗುಣವಾಗಿ ತಾನೇ ಕನ್ನಡ ಶಾಸ್ತ್ರೀಯ ಭಾಷೆಯನ್ನು ಗುರುತಿಸಬೇಕಾದದ್ದು? ಹಾಗಾಗಿ ಒಂದು ನಿರಂತರ ಧಾರೆಯಾಗಿ ಒಂದು ಚೌಕಟ್ಟಿನಲ್ಲಿ, ಒಂದೇ ರೂಪದ ಕನ್ನಡವನ್ನು ಬಳಸಿ ಆರಂಭದಿಂದ ಹನ್ನೆರಡನೆಯ ಶತಮಾನದವರೆಗೆ ಊರ್ಜಿತವಾಗಿದ್ದ ಚಂಪೂ ಪರಂಪರೆಯನ್ನು ಕನ್ನಡದ ಶಾಸ್ತ್ರೀಯ ಸಾಹಿತ್ಯ ಎಂದೂ, ಅದರಲ್ಲಿ ಬಳಕೆಯಾದ ಈಗ ನಾವು ಹಳಗನ್ನಡ ಎನ್ನುವ ಭಾಷಾಸ್ವರೂಪವನ್ನು ಶಾಸ್ತ್ರೀಯ ಕನ್ನಡ ಎಂದೂ ಕರೆಯುವುದು ಸಮಂಜಸವೆನ್ನಿಸುತ್ತದೆ. ಉನ್ನತ ಅಧ್ಯಯನ ಕೇಂದ್ರಗಳ ಈಗಿನ ಕರ್ತವ್ಯವೆಂದರೆ ಅವುಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸಲು ಯುವಕರನ್ನು ಸಜ್ಜುಗೊಳಿಸುವುದಕ್ಕಾಗಿ 'ಶಾಸ್ತ್ರೀಯ ಕನ್ನಡ'ದ ವಿಶೇಷ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕಾದುದು. ಕನ್ನಡಕ್ಕೆಂದು ಬೇರೆಯೇ ಆದ ಇಲಾಖೆಯಿದ್ದು ಕೋಟ್ಯಂತರ ರೂಪಾಯಿಗಳನ್ನು ಬಜೆಟ್‍ನಲ್ಲಿ ನಿಗದಿಪಡಿಸಿರುವ ಕನ್ನಡ ನಾಡಿನ ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು; ಅಲ್ಲದೆ ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರ'ವನ್ನು ಭಾರತೀಯ ಭಾಷಾ ಸಂಸ್ಥಾನದಿಂದ ಸ್ವತಂತ್ರಗೊಳಿಸಿ, ತಮಿಳಿನ ಸಂಸ್ಥೆಯಿರುವಂತೆ ಅದನ್ನು ಕನ್ನಡ ನಾಡಿನ ಸರ್ಕಾರದ ವ್ಯಾಪ್ತಿಯಲ್ಲಿ ತಂದು, ವಿದ್ವಾಂಸರೊಡನೆ ಸಮಾಲೋಚಿಸಿ ವಿವಿಧ ಯೋಜನೆಗಳನ್ನು ತ್ವರಿತವಾಗಿ ರೂಪಿಸಿ, ಕೇಂದ್ರದಿಂದ ಹಣ ಸಹಾಯ ಪಡೆದು ಅವುಗಳನ್ನು ಕಾರ್ಯರೂಪಕ್ಕಿಳಿಸುವುದು.
=====
ಷೋಡಶೋಪಚಾರ: ಈ ಸಂಸ್ಕೃತ ಸಮಾಸ ಪದದಲ್ಲಿ ಎರಡು ಭಾಗಗಳಿವೆ: ಷೋಡಶ ಮತ್ತು ಉಪಚಾರ. ದೇವರಿಗೆ ಮಾಡಬೇಕಾದ ಹದಿನಾರು ಬಗೆಯ ಸೇವೆಯನ್ನು ಇದು ಹೇಳುತ್ತದೆ: ವಚನಗಳಿಗಿಂತ ಹೆಚ್ಚು ಪ್ರಾಚೀನವಾದ ಕನ್ನಡ ಕಾವ್ಯಗಳಲ್ಲಿ ಇದರ ಉಲ್ಲೇಖವಿದ್ದಂತಿಲ್ಲ; ಹಿಂದಿನವು ಜೈನ ಕಾವ್ಯಗಳಾದುದರಿಂದಲೂ, ಮೂಲತಃ ಜೈನರಲ್ಲಿ ದೇವರ ಕಲ್ಪನೆಯಾಗಲೀ ಪೂಜೆಯ ಕಲ್ಪನೆಯಾಗಲೀ ಇಲ್ಲದಿದ್ದುದರಿಂದ ೀ ರೀತಿಯಾಗಿರಬಹುದು. ಹೀಗಾಗಿ ಇದು ಈಚಿನ ಪರಿಕಲ್ಪನೆಯಿರಬಹುದು. ಬಸವಣ್ಣನ ವಚನವೊಂದರಲ್ಲಿ "ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು" ಎಂಬ ಮಾತು ದೊರೆಯುತ್ತದೆ. ಹಾಗೆಯೇ "ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ ಅವಗುಣಗಳುಂಟೆ" ಎಂಬ ವಾಕ್ಯ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸೋಮದೇವನ 'ಉದ್ಭಟಕಾವ್ಯ'ದಲ್ಲಿ  "ಷೋಡಶೋಪಚಾರದಿಂದೆ ಪೂಜೆಗೈದು ಶೀತರುಕ್ಚೂಡ ನೀಲಕಂಠದೇವನಂ" ಎಂಬ ವಾಕ್ಯವಿದೆ.  ಆದಯ್ಯನೆಂಬೊಬ್ಬ ವಚನಕಾರನು 'ಷೋಡಶೋಪಚರ್ಯ' ಎಂಬ ರೂಪವನ್ನು ಬಳಸುತ್ತಾನೆ ("ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದ ಇಷ್ಟಲಿಂಗಧಾರಣದಿಂದಪ್ಪುದು ಧಾರಣಯೋಗ"). ಭೀಮಕವಿಯ 'ಬಸವ ಪುರಾಣ'ದಲ್ಲಿ 'ಷೋಡಶೋಚಾರ' ("ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ" ಎಂಬ ಪ್ರಯೋಗದ ಜೊತೆ "ಷೋಡಶೋಪಚರಣೆ' ("ಷೋಡಶೋಪಚರಣೆಯೆಸೆಯೆ ಶಿವರಾತ್ರಿವಿಧಿಯಲಿ") ಎಂಬ ರೂಪವೂ ದೊರೆಯುತ್ತದೆ. ವಾಹನ, ಆಶನ, ಪಾದ್ಯ, ಅರ್ಘ್ಯ, ಸ್ನಾನ, ಉದ್ವರ್ತನ, ವಸ್ತ್ರ, ಉಪವೀತ, ಗಂಧ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ಪ್ರದಕ್ಷಿಣಗಳು 'ಗೌತಮ ಧರ್ಮಸೂತ್ರ'ವು ಹೇಳುವ ಹದಿನಾರು ಬಗೆಯ ಉಪಚಾರಗಳು. 'ಧರ್ಮಸಿಂಧು'ವಿನಲ್ಲಿ ಇದಕ್ಕೆ ಭಿನ್ನವಾದ ವಿವರವಿದೆ. ಮಹಾದೇವಿಯಕ್ಕನ ವಚನವೊಂದರಲ್ಲಿ ಇದರ ಪಟ್ಟಿ ಹೀಗಿದೆ: ಮಜ್ಜನ, ದೇವಾಂಗ, ಪರಿಮಳ, ಅಕ್ಷತೆ, ಪುಷ್ಪ, ಧೂಪ, ಆರತಿ, ಮೃಷ್ಟಾನ್ನ, ಪಾನ, ಹಸ್ತಪ್ರಕ್ಷಾಲನ, ತಾಂಬೂಲ, ಆಸನ, ಸಂಗೀತವಾದ್ಯ, ಭೂಷಣ, ವಾಹನ ಮತ್ತು ಗೃಹ "ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ" ತಾನು ಭೋಗಿಸುವುದಾಗಿ ಹೇಳಿದೆ. ಎಂದರೆ ಇವುಗಳನ್ನೆಲ್ಲ ತಾನು ಅನುಭವಿಸುವುದಕ್ಕೆ ಮುಂಚೆ ಜಂಗಮನಿಗೆ ಅರ್ಪಿಸಬೇಕು ಎಂಬುದು ಭಕ್ತನ ನಿಲವು. ಕನ್ನಡದಲ್ಲಿ ವೀರಶೈವ ಕಾವ್ಯಗಳಲ್ಲಿ ಮಾತ್ರ 'ಷೋಡಶೋಪಚಾರ'ದ ಉಲ್ಲೇಖ ಬಂದಿರುವುದನ್ನು ಗಮನಿಸಿದರೆ ಇದು ವೀರಶೈವಕ್ಕೆ ವಿಶಿಷ್ಟವಾದ ಪರಿಕಲ್ಪನೆಯಿರಬಹುದೇ ಎಂಬ ಅನುಮಾನ ಬರುತ್ತದೆ.
=====
ಸಾಮಾನ್ಯ: ಇದು ಸಮಾನ ಎಂಬುದರಿಂದ ರೂಪಿತವಾದ ವಿಶೇಷಣ. 'ಎಲ್ಲಕ್ಕೂ ಅನ್ವಯಿಸುವ' ಎಂದು ಇದರರ್ಥ. "ಸಾಮಾನ್ಯವಾಚಿಗಳನೀ ತೆರದಿಂದ" ಎಂಬ 'ಅಭಿಧಾನ ವಸ್ತುಕೋಶ'ದ ಮಾತಿನಲ್ಲಿ ಈ ಅರ್ಥವಿದೆ. 'ಸಾಮಾನ್ಯಂ ಸರ್ವಶಾಸ್ತ್ರೇಷು' ಎಂಬುದನ್ನು ದುರ್ಗಸಿಂಹನು 'ಪಂಚತಂತ್ರ'ದಲ್ಲಿ "ಎಲ್ಲಾ ಶಾಸ್ತ್ರಂಗಳಲ್ಲಿ ಸಾಧಾರಣಂ" ಎಂದು ಅನುವಾದಿಸುತ್ತಾನೆ. "ಸಾಮಾನ್ಯಜನಂಗಳನತಿಕ್ರಮಿಸಲೋಸ್ಕರಮಾಗಿ ಅಳಿಪಿಲ್ಲದೆ ಉದ್ಯೋಗಂಗೆಯ್ವ ಮನುಷ್ಯರ ತೊಡೆಯ ಮೇಲೆ ಲಕ್ಷ್ಮೀ ನೆಲಸಿಹಳು" ಎಂಬುದೂ ದುರ್ಗಸಿಂಹನ ಮಾತು. ಸಾಮಾನ್ಯನಿಯಮ, ಸಾಮಾನ್ಯಲಕ್ಷಣ ಮುಂತಾದ ಸಮಾಸಗಳಲ್ಲಿಯೂ ಇದು ಸ್ಫುಟವಾಗುತ್ತದೆ. ವಿಶೇಷವಲ್ಲದ್ದು ಸಾಮಾನ್ಯ. "ಯುಯು ಎಂಬುದು ಅಶ್ವಮೇಧದ ಹಯಮುಂ ಸಾಮಾನ್ಯ ಹಯಮುಮಕ್ಕುಂ" ಎಂಬುದೂ ಅಲ್ಲಿಯದೇ ವಿವರಣೆ. ಸಾಧಾರಣವಾದುದು ಎಂಬರ್ಥವೂ ಈ ಶಬ್ದಕ್ಕಿದೆ ("ಸಾವಭೃತಂ ಸಾಮಾನ್ಯಂ ಕೇವಳಂ" - 'ಅಭಿಧಾನ ವಸ್ತುಕೋಶ'). "ಅಬ್ಜದಳಾಕ್ಷೀ ಪೇಳ ಸಾಮಾನ್ಯಮೇ ಬಗೆಯೆ ಭವತ್ಕೇಶಪಾಶಪ್ರಪಂಚಂ" ಎಂಬ ಮಾತಿನಲ್ಲಿಯೂ ಈ ಅರ್ಥವಿದೆ. 'ಸಾಮಾನ್ಯಮೇ' ಎಂಬುದು ಸಾಮಾನ್ಯವಲ್ಲ ಎಂಬುದನ್ನು ಧ್ವನಿಸುತ್ತದೆ. "ಸಾಮಾನ್ಯನಲ್ಲನಾತಂ ನೀಮಿದನವಧರಿಪುದು" ಎಂಬ ನೇಮಿನಾಥನ 'ಅರ್ಧನೇಮಿಪುರಾಣ'ದ ಮಾತಿನಲ್ಲಿ ಸಾಮಾನ್ಯ ಎಂಬುದಕ್ಕೆ ಸಾಮಾನ್ಯ ವ್ಯಕ್ತಿ ಎಂಬ ಅರ್ಥ ಹೊಮ್ಮುತ್ತದೆ. "ಸುಖಿಜಂಗಮ ಸಾಮಾನ್ಯ ಜಂಗಮ ಉಂಟೆ ಕೂಡಲಸಂಗಮದೇವ" ಎಂಬ ಬಸವಣ್ಣನ ಮಾತಿನಲ್ಲಿಯೂ ಈ ಅರ್ಥವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧಾರಣ ಪ್ರಜೆಗೂ ಹೆಚ್ಚಿನ ಮೌಲ್ಯ ಪ್ರಾಪ್ತವಾದ ಕಾರಣ ಇಂಗ್ಲಿಷ್‍ನಲ್ಲಿ ಸಾಮಾನ್ಯ ಪ್ರಜೆಯನ್ನು 'ಮಿಸ್ಟರ್ ಕಾಮನರ್' ಎಂದು ಕರೆಯುವ ವಾಡಿಕೆ ಬಂತು. ಇದಕ್ಕೆ ಸಂವಾದಿಯಾಗಿ  ಕನ್ನಡದಲ್ಲಿ 'ಶ್ರೀ ಸಾಮಾನ್ಯ' ಎಂದು ಬಳಸಿದವರು ಕುವೆಂಪು. 'ಶ್ರೀ ಸಾಮಾನ್ಯರ ದೀಕ್ಷಾಗೀತೆ' ಎಂಬ ತಮ್ಮ ಕವನದಲ್ಲಿ ಅವರು "ಶ್ರೀಸಾಮಾನ್ಯನೆ ಭಗವತ್ ಮಾನ್ಯಂ ಶ್ರೀ ಸಾಮಾನ್ಯನೆ ಭಗವದ್ ಧನ್ಯಂ ಸಾಮಾನ್ಯತೆ ಭಗವಂತನ ರೀತಿ ಸಾಮಾನ್ಯತೆ ದಿಟ ಭಗವತ್ ಪ್ರೀತಿ" ಎಂದು ಹೇಳಿದರು. ಇಲ್ಲಿ ಕುವೆಂಪು ಸಾಮಾನ್ಯತೆ ಎಂಬ ಶಬ್ದವನ್ನೂ ರೂಪಿಸಿಕೊಂಡಿದ್ದಾರೆ. ಸಾಮಾನ್ಯ ಎಂಬುದರ ವಿರುದ್ಧಾರ್ಥಕವಾಗಿ ಅಸಾಮಾನ್ಯ ಎಂಬ ಪದವೂ ರೂಪಗೊಂಡಿದೆ. ಸಾಧಾರಣವಲ್ಲದ್ದು ಎಂಬುದು ಇದರರ್ಥ. "ಅಂದಾ ಮಹಿಮೆಯುತ್ಸವಮೆಂಬುದು ಅಸಾಮಾನ್ಯಂ ಅದೃಷ್ಟಂ ಅಪೂರ್ವಂ ಅಶ್ರುತಮಪೂರ್ವಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
=====
ಸೂತಕ: ಇದೊಂದು ಸಂಸ್ಕೃತ ಶಬ್ದ. ಇದರ ಮೂಲಾರ್ಥ ಹುಟ್ಟು ಅಥವಾ ಜನನ ಎಂದು. "ಮನೆಗೆ ತಂದು ತನ್ನ ನಲ್ಲಳ ಸೋಂಕಿನೊಳ್ ಕೂಸನಿಟ್ಟೊಡೆ ರಾಗಿದಿಂ ಸುತನ ಸೂತಕಮಂ ಕೊಂಡಾಡೆ" ಎಂಬ ಮಾತು 'ಪಂಪಭಾರತ'ದದಲ್ಲಿ ಬರುತ್ತದೆ. ಜನನವೀಯುವವಳು ಸೂತಿಕೆ ಅಥವಾ ಬಾಣಂತಿ. ಸೂತಿಕಾಗೃಹ ಎಂದರೆ ಹೆರಿಗೆಮನೆ; 'ಅಮರಕೋಶ' ಇದನ್ನು ಹೆಸರಿಸುತ್ತದೆ. ಸೂತಿಕಾಗಾರ ಎಂಬ ಶಬ್ದವೂ ಇದೆ. "ಮಂಗಳಾಸ್ಪದಮಾಗಿರ್ದ ಸೂತಿಕಾಗಾರ ದ್ವಾರಕ್ಕೆ ಬಂದು" 'ಕುಸುಮಾವಳಿ ಕಾವ್ಯಂ'; ಸೂತಿಕಾಸದನ ("ಅಂತು ಸೂತಿಕಾಸದನಮಂ ಪೊಕ್ಕು ದೇವಕಿಯ ಮುಂದೆ ಪಟ್ಟಿರ್ದ ಶಿಶುವಿನ" 'ಜಗನ್ನಾಥವಿಜಯ'); ಸೂತಿಕಾಸದ್ಮ ("ಖಚರೇಂದ್ರನಿಂತು ಪುಗುತಂದಂ ಸೂತಿಕಾಸದ್ಮಮಂ" 'ಶಾಂತೀಶ್ವರಪುರಾಣ') ಎಂದರೂ ಇದೇ. ಸೂತೀಜನ ಎಂದರೆ ಸೂಲಗಿತ್ತಿಯರು ("ಸೂತೀಜನ ಸಖಿಜನಮೆನಿತನಿತುಮಂ ಅವನಿಪತಿ ನಿಯೋಜಿಸಿ ತಳರ್ದಂ" 'ಪುಷ್ಪದಂತ ಪುರಾಣ').
ಸೂತಕ ಎಂಬುದು ಹುಟ್ಟು, ಗರ್ಭಪಾತ ಮತ್ತು ಸಾವುಗಳ ಕಾಲದ ಮೈಲಿಗೆಯನ್ನೂ ಸೂಚಿಸುತ್ತದೆ. ಈ ಕಾಲದಲ್ಲಿ ತಂದೆತಾಯಿಗಳಿಬ್ಬರೂ ಮೈಲಿಗೆ (ಅಶೌಚ) ಆಚರಿಸಬೇಕೆಂದು ಗೌತಮ, ವಾಸಿಷ್ಠ ಮುಂತಾದ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ. ತಮ್ಮ ಕಾಲದಲ್ಲಿ ವೈದಿಕ ಸಂಪ್ರದಾಯದಲ್ಲಿ ಆಚರಿಸುತ್ತಿದ್ದ ಐದು ಬಗೆಯ ಮೈಲಿಗೆಯ ಆಚರಣೆಯನ್ನು ವಚನಗಳು 'ಪಂಚಸೂತಕಕ' ಎಂಬ ಮಾತಿನಿಂದ ಸೂಚಿಸುತ್ತವೆ. ಅವುಗಳೆಂದರೆ ಜಾತಿ ಸೂತಕ (ಜಾತಿಯ ಕಾರಣದಿಂದ ಮೈಲಿಗೆ ಆಚರಣೆ), ಜನನ ಸೂತಕ (ಮಗು ಹುಟ್ಟಿದಾಗಿನ ಮೈಲಿಗೆ) ಪ್ರೇತಸೂತಕ (ಯಾರಾದರೂ ಸತ್ತರೆ), ಉಚ್ಚಿಷ್ಟ ಸೂತಕ (ಎಂಜಲು) ಮತ್ತು ರಜಸ್ಸೂತಕ (ಹೆಣ್ಣು ಬಿಹಿಷ್ಠೆಯಾದಾಗ). ಇವುಗಳ ಆಚರಣೆಯನ್ನು ವಚನಕಾರರು ಟೀಕಿಸಿದರು. ಈ ಐದಲ್ಲದೆ ಚೆನ್ನಬಸವಣ್ಣ 'ಭ್ರಾಂತು ಸೂತಕ' 'ವರ್ಣ ಸೂತಕ'ಗಳನ್ನೂ ಸೇರಿಸಿ "ಇವರೆಂತು ಭಕ್ತರಹರು?" ಎಂದು ಪ್ರಶ್ನಿಸುತ್ತಾನೆ. ಪಂಚಸೂತಕಗಳನ್ನು ಬಿಟ್ಟ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ ಎಂಬುದು ಅವನ ಹೇಳಿಕೆ. ಬೇರೊಂದೆಡೆ ಆರು ಸ್ಥಲಗಳಿಗೆ ಸಂಬಂಧಿಸಿದಂತೆ ಕುಲ, ಛಲ, ತನು, ಮನ, ನೆನಹು, ಭಾವಸೂತಕಗಳನ್ನು ಹೆಸರಿಸುತ್ತಾನೆ. ಬೇರೆ ವಚನಕಾರರು ತ್ಯಜಿಸಬೇಕಾದ ಇನ್ನೂ ಅನೇಕವನ್ನು ಸೂತಕ ಎಂದೇ ಕರೆಯುತ್ತಾರೆ. "ಕಿವಿಯ ಸೂತಕ ಹೋಯಿತ್ತು ಸದ್ಗುರುವಿನ ವಚನದಿಂದ" ಮುಂತಾಗಿ ಬಸವಣ್ಣ ಹೇಳುತ್ತಾನೆ. ಲಿಂಗವನ್ನು "ಧರಿಸಿ ಪರಿಶುದ್ಧವಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ" ಎಂಬುದೂ ಚೆನ್ನಬಸವಣ್ಣನ ಮಾತು.
ಸೂತಕ ಶಬ್ದಕ್ಕೆ ಪಾದರಸ ("ರಸ ಪಾರದ ಸೂತಕ" - 'ಅಭಿಧಾನ ವಸ್ತುಕೋಶ') ಎಂಬರ್ಥವೂ ಇದೆ.
=====
ಸುಂಕ: ವ್ಯಾಪಾರದಲ್ಲಿ ಸರಕುಗಳ ಮೇಲೆ ಹಾಕುವ ತೆರಿಗೆಯೇ ಸುಂಕ. ಈ ಶಬ್ದವು ಸಂಸ್ಕೃತದ 'ಶುಲ್ಕ' ಎಂಬುದರ ತದ್ಭವ. ಪ್ರಾಕೃತದಲ್ಲಿಯೂ ಇದು ಸುಂಕ ಎಂದಾಗಿದೆ; ತೆಲುಗು, ತುಳುಗಳಲ್ಲಿಯೂ ಇದೇ ರೂಪವಿದೆ. ತಮಿಳಿನಲ್ಲಿ ಚುಙ್ಕ ಚುಕ್ಕ ಎಂದೂ, ಮಲಯಾಳಂನಲ್ಲಿ ಚುಂಗ ಎಂದೂ ಆಗುತ್ತದೆ.  ಈಗ ಸರಕಾರವು ಮಾಡುವ ರೀತಿಯಲ್ಲಿ ಹಿಂದೆ ರಾಜನೂ ಸುಂಕ ವಿಧಿಸುತ್ತಿದ್ದ. ಇದು ಪ್ರಾಚೀನ ಪದ್ಧತಿ. ಖವರ್ಷಕ್ಕೆ ಮರದಲೊಂದಡಕೆ ಎಲೆಯ ಸುಂಕಖ ಎಂಬ ಮಾತು ಹನ್ನೊಂದನೇ ಶತಮಾನದ ಶಾಸನದಲ್ಲಿದೆ.
ಸುಂಕ ವಸೂಲಿಗೆಂದು ನೌಕರರಿರುತ್ತಿದ್ದರು, ನಿರ್ದಿಷ್ಟ ಜಾಗವೂ ಇರುತ್ತಿತ್ತು. "ಸುಂಕವೆರ್ಗಡೆ ಮಲ್ಲಿಯಣ ದಂಡನಾಯಕ"ನ ಉಲ್ಲೇಖ ಹತ್ತನೆಯ ಶತಮಾನದ ಶಾಸನದಲ್ಲಿದೆ. ಇದು ಮುಂದೆ ನಡಗನ್ನಡದಲ್ಲಿ 'ಸುಂಕದ ಹೆಗ್ಗಡೆ' ಎಂದಾಗಿದೆ "ಸುಂಕದ ಹೆಗ್ಗಡೆ ಬೊಪ್ಪಡೆ ಒಳಗಾಗಿ" ಎಂಬ ಪ್ರಯೋಗವು ಹನ್ನೆರಡನೆಯ ಶತಮಾನದ ಶಾಸನದಲ್ಲಿದೆ. ಹೆಸರೇ ಸೂಚಿಸುವಂತೆ ಈ ಹೆಗ್ಗಡೆ ಪ್ರಾಯಶಃ ಹಿರಿಯ ಅಧಿಕಾರಿ. ಆದರೆ ಸಾಮಾನ್ಯ ನೌಕರನನ್ನು 'ಚಾವುಂಡರಾಯಪುರಾಣ'ವು 'ಸುಂಕಿ' ಎನ್ನುತ್ತದೆ ("ಮೊಕ್ಕಳಂ ಒಡಮೆವಡೆದು ಪೊಳಲಂ ಪುಗುವಲ್ಲಿ ಸುಂಕಿಗಳ್ಗಳ್ಕಿ ಮಗುಳ್ದು ಬಂದು"). 'ಸುಂಕಿಗ' ಎಂಬುದು ಇದರ ಇನ್ನೊಂದು ರೂಪ. ಊರಲ್ಲಿನ ಅಂಗಡಿ ಮುಂತಾದವುಗಳಿಂದ ಸುಂಕ ವಸೂಲು ಮಾಡುತ್ತಿದ್ದವನೇ 'ಹೊಳಲ ಸುಂಕಿಗ'. ಈ ಮಾತನ್ನು ಮಹಾದೇವಿಯಕ್ಕ ಬಳಸುತ್ತಾಳೆ. ಸುಂಕದ ಬಂಕಣ್ಣ ಎಂಬೊಬ್ಬ ವಚನಕಾರ ತನ್ನೊಂದು ವಚನದಲ್ಲಿ 'ಹೊರೆಸುಂಕ' 'ಪಸರಸುಂಕ'ಗಳನ್ನು (ಪಸರ=ಅಂಗಡಿ) ಹೆಸರಿಸುತ್ತಾನೆ. ಸುಂಕ ವಸೂಲಿ ಮಾಡುವುದೇ 'ಸುಂಕಂಗೊಳ್' ("ಒದ್ದಾಯನಮಹಾರಾಜನ ಬಿಂಕಮಂ ಸುಂಕಂಗೊಂಡು"- ನಯಸೇನನ 'ಧರ್ಮಾಮೃತ').
ಸುಂಕ ವಸೂಲು ಮಾಡುವ ನಿಗದಿತ ಜಾಗ ಅಥವಾ ಉಕ್ಕಡವೇ 'ಸುಂಕದ ಕಟ್ಟೆ'. ಈ ಪದವು ಈಚಿನದೆಂದು ತೋರುತ್ತದೆ. ಹಿಂದೆ ಇಂತಹ ಜಾಗವನ್ನು 'ಡಂಗ' ಎಂದು ಕರೆಯುತ್ತಿದ್ದರು. ಇದನ್ನು ಹತ್ತೊಂಬತ್ತನೆ ಶತಮಾನದ ಶಾಸನವೊಂದು 'ಸುಂಕಠಾಣೆ' ಎನ್ನುತ್ತದೆ. ಸುಂಕ ಕೊಟ್ಟವರಿಗೆ ರಸೀದಿಯನ್ನು ಕೊಡುತ್ತಿದ್ದರು. ಇದನ್ನು ಕೋಲಶಾಂತಯ್ಯ ಎಂಬ ವಚನಕಾರನು 'ಒಪ್ಪದ ಚೀಟು' (ಒಪ್ಪ=ಸಹಿ) ಎನ್ನುತ್ತಾನೆ. ಸುಂಕವನ್ನು ತಪ್ಪಿಸಿಕೊಳ್ಳಲು ಕೆಲವರು ರಾತ್ರಿ ಕಾಲದಲ್ಲಿ ಪಯಣಿಸುತ್ತಿದ್ದರು ("ಇರುಳೆಲ್ಲ ನಡೆದನಾ ಸುಂಕಕಂಜಿ" - ಜೇಡರ ದಾಸಿಮಯ್ಯನ ವಚನ). "ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು .. .. ಕಳ್ಳನಾಣ್ಯವ ಸಲ್ಲಲೀಯರಯ್ಯಾ" ಎಂಬ ಬಸವಣ್ಣನ ಮಾತಿನಲ್ಲಿ ಸುಂಕ ಕೊಡುವಾಗ ಕಳ್ಳನಾಣ್ಯದ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಸೂಚನೆಯಿದೆ.
=====
ಸೋಗೆ: ಇದು ತೋಕೆ ಎಂಬುದರ ವ್ಯತ್ಯಸ್ತ ರೂಪ. ದ್ರಾವಿಡ ಪದವಾದ ಇದು ತಮಿಳಿನಲ್ಲಿ 'ತೋಕೈ' ಎಂದೂ, ಮಲಯಾಳಂ ಹಾಗೂ ತೆಲುಗುಗಳಲ್ಲಿ ತೋಕ ಎಂದೂ, ತುಳುವಿನಲ್ಲಿ ಸೋಗೆ ಎಂದೂ ಆಗುತ್ತದೆ. ತೋಕೆ ಎಂದರೆ ಬಾಲ ಎಂಬರ್ಥವಿದೆ. ತೋಕೆಗೋಧಿ ಎಂಬುದು ನೀಳವಾದ ಗೋಧಿಯ ಒಂದು ಪ್ರಭೇದ. ಸೋಗೆ ಎಂದರೆ ನವಿಲಿನ ನೀಳವಾದ ಪುಚ್ಛ. ("ಸೋಗೆಯಂ ಪರಪಿ .. .. ತಾಂಡವಮೆಸೆದುದು" - 'ಆದಿಪುರಾಣ'). ನವಿಲುಗರಿಯೇ 'ಸೋಗೆ' ("ಮೊಗಮಂ ತಾವರೆ ಕಣ್ಣಂ ಉತ್ಪಳದಳಂ ಧಮ್ಮಿಲ್ಲಮಂ ಸೋಗೆ .. .. ಪೋಲ್ತುವು" 'ಆದಿಪುರಾಣ'). ಸೋಗೆಯನ್ನು ಹರಹಿ ನರ್ತಿಸುವ ಗಂಡುನವಿಲನ್ನೂ 'ಸೋಗೆ' ಎಂಬ ಪದದಿಂದ ನಿರ್ದೇಶಿಸುತ್ತಾರೆ: "ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ಎಂಬುದು 'ಪಂಪಭಾರತ'ದ ಮಾತು. ಆದರೆ ಅದನ್ನು 'ಸೋಗೆನವಿಲು' ಎಂದೂ ಕರೆಯುವುದುಂಟು ("ಸೋಗೆನವಿಲ್ ಒಯ್ಯನೆ ಕರ್ಕಡೆಗಾಸಿಯಾಗಿ ಪಾರುವುದುಂ" - 'ಪಂಪಭಾರತ'). ಹೆಣ್ಣು ನವಿಲನ್ನು 'ಸೋಗೆವೆಣ್' ಎಂದು ಎರಡನೆಯ ಗುಣವರ್ಮನ 'ಪುಷ್ಪದಂತ ಪುರಾಣ'ದಲ್ಲಿ ಕರೆದಿದೆ ("ಮಿಂಚಿನಂಚೆಯಂ ಪಳಂಚಲೆಯದಂಚೆಯಿಲ್ಲ ಕುಮಾರರ ಮಯೂರಮಂ ಕೂರಿಸದ ಸೋಗೆವೆಣ್ಣಿಲ್ಲ").
ತೆಂಗು, ತಾಳೆ, ಅಡಿಕೆ ಮುಂತಾದ ಮರಗಳ ಗರಿಯನ್ನೂ 'ಸೋಗೆ' ಎನ್ನುತ್ತಾರೆ. "ಎಸೆವ ಸೋಗೆಗಳ ಸೀಗುರಿಗಳ ಮಿಗೆ ಮೆಱೆವ ತೆಂಗುಗಳ ಸತ್ತಿಗೆಗಳಿಂ" ಎಂಬುದು ಪದ್ಮಣಾಂಕನ 'ಪದ್ಮರಾಜ ಪುರಾಣ'ದ ಮಾತು. ಅಂತೆಯೇ ಕಬ್ಬಿನ ನೀಳವಾದ ಗರಿಗಳೂ ಸೋಗೆಗಳೇ ("ಬೆಳೆದ ರಸದಾಳಿಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ ಪರ್ವುತಿಹುದು" 'ಜೈಮಿನಿ ಭಾರತ'). ನೀಳವಾದ ಜೊಂಪೆಯನ್ನೂ ಈ ಹೆಸರಿನಿಂದಲೇ ಸೂಚಿಸುವ ವಾಡಿಕೆಯಿದೆ ("ಕರುಳ ಸೋಗೆಯುಂ ಕವಿದವವನಿಗಾ ಯತಿಪತಿಯಾ" - ಆಚಣ್ಣನ 'ವರ್ಧಮಾನ ಪುರಾಣ'). ಉದ್ದವಾದ ತುರುಬು 'ಸೋಗೆದುರುಬು' ("ಸೋಗೆದುರುಭಿನ ಸರಸವಚನದ" 'ತೊರವೆ ರಾಮಾಯಣ'). ಸೀರೆಯ ನೀಳವಾದ ಸೆರಗೂ ಸೋಗೆಯೇ ("ಅಚ್ಚರಸೆಯ .. .. ಎಳಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ('ಆದಿಪುರಾಣ'). ಇದನ್ನು ಜನ್ನ 'ಸೋಗೆನಿ' ಎನ್ನುತ್ತಾನೆ ("ಸೆಳೆದು ಮರಳ್ಚಿ ಸೋಗೆನಿಯಂ .. .. ಮಳಯಸಮೀರಣಂ ಸರಸವಾಡಿದಂ" 'ಅನಂತನಾಥಪುರಾಣ'. ಇದಕ್ಕೆ ಮಡಿಲು ಎಂಬರ್ಥವೂ ಇದೆ ("ಶುಕ್ತಿಕೆಯ ಸೋಗೆಯೊಳ್ ನವಮುಕ್ತಾಫಲದಂತೆ"  - 'ಅನಂತನಾಥ ಪುರಾಣ').
=====
ಸ್ಥಳ: ಇದು ಸಂಸ್ಕೃತದ 'ಸ್ಥಲ' ಎಂಬುದರ ಕನ್ನಡ ರೂಪ; ಸಂಸ್ಕೃತದ ಪದಗಳಲ್ಲಿನ ಲಕಾರಕ್ಕೆ ಬದಲಾಗಿ ಅನೇಕ ವೇಳೆ ಕನ್ನಡದಲ್ಲಿ ಳಕಾರ ಬರುತ್ತದೆ (ಇದನ್ನು ಕ್ಷಳ ಎನ್ನುತ್ತಾರೆ). ಈ ಶಬ್ದದ ಮೂಲಾರ್ಥ ಭೂಮಿ, ಪ್ರದೇಶ ಎಂದು. ದುರ್ಗಸಿಂಹನು ತನ್ನ 'ಕರ್ಣಾಟಕ ಪಂಚತಂತ್ರ'ದಲ್ಲಿ ಮಹಾಸ್ಥಲವನ್ನು ಹೆಸರಿಸುತ್ತಾನೆ. "ಸರೋವರಪರಿವೃತಮಪ್ಪ ಭೂಪ್ರದೇಶಂ ಮಹಾಸ್ಥಲಮೆಂಬುದಕ್ಕುಂ" ಎಂಬುದು ಅವನ ವಿವರಣೆ; ಇದು ಜಲದುರ್ಗದ ಒಂದು ಪ್ರಭೇದ. ನೆಲದಾವರೆಯನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ವು 'ಸ್ಥಲಕಮಳ' ಎಂದು ಕರೆಯುತ್ತದೆ ("ಜಳಕಮಳಂ ಮೇಣ್ ಸ್ಥಲಕಮಳಮಲ್ತು") ಇದೇ ಕಮಲಭವನ 'ಶಾಂತೀಶ್ವರಪುರಾಣ'ದಲ್ಲಿನ 'ಸ್ಥಲನಳಿನಿ' ("ಸ್ಥಳನಳಿನೀಮಯಂ ಅದು ಆ ವಿಷಯದಿಳೆಯೆಲ್ಲಂ"). ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ 'ಸ್ಥಲೀಕ' ಎಂದರೆ ನೆಲಗಟ್ಟು ("ನೀಲಬದ್ಧ ಸ್ಥಲೀಕಂ ಮರಕತಜಗತೀ ಮಂಡಲಂ"). ನೆಲದ ಮೇಲೆ ವ್ಯಾಪಾರಕ್ಕೆಂದು ಮಾಡುವ ಪ್ರಯಾಣ 'ಸ್ಥಳಯಾತ್ರೆ' ("ಸ್ಥಳಯಾತ್ರೆಗೆ ಪೋಗಿ ಸಂಖ್ಯಾತೀತ ಸಾರಧನಮಂ ಪಡೆದು ಬರ್ಪೆಡೆಯೊಳ್" - ಪೊನ್ನನ 'ಶಾಂತಿಪುರಾಣ').
ವೀರಶೈವದಲ್ಲಿ 'ಸ್ಥಲ' ಎಂಬುದು ಸಾಧಕಜೀವವು ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆಯ ಒಂದು ಹಂತ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು. ಇವುಗಳನ್ನು ಪುನಃ ಒಳವಿಂಗಡಣೆ ಮಾಡಿ ನೂರೊಂದುಸ್ಥಲ ಅಥವಾ ಏಕೋತ್ತರಶತಸ್ಥಲಗಳೆಂದೂ ಕರೆಯಲಾಗುತ್ತದೆ. ಹರಿಹರನು ತನ್ನ ದೀರ್ಘ ರಗಳೆಗಳ ವಿಭಾಗಗಳನ್ನು ಸ್ಥಲ ಎಂದೇ ಕರೆಯುತ್ತಾನೆ. ಪ್ರಾಯಶಃ ತನ್ನ ರಗಳೆಗಳ ನಾಯಕರು ಸಾಧಕರು, ಅವರ ಸಾಧನೆಯ ವಿವಿಧ ಘಟ್ಟಗಳನ್ನೇ ತನ್ನ ರಗಳೆ ವರ್ಣಿಸುವುದು ಎಂಬುದರಿಂದಾಗಿ ಅವನು ಈ ರೀತಿ ಕರೆದಿರಬಹುದು.
ಸ್ಥಳ ಎಂದರೆ ಈಗ ಜಾಗ (ಸೀಟ್) ಎಂಬರ್ಥವೂ ಬಂದಿದೆ; ರೈಲುಬಸ್ಸುಗಳಲ್ಲಿ 'ಸ್ಥಳ ಕಾದಿರಿಸುವ' ಪದ್ಧತಿಯಿದೆ. ಸ್ಥಳ ಊರನ್ನೂ ಸೂಚಿಸುತ್ತದೆ: "ನಿಮ್ಮ ಸ್ಥಳ ಯಾವುದು?"  ಎಂಬುದು ಸಾಮಾನ್ಯ ಪ್ರಶ್ನೆ. 'ಪರಸ್ಥಳದವರು' ಎಂಬಲ್ಲಿಯೂ ಇದೇ ಅರ್ಥವಿದೆ. ನಿರ್ದಿಷ್ಟ ಪ್ರದೇಶವಾಸಿಯನ್ನು 'ಸ್ಥಳವಂದಿಗ' 'ಸ್ಥಳೀಯ' ಎಂಬ ಶಬ್ದಗಳಿಂದ ಸೂಚಿಸುತ್ತೇವೆ. ಕಟ್ಟಡವನ್ನೋ ಮತ್ತೇನನ್ನೋ ನಿರ್ಮಿಸುವ ಮುನ್ನ 'ಸ್ಥಳ ಪರಿಶೀಲನೆ' ಮಾಡುವುದು ರೂಢಿ.
=====
ಹಗರಣ: ಇದು ಸಂಸ್ಕೃತದ ಪ್ರಕರಣ ಎಂಬ ಶಬ್ದದ ಕನ್ನಡ ರೂಪ. ಪ್ರಕರಣ>ಪಗರಣ>ಹಗರಣ ಎಂಬುದಾಗಿ ಬದಲಾಗಿದೆ. ಹಗರಣ ಮತ್ತು ಪ್ರಕರಣ ಈ ಎರಡೂ ಪದಗಳು ಕನ್ನಡದಲ್ಲೀಗ ಬಳಕೆಯಲ್ಲಿವೆ, ಆದರೆ ಭಿನ್ನ ಅರ್ಥಗಳಲ್ಲಿ. ಪಗರಣ ಎಂಬುದು ಹಳಗನ್ನಡದಲ್ಲಿ ಮಾತ್ರ ದೊರೆಯುತ್ತದೆ. ಪ್ರಕರಣ ಎಂಬುದು ಮೂಲಕತಃ ಹತ್ತು ರೂಪಕಗಳಲ್ಲಿನ ಒಂದು ಪ್ರಭೇದ; ಕಲ್ಪಿತ ವಸ್ತು, ಧೀರಪ್ರಶಾಂತ ಎಂಬ ಬಗೆಯ ನಾಯಕ, ಶೃಂಗಾರರಸಪ್ರಧಾನವಾದ ನಗೆನಾಟಕ ಎಂಬರ್ಥದಲ್ಲಿ ಕನ್ನಡ ಕಾವ್ಯಗಳಲ್ಲಿ ಈ ಶಬ್ದ ಪ್ರಯೋಗಗೊಂಡಿದೆ. ಈ ಅರ್ಥದಲ್ಲಿ 'ಕವಿರಾಜಮಾರ್ಗ'ದಲಿಯ್ಲೇ ಪಗರಣ ಎಂಬ ಶಬ್ದ ಪ್ರಯೋಗವಾಗಿದೆ ("ಪಗರಣದೊಳ್ ಉೞಿದ ಮೂಱುಂ ನಗಿಸುಗುಮಪ್ಪುದಱಿಂ ಅದೋಷಂ"). ವೀರಶ್ರೀ ಎಂಬ ವಿಷಾದಭರಿತಳನ್ನು ವಿಚಿತ್ರ ವೇಷದಿಂದ ಒಬ್ಬ ನಗಿಸುತ್ತಾನೆ: ಆಗ "ಬಾದುಬ್ಬೆಯ ಪರ್ವಮುಂ ಪಗರಣದಾಟಮುಂ ಆದುವು" ಎಂದು 'ವಡ್ಡಾರಾಧನೆ'ಯ 'ಕಾರ್ತಿಕಋಷಿಯ ಕತೆ'ಯಲ್ಲಿ ಹೇಳಿದೆ. ಇದು ಏನನ್ನು ಸೂಚಿಸುವುದೋ ಹೇಳುವುದು ಕಷ್ಟ; ಆದರೆ ಪಗರಣ ಎಂಬುದು ನಗಿಸುವಂಥದು ಎಂಬ ಅರ್ಥ ಸ್ಪಷ್ಟವಾಗಿದೆ. 'ಶಬ್ದಮಣಿದರ್ಪಣ'ದಲ್ಲಿ ನಾಳ್ಪಗರಣ ಮತ್ತು ರಕ್ಕಸವಗರಣ ಎಂಬ ಪ್ರಭೇದಗಳನ್ನು ಹೇಳಿದೆ. ಹೀಗೆ ವೇಷ ಹಾಕುವವನೇ 'ಪಗರಣಿಗ'; ಈ ಪ್ರಯೋಗವೂ ಅಲ್ಲಿಯೇ ಇದೆ. 'ಪಗರಣದರಸ' ಎಂಬ ಪ್ರಯೋಗವು ಪಂಪನ 'ಆದಿಪುರಾಣ'ದಲ್ಲಿ ವೇಷಧಾರಿ ಎಂಬ ಅರ್ಥದಲ್ಲಿ ಬಂದಿದೆ ("ಬೆಸೆವವರ್ ಅರಸದೆಂತೊ ಪಗರಣದರಸಂ"). ಹಾಗೆಯೇ ಪಗರಣ ಎಂಬುದು ಕೃತಕ, ಕೃತ್ರಿಮ ಎಂಬರ್ಥದಲ್ಲಿಯೂ ಬಳಕೆಯಲ್ಲಿತ್ತು. 'ಧರ್ಮಾಮೃತ'ದಲ್ಲಿ 'ಪಗರಣದಾನೆ' ಎಂಬ ಪ್ರಯೋಗವಿದೆ.
ಈಗ ಪ್ರಕರಣ ಎಂಬ ಶಬ್ದವು ಪ್ರಸಂಗ ಅಥವಾ ಘಟನೆ ಎಂಬ ಸರಳ ಅರ್ಥದಲ್ಲಿ ಬಳಕೆಯಲ್ಲಿದ್ದರೂ, ಹಗರಣ ಎಂಬುದು ಮಾತ್ರ ಮೋಸ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಅಕ್ಕಮಹಾದೇವಿಯು 'ನಗೆಹಗರಣ' (ಪ್ರಾಯಶಃ ನಗೆಪಾಟಲು)ದ ಬಗ್ಗೆ ಪ್ರಸ್ತಾಪಿಸುತ್ತಾಳೆ. ಈ ಅರ್ಥದಲ್ಲಿ ಈ ಶಬ್ದವನ್ನು ಪುರಂದರದಾಸರೂ ಬಳಸುತ್ತಾರೆ (ನಗೆಯು ಬರುತಿದೆ .. .. ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು). ಈಗಂತೂ ಈ ಶಬ್ದ ಇಂಗ್ಲಿಷ್‍ನ  scam ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
=====
ಹಗಲು: ಇದರ ಮೂಲರೂಪ 'ಪಗಲ್'. ತಮಿಳು, ಮಲಯಾಳಂಗಳಲ್ಲಿ ಇದು 'ಪಕಲ್', ತೆಲುಗಿನಲ್ಲಿ 'ಪಗಲು' 'ಪವಲು' ತುಳುವಿನಲ್ಲಿ 'ಪಗೆಲ್' ಎಂದಾಗುತ್ತದೆ. ಇದರ ಅರ್ಥ ದಿವಸ ಎಂದು ("ದಿವಸಂ ದಿನಂ .. .. ಪಗಲ್" - ನಾಗವರ್ಮನ 'ಅಭಿಧಾನ ವಸ್ತುಕೋಶ'). ಸೂರ್ಯನನ್ನು ಕೆಲವು ಕಾವ್ಯಗಳು 'ಪಗಲಾಣ್ಮ' ಎನ್ನುತ್ತವೆ ("ಪಗಲಾಣ್ಮನ ಮೆಯ್ ಬಿಸುಪೇ ಮಾಗಿ ಚೆಚ್ಚರದೊಳೆ ಪಾ" - ಆಂಡಯ್ಯನ 'ಕಬ್ಬಿಗರ ಕಾವ'). ಸೂರ್ಯನನ್ನು ಸೋಮದೇವನ 'ಉದ್ಭಟಕಾವ್ಯವು' 'ಪಗಲೆಱೆಯ' ಎನ್ನುತ್ತದೆ ("ಪಗಲೆರಙೆಯನುದಯಮಂ ಬಯಸಿ ಕಡು ಪೆರ್ಚುತುಂ"). ಉಲ್ಕೆಯನ್ನು ಕಾವ್ಯಗಳು ಪಗಲುಳ್ಕ ಎನ್ನುತ್ತವೆ ("ಮಿಱುಗಿದುವು ಪಗಲುಳ್ಕಂಗಳ್ ದೆಸೆಯೊಳ್" - ಅಗ್ಗಳನ 'ಚಂದ್ರಪ್ರಭ ಪುರಾಣ'). ಇರುಳುಪಗಲು ನಿರಂತರೆಯನ್ನು ಸೂಚಿಸುವ ಸಮಾಸಪದ ("ನೆನೆದಿರುಳುಂ ಪಗಲುಂ ನಿನ್ನನೆ" - 'ಕವಿರಾಜಮಾರ್ಗ'). ನಾಗಚಂದ್ರನ 'ಪಂಪರಾಮಾಯಣ'ವು ದಿನದ ಬೆಳಕನ್ನು 'ಪಗಲ ಸಿರಿ' ಎಂದು ವರ್ಣಿಸುತ್ತದೆ ("ಪಗಲಸಿರಿಗೆ ಕಣ್ದೆಱವಿ ಮಾಡೆ").
ನಡುಗನ್ನಡ-ಹೊಸಗನ್ನಡಗಳಲ್ಲಿ 'ಪಗಲು' 'ಹಗಲು' ಎಂದಾಗುತ್ತದೆ. ದುರ್ಗಸಿಂಹನ 'ಪಂಚತಂತ್ರ'ದಲ್ಲಿಯೇ ಈ ರೂಪವಿದೆ ("ಹಗಲಿರುಳು, ಉದಯಬೈಗುಗಳು"). ಚೆನ್ನಬಸವಣ್ಣ ಹಗಲನ್ನು ವಾರ ಎನ್ನುತ್ತಾನೆ: "ಹಗಲೊಂದು ವಾರ ಇರುಳೊಂದು ವಾರ, ಭಕ್ತನೊದು ಕುಲ ಭವಿಯೊಂದು ಕುಲ". "ನಿಗಿನಿಗಿ ಮುಗಿಲು ನಿಗಿನಿಗಿ ಹಗಲು ಕೆಂಡವ ಕಾರುವದು" ಎಂಬುದು ಬೇಂದ್ರೆಯವರ ಸಾಲು. ಸೂರ್ಯನನ್ನು ಗೋವಿಂದಪೈ ತಮ್ಮ 'ಗೊಲ್ಗೊಥಾ'ದಲ್ಲಿ 'ಹಗಲಿನ ದೀಪ' ಎನ್ನುತ್ತಾರೆ ("ಹಗಲಿನ ದೀಪವಾರಿತೇನೆಂದು ನೆರೆದವರೆಲ್ಲರೆದೆ ನಡುಗೆ").
'ಹಗಲುಗನಸು' ಎಚ್ಚರಸ್ಥಿತಿಯಲ್ಲಿ ಮಾಡಿಕೊಳ್ಳುವ ರಮ್ಯಕಲ್ಪನೆ. 'ಹಗಲುಗನಸುಗಳು' ಎಂಬುದು ಎ.ಎನ್. ಮೂರ್ತಿರಾಯರ ಸುಂದರವಾದ ಲಲಿತಪ್ರಬಂಧ. ಈ ಶಬ್ದವನ್ನು ಭ್ರಮೆ, ಸುಳ್ಳು, ವ್ಯರ್ಥಕಲ್ಪನೆ ಎಂಬರ್ಥದಲ್ಲಿಯೂ ಬಳಸುತ್ತೇವೆ. 'ಹಗಲುವೇಷದವರು' ಎಂಬ ಒಂದು ಪಂಗಡವು ವೇಷ ಹಾಕಿ ಜೀವನ ನಡೆಸುವವರು. ಎಲ್ಲರಿಗೂ ಗೊತ್ತಾಗುವ ಹಾಗೆಯೇ ಮಾಡುವ ಮೋಸವನ್ನು 'ಹಗಲು ದರೋಡೆ' ಎನ್ನುತ್ತಾರೆ.
=====
ಹಣತೆ: ಪ್ರಾಯಶಃ ಇದು ಸಂಸ್ಕೃತದ 'ಪ್ರಣಿತ' ಎಂಬ ಶಬ್ದದ ತದ್ಭವ.; 'ಪ್ರಣೀತಾ'ದ ತದ್ಭವ ಎಂದೂ ಕೆಲವರು ಹೇಳುತ್ತಾರೆ.  "ಪ್ರಣಿತಃ ಸಂಸ್ಕೃತೋನಲಃ" (ಮಂತ್ರದಿಂದ ಸಂಸ್ಕರಿಸಲ್ಪಟ್ಟ ಅಗ್ನಿ) ಎಂದು 'ಅಮರಕೋಶ'ವು ಅರ್ಥ ನೀಡುತ್ತದೆ. ಕನ್ನಡದಲ್ಲಿ ಇದು ಪಣತಿ, ಪಣಿತೆ, ಪ್ರಣತಿ, ಪ್ರಣತೆ, ಹಣತೆ ಮುಂತಾದ ಹಲವು ರೂಪಗಳನ್ನು ತಾಳುತ್ತದೆ; ಮಣ್ಣಿನ ಅಥವಾ ಲೋಹದ ಸೊಡಲು ಎಂಬುದು ಇದರ ಅರ್ಥ. ಈ ಶಬ್ದ ಹನ್ನೆರಡನೆಯ ಶತಮಾನದಿಂದೀಚೆಗೆ ವ್ಯಾಪಕ ಬಳಕೆಗೆ ಬಂದಿರಬಹುದು; ಏಕೆಂದರೆ ಪ್ರಾಚೀನ ಚಂಪೂ ಕಾವ್ಯಗಳಲ್ಲಿ ಈ ಯಾವ ರೂಪಗಳೂ ಈ ಅರ್ಥದಲ್ಲಿ ದೊರೆಯುವುದಿಲ್ಲ. ಆದರೆ ಕ್ರಿಶ 1112 ರಚಿತವಾದ ನಯಸೇನನ 'ಧರ್ಮಾಮೃತ'ದಲ್ಲಿ ಮಾತ್ರ "ಹಣಿತೆಯೊಳ್ ಕೂಡಿ ಬತ್ತಿಯಿಂದೆಣ್ಣೆಯಿಂದಂ ಬೆಂಕಿಯಿಂದಂ ಬೆಳಗಿಂದಂ ಸೊಡರೆಂತೊಪ್ಪುಗುಂ" ಎಂಬ ಉಪಮೆಯೊಂದು ದೊರೆಯುತ್ತದೆ. ವಚನಗಳಲ್ಲಿ ಈ ಶಬ್ದದ ವಿವಿಧ ರೂಪಗಳು ಬಳಕೆಗೊಂಡಿವೆ. "ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬೊ ತೈಲವನೆರೆದು" ಎಂದು ಆರಂಭವಾಗುವ ಅಲ್ಲಮನ ವಚನ ಸುಪ್ರಸಿದ್ಧವಾದುದು. "ಪ್ರಣಿತೆಯೂ ಇದೆ, ಬತ್ತಿಯೂ ಇದೆ ಜ್ಯೋತಿಯ ಬೆಳಗುವರೆ ತೈಲವಿಲ್ಲದೆ ಎಂತಪ್ಪುದಯ್ಯಾ" ಎಂಬುದು ಅಲ್ಲಮನ ಮತ್ತೊಂದು ವಚನ. "ಮೂಗಿನ ಕಪ್ಪು ಪಣಿತೆಯ ಕತ್ತಲೆ ಜ್ಯೋತಿಯೆಂಬರು" ಎಂಬುದು ಸರ್ವಜ್ಞನ ಒಂದು ತ್ರಿಪದಿಯ ಸಾಲು. ಅಲ್ಲದೆ, ಹಳಗನ್ನಡ ಪದಗಳ ಆದಿಯ ಪಕಾರ ನಡುಗನ್ನಡದಲ್ಲಿ ಹಕಾರವಾದಂತೆ ಇಲ್ಲಿಯೂ ಆಗಿ, ಹಣತೆ ಎಂದಾಗುತ್ತದೆ. ಹಳಗನ್ನಡ ವ್ಯಾಕರಣಗ್ರಂಥವಾದ 'ಶಬ್ದಮಣಿದರ್ಪಣ'ದಲ್ಲಿಯೇ "ಪ್ರಣಿತ=ಹಣತೆ" ಎಂದು ಅರ್ಥ ಕೊಟ್ಟಿದೆ. ಈ ಗ್ರಂಥದ ಕಾಲ ಹದಿಮೂರನೆಯ ಶತಮಾನದ ಕೊನೆ: ಆ ಹೊತ್ತಿಗೆ ವಚನ ಚಳವಳಿ ನಡೆದಿತ್ತು. ಅದರ ಪ್ರಭಾವದಿಂದ ಆ ಪದ ಇಲ್ಲಿ ಕಾಣಿಸಿಕೊಂಡಿರಬೇಕು. ಅಂಬಿಗರ ಚೌಡಯ್ಯನ ವಚನವೊಂದರಲ್ಲಿ 'ಹಣತಿ' ಎಂಬ ರೂಪ ದೊರೆಯುತ್ತದೆ: "ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ" ಎಂಬುದು ಅಲ್ಲಿನ ಮಾತು.
 ಹೊಸಗನ್ನಡದಲ್ಲಿ 'ಹಣತೆ' ಎಂಬ ರೂಪದ ಬಳಕೆ ಸಾಮಾನ್ಯ. "ಗುಡಿಕತ್ತಲೆಯೊಳು ಹಣತೆಗಳೆಸೆದಿವೆ ತಮವೇ ಪುಷ್ಪಿತವಾದಂತೆ" ಎಂಬ ಚಿತ್ರ ಪುತಿನ ಅವರ 'ಯದುಗಿರಿಯ ಮೌನವಿಕಾಸ' ಕವಿತೆಯದು. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ವ್ಯರ್ಥತೆಯ ಪ್ರತೀಕ ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನದಲ್ಲಿ ಬರುತ್ತದೆ. ಚೆನ್ನವೀರ ಕಣವಿಯವರ 'ನೆಲಮುಗಿಲು' ಕವನದ "ಹಳತು ಹೊಸತನು ಹಿಂಜಿ ಹೊಸೆದು ಹೊತ್ತಿಸಿ ಹಿಡಿದ ಶಾಂತಿಪಣತಿ" ಎಂಬಲ್ಲಿ ಹಳೆಯ ರೂಪವೇ ಇದೆ.
=====
ಹಸಿವು: ಇದು ಪಸಿ ಎಂಬ ಧಾತುವಿನಿಂದ ರೂಪಿತವಾದ ಶಬ್ದ. ಪಸಿ ಎಂದರೆ ಹಸಿವಾಗುವುದು: "ಪೆಣ್ಬುಲಿ ಪಲವು ದಿವಸಂ ಆಹಾರಮಂ ಪೆಱದೆ ಪಸಿದು ಮಮ್ಮಲ ಮಱುಗುತ್ತಿರ್ದು" - ಎಂಬುದು 'ವಡ್ಡಾರಾಧನೆ'ಯ ಪ್ರಯೋಗ. "ಕ್ಷುಧಾಶನಾಯಾಗ್ರಾಸೇಚ್ಛಂ ಕ್ಷುದ್ಭುಭುಕ್ಷೆಗಳ್ ಪಸಿವೆನಿಕುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ವಿಚಿತ್ರಮೇಂ ಕಾಣಲೊಡಂ ಪಸಿವುಂ ತೃಷೆಯುಂ ಕೆಡುವುದು ರಸಋದ್ಧಿಯಿನಾ ಮುನೀಂದ್ರಚಂದ್ರನ ಮುಖಮಂ" - ಜನ್ನನ 'ಅನಂತನಾಥ ಪುರಾಣ'. "ಭದ್ರಬಾಹು ಭಟ್ಟಾರರ್ .. .. ಪಲವು ದಿವಸದಿಂದಂ ಪಸಿವುಂ ನೀಱೞ್ಕೆಮಂ ಸೈರಿಸಿ" - 'ವಡ್ಡಾರಾಧನೆ'.
ನಡುಗನ್ನಡದಲ್ಲಿ ಹಸಿವು ಎಂಬ ರೂಪ ಕಾಣಿಸಿಕೊಂಡಿತು. ಆದರೆ 'ಕರ್ಣಾಟಕ ಪಂಚತಂತ್ರಕಿದಲ್ಲಿ ಈ ಎರಡು ರೂಪಗಳೂ ದೊರೆಯುತ್ತವೆ: "ಅಂತ್ಪಡಂ ನಿನ್ನ ಪಸಿವು ಕೆಟ್ಟು ಬಲಮಪ್ಪನ್ನೆವರಂ ಕಿರುಗಪ್ಪೆಗಳಂ ತಿನುತಿರು" ಹಾಗೂ "ಹಸಿವು ತೃಷೆಯುಳ್ಳಾತನು, ಕುರುಡನು ಆಗ ಹಗೆಯ ಮನೆಗೆ ತಿರಿದುಂಬುದಕ್ಕೆ ಹೋಹನು". "ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇಱಿತ್ತಯ್ಯಾ ಆಪಾದಮಸ್ತಕಕ್ಕೆ; ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ" ಎಂಬ ವಚನದಲ್ಲಿ ಜೇಡರ ದಾಸಿಮಯ್ಯನು ಹಸಿವಿನ ವಿರಾಡ್ರೂಪ ಹಾಗೂ ಅನ್ನದ ನಿತ್ಯಸಮಸ್ಯೆಯನ್ನು ಅದ್ಭುತವಾಗಿ ಚಿತ್ರಿಸುತ್ತಾನೆ. "ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು, ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು; ದೇವರಿಲ್ಲ, ಭಕ್ತರಿಲ್ಲ" ಎಂಬ ಮಾರ್ಮಿಕವಾದ ಮಾತು ಅಲ್ಲಮಪ್ರಭುವಿನದು. "ಹಸಿವಾದಡುಂಬುದನು ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ?" ಎಂಬ ಮರ್ಮಛೇದಕ ಮಾತು ಬಸವಣ್ಣನದು. "ಹಸಿವೆ ನೀನು ನಿಲ್ಲು ನಿಲ್ಲು; ತೃಷೆಯೇ ನೀನು ನಿಲ್ಲು ನಿಲ್ಲು .. .. ನಾನು ಚೆನ್ನಮಲ್ಲಿಕಾರ್ಜುನನ ಅವಸರದ ಓಲೆಯನೊಯ್ಯುತ್ತಿದ್ದೇನೆ" ಎಂದು ಸಹಜಪ್ರವೃತ್ತಿಗಳಿಗೆ ತಡೆಯೊಡ್ಡುವವಳು ಮಹಾದೇವಿಯಕ್ಕ. "ಜಿಂಕೆಗೂ ಹಸಿವು: ಹುಲಿಗೂ ಹಸಿವು" ಎಂಬುದು ಕೆಎಸ್ನ ಅವರ 'ತೆರೆದ ಬಾಗಿಲ' ಕವನದ ಸಾಲು. ಹಸಿವೆ ಎಂಬ ರೂಪವೂ ಇದೆ: "ಗಂಟಲೊತ್ತಿತು ಹಸಿವೆ - ಹೆಣ್ಣುಸಿರು ಹೊರಳಾಡಿತು" ಎಂಬುದು ಕವೆಂ ರಾಜಗೋಪಾಲರ 'ಕರ್ಮಕಾಂಡ' ಕವಿತೆಯ ಸಾಲು. ಹಸಿವು ಎಂಬುದು ರೂಪಕವಾಗಿ ಎಲ್ಲ ತರದ ಬಯಕೆಗಳನ್ನೂ ಸಂಕೇತಿಸುತ್ತದೆ.
=====
ಹಾಡು: ಇದು ಮೂಲತಃ ಪಾಡು ಎಂಬ ರೂಪದ್ದು; ರಾಗಬದ್ಧವಾಗಿ ಸಂಗೀತ ಹೇಳು ಎಂದು ಕ್ರಿಯಾಪದವಾಗಿಯೂ ಗೀತ ಎಂಬ ನಾಮವಾಚಕವಾಗಿಯೂ ಬಳಕೆಯಲ್ಲಿದೆ. ಇದೊಂದು ದ್ರಾವಿಡ ಪದ. ತಮಿಳು ಮತ್ತು ಮಲಯಾಳಂಗಳಲ್ಲಿ ಪಾಟು, ತೆಲುಗಿನಲ್ಲಿ ಕ್ರಿಯಾಪದವಾಗಿ ಪಾಡು ಮತ್ತು ನಾಮರೂಪದಲ್ಲಿ ಪಾಟ ಎಂಬ ರೂಪಗಳನ್ನು ತಾಳುತ್ತದೆ. ಹಳಗನ್ನಡದಲ್ಲಿ ಪಾಟ ಎಂಬುದು ಹಾಡು, ಹಾಡಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ; ರನ್ನನ 'ಅಜಿತಪುರಾಣ'ದಲ್ಲಿ "ಪಾಟಂ ಕಾಮುಕಗಣಮೃಗಕೋಟಿಗೆ ಮನಸಿಜನ ಗೋರಿಗಾಡುವ ಪಾಟಂ" ಎಂಬ ಸಾಲಿದೆ. ಹಾಗೆಯೇ ಪಾಡುಂಗಾಱ, ಪಾಡುಕಾಱ, ಪಾಡುಂಗಾಱಿಕೆ ಮುಂತಾದ ಸಾಧಿತರೂಪಗಳು ದೊರೆಯುತ್ತವೆ. ಹೊಸಗನ್ನಡದಲ್ಲಿ ಇವು ಹಾಡಿಕೆ, ಹಾಡುಗಾರ, ಹಾಡುಗಾರ್ತಿ, ಹಾಡುಗಾರಿಕೆ ಎಂದಾಗುತ್ತವೆ. ಕೋಗಿಲೆಯ ಹಾಡು ಎನ್ನುವಾಗ ಈ ಪದಕ್ಕೆ ಮಧುರಧ್ವನಿ ಎಂಬ ಅರ್ಥವುಂಟಾಗುತ್ತದೆ.
ಹಳಗನ್ನಡದ ಪಾಡು ಹೊಸಗನ್ನಡದಲ್ಲಿ ಹಾಡು ಎಂದಾಗಿ ಹಿಂದಿನ ಅರ್ಥಗಳನ್ನು ಮುಂದುವರೆಸಿಕೊಂಡು ಬಂದಿದ್ದರೂ, ಪಾಡು ಎಂಬ ಹಳೆಯ ರೂಪವೂ ಬಳಕೆಯಲ್ಲಿದೆ, ಆದರೆ ಬೇರೆಯ ಅರ್ಥದಲ್ಲಿ. ಪಾಡು ಎಂದರೆ ಕಷ್ಟ, ಕೋಟಲೆ ಎಂಬರ್ಥಗಳಿವೆ. ಬೇಂದ್ರೆಯವರ "ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ಹೇಳುವೆನು ರಸಿಕ ನಿನಗೆ; ಕಲ್ಕುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ" ಎಂಬ ಪ್ರಸಿದ್ಧವಾದ ಸಾಲುಗಳಲ್ಲಿ ಪಾಡು-ಹಾಡುಗಳ ಅರ್ಥವ್ಯತ್ಯಾಸ ಎದ್ದು ಕಾಣುತ್ತದೆ. ಆದರೆ ಹಾಡು ಎಂಬುದಕ್ಕೆ ಇಲ್ಲಿ ಒಳ್ಳೆಯದು, ಸತ್ವ ಎಂಬ ಅರ್ಥ ಬಂದಿದೆ. ಹಾಡುಗಬ್ಬ ಎಂಬುದು ರಾಗವಾಗಿ ಹೇಳಬಲ್ಲಂತಹ ಕಾವ್ಯವನ್ನು ಸೂಚಿಸುತ್ತದೆ.
ಪಾಡು ಎಂಬುದು ಕೆಲವು ಕಡೆ ಸುಸ್ಥಿತಿ, ಒಳ್ಳೆಯದು ಎಂಬರ್ಥಗಳಲ್ಲಿಯೂ ಬಳಕೆಯಲ್ಲಿದೆ. 'ಪಾಡೈತಿ' ಎಂದರೆ ಚೆನ್ನಾಗಿದೆ ಎಂಬರ್ಥ. 'ಪಾಡದೀರೇನ್ರೀಕ?' ಎಂಬುದು ಆರೋಗ್ಯ ವಿಚಾರಿಸುವ ಶಬ್ದ. 'ಅದ ಪಾಡಕ' ಎಬಂಥ ಕಡೆ ಆ ಶಬ್ದಕೆ ಚೆನ್ನ ಎಂಬರ್ಥ ಬರುತ್ತದೆ. ಹಾಗೆಯೇ ಕಷ್ಟ ಎಂಬರ್ಥವೂ ಇದೆ: ಪಾಡಚಾಕರಿ ಎಂದರೆ ಕಷ್ಟದ ಕೆಲಸ.
=====
ಹಾದರ: ಹಳಗನ್ನಡದಲ್ಲಿದು 'ಪಾದರ' ಎಂಬ ರೂಪವನ್ನು ಹೊಂದಿತ್ತು. ಇದು ಸಂಸ್ಕೃತದ 'ಪಾರದಾರ್ಯ' ಎಂಬ ಶಬ್ದದ ತದ್ಭವ. ಇದಕ್ಕೆ ಜಾರತನ ಎಂಬರ್ಥವಿದೆ. 'ಪರದಾರ' ಎಂದರೆ ಬೇರೆಯವನ ಹೆಂಡತಿ ಎಂಬರ್ಥ; ಹೀಗಾಗಿ ಬೇರೆಯವನ ಹೆಂಡತಿಯ ಜೊತೆಗಿರಿಸಿಕೊಂಡ ಸಂಬಂಧವನ್ನೇ ಪಾರದಾರ್ಯ ಎಂದು ಕರೆದಿರುವಂತೆ ತೋರುತ್ತದೆ. ಈ ಶಬ್ದದ ಇತರ ರೂಪಗಳಾದ 'ಪಾರದಾರ' 'ಪಾರದರ' 'ಪಾರದ್ವಾರ' ಎಂಬ ರೂಪಗಳು ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಲ್ಲಿದ್ದುವು. "ಮಹಾದುಃಖಕೆ ಪಾರದಾರಮೆ ಮೊದಲ್" ('ಧರ್ಮಾಮೃತ'); "ನೋಡುವೊಡೆ ಅವನೇಕಾಂತದೊಳಾಡುವೊಡೆ ಅದು ಪಾರದರಮೆ ದಿಟಂ" ('ಪಾರ್ಶ್ವನಾಥ ಪುರಾಣ'); 'ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟುಕೊಂಡು" (ಕೋಲಶಾಂತಯ್ಯನ ವಚನ). ಪಾದರ ಶಬ್ದವನ್ನು ರನ್ನನ 'ಗದಾಯುದ್ಧ'ದ "ದೋಷಾವಸಥರ್ ಪಾದರದಿಂ ಜನಿಯಿಸಿದರ್" ಎಂಬ ಪ್ರಯೋಗದಲ್ಲಿ ಕಾಣಬಹುದು.
ಪಾದರ ಮಾಡುವವನು 'ಪಾದರಿಗ' ("ಅನ್ನೆಗಮವಳ್ ನೆರೆಮನೆಯ ಪಾದರಿಗನಂ ಬರಿಸುವುದುಂ" - ದುರ್ಗಸಿಂಹನ 'ಪಂಚತಂತ್ರ'). ಸ್ತ್ರೀಲಿಂಗರೂಪ 'ಪಾದರಿ' ("ಆ ಪಾದರಿ ಬೇಸತ್ತವೊಲಿರೆ ಪೋದಂ" - ಜನ್ನನ 'ಯಶೋಧರ ಚರಿತೆ'). (ಪಾದರಿ ಎಂಬುದು ಸಂಸ್ಕೃತದ ಪಾಟಲ ಎಂಬ ಮರ ಮತ್ತದರ ಹೂವಿಗೂ ಅನ್ವಯಿಸುವ ಪದವಾಗಿದೆ). 'ಪಾದರಿಗೆ' ಎಂಬ ರೂಪವೂ ಇದೆ ("ತುಡುಗುಣಿ ಪಾದರಿಗೆ ರಂಡೆ ಕೀೞ್ಜಾತಿಯವಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಜಾರತನ ಮಾಡು ಎಂಬರ್ಥದಲ್ಲಿ 'ಪಾದರಿಸು' ಎಂಬ ಪ್ರಯೋಗವಿತ್ತು ("ಜಲಜಶರಚಾಪಮಂ ನಿಲಿಸಲಾರದೆ ಬಂಧುಗಳು ತಿಳಿಯದಂತೆ ಪಾದರಿಸುತಡಕದೊಳಿರಲು" - ಕೋಳೂರು ಶಂಕರಕವಿಯ 'ನವಮೋಹನ ತರಂಗಿಣಿ").
ಹಳಗನ್ನಡಪದಗಳಲ್ಲಿನ ಆದಿ ಪಕಾರ ನಡುಗನ್ನಡದಲ್ಲಿ ಬಹುತೇಕ ಕಡೆ ಹಕಾರ ಆಗಿರುವಂತೆ, ಪಾದರ ಹಾದರವಾಗುತ್ತದೆ. "ಅನ್ಯದೈವವೆಂಬುದು ಹಾದರ ಕಾಣಿರೋ" ಎಂಬುದು ಬಸವಣ್ಣನ ವಚನ. 'ಹಾದರಗಿತಿ' ಎಂಬ ಪ್ರಯೋಗ 'ಶಬ್ದಮಣಿದರ್ಪಣ'ದಲ್ಲಿಯೇ ಇದೆ. 'ಹಾದರಗಿತ್ತಿ' ಎಂಬ ರೂಪ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಹಾದರ ಮಾಡುವುದು ಹಾದರವಾಡು: "ಮುರಾರಿ ಗೋಪಿಯರಲ್ಲಿ ಹಾದರವಾಡಿ" ಎಂಬುದು 'ಬಸವಪುರಾಣ'ದ ಮಾತು. 'ಹಾದರವಿದ್ದೆ'ಯ ಪ್ರಸ್ತಾಪ ಕನಕದಾಸರ 'ಮೋಹನತರಂಗಿಣಿ'ಯಲ್ಲಿದೆ. ಹಾದರಿಕೆಗೆ ವಿಧಿಸುವ ಶಿಕ್ಷೆ ಗಂಡಸಿನ ತಲೆ ಕತ್ತರಿಸುವುದು, ಹೆಂಗಸಿನ ಮೂಗು ಕತ್ತರಿಸುವುದು ಎಂದು ಕ್ರಿಶ. 992 ಶಾಸನ ಹೇಳುತ್ತದೆ ("ಪಾದರಿಗೆಯ ಮೂಗನರಿದು ಪಾದರಿಗನಂ ಕೊಲ್ವುದು"). ಹಾದರದ ಪ್ರಸಂಗದಲ್ಲಿ ಸತ್ತವರಿಗಾಗಿ ಯಾರು ಅಳುತ್ತಾರೆ ಎಂದು 'ಪಂಪಭಾರತ'ದಲ್ಲಿ ಬರುತ್ತದೆ: "ಪಾರದರೊಳ್ ಸತ್ತಂಗಳಲ್ವನ್ನರಾರ್".
=====
ಹಿಡಿ: ಹಿಡಿದುಕೊ ಎಂಬ ಕ್ರಿಯಾರ್ಥದಲ್ಲಿಯೂ, ಹಿಡಿದುಕೊಳ್ಳುವಾಗ ಬೆರಳುಗಳನ್ನು ಮಡಿಸಿ ಆಗುವ ಮುಷ್ಟಿ ಎಂಬ ಅರ್ಥದಲ್ಲಿಯೂ, ಮುಷ್ಟಿಯಲ್ಲಿ ಅಡಗಿಸಿಕೊಳ್ಳಬಹುದಾದಷ್ಟು ಪ್ರಮಾಣ ಎಂಬರ್ಥದಲಿಯೂ ಈ ಪದ ಬಳಕೆಯಲ್ಲಿದೆ. ಇದರ ಮೂಲ ಪಿಡಿ ಎಂಬುದು: ಹಳಗನ್ನಡದಲ್ಲಿನ ಶಬ್ದಗಳ ಪಕಾರ ನಡುಗನ್ನಡದಲ್ಲಿ ಹಕಾರವಾಯಿತು. ಮೂಲರೂಪದಲ್ಲಿ ಪಿಡಿಕೆಯ್ ಮುಷ್ಟಿಯನ್ನು ಸೂಚಿಸುತ್ತದೆ, ಪಿಡಿಪೆಱು ಎಂದರೆ ಸೆರೆಸಿಕ್ಕು ಎಂದು, ಪಿಡಿಖಂಡ ಎಂದರೆ ಚಿಕ್ಕ ಚಿಕ್ಕ ತುಣುಕು. ಪಿಡಿಕಲ್ ಎಂಬುದು ಕುಂಬಾರನು ಮಡಕೆ ಮಾಡುವಾಗ ಕೈಯಲ್ಲಿ ಹಿಡಿದು ಬಡಿಯುವ ಸಣ್ಣ ಕಲ್ಲು ಎಂಬುದನ್ನು ಸೂಚಿಸುತ್ತದೆ. ಸ್ವೀಕರಿಸು, ಸೆರೆಹಿಡಿ, ಅವಲಂಬಿಸು, ಸ್ವಾಧೀನಪಡಿಸಿಕೊ ಮುಂತಾದ ಅರ್ಥಗಳೂ ಈ ಶಬ್ದಕ್ಕಿವೆ. ವಸ್ತುಗಳನ್ನು ಹಿಡಿಯುವ ಅರ್ಥವು ಮುಂದೆ ವಿಸ್ತಾರಗೊಂಡು ಮಾನಸಿಕ ಕ್ರಿಯೆಗಳನ್ನು ಅಥವಾ ಅಮೂರ್ತವಾದುದನ್ನು ಸೂಚಿಸಲೂ ಅನ್ವಯಗೊಂಡಿತು: 'ಅರ್ಥ ಹಿಡಿ' 'ಕಂಡುಹಿಡಿ' (ಡಿಸ್ಕವರಿ)  'ದೆವ್ವ ಹಿಡಿ' ಮುಂತಾದುವು.
ಪುರಸ್ಕಾರ ಹೊಂದು ಎಂಬ ಅರ್ಥವೂ ಈ ಪದಕ್ಕಿದೆ: "ನಮ್ಮ ರೂಪಾಯಿ ಅಮೆರಿಕದಲ್ಲಿ ಹಿಡಿಯುವುದಿಲ್ಲ" ಎಂಬ ವಾಕ್ಯವನ್ನು ನೋಡಿ. ಹಿಡಿ ಎಂಬುದಕ್ಕೆ ತೊಡಗು ಎಂಬರ್ಥವೂ ಇದೆ: "ಬೆಳಿಗ್ಗೆ ಹಿಡಿದ ಮಳೆ ಇನ್ನೂ ಬಿಟ್ಟಿಲ್ಲ" ಎಂಬುದನ್ನು ನೋಡಬಹುದು. ಹಿಡಿಹಿಡಿ ಎಂದರೆ ತೆಗೆದುಕೊ ಎಂಬರ್ಥವಿದೆ: "ಹಿಡಿಹಿಡೀಲೆ ರೊಕ್ಕಾ ತೆಗೆದು ಹಿಡಿಹಿಡಿ ಅನ್ನಾಂವಾ" ಎಂಬ ಸಾಲು ಬೇಂದ್ರೆಯವರ 'ಹುಬ್ಬಳ್ಳಿಯಾಂವ' ಕವನದಲ್ಲಿದೆ.
ವಸ್ತುಗಳನ್ನು ಹಿಡಿದುಕೊಳ್ಳುವ ಭಾಗವನ್ನು ಸೂಚಿಸಲೂ ಈ ಪದ ಬಳಕೆಯಾಗಿದೆ. ಕೈಯಲ್ಲಿ ಹಿಡಿದು ಗುಡಿಸುವ ಪೊರಕೆ ಎಂಬರ್ಥದಲ್ಲಿಯೂ ಕಠಾರಿ ಎಂಬರ್ಥದಲ್ಲಿಯೂ ಹಳೆಯ ಕಾವ್ಯಗಳಲ್ಲಿ ಈ ಪದ ಬಳಕೆಯಾಗಿದೆ. ಹಾಗೆ ಹಿಡಿದುಕೊಳ್ಳಲು ಇರುವ ಭಾಗವೇ ಹಿಡಿಕೆ ಅಥವಾ ಹಿಡಿ (ಇದನ್ನು ಕಾವು ಎಂದೂ ಕರೆಯುತ್ತಾರೆ). ಹಿಡಿದುಕೊಳ್ಳುವ ಕ್ರಿಯೆಯೇ ಹಿಡಿತ; ಹತೋಟಿ ಎಂಬರ್ಥವೂ ಇದಕ್ಕೆ ಬರುತ್ತದೆ. ಅನ್ನ, ಉಪ್ಪಿಟ್ಟು ಮುಂತಾದುವನ್ನು ಹಿಡಿಯಲ್ಲಿ ಒತ್ತಿ ಮಾಡುವ ತುತ್ತನ್ನು 'ಪಿಡಿಚೆ' ಎಂದು ಈಗಲೂ ಹೇಳುತ್ತಾರೆ.
ಪಿಡಿ ಎಂಬುದು ಪ್ರಾಣಿಗಳ ಹೆಣ್ಣನ್ನು ಸೂಚಿಸುವ ಪದವಾಗಿ ಹಳಗನ್ನಡದಲ್ಲಿಯೂ, ತಮಿಳು, ತೆಲುಗು ಮಲಯಾಳಂಗಳಲ್ಲಿಯೂ ಬಳಕೆಗೊಳ್ಳುತ್ತಿತ್ತು. ಪಿಡಿ ಎಂಬುದು ಮೊದಲು ಹೆಣ್ಣು ಆನೆಯನ್ನು ಮಾತ್ರ ಸೂಚಿಸುತ್ತಿದ್ದು, ಬರಬರುತ್ತ ಅದರ ಅರ್ಥ ವಿಸ್ತಾರಗೊಂಡಿದೆ.
====
ಹುಣಿಸೆ: ಇದು 'ಪುಳಿ' ಎಂಬ ಶಬ್ದದಿಂದ ರೂಪಿತವಾಗಿರುವ ಪದ. ಪುಳಿ+ಸೆ=ಪುಳಿಸೆ ಆಗಿ ಅದು ಮುಂದೆ ಪುಣಿಸೆ ಎಂದಾಗಿ ಈಗ ಹುಣಿಸೆ ರೂಪವನ್ನು ಪಡೆದಿದೆ. ಹಳಗನ್ನಡದಲ್ಲಿ ಪುಳಿಸೆ, ಪುಣಿಸೆ, ಪುಣುಸೆ, ಪುಣಸೆ, ಪುಳುಂಸೆ ಮುಂತಾದ ರೂಪಗಳಲ್ಲಿ ಬಳಕೆಯಾಗಿದೆ. ಪುಳಿ(ಹುಳಿ)ಯಾದ ರುಚಿಯಿರುವ ಹಣ್ಣು ಮತ್ತು ಅದರ ಮರ ಎರಡಕ್ಕೂ ಈ ಶಬ್ದ ಅನ್ವಯಿಸುತ್ತದೆ. "ಸಯ್ಯನೆ ಬನ್ದು ಪೊಲ ಪುಣಸೆ ಎವ ಕೀಲೆ ಅನ್ತೆ ಪೋಯಿ ಏ ಬಿರಿದೊರ್ಗ್ಗೆಱೆ ಮುಕೂಡಲ್" ಎಂಬ ವಾಕ್ಯ ಒಂಬತ್ತನೇ ಶತಮಾನದ ಶಾಸನವೊಂದರಲ್ಲಿ 'ಪುಣಸೆ' ರೂಪ ದೊರೆಯುತ್ತದೆ.  "ಸೂರಣದ ಗಡ್ಡೆಯಂ ಸೌವೀರದೆ ಮೇಣ್ ಕಲಸಿಕೊಂಡು ಪುಳಿಸೆಯ ಚಿಗುರಿಂ ನೀರೊಳ್ ಕುದಿಸಲ್ಕದು ಸಂಹಾರಿಕುಂ ಅಂತದಱ ವಿಷಮನಾಕ್ಷಣದಿಂ" ಎಂದು 'ಲೋಕೋಪಕಾರ' ಹೇಳುತ್ತದೆ. "ಪುಣಿಸೆಯ ಪೂವೆಲ್ಲಂ ಕಾಯಪ್ಪವೆ" ಎಂಬ ಪ್ರಶ್ನೆ 'ಧರ್ಮಾಮೃತ'ದಲ್ಲಿದೆ. ಹುಣಿಸೆ ಮರ ಬೆಳೆದ ಪ್ರದೇಶವೂ ಪುಣಿಸೆ ಎನಿಸಿಕೊಳ್ಳುತ್ತಿತ್ತು: "ಪುಣಿಸೆಯ ಮಧ್ಯದಿ ಭೂಮಿಯಂ ಮಾರುಗೊಂಡ" ಎಂಬುದು ಹನ್ನೊಂದನೆಯ ಶತಮಾನದ ಶಾಸನವೊಂದರ ಮಾತು. ಹದಿನಾಲ್ಕನೆ ಶತಮಾನದ ಒಂದು ಶಾಸನವು ಪುಣ್ಸೆ ರೂಪವನ್ನು ಬಳಸುತ್ತದೆ: "ಬಗೆವೊಡದೇನಾನುಂ ಬಾರ್ತೆಗಲದೆನಿಪರಳಿಗೊಲ್ದು ಪೊಡೆವಡುವ ನರಂ ಚಿಗುರಿಂ ಪೂವಿಂ ಕಾಯಿಂ ಸೊಗಯಿಪ ಮಾವಿಂಗೆ ಪುಣಿಸೆಗೆರಗಲ್ವೇಡಾ" ಎಂಬ ಗೇಲಿಯ ಮಾತು 'ಸಮಯ ಪರೀಕ್ಷೆ'ಯಲ್ಲಿದೆ. "ಭತ್ತ ಭ 1ಕ್ಕಂ ಹೆರ್ಜುಂಕಂ ಪುಣ್ಸೆ ಮೆಣಸಿನ ಭಾರಕ್ಕೆ ಗ 1". ಪುಣಿಸೆವಣ್ ಎಂಬ ಬಳಕೆಯೂ ಇದೆ: "ಜೇನ್ ಪುಣಿಸೆವಣ್ ಪೊಸನಾರ್ .. ಪೀಲಿಯೆಂಬಿವಂ ತುಂಬಿದ ಕಂಬಿಯಂ ತಳೆದದೇಂ ತಳರ್ದತ್ತೊ ಪುಳಿಂದ ಸಂಕುಳಂ" ಎಂಬುದು 'ರಾಜಶೇಖರವಿಳಾಸ'ದಲ್ಲಿನ ವರ್ಣನೆ.
ನಡುಗನ್ನಡದಲ್ಲಿ ಪಕಾರ ಹಕಾರವಾಗಿ ತಿರುಗಿತು: ಹುಣಸೆ, ಹುಣಿಸೆ, ಹುಣುಸೆ, ಹುಣಚಿ ಮುಂತಾದ ರೂಪಗಳಲ್ಲಿ ಈ ಪದ ಬಳಕೆಯಲ್ಲಿದೆ. "ಹುಣಿಸೆ ತಂತ್ರಿಣೀ ಚಿಂಚಾಹ್ವಂ" ಎಂದು ಹನ್ನೊಂದನೆಯ ಶತಮಾನದ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ಕೊಡುತ್ತದೆ. "ಹುಣಿಸೆಯ ಕಾಯಂ ತಿಂದರಂತೆ ಚಳಿತು" ಎನ್ನುತ್ತದೆ 'ಧರ್ಮಾಮೃತ'. "ಹುಣುಸೆ ಮುಪ್ಪಡಸಿದಡೆ ಹುಳಿ ತಗ್ಗದು" ಎಂಬ ಗಾದೆಯನ್ನು ಹದಿನೆಂಟನೆಯ ಶತಮಾನದ 'ಪರಶುರಾಮ ರಾಮಾಯಣ'ವೆಂಬ ಕಾವ್ಯವು ಹೇಳುತ್ತದೆ. 'ಹೂತದ ಹುಣಸಿ' ಎಂಬ ತಮ್ಮ ಕವಿತೆಯಲ್ಲಿ ಬೇಂದ್ರೆಯವರು "ಉಗುರ್ಗೆಂಪು ಹಸಿರು ಬಿಳಿ ನಿಂಬಿ ಹುಣಸಿಯ ರೆಂಬಿ ಚಿಗತೀತೇನೊ ನಂಬಿ ಕಾಮನ ಬಿಲ್ಲಿನ ಕೊಂಬಿ" ಎಂದು ವರ್ಣಿಸುತ್ತಾರೆ. ಹುಣಿಸೆ ಹಣ್ಣು ಈಗ ನಾವು ಬಳಸುವ ಸಾಮಾನ್ಯ ರೂಪ. 'ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ' ಎಂಬುದು ಪ್ರಸಿದ್ಧ ಗಾದೆ. ಸಾವಿರ ವರ್ಷದ ಹಿಂದೆ ಹುಣಿಸೆ ಈ ದೇಶದಲ್ಲಿಲ್ಲದಿದ್ದಾಗ ಅಡುಗೆಗೆ ಹುಳಿಮಾವನ್ನು ಬಳಸುತ್ತಿದ್ದರು  ಎಂದು ಬಿಜಿಎಲ್ ಸ್ವಾಮಿ ಹೇಳುತ್ತಾರೆ. ಆದರೆ ಒಂಬತ್ತನೆ ಶತಮಾನದ ಶಾಸನದಲ್ಲೇ 'ಪುಣಸೆ' ಶಬ್ದದ ಬಳಕೆಯಿತ್ತೆಂಬುದನ್ನಾಗಲೇ ನೋಡುದ್ದೇವೆ.  
=====
ಹುತ್ತ: ಇದು 'ಪುತ್ತ' ಅಥವಾ 'ಪುತ್ತು' ಎಂಬ ಶಬ್ದದ ಹೊಸಗನ್ನಡ ರೂಪ. ಪುತ್ತ ಎಂಬುದು ತಮಿಳಿನಲ್ಲಿ ಪುಱ್ಱಮ್ ಎಂಬ ರೂಪದಲ್ಲಿಯೂ, ಮಲಯಾಳಂನಲ್ಲಿ ಪುಱ್ಱ ಎಂಬಂತೆಯೂ, ತೆಲುಗಿನಲ್ಲಿ ಪುಟ್ಟ ರೂಪದಲ್ಲಿಯೂ ದೊರಕುತ್ತದೆ. ಗೆದ್ದಲು ಕಟ್ಟಿ ಹಾವು ವಾಸಿಸುವ ಜಾಗ ಎಂಬುದು ಇದರ ವಿವರಣೆ. 'ಕವಿರಾಜಮಾರ್ಗ'ದಲ್ಲಿ "ಬಿಸುಡಾಯುಧಮಂ ಪುಲ್ಲಂ ಕರ್ಚೇರು ಪುತ್ತನ್" ಎಂಬಲ್ಲಿ 'ಪುತ್ತ' ರೂಪವಿದ್ದರೆ, 'ಆದಿಪುರಾಣ'ದಲ್ಲಿನ "ಪುತ್ತಿನೊಳಗೊಯ್ಯನೆ ಕುತ್ತಿದ ಕೈಯಂ" ಎಂಬಲ್ಲಿ 'ಪುತ್ತು' ರೂಪವಿದೆ. ಆಲಂಕಾರಿಕ ಅರ್ಥದಲ್ಲಿ ನೆಲೆ ಎಂದಾಗುತ್ತದೆ: "ಇದು ಕಡು ನಾಣ ಪುತ್ತು" ('ಆದಿಪುರಾಣ').
ಈ ಶಬ್ದದಿಂದ ಅನೇಕ ನುಡಿಗಟ್ಟುಗಳಾಗಿವೆ. ಮೇಲೆ ಉಲ್ಲೇಖಿಸಿದ 'ಕವಿರಾಜಮಾರ್ಗ'ದ 'ಪುಲ್ಲಂ ಕರ್ಚೇಱು ಪುತ್ತನ್' ಎಂಬುದು ಯುದ್ಧದಲ್ಲಿ ಶರಣಾಗುವುದನ್ನು ಸೂಚಿಸುತ್ತದೆ. ಇದು 'ಗದಾಯುದ್ಧ'ದಲ್ಲಿ 'ಪುತ್ತನೇಱು' ಆಗಿದ್ದರೆ ("ಪುತ್ತನೇಱಿ ಕೊಲ್ಲದ ತುೞಿಲಾಳ್ತನಕ್ಕೆ"); 'ಪಂಚತಂತ್ರ'ದಲ್ಲಿ ಇದು 'ಪುತ್ತೇಱು' ಆಗುತ್ತದೆ ("ಪುತ್ತೇಱಿದನಂ ಕೈದುವನಿತ್ತನೇರ್ಪೆತ್ತನಂ ರಣಾಂಗಣದೊಳ್ ಬೆನ್ನಿತ್ತನನಿಱಿಯರ್"); ಹಾಗೆಯೇ 'ಪುತ್ತ' ಅಪಾಯ ಸ್ಥಳದ ಸಂಕೇತ: "ಪುಲಿಗಂಜಿ ಪುತ್ತವೇಱಿದಂತೆ" ('ಧರ್ಮಾಮೃತ'). ಪುತ್ತುಂಗಾಲ್ ಎಂದರೆ ಆನೆಕಾಲು ರೋಗ: "ಜವೆಯಂ ಗಂಧಕಮಂ ವಿಳಂಗವುನರೆದುಕೊಂಡು ನಾಡೆ ಭಾವಿಸಿ ಸರಳದ್ರವದಿದಂ ಪೂಸಿದೊಡಂ ಪುತ್ತುಂಗಾಲ ಪುತ್ತನಿರದುಪಶಮಿಕುಂ" ಎಂದು 'ಲೋಕೋಪಕಾರಂ'ನಲ್ಲಿ ಅದಕ್ಕೆ ಚಿಕಿತ್ಸೆಯನ್ನು ಹೇಳಿದೆ.
ಈ ಶಬ್ದ ಡುಗನ್ನಡದಲ್ಲಿ 'ಹುತ್ತ' ಅಥವಾ 'ಹುತ್ತು' ರೂಪ ಪಡೆಯುತ್ತದೆ. "ಹುತ್ತಕ್ಕೆ ಏಸು ಬಾಯಾದಡೇನು, ಸರ್ಪನಿಪ್ಪುದು ಒಂದೇ ಸ್ಥಾನ" ಎಂಬುದು ಬಸವಣ್ಣನ ಮಾತು. ರಾಘವಾಂಕನ 'ಹರಿಶ್ಚಂದ್ರಕಾವ್ಯ'ದಲ್ಲಿನ "ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು" ಎಂಬಲ್ಲಿ ಹುತ್ತು ರೂಪ ಪ್ರಯೋಗವಾಗಿದೆ. ಇಲ್ಲಿಯೂ ಅದು ಅನೇಕ ನುಡಿಗಟ್ಟುಗಳ ಮೂಲ. "ಮರನ ಹುತ್ತವನೇಱಿದವರ ಸಂಗರದಿ ದೈನ್ಯಬಡುವರ" ('ನಕದಾಸರ ಕನಳಚರಿತ್ರೆ') ಶರಣಾಗತಿಯ ಸೂಚನೆ; ಬಸವಣ್ಣನ ವಚನಗಳಲ್ಲಿನ "ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು" ಎಂಬಲ್ಲಿನ 'ಹುತ್ತದ ಮೇಲಣ ರಜ್ಜು' ಭ್ರಮೆಯನ್ನು ಸೂಚಿಸಿದರೆ; ಇನ್ನೊಂದೆಡೆಯ"'ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ" ಎಂಬಲ್ಲಿ 'ಹುತ್ತವ ಬಡಿಕ' ವ್ಯರ್ಥಪ್ರಯತ್ನದ ಸಂಕೇತ. "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಆ ಅಂಥ ರೂಪುರೇಖೆ' ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನ 'ಹುತ್ತಗಟ್ಟು' ಎಂಬುದು ಚಿತ್ತೈಕಾಗ್ರತೆಯ ಸಂಕೇತವಾಗಿದೆ.
ವಾಲ್ಮೀಕಿ ಎಂದರೆ ಹುತ್ತದಲ್ಲಿ ಹುಟ್ಟಿದವನು ಎಂದರ್ಥ. ಇದನ್ನು ಕನ್ನಡ ಕವಿಗಳು ಕನ್ನಡಿಸುತ್ತಾರೆ: "ನಾನು ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನ" ಎಂಬ ಘಟ್ಟಿವಾಳಯ್ಯನೆಂಬೊಬ್ಬ ವಚನಕಾರನ ಮಾತಿನಲ್ಲಿರುವ 'ಹುತ್ತದ ಮೊತ್ತದವ' ಋಷಿಯನ್ನು ಸೂಚಿಸುತ್ತದೆ. ಹಾಗೆಯೇ ಮುದ್ದಣ ವಾಲ್ಮೀಕಿಯನ್ನು 'ಪುತ್ತಿನಣುಗ' 'ಪುತ್ತಿನ ಪುತ್ರ' ಎನ್ನುತ್ತಾನೆ.
=====
ಹೆಂಗಸು: ಇದು ಎರಡು ಪದಗಳು ಕೂಡಿ ಆಗಿರುವ ಶಬ್ದ: ಪೆಣ್+ಕೂಸು. ಪೆಣ್ ತಮಿಳು, ಮಲಯಾಳಂಗಳಲ್ಲದ್ದರೆ, ತುಳುವಿನಲ್ಲಿ ಪೊಣ್ಣು ಎಂದಾಗುತ್ತದೆ. ಅಂತೆಯೇ ಕೂಸು ತಮಿಳಿನಲ್ಲಿ ಕುಙು, ಎಂದಿದ್ದರೆ ತೆಲುಗಿನಲ್ಲಿ ಕೂತು(ರು) ಎಂಬ ರೂಪಗಳಲ್ಲಿ ದೊರೆಯುತ್ತದೆ. ಪೆಣ್ ಎಂಬುದಕ್ಕೆ ಹೆಣ್ಣು ಎಂಬ ಅರ್ಥ ಸಾಮಾನ್ಯ. ಆದರೆ ಕೂಸು ಎಂಬುದು ಬೇರೆ ಬೇರೆ ಕಾಲಗಳಲ್ಲಿ ವಿವಿಧ ಅರ್ಥಚ್ಛಾಯೆಗಳನ್ನು ಪಡೆದಿದೆ. ಮಗು ಎಂಬ ಅರ್ಥದಲ್ಲಿ ಈ ಶಬ್ದವು 'ಕವಿರಾಜಮಾರ್ಗ'ದಲ್ಲಿಯೇ ಬಳಕೆಗೊಂಡಿದೆ ("ಕೂಸಿನ ತಲೆಯೊಳ್ ಬಿಣ್ಪೊರೆಯಂ ಇಟ್ಟ ತೆರಂ"); ಈ ಅರ್ಥದ ಜೊತೆಗೆ 'ವಡ್ಡಾರಾಧನೆ', 'ಆದಿಪುರಾಣ'ಗಳಲ್ಲಿ ಮಗು, ಗಂಡು ಮಗು, ಹೆಣ್ಣು ಮಗು ಎಂಬರ್ಥಗಳಲ್ಲಿ ಈ ಶಬ್ದ ಬಳಕೆಯಾಗಿದೆ. 'ಪಂಪಭಾರತದಲ್ಲಿ' ಮದುವೆ ಮಾಡಿಕೊಡಲು ಹೆಣ್ಣು ಕೇಳು ಎಂಬರ್ಥದಲ್ಲಿ 'ಕೂಸಂ ಬೇಡು' ಎಂಬ ಪ್ರಯೋಗವಿದೆ  ("ಶಂತನು .. .. ದಾಶರಾಜನಲ್ಲಿಗೆ ಕೂಸಂ ಬೇಡೆ"). ಮಕ್ಕಳಾಟ ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ 'ಕೂಸಾಟ' ಎಂಬ ಶಬ್ದವಿದೆ.
ಮೊದಲು ಮಗು ಎಂಬ ಅರ್ಥವಿದ್ದುದು ಬರಬರುತ್ತ ಹೆಣ್ಣು ಮಗು ಎಂಬರ್ಥ ಪಡೆದಂತೆ ತೋರುತ್ತದೆ. "ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ" ಎಂಬ ಬಸವಣ್ಣನ ಸಾಲಿನಲ್ಲಿ ಕೂಸು ಎಂಬುದಕ್ಕೆ ಕನ್ಯೆ, ಮದುವೆಯಾಗದ ಹುಡುಗಿ ಎಂಬ ಅರ್ಥವಿದೆ. ಅರ್ಥಸ್ಪಷ್ಟತೆಗೆ ಪೆಣ್ಗೂಸು ಎಂದು ಕರೆಯಲು ತೊಡಗಿ ('ಪೆಣ್ಗೂಸು' ಎಂಬ ಪ್ರಯೋಗ 'ವಡ್ಡಾರಾಧನೆ', 'ಪಂಪಭಾರತ', 'ಪಂಪರಾಮಾಯಣ' ಮುಂತಾದ ಕಾವ್ಯಗಳಲ್ಲಿಯೇ ಇದೆ) ಆ ಬಳಿಕ ನಡುಗನ್ನಡದಲ್ಲಿ ಹೆಂಗೂಸು ಎಂಬ ರೂಪ ಪಡೆಯಿತು: ಹರಿಹರನ 'ಬಸವರಾಜದೇವರ ರಗಳೆ'ಯಲ್ಲಿ "ನಾವು ಹೆಂಗೂಸಿಲ್ಲದೆ ಇರ್ದುದಿಲ್ಲ" ಎಂಬ ವಾಕ್ಯವಿದೆ. ಮುಂದೆ  ಈ ಶಬ್ದ ಹೆಂಗಸು ಎಂಬ ರೂಪವನ್ನು ಪಡೆದಿದೆ.
ಈಗ ಹೆಣ್ಣುಹೆಂಗಸು ಎಂಬ ಮಾತೂ ಇದೆ; ಅಸಹಾಯಕಳು ಎಂಬ ಅರ್ಥ ಇದಕ್ಕೆ ಇರುವಂತಿದೆ, ಹಾಗೆಯೇ 'ಮೂರು ಕಾಸಿನ ಹೆಂಗಸು ಎಂಬ ತಿರಸ್ಕಾರದ ಮಾತಿದೆ. ಆದರೆ ಇದು ಮೂಲತಃ 'ಮೂರು ಕೂಸಿನ ಹೆಂಗಸು' ಎಂಬ ಗೌರವಸೂಚಕ ಅಭಿವ್ಯಕ್ತಿ ಎಂದೂ ಕೆಲವರು ಹೇಳುತ್ತಾರೆ.
=====
ಹೊಟ್ಟೆ: ಇದೊಂದು ದ್ರಾವಿಡ ಪದ; ಹಳಗನ್ನಡದಲ್ಲಿದು 'ಪೊಡೆ' ಮತ್ತು 'ಪೊಟ್ಟೆ' ಎಂಬ ಎರಡು ರೂಪಗಳಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ ಪುಟೈ ಎಂದೂ ತೆಲುಗಿನಲ್ಲಿ ಪೊಡುಚು ಎಂದೂ ತುಳುವಿಲ್ಲಿ ಪೊಡೆ ಅಥವಾ ಪುಡೆ ಎಂದೂ ಆಗುತ್ತದೆ. ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಪೊಡೆ ಎಂಬುದಕ್ಕೆ ಹೊಡೆಯುವುದು ಮತ್ತು ಹೊಟ್ಟೆ ಎಂಬ ಎರಡು ಅರ್ಥಗಳನ್ನು ಹೇಳಿದೆ ("ಪೊಡೆ- ಪ್ರಹರಣೇ ಕುಕ್ಷೇ ಚ"). "ಪೊಟ್ಟೆ ಬಟ್ಟಾಗಿರ್ದ ಪೆರವಟ್ಟ ನಡುವಂ ನೋಡಿ ಪೊಕ್ಕು" ಎಂಬುದು ರನ್ನನ 'ಗದಾಯುದ್ಧ'ದ ಮಾತು. 'ಪೊಟ್ಟೆವಾಯ್' ಎಂದರೆ ಹೊಟ್ಟೆ ಉಬ್ಬರಿಸಿಕೊಳ್ಳುವುದು ("ಅಂತು ಪೊಟ್ಟೆವಾಯಲ್ ತಿಂದು" - ನಾಗರಾಜನ ಕಪುಣ್ಯಾಸ್ರವಕಿ).
ಪ್ರಾಯಶಃ ಸಮಾಸಗಳಲ್ಲಿ ಪೊಡೆ ಎಂಬ ರೂಪವು ಬಳಕೆಯಲ್ಲಿತ್ತು. ಪೊಡೆಗಿಚ್ಚು ಎಂದರೆ ಹೊಟ್ಟೆಯುರಿ ("ಪೊಡೆಗಿಚ್ಚಿಂದವೆ ಜೀರ್ಣನಾದನಸುರಂ ವಾತಾಪಿ" - 'ಕರ್ಣಾಟಕ ಕಾದಂಬರಿ'). ವಿಷ್ಣುವನ್ನು ಆಂಡಯ್ಯನ 'ಕಬ್ಬಿಗರಕಾವ'ವು 'ಪೊಡೆಯಲರ' ಎನ್ನುತ್ತದೆ ("ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ"). ಹೊಟ್ಟೆಯನ್ನು ನೆಲಕ್ಕೆ ತಾಕಿಸಿ (ಸಾಷ್ಟಾಂಗ) ನಮಸ್ಕಾರ ಮಾಡುವುದೇ 'ಪೊಡೆಮಡು'ವುದು ("ಪೊಡೆಮಡಲೆತ್ತುವ ಕೈಗಳ" 'ಯಶೋಧರ ಚರಿತೆ'); ("ನಿನಗೆ ಪೊಡೆಮಡುವೆ ಏಕೆ ಎಡೆತಡವೆ" ಎಂಬ ಮಾತು ಬೇಂದ್ರೆಯವರ 'ಗಂಗಾವತರಣ'ದಲ್ಲಿ ಬಂದಿದೆ). ಅಥವಾ 'ಪೊಡೆವಡು'ವುದು ("ಕಂಡು ಪೊಡೆವಡುವನಿತುವರಂ" - ಪಂಪನ 'ಆದಿಪುರಾಣ'). ಇವು 'ಪೊಡವಡು' 'ಪೊಡಮಡು' ಎಂಬ ರೂಪಗಳಲ್ಲಿಯೂ ಬಳಕೆಯಲ್ಲಿತ್ತು.
ನಡುಗನ್ನಡ ಕಾಲದ ನಂತರ ಹೊಟ್ಟೆ ಎಂಬ ರೂಪವು ಬಳಕೆಯಲ್ಲಿ ಬಂದಿತು. ಪುರಂದರದಾಸರ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎಂಬ ಹಾಡಿನಲ್ಲಿ 'ಹೊಟ್ಟೆ' ಎಂದರೆ ಜೀವನೋಪಾಯ ಎಂಬ ಅರ್ಥ ಪಡೆಯುತ್ತದೆ. ಇದೇ 'ಹೊಟ್ಟೆಪಾಡು'. ಅಸೂಯೆ ಎಂಬರ್ಥದಲ್ಲಿ 'ಹೊಟ್ಟೆಕಿಚ್ಚು' ಎಂಬ ಪದ ಬಳಕೆಯಲ್ಲಿದೆ. 'ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ' ಎಂಬ ನುಡಿಗಟ್ಟು ಅತೀವವಾಗಿ ಮತ್ಸರಿಸುವ ವ್ಯಕ್ತಿಯ ಬಗ್ಗೆ ಆಡುವ ಮಾತು. ಈ ಅರ್ಥದಲ್ಲಿಯೇ 'ಹೊಟ್ಟೆ ಕಿವಿಚಿಕೊ' ಎಂಬ ನುಡಿಗಟ್ಟೂ ಇದೆ. 'ಒಳ್ಳೆಯದಾಗಲಿ' ಎಂಬ ಹಾರೈಕೆಯ ಅರ್ಥದಲ್ಲಿ 'ಹೊಟ್ಟೆ ತಣ್ಣಗಿರಲಿ' ಎಂಬ ನುಡಿಗಟ್ಟಿದೆ.
=====
ಹೊಸಗನ್ನಡ: ಕನ್ನಡ ಭಾಷೆ ಬಹಳ ಪ್ರಾಚೀನವಾದದ್ದು. ಭಾಷೆಯೂ ವ್ಯಕ್ತಿಯಂತೆ ಬೆಳೆಯುತ್ತದೆ, ಬದಲಾವಣೆ ಹೊಂದುತ್ತದೆ. ಅದರಂತೆ ಕನ್ನಡವೂ ತನ್ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಬೆಳೆದಿದೆ, ಬದಲಾಗಿದೆ. ಬಹಳ ಹಿಂದಿನ ಕನ್ನಡ ರೂಪ ಈಗಿನವರಿಗೆ ಅರ್ಥವಾಗುವುದೇ ಇಲ್ಲ, ಮಗು ಬೆಳೆದು ದೊಡ್ಡದಾದರೆ ಅದರ ಸ್ವರೂಪ ಪೂರ್ತಿ ಬದಲಾಗುತ್ತದಲ್ಲ, ಹಾಗೆ. ಕನ್ನಡದ ಈ ಬೆಳವಣಿಗೆಯನ್ನು ಭಾಷಾವಿಜ್ಞಾನಿಗಳು ನಾಲ್ಕು ಹಂತಗಳಾಗಿ ವಿಂಗಡಿಸುತ್ತಾರೆ: ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು. ಈ ವಿಭಜನೆ ಕರಾರುವಾಕ್ಕಾದ್ದೇನಲ್ಲ. ಆದರೂ ಅಧ್ಯಯನದ ಅನುಕೂಲಕ್ಕಾಗಿ ಹೀಗೆ ಮಾಡುತ್ತಾರೆ. ಇದರ ಪ್ರಕಾರ, ಕನ್ನಡದ ಇತ್ತೀಚಿನ ರೂಪವೇ ಹೊಸಗನ್ನಡ, ಇದು ನಮ್ಮ ಕಾಲದ ಕನ್ನಡ ಎಂದರ್ಥ. ಬ್ರಿಟಿಷ್ ಆಡಳಿತ ಬಂದ ಮೇಲೆ ನಾನಾ ರೀಪದಚರಿತೆತಿಗಳಲ್ಲಿ ನಮ್ಮ ಬದುಕು ಬದಲಾದಂತೆ ನಮ್ಮ ಭಾಷೆಯೂ ಬದಲಾಯಿತು, ಹಿಂದಿನದಕ್ಕಿಂತ ಭಿನ್ನವಾದ ರೂಪವನ್ನು ಪಡೆಯಿತು, ಕನ್ನಡದ ಈ ಹೊಸ ರೂಪವೇ ಹೊಸಗನ್ನಡ ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಕನ್ನಡದಲ್ಲಿ ಸಿಕ್ಕಿರುವ ಮೊದಲ ಗ್ರಂಥವಾದ ಕ್ರಿಸ್ತಶಕ 850ರ 'ಕವಿರಾಜಮಾರ್ಗ'ದಲ್ಲಿ 'ಪೞಗನ್ನಡ' (ಹಳಗನ್ನಡ) ಎಂಬ ಶಬ್ದವಿದೆ. ಅಂದರೆ ತನ್ನ ಕಾಲಕ್ಕೆ ಹಿಂದಿನ ಕನ್ನಡ ಎಂಬುದು ಗ್ರಂಥಕರ್ತೃವಿನ ಅಭಿಪ್ರಾಯ, ಹಾಗಾದರೆ ತನ್ನ ಕಾಲದ್ದು ಹೊಸಗನ್ನಡ ಎಂಬುದು ಅವನ ಅಭಿಪ್ರಾಯವಿರಬೇಕು. ಆದರೆ ಹೊಸಗನ್ನಡ ಎಂಬ ಶಬ್ದವನ್ನೇನೂ ಆ ಗ್ರಂಥದಲ್ಲಿ ಬಳಸಿಲ್ಲ. ಕ್ರಿಸ್ತಶಕ 1112 ರಲ್ಲಿ ರಚಿತವಾದ ನಯಸೇನ ಕವಿಯ 'ಧರ್ಮಾಮೃತ' ಎಂಬ ಕಾವ್ಯದಲ್ಲಿ ಈ ಮಾತಿದೆ: "ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕೃತಿಯನೆಂದು ಕನ್ನಡದೊಳ್ ಚಿಂತಿಸಿ.. .." ಇತ್ಯಾದಿ. ಅಂದರೆ ಈ ಕವಿಯ ದೃಷ್ಟಿಯಲ್ಲಿ ತನ್ನ ಕಾಲದ್ದು ಹೊಸಗನ್ನಡ ಎಂಬ ಭಾವನೆಯಿದೆ. ಆದರೆ ಅವನ ಕಾಲದ ಕನ್ನಡ ನಮಗೆ ಹಳಗನ್ನಡ! ಹಾಗಾದರೆ ಹಳಗನ್ನಡ ಯಾವುದು, ಹೊಸಗನ್ನಡ ಯಾವುದು? ಉತ್ತರ ಸುಲಭ: ಎಲ್ಲರಿಗೂ ತಮ್ಮ ಕಾಲದ್ದು ಹೊಸದು, ಹಿಂದಿನದೆಲ್ಲ ಹಳೆಯದು. ಹೀಗಾಗಿ ನಾವೀಗ ನಮ್ಮ ಕಾಲದ ಕನ್ನಡವನ್ನು ಹೊಸಗನ್ನಡ ಎಂದು ಕರೆದುಕೊಳ್ಳುತ್ತಿದ್ದೇವೆ. ಮುಂದೆ ಇದರ ಸ್ವರೂಪವೂ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುತ್ತದೆ. ಬೇಡ ಎಂದರೆ ನಿಲ್ಲುವುದೇ? ಈಗಾಗಲೇ ಅದರ ಸ್ವರೂಪ ಢಾಳಾಗಿ ವ್ಯತ್ಯಾಸವಾಗುತ್ತಿದೆ. ಒಟ್ಟಾರೆ ಹೇಳಬಹುದಾದುದಿಷ್ಟು: ಆಯಾ ಕಾಲದ ಕನ್ನಡ ಜನರಿಗೆ ಸಮಕಾಲೀನವಾದುದು ಹೊಸಗನ್ನಡ, ಹಿಂದಿನದೆಲ್ಲ ಹಳಗನ್ನಡ.
=====






No comments: